ಕೇದಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಸುಕು ಮತ್ತು ಜೌಗುಳ್ಳ ಹಳ್ಳಕೊಳ್ಳಗಳಲ್ಲಿ ಗುಂಪು ಗುಂಪಾಗಿ ಸುತ್ತಲೂ ಕವಲೊಡೆದು ದಪ್ಪನಾದ ಕಾಂಡದ ಸುತ್ತಲೂ ಬೇರೂರಿ ೧೦ ಮೀ. ವರೆಗೆ ಎತ್ತರಕ್ಕೆ ಬೆಳೆಯುವ ದೊಡ್ಡ ಪೊದರು ಇದು. ದೊಡ್ಡ ಎಲೆಗಳು ೧ ರಿಂದ ೨ ಮೀ. ಉದ್ದವಿದ್ದು ಮಧ್ಯದಲ್ಲಿ ದಿಂಡು ಹೊಂದಿದ್ದು ಖಡ್ಗದಂತಿರುವ ಒರಟು ಎಲೆಗಳು. ಅಲಗಿನಂಚಿನಲ್ಲಿ ಅನೇಕ ಚಿಕ್ಕ ಮುಳ್ಳುಗಳನ್ನು ಉದ್ದಕ್ಕೂ ಹೊಂದಿರುತ್ತವೆ. ನಡುನರದ ಮುಳ್ಳು ಮುಂದಕ್ಕೆ ಬಾಚಿರುತ್ತವೆ. ಎಲೆಗಳು ಕೊಂಬೆಗಳ ತುದಿಯಲ್ಲಿ ದಳದಂತೆ ಸುತ್ತುವರಿದು ಜೋಡಿಸಲ್ಪಟ್ಟಿರುತ್ತವೆ. ಹೂಗಳು ಏಕಲಿಂಗ, ತೆನೆಗಳಂತೆ ಹೂಗೊಂಚಲನ್ನು ಬೇರೆ ಬೇರೆಯಾಗಿ ಏಕಲಿಂಗ ಮರಗಳಲ್ಲಿ ಬಿಟ್ಟಿರುತ್ತವೆ. ಗಂಡು ಹೂವಿನ ತೆನೆ ಉದ್ದವಾಗಿದ್ದು ೩ ಸಾಲಿನಲ್ಲಿ ಸುವಾಸನೆಯುಳ್ಳ ೧ ಮೀ. ಉದ್ದದ ಹಳದಿ ಆಕರ್ಷಕ ಪತ್ರಗಳು ಆವೃತವಾಗಿದ್ದು, ಇದರ ಮಧ್ಯದಲ್ಲಿ ಕೇಸರ ದಂಡಗಳು ಕೂಡಿಕೊಂಡು, ಚಿಕ್ಕ ಕೇಸರ ಕೊಳವೆ ೧ ಸೆಂ.ಮೀ. ಉದ್ದ, ಬಿಳಿ ಮಿಶ್ರಿತ ಬಣ್ಣ ಹಾಗೂ ಸುವಾಸನೆಯುಳ್ಳವು. ಒಂಟಿಯಾದ ಸ್ಟೇಡಿಕ್ಸ್‌ ಹೆಣ್ಣು ಹೂ ಗೊಂಚಲು ೭-೮ ಸೆಂ.ಮೀ. ವ್ಯಾಸ, ೪-೧೦ ಕಾರ್ಪೆಲ್ಲುಗಳಿದ್ದು ೭.೫ ಸೆಂ.ಮೀ. ಉದ್ದವಿರುತ್ತವೆ. ಹೂವುಗಳು ಸುಮಾರು ಹತ್ತು ದಳಗಳನ್ನು ಹೊಂದಿರುತ್ತದೆ. ಬಲಿತಾಗ ಅನಾನಸ್ಸಿನಂತಹ ಸಂಯುಕ್ತ ಫಲ ಬಿಡುತ್ತವೆ ಹಾಗೂ ಅವು ಮುಳ್ಳು ಹೊಂದಿದ್ದು, ೯ ಸೆಂ.ಮೀ.-೨೫ ಸೆಂ.ಮೀ. ಉದ್ದವಿರುತ್ತವೆ. ಅವುಗಳ ತುದಿ ದುಂಡಾಗಿದ್ದು, ತುದಿಯಲ್ಲಿ ತಗ್ಗಾಗಿರುತ್ತದೆ ಮತ್ತು ಬಲಿತಾಗ ಹಳದಿ ಅಥವಾ ಕೆಂಪಾಗಿರುತ್ತದೆ.[೧] ಕಾಂಡವು ವಾಯು ಬೇರುಗಳು ಆಧಾರದ ಮೇಲೆ ನಿಂತಿರುತ್ತದೆ.

ವೈಜ್ಞಾನಿಕ ಹೆಸರು[ಬದಲಾಯಿಸಿ]

  • ವೈಜ್ಞಾನಿಕ ಹೆಸರು:ಪ್ಯಾಂಡೇನಸ್‌ ಟೆಕ್ಟೋರಿಯಸ್‌
  • (Syn: ಪ್ಯಾ. ಫ್ಯಾಸಿಕ್ಯುಲೇರಿಸ್‌)
  • ಕುಟುಂಬ: ಪ್ಯಾಂಡೇನೇಸಿ

ಪುನರುತ್ಪತ್ತಿ[ಬದಲಾಯಿಸಿ]

ಸಸ್ಯದ ಪುನರುತ್ಪತ್ತಿಯನ್ನು ತೇವವುಳ್ಳ ಸ್ಥಳಗಳಲ್ಲಿ ಕೊನೆಗಳನ್ನು ನೆಡುವುದರಿಂದ, ಬೇರೆಯಾಗಿ ಅಥವಾ ನೀರಿನ ದಂಡೆಗಳಲ್ಲಿ ಬೆಳೆಸುವುದರಿಂದ ಅಭಿವೃದ್ಧಿಪಡಿಸಬಹುದು.

ಉಪಯೋಗಗಳು[ಬದಲಾಯಿಸಿ]

ಸುವಾಸನೆಯ ಪುಷ್ಪ ಪತ್ರಕಗಳನ್ನು ಬಾಷ್ಪೀಕರಿಸಿ ‘ಕಿವಡಾ’ ಸುಗಂಧ ತೈಲವನ್ನು ಪಡೆಯುತ್ತಾರೆ . ಈ ತೈಲವನ್ನು ಅತ್ತರು, ಸುಗಂಧ ತೈಲಗಳಲ್ಲಿ, ಸಾಬೂನು ತಯಾರಿಕೆಯಲ್ಲಿ, ಕೆಲ ಕೇಶಾಲಂಕಾರಕಗಳನ್ನು ಸುವಾಸನೆಗೊಳಿಸಲು ಉಪಯೋಗಿಸುತ್ತಾರೆ. ಪುಷ್ಪ ಪತ್ರಕಗಳನ್ನು ಪೂಜೆಗೆ, ಹೆಂಗಸರು ಮುಡಿದುಕೊಳ್ಳಲು ಉಪಯೋಗಿಸುತ್ತಾರೆ. ಎಲೆಗಳನ್ನು ಚಾಪೆ, ಸಕ್ಕರೆ, ಚೀಲ, ಕುಂಚವಾಗಿ ಮತ್ತು ಟೋಪಿಗಳನ್ನು ತಯಾರಿಸುತ್ತಾರೆ. ಎಳೆಯ ಕಾಯನ್ನು ತರಕಾರಿಯಾಗಿ ಬಳಸುತ್ತಾರೆ. ಎಲೆಗಳು ಖಾರವಾಗಿರುವುದರಿಂದ, ಕುಷ್ಠರೋಗ ಮತ್ತು ಕೆಲವು ಅಂಟು ರೋಗಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ನಿದ್ರಾಜನಕವಾಗಿ ಮತ್ತು ಕಫದ ನಿವಾರಣೆಗೆ ಉಪಯೋಗಿಸುತ್ತಾರೆ. ಪತ್ರದ ತೈಲವನ್ನು ಪಾಂಡು ರೋಗ, ಹೃದ್ರೋಗ, ಮೆದುಳು ರೋಗ ಮತ್ತು ತಂಪಿಗೆ ಉಪಯೋಗಿಸುತ್ತಾರೆ. ಪತ್ರಕದ ತೈಲವನ್ನು ಸ್ನಾಯು ಸೆಳೆತ, ತಲೆ ನೋವು, ನರಗಳ ದೌರ್ಬಲ್ಯತೆ ಹೋಗಲಾಡಿಸಲು ಉಪಯೋಗಿಸುತ್ತಾರೆ. ಬೇರಿನ ತೈಲವನ್ನು ಕೆಲವು ಔಷಧಿಯುಕ್ತ ಎಣ್ಣೆಗಳಲ್ಲಿ ಉಪಯೋಗಿಸುತ್ತಾರೆ.

ಬೇರೆ ಹೆಸರು[ಬದಲಾಯಿಸಿ]

  • ಸಂಸ್ಕೃತ: ಕೇಥಕಿ
  • ಹಿಂದಿ: ಕೇವುಡ
  • ಮಲಯಾಳಂ: ಕೈಥಾ
  • ಗುಜರಾತಿ:ಕೇಟಕಿ
  • ತೆಲುಗು: ಮೊಗಿಲ್
  • ತಮಿಳು: ತಾಳಮ್ ಪೂ

ವರ್ಣನೆ[ಬದಲಾಯಿಸಿ]

ನೀರಿನ ಆಸರೆ ಇರುವ ಕಡೆ ಬೆಳೆಯುವ ಗಿಡ. ಎಲೆಗಳು ಉದ್ದವಾಗಿದ್ದು ಗರಿ ಆಕಾರದಲ್ಲಿ ಚೂಪಾಗಿರುತ್ತವೆ. ಎಲೆಯ ಅಂಚಿನಲ್ಲಿ ಮುಳ್ಳುಗಳು ಇರುತ್ತವೆ. ಸುವಾಸನೆಯುಳ್ಳ ಹಳದಿ ಬಣ್ಣದ ಹೂವುಗಳು ಬಿಡುತ್ತವೆ, ಇದನ್ನು ಹೆಣ್ಣು ಮಕ್ಕಳು ತಲೆಯಲ್ಲಿ ಮುಡಿಯುತ್ತಾರೆ.[೨]

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಕೇದಿಗೆ ಹೂಗಳನ್ನು ತಂದು ಎಳ್ಳೆಣ್ಣೆಯಲ್ಲಿ ಹಾಕಿ, ಮುಂದಾಗ್ನಿಯಿಂದ ಕಾಯಿಸುವುದು, ಎಣ್ಣೆತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸಿ ಸಂಗ್ರಹಿಸುವುದು, ತಲೆನೋವಿನಲ್ಲಿ ಹಣೆಗೆ ಹಚ್ಚುವುದು ಮತ್ತು ಶ್ವಾಸಕೋಶಗಳ ತೊಂದರೆಯಲ್ಲಿ ಎದೆಗೆ ಸವರುವುದು.ಈ ಎಣ್ಣೆಯನ್ನುಇಡೀ ಶರೀರಕ್ಕೆ ಹಚ್ಚುವುದರಿಂದ ನರಗಳು ಉತ್ತೇಜನಗೊಂಡು ಸೋಮಾರಿತನ ಮತ್ತು ಜಡತ್ವ ಪರಿಹಾರವಾಗುವುದು.ಬೇರನ್ನು ಅರೆದು ಸಿಡುಬು ಮತ್ತು ಕುಷ್ಟವ್ಯಾಧಿಯ ಹುಣ್ಣುಗಳಿಗೆ ಲೇಪಿಸಲು ಬಳಸುತ್ತಾರೆ. ಬೇರನ್ನು ಅರೆದು ಲೇಪಿಸುವುದರಿಂದ ವಾತದಿಂದಾಗುವ ನೋವುಗಳು ಗುಣವಾಗುತ್ತವೆ.ಒಣಗಿದ ಎಲೆಗಳ ಪುಡಿಯನ್ನು ಅಥವಾ ಚಕ್ಕೆಯ ಸುಟ್ಟ ಬೂದಿಯನ್ನು ಗಾಯಗಳಿಗೆ ಲೇಪಿಸುವುದರಿಂದ ಶೀಘ್ರ ಗುಣವಾಗುತ್ತದೆ. ಎಣ್ಣೆಯನ್ನು ಸಂದಿವಾತದ ಉರಿ ಮತ್ತು ನೋವಿನ ಸಮಸ್ಯೆಗಳಿಗೆ ಲೇಪಿಸಬಹುದು.ಬೇರಿನ ಕಷಾಯವನ್ನು ಕಾಮಾಲೆ ರೋಗಕ್ಕೆ ಬಳಸಲಾಗುತ್ತದೆ.ಬೀಜಗಳ ಕಷಾಯವು ಕರುಳಿನ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿ.

ಸರ್ಪದ ವಿಷಕ್ಕೆ[ಬದಲಾಯಿಸಿ]

ಸರ್ಪ ಕಚ್ಚಿದಾಗ ಪ್ರಥಮಚಿಕಿತ್ಸೆಯಾಗಿ ಈ ಉಪಚಾರ ಪರಿಣಾಮಕಾರಿ. ಬಲಿತ ಬೇರು ತಂದು ನೀರಿನಲ್ಲಿ ತೇದು, ಸರ್ಪಕಚ್ಚಿರುವ ಕಡೆ ಪಟ್ಟು ಹಾಕುವುದು ಮತ್ತು ಅರ್ಧ ಟೀ ಚಮಚ ನೀರಿನಲ್ಲಿ ಕದಡಿ ಕುಡಿಯುವುದು.

ಉದರ ಶೂಲೆ[ಬದಲಾಯಿಸಿ]

ಕೇದಿಗೆ ಗಿಡದ ಹೂವಿನ ಹಳದಿ ಎಲೆಗಳನ್ನು ತಂದು, ನೆರಳಲ್ಲಿ ಒಣಗಿಸಿ ಸುಟ್ಟು ಬೂದಿ ಮಾಡುವುದು.ಈ ಬೂದಿಯ ಕಾಲು ಟೀ ಚಮಚದಷ್ಟನ್ನು ನೀರಿನಲ್ಲಿ ಕದಡಿ ಜೇನುತುಪ್ಪ ಮತ್ತು ತುಪ್ಪ ಸೇರಿಸಿ ಕುಡಿಸುವುದು[೩]

ಉಲ್ಲೇಖ[ಬದಲಾಯಿಸಿ]

  • ಸಂಪಾದಕರು: ವೈದ್ಯ ಎ. ಆರ್. ಎಂ. ಸಾಹೇಬ್,ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್.ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು.
  1. ರೈತರಿಗೆ ಬೇಕಾಗುವ ಪೊದರುಗಳು ಕೇದಿಗೆ[ಶಾಶ್ವತವಾಗಿ ಮಡಿದ ಕೊಂಡಿ]
  2. "ಮನಸು ಕದ್ದ ಕೇದಿಗೆ ಲಿಂಗವೂ ಮೆಚ್ಚಿಕೊಂಡ ಹೂವು,www.kannadaprabha.com". Archived from the original on 2015-03-20. Retrieved 2016-12-04.
  3. .ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ
"https://kn.wikipedia.org/w/index.php?title=ಕೇದಿಗೆ&oldid=1212474" ಇಂದ ಪಡೆಯಲ್ಪಟ್ಟಿದೆ