ಶ್ರೀಕಂಠದತ್ತ ನರಸಿಂಹರಾಜ ಒಡೆಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಮೈಸೂರು ರಾಜ ಮನೆತನದ ವಂಶಜ
ಪೂರ್ವಾಧಿಕಾರಿ ಜಯಚಾಮರಾಜೇಂದ್ರ ಒಡೆಯರ್
ಗಂಡ/ಹೆಂಡತಿ ಪ್ರಮೋದಾ ದೇವಿ
ಪೂರ್ಣ ಹೆಸರು
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಮನೆತನ ಒಡೆಯರ್
ತಂದೆ ಜಯಚಾಮರಾಜೇಂದ್ರ ಒಡೆಯರ್
ತಾಯಿ ತ್ರಿಪುರ ಸುಂದರಿ ಅಮ್ಮಣ್ಣಿ
ಜನನ (೧೯೫೩-೦೨-೨೦)೨೦ ಫೆಬ್ರವರಿ ೧೯೫೩
ಮೈಸೂರು, ಭಾರತ.
ಮರಣ 10 December 2013(2013-12-10) (aged 60)
ಧರ್ಮ ಹಿಂದು

ಮಹಾರಾಜ ಶ್ರೀಕಂಠದತ್ತ ಒಡೆಯರ್ ಎಂದೂ ಕರೆಯಲ್ಪಡುತ್ತಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ (೨೦ ಫೆಬ್ರುವರಿ ೧೯೫೩ - ೧೦ ಡಿಸೆಂಬರ್ ೨೦೧೩) ಅವರು ಮೈಸೂರು ಸಂಸ್ಥಾನದ ರಾಜಕುಮಾರ. ಕ್ರಿ.ಶ. ೧೩೯೯ರಿಂದ ೧೯೫೦ರವರೆಗೆ ಮೈಸೂರು ರಾಜ್ಯವನ್ನಾಳಿದ ಒಡೆಯರ್ ರಾಜಮನೆತನದ ಮುಖ್ಯಸ್ಥರಾಗಿದ್ದರು. ಮಹಾ ದೈವಭಕ್ತರು, ಜನಾನುರಾಗಿಯಾಗಿದ್ದರು. ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಅಪಾರ ಕಳಕಳಿ, ಕಾಳಜಿ ಹೊಂದಿದ್ದರು.

ಜನನ[ಬದಲಾಯಿಸಿ]

ಮೈಸೂರು ಸಂಸ್ಥಾನವನ್ನು ಆಳಿದ ಕೊನೆಯ ಅರಸರಾದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಅವರ ದ್ವಿತೀಯ ಪತ್ನಿ ರಾಣಿ ತ್ರಿಪುರ ಸುಂದರಿ ಅಮ್ಮಣ್ಣಿ ದೇವಿ ಅವರ ಏಕೈಕ ಪುತ್ರನಾಗಿ ೧೯೫೩ರ ಫೆಬ್ರುವರಿ ೨೦ರಂದು ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಜನಿಸಿದರು.

ಜೀವನ[ಬದಲಾಯಿಸಿ]

ರಾಜರಾದರೂ ಸಾಮಾನ್ಯನಾಗಿ ಇರುವುದು ಹೇಗೆ ? ಜನರ ವಿಶ್ವಾಸ ಗಳಿಸುವುದು ಹೇಗೆ ? ಎಂದು ತೋರಿಸಿಕೊಟ್ಟ ಮಹಾರಾಜರು ಇವರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗವನ್ನೂ, ಮೈಸೂರು ವಿವಿಯಿಂದ ರಾಜ್ಯಶಾಸ್ತ್ರ ಹಾಗೂ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಶಾರದವಿಲಾಸ ಕಾನೂನು ಕಾಲೇಜಿನಲ್ಲಿ ಲಾ ಪದವಿ ಪಡೆದು, ಪಾಶ್ಚಾತ್ಯ ಹಾಗೂ ಶಾಸ್ತ್ರೀಯ ಸಂಗೀತದ ಮೇಲೆ ಆಸ್ಥೆ , ಪಾಂಡಿತ್ಯ, ಬೆಳೆಸಿಕೊಂಡಿದ್ದ ಒಡೆಯರ್, ಲಂಡನ್‍ನ ಟ್ರಿನಿಟಿ ಕಾಲೇಜಿನಿಂದ ಪಿಯಾನೋ ಸೀನಿಯರ್ ಮಟ್ಟದ ಸಂಗೀತ ಪದವಿ ಪಡೆದಿದ್ದರು. ೧೯೮೪ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮೈಸೂರು ಕ್ಷೇತ್ರವನ್ನು ಲೋಕಸಭೆಯಲ್ಲಿ ವೊದಲ ಬಾರಿ ಪ್ರತಿನಿಧಿಸಿದ್ದ ೩೧ ವರ್ಷದ ಶ್ರೀಕಂಠದತ್ತ, ಮತ್ತೆ ೧೯೮೯, ೧೯೯೬ ಮತ್ತು ೧೯೯೯ರಲ್ಲಿ ಮೈಸೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ೧೯೯೧ರಲ್ಲಿ ಬಿ.ಜೆ.ಪಿ ಪಕ್ಷ ಸೇರಿ ಲೋಕಸಭೆಗೆ ಸ್ಪರ್ಧಿಸಿ, ಚಂದ್ರಪ್ರಭ ಅರಸ್ ಎದುರು ಸೋಲು ಕಂಡರು. ೧೯೯೫ರ ಹೊತ್ತಿಗೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು.[೧]

೧೯೯೬ರಲ್ಲಿ ಜೆ.ಹೆಚ್. ಪಟೇಲರ ಸರ್ಕಾರ, ಒಡೆಯರ ಖಾಸಗಿ ಸ್ವತ್ತಾದ ಬೆಂಗಳೂರು ಮತ್ತು ಮೈಸೂರು ಅರಮನೆಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ, ಆ ಆದೇಶವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ ಒಡೆಯರ್, ಅರಮನೆಗಳನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಬದುಕಿರುವ ತನಕ ಹೋರಾಡಿದರು. ಒಡೆಯರ್ ಬದುಕಿರುವವರೆಗೆ, ಅರಮನೆಯಲ್ಲಿ ವಾಸವಿರಲು, ಅವರ ಮರಣಾನಂತರ ಸರ್ಕಾರ ಅರಮನೆಗಳನ್ನು ಸ್ವಾಧೀನ ಪಡೆಯುವುದು, ಆ ಆದೇಶದ ಮುಖ್ಯ ಭಾಗವಾಗಿತ್ತು. ೨೦೦೪ರ ಲೋಕಸಭೆ ಚುನಾವಣೆಯಲ್ಲಿ ೩ನೆ ಸ್ಥಾನ ಪಡೆದ ನಂತರ ಶ್ರೀಕಂಠದತ್ತರು, ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು. ೧೯೭೧-೭೨ರಲ್ಲಿ ದಾಂಡಿಗ ಮತ್ತು ವೇಗದ ಬೌಲರ್ ಆಗಿ ಮೈಸೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಒಡೆಯರ್, ರಾಜಮನೆತನದ ಹಮ್ಮು-ಬಿಮ್ಮು ತೋರದೆ, ತಮ್ಮ ಸರಳತೆಯಿಂದ ಸಹ ಆಟಗಾರರ ಮನ ಗೆದ್ದಿದ್ದರು. ಮಹಾರಾಜರು ಕ್ರಿಕೆಟ್ ಆಡುವುದನ್ನು ನೋಡಲೆಂದೇ ಜನ ಮುಗಿಬಿದ್ದು ಕ್ರೀಡಾಂಗಣಕ್ಕೆ ಬರುತ್ತಿದ್ದರು.[೨] ೨೦೦೭ರಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಚುನಾವಣೆ ಗೆದ್ದ ಒಡೆಯರ್, ೨೦೧೦ರಲ್ಲಿ ಅನಿಲ್ ಕುಂಬ್ಳೆ ವಿರುದ್ಧ ಸೋತರು. ೨೦೧೩ರಲ್ಲಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು. ಬ್ರಿಜೇಶ್ ಪಟೇಲ್ ಎರಡೂ ಬಾರಿ ಅವರೊಂದಿಗೆ ಕಾರ್ಯದರ್ಶಿ ಸ್ಥಾನಕ್ಕೆ ನಿಂತಿದ್ದರು. ಗಾಲ್ಫ಼್, ಕುದುರೆ ರೇಸು, ಕ್ರಿಕೆಟ್‍ನಲ್ಲಿ ಆಸಕ್ತರಾಗಿದ್ದ ಶ್ರೀಕಂಠದತ್ತ, ಬೆಂಗಳೂರು, ಮೈಸೂರು ಮತ್ತು ದಿಲ್ಲಿ ಟರ್ಫ಼್ ಕ್ಲಬ್‍ನ ಸದಸ್ಯ ಆಗಿದ್ದರು. [೩] ಶ್ರೀಕಂಠದತ್ತರ ಧರ್ಮಪತ್ನಿ ಪ್ರಮೋದಾ ದೇವಿ, ಮೈಸೂರು ರೇಷ್ಮೆ ಸೀರೆಗಳಿಗೆ ಮೆರುಗು ಹೆಚ್ಚಿಸುವ ಡಿಸೈನ್ ಪರಿಣಿತರಾಗಿದ್ದರು.ಶ್ರೀಕಂಠದತ್ತರು ಕುದುರೆ ರೇಸ್ ಹಾಗೂ ಕ್ರಿಕೆಟ್ ಕ್ರೀಡೆಗಳ ಮೇಲೆ ಬಹಳ ಅಭಿಮಾನವನ್ನು ಇಟ್ಟುಕೊಂಡಿದ್ದರು. "ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ " ಅಧ್ಯಕ್ಷರಾಗಿ ಕಾರ್ಯ ಸಲ್ಲಿಸಿದ್ದರು.[೪] ಶ್ರೀಕಂಠದತ್ತರು ತಮ್ಮ ೨೩ನೇ ವಯಸ್ಸಿನಲ್ಲಿ ಬೆಟ್ಟದ ಕೋಟೆ ಅರಸು ವಂಶಕ್ಕೆ ಸೇರಿದ್ದ ಪ್ರಮೋದಾ ದೇವಿ ಅವರನ್ನು ಮದುವೆಯಾದರು. ಇವರಿಗೆ ಮಕ್ಕಳಾಗಲಿಲ್ಲ. ಶ್ರೀಕಂಠದತ್ತರು ಡಿಸೆಂಬರ್ ೧೦, ೨೦೧೩ರಂದು ತೀವ್ರ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಮಾರನೆ ದಿನ ಅಂದರೆ ೧೧-೧೨-೨೦೧೩ರಲ್ಲಿ ತಮ್ಮ ಉತ್ತರಾಧಿಕಾರಿ, ಸಹೋದರಿ ಗಾಯತ್ರಿ ದೇವಿಯ ಪುತ್ರರಾದ ಲಕ್ಶ್ಮೀಕಾಂತ ರಾಜೇ ಅರಸ್ ಇವರಿಂದ, ಒಡೆಯರ್ ಮನೆತನದ ಕರ್ಮಭೂಮಿಯಾದ ಮಧುವನದಲ್ಲಿ ಇವರ ಅಂತ್ಯಕ್ರಿಯೆ ನಡೆಯಿತು.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2013-12-13. Retrieved 2013-12-11.
  2. http://www.thehindu.com/news/national/karnataka/srikantadatta-wadiyar-a-man-of-many-parts/article5444794.ece?homepage=true
  3. http://www.firstpost.com/india/sn-wodeyar-though-maharaja-only-in-title-he-lived-like-one-1280649.html
  4. "ಆರ್ಕೈವ್ ನಕಲು". Archived from the original on 2013-12-13. Retrieved 2013-12-10.