ಅಪ್ಪಯ್ಯ ದೀಕ್ಷಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಂಜಾವೂರುಜಿಲ್ಲೆಯಲ್ಲಿರುವ ಅಪ್ಪಯ್ಯ ದೀಕ್ಷಿತರ ಸಮಾಧಿ

ಅಪ್ಪಯ್ಯ ದೀಕ್ಷಿತ (ಸು. 1554-1626) ಸರ್ವತೋಮುಖವಾದ ಪ್ರತಿಭೆ ಪಾಂಡಿತ್ಯಗಳಿಗೂ ದೈವಭಕ್ತಿಗೂ ಹೆಸರುವಾಸಿಯಾದ ಈತ ತಮಿಳುನಾಡಿನ ಕಂಚಿಯ ಸಮೀಪದ ಅಡಯಪ್ಪಲಮ್ ಎಂಬ ಗ್ರಾಮದಲ್ಲಿ ವಿದ್ವಾಂಸರ ವಂಶದಲ್ಲಿ ಜನಿಸಿದ. ಅವನ ತಾತ ಆಚಾರ್ಯ ದೀಕ್ಷಿತ ವಿಜಯನಗರದ ಕೃಷ್ಣದೇವರಾಯನಿಂದ ಪೋಷಿತನಾಗಿದ್ದು ಅಚ್ಚಾನ್ ದೀಕ್ಷಿತ ಎಂದು ಹೆಸರಾಗಿದ್ದ. ಅಚ್ಚಾನ್ ಎಂಬುದು ಆಚಾರ್ಯ ಪದದ ತಮಿಳು ರೂಪ.

ಕಾಲ[ಬದಲಾಯಿಸಿ]

ಅಪ್ಪಯ್ಯ ದೀಕ್ಷಿತರ ಕಾಲದ ವಿಚಾರದಲ್ಲಿ ವಿವಾದವಿದೆ. ಆತ ಕ್ರಿ.ಶ. 1554-1626 ರವರೆಗೆ ಜೀವಿಸಿದ್ದರೆಂದು  ಸಾಮಾನ್ಯವಾಗಿ ವಿದ್ವಾಂಸರ ಒಪ್ಪಿಗೆ ಪಡೆದಿರುವ ಅಭಿಪ್ರಾಯ. ಇದಕ್ಕೆ ವಿಜಯನಗರದ ಎರಡನೆಯ ಶ್ರಿರಂಗರಾಯನ ಒಂದು ಶಾಸನದ ಆಧಾರವಿದೆ. ಆದರೆ ಅಪ್ಪಯ್ಯ ದೀಕ್ಷಿತರ ವಂಶಜರೇ ಆದ ವೈ. ಮಹಲಿಂಗಶಾಸ್ತ್ರಿಗಳು ಇವರ ಕಾಲದ ವಿಚಾರದಲ್ಲಿ ಮೇಲ್ಕಂಡ ತೀರ್ಮಾನ ಸರಿಯಲ್ಲವೆಂದು ವಾದಿಸಿದ್ದಾರೆ. ಅಪ್ಪಯ್ಯ ದೀಕ್ಷಿತರು ತನ್ನ ಕೆಲವು ಗ್ರಂಥಗಳಲ್ಲಿ ಕಾಣಿಸಿರುವ ಚಿನ್ನತಿಮ್ಮ, ಚಿನ್ನಬೊಮ್ಮ, ವೆಂಕಟ ಎಂಬ ರಾಜರ ಹೆಸರುಗಳನ್ನೂ ದಿಕ್ಷಿತರ ಜನ್ಮಸ್ಥಳವಾದ ಅಡಯಪ್ಪಲಯಂನ ಕಾಲಕಂಠೇಶ್ವರ ದೇವಾಲಯದಲ್ಲಿನ ಶಿಲಾಶಾಸನವನ್ನೂ ಗಮನದಲ್ಲಿಟ್ಟುಕೊಂಡು ಶಾಸ್ತ್ರಿಗಳು ದೀಕ್ಷಿತರ ಕಾಲವನ್ನು ನಿರ್ಣಯಿಸಿದ್ದಾರೆ. ರಂಗರಾಜ ಪುತ್ರನಾದ ಅಪ್ಪಯ್ಯನಿಂದ ಒಂದು ನೂರಾನಾಲ್ಕು ಗ್ರಂಥಗಳು ರಚಿತವಾದ ಅಂಶವೂ ಚಿನ್ನಬೊಮ್ಮ ಅಪ್ಪಯ್ಯನಿಗೆ ಪೋಷಕ ದೊರೆಯಾಗಿದ್ದ ವಿಚಾರವೂ ಮೇಲ್ಕಂಡ ಶಿಲಾಶಾಸನದಿಂದ (1582) ತಿಳಿದುಬಂದಿವೆ. ಆದರೆ, ಅಪ್ಪಯ್ಯ ದೀಕ್ಷಿತರ ಕಾಲದಿಂದ ಬಹು ಈಚೆಗೆ ಅವರ ಪ್ರಸಿದ್ಧಿಯನ್ನನುಸರಿಸಿ ಶಾಸನ ಹುಟ್ಟಿರಬಹುದೆಂದು ಹೇಳಿ ಕೆಲವು ವಿದ್ವಾಂಸರು ಅದರ ಆಧಾರದ ಮೇಲೆ ಶಾಸ್ತ್ರಿಗಳವರು ಮಾಡಿರುವ ಕಾಲನಿರ್ಣಯವನ್ನು ವಿರೋಧಿಸಿದ್ದಾರೆ. ಅಲ್ಲದೆ, ಅದೇ ವಂಶದಲ್ಲಿ ಅಪ್ಪಯ್ಯ ಎಂಬ ಹೆಸರುಳ್ಳವರು ಮೂರು ಮಂದಿ ಇರುವರೆಂಬ ವಿಷಯವನ್ನೂ ವಿದ್ವಾಂಸರು ಬೆಳಕಿಗೆ ತಂದಿರುವುದರಿಂದ ದೀಕ್ಷಿತರ ಕಾಲವನ್ನು ನಿರ್ಧರಿಸುವುದು ಕಷ್ಟತರವಾಗಿದೆ

ಸಂಸಾರಿಕ ಜೀವನ[ಬದಲಾಯಿಸಿ]

ಆಚಾರ್ಯ ದೀಕ್ಷಿತರಿಗೆ ಶೈವ ಹಾಗೂ ಶ್ರೀವೈಷ್ಣವ ಪಂಗಡದ ಇಬ್ಬರು ಪತ್ನಿಯರಿದ್ದರು. ಹೀಗಾಗಿ ದೀಕ್ಷಿತನಲ್ಲಿ ಶೈವ ವೈಷ್ಣವ ಮತಗಳು ಸಮನ್ವಯಗೊಂಡಿದ್ದುವು. ಶ್ರೀವೈಷ್ಣವ ಪತ್ನಿಯಲ್ಲಿ ಹುಟ್ಟಿದ ನಾಲ್ವರು ಪುತ್ರರಲ್ಲಿ ಮೊದಲನೆಯವ ಶ್ರೀರಂಗರಾಜಾಧ್ವರಿ. ಈತ ಪ್ರಸಿದ್ಧ ವೇದಾಂತಿ. ಇವನಿಗೆ ಅಪ್ಪ ದೀಕ್ಷಿತ, ಅಚ್ಚಾನ್ ದೀಕ್ಷಿತರೆಂಬ ಇಬ್ಬರು ಮಕ್ಕಳು. ನೀಲಕಂಠವಿಜಯ ಎಂಬ ಚಂಪೂಕಾವ್ಯದ ಕರ್ತೃ ನೀಲಕಂಠ ದೀಕ್ಷಿತ ಅಚ್ಚಾನ್ ದೀಕ್ಷಿತರ ಮೊಮ್ಮಗ. ಶ್ರೀರಂಗರಾಜಾಧ್ವರಿಯ ಜ್ಯೇಷ್ಠಪುತ್ರನ ಹುಟ್ಟುಹೆಸರು ವಿನಾಯಕಸುಬ್ರಹ್ಮಣ್ಯ ಎಂದಾದರೂ ಎಲ್ಲರೂ ಪ್ರೀತಿಯಿಂದ ಅಪ್ಪ ದೀಕ್ಷಿತ ಎಂದು ಕರೆಯುತ್ತಿದ್ದರು. ಕಾಲಕ್ರಮದಲ್ಲಿ ಗೌರವ ಕೂಡಿಬಂದಂತೆಲ್ಲ ಅಪ್ಪಯ್ಯ ದೀಕ್ಷಿತ ಎಂದಾಗಿ ಆ ಹೆಸರೇ ಹೆಚ್ಚು ರೂಢಿಗೆ ಬಂತು.

ಬಾಲ್ಯದಿಂದಲೂ ತಂದೆಯಿಂದ ಅದ್ವೈತ ಮುಂತಾದ ಶಾಸ್ತ್ರಗಳಲ್ಲಿ ಶಿಕ್ಷಣ ಲಭಿಸಿ ವಂಶಕ್ಕನುಗುಣವಾಗಿ ಅವನಲ್ಲಿ ಅದ್ವೈತ ವಿಷಯಿಕವಾದ ಆಸಕ್ತಿ ಬೆಳೆಯಿತು. ಅಲ್ಲದೆ ಅದ್ವೈತದ ಪ್ರಕಾರ ನಿರ್ಗುಣ ಬ್ರಹ್ಮತತ್ತ್ವವನ್ನು ತಂದೆ ಮನದಟ್ಟು ಮಾಡಿಸಿದ್ದರೂ ಅಪ್ಪಯ್ಯನಿಗೆ ಚಿದಚಿತ್ಪ್ರಪಂಚವಿಶಿಷ್ಟನಾದ ಶಿವನ ವಿಚಾರದಲ್ಲಿ ಭಕ್ತಿ ಅಪಾರವಾಗಿ ಬೆಳೆದು ಅವರ ಕೆಲವು ಗ್ರಂಥಗಳಲ್ಲಿ ಹೊರ ಹೊಮ್ಮಿತು. ಕೆಲಕಾಲಾನಂತರ ಅದ್ವೈತಾಚಾರ್ಯರು ಸನ್ಯಾಸಿಗಳೂ ಮತ್ತು ಭೇದಧಿಕ್ಕಾರಾದಿ ಗ್ರಂಥ ಕರ್ತೃಗಳೂ ಆದ "ಶ್ರೀ ನೃಸಿಂಹಾಶ್ರಮ ಸ್ವಾಮಿ"ಗಳ ಪ್ರಭಾವದಿಂದ ಅವರ ಮನಸ್ಸು ಅದ್ವೈತದ ಮೂಲತತ್ವಗಳ ಕಡೆ ಪುನಃ ಹರಿಯಿತು. ತತ್ಪರಿಣಾಮವಾಗಿ ಅವರು ಬರೆದ ಗ್ರಂಥಗಳೆಂದರೆ, ಅದ್ವೈತ ವೇದಾಂತದ ಮೂರ್ಧನ್ಯ ಗ್ರಂಥ ವಾದ ಬ್ರಹ್ಮಸೂತ್ರದ ಶಂಕರಭಾಷ್ಯದ ವ್ಯಾಖ್ಯಾನವಾದ ಭಾಮತಿಗ್ರಂಥಕ್ಕೆ ಕಲ್ಪತರುವೆಂಬ ವ್ಯಾಖ್ಯಾನಕ್ಕೆ ಅಂತಿಮ ಮಹಾನಿರ್ಣಾಯಕ ವ್ಯಾಖ್ಯಾನರೂಪದ "ಪರಿಮಳ"ವೆಂಬ ಬೃಹತ್ ಗ್ರಂಥವನ್ನು ರಚಿಸಿದರು., ಮತ್ತು ಬ್ರಹ್ಮಸೂತ್ರಕ್ಕೆ ನೇರವಾಗಿ ಶಂಕರಾಚಾರ್ಯರಂತೆ "ನ್ಯಾಯ ರಕ್ಷಾಮಣಿ" ಎನ್ನುವ ವಿಶಿಷ್ಟ ಭಾಷ್ಯವನ್ನು ಬರೆದರು., ಅದ್ವೈತ ವೇದಾಂತ ದ ಕೆಲವ್ಯಾಖ್ಯಾನ ಭೇದಗಳ ಸಂಶಯ ನಿವೃತ್ತಿಗಾಗಿ "ಸಿದ್ಧಾಂತಲೇಶಸಂಗ್ರಹ" ವೆಂಬ ವಿಶೇಷ ಶೈಲಿಯ ಗ್ರಂಥವನ್ನು ರಚಿಸಿದರು. ಈಗಲೂ ಕೂಡ ವೇದಾಂತ ಪರಂಪರೆಯಲ್ಲಿ ಉನ್ನತ ವೇದಾಂತ ರಹಸ್ಯ  ತತ್ತ್ವಗಳನ್ನು ತಿಳಿದುಕೊಳ್ಳುವಾಗ ಅಪ್ಪಯ್ಯ ದೀಕ್ಷಿತರ ಈ ಮೂರೂ ಗ್ರಂಥಗಳಿಗೆ ಶರಣು ಹೋಗಬೇಕಾಗಿದೆ ..ಇದು ಅವರ ಗ್ರಂಥಗಳ ವಿಶಿಷ್ಟತೆ ಮತ್ತು ಶಕ್ತಿ .

ಗ್ರಂಥಗಳು[ಬದಲಾಯಿಸಿ]

ಅಪ್ಪಯ್ಯ ದೀಕ್ಷಿತ ಸುಮಾರು ನೂರನಾಲ್ಕು ಗ್ರಂಥಗಳ ಕರ್ತೃವೆಂದು ಪ್ರಸಿದ್ಧಿ ಪಡೆದಿದ್ದಾನೆ. ಶ್ರೀಕಂಠಶಿವಾಚಾರ್ಯನ ಬ್ರಹ್ಮಸೂತ್ರ ಭಾಷ್ಯಕ್ಕೆ ವಿವರಣೆಯನ್ನು ಕೊಟ್ಟು ವಿಶಿಷ್ಟಶಿವಾದ್ವೈತವನ್ನು ಸುಂದರವಾಗಿ ವಿವರಿಸಿರುವ ಕೀರ್ತಿ ಈತನದು. ಮೇಲ್ಕಂಡ ಸೂತ್ರ ಭಾಷ್ಯಕ್ಕೆ ವ್ಯಾಖ್ಯಾನರೂಪದಲ್ಲಿರುವ ಶಿವಾರ್ಕಮಣಿದೀಪಿಕಾ, ಶಿವಾದ್ವೈತನಿರ್ಣಯ ಮುಂತಾದ ಗ್ರಂಥಗಳೂ ಶಿವತತ್ತ್ವ ಪ್ರತಿಪಾದನೆಗೆ ಮೀಸಲಾಗಿವೆ. ದೀಕ್ಷಿತ ಶುದ್ಧಾದ್ವೈತದಲ್ಲಿ ದೃಢವಾದ ಚಿತ್ತವೃತ್ತಿಯುಳ್ಳವನು. ಆದರೆ ಅವನ ಹೃದಯ ಶಿವಭಕ್ತಿಯಿಂದ ತುಂಬಿತ್ತು. ಸಗುಣಬ್ರಹ್ಮನಿರೂಪಣೇಯಲ್ಲಿ ಅಭಿರುಚಿಯನ್ನು ಹೊಂದಿದ್ದ ಆತನಿಗೆ ಶಿವಭಕ್ತಿ ವಿಷ್ಣುಭಕ್ತಿಗಳೆರಡರಲ್ಲೂ ಏಕರೂಪವಾದ ಸಹಾನುಭೂತಿ ಶ್ರದ್ಧೆಗಳಿದ್ದುವು. ವೈಷ್ಣವಾಚಾರ್ಯ ಶ್ರೀಮದ್ವೇದಾಂತದೇಶಿಕ ವಿರಚಿತ ಯಾದವಾಭ್ಯುದಯ ಕಾವ್ಯಕ್ಕೆ ಉತ್ತಮವ್ಯಾಖ್ಯಾನವನ್ನು ಬರೆದು ದೀಕ್ಷಿತ ತನ್ನ ವಿಶಾಲಮನೋಭಾವವನ್ನು ವ್ಯಕ್ತಪಡಿಸಿದ್ದಾನೆ. ಆದರೂ ಅವನ ಹೃದಯದ ಒಲವು ಶಿವನ ಕಡೆಗೇ. ಅವನೇ ಹೇಳುವಂತೆ ಅವನಿಗೆ ತರುಣೇಂದುಶೇಖರನಲ್ಲಿ ಅತಿಭಕ್ತಿ (ತಥಾಪಿ ಭಕ್ತಿಸ್ತರುಣೇಂದುಶೇಖರ). ಅದ್ವೈತವೇದಾಂತಕ್ಕೂ ಶೈವಮತಕ್ಕೂ ಸಂಬಂಧಪಟ್ಟ ಗ್ರಂಥಗಳನ್ನೇ ಅಲ್ಲದೆ ದೀಕ್ಷಿತ ಕುವಲಯಾನಂದ, ಚಿತ್ರಮೀಮಾಂಸಾ, ವೃತ್ತಿವಾರ್ತಿಕಾ, ಲಕ್ಷಣರತ್ನಾವಳೀ ಎಂಬ ಅಲಂಕಾರ ಗ್ರಂಥಗಳನ್ನೂ ಯಾದವಾಭ್ಯುದಯಕ್ಕೆ ವ್ಯಾಖ್ಯಾನವನ್ನೂ ರಚಿಸಿದ್ದಾನೆ. ಶಿವಮಹಿಮಕಲ8ಇಕಾಸ್ತುತಿ, ವರದರಾಜಸ್ತವ, ಹರಿಹರಸ್ತುತಿ ಮುಂತಾದ ಸ್ತೋತ್ರಗ್ರಂಥಗಳೂ ಅವನಿಂದ ರಚಿತವಾಗಿವೆ. ಈ ಗ್ರಂಥಗಳಲ್ಲಿ ಕಾಣಬರುವ ವಸ್ತು ಪ್ರತಿಪಾದನೆಯನ್ನು ಗಮನಿಸಿದರೆ ಮೀಮಾಂಸೆ, ವ್ಯಾಕರಣ, ನ್ಯಾಯ-ಮುಂತಾದಶಾಸ್ತ್ರಗಳಲ್ಲಿ ದೀಕ್ಷಿತನಿಗಿದ್ದ ಪ್ರಬುದ್ಧ ಪಾಂಡಿತ್ಯ ಎದ್ದುಕಾಣುತ್ತದೆ. ಹೀಗೆ ದೀಕ್ಷಿತನ ಗ್ರಂಥರಚನೆ ಬಹುಮುಖವಾದದ್ದು.

ಗ್ರಂಥ ವಿಮರ್ಶೆ[ಬದಲಾಯಿಸಿ]

ದೀಕ್ಷಿತನ ಒಂದೆರಡು ಕೃತಿಗಳು ಕಟುವಾದ ಟೀಕೆಗೆ ಗುರಿಯಾಗಿರುವುದೂ ಉಂಟು. ಸುಪ್ರಸಿದ್ಧ ಆಲಂಕಾರಿಕನಾದ ಜಗನ್ನಾಥ (ಸು. 1620-1665) ಅವನನ್ನು ದ್ರವಿಡಪುಂಗವ ಮುಂತಾದ ಲಘುವಾದ ಮಾತುಗಳಿಂದ ನಿರ್ದೇಶಿಸಿ, ಅವನ ಅಲಂಕಾರ ಗ್ರಂಥಗಳಲ್ಲೊಂದನ್ನು ಟೀಕಿಸಲು ಚಿತ್ರಮೀಮಾಂಸಾಖಂಡನ ಎಂಬ ಗ್ರಂಥವನ್ನೇ ಬರೆದಿದ್ದಾನೆ. ಆದರೆ ಜಗನ್ನಾಥನ ತಂದೆಗೆ ಮೀಮಾಂಸಾ ಶಾಸ್ತ್ರದಲ್ಲಿ ಗುರುವಾಗಿದ್ದ ಖಂಡದೇವ ದೀಕ್ಷಿತನನ್ನು ಮೀಮಾಂಸಕಮೂರ್ಧನ್ಯ ಎಂದು ಪ್ರಶಂಸಿಸಿ ಅವನ ಪಾಂಡಿತ್ಯದ ಹಿರಿಮೆಯನ್ನು ಎತ್ತಿಹಿಡಿದಿರುವುದರಿಂದ ಕರ್ತೃವಿನ ಮೇಲಣ ಟೀಕೆಗಳು ಮಹತ್ವಕ್ಕೆ ಪೂರಕಗಳೇ ಹೊರತು ಬಾಧಕಗಳಲ್ಲವೆಂದು ಹೇಳಬಹುದು.

ವ್ಯಕ್ತಿತ್ವ[ಬದಲಾಯಿಸಿ]

ದೀಕ್ಷಿತನ ವ್ಯಕ್ತಿತ್ವದಲ್ಲಿ ಕಾಣಬರುವ ಹೃದಯವೈಶಾಲ್ಯ, ಔದಾರ್ಯ, ಪಾಂಡಿತ್ಯ, ಪ್ರತಿಭೆ, ಜ್ಞಾನಭಕ್ತಿಗಳ ಸಮನ್ವಯ ಅನನುಕರಣೀಯವಾದುವು. ಅವನಲ್ಲಿ ತತ್ತ್ವ ಜ್ಞಾನಿಯ ಬುದ್ಧಿ ಸೂಕ್ಷ್ಮತೆಯೂ ಭಕ್ತಾಗ್ರಣಿಯ ಭಾವ ಸಂಪತ್ತೂ ಸಮ್ಮಿಳಿತವಾಗಿವೆ. ಅವನ ತತ್ತ್ವದೃಷ್ಟಿ ನಿಷ್ಕೃಷ್ಟವಾದುದು. ಉಪನಿಷತ್ತುಗಳ, ಬ್ರಹ್ಮಸೂತ್ರಗಳ ಮತ್ತು ಶಂಕರಾದಿ ಆಚಾರ್ಯರತ್ನರ ಅದ್ವೈತನಿಷ್ಠೆಯನ್ನು ಪ್ರಸ್ತಾಪಿಸುತ್ತ, ತಾನೇ ಅದ್ವೈತಾಚಾರ್ಯನೆಂಬ ಕೀರ್ತಿಗೆ ಭಾಗಿಯಾಗಿರುವ ಅಪ್ಪಯ್ಯ ದೀಕ್ಷಿತ 'ತರುಣೇಂದುಶೇಖರನ ಅನುಗ್ರಹದಿಂದಲೇ ಮನುಷ್ಯರಿಗೆ ಅದ್ವೈತಸಂಸ್ಕಾರವುಂಟಾಗಬಲ್ಲದು, ಬೇರೆ ಮಾರ್ಗದಿಂದಲ್ಲ ಎಂದು ಮನೋಜ್ಞವಾಗಿ ಹೇಳಿದ್ದಾನೆ.

ತಥಾಪ್ಯನುಗ್ರಹಾದೇವ ತರುಣೇಂದುಶಿಖಾಮಣೀಃ

— ಅದ್ವೈತವಾಸನಾ ಪುಂಸಾಮಾವಿರ್ಭವತಿನಾನ್ಯಥಾ

.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: