ಸರಸ್ವತಿ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಸ್ವತಿ ನದಿ ಋಗ್ವೇದ ಮತ್ತು ನಂತರದ ವೈದಿಕ ಹಾಗೂ ವೈದಿಕೋತ್ತರ ಪಠ್ಯಗಳಲ್ಲಿ ಉಲ್ಲೇಖಿಸಲಾದ ನದಿಗಳಲ್ಲಿ ಒಂದು. ಅದು ಹಿಂದೂ ಧರ್ಮದಲ್ಲಿ ಮುಖ್ಯ ಪಾತ್ರವಹಿಸಿತ್ತು, ಏಕೆಂದರೆ ಕ್ರಿ.ಪೂ. ೨ನೇ ಸಹಸ್ರಮಾನದ ಅವಧಿಯಲ್ಲಿ ವೈದಿಕ ಜನರು ಅದರ ತೀರಗಳಲ್ಲಿ ನೆಲೆಸಿದ್ದಾಗ ವೈದಿಕ ಸಂಸ್ಕೃತ ಮತ್ತು ಋಗ್ವೇದದ ಮೊದಲ ಭಾಗ ಹುಟ್ಟಿಕೊಂಡವು ಎಂದು ಪರಿಗಣಿಸಲಾಗಿದೆ.[೧] ಸರಸ್ವತಿ ದೇವತೆ ಮೂಲತಃ ಈ ನದಿಯ ವ್ಯಕ್ತೀಕರಣಳಾಗಿದ್ದಳು, ಆದರೆ ನಂತರ ಸ್ವತಂತ್ರ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸಿಕೊಂಡಳು. ಋಗ್ವೇದದಲ್ಲಿನ ನದಿಸ್ತುತಿ ಸೂಕ್ತ (೧೦.೭೫) ಪೂರ್ವದ ಯಮುನಾ ಮತ್ತು ಪಶ್ಚಿಮದ ಸತ್ಲಜ್ ನಡುವಿನ ಸರಸ್ವತಿಯನ್ನು ಉಲ್ಲೇಖಿಸುತ್ತದೆ. ಪಂಚವಿಂಶ ಬ್ರಾಹ್ಮಣ ಮತ್ತು ಜೈಮಿನೀಯ ಬ್ರಾಹ್ಮಣದಂತಹ ನಂತರದ ವೈದಿಕ ಪಠ್ಯಗಳು ಜೊತೆಗೆ ಮಹಾಭಾರತವು, ಸರಸ್ವತಿ ನದಿಯು ಒಂದು ಮರುಭೂಮಿಯಲ್ಲಿ ಒಣಗಿ ಹೋಯಿತು ಎಂದು ಉಲ್ಲೇಖಿಸುತ್ತವೆ. ಹಿಂದೂಗಳು ಸರಸ್ವತಿಯು ಅಮೂರ್ತ ರೂಪದಲ್ಲಿ ಅಸ್ತಿತ್ವದಲ್ಲಿದೆ ಎಂದು ಪರಿಗಣಿಸುತ್ತಾರೆ, ಮತ್ತು ಈ ರೂಪದಲ್ಲಿ ಪವಿತ್ರ ಗಂಗಾ ಮತ್ತು ಯಮುನಾ ನದಿಗಳೊಂದಿಗೆ ತ್ರಿವೇಣಿ ಸಂಗಮದಲ್ಲಿ ಕೂಡಲನ್ನು ರೂಪಿಸಿತು ಎಂದು ನಂಬುತ್ತಾರೆ.

೧೯ನೇ ಶತಮಾನದ ಉತ್ತರಾರ್ಧದಿಂದ, ವೈದಿಕ ಸರಸ್ವತಿ ನದಿಯು ವಾಯವ್ಯ ಭಾರತ ಮತ್ತು ಪೂರ್ವ ಪಾಕಿಸ್ತಾನದ ಮೂಲಕ ಹರಿಯುವ ಇಂದಿನ ಘಗ್ಗರ್-ಹಾಕ್ರಾ ನದಿ ವ್ಯವಸ್ಥೆ ಎಂದು ವಿದ್ವಾಂಸರು ಊಹಿಸಿದ್ದಾರೆ. ಉಪಗ್ರಹ ಚಿತ್ರಗಳು ಹೆಚ್ಚು ಮಹತ್ವದ ಸರಸ್ವತಿ ನದಿಯು ಒಮ್ಮೆ ಇಂದಿನ ಘಗ್ಗರ್ ನದಿಯ ಮಾರ್ಗವನ್ನು ಅನುಸರಿಸಿತ್ತು ಎಂದು ಸೂಚಿಸಿವೆ. ಭಾರತೀಯ ದೂರ ಸಂವೇದಿ ಉಪಗ್ರಹ ದತ್ತ, ಅಂಕೀಯ ಉನ್ನತಿ ಮಾದರಿಗಳು, ಐತಿಹಾಸಿಕ ನಕ್ಷೆಗಳು, ಜಲ ಭೂವೈಜ್ಞಾನಿಕ ಮತ್ತು ಕೊರೆತ ದತ್ತವನ್ನು ಬಳಸಿ, ಕಾಲಿಬಂಗಾ, ಬನವಾಲಿ ಮತ್ತು ರಾಖಿಗಢಿ, ಧೋಲಾವೀರಾ ಮತ್ತು ಲೋಥಲ್‍ನಲ್ಲಿನ ಪ್ರಮುಖ ಸಿಂಧೂ ತಟದ ನಾಗರೀಕತೆಯ ತಾಣಗಳು ಕೂಡ ಈ ಮಾರ್ಗದಲ್ಲಿ ನೆಲೆಸಿದ್ದವು ಎಂದು ವಿದ್ವಾಂಸರು ಗಮನಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]