ಅಂಬಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿಕ್ಕಮಗಳೂರು ಜಿಲ್ಲೆಯ ಅದೇ ತಾಲ್ಲೂಕಿನ ಒಂದು ಗ್ರಾಮ ಮತ್ತು ಹೋಬಳಿ ಕೇಂದ್ರ. ಚಿಕ್ಕಮಗಳೂರು - ಬೆಳವಾಡಿ ಮಾರ್ಗದಲ್ಲಿ ಚಿಕ್ಕಮಗಳೂರಿನಿಂದ 8ಕಿಮೀ ದೂರದಲ್ಲಿದೆ. ಪುರಾತನ ಕಾಲದಲ್ಲಿ ಯಮಳಾಪುರಿ ಎಂಬ ಅಬಿsಧಾನವನ್ನು ಹೊಂದಿದ್ದು ಸೋಮರಾಜನೆಂಬಾತ ಈ ಗ್ರಾಮವನ್ನು ನಿರ್ಮಿಸಿದನೆಂದು ಪ್ರತೀತಿ. 959ರ ಶಾಸನದಲ್ಲಿ ಅಮ್ಮಲೆ ಎಂಬ ಉಲ್ಲೇಖವಿದೆ. ಕಾಲಕ್ರಮೇಣ ಅಮ್ಮಲೆಯೇ ಅಂಬಳೆ ಎಂದಾಗಿದೆ. 12 ಮತ್ತು 13ನೆಯ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಪ್ರಸಿದ್ಧ ಅಗ್ರಹಾರವಾಗಿ ಈ ಊರು ಧಾರ್ಮಿಕಮಹತ್ವ ಪಡೆದಿತ್ತು. ಇಲ್ಲಿರುವ ಚನ್ನಿಗರಾಯ, ವೀರಭದ್ರ, ಲೋಕೇಶ್ವರ ಹಾಗೂ ಗೋಪಾಲಕೃಷ್ಣ ದೇವಾಲಯಗಳು ಪ್ರಸಿದ್ಧವಾಗಿವೆ. ವಾಸ್ತುಶಿಲ್ಪದ ದೃಷ್ಟಿಯಿಂದ ವಿಶೇಷ ಮಹತ್ತ್ವವನ್ನು ಈ ದೇಗುಲಗಳು ಹೊಂದಿಲ್ಲ ವಾದರೂ ಐತಿಹಾಸಿಕ ಕುರುಹುಗಳಾಗಿವೆ. ಚನ್ನಿಗರಾಯ ದೇವಾಲಯವನ್ನು ಹೊಯ್ಸಳ ದೊರೆ ಎರಡನೆಯ ಬಲ್ಲಾಳ (1178) ನಿರ್ಮಿಸಿದ್ದು ಇದನ್ನು ವೀರಬಲ್ಲಾಳ ಕೇಶವ ದೇವರೆಂದು ಕರೆಯಲಾಗಿದೆ. ಗುಡಿಯು ಚೌಕಾಕಾರದ ಗರ್ಭಗೃಹ, ನವರಂಗ ಹಾಗೂ ಸುಕನಾಸಿಯನ್ನು ಒಳಗೊಂಡಿದೆ. ಮಂಟಪದಂತಿರುವ ನಾಲ್ಕುಕಂಬಗಳು ಚಕ್ರಾಕಾರದ ಕೊಳವೆಯ ಹಿಡಿಕೆಗಳಿಂದ ಕೂಡಿವೆ. ಗರ್ಭಗೃಹದಲ್ಲಿರುವ ಗರುಡವಾಹನ ಚನ್ನಿಗರಾಯಮೂರ್ತಿ ಪೀಠದಿಂದ 1.5 ಮೀ ಎತ್ತರವಾಗಿದೆ. ಶಂಖ, ಚಕ್ರ, ಗದಾಧಾರಿಯಾದ ಚನ್ನಿಗರಾಯನ ಇಕ್ಕೆಲಗಳಲ್ಲಿ ಶ್ರೀದೇವಿ, ಭೂದೇವಿಯರಿದ್ದಾರೆ. ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಸುಂದರ ಚಿತ್ರಣವಿದೆ. ಮೂರ್ತಿಯ ನಾಲ್ಕನೆಯ ಹಸ್ತ ಬಿsನ್ನವಾಗಿರುವುದರಿಂದ ಪೂಜೆ ನಡೆಯುತ್ತಿಲ್ಲ. ಲೋಕೇಶ್ವರ ದೇವಾಲಯವೂ ಹೊಯ್ಸಳ ಶಿಲ್ಪ ಮಾದರಿಯದು. ಗುಡಿಯ ನವರಂಗದಲ್ಲಿ ಗಣಪತಿ, ನಂದಿವಾಹನಾರೂಢÀ ಶಿವಪಾರ್ವತಿ, ಷಣ್ಮುಖ, ಸೂರ್ಯನ ವಿಗ್ರಹಗಳನ್ನು ಕೆತ್ತಲಾಗಿದೆ. ಗೋಪಾಲಕೃಷ್ಣ ದೇವಾಲಯ ಸುಂದರವಾಗಿ ನಿರ್ಮಿತವಾಗಿದೆ. ವೀರಭದ್ರ ದೇವಾಲಯ ಈಗ ಆಧುನಿಕ ರೂಪವನ್ನು ಪಡೆದಿದೆ. ಇಲ್ಲಿ ಶಂಕರಲಿಂಗೇಶ್ವರ, ವೀರಭದ್ರೇಶ್ವರ, ಚಂದ್ರಮೌಳೇಶ್ವರ, ಗಂಗಾವಿಶ್ವೇಶ್ವರ ಓಂಕಾರೇಶ್ವರ ಎಂಬ ಪಂಚಶಿವಾಲಯಗಳಿವೆ. ದೇವೀರಮ್ಮ ದೇವಾಲಯವಿದೆ. ಚೈತ್ರಮಾಸದಲ್ಲಿ ಇಲ್ಲಿನ ಬೀರಲಿಂಗೇಶ್ವರ ದೇವರ ಜಾತ್ರೆ ವಿಜೃಂಭಣೆ ಯಿಂದ ನಡೆಯುತ್ತದೆ. ಕನ್ನಡದ ಉತ್ತಮ ಗದ್ಯ ಲೇಖಕಕರೆಂದೂ ಕನ್ನಡ ಅಶ್ವಿನಿ ದೇವತೆಗಳಲ್ಲಿ ಒಬ್ಬರೆಂದೂ ಪ್ರಸಿದ್ಧರಾದ ಎ.ಆರ್.ಕೃಷ್ಣಶಾಸ್ತ್ರೀ (ನೋಡಿ) ಈ ಊರಿನವರು. ಇವರ ಹೆಸರಿನಲ್ಲಿ ಇಲ್ಲಿ ಒಂದು ಸಾರ್ವಜನಿಕ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.

"https://kn.wikipedia.org/w/index.php?title=ಅಂಬಳೆ&oldid=945260" ಇಂದ ಪಡೆಯಲ್ಪಟ್ಟಿದೆ