ಗಾಂಧೀ ದೃಷ್ಟಿಯಲ್ಲಿ ಸತ್ಯಾಗ್ರಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಂಧೀ ದೃಷ್ಟಿಯಲ್ಲಿ ಸತ್ಯಾಗ್ರಹ[ಬದಲಾಯಿಸಿ]

ಮಹಾತ್ಮ ಗಾಂಧಿಯವÀರು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ವಿಮೋಚನೆಗೊಳಿಸಿದ ರಾಷ್ಟ್ರನಾಯಕರು. 19ನೆಯ ಶತಮಾನದ ಯುರೋಪಿನ ಕೈಗಾರಿಕಾ ಕ್ರಾಂತಿ ಹಾಗೂ ಸಾಮ್ರಾಜ್ಯಶಾಹಿ ರಾಜಕೀಯ ವಿಸ್ತರಣಗಳ ಪರಿಣಾಮವಾಗಿ ಏಷ್ಯ ಆಫ್ರಿಕ ಖಂಡಗಳಲ್ಲಿಯ ಬಹು ಭಾಗ ದಾಸ್ಯಕ್ಕೆ ಒಳಗಾಗಿತ್ತು. ದಕ್ಷಿಣ ಆಫ್ರಿಕದಲ್ಲಿದ್ದ ಭಾರತೀಯ ವರ್ತಕರ ವಕೀಲರಾಗಿ ಅಲ್ಲಿಗೆ ಹೋಗಿದ್ದ ಗಾಂಧೀಯವರು ಅಲ್ಲಿಯ ಬ್ರಿಟಿಷ್ ಸಾಮ್ರಾಜ್ಯ ಶಾಹಿ ವರ್ಣೀಯರನ್ನು ಅತ್ಯಂತ ಹೀನದಾಸ್ಯಕ್ಕೆ ಗುರಿಮಾಡಿ ಅವರ ನಾಗರಿಕ ಹಕ್ಕುಗಳನ್ನೆಲ್ಲ ದಮನ ಮಾಡಿದ್ದನ್ನು ಕಂಡು ಮೊದಲ ಬಾರಿಗೆ ಪ್ರತಿಭಟಿಸಿ ನಿಲ್ಲುವ ಸಾಹಸ ಮಾಡಿದರು. ಅಸಂಖ್ಯಾತ ಬಡ ಕೂಲಿಗಾರರ ಸಮೂಹವನ್ನು ಸಂಘಟಿಸಿ, ಅಲ್ಲಿ ನೆಲೆಸಿದ್ದ ಇತರ ಬುದ್ಧಿ ಜೀವಿಗಳ ನೆರವನ್ನೂ ಪಡೆದ ನಿಶ್ಯಸ್ತ್ರ ಸಾಮೂಹಿಕ ಪ್ರತಿಭಟನಾ ಸಮರವೊಂದನ್ನು ಪ್ರಾರಂಭಿಸಿದರು. ಮಾನವನ ನೈತಿಕಶಕ್ತಿಗಳನ್ನು ಜಾಗೃತಗೊಳಿಸಿ ಆತ್ಮಗೌರವದ ನಿಷ್ಠೆಯನ್ನು ಉಜ್ವಲಗೊಳಿಸಿ ಸಾಮಾನ್ಯ ಜನತೆ ಒಂದು ಪ್ರಬಲ ಸಶಸ್ತ್ರ ಸಾಮ್ರಾಜ್ಯ ಸರ್ಕಾರದ ಅನ್ಯಾಯ ದುರಾಡಳಿತಗಳನ್ನು ಪ್ರತಿಭಟಿಸಿ ನಿಲ್ಲುವಂತೆ ಪ್ರೇರೇಪಿಸಿ ದರು. ಅವಮಾನಕರ ಕಾನೂನು ಗಳನ್ನು ಸವಿನಯವಾಗಿ ಉಲ್ಲಂಘಿಸಿ ದಬ್ಬಾಳಿಕೆಯ ಶಿಕ್ಷೆಯನ್ನನುಭವಿಸುತ್ತ ಸತತವಾಗಿ ನ್ಯಾಯಕ್ಕಾಗಿ ಹೋರಾಡುವ ಕ್ರಮವನ್ನು ರೂಪಿಸಿದರು. ಮೊದಲು ಸದಾಗ್ರಹ ಎಂದೂ ಅನಂತರ ಸತ್ಯಾಗ್ರ ಎಂದೂ ಅದಕ್ಕೆ ಹೆಸರಿಟ್ಟರು. ರಸ್ಕಿನ್, ಟಾಲ್ಸ್ಟಾಯ್, ಥಾರೋ, ಮತ್ತು ರಾಯಿಚಂದಭಾಯಿ ಅವರ ಬರೆಹಗಳಿಂದಲೂ ಗೀತಾ, ಉಪನಿಷತ್, ಕುರಾನ್, ಬೈಬಲ್ಗಳ ಮೂಲ ತತ್ತ್ವಗಳ ಅಧ್ಯಯನ ಅನುಷ್ಠಾನಗಳಿಂದಲೂ ಪ್ರೇರಣೆ ಪಡೆದು ಸತ್ಯಾಗ್ರಹ ಚಳವಳಿಯನ್ನು 1906ರಲ್ಲಿ ಪ್ರಾರಂಭಿಸಿದರು. 1917ರಲ್ಲಿ ಭಾರತಕ್ಕೆ ಬಂದು ಸಾಬರಮತಿಯ ಸತ್ಯಾಗ್ರಹಾಶ್ರಮವನ್ನು ಸ್ಥಾಪಿಸಿ ಭಾರತದ ಸ್ವಾತಂತ್ರ್ಯ ಸಮರದ ನಾಯಕತ್ವ ವಹಿಸಿಕೊಂಡರು. ಅವರ ಇಡೀ ಜೀವನವೇ ಅಲ್ಲಿಂದಾಚೆಗೆ ಸತ್ಯಾಗ್ರಹ ಪಥವನ್ನು ಹಿಡಿದು ನಡೆದರು. ಜೀವನದ ಯಾವ ಕ್ಷೇತ್ರದಿಂದಲೂ ವಿಮುಖವಾಗದೆ, ಆದರ್ಶದ ಒರೆಗಲ್ಲಿಗೆ ಸಕಲ ಕರ್ಮಗಳನ್ನೂ ನಿಷ್ಠುರವಾಗಿ ಉಜ್ಜಿನೋಡಿ, ಸತ್ಯದ ಅರಿವಾದೊಡನೆ ನಿರ್ಭಯವಾಗಿ ಅದನ್ನನುಸರಿಸಿ ಮುನ್ನಡೆಯಲು ವ್ಯಕ್ತಿಗಾಗಲಿ, ಸಮಾಜಕ್ಕಾಗಲಿ, ರಾಷ್ಟ್ರಕ್ಕಾಗಲಿ ಅಹಿಂಸಾಮಾರ್ಗವೊಂದೇ ಸಾಧನ; ಅದೇ ಸತ್ಯಾಗ್ರಹ. ಇದು ಗಾಂಧಿಯವರು ಕಂಡುಕೊಂಡ ಸಿದ್ಧಾಂತ.

ಜೀವನದ ಸಮಸ್ಯೆಗಳನ್ನು ಸಮಗ್ರವಾಗಿ ಕಂಡು ಅವುಗಳನ್ನೆದುರಿಸಿ ಪರಿಹಾರ ಪಡೆದುಕೊಳ್ಳಲು ಅಹಿಂಸಾತ್ಮಕ ಹೋರಾಟವನ್ನು ಆತ್ಮಶಕ್ತಿಯ ಬಲದಿಂದ ನಡೆಸುವುದು ಸತ್ಯಾಗ್ರಹ. ಶಸ್ತ್ರಬಲದ ಅಥವಾ ಭಯೊತ್ಪಾದನೆಯ ಮೂಲಕ ಕಡ್ಡಾಯವಾಗಿ ಪರಿವರ್ತನೆ ಸಾಧಿಸುವ ಕ್ರಮದಿಂದ ಮಾನವೀಯ ಸಂಬಂಧಗಳು ಕಡಿಯುತ್ತವೆ. ಅದರಿಂದ ಉದ್ದೇಶಿತ ಫಲ ದೊರಕುವುದಿಲ್ಲ. ಆದ್ದರಿಂದ ವಿಕಾಸಶೀಲ ಕ್ರಾಂತಿಗೆ ಸತ್ಯಾಗ್ರಹವೇ ಆಧಾರಶಕ್ತಿ ಎನ್ನುವುದು ಗಾಂಧೀವಾದ. ಅವರ ಮಾತಿನಲ್ಲಿ ‘ಕೌಟಂಬಿಕ ಪ್ರೇಮತತ್ತ್ವವನ್ನು ರಾಜಕೀಯಕ್ಕೆ ವಿಸ್ತರಣೆ ಮಾಡುವುದೇ ಸತ್ಯಾಗ್ರಹ. ಕುಟುಂಬದಲ್ಲಿ ತೊಂದರೆಗೀಡಾದ ವ್ಯಕ್ತಿ ಇತರರ ವಿಷಯದಲ್ಲಿ ಪ್ರೇಮಭಾವ ಕಳೆದುಕೊಳ್ಳುವುದಿಲ್ಲ. ತನ್ನ ತತ್ತ್ವಗಳಿಗಾಗಿ ಹಿಂಸೆಯನ್ನು ಸಹಿಸಿಕೊಳ್ಳುತ್ತಾನೆ. ಭಿನ್ನಾಭಿಪ್ರಾಯದವರ ಬಗ್ಗೆ ಕ್ರೋಧವನ್ನಾಗಲಿ ಸೇಡಿನ ಮನೋಭಾವವನ್ನಾಗಲಿ ತಳೆದಿರುವುದಿಲ್ಲ. ಕ್ರೋಧದ ದಮನ, ಆತ್ಮ ಕ್ಲೇಶಾನುಭವ ಇವನ್ನು ಅಂಗೀಕರಿಸಿ ತಾಳ್ಮೆಯಿಂದ ಇತರರ ತಪ್ಪನ್ನು ತಿದ್ದುವ ಪ್ರಯತ್ನ ಮಾಡುತ್ತಾನೆ. ಉತ್ಕಟ ಪರಿಸ್ಥಿತಿಗಳಲ್ಲಿ ಕುಟುಂಬದ ಇತರರೊಂದಿಗೆ ಜಾಗ್ರತೆ ಒಮ್ಮತಕ್ಕೆ ಬಂದು ಕುಟುಂಬದ ಶಾಂತಿಯುತ ಕ್ಷೇಮಕ್ಕೆ ನೆರವಾಗುತ್ತಾನೆ. ಈ ಪ್ರೇಮತತ್ತ್ವ ಜಗತ್ತಿನ ಬಹುತೇಕ ನಾಗರಿಕ ರಾಷ್ಟ್ರಗಳ ಕುಟುಂಬಗಳಲ್ಲಿ ಆಗೋಚರವಾಗಿಯೂ ಸ್ಥಿರವಾಗಿಯೂ ಪ್ರಭಾವ ಬೀರುತ್ತಲೇ ಇದೆ. ಈ ತತ್ತ್ವವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳೆಲ್ಲದರಲ್ಲೂ ಒಪ್ಪಿದ ಹೊರತು ಜನಾಂಗಗಳ ಒಕ್ಕೂಟವಾಗಲಿ ಮನುಜಕುಲದ ಸರ್ವತೋಮುಖ ಏಳಿಗೆಯಾಗಲಿ ಅಸಾಧ’್ಯ ಸತ್ಯಾಗ್ರಹದ ಮೂಲಶಕ್ತಿ ಸತ್ಯನಿಷ್ಠೆ. ಸತ್ಯಕ್ಕಾಗಿ ಹೋರಾಡುವಾಗ ಹಿಂಸಾಚಾರ ಎಂದಿಗೂ ಸಮಂಜಸವಾದ ಅಸ್ತ್ರವಾಗಲಾರದು. ಅಹಿಂಸೆಯ ಪಥ ಅನಿವಾರ್ಯ. ವೈಯಕ್ತಿಕ ಅಹಿಂಸೆ ಮಾನವಧರ್ಮದ ಅವಿಭಾಜ್ಯ ಅಂಗ ಎಂದು ಎಲ್ಲ ಧರ್ಮಗಳು ನಂಬಿವೆ. ಅಂತೆಯೇ ಸಾಮೂಹಿಕ ಪ್ರತಿಭಟನೆ ಸತ್ಯವಿಷ್ಠವೂ ಅಹಿಂಸಾತ್ಮಕವೂ ಆದಾಗ ಮಾತ್ರ ಸಾಮಾಜಿಕ ನ್ಯಾಯ ಸುಪ್ರತಿಷ್ಠಿತವಾಗುತ್ತದೆ. ಇದರ ಪ್ರಪ್ರಥಮ ಪ್ರಯೋಗ ಗಾಂಧಿಯವರ ಸತ್ಯಾಗ್ರಹ ಚಳವಳಿಗಳು. 1906ರಲ್ಲಿ ದಕ್ಷಿಣ ಆಫ್ರಿಕದ ಟ್ರಾನ್್ಸವಾಲಿನಲ್ಲಿ ಏಷ್ಯನರ ಮೇಲೆ ಬಿಳಿಯರ ದಬ್ಬಾಳಿಕೆಯನ್ನು ಪ್ರತಿಭಟಿಸಿ ಅಲ್ಲಿಯ ಕಾರ್ಮಿಕರು ಆತ್ಮಗೌರವದಿಂದ ಬಾಳಲು ಗಾಂಧಿಯವರು ಹೂಡಿದ ಮೊದಲ ಸತ್ಯಾಗ್ರಹ ಹಂತಹಂತವಾಗಿ ಬೆಳೆದು ಭಾರತದ ಸ್ವಾತಂತ್ರ್ಯ ಸಮರದ ಹದಿನಾಲ್ಕು ವಿವಿಧ ಪ್ರಯೋಗಗಳಲ್ಲಿ ಒಂದು ವ್ಯಾವಹಾರಿಕ ಸಿದ್ಧಾಂತವಾಯಿತು. ಸತ್ಯಾಗ್ರಹ ಎಂದರೆ ನಿಷ್ಕ್ರಿಯತೆ ಅಲ್ಲ. ಅನ್ಯಾಯಗಳನ್ನು ಸಹಿಸಿಕೊಂಡು ಉಪೇಕ್ಷೆಯಿಂದಿರುವುದಲ್ಲ. ಅದನ್ನು ಪ್ರತಿಭಟಿಸಿ ನಿಂತು ಪ್ರೇಮ ಶಕ್ತಿಯಿಂದ ಸರಿಪಡಿಸುವ ನೈತಿಕ ಸಮರವೇ ಸತ್ಯಾಗ್ರಹ. ಸವಿನಯ ಶಾಸನಭಂಗ, ಅಹಿಂಸಾತ್ಮಕ ಅಸಹಕಾರ, ಶಸ್ತ್ರಾವಲಂಬನೆಯ ನಿರಾಕರಣೆ, ತತ್ತ್ವಪಾಲನೆಯಲ್ಲಿ ನಿಸ್ಸೀಮಬಲಿದಾನದ ಸಿದ್ಧತೆ ವೈರಿಯ ಬಗ್ಗೆ ನಿಸ್ಸಂಕೋಚ ಪ್ರೀತಿ ಮತ್ತು ವ್ಯಕ್ತಿದ್ವೇಷದ ಸಂಪುರ್ಣದಮನ ಇವು ಸತ್ಯಾಗ್ರಹದ ಕ್ರಮಬದ್ಧ ಪ್ರಭಾವಂiÀÄÄತ ಅಸ್ತ್ರಗಳೆಂದು ಗಾಂಧೀಜಿಯ ಸತ್ಯಾನ್ವೇಷಣೆಯ ಪ್ರಯೋಗಗಳು ಸಿದ್ಧಮಾಡಿ ಕೊಟ್ಟಿವೆ. ಸಾತ್ವಿಕ ಪ್ರತಿಭಟನೆಯಿಂದ ಮಾನವನ ದೌರ್ಜನ್ಯ ಪ್ರವೃತ್ತಿ ಕ್ರಮೇಣ ಅಳಿಸಿಹೋಗಿ ಮಾನವ ಮಾನವನಾಗುತ್ತಾನೆ ಎಂಬ ನಂಬಿಕೆ ಸತ್ಯಾಗ್ರಹಶಾಸ್ತ್ರದ ಅಡಿಗಲ್ಲು. ಮಾನವಚರಿತ್ರೆಯಲ್ಲಿ ವಿಕಾಸಶೀಲ ಪರಿವರ್ತನೆಗಳೆಲ್ಲವೂ ಸೂಕ್ಷ್ಮ ದೃಷ್ಟಿಯಿಂದ ನೋಡಿದರೆ ಸತ್ಯಾಗ್ರಹಗಳ ಪರಿಣಾಮವಾಗಿಯೇ ಆಗಿವೆ. ಎನ್ನುವುದು ಗಾಂಧೀದೃಷ್ಟಿ. ಸತ್ಯಾನ್ವೇಷಣೆ ಮಾನವನ ಸಹಜಧರ್ಮ. ಅದು ಎಷ್ಟರಮಟ್ಟಿಗೆ ಅಹಿಂಸಾತ್ಮಕವಾಗಿ ಸಾಗುತ್ತದೆಯೋ ಅಷ್ಟರಮಟ್ಟಿಗೆ ಮಾತ್ರ ನಿಜವಾದ ವಿಕಾಸ ಸಾಗುತ್ತದೆ ಎನ್ನುವುದು ಗಾಂಧಿಯವರ ಅಭಿಪ್ರಾಯ. ಗುರಿಯಷ್ಟೇ ಸಾಧನವೂ ಶುದ್ಧವಾಗಬೇಕೆನ್ನುವುದೇ ಸತ್ಯಾಗ್ರಹಜೀವನದ ಮೂಲತತ್ತ್ವ. ಗಾಂಧಿಯವರ ದೃಷ್ಟಿಯಲ್ಲಿ ಸತ್ಯಾಗ್ರಹ ಕೇವಲ ರಾಜಕೀಯ ಕ್ಷೇತ್ರದ ಪ್ರತಿಭಟನೆಯ ಮಾರ್ಗ ಮಾತ್ರವಲ್ಲ. ಅದು ಒಂದು ಸಮಗ್ರ ಜೀವನವಿಧಾನದ ಸೂತ್ರವೂ ಹೌದು. ಹಿಂಸೆ ಕೇವಲ ಭೌತಿಕ ಸ್ವರೂಪದ್ದಷ್ಟೇ ಆಗಿರುವುದಿಲ್ಲ. ಅತ್ಯಂತ ಸೂಕ್ಷ್ಮ ರೂಪದ ಪರೋಕ್ಷ ಶೋಷಣೆಯ ವ್ಯವಸ್ಥೆಗಳೆಲ್ಲವೂ ವ್ಯಾಪಕ ಹಿಂಸೆಗೆ ಕಾರಣವಾಗುತ್ತವೆ. ಆದ್ದರಿಂದ ಎಲ್ಲ ರೀತಿಯ ಹಿಂಸಾಮಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳನ್ನು ನೈತಿಕ ದೃಷ್ಟಿಯಿಂದ ನಿರಾಕರಿಸಿ ಎಷ್ಟೇ ವೈಯಕ್ತಿಕ ಸಂಕಟಗಳಿಗೊಳಗಾಗ ಬೇಕಾದರೂ ಅವುಗಳೊಂದಿಗೆ ಅಸಹಕರಿಸಿ ನಿರ್ಭಯವಾಗಿ ವರ್ತಿಸುವುದೇ ಸತ್ಯಾಗ್ರಹ. ಈ ನಿರ್ಭಯತೆ ಬಹಳಮಟ್ಟಿಗೆ ಸ್ವಾವಲಂಬನೆಯ ಜೀವನದಿಂದ ಬರುತ್ತದೆ. ರಾಷ್ಟ್ರಗಳಾಗಲಿ ಜನಸಮೂಹಗಳಾಗಲಿ ಜೀವನದ ಅತ್ಯಾವಶ್ಯಕ ವಸ್ತುಗಳ ಪುರೈಕೆಗೆ ಪರಾವಲಂಬಿಗಳಾದರೆ ಶೋಷಣೆಗೆ ಗುರಿಯಾಗುವುದು ಅನಿವಾರ್ಯವಾಗುತ್ತದೆ. ಕ್ರಿಯಾತ್ಮಕವಾದ, ಆತ್ಮಗೌರವದಿಂದ ಕೂಡಿದ ಸ್ವತಂತ್ರವಿಚಾರ ಶಕ್ತಿಯುಳ್ಳ ಸರಳಜೀವನ ಸತ್ಯಾಗ್ರಹಿಯದವರಿಗೆ ಸಹಾಯವಾಗಬೇಕು ಎನ್ನುತ್ತಾರೆ ಗಾಂಧೀಜಿ. ಅಂಥ ಬಾಳಿನ ನಿಯಮಗಳನ್ನು ತಾವು ಅನುಷ್ಠಾನ ಮಾಡಿ, ಸಾಮೂಹಿಕ ದಳಗಳೂ ಯಶಸ್ವಿಯಾಗಿ ಆಚರಿಸುವಂತೆ ಮಾಡಿದ ವಿಶಿಷ್ಟ ಮಾರ್ಗದರ್ಶನ ಗಾಂಧಿಯವರದು. ಈ ನಿಯಮಗಳನ್ನು ಅವರು ಏಕಾದಶವ್ರತಗಳೆಂದು ಕರೆದರು. ಧಾರ್ಮಿಕ ಪರಂಪರೆಗಳಿಗೆ ಸುಪರಿಚಿತವಾದ ಸತ್ಯ. ಅಹಿಂಸೆ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಅಸ್ವಾದಗಳ ಜೊತೆಗೆ ಸಾಮಾಜಿಕ ಮೌಲ್ಯಗಳುಳ್ಳ ಶರೀರಶ್ರಮ, ಸರ್ವಧರ್ಮ ಸಮಭಾವ, ಸ್ಪರ್ಶಭಾವನೆ, ಸ್ವದೇಶೀ ಮತ್ತು ನಿರ್ಭಯತೆಗಳನ್ನು ಅವರು ಸೇರಿಸಿದರು. ಸತ್ಯಾಗ್ರಹಶಾಸ್ತ್ರದಲ್ಲಿ ಈ ವ್ರತ ನಿಯಮಗಳು ಅತ್ಯಂತ ಮುಖ್ಯವಾದ ಅಂಗ.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪ್ರಚಲಿತವಿರುವ ಯುದ್ಧವಿರೋಧೀ ಚಳವಳಿ, ಸಾತ್ತ್ವಿಕ ಪ್ರತಿಭಟನೆ ಶಾಸನೋಲ್ಲಂಘನೆ ಕರನಿರಾಕರಣೆ, ಮುಂತಾದ ನಿಶ್ಯಸ್ತ್ರ ಪ್ರತಿಭಟನಾಕ್ರಮಕ್ಕೂ ಸತ್ಯಾಗ್ರಹಕ್ಕೂ ಒಂದು ಮೂಲಭೂತ ವ್ಯತ್ಯಾಸವುಂಟು. ಅವನ್ನು ನಡೆಸುವವರು ಆಯುಧ ದೊರಕದ್ದರಿಂದ ತಾವು ದುರ್ಬಲರೆಂದು ತಿಳಿದು ಆ ಚಳವಳಿಗಳಲ್ಲಿ ಹಿಂಸೆಯನ್ನು ವರ್ಜಿಸುತ್ತಾರೆ. ಅವಕಾಶ ಒದಗಿದಾಗ ಹಿಂಸೆಯನ್ನು ಉಪಯೋಗಿಸಲು ಅವರು ಹಿಂದೆಗೆಯುವುದಿಲ್ಲ. ಅಲ್ಲದೆ ರಾಷ್ಟ್ರ ರಕ್ಷಣೆಗಾಗಿ ಶಸ್ತ್ರಾಸ್ತ್ರ ಸಂಗ್ರಹಣೆ ಅತ್ಯಗತ್ಯ ಎಂದು ನಂಬಿ ಅದನ್ನು ಬೆಂಬಲಿಸುತ್ತಾರೆ. ಗಾಂಧಿಯವರು ರೂಪಿಸಿಕೊಟ್ಟ ಸತ್ಯಾಗ್ರಹಕ್ರಮ ದಲ್ಲಿ ಹಿಂಸೆಗೆ ಯಾವ ಸಂದರ್ಭದಲ್ಲೂ ಅವಕಾಶವೇ ಇರಲಾಗದು. ಸತ್ಯಾಗ್ರಹದಲ್ಲಿ ಸತ್ಯ ಮತ್ತು ಅಹಿಂಸೆ ಅನ್ಯೋನ್ಯಾವಲಂಬಿ ತತ್ತ್ವಗಳು. ಒಂದಕ್ಕೆ ಇನ್ನೊಂದು ಆಶ್ರಯ. ಅತ್ಯಂತ ಪ್ರಬಲ ರಾಷ್ಟ್ರವೂ ಶಸ್ತ್ರ ನಿರಾಕರಣೆಯನ್ನು ಅಂಗೀಕರಿಸುವುದು ಸತ್ಯಾಗ್ರಹಮಾರ್ಗ. ಸತ್ಯವನ್ನು ಹಿಂಸಾವೃತ್ತಿಯಿಂದ ಪಡೆಯುವುದು ಅಸಾಧ್ಯ. ಅಹಿಂಸೆ ಒಂದು ಸಶಕ್ತ ಆತ್ಮಶಕ್ತಿಯ ಪ್ರಕಟಿತರೂಪ; ಅದಕ್ಕೆ ಶಸ್ತ್ರದ ಅವಲಂಬನೆ ಯಾವ ಸಂದರ್ಭದಲ್ಲೂ ಅನಾವಶ್ಯಕ; ಈ ಶಕ್ತಿ ಸಮರದಿಂದ ಸಮರಕ್ಕೆ ವೃದ್ಧಿಯಾಗುತ್ತ್ವೈರವನ್ನು ಸಂಪುರ್ಣ ವಾಗಿ ತೊಡೆದುಹಾಕುತ್ತದೆ. ಸತ್ಯಾಗ್ರಹದ ಶುದ್ಧಸ್ವರೂಪದಲ್ಲಿ ಈ ನಿಷ್ಠೆ ಆಡಗಿದೆ. ಸತ್ಯಾಗ್ರಹ ಕ್ರಮದಲ್ಲಿ ವೈರಿಯನ್ನು ಸಾಂಪ್ರದಾಯಿಕ ದೃಷ್ಟಿಯಿಂದ ಹತ್ಯಾಯೋಗ್ಯ ಪಾಪಿ ಎಂದು ಪರಿಗಣಿಸಲಾಗುವುದಿಲ್ಲ. ಅವನಲ್ಲಿ ತಾತ್ಕಾಲಿಕವಾಗಿ ಸುಪ್ತವಾಗಿರುವ ವಿವೇಕಪುರ್ಣ ಸಾತ್ತ್ವಿಕತೆಯನ್ನು ಎಚ್ಚರಗೊಳಿಸಿ ಅವನು ತನ್ನ ತಪ್ಪನ್ನು ತಾನೇ ಅರಿಯುವಂತೆ ಮಾಡುವ ಪ್ರಕ್ರಿಯೆ ಸತ್ಯಾಗ್ರಹ. ಗಾಂಧಿಯವರ ಮಾತಿನಲ್ಲಿ, ದುರುಳ ಎತ್ತುವ ಕತ್ತಿಯ ಎದುರು ಇನ್ನೂ ಹೆಚ್ಚು ಹರಿತವಾದ ಆಯುಧವನ್ನು ಹಿಡಿಯದೆಯೇ ಅವನ ಕತ್ತಿಯ ಅಲಗನ್ನು ಮೊಂಡಾಗಿಸುವ ಪ್ರಯತ್ನ ನನ್ನದು. ಅವನು ನಿರೀಕ್ಷಿಸುವ ದೈಹಿಕ ಪ್ರತಿಭಟನೆಯನ್ನು ಕಾಣದೆ ಹೋದಾಗ ಅವನು ಹತಾಶನಾಗುತ್ತಾನೆ. ನನ್ನ ಸಾತ್ತ್ವಿಕ ಪ್ರತಿಭಟನೆ ಅವನ ಹಿಡಿತಕ್ಕೆ ಸಿಗದು. ಅವನನ್ನು ದಿಗ್ಭ್ರಾಂತನನ್ನಾಗಿ ಮಾಡಿ ಬಿಡುತ್ತದೆ. ಕೊನೆಗೆ ಅವನು ಅಂಥ ಸಾತ್ತ್ವಿಕ ಪ್ರತಿಭಟನೆಯನ್ನು ಗೌರವದಿಂದ ಕಾಣುತ್ತಾನೆ. ಹೀಗೆ ಮಾನ್ಯತೆ ನೀಡುವುದು ಅವನಿಗೆ ಅಪಮಾನ ಎನಿಸುವುದಿಲ್ಲ. ತನ್ನ ಘನತೆ ಹೆಚ್ಚಾಯಿತೆಂದೇ ಅವನು ಭಾವಿಸುತ್ತಾನೆ. ತನ್ನ ವೈರಿ ಶರಣಾಗತನಾಗಿ ತಾನು ಅವನ ಮೇಲೆ ಅಧಿಕಾರ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ ಸತ್ಯಾಗ್ರಹಿಗೆ ಸಲ್ಲದು. ಸತ್ಯಾಗ್ರಹ ಸಮರದ ಅಂತ್ಯದಲ್ಲಿ ಗೆದ್ದವರೂ ಪುನೀತರಾಗುತ್ತಾರೆ, ಸೋತವರೂ ಪುನೀತರಾಗುತ್ತಾರೆ. ಯಾವ ಬಲತ್ಕಾರಕ್ಕೂ ಮಣಿಯದೆ ಭಿನ್ನಾಭಿಪ್ರಾಯಗಳು ಸಮರಸ ವಾಗಿ ಕೊನೆಗೊಂಡು ಪರಸ್ಪರ ಸಹಕಾರಿಗಳಾಗಿಯೆ ಉಳಿಯುವುದು ಸತ್ಯಾಗ್ರಹದ ಗೆಲುವು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಕೊನೆಗೊಂಡಾಗ ಭಾರತ, ಬ್ರಿಟನ್ ಎರಡು ರಾಷ್ಟ್ರಗಳೂ ಧನ್ಯತೆಯ ಅನುಭವವನ್ನು ಪಡೆದುದ್ದು, ಒಂದು ಪ್ರಖ್ಯಾತ ನಿದರ್ಶನ. ಚಕ್ರಾಧಿಪತ್ಯದ ಪ್ರತಿನಿಧಿಯೇ ತಮ್ಮ ಬಾವುಟವನ್ನು ಇಳಿಸಿ ಸ್ವತಂತ್ರ್ಯ ಭಾರತದ ಪ್ರಜಾನುರಾಗಿ ಗವರ್ನರ್-ಜನರಲ್ ಎನಿಸಿಕೊಂಡರು. ಇದು ಸತ್ಯಾಗ್ರಹದ ಒಂದು ಪರಿಣಾಮ.

ಗಾಂಧಿಯವರು ನಿರ್ದೇಶಿಸಿದ ಸತ್ಯಾಗ್ರಹಗಳಲ್ಲಿ ಅವರು ಸ್ವತಃ ಒಂದು ಸ್ವಯಂ ಸೇವಕ ಶಿಕ್ಷಣಕ್ರಮವನ್ನು ಅನುಸರಿಸುತ್ತಿದ್ದರು. ಸಾಮೂಹಿಕ ಸತ್ಯಾಗ್ರಹ ಇನ್ನೂ ಹೊಸ ಪ್ರಯೋಗ, ಅದಕ್ಕೆ ಜನತೆಯ ಅತ್ಯಂತ ದಕ್ಷವಾದ ಶಿಸ್ತಿನ ಶಿಕ್ಷಣ ಅತ್ಯಗತ್ಯ ಎಂದರು. ಸತ್ಯಾಗ್ರಹವೆಂದರೆ ವೇದನೆಯನ್ನು ಸದಾ ಸಹಿಸುವ ನಿರಂತರ ಸಿದ್ಧತೆ. ಈ ಸಹನೆ ನಿಷ್ಕಲಂಕವಾದಷ್ಟೂ ಅದರ ಪರಿಣಾಮ ಸತ್ತ್ವಶಾಲಿಯಾಗುತ್ತದೆ. ಸತ್ಯಾಗ್ರಹದಲ್ಲಿ ಅಸಹಾಯಕತೆ ಎಂದಿಗೂ ಇರಬಾರದು ಎನ್ನುತ್ತಿದ್ದರು. ತಮ್ಮ ಸೂಚನೆಗಳ ಹಿನ್ನೆಲೆಯಲ್ಲಿ ಯಾವ ಗುಣಗಳು ಪ್ರತಿ ಸತ್ಯಾಗ್ರಹಿಯಲ್ಲೂ ಇರಬೇಕೋ ಅವನ್ನು ಅವರು ಹೀಗೆ ಸಂಗ್ರಹಿಸಿಕೊಟ್ಟಿದ್ದಾರೆ: 1 ಸತ್ಯಸ್ವರೂಪನಾದ ದೇವರಲ್ಲಿ ಅಚಲನಂಬಿಕೆ. 2 ಸತ್ಯ ಅಹಿಂಸೆಗಳಲ್ಲೂ ಕಷ್ಟಸಹಿಷ್ಣುತೆಯಿಂದ ಇತರರಲ್ಲಿ ಎಚ್ಚರಗೊಳ್ಳುವ ಮಾನವೀಯ ಒಳ್ಳೆಯತನದಲ್ಲೂ ವಿಶ್ವಾಸ. 3 ಪರಿಶುದ್ಧ ಜೀವನ, ತ್ಯಾಗಬಲಿದಾನಗಳಿಗೆ ಸಿದ್ಧತೆ. 4 ಸ್ವದೇಶೀ ಮತ್ತು ಶರೀರಶ್ರಮ ವ್ರತಗಳ ಸ್ವೀಕಾರ. 5 ಮದ್ಯ ಮತ್ತು ಇತರ ಮಾದಕವಸ್ತುಗಳ ಸಂಪುರ್ಣ ನಿಷೇಧ. 6 ಕಾಲಕಾಲಕ್ಕೆ ಅನುಸರಿಸಬೇಕಾದ ಶಿಸ್ತುಗಳ ಮನಃಪುರ್ವಕ ಪಾಲನೆ. 7 ಶಿಕ್ಷೆಯನ್ನು ಸಂತೋಷದಿಂದ ಅನುಭವಿಸುವಾಗ ನಿಯಮಗಳನ್ನು ಪಾಲಿಸುತ್ತ ವಿನಯ ಪುರ್ವಕವಾಗಿ ಆತ್ಮಗೌರವದಿಂದ ನಡೆದುಕೊಳ್ಳುವುದು.

ಸತ್ಯಾಗ್ರಹದ ಸಮಗ್ರರೂಪದ ಪರಿಣಾಮ ಮಾನವನ ಆಧ್ಯಾತ್ಮಿಕ ವಿಕಾಸ. ವಸ್ತುನಿಷ್ಠ ಬಾಹ್ಯ ಪ್ರಪಂಚದ ಸಂಪತ್ಸಮೃದ್ಧಿಯ ಅವಿರತ ಕಾರ್ಯದಲ್ಲಿ ತೊಡಗಿರುವಾಗಲೂ ಆತ್ಮವಿಕಾಸ ನಿರಂತರವಾಗಿ ಹರಿದುಬರುವ ಸಾಧನ ಸತ್ಯಾಗ್ರಹ ಜೀವನಮಾರ್ಗ. ವಿಜ್ಞಾನ + ಹಿಂಸೆ = ಸರ್ವನಾಶ; ವಿಜ್ಞಾನ + ಅಹಿಂಸೆ = ಸರ್ವೋದಯ, ಎಂದು ವಿನೋಬಾ ಭಾವೆಯವರು ಕೊಟ್ಟಿರುವ ಸೂತ್ರ ಗಾಂಧಿ ಪ್ರಣೀತ ಸತ್ಯಾಗ್ರಹ ಮಾರ್ಗದ ವ್ಯಾಖ್ಯೆಯೂ ಹೌದು. ವಿಜ್ಞಾನ ಮತ್ತು ಆತ್ಮಜ್ಞಾನಗಳ ಸಮತೋಲನ ವಿಕಾಸವಾಗುತ್ತ ಹೋದಂತೆ ಮಾನವಸಮಾಜದ ಸ್ವರೂಪವೇ ಬದಲಾಗಿ ಮಾನವೀಯ ಮೌಲ್ಯಗಳು ಸುಪ್ರತಿಷ್ಠವಾಗುತ್ತವೆ. ಸತ್ಯಾಗ್ರಹಶಾಸ್ತ್ರ ಈ ದಿಸೆಯಲ್ಲಿ ಸಂಶೋಧಿತವಾದ ಅತ್ಯಂತ ಪ್ರಭಾವಂತ ಸಿದ್ಧಾಂತವೆಂದು ಪರಿಗಣಿತವಾಗಿದೆ.