ಗಾಯತ್ರಿ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಯತ್ರಿ ಮೂರ್ತಿ ಯವರು ಕನ್ನಡದ ಜನಪ್ರಿಯ ಲೇಖಕಿ.[೧] ಇವರ ಕೆಲವು ಕೃತಿಗಳು ಇಂತಿವೆ: ಸಾಮಾನ್ಯವಾಗಿ ಜನ ಸಾಮಾನ್ಯರು ಭಾವಿಸುವಂತೆ ಭೌತವಿಜ್ಞಾನದಂತಹ ವಿಷಯವನ್ನೂ ಅತ್ಯಂತ ಸರಳವಾಗಿ ಹೇಳಬಹುದೆಂದು ತೋರಿಸಿಕೊಟ್ಟವರಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರು ಒಬ್ಬರು ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಗಾಯತ್ರಿಯವರು ಮೂರು ದಶಕಗಳ ಅಧ್ಯಾಪನದ ನಂತರ ನಿವೃತ್ತರಾಗಿದ್ದಾರೆ.

ಜನನ,ಶಿಕ್ಷಣ,ವೃತ್ತಿಜೀವನ[ಬದಲಾಯಿಸಿ]

ಗಾಯತ್ರಿಯವರು ಜನಿಸಿದ್ದು ಮೈಸೂರಿನಲ್ಲಿ. ತಂದೆ, ಕೆ.ರಾಮಸ್ವಾಮಿ,ಮೈಸೂರು ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದರು. ಮತ್ತು ತಾಯಿ ಇಂದುಮತಿ. ಗಾಯತ್ರಿಯವರ ಪ್ರಾರಂಭಿಕ ಶಿಕ್ಷಣ ಕುಣಿಗಲ್, ನಲ್ಲಾಯಿತು. ಪ್ರೌಢಶಾಲಾ ವಿದ್ಯಾಭ್ಯಾಸ ಶಿವಮೊಗ್ಗ, ಹಾಗೂ ಮೈಸೂರಿನ ಶಾರದಾ ವಿಲಾಸ್ ಕಾಲೇಜಿನಿಂದ ಬಿ.ಎಸ್ ಸಿ. ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಿಂದ, ಎಂ.ಎಸ್ ಸಿ. ಪದವಿ ಗಳಿಸಿದರು. ಮುಂದೆ, ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿದರು. ಕೆಳಗೆ ನಮೂದಿಸಿದ ಒಟ್ಟು ೫ ಕೃತಿಗಳು, ಹತ್ತಕ್ಕೂ ಹೆಚ್ಚು ಮುದ್ರಣ ಕಂಡಿವೆ. ವಿಜ್ಞಾನ ಸಂವಹನದ ಜೊತೆಗೆ, ಮಕ್ಕಳ ಸಾಹಿತ್ಯ ಹಾಗೂ ಲಲಿತಪ್ರಬಂಧಗಳ ರಚನೆಯಲ್ಲೂ ಗಾಯತ್ರಿಯವರಿಗೆ ಆಸಕ್ತಿಯಿದೆ.

  1. ಗಾಳಿ,
  2. ಶಾಖ,
  3. ನೀರು,[೨]
  4. ಬೆಳಕು
  5. ಶಬ್ದಲೋಕ

ಇತರ ವಿಜ್ಞಾನ ಪುಸ್ತಕಗಳು[ಬದಲಾಯಿಸಿ]

  1. ನಿಶ್ಶಬ್ದದೊಳಗಿನ ಶಬ್ದ,
  2. ದೀಪಗಳು,
  3. ಎಕ್ಸ್ ಕಿರಣಗಳ ಅದೃಶ್ಯಲೋಕ

ಮಕ್ಕಳಿಗಾಗಿ ಕವನ ಸಂಕಲನಗಳು[ಬದಲಾಯಿಸಿ]

  • ನಕ್ಷತ್ರಗಳು ಮತ್ತು ಕಾಮನ ಬಿಲ್ಲು,

ಮಕ್ಕಳ ಕಾದಂಬರಿಗಳು[ಬದಲಾಯಿಸಿ]

  • ಕಾಡಿನಲ್ಲೊಂದು ಕ್ಯಾಂಪು,
  • ಬಿಂದು–ಸಿಂಧು ಮತ್ತು ಬ್ರೂಸ್ ಲೀ,
  • ಅದೃಶ್ಯ ಮಾನವ ಟಿನಿ ಟಿನಿ ಟಿನ್,
  • ಪ್ರೀತಿಯ ಗೆಲವು ಮುಂತಾದವುಗಳು.

ಪ್ರೌಢರಿಗಾಗಿ ಕಾದಂಬರಿಗಳು[ಬದಲಾಯಿಸಿ]

  • ಹಂಬಲ,
  • ಆಸೆಯಬಲೆ,
  • ದೋಣಿ ಸಾಗಲಿ ತೀರಕೆ,
  • ಮತ್ತು ಬಾಳೆಂಬ ಕಡಲಲ್ಲಿ (ಮಿನಿ ಕಾದಂಬರಿ)

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರ ಪ್ರಿಯವಾಯಿತು[ಬದಲಾಯಿಸಿ]

ಗಾಯತ್ರಿ ಮೂರ್ತಿಯವರು, ಕಾಲೇಜಿನಲ್ಲಿ ಭೌತವಿಜ್ಞಾನದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು.ವಿಜ್ಞಾನ ಬೋಧನೆ, ಹಾಗೂ ವಿಜ್ಞಾನ ಸಂವಹನ ಒಂದಕ್ಕೊಂದು ಪುರಕವೆಂದು ಅವರು ಪರಿಗಣಿಸುತ್ತಾರೆ. ಮಕ್ಕಳಿಗಾಗಿ ಬರೆಯಲಾದ ವಿಜ್ಞಾನದ ಪುಸ್ತಕಗಳನ್ನು ಪರಿಶೀಲಿಸಿದಾಗ, ಅನೇಕ ಪುಸ್ತಕಗಳಲ್ಲಿ ಮಕ್ಕಳಿಗೆ ಮಾಹಿತಿ ತಿಳಿಸುವ ಕಾತರತೆ ಇದ್ದರೂ ಮಾಹಿತಿ ತಿಳಿಸುವಲ್ಲಿ ಇರಬೇಕಾದ ವಿವೇಚನೆ, ಶಿಸ್ತು, ಭಾಷೆಯ ಸರಳತೆಗಳೆಲ್ಲ ಇಲ್ಲದಿರುವುದನ್ನು ಗಮನಿಸಿದರು. ನಂತರ, ಮಕ್ಕಳಿಗೆ ಸುಲಭವಾಗಿ ಅರಿವಾಗುವಂತಹ ಸರಳ ಭಾಷೆಯಲ್ಲಿ ವಿಜ್ಞಾನ ಪುಸ್ತಕಗಳನ್ನು ಬರೆಯಬೇಕೆಂಬ ನಿರ್ಧಾರ ಮಾಡಿ, ಅದನ್ನು ಕಾರ್ಯಾನ್ವಯಮಾಡಿದರು. ಮಕ್ಕಳಿಗಾಗಿ 'ಗಾಳಿ', 'ಶಾಖ', 'ನೀರು', 'ಬೆಳಕು', 'ಶಬ್ದಲೋಕ' ಎಂಬ ಐದು ಪುಸ್ತಕಗಳನ್ನು ಬರೆದರು. ಇದರ ಬಳಿಕವೂ ಹಲವಾರು ವಿಜ್ಞಾನ ಪುಸ್ತಕಗಳನ್ನು ಬರೆದರು. ಈ ಕಾರ್ಯದಿಂದ ಸಿಕ್ಕಿದ ಯಶಸ್ಸು ಹಾಗೂ ಪ್ರೋತ್ಸಾಹ, ಅವರ ವಿಜ್ಞಾನ ಬರವಣಿಗೆಯ ಕೃಷಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿದವು.

ಇತರ ವಿಜ್ಞಾನ ಸಂವಹನಕಾರರು[ಬದಲಾಯಿಸಿ]

ತೊಂಬತ್ತರ ದಶಕದಲ್ಲಿ ಪ್ರೊ.ಯಶ್‌ಪಾಲ್‌ರವರು ನಡೆಸಿಕೊಡುತ್ತಿದ್ದ ವಿಜ್ಞಾನ ಕಾರ್ಯಕ್ರಮಗಳು ಗಾಯತ್ರಿ ಮೂರ್ತಿಯವರಿಗೆ ಬಹಳ ಮುದಕೊಟ್ಟವು. ಡಾ.ಶಿವರಾಮ ಕಾರಂತ, ಪ್ರೊ.ಅಡ್ಯನಡ್ಕ ಕೃಷ್ಣಭಟ್, ಪ್ರೊ. ಜೆ. ಆರ್. ಲಕ್ಷ್ಮಣರಾವ್, ಪ್ರೊ. ಎಚ್. ಆರ್. ರಾಮಕೃಷ್ಣರಾವ್, ಶ್ರೀ ಟಿ. ಆರ್. ಅನಂತರಾಮು, ಶ್ರೀ ನಾಗೇಶ ಹೆಗಡೆ, ಮುಂತಾದ ಅನೇಕರ ಕೃತಿಗಳು ಹಾಗೂ ಕಾರ್ಯವೈಖರಿಯನ್ನು ಬಹಳವಾಗಿ ಮೆಚ್ಚಿದರು. ಉತ್ತಮ ಪ್ರತಿಕ್ರಿಯೆ ದೊರೆತಾಗ ಕೆಲಸ ಮಾಡುವ ಉತ್ಸಾಹ ಹೆಚ್ಚುವುದು, ಸಾರ್ಥಕ ಭಾವನೆ ಮೂಡುವುದು ಸಹಜ. ಆ ದೃಷ್ಟಿಯಿಂದ ಹೇಳುವುದಾದರೆ ನನ್ನ ಮಕ್ಕಳ ಪುಸ್ತಕಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ವಿವಿಧ ಶಾಖೆಯ ವಿಜ್ಞಾನ ಪುಸ್ತಕಗಳು, ವೈದ್ಯಕೀಯ ಪುಸ್ತಕಗಳನ್ನು ಅನೇಕ ಉತ್ತಮ ಬರಹಗಾರರು ಇಂದು ಬರೆಯಲು ತೊಡಗಿದ್ದಾರೆ. ಜನರಿಗೆ ವಿಜ್ಞಾನ ವಿಷಯಗಳ ಬಗ್ಗೆ ಇರುವ ಆಸಕ್ತಿಯನ್ನು ನಿರೂಪಿಸುವ ದೃಷ್ಟಿಯಿಂದ ಜನಪ್ರಿಯ ಪತ್ರಿಕೆಗಳು ವಿಜ್ಞಾನ ಲೇಖನಗಳನ್ನು ಪ್ರಕಟಿಸುವುದು, ಆಕಾಶವಾಣಿ ವಿಜ್ಞಾನ ಕಾರ್ಯಕ್ರಮಗಳನ್ನು ನಡೆಸಿಕೊಡುವುದು, ಮುಂತಾದ ಕೆಲಸಗಳು ಒಳ್ಳೆಯ ದಿಶೆಯಲ್ಲಿ ನಡೆಯುತ್ತಿರುವ ಸಾಧನೆಗಳು.

ಮುಂದಿನ ಕೆಲಸ[ಬದಲಾಯಿಸಿ]

ವಿಜ್ಞಾನ ಸಂವಹನ ಕಾರ್ಯವನ್ನು ಸಮರ್ಥವಾಗಿ ಮಾಡುವ ದಿಶೆಯಲ್ಲಿ ಅವರು ಸದಾ ಆಸಕ್ತರಾಗಿದ್ದಾರೆ. ಆದರೂ ಬರವಣಿಗೆ ಅವರ ಮೊದಲ ಆದ್ಯತೆ. ಭೌತವಿಜ್ಞಾನವೆಂದರೆ ಕಬ್ಬಿಣದ ಕಡಲೆ ಎಂದು ಭಾವಿಸುವವರ ತಪ್ಪುಕಲ್ಪನೆಯನ್ನು ನಿವಾರಿಸಲು ನಿತ್ಯ ಜೀವನದಲ್ಲಿ ಭೌತವಿಜ್ಞಾನ ಹೇಗೆ ಹಾಸು ಹೊಕ್ಕಾಗಿದೆ ಎಂಬುದರ ಬಗ್ಗೆ ಬರೆಯುವ ಆಸಕ್ತಿಯನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ಮಕ್ಕಳಿಗಾಗಿ ಕೆಲವು ವಿಜ್ಞಾನ ಪುಸ್ತಕಗಳು ಹಾಗೂ ವಿಜ್ಞಾನ ಕಥಾಸಂಕಲನವನ್ನೂ ಬರೆಯಬೇಕೆನ್ನುವ ಆಸೆ ಇದೆ. ದೂರದರ್ಶನದಲ್ಲಿ ವಿಜ್ಞಾನ ಕಾರ್ಯಕ್ರಮಗಳಿಗೆ ಸ್ಥಾನವಿಲ್ಲದಿರುವುದು ಗಮನಾರ್ಹ. ಪ್ರೊ. ಯಶ್‌ಪಾಲ್‌ರವರು ನಡೆಸಿಕೊಡುತ್ತಿದ್ದಂತಹ ಕಾರ್ಯಕ್ರಮಗಳು ದೂರದರ್ಶನದಲ್ಲಿ ಪ್ರಸಾರವಾಗಬೇಕಿದೆ. ಅಂತಹ ಕಾರ್ಯಕ್ರಮಗಳನ್ನು ನಡೆಸಿಕೊಡಲು ಯುವ ವಿಜ್ಞಾನ ಬರಹಗಾರರು, ಮುಂದೆ ಬರಬೇಕು.

ವಿಜ್ಞಾನ ಸಂವಹನವಲ್ಲದೆ ಇತರ ಆಸಕ್ತಿಗಳು[ಬದಲಾಯಿಸಿ]

ಗಾಯತ್ರಿಯವರಿಗೆ, ಲಲಿತ ಪ್ರಬಂಧ ರಚನೆ ಇಷ್ಟ. 'ಕೋಸಂಬರಿ' ಎಂಬ ಲಲಿತ ಪ್ರಬಂಧಗಳ ಪುಸ್ತಕ ರಚಿಸಿ ಪ್ರಕಟಿಸಿದ್ದಾರೆ.'ಹುರಿಗಾಳು' ಎಂಬ ಕೃತಿ ಸಧ್ಯದಲ್ಲೇ ಬೆಳಕು ಕಾಣಲಿದೆ;

ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ[ಬದಲಾಯಿಸಿ]

ಇತ್ತೀಚೆಗೆ ಗಾಯತ್ರಿ ಮೂರ್ತಿಯವರು ಬೆಳೆಸಿಕೊಂಡ ಆಸಕ್ತಿಯೆಂದರೆ ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದದ ಕೆಲಸ. ಆ ಕ್ಷೇತ್ರದಲ್ಲೂ ಹೆಚ್ಚು ತೊಡಗಿಕೊಳ್ಳುವುದರ ಜೊತೆಗೆ, ತೋಟಗಾರಿಕೆಯಲ್ಲಿಯೂ ಹೆಚ್ಛಿನ ಆಸಕ್ತಿ. ಕೆಲವು ಕಾರಣಗಳಿಂದ ಈ ವಲಯದಲ್ಲಿ ಏನೂ ಹೆಚ್ಚಿನ ಕೆಲಸಮಾಡಲಾಗಲಿಲ್ಲ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..[೩]

ಉಲ್ಲೇಖಗಳು[ಬದಲಾಯಿಸಿ]

  1. "ಗಾಯತ್ರಿ ಮೂರ್ತಿ ೦೪.೦೫.೧೯೪೮, 'ಕಣಜ, ಅಂತರಜಾಲ ಕನ್ನಡ ಜ್ಞಾನ ಕೋಶ,'". Archived from the original on 2014-04-03. Retrieved 2014-10-18.
  2. 'ನೀರು', ಗಾಯತ್ರಿ ಮೂರ್ತಿ,[ಶಾಶ್ವತವಾಗಿ ಮಡಿದ ಕೊಂಡಿ]
  3. ಗಾಯತ್ರಿ ಮೂರ್ತಿ ಹೇಳುತ್ತಾರೆ... "ಯಾವುದೇ ಕಾರ್ಯವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದಾಗಲೇ ಅದು ಉತ್ತಮವಾಗಿ ನಡೆಯಲು ಸಾಧ್ಯ"[ಶಾಶ್ವತವಾಗಿ ಮಡಿದ ಕೊಂಡಿ]