ಜೈಮಿನಿ ಭಾರತದಲ್ಲಿ ನವರಸಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾವ್ಯ ನೃತ್ಯ ನಾಟಕಗಳಲ್ಲಿ ರಸ[ಬದಲಾಯಿಸಿ]

  • ನಾವು ಸುಖದುಃಖಗಳ ಅನುಭವವನ್ನು ಪಡೆದಾಗ ಅದರಿಂದ ನಮ್ಮ ಮನಸ್ಸಿನಲ್ಲಿ ಅಥವಾ ಚಿತ್ತದಲ್ಲ ಭಾವನೆಗಳ ಅಲೆಗಳೇಳುವುವು . ಇದಕ್ಕೆ ‘ಚಿತ್ತವೃತ್ತಿ’ ಅಥವಾ ‘ಭಾವ’ ವೆಂದು ಹೆಸರು. ಸರೋವರದಲ್ಲಿ ದೊಡ್ಡ ಮತ್ತು ಸಣ್ಣ ಅಲೆಗಳಿರುವಂತೆ ನಮ್ಮ ಮನಸ್ಸಿನಲ್ಲೂ ಸಣ್ಣ ಅಲೆಯ ಅಥವಾ ದೊಡ್ಡ ಅಲೆಯ ಭಾವಗಳು ಉಂಟಾಗುವುವು. ಈ ಅನುಭವಗಳಲ್ಲಿ ನಾನಾ ಬಗೆಯ ಬಾವಗಳಿವೆ. ಅವನ್ನು ಕಾವ್ಯ ಪರಿಣತರು ಮುಖ್ಯವಾಗಿ ಒಂಭತ್ತು ಭಾವಗಳೆಂದು ವಿಂಗಡಿಸಿದ್ದಾರೆ. ಅವನ್ನೇ ಒಂಭತ್ತು ರಸಗಳೆನ್ನುವರು. ಸರೋವರದ ದೊಡ್ಢ ಅಲೆಗಳ ನಡುವೆಯೇ ಸಣ್ಣ ಸಣ್ಣ ಅಲೆಗಳು ಚಲಿಸುತ್ತವೆ ಹಾಗೆ ಮನಸ್ಸಿನಲ್ಲಿ ಶೌರ್ಯದ ಕಥೆ ಕೇಳುವಾಗ ಮಧ್ಯೆ ಕ್ಣಣಕಾಲ ಕರುಣೆಯನ್ನು ಉಕ್ಕಿಸುವ ಘಟನೆ ಬರಬಹದು. ಈ ಬಂದು ಹೋಗುವ ಭಾವನೆಯ ಅಲೆಗಳಿಗೆ ‘ಸಂಚಾರಿ’ ಅಥವಾ 'ವ್ಯಭಿಚಾರಿ' ಭಾವವೆಂದೂ, ಇವುಗಳಿಗೆ ಆಶ್ರಯವಾಗಿರುವ ಪ್ರಧಾನ ಭಾವಾನುಭವಕ್ಕೆ ‘ಸ್ಥಾಯೀಭಾವ’ವೆಂದೂ ಹೇಳುವರು. ಆದರೆ ಕೆಲವರು ಸ್ಥಾಯೀಭಾವ ಸಮುದ್ರದಂತೆ ಮತ್ತು ಸಂಚಾರಿ ಭಾವ ಅದರಲ್ಲಿನ ಅಲೆಗಳಂತೆ ಎಂದಿದ್ದಾರೆ.
  • ಈ ಸ್ಥಾಯಿಭಾವಗಳು ಎಂಟು ಅಥವಾ ಶಾಂತಿರಸವನ್ನು ಸೇರಿ ಒಂಭತ್ತು. ಅವು, 1) ರತಿ ಪ್ರೀತಿ ಅಥವಾ ಶೃಂಗಾರ ; 2) ಹಾಸ, ವಿನೋದ ಅಥವಾ ಹಾಸ್ಯ; 3) ಶೋಕ ಅಥವಾ ಕರುಣ ; 4) ಕ್ರೋಧ ಥವಾ ರೌದ್ರ ; 5) ಉತ್ಸಾಹ ಅಥವಾ ವೀರ ; 6) ಭಯಾನಕ , ಭಯ,; 7) ಭೀಭತ್ಸ ,ಅಸಹ್ಯತೆ, ಜಿಗುಪ್ಸೆ 8) ವಿಸ್ಮಯ, ಅದ್ಭುತ; 9) ಶಮ, ಶಾಂತ.
  • ಈ ಒಂಭತ್ತು ರಸಗಳನ್ನು ರೂಢಿಯಲ್ಲಿ 1) ಶೃಂಗಾರ ; 2) ಹಾಸ್ಯ; 3) ಕರುಣ ; 4) ರೌದ್ರ ; 5) ವೀರ ; 6) ಭಯಾನಕ , 7) ಭೀಭತ್ಸ 8) ಅದ್ಭುತ; 9) ಶಾಂತ. ಎಂದು ಕರೆಯುವರು.

ಕಾವ್ಯದ ರಸಾನುಭವ[ಬದಲಾಯಿಸಿ]

  • ನಾವು ಸಾಕ್ಷಾತ್ ನಿತ್ಯ ಜೀವನದಲ್ಲಿ ಅನುಭವಿಸಿದ ಅಥವಾ ನೋಡಿ ಅನುಭವಿಸಿದ ಘಟನೆಗಳ, ಅದೇ ಬಗೆಯ ಘಟನೆಗಳನ್ನು ಕವಿಗಳು ಕಾವ್ಯ (ನಾಟ್ಯ) ಗಳಲ್ಲಿ ಚಿತ್ರಿಸಿರುತ್ತಾರೆ. ಇವುಗಳಲ್ಲಿ ಸ್ಥಾಯಿ ಭಾವಗಳ ಕಾರಣ, ಸಹಕಾರಿ, ಕಾರ್ಯ, ಇವು ಮೂರೂ ಕ್ರಮವಾಗಿ ವಿಭಾವ, ಸಂಚಾರಿ ಭಾವ, ಅನಭಾವಗಳೆಂದು ಕರೆಯಲ್ಪಡುತ್ತವೆ. ಲೋಕದಲ್ಲಿ ಮತ್ತು ಕಾವ್ಯಾದಿಗಳಲ್ಲಿ ವಿಭವಾದಿಗಳು ಒಂದೇ ಬಗೆಯಾಗಿರುತ್ತವೆ. ಆದರೆ ಲೋಕದಲ್ಲಿ ನಿಜವಾಗಿ ಅನುಭವಿಸಿ ಉಂಟಾಗತಕ್ಕದ್ದು ‘ಸ್ಥಾಯಿಭಾವ’.
  • ಅದೇ ವಿಷಯವನ್ನು ಕಾವ್ಯದಲ್ಲಿ ವರ್ಣಿಸಿದಾಗ ಉಂಟಾಗುವ ಅನುಭವ “ರಸ”. ಅನುಭವ ವಾಸ್ತವವಾದೂ, ಇದು ವಾಸ್ತವವಲ್ಲ - ಆದರೆ ಅದರ ಯಥಾ ಪ್ರತಿಬಿಂಬ. ನಾವು ಹಿಂದಿನ ಅಪಾಯ ಸನ್ನಿವೇಶವನ್ನು ನೆನೆದು ಅಪಾಯದಿಂದ ಪಾರಾದುದಕ್ಕೆ ಸಂತಸಪಟ್ಟಂತೆ (ಹಿಂದಿನ ಅಪಾಯದ ನೋವು ಈಗ ಆಗುವಿದಿಲ್ಲ), ಕಾವ್ಯದಲಿರುವ ಕರುಣರಸದಿಂದ ಕಣ್ಣೀರು ಬಂದರೂ, ಅದರಲ್ಲಿ ರಸಾನುಭವದ ಅದರ ಉದ್ದೀಪನದ ಆನಂದವಿರುತ್ತದೆ. ಹಾಗಾಗಿ ಕಾವ್ಯದಲ್ಲಿ ಎಲ್ಲಾ ರಸವೂ ಆನಂದದಾಕವೆಂದು ನಿರ್ಣಯಿಸಿದ್ದಾರೆ. ರಸೋತ್ಪತ್ತಿಗೆ ಕವಿ ಓದುಗನಲ್ಲಿ ಅಥವಾ ಕೇಳುಗನಲ್ಲಿ ಆ ಆನಂದ, ಆ ನೋವು, ಉತ್ಸಾಹ, ಭಯ, ಜಿಗುಪ್ಸೆ, ಮನಶಾಂತಿ ಇವಗಳನ್ನು ಉದ್ದೀಪನಗೊಳಿಸುತ್ತಾನೆ, ಆ ಪ್ರಪಂಚಕ್ಕೆ ಕರೆದೊಯ್ದು ಆ ರಸ ಭಾವಗಳನ್ನು ಕೇಳುಗ ಅಥವಾ ಓದುಗನಲ್ಲಿ ಉಂಟುಮಾಡುವನು. ಆ ಸಾಮರ್ಥ್ಯದ ಮೇಲೆ ಕಾವ್ಯದ ಹಿರಿಮೆ ವ್ಯಕ್ತವಾಗುವುದು.

ಲಕ್ಷ್ಮೀಶನ ಕಾವ್ಯ ವಸ್ತು[ಬದಲಾಯಿಸಿ]

  • ವಾರ್ಧಕ ಷಟ್ಪದಿಯಲ್ಲಿ ಬರೆದ ಜೈಮಿನಿ ಭಾರತ ಕಾವ್ಯ, ಜೈಮಿನಿ ಬರೆದ ಭಾರತದ ಉತ್ತರಭಾರತದ ಕಥೆ, ಅಶ್ವಮೇಧಯಾಗ ಕಥಾವಸ್ತು. ಸಂಸ್ಕೃತ ಜೈಮಿನಿಭಾರತವನ್ನು ಸಾಕಷ್ಟು ಬದಲಾವಣೆ ಮಾಡಿಕೊಂಡು ಅನುವಾದ ಮಾಡಲಾಗಿದೆ. ಇದರ ಕಥಾನಾಯಕ ಶ್ರೀಕೃಷ್ಣ. ಭಾಗವತ ಸಂಪ್ರದಾಯದಂತೆ ಇಲ್ಲಿ ಶ್ರೀ ಕೃಷ್ಣನೇ ಸೂತ್ರಧಾರ.

ರಸಸನ್ನಿವೇಶಗಳು[ಬದಲಾಯಿಸಿ]

  • ಛಂದಸ್ಸು: ವರಕವಿಯಾದ ಈತನು ಕುಮಾರವ್ಯಾಸನ ನಂತರದ ಹೆಚ್ಚು ಜನಪ್ರಿಯ ಕವಿ. ಸಂಸ್ಕೃತ, ಹಳಗನ್ನಡ ಮತ್ತು ಹೊಸಗನ್ನಡ ಇವುಗಳಲ್ಲಿ ಸಂಪೂರ್ಣ ಪಾಂಡಿತ್ಯ ಪಡೆದವನು. ರಸಗರ್ಭಿತವಾದ ಈ ಉದ್ಗ್ರಂಥವನ್ನು ಮೂವತ್ನಾಲ್ಕು ಸಂಧಿಗಳಾಗಿ ವಿಭಾಗಿಸಿ ಜನರ ಮನಮೆಚ್ಚುವಂತೆ ವಾರ್ಧಿಕ ಷಟ್ಪದಿಯಲ್ಲಿ ಬರೆದಿದ್ದಾನೆ. ಆಗ ಕಾಗದ ಮುದ್ರಣವಿರದಿದ್ದರಿಂದ ಇದನ್ನು ತಾಳೆಗರಿಯಲ್ಲಿ ಬರೆದಿದ್ದಾನೆ.
  • ಅವನೇ ತನ್ನ ಕಾವ್ಯದ ಲಕ್ಷಣವನ್ನು ಪೀಠಿಕೆಯಲ್ಲಿ ಹೀಗೆ ವರ್ಣಿಸಿದ್ದಾನೆ:
ಪಾರದೆ ಪರಾರ್ಥಮಂ ವರಯತಿಗೆ ಭಂಗಮಂ|
ತಾರದೆ ನಿಜಾನ್ವಯ ಕ್ರಿಯೆಗಳ್ಗೆ ದೂಷಣಂ|
ಬಾರದೆ,ವಿಶೇಷಗುಣಗಣ ಕಲಾಗೌರವಂ ತೀರದೆ, ದುರುಕ್ತಿಗಳ್ಗೆ||
ಸೇರದೆ, ಸುಮಾರ್ಗದೊಳ್ನೆಡೆವ ಸತ್ಪುರುಷನ ಗ-|
ಭೀರ ದೆಸೆಯಿಂ ಪೊಲ್ವ ಕಾವ್ಯ ಪ್ರಬಂಧಮಂ|
ಶಾರದೆಯ ಕರುಣದಿಂ ಪೇಳ್ವೆನಾಂ, ದೋಷಮಂತೊರೆದೆಲ್ಲಮುಂ ಕೇಳ್ವುದು||
  • (ಪದಗಳಿಗೆ ಎರಡೆರಡು ಅರ್ಥವಿಟ್ಟು ಹೇಳಿದೆ):ಪರರ ಅರ್ಥವನ್ನು ಎಂದರೆ ಹಣವನ್ನು ಅಪಹರಿಸದ, ಪೂಜ್ಯರಿಗೆ (ಯತಿಗಳಿಗೆ) ಅಗೌರವ ತೋರದ, ನಿತ್ಯದ ಕರ್ತವ್ಯಗಳನ್ನು ಬಿಡದ, ಉತ್ತಮ ಗುಣಗಳ ನಡತೆಗೆ ತಪ್ಪದ, ಕೆಟ್ಟ ಮಾತನ್ನಾಡದ, ಸನ್ಮಾರ್ಗಲ್ಲಿ ನೆಡವ ಸತ್ಪುರುಷನಂತೆ, -(ಪುನಃ ಅದೇ ಪದಗಳಿಗೆಬೇರೆ ಅರ್ಥ) ಕೃತಿಚೌರ್ಯ ಮಾಡದೆ(ಪಾರದೆ ಪರರ ಅರ್ಥವನ್ನು), ಕಾವ್ಯದ ಯತಿಗೆ ಭಂಗಬರದಂತೆ (ಯತಿ:ಓದಿನಲ್ಲಿ ಛಂದಸ್ಸಿಗೆ ತಕ್ಕ ನಿಲುಗಡೆ), ವ್ಯಾಕರಣ ದೋಷವಿಲ್ಲದೆ, ವಿಶೇಷ ಕಾವ್ಯಲಕ್ಷಣದಿಂದ, ಅಪಶಬ್ಧ-ಕೀಳು/ತಪ್ಪು ಭಾಷೆ ಇರದಂತೆ (ದುರುಕ್ತಿ), ಗಂಭೀರ ಲಕ್ಷಣದ (ಸತ್ಪುರುಷನಂತಿರುವ) ಕಾವ್ಯವನ್ನು ಶಾರದಾದೇವಿಯ ಕೃಪೆಯಿಂದ ಹೇಳುವೆನು- ದೋಷವಿದ್ದರೆ ಅದನ್ನು ಬಿಟ್ಟು (ತೊರೆದು), ಪೂರ್ಣವಾಗಿ ಆಲಿಸಿರಿ. ಈ ಬಗೆಯ ದ್ವಂದಾರ್ಥವಿರುವ ಅನೇಕ ಪದ್ಯಗಳು ಈ ಕಾವ್ಯದಲ್ಲಿವೆ.
  • ಕಾವ್ಯದ ಗುಣ ಛಂದಸ್ಸು ಲಕ್ಷಣಮಲಂಕಾರ ಭಾವರಸದೊಂದಿಗೆ ಸತ್ಕೃತಿ ಚಮತ್ಕೃತಿ ಕಾವ್ಯದ ಗುಣ - ಹಾಗೆ ತನ್ನ ಕೃತಿ ಇದೆ ಎಂದಿದ್ದಾನೆ ಕವಿ, ಅದು ನಿಜವಾಗಿದೆ.
  • ಯುದ್ಧದವರ್ಣನೆ, ಬೇಟದ ವರ್ಣನೆ,ಕರುಣಭಾವ, ಆಯಾ ರಸೋತ್ಕರ್ಷವನ್ನು ಉಂಟು ಮಾಡುವಂತೆ ವರ್ಣಿತವಾಗಿವೆ. ಕಾವ್ಯವು ನವರಸದಿಂದ ತುಂಬಿದ್ದರೂ ಶೃಂಗಾರ ವೀರ ರಸಗಳಿಗೆ ಪ್ರಾಧಾನ್ಯ ನೀಡಿದ್ದಾನೆ. ರಸಿಕರ ಹೃದಯವನ್ನು ಸೂರೆಗೊಳ್ಳತ್ತಾನೆ.

ಶೃಂಗಾರ ರಸ[ಬದಲಾಯಿಸಿ]

ಉದಾಹರಣೆಗೆ: ಚಂದ್ರಹಾಸನ ಕಥೆಯಲ್ಲಿ, ದುಷ್ಟಬುದ್ಧಿಯ ಅರಮನೆಯ ಕೈತೋಟದಲ್ಲಿ ಅವನ ಪತ್ರಸಂದೇಶದೊಡನೆ ಬಂದು ವಿಶ್ರಾಂತಿಗೆ ಮಲಗಿ ನಿದ್ರೆಯಲ್ಲಿದ್ದಾಗ ದುಷ್ಟಬುದ್ಧಿಯ ಮಗಳು 'ವಿಷಯೆ' ಅವನನ್ನು ನೋಡಿ ಮೋಹಿಸಿ- ಅವನ ಬಳಿಗೆಹೋಗಿ ಸೊಂಟದಲ್ಲಿದ್ದ ಪತ್ರವನ್ನು ತೆಗೆಯುವ ಮೊದಲು ಅವಳ ಭಾವ:*ಆ ಸಂಧರ್ಭ:

ಬೆಚ್ಚನಾದೆದೆಯಿಂದ ಕಾತರಿಸಿ ಮುದುಡುಗೊಂ
ಡೆಚ್ಚರಿಂದೇಳ್ವ ರೋಮಾಂಚನದೊಳಾಸೆ ಮುಂ
ಬೆಚ್ಚಿ ಬೆಮರುವ ಬಾಲೆ ಬೇಸರದೆ ನಿಂದು ನಿಟ್ಟಿಸುತಿರ್ದಳೇವೇಳ್ವೆನು||೨೨||೩೦||
ಸುತ್ತ ನೋಡುವಳೊಮ್ಮೆ ನೂಪುರವಲುಗದಂತೆ|
ಹತ್ತೆ ಸಾರುವಳೊಮ್ಮೆ ಸೋಂಕಲೆಂತಹುದೆಂದು|
ಮುರಿದಪಳೊಮ್ಮೆ ಹೆಜ್ಜೆಹೆಜ್ಜೆಯ ಮೇಲೆ ಸಲ್ವಳಮ್ಮದೆ ನಿಲ್ವಳು||೨೩||ಸಂ.೩೦||

ವೀರ ರಸ[ಬದಲಾಯಿಸಿ]

  • ಸುಧನ್ವನ ವೀರಾಲಾಪ:
ಸಾರಥಿಯ ಬಲ್ಪಿಂದ ಕೌರವ ಬಲದ ನಿಖಿಳ
ವೀರರಂ ಗೆಲ್ದೆಯಲ್ಲದೆ ನಿನ್ನನೀ ಧರೆಯೊ
ಳಾರರಿಯರಕಟ ! ನೀಮ ಕೃಷ್ಣನಂ ಕರೆಸಿಕೊಂಡಳವಿಗುಡು ಬಳಿಕೆನ್ನೊಳು||
ಇನ್ನು ಹಯವಂ ಬಿಡುವನಲ್ಲ, ನಿನಗೆಮ್ಮ ತಾ
ತಂ ನಳಿನನಾಭನ ಸಹಾಯಮಿಲ್ಲದೆ ಬರಿದೆ
ತನ್ನನಳಕಿಸಲರಿಯೆ ಕಕ್ಕುಲತೆ ಬೇಡ, ನಡೆ ಹಸ್ತಿನಾಪುರಕೆ ಮರಳಿ||
ಸಾರೆನ್ನಗಂ ಬರಿದೆ ಬಳಲಬೇಡೆಮ್ಮಲ್ಲಿ
ಹಾರೈಸದಿರ್ಜಯವ'ನೆನುತೆಚ್ಚೊಡರ್ಜುನನ
ತೇರಿರದೆ ತಿರ್ರನೆ ತಿಗುರಿಯಂತೆತಿರುಗಿತದನೇನೆಂಬನದ್ಭುತವನು||

ಭೀಭತ್ಸ[ಬದಲಾಯಿಸಿ]

  • ರಣಭೂಮಿಯ ದೃಶ್ಯ:
ಕಡಿಕಡಿದು ಬಿದ್ದ ಕೈಕಾಲ್ಗಳಿಂ ತೋಳ್ಗಳಿಂ
ಪೊಡೆಗೆಡದ ಹೇರೊಡಲ ಸೀಳ್ಗಳಿಂ ಪೋಳ್ಗಳಿಂ
ಮಡಿಮಡಿದುರುಳ್ವ ಕಟ್ಟಾಳ್ಗಳಿಂ ಬಾಳ್ಗಳೊಂದೊಡೆವ ತಲೆವೋಳ್ಗಳಿಂದ||

ಹಾಸ್ಯ[ಬದಲಾಯಿಸಿ]

  • ಭೀಮ ಕೃಷ್ಣನನ್ನು ಕಾಣುವ ಸಂದರ್ಭ:ಸತ್ಯಭಾಮೆ ರುಕ್ಮಿಣಿಗೆ ಛೇಡಿಸುವಿಕೆ;
ನಿಮ್ಮ ಬಂಧನವ ಬಿಡಿಸಿದವಂಗೆ ತವೆ ಬಂಧ
ನಮ್ಮೊಳಗೇಕಾಯ್ತು? ದಿವಿಜರಂಪರೆದವಂ
ಚಿಮ್ಮಟಿಗೆಯ ಪಿಡಿಯಲೇತಕೆ?
  • ಕೀಟಲೆಗಾಗಿ ಭೀಮನನ್ನು ಕೃಷ್ಣನ ಮನೆಬಾಗಿಲಲ್ಲಿ ಊಟದ ಸಮಯವೆಂದು ತಡೆದಾಗ, ಭೀಮ ಛೇಡಿಸುವುದು:
ಆರೋಗಣೆಯ ಸಮಯಮಾರ್ಗೆ? ಭೂತಂ ಪೊಯ್ದದಾರನೀ ಮನೆಯೊಳಿಂತೀಗಳೇತಕೆ ಮೌನಂ|.....
ಬಿಡದೆ ಕಳವಿಂದ ಲೋಗರ ಮನೆಗಳಂ ಪೊಕ್ಕು|
ತುಡು ತಿಂದವನ ಭೋಜನಕ್ಕೆ ಮೃಷ್ಟಾನ್ನಮಾ
ದೊಡೆ ಕೆಲಬಲಂಗಳ ನೋಡುವಗೆ ಗೋವಳಂಗರಸುತನಮಾದ ಬಳಿಕ||
ಪಡವಿಯಂ ಕಂಡು ನೆಡೆವನೆ? ಮುಳಿದು ಮಾವನಂ
ಬಡಿದವಂ ನಂಟರನರಿವನೆ? ಮೊಲೆಗೊಟ್ಟವಳಸು
ಗುಡಿದವಂ ಪುರುಷಾರ್ಥಿಯಾದಪನೆ? ನಾವಜ್ಞರೆಂದು ಮಾರುತಿ ನುಡಿದನು||
  • (ಮಾವನನ್ನು ಕೊಂದವನಿಗೆ ನೆಂಟರ ಸಂಬಂಧ ತಿಳಿಯದು, ಮೊಲೆಹಾಲುಕೊಟ್ಟವಳ ಪ್ರಾಣ ತೆಗೆದವ, ನಾವು ಅಜ್ಞರು-ಬುದ್ಧಿಯಿಲ್ಲ ಇಲ್ಲಿಗೆ ಬಂದೆ)

ಭಯಾನಕ[ಬದಲಾಯಿಸಿ]

  • ದುಷ್ಟಬುದ್ದಿಯು ಕೊಲೆಯಾದ ಮಗನನ್ನು ಅಂಬಿಕಾ/ಚಂಡಿಕಾದೇವಿಯ ಗುಡಿಯಲ್ಲಿ ಕಾಣುವ ಸಂದರ್ಭದಲ್ಲಿ:
ಪರಿದ ಪೂಮಾಲೆಗಳ ಬಣ್ಣಗೂಗ್ಗಳ ಬಲಿಯ|
ಮೊರದ ಪಳಗೊಳ್ಳಿಗಳ ಭಸ್ಮದಡೆದೋಡುಗಳ|
ಮುರಿದ ಗೂಡಂಗಳ ಕಳಲ್ದ ಶಿಬಿಕೆಗಳ ಚತೆಯೊಳ್ಬೇವ ಕುಣಂಪಂಗಳ||
ತುರಿಗೆದೆಲುವಿನ ಜಂಬುಕಾವಳಿಯ ಗೂಗೆಗಳ|
ಬಿರುದನಿಯ ಭೂತ ಬೇತಾಳ ಸಂಕುಲದಡಗಿ|
ನರಕೆಗಳ ಸುಡುಗಾಡೊಳಾಮಂತ್ರಿ ಚಂಡಿಕಾಲಯದೆಡೆಗೆ ನೆಡೆತಂದನು||ಪದ್ಯ೫೫||ಸಂಧಿ೩೧||
  • ಇದು ಚಂಡಿಕಾ ಗುಡಿಗೆ ಬರುವಾಗ ದಾರಿಯಲ್ಲಿರುವ ಸ್ಮಶಾನದ ವರ್ಣನೆ.

ಕರುಣ ರಸ[ಬದಲಾಯಿಸಿ]

  • ಲಕ್ಷ್ಮಣ, ರಾಮನಾಜ್ಞೆಯಂತೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹಿಂತಿರುಗುವ ಸಮಯ:
ತರಣಿಕುಲ ಸಾರ್ವಭೌಮನ ರಾಣಿಯಂ ಬನದೊ
ಳಿರಿಸಿ ಪೋದಪೆನೆಂತೊ? ಪೋಗದಿರ್ದೊಡೆ ಸಹೋ
ದರನೇನೆಂದಪನೋ ಹಾ ಯೆಂದು ಲಕ್ಷ್ಮಣಂ ಬೆಂದು ಬೇಗುದಿಗೊಂಡನು||೧೩||
ಉಕ್ಕಿದವು ಕಂಬನಿಗಳಧರೋಷ್ಣಮದಿರಿ ತಲ|ಗಿಕ್ಕಿ ತಿರುಪಿದವೊಲಾಯ್ತು-ಒಡಲೊಳೆಡೆವರಿಯದು-
ಉಸಿ|ರೊಕ್ಕು-ಉರೆ -ಕಂಪಿಸಿದುದು -ಅವಯುವಂ ಕರಗಿತು-ಎರ್ದೆ ಸೈರಣೆ ಸಮತೆಗೆಟ್ಟುದು||
ಸಿಕ್ಕಿದವು ಕಂಠದೊಳ್ಮಾತುಗಳು -ಸೆರೆ ಬಿಗಿದು ಮಿಕ್ಕು ಮೀರುವ ಶೋಕದಿಂದ ----ಅವನಿಸುತೆಗಿಂತೆಂದನು||೧೪||
ದೇವಿ ನಿನಗಿನ್ನೆಗಂ ಪೇಳ್ದುದಿಲ್ಲಪವಾದ|
ಮಾವರಿಸೆ ನಿನ್ನನೊಲ್ಲದೆ ರಘುಕುಲೋದ್ವಹಂ|
ಸೀವರಿಸಿ ಬಿಟ್ಟು ಕಾಂತಾರಕ್ಕೆ ಕಳುಹಿ ಬಾ ಎಂದೆನಗೆ :ನೇಮಿಸಿದೊಡೆ||
ಆ ವಿಭುವಿನಾಜ್ಞೆಯಂ ಮೀರಲರಿಯದೆ ನಿಮ್ಮ|
ನೀವಿಪಿನಕೆ ಕೊಂಡು ಬಂದೆ---
ಎಲ್ಲಿಗಾದೊಡಂ ಪೋಗೆಂದು ಲಕ್ಷ್ಮಣಂ ಭಾಷ್ಪಲೋಚನನಾದನು||೧೫
ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತಕದಳಿ|
ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿ|
ದೆರೆಗೆ ಬೀಳದ ಮುನ್ನ ಹಮ್ಮೈಸಿ ಬಿದ್ದಲಂಗನೆ ಧರೆಗೆ ನಡುನಡುಗುತ||೧೬||
  • ಸೀತೆ ಎಚ್ಚರಾಗಿ:
---ಕೊಯ್ಯಲೊಲ್ಲದೆ ಕೊರಳನಿಂತು ತನ್ನಂ ಬಿಡಲ್ ಮಾಡಿದಪರಾಧಮುಂಟೆ?||
ಕೈಯಾರೆ ಖಡ್ಗಮಂ ಕೊಟ್ಟು, ತನ್ನರಸಿಯಂ|
ಹೊಯ್ಯೆಂದು ಪೇಳದಡವಿಗೆ ಕಳುಹಿ ಬಾಯೆಂದ|
ನಯ್ಯಯ್ಯೋ! ರಾಘವ ಕಾರುಣ್ಯನಿದಿಯೆಂದಳಲ್ದಳಂಭೋಜ ನೇತ್ರೆ||೧೭||ಸಂಧಿ ೧೯||
--ಪೋಗು ನೀಂ ಕೊಂದುಕೊಂಬೊಡೆ ತನ್ನ ಬೆಂದೊಡಲೊಳಿದೆ ಬಸಿರದಂದುಗಂ, ಕಾನನದೊಳು ಬಂದುದಂ ಕಾಣ್ಬೆನು--||೨೪||
  • ಆದರೆ ಆಗಲೂ ಅವಳು ತನ್ನನ್ನು ಏನೂ ಅಪರಾಧ ಮಾಡದಿದ್ದರೂ 'ತನ್ನ ಮಗ ನನ್ನನು ಬಿಟ್ಟನೆಂದು ಕೌಸಲ್ಯೆಯ ಪಾದಗಳಿಗೆ ನನ್ನ ವಂದನೆ ತಿಳಿಸಿ ಹೇಳು', ಎನ್ನುತ್ತಾಳೆ.

ರೌದ್ರ ರಸ[ಬದಲಾಯಿಸಿ]

  • ಸುರಥನೊಡನೆ ಯುದ್ಧ: ಕೃಷ್ಣ ಅರ್ಜುನನಿಗೆ ದಿವ್ಯಾಸ್ತ್ರ ತೊಟ್ಟು ತೋಳುಗಳನ್ನು ಕತ್ತರಿಸು ಎಂದಾಗ:
ನರನಾನುಡಿಗೆ ಮುನ್ನಮೆಚ್ಚು ಕೆಡಪಿದನಾತ|
ನನುರುಭುಜನೈವೆಡೆಯ ಭುಜಗೇಂದ್ರನಂದದಿಂ|
ಧರೆಯೋಳ್ಪರಳ್ದುದು ಪೊಯ್ದುದುರೆ ಕೊಂದುದಾಕ್ಷಣಂ ಪರಬಲವನು||೧೪||
ತೋಳ್ಗಳರಡುಂ ಕತ್ತರಿಸಿ ಬೀಳೆ ಮತ್ತೆ ಕ|
ಟ್ಟಾಳ್ಗಳ ಶಿರೋಮಣಿ ಸುರಥನಾಕಿರೀಟಿಯಂ|
ಕಾಲ್ಗಳಿಂದೊದೆದು ಕೆಡಹುನೆಂದು ಭರದಿಂದ ಬೊಬ್ಬಿರಿಯಲೈತರಲ್ಕೆ||
ಕೋಲ್ಗಳಿಂ ತೊಡೆಗಳಂ ಕತ್ತರಿಸೆ|
ನಾದಿದವು ಧೂಳ್ಗಳರುಣಾಂಬುವಿಂದೆದೆಯೊಳ್ತೆವಳ್ದಹಿಯ
ವೋಲ್ಗಂಡುಗಳಲಿಧನಂಜಯನ ಸಮ್ಮುಖಕೆ ಮೇಲಾಯ್ದನವನೇವೇಳ್ವೆನು||೧೫||
---ಫಲುಗುಣಂ
ಬೇಗ ಸುರಥನ ಶಿರವನರಿಯಲಾತಲೆ ಬಂದು|
ತಾಗಿತತಿ ಭರದೋಳ್ ನರನ ವಕ್ಷವಂ ಕೆಡಹಿತಾವರೂಥಾಗ್ರದಿಂದ||೧೬|| ಸಂಧಿ ೧೪||
  • ಸುರಥನ ಭುಜ ಕತ್ತರಿಸಿದರೆ ರಕ್ತ ಆಖಾಶಕ್ಕೆ ಹಾರಿತು, ಆದರೂ ಕಾಲಿನಿಂದ ರಥದ ಕಡೆ ನುಗ್ಗಿದ, ಕಾಲು ಕತ್ತರಿಸಿದರೆ ತೆವಳುತ್ತಾ ಬಂದ, ತಲೆ ಕತ್ತರಿಸಿದರೆ, ಆ ತಲೆ ವೇಗವಾಗಿಬಂದು ಪಾರ್ಥನ ಎದೆಗೆ ಬಡಿದು ಅವನನ್ನು ರಥದಿಂದ ಕೆಳಗೆ ಕೆಡಹಿತು.

ಅದ್ಬುತ[ಬದಲಾಯಿಸಿ]

  • ಯಜ್ಞದ ಕುದುರೆಯು ಪಾರ್ವತಿಯ ತಪೋಭೂಮಿಯಾಗಿದ್ದ ಕಾಡಿನಲ್ಲಿ ಅವಳ ಶಅಪದಿಂದ ಹೆಣ್ಣು ಕುದುರೆಯಾಗಿ ನಂತರ ಕೊಳದ ನೀರು ಕುಡಿದು ಬ್ರಹ್ಮಶಾಪದಿಂದ ಹುಲಿಯಾಗಿ ಕೃಷ್ಣನ ಕೃಪೆಯಿಂದ ಮೊದಲಿನಂತಾಯಿತು.
ಹಯಮುತ್ತರಾಭಿಮುಖವಾಗಿ ಪಾರಿಪ್ಲವ ಧ
ರೆಯೊಳೈದಿ ಪೆಣ್ಗುದುರೆಯಾಗಿ, ಪುಲಿಯಾಗಿ, ವಿ
ಸ್ಮಯದಿಂದೆ ಪಾರ್ಥನಂ ಬೆದರಿಸಿ, ಮುರಾರಿಯ ಮಹಿಯಿಂದ ಮುನ್ನಿನಂತೆ||
ನಿಯಮಿತ ಮಖಾಶ್ವಮಾದತ್ತು-- ||೭||ಸಂಧಿ ೧೫||

ಶಾಂತ[ಬದಲಾಯಿಸಿ]

  • ಬಕದಾಲ್ಬ್ಯ ಮುನಿಯು ಪ್ರಳಯಕಾಲದಲ್ಲಿ ಹರಿಯು ಆಲದೆಲೆಯ ಮೇಲೆ ಮಲಗಿದುದನ್ನು ಕಂಡುದನ್ನು ಅರ್ಜುನನಿಗೆ ಹೇಳಿದುದು:
"ಅಂದು ಸಲಿಲದೊಳೊಳಾಳ್ದ ತನಗಾಲದೆಲೆಯಮೇ
ಲೊಂದೊಂದು ಬಾರಿ ಬಾಲಕನಾಗಿ ಮೈದೊರಿ|
ನಿಂದು ಮಾತಾಡಿಸದೆ ನೋಡದೆ ವಿಚಾರಿಸದೆ ದೂರ ದೂರದೊಳಿರ್ಪನ್||
ಇಂದು ನಿಮ್ಮೈವರಂಕೂಡಿಕೊಂಡಿಲ್ಲಿಗೈ|
ತಂದು ಕರುಣಿಸಿದನೀಹರಿ ಕೃಷ್ಣರೂಪದಿಂ|
ಸಂದುದಿನ್ನೀತನೆ ಸದಾಶ್ರಯಂ ಮರೆವುಗುವೊಡೆನಗೆಂದು ಮುನಿನುಡಿದನು||೩೩|| ಸಂದಿ ೩೨||
  • ವ್ಯಾಸರು ಅಶ್ವಮೇಧ ಯಾಗ ಮಾಡಲು ಹೇಳಿದ ನಂತರ ಕೃಷ್ಣ ಅಸ್ತಿನಾವತಿಗೆ ಭೇಟಿಕೊಟ್ಟಾಗ:
ದಾಯಾದರಿಲ್ಲ ಮಾರ್ಮಲೆವ ಪರಮಂಡಲದ|
ನಾಯಕರ ಸುಳಿವಿಲ್ಲ, ನಿನ್ನಾಳ್ಕೆಗೆಲ್ಲಿಯುಮ|
ಪಾಯಮವನಿಯೊಳಿಲ್ಲಮಿನ್ನು ದಿಗ್ವಿಜಯಮಿಲ್ಲವಸರದ ಬೇಂಟೆಯಿಲ್ಲ||
ವಾಯುನಂದನ ಧನಂಜಯರೊಳೆರವಿಲ್ಲ,ಮಾ|
ದ್ರೇಯರೊಳ್ತಪ್ಪಿಲ್ಲ ಚತುರಂಗಕೆಡರಿಲ್ಲ|
ರಾಯ, ನಿನಗೇನು ಮಾಡುವ ರಾಜಕಾರ್ಯಮೆಂದು ಮುರಧ್ವಂಸಿ ನಗುತ||೫೪||ಸಂಧಿ ೨||

[೧]

ನವರಸಗಳ ಜೊತೆ ಭಕ್ತಿ ರಸ[ಬದಲಾಯಿಸಿ]

  • ಭಕ್ತಿರಸವನ್ನು ನವರಸಗಳಲ್ಲಿ ಸೇರಿಸಿಲ್ಲ. ಕೆಲವರು ಇದನ್ನು ಶಾಂತರಸದಲ್ಲಿಯೇ ಸೇರಿದೆಯೆನ್ನುವರು. ಕೆಲವರು ಇದೇ ಬೇರೆ ರಸವೆನ್ನುವರು. ಒಮ್ಮತವಿಲ್ಲ.
  • ಭಕ್ತಿರಸಕ್ಕೆ ಉದಾಹರಣೆ:
ಬ್ರಾಹ್ಮಣ ವೇಶಧಾರಿಯಾದ ಕೃಷ್ಣನಿಗೆ ಅರ್ಧ ದೇಹವನ್ನೇ ದಾನವಾಗಿಕೊಡಲೊಪ್ಪಿ ಸೀಳಿದ ನಂತರ; ಅವನನ್ನು ಬದುಕಿಸಿ ಕೃಷ್ಣ ತನ್ನ ನಿಜರೂಪ ತೋರಿದನು. ಆಗ: ಮಯೂರಧ್ವಜ:
ಜಯಜಯ ಜಗನ್ನಾಥ, ವರಸುಪರ್ಣವರೂಥ|
ಜಯಜಯ ರಮಾಕಾಂತ ಶಮಿತ ದರಿತಧ್ವಾಂಸ|
ಜಯಜಯಸುರಾಧೀಶ ನಿಗಮ ನಿರ್ಮಲ ಕೋಶ, ಕೋಟಿಸೂರ್ಯಪ್ರಕಾಶ||
ಜಯಜಯ ಕೃತುಪಾಲ ತರುಣತುಲಸೀಮಾಲ|
ಜಯಜಯಕ್ಷ್ಮಾಪೇಂದ್ರ ಸಕಲಸದ್ಗುಣಸಾಂದ್ರ|ಜಯಜಯ ಯದುರಾಜಭಕ್ತಸುಮನೋಭೂಜ ಜಯತು ಜಯ ಎನುತಿರ್ದನು||೭೦||ಸಂ.೨೬||
  • ಚಂದ್ರಹಾಸನು ದುಷ್ಟಬುದ್ಧಿ ಮತ್ತು ಮದನರನ್ನು ಬದುಕಿಸಬೇಕೆಂದು ದೀವಿಯನ್ನು ಪ್ರಾರ್ಥಿಸುವುಸುವುದು:
ತಾಯೆ ಪಾರ್ವತಿ ಪರಮಕಲ್ಯಾಣಿ ಶಂಕರ|
ಪ್ರೀಯೆ ಸರ್ವೇಶ್ವರಿ ಜಗನ್ಮಾತೆ, ಸನ್ನುತ|
ಚ್ಛಾಯೆ ಸಾವಿತ್ರಿ ಶಾರದೆ ಸಕಲ ಶಕ್ತಿರೂಪಿಣಿ ಕಾಳಿ ಕಾತ್ಯಾಯಿನಿ||
ಶ್ರೀಯೆ ವೈಷ್ಣವಿ ವರದೆ ಚಂಡಿ ಚಾಮುಂಡಿ ನಿರು|
ಪಾಯೆ ನಿಗಮಾಗಮಾರ್ಚಿತೆ ಮಂತ್ರಮಯಿ ಮಹಾ|
ಮಾಯೆ ರಕ್ಷಿಪುದೆಂದು ಕೈಮುಗಿದು ಚಂದ್ರಹಾಸಂ ಬೇಡಿಕೊಳುತಿರ್ದನು||೭೨||ಸಂ.೩೧||
  • ಶಾರದೆಗೆ ಕವಿಯ ಪ್ರಾರ್ಥನೆ:
ಭೂವ್ಯೋಮ ಪಾತಾಳಲೋಕಂಗಳಲ್ಲಿ ಸಂ|
ಭಾವ್ಯರೆನಿಸಿಕೊಂಬಖಿಳ ದೇವರ್ಕಳಂ|
ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿ ಫಣಿವೇಣಿ ವಾಣಿ||
ಕಾವ್ಯಮಿದು ಭುವನದೊಳ್ಸಕಲ ಜನರಿಂದ ಸು|
ಶ್ರಾವ್ಯ ಮಪ್ಪಂತೆನ್ನ ವದನಾಬ್ಜದಲ್ಲಿ ನೀ|
ನೇ ವ್ಯಾಪಿಸಿರ್ದಮಲ ಸುಮತಿಯಂ ತಾಯೆನಗೆ ತಾಯೆ ನಗೆಗೂಡಿ ನೋಡಿ||೪||ಸಂ.೧||

ನೋಡಿ[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಆಧಾರ[ಬದಲಾಯಿಸಿ]

  • ೧.ಲಕ್ಷ್ಮೀಶ ಕವಿ ವಿರಚಿತ ಕರ್ನಾಟಕ ಜೈಮಿನಿ ಭಾರತವು : ಭೀಮಸೇನರಾವ್ ಪರಿಷ್ಕರಿಸಿದ್ದು; ಪ್ರಕಾಶಕರು ಟಿ.ಎನ್. ಕೃಷ್ಣಶೆಟ್ಟಿ ಅಂಡ್ ಸನ್ ಬುಕ್ ಡಿಪೊ ಚಿಕ್ಕಪೇಟೆ ಬೆಂಗಳೂರು ನಗರ.(ಮದ್ರಣ ೧೯೫೬)
  • ೨.'ಮಹಾಕವಿ ಲಕ್ಷ್ಮೀಶನ ಸ್ಥಳ, ಕಾಲ ಮತ್ತು ಕಾವ್ಯ ವೈಶಿಷ್ಟ್ಯ -ಡಾ.ಡಿವಿ.ಪಾಂಡುರಂಗ ರೀಡರ್ ಎಂ.ಜಿ.ಎಂ.ಕಾಲೇಜು ಉಡುಪಿ; ಶ್ರೀಗುಂಡಾಜೋಯಿಸ್ ಅಭಿನಂದನಾ ಗ್ರಂಥ: ಮಲೆನಾಡು ರಿಸರ್ಚ್ ಅಕಾಡಮಿ.ಶಿವಮೊಗ್ಗ.

ಉಲ್ಲೇಖ[ಬದಲಾಯಿಸಿ]

  1. ಕನ್ನಡ ಕೈಪಿಡಿ:ಸಂಪುಟ ೧:೩ ನೆಯಭಾಗ ಅಲಂಕಾರ; ೫ ರಸಪ್ರಕರಣ: ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ ೧೯೬೫