ಕರ್ನಾಟಕದಲ್ಲಿ ರೇಷ್ಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು ರೇಷ್ಮೆ ಸೀರೆ (Mysore Silk Saree)

ಕರ್ನಾಟಕದಲ್ಲಿ ರೇಷ್ಮೆ ಅಥವಾ ಮೈಸೂರು ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ.

ಪೀಠಿಕೆ[ಬದಲಾಯಿಸಿ]

ರೇಷ್ಮೆ ಪತಂಗ (Silkmoth)
ಉಪ್ಪು ನೇರಳೆ ಗಿಡದಲ್ಲಿ ರೇಷ್ಮೆ ಹುಳು (Silkworm mulberry tree)
  • ಮೈಸೂರು ರೇಷ್ಮೆ ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. “ಮೈಸೂರು ರೇಷ್ಮೆ” ಹೆಸರಿನ ಅಡಿಯಲ್ಲಿ ‘ಬೌದ್ಧಿಕ ಆಸ್ತಿ ಹಕ್ಕುಗಳು’ ನಿಯಮದಂತೆ ಭೌಗೋಳಿಕ ಸೂಚಕವಾಗಿ ದಾಖಲಾಗಿದೆ. ಕರ್ನಾಟಕವು ಮೈಸೂರು ರೇಷ್ಮೆಗೆ ಮಾತೃಭೂಮಿ. ಕರ್ನಾಟಕ ರೇಷ್ಮೆಯ ಕೃಷಿಯು 215 ವರ್ಷಗಳ ಇತಿಹಾಸ ಹೊಂದಿದೆ.
  • ದೇಶದಲ್ಲಿ ಹಿಪ್ಪು ನೇರಳೆ ಅಥವಾ ಹಿಪ್ಪುನೇರಳೆ ರೇಷ್ಮೆ ಕೃಷಿ ಮಾದರಿಯಾಗಿ ರೂಪಾಂತರಗೊಂಡು, 19 ನೇ ಶತಮಾನದ ಆದಿಯಲ್ಲಿ ವಿಶ್ವದ ರೇಷ್ಮೆ ಕೃಷಿ ಕುಸಿದ ಸಂದರ್ಭದಲ್ಲಿ, ಮೈಸೂರು ರೇಷ್ಮೆ ಕೃಷಿಯ ಉದ್ಯಮ ನಿರಂತರವಾಗಿ ಅಭಿವೃದ್ಧಿ ಹೊಂದಿತು.
  • ಆದರೂ, ವಿಲಕ್ಷಣ ರೇಷ್ಮೆಹುಳುಗಳ ಅನೇಕ ವಿಧಗಳು ನಾಶವಾದವು. ಅತ್ಯಂತ ಧೃಡ/ಗಟ್ಟಿ ಜಾತಿಯ ರೇಷ್ಮೆಹುಳುಗಳು ಈ ಅವಧಿಯಲ್ಲಿ ಉಳಿದುಕೊಂಡವು. ಮತ್ತು ಇಂದಿಗೂ ಅದು ಭಾರತದಲ್ಲಿ ಹಿಪ್ಪುನೇರಳೆ ರೇಷ್ಮೆ ಕೃಷಿಯ ಬೆನ್ನುಮೂಳೆಯಂತಿದೆ (ಆಧಾರವಾಗಿದೆ).
ರೇಷ್ಮೆ ಮೊಟ್ಟೆಯೊಡೆದು ಬಂದ ಹುಳುಗಳು ಹಿಪ್ಪುನೇರಳೆ ಸೊಪ್ಪು ಮೇಯುತ್ತಿರುವುದು, ನಂತರ ಗೂಡುಕಟ್ಟುವುದು, (Silkworms)

ಮೈಸೂರು ರಾಜ್ಯ ಸರ್ಕಾರದ ಆರಂಭದ ಕೊಡಿಗೆ[ಬದಲಾಯಿಸಿ]

  • 1800 ರಲ್ಲಿ ಮೈಸೂರು ರಾಯಲ್ ಸರ್ಕಾರ ಶೀಘ್ರದಲ್ಲೇ ರೇಷ್ಮೆ ಕೃಷಿ ಚಟುವಟಿಕೆಗಳ ಕೇಂದ್ರವನ್ನು ಚನ್ನಪಟ್ಣದ ಬಳಿ ಮೊಗೆನಹಳ್ಳಿಯಲ್ಲಿ ಸ್ಥಾಪಿಸಲಾಯಿತು. ನಂತರ ಅದು ರೇಷ್ಮೆ ಕೃಷಿಯ ಮುಖ್ಯ ಕೇಂದ್ರವಾಯಿತು.
  • 1860, ಮೊದಲ ರೇಷ್ಮೆ ನೂಲು ಉತ್ಪಾದಿಸುವ ತಳಿ ಅಭಿವೃದ್ಧಿಯ (silk filature) ಪ್ರಯತ್ನವು ಒಂದು ಇಟಾಲಿಯನ್ ಉದ್ಯಮಿಯಿಂದ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಈ ಅವಧಿಯಲ್ಲಿ ಅನೇಕ ವಿಲಕ್ಷಣ ಇಟಾಲಿಯನ್ ಅಥವಾ ಚೀನೀ ಅಥವಾ ಜಪಾನಿನ ಜಾತಿಯ ಮೂಲಕ ಅಡ್ಡ ತಳಿಯ ಅಭಿವೃದ್ಧಿಗೆ ಈ ಹುಳುಗಳ ಮೊಟ್ಟೆ ಅಭಿವೃದ್ಧಿಯ ಯೋಜನೆಯನ್ನು (cross breed layings ಅನ್ನು) ಬಳಸಲಾಗಿತ್ತು.
  • 1896 ರಲ್ಲಿ ದೊಡ್ಡ ಉದ್ಯಮಿ ಸರ್ ಜೆ.ಎನ್.ತಾತಾ ಅವರು ಒಂದು ರೇಷ್ಮೆ ನೂಲಿನ ಕೇಂದ್ರವನ್ನು ಬೆಂಗಳೂರಿನಲ್ಲಿ ಜಪಾನಿನ ಮಾದರಿಯಲ್ಲಿ ತೆರೆದರು. ಅವರು ಜಪಾನಿ ಮಾದರಿಯ ಅಂಟಿಕೊಂಡಿರುವ ಮೊಟ್ಟೆ ಗೊಡುಗಳ (ಜಿiಟಚಿಣuಡಿe) ಕ್ರಮ ಅನುಸರಿಸಿದರು. ಈ ರೇಷ್ಮೆ ನೂಲಿನ ಕೇಂದ್ರವನ್ನು ಶ್ರೀ ಕೆ ಶೇಷಾದ್ರಿ ಅಯ್ಯರ್, ದಿವಾನ್ ಆಫ್ ಮೈಸೂರು ಇವರ ಸಹಾಯದಿಂದ ಸ್ಥಾಪಿಸಿಸಿದರು.
  • ಅವರು ಅವರು ರೇಷ್ಮೆ ಕೃಷಿ ಉದ್ಯಮಕ್ಕೆ ಜಪಾನಿ ದಂಪತಿಗಳಾದ ಶ್ರೀ ಮತ್ತು ಶ್ರೀಮತಿ ಔಡಜು ಅವರು ವೈಜ್ಞಾನಿಕ ಮತ್ತು ತಾಂತ್ರಿಕ ಪರಿಣತಿಯನ್ನು ನೀಡಿದರು, ಶ್ರೀ ಔಡಜು ಅವರು ಶ್ರೀ ವಿ.ಎಮ್.ಅಪ್ಪಸದೊರೈ ಮೊದಲಿಯಾರ್ ಮತ್ತು ಶ್ರೀ ಲಕ್ಷ್ಮಣ್ ರಾವ್.ಅವರಿಗೆ ಸರ್ ಜೆ.ಎನ್.ತಾತಾ ರವರ ಈ ಫಾರ್ಮ್‍ನಲ್ಲಿ ಒಂದು ವರ್ಷದ ತರಬೇತಿ ನೀಡಿದರು.
ರೇಷ್ಮೆ ಕೃಷಿ (Sericuturist)

ಮೈಸೂರಿನ ನಿರ್ಮಾಪಕ ಸರ್ ಎಂ ವಿಶ್ವೇಶ್ವರಯ್ಯ[ಬದಲಾಯಿಸಿ]

  • ಮೈಸೂರು ನಾಲ್ಮಡಿ ಕೃಷ್ಣರಾಜ ಒಡೆಯರ ಸರ್ಕಾರದ ಕೊಡುಗೆ
  • ಸರ್ ಎಂ.ವಿಶ್ವೇಶ್ವರಯ್ಯನವರು ಗ್ರಾಮೀಣ ಅಭಿವೃದ್ಧಿಯಲ್ಲಿ ರೇಷ್ಮೆ ಕೃಷಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ಅವರು 1913 ರಲ್ಲಿ ಇಟಲಿಯಿಂದ ಇಟ್ಯಾಲಿಯನ್ ರಾದ ಶ್ರೀಮಾನ್ ವಾಶಿಂಗ್ಟನ್ ಮರಿ (Signor Washington Mari) ಎಂಬುವವರ ಸೇವೆಯನ್ನು, ಮೈಸೂರಲ್ಲಿ ರೇಷ್ಮೆ ಉದ್ಯಮ ಅಭಿವೃದ್ಧಿ ಪಡಿಸಲು ಮತ್ತು ಸಂಘಟಿಸಲು ಪಡೆದರು. ಅವರು ಪ್ರಯೋಗಗಳನ್ನು ನಡೆಸಲು ಲಭ್ಯವಿರುವ 12 ಪ್ರಭೇದಗಳ ಶುದ್ಧ ಯುರೋಪಿಯನ್ ಮತ್ತು ಚೀನೀ ರೇಷ್ಮೆಹುಳನ್ನು ಉಪಯೋಗಿಸಿ ದರು. ಮರಿಯವರ ಮಾರ್ಗದರ್ಶನದಲ್ಲಿ ಅಪ್ಪಾದೊರೈ ಮೊದಲಿಯಾರ್ ಅವರು ಚನ್ನಪಟ್ಟಣದಲ್ಲಿ ಸ್ಥಳೀಯ ತಳಿ ಪರಿಸರದಲ್ಲಿ ಪ್ರಯೋಗಗಳನ್ನು ನಡೆಸಿದರು. ಅವರು ಯಶಸ್ವಿಯಾಗಿ ಮೈಸೂರು ಸ್ಥಳೀಯ (ಶುದ್ಧ ಮೈಸೂರು) ಮತ್ತು ಯುರೋಪಿಯನ್ ಮತ್ತು ಚೀನೀ ಜಾತಿಗಳ ಗಂಡು ಮತ್ತು ಹೆಣ್ಣು (ನಡುವಿನ) ಸಂಯೊಗದ ಅತ್ಯುಚ್ಛ ಮಾದರಿಯ ಹಲವಾರು ಅಡ್ಡ ತಳಿಗಳನ್ನು ಅಭಿವೃದ್ಧಿ ಪಡಿಸಿದರು.
  • 1914 ರಲ್ಲಿ ಶ್ರೀಮಾನ್ ಮರಿಯವರು ಬೆಂಗಳೂರಿಗೆ ತನ್ನ ಪ್ರಧಾನ ಕಾರ್ಯಕ್ಷೇತ್ರವನ್ನು ಬದಲಾಯಿಸಿದರು. ಮೊದಲಿಯಾರ್‍ರವರು ತಮ್ಮ ಚನ್ನಪಟ್ಟಣ ಫಾರ್ಮ್ ತಳಿ ಪ್ರಯೋಗಗಳನ್ನು ಮುಂದುವರೆಸಿದರು. 1914 ರಲ್ಲಿ ಸ್ವತಂತ್ರ ರೇಷ್ಮೆ ಕೃಷಿ ಇಲಾಖೆ ಯನ್ನು ಸ್ಥಾಪಿಸಲಾಯಿತು ಮತ್ತು ಶ್ರೀಮಾನ್ ವಾಷಿಂಗ್ಟನ್ ಮಾರಿ ರೇಷ್ಮೆ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾದರು. 1919 ರಲ್ಲಿ ಸರ್ಕಾರಿ ಸಂಶೋಧನೆ ನಡೆಸುವುದು ಮತ್ತು ರೇಷ್ಮೆ ವ್ಯವಸಾಯ ತರಬೇತಿ ಶ್ರುತಪಡಿಸಲು ಜಪಾನಿನ ತಜ್ಞ, ಶ್ರೀಯೋನಮುರ ಅವರ ಸೇವೆಗಳನ್ನು ಪಡೆಯಲ್ಲು ಅವರನ್ನು ನೇಮಕ ಮಾಡಲಾಯಿತು. ಸರ್ಕಾರವು ಮೈಸೂರಿನಲ್ಲಿ 1922 ರೇಷ್ಮೆ ತಳಿಕೇಂದ್ರ (ಸಿಲ್ಕ್ ಫಿಲೇಚರ್) ಮತ್ತು 1931-32 ರಲ್ಲಿ ಸಿಲ್ಕ್ ರೇಷ್ಮೇ ನೇಯ್ಗೆ ಕಾರ್ಖಾನೆ ಆರಂಭಿಸಿದರು.

ರೇಷ್ಮೆಗೂಡು[ಬದಲಾಯಿಸಿ]

ಒಂದು ಕತ್ತರಿಸಿದ ರೇಷ್ಮೆಗೂಡು (Cut-cocoon)
  • ರೇಷ್ಮೆಯ ಸೂಕ್ಮ ಮೊಟ್ಟೆಗಳನ್ನು ಬೆಳಸಿ ಅದಕ್ಕೆ ಹಿಪ್ಪುನೇರಲೆ ಸೊಪ್ಪಿನ ಆಹಾರ ಕೊಟ್ಟು ಐದು-ಆರು ಅಡಿ ಅಗಲದ ಬಿದಿರು ತಟ್ಟೆಮೇಲೆ ಬಿಡುವರು. ಅವು ಸೊಪ್ಪನ್ನು ತಿಂದು ಅದು ಪತಂಗವಾಗುವ ಮೊದಲು ಸಣ್ಣ ದಾರದಿಂದ ತನ್ನನ್ನು ಸುತ್ತಿಕೊಂಡು ಗೂಡುಕಟ್ಟುವುದು. ರೇಷ್ಮೆ ಗೂಡನ್ನು ಬಿಸಿ ಬಿಸಿ ಕುದಿಯುವ ನೀರಿಗೆ ಹಾಕಿ ಬೇಯಿಸಿ ಬರಿಗೈಯಿಂದಲೇ ಅದರ ನೂಲು ತೆಗೆಯಬೇಕು.
  • ನಂತರ ಅದನ್ನು ತಿರುಗಣೆಗೆ ಸಿಕ್ಕಿಸಬೇಕು. ತೆಗೆದ ನೂಲನ್ನು ಬಿಸಿ ಬಿಸಿ ಕೆಂಡದ ಮೇಲೆ ಸಮ ಅಂತರದಲ್ಲಿ ತಿರುಗುವಂತೆ ಮಾಡಿ ಒಣಗಿಸಬೇಕು. ಒಣಗಿದ ನೂಲನ್ನು ಮತ್ತೆ ಎಳೆ ಎಳೆಯಾಗಿ ವಿಂಗಡಿಸಿ ನುಣುಪುಗೊಳಿಸಬೇಕು... ಹೀಗೆ ರೇಷ್ಮೆ ಒಂದು ಹಂತಕ್ಕೆ ಬರಲು ಕಾರ್ಮಿಕರು ಬಹಳಷ್ಟು ಕಷ್ಟ ಪಡಬೇಕು.
  • ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯಪುರದ ಸಜಾದ್ ಅಹಮದ್ ಕಾರ್ಮಿಕರ ಕಷ್ಟ ಕಂಡು ಅವರಿಗೆ ನೆರವಾಗುವಂಥ ನೂತನ ಯಂತ್ರ ಕಂಡುಹಿಡಿದಿದ್ದಾರೆ . ಕಡಿಮೆ ಉಷ್ಣತೆಯಲ್ಲಿಯೇ ರೇಷ್ಮೆ ಗೂಡು ಬೇಯಿಸುವ ಹಾಗೂ ಒಣಗಿಸುವ ಸರಳ ಯಂತ್ರವನ್ನು ಪ್ರಾಯೋಗಿಕವಾಗಿ ಅಳವಡಿಸಿರುವ ಇವರು ಯಶಸ್ಸನ್ನೂ ಕಂಡಿದ್ದಾರೆರೇಷ್ಮೆ ಸರಳ ಉತ್ಪಾದನೆಗೆ ಹೊಸದೊಂದು ಹಾದಿ Archived 2016-08-30 ವೇಬ್ಯಾಕ್ ಮೆಷಿನ್ ನಲ್ಲಿ.
  • ಆ ದಾರ ಬಹಳ ಸೂಕ್ಷ್ಮವಾಗಿರುವುದರಿಂದ ಐದಾರು ದಾರ ಸೇರಿಸಿ ರೇಷ್ಮೆನೂಲು ಮಾಡುವರು. ಈ ಒಂದು ಗೂಡು 300 ರಿಂದ 900 ಮೀ (1,000 ದಿಂದ 3,000 ಅಡಿ) ಉದ್ದದ ಕಚ್ಚಾ ರೇಷ್ಮೆ ದಾರದಿಂದ ಮಾಡಲ್ಪಟ್ಟಿದೆ. ಆ ದಾರದ ದಪ್ಪ (ಫೈಬರ್ 10μm ಯುಎಂ) 0.0004 ಅಂಗುಲ ವ್ಯಾಸ,(/೧೦೦೦೦ ಅಂ). ಅದು ಅತಿ ಹೊಳಪಿನದು ಮತ್ತು ಮೃದು ಗಟ್ಟಿ ಇರುತ್ತದೆ. ಒಂದು ಪೌಂಡ್ ದಾರ ಮಾಡಲು ಸುಮಾರು 2,000 ರಿಂದ 3,000 ರೇಷ್ಮೆಗೂಡು (cocoons) ರೇಷ್ಮೆ (0.4ಕೆಜಿ) ಅಗತ್ಯವಿದೆ.ಸುಮಾರು 10 ಶತಕೋಟಿ ಪೌಂಡ್ ಗೂಡಿನಿಂದ (cocoons) ಪ್ರತಿ ವರ್ಷ ಕನಿಷ್ಠ 70 ಮಿಲಿಯನ್ ಪೌಂಡ್ (31,751.466 ಟನ್).ಕಚ್ಚಾ ರೇಷ್ಮೆಯನ್ನು ಎಲ್ಲಾ ದೇಶಗಳಿಂದ ಉತ್ಪಾದಿಸುತ್ತದೆ. [೧]

ಸ್ವಾತಂತ್ರ್ಯಾನಂತರ ವಿಶ್ವ ಬ್ಯಾಂಕ್ ಅಡಿಯಲ್ಲಿ[ಬದಲಾಯಿಸಿ]

  • 1970 ರ ಕೊನೆಯ ಅವಧಿಯಲ್ಲಿ ಐಎಸ.ಡಿ.ಪಿ(ISDP) ಅಡಿಯಲ್ಲಿ ಮತ್ತು 1980 ರಲ್ಲಿ ವಿಶ್ವ ಬ್ಯಾಂಕ್ ಅಡಿಯಲ್ಲಿ ಎರಡು ರೇಷ್ಮೆ ಕೃಷಿ ಯೋಜನೆಗಳಿಗೆ ನೆರವು ಪಡೆದು ರೇಷ್ಮೆ ಕೃಷಿ ಇಲಾಖೆಯು ವ್ಯಾಪಕ ವಿಸ್ತರಣಾ ಯೋಜನೆಗಳನ್ನು ತೆಗೆದುಕೊಂಡಿತು. ಮೂಲ ಸೌಕರ್ಯಗಳು, ತಾಂತ್ರಿಕ ಸೇವೆಯ ಕೇಂದ್ರಗಳು (ಸೆಂಟರ್ಸ್) ರೇಷ್ಮೆ ಮಾರುಕಟ್ಟೆಗಳನ್ನು, ಸ್ಥಾಪಿಸಲಾಯಿತು. ಈ 1997-98 ಸಮಯದಲ್ಲಿ 9236 ಎಂ.ಟಿ ಕಚ್ಚಾ ರೇಷ್ಮೆ ನಿರ್ಮಾಣಮಾಡುವಷ್ಟು ವಿಸ್ತರಿಸಲಾಯಿತು. .
  • ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರೇಷ್ಮೆ ಕೃಷಿ ಬಗ್ಗೆ 10.67 ಲಕ್ಷ ಜನರಿಗೆ ಉದ್ಯೋಗಗಳನ್ನು ಒದಗಿಸುತ್ತಿದೆ. ಮಲ್ಬರಿ / ಹಿಪ್ಪುನೇರಳೆಯ ಒಂದು ಹೆಕ್ಟೇರ್ 13 ವ್ಯಕ್ತಿಗಳಿ ಇಡೀ ವರ್ಷ ನಿರಂತರ ಕೆಲಸ ಒದಗಿಸುತ್ತದೆ.
  • ಕರ್ನಾಟಕ ಸುವ್ಯವಸ್ಥಿತ ಮಲ್ಟಿವೊಲಟೈನ್ (Multivoltine) ಮತ್ತು ಬಿವೊಲಟೈನ್ (Bivoltine) ಬೀಜತಳಿ ಪ್ರದೇಶಗಳನ್ನು ಹೊಂದಿದೆ. ಅವರು ಅಡ್ಡ ತಳಿ ಮತ್ತು ಬಿವೊಲಟೈನ್ (Bivoltine) ಹೈಬ್ರಿಡ್ ಮೊಟ್ಟೆ ((hybrid layings) ಉತ್ಪಾದನೆಗೆ ಅಗತ್ಯವಾಗಿರುವ ಪೋಷಕ ತಳಿಬೀಜಮೊಟ್ಟೆ (hybrid layings). ಬೇಡಿಕೆಗಳನ್ನು ಪೂರೈಸುವುದಕ್ಕಾಗಿ. ಕರ್ನಾಟಕ, ವೇಗದ ಆಧುನೀಕರಣವನ್ನು ಹೊಂದಿದೆ.

ಕೈಗಾರಿಕೆಗಳ ಆಧುನಿಕರಣಗಳ ಪರಿಣಾಮ[ಬದಲಾಯಿಸಿ]

  • ಕರ್ನಾಟಕ ರೇಷ್ಮೆ ಕೃಷಿಯು ಸುಮಾರು 88% ಭಾಗ ದಕ್ಷಿಣ ಭಾಗದಲ್ಲಿ ಹರಡಿದೆ. ನಗರೀಕರಣ, ಕೈಗಾರೀಕರಣ, ಕುಸಿದ ಅಂತರ್ಜಲ, ಕೃಷಿ ಕಾರ್ಮಿಕರ ಕೊರತೆ ಅಂಶಗಳು ಈ ಭಾಗದಲ್ಲಿ ರೇಷ್ಮೆ ಕೃಷಿ ಮೇಲೆ ದುಷ್ಪರಿಣಾಮ ಬೀರಿವೆ.][೨]
  • ಹೆಚ್ಚಾಗಿ ಬಡ, ಸಣ್ಣ ಮತ್ತು ಅತಿ ಸಣ್ಣ ರೈತರೇ ರೇಷ್ಮೆ ಕೃಷಿಯ ಅವಲಂಬಿತರು. ಆದರೆ ಅವರ ಆರ್ಥಿಕ ಶಕ್ತಿಯನ್ನು ಹೆಚ್ಚಿಸುವ, ಖರೀದಿ ಸಾಮರ್ಥ್ಯವನ್ನು ವೃದ್ಧಿಸುವ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿಸುವ ಕಾರ್ಯ ಅಷ್ಟಾಗಿ ನಡೆದಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳ ಧೋರಣೆ, ಆಮದು ನೀತಿ, ನೇಕಾರರು ಮತ್ತು ಜವಳಿ ಉದ್ಯಮವಲಯದ ಮಾಫಿಯಾ, ಹವಾಮಾನ ವೈಪರೀತ್ಯಗಳಿಂದ ರೇಷ್ಮೆ ರೈತನ ಸ್ಥಿತಿ ಚಿಂತಾಜನಕವಾಗಿದೆ. ತಮ್ಮದಲ್ಲದ ತಪ್ಪಿಗೆ ಈ ರೈತರು ಶಿಕ್ಷೆ ಎದುರಿಸ ಬೇಕಾಗಿದೆ. ಅಲ್ಲದೆ ನಾಲ್ಕು ದಶಕದಿಂದ ನಂಬಿ, ನಡೆಸಿಕೊಂಡು ಬಂದಿದ್ದ ರೇಷ್ಮೆ ಬೇಸಾಯದಿಂದಲೇ ಅವರು ವಿಮುಖರಾಗುತ್ತಿದ್ದಾರೆ.

ಕರ್ನಾಟಕದ ಪಾಲು[ಬದಲಾಯಿಸಿ]

ಉದ್ಯೋಗ ಸೃಷ್ಟಿ[ಬದಲಾಯಿಸಿ]

  • ಪ್ರಸ್ತುತ ದೇಶದಲ್ಲಿ ರೇಷ್ಮೆಯನ್ನು ನೇರ ಮತ್ತು ಪರೋಕ್ಷವಾಗಿ 60 ಲಕ್ಷ ಜನರು ಅವಲಂಬಿಸಿದ್ದಾರೆ. ರೇಷ್ಮೆ ಮೊಟ್ಟೆ ಉತ್ಪಾದಕರು, ಚಾಕಿ ಸಾಕುವವರು, ರೈತರು, ಕೂಲಿಕಾರರು, ನೂಲು ಬಿಚ್ಚಾಣಿಕೆದಾರರು (ರೀಲರ್‌ಗಳು), ನೂಲು ಮಾರಾಟ ಗಾರರು, ನೇಕಾರರು, ಕೈಮಗ್ಗ, ಪವರ್‌ ಲೂಮ್‌ಗಳಲ್ಲಿ ದುಡಿಯುವ ಕಾರ್ಮಿಕ ವರ್ಗ, ಬಣ್ಣ ಹಾಕುವವರು, ರೇಷ್ಮೆ ಬಟ್ಟೆ ಮಾರಾಟಗಾರರು ಸೇರಿದಂತೆ ಹಲವರು ರೇಷ್ಮೆಯನ್ನೇ ಅವಲಂಭಿಸಿದ್ದಾರೆ.
  • ದೇಶದಲ್ಲಿ ಎರಡು ಶತಮಾನಗಳಿಂದ ಬೆಳೆದು ಬಂದ ರೇಷ್ಮೆ ಕೃಷಿಯು ಸಾಕಷ್ಟು ಸುಧಾರಣೆ ಆಗಿದೆ. ತಾಂತ್ರಿಕತೆಯ ಅಳವಡಿಕೆ ಮತ್ತು ಆಧುನಿಕ ಸುಧಾರಿತ ವಿಧಾನಗಳ ಬಳಕೆಯಿಂದ ಉತ್ಪಾದನೆಯಲ್ಲಿ ಹೆಚ್ಚಳವೇನೋ ಆಗಿದೆ. ಆದರೆ ಅದರ ಫಲ ಮಾತ್ರ ರೈತರಿಗೆ ಸಿಗುತ್ತಿಲ್ಲ.

ಕರ್ನಾಟಕ ರಾಜ್ಯದ ಚಿತ್ರಣ[ಬದಲಾಯಿಸಿ]

  • ರಾಜ್ಯದಲ್ಲಿ 1989–90ರ ಅವಧಿಯಲ್ಲಿ ಒಟ್ಟು 1,46,285 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆ ಕೃಷಿ ವ್ಯಾಪಿಸಿತ್ತು. 2006–07ರಲ್ಲಿ 97,647 ಹೆಕ್ಟೇರ್‌ಗೆ ಕುಸಿದಿತ್ತು. 2016ರ ಮಾರ್ಚ್‌ ಅಂತ್ಯದವೇಳೆಗೆ ಅದು 87,497 ಹೆಕ್ಟೇರ್‌ಗೆ ಕುಸಿತ ಕಂಡಿದೆ. ಅಂದರೆ ಎರಡೂವರೆ ದಶಕದಲ್ಲಿ 58,788 ಹೆಕ್ಟೇರ್‌ ರೇಷ್ಮೆ ಪ್ರದೇಶವು ರೇಷ್ಮೆ ಚಟುವಟಿಕೆಯಿಂದ ಹೊರಬಂದಿದೆ. 2014–15ರಲ್ಲಿ ರಾಜ್ಯದಲ್ಲಿ 1.32,205 ಕುಟುಂಬಗಳು ರೇಷ್ಮೆ ಕೃಷಿಯಲ್ಲಿ ತೊಡಗಿದ್ದವು. 2016ರ ಮಾರ್ಚ್‌ ಅಂತ್ಯದವೇಳೆಗೆ ರೇಷ್ಮೆ ಕೃಷಿ ಅವಲಂಬಿತ ಕುಟುಂಬಗಳ ಸಂಖ್ಯೆ 1,23,442 ಕುಸಿದಿದೆ.
  • ದೇಶದಲ್ಲಿ ಮೂರು, ನಾಲ್ಕು ದಶಕದಲ್ಲಿ ಬಹುತೇಕ ಪದಾರ್ಥಗಳ, ಆಹಾರಧಾನ್ಯಗಳ, ವಾಣಿಜ್ಯ ಬೆಳೆಗಳ ಬೆಲೆ ಹೆಚ್ಚಾಗಿದೆ. ಆರೋಗ್ಯದ ಖರ್ಚು ಹೆಚ್ಚಾಗಿದ್ದು, ಔಷಧಿಗಳ ಬೆಲೆ ಗಗನಕ್ಕೇರಿದೆ. ಅಗತ್ಯವಸ್ತುಗಳ ಬೆಲೆ ದುಬಾರಿಯಾಗಿದೆ. ಆದರೆ ರೇಷ್ಮೆ ಧಾರಣೆಲ್ಲಿ ಮಾತ್ರ ಈ ಪ್ರಮಾಣದ ಏರಿಕೆ ದಾಖಲಾಗಿಲ್ಲ. ಅದರಿಂದ ರೈತ ರೇಷ್ಮೆ ಕೃಷಿಯಿಂದ ವಿಮುಖನಾಗುತ್ತಿದ್ದಾನೆ.

ಕರ್ನಾಟಕದಲ್ಲಿ ರೇಷ್ಮೆ ಕೃಷಿ ಪ್ರದೇಶ[ಬದಲಾಯಿಸಿ]

ಜಿಲ್ಲೆ ಪ್ರದೇಶ (ಹೆಕ್ಟೇರುಗಳಲ್ಲಿ)
ಕೋಲಾರ 17,889
ಚಿಕ್ಕಬಳ್ಳಾಪುರ 16,581
ರಾಮನಗರ 15,829
ಮಂಡ್ಯ 14,274
ಒಟ್ಟು 87,597

ಆರ್ಥಿಕ ಸುಧಾರಣೆಯ ಪರಿಣಾಮ ಮತ್ತು ಅಮದು ನೀತಿ[ಬದಲಾಯಿಸಿ]

  • 1991ರಲ್ಲಿ ಮಿಶ್ರತಳಿ (ಸಿಬಿ) ರೇಷ್ಮೆ ಗೂಡಿನ ಬೆಲೆಯು ಸರಾಸರಿ ಕೆ.ಜಿಗೆ ₹ 126 ಇತ್ತು. ಅದು 2006–07ರಲ್ಲಿ ₹ 123 ಮತ್ತು 2007–08ರಲ್ಲಿ ₹ 114ಕ್ಕೆ ಇಳಿದಿತ್ತು. 2015ರಲ್ಲಿ ಅದು ₹ 204ಕ್ಕೆ ಏರಿತ್ತು. ಅಂದರೆ 25 ವರ್ಷದಲ್ಲಿ ರೇಷ್ಮೆ ಗೂಡಿನ ಧಾರಣೆಯಲ್ಲಿ ಹೆಚ್ಚಾಗಿ ಇಳಿಕೆಯೇ ದಾಖಲಾಗಿದೆ. ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಕೆಲ ವರ್ಷಗಳಲ್ಲಿ ₹ 200ರ ಗಡಿದಾಟಿರುವುದೂ ಉಂಟು.
  • ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಆರ್ಥಿಕ ಸುಧಾರಣೆ ಹೆಸರಿನಲ್ಲಿ 1991ರಲ್ಲಿ ದೇಶಕ್ಕೆ ಕೊಟ್ಟ ಉದಾರೀಕರಣ, ಮುಕ್ತ ಆರ್ಥಿಕ ನೀತಿ, ಮುಕ್ತ ವ್ಯಾಪಾರ ಮತ್ತು ವಾಣಿಜ್ಯ ನೀತಿ ಹಾಗೂ ಮುಕ್ತ ಆಮದು ನೀತಿಗಳು ರೇಷ್ಮೆ ಗೂಡಿನ ಧಾರಣೆಯ ಗಣನೀಯ ಕುಸಿತಕ್ಕೆ ಪ್ರಮುಖ ಕಾರಣಗಳು.
  • ಸಾಮಾನ್ಯವಾಗಿ ಸಣ್ಣ, ಅತಿ ಸಣ್ಣ ಭೂ ಹಿಡುವಳಿದಾರರೇ ಈ ಕೃಷಿಯಲ್ಲಿದ್ದಾರೆ. ವರ್ಷಕ್ಕೆ 5ರಿಂದ 6 ಬೆಳೆ ತೆಗೆಯ ಬಹುದಾದ್ದರಿಂದ ಸರಾಸರಿ 2 ತಿಂಗಳಿಗೊಮ್ಮೆ ಕನಿಷ್ಠ ಹಣವನ್ನಾದರೂ ನೋಡಬಹುದು ಎಂಬ ಕಾರಣದಿಂದ ಹಾಗೂ ಯಾವುದಾದರೂ ಒಂದೆರಡು ಬೆಳೆಯಲ್ಲಿಯಾದರೂ ಉತ್ತಮ ಬೆಲೆ ದೊರೆಯಬಹುದು ಎಂಬ ಆಶಾಕಿರಣದಿಂದ ಕೆಲ ಕೃಷಿಕರು ಇನ್ನೂ ರೇಷ್ಮೆಯನ್ನು ಮುಂದುವರೆಸಿದ್ದಾರೆ.

ಉತ್ಪಾದನಾ ವೆಚ್ಚ[ಬದಲಾಯಿಸಿ]

  • ಸರ್ಕಾರವೇ ವಿವಿಧ ಸಂದರ್ಭದಲ್ಲಿ ನಡೆಸಿರುವ ಅಧ್ಯಯನಗಳ ಪ್ರಕಾರ ಒಂದು ಕೆ.ಜಿ ರೇಷ್ಮೆ ಗೂಡು ಉತ್ಪಾದನೆಗೆ ₹ 300 ವೆಚ್ಚವಾಗುತ್ತದೆ (ರೈತರ ಪ್ರಕಾರ ಅದು ₹ 350ರಿಂದ 400). ಆದರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಗೂಡಿಗೆ ₹ 120ರಿಂದ 200ಕ್ಕೆ ಹರಾಜು ಆಗುತ್ತದೆ.

ಮುಕ್ತ ಆಮದು ನೀತಿ[ಬದಲಾಯಿಸಿ]

ವಿಶ್ವ ವ್ಯಾಪಾರ ಒಪ್ಪಂದದ (1991) ಅಡಿ ಮುಕ್ತ ಆಮದು ನೀತಿ ಜಾರಿ ಆಗಿದೆ. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದರೂ ಕೆಲವು ಆಹಾರ ಮತ್ತು ವಾಣಿಜ್ಯ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಈ ಒಪ್ಪಂದ ಸೃಷ್ಟಿಸಿದೆ. ಡಂಕೆಲ್‌ ಪ್ರಸ್ತಾವನೆ, ಗ್ಯಾಟ್‌ ಒಪ್ಪಂದ, ಡಬ್ಲ್ಯುಟಿಒ ಒಪ್ಪಂದವನ್ನು ರೈತ ಸಮುದಾಯಕ್ಕೆ ಬಲವಾಗಿ ಪೆಟ್ಟು ಬಿದ್ದಿದೆ.

ಚೀನಾ ರೇಷ್ಮೆ[ಬದಲಾಯಿಸಿ]

  • ಜಾಗತಿಕ ಸ್ಪರ್ಧೆಗೆ ಅದಾಗಲೇ ಸಿದ್ಧವಾಗಿದ್ದ ಚೀನಾ ದೇಶವು ತನ್ನ ರೇಷ್ಮೆ ಕೃಷಿ ನೀತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದುಕೊಂಡಿತ್ತು. ಇದೇ ವೇಳೆಗೆ, ಭಾರತದಲ್ಲಿ ನೇಕಾರರು ಹೆಚ್ಚಿದ್ದು, ಅವರಿಗೆ ದೇಶದಲ್ಲಿ ಅಗತ್ಯವಿರುವಷ್ಟು ರೇಷ್ಮೆ ದೊರೆಯುತ್ತಿಲ್ಲ ಎಂಬ ಕಾರಣದಿಂದ ಕೇಂದ್ರ ಸರ್ಕಾರವು ಚೀನಾ ರೇಷ್ಮೆಗೆ ಅಮದು ಮಾಡಲು ಅನುಮತಿ ನೀಡಿತು.ಇದರ ಪರಿಣಾಮ 1991ರ ತರುವಾಯ ರೇಷ್ಮೆ ಧಾರಣೆಯಲ್ಲಿ ಕುಸಿತ ದಾಖಲಾಯಿತು.
  • ರಾಮನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ 1991ರಲ್ಲಿ ಮಿಶ್ರ ತಳಿ ರೇಷ್ಮೆ ಗೂಡು ಸರಾಸರಿ ಕೆ.ಜಿಗೆ ರೂ. 126 (ಕನಿಷ್ಠ 51, ಗರಿಷ್ಠ 221) ಇತ್ತು. ಅದು 1992ರಲ್ಲಿ ಸರಾಸರಿ ರೂ. 93.88ಕ್ಕೆ (ಕನಿಷ್ಠ 38.10, ಗರಿಷ್ಠ 169) ಕುಸಿಯಿತು. 1993ರಲ್ಲಿ ಸರಾಸರಿ ಕೆ.ಜಿಗೆ ರೂ. 83.60ಕ್ಕೆ (ಕನಿಷ್ಠ 30.70, ಗರಿಷ್ಠ 135) ಇಳಿಯಿತು. 2000ನೇ ಇಸವಿಯಲ್ಲಿ ಮಿಶ್ರ ತಳಿ ರೇಷ್ಮೆ ಗೂಡು ಸರಾಸರಿ ಕೆ.ಜಿಗೆ ರೂ. 113 (ಕನಿಷ್ಠ 30, ಗರಿಷ್ಠ 219) ಇತ್ತು. ಅದು 2002–03ರಲ್ಲಿ ದಿಢೀರನೆ ಕುಸಿತವಾಗಿ ಸರಾಸರಿ ಕೆ.ಜಿಗೆ ರೂ. 94.50 (ಕನಿಷ್ಠ 52, ಗರಿಷ್ಠ 135.60) ಇಳಿಯಿತು.

ಹಿಪ್ಪುನೇರಳೆ ವ್ಯವಸಾಯ[ಬದಲಾಯಿಸಿ]

  • 2002ರಲ್ಲಿ ರಾಜ್ಯದಲ್ಲಿ 1.16 ಲಕ್ಷ ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ ವ್ಯವಸಾಯ ವ್ಯಾಪಿಸಿತ್ತು. 2.56 ಲಕ್ಷ ಕುಟುಂಬ, 12 ಸಾವಿರ ರೀಲರ್‌ಗಳು ಈ ಉದ್ಯಮವನ್ನು ಅವಲಂಬಿಸಿದ್ದರು. ಆಗ ದೇಶದಲ್ಲಿ 14500 ಮೆಟ್ರಿಕ್‌ ಟನ್‌ ಕಚ್ಚಾ ರೇಷ್ಮೆ ಉತ್ಪಾದನೆ ಆಗುತ್ತಿತ್ತು. ಅದರಲ್ಲಿ ರಾಜ್ಯದ ಕೊಡುಗೆ 8700 ಮೆಟ್ರಿಕ್‌ ಟನ್‌ ಇತ್ತು. 2001–02ರಲ್ಲಿ ಚೀನಾ ರೇಷ್ಮೆಯ ಆಮದು ಪ್ರಮಾಣ ಹೆಚ್ಚಾಗಿತ್ತು. ಆಗ ರೇಷ್ಮೆ ನೂಲು ಕೆ.ಜಿಗೆ ಸರಾಸರಿ 24 ಡಾಲರ್‌ ಇತ್ತು. ಅದು 2002–03ರ ವೇಳೆಗೆ 13ರಿಂದ 14 ಡಾಲರ್‌ಗೆ ಕುಸಿಯಿತು. ಇದರಿಂದ ನೇಕಾರರು ಚೀನಾದ ರೇಷ್ಮೆ ಖರೀದಿಸಲು ಮುಂದಾದರು.2001–02ರ ಆರ್ಥಿಕ ವರ್ಷದಲ್ಲಿ ದೇಶಕ್ಕೆ 6870 ಮೆಟ್ರಿಕ್‌ ಟನ್‌ನಷ್ಟು ರೇಷ್ಮೆ ಆಮದಾಗಿತ್ತು.
  • ಕೇಂದ್ರದ ಯುಪಿಎ ಸರ್ಕಾರವು 2014ರಲ್ಲಿ ರೇಷ್ಮೆ ಆಮದು ನೀತಿಯನ್ನು ಶೇ 5ರಿಂದ ಶೇ 15ಕ್ಕೆ ಹೆಚ್ಚಿಸಿತ್ತು. ಇದರಿಂದ ಮಿಶ್ರ ತಳಿಯು ಸರಾಸರಿ ಕೆ.ಜಿಗೆ ರೂ. 318 (ಕನಿಷ್ಠ ರೂ.150, ಗರಿಷ್ಠರೂ. 480)ಕ್ಕೆ ಏರಿತು. ಇದೇ ವೇಳೆ ದ್ವಿತಳಿ (ಬೈವೋಲ್ಟಿನ್‌) ಗೂಡು ಸರಾಸರಿ ಕೆ.ಜಿಗೆ ರೂ. 351 (ಕನಿಷ್ಠ ರೂ.202, ಗರಿಷ್ಠ ರೂ.561)ಕ್ಕೆ ಏರಿಕೆ ಆಯಿತು.ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು 2015ರಲ್ಲಿ ಆಮದು ಸುಂಕವನ್ನು ಶೇ 15ರಿಂದ ಶೇ 10ಕ್ಕೆ ಇಳಿಸಿತು. ಇದರ ಪರಿಣಾಮ ಪುನಃ ದೇಶೀಯ ರೇಷ್ಮೆ ಗೂಡಿನ ಧಾರಣೆಯ ಮೇಲೆ ಬಿದ್ದಿತು.
  • ಚನ್ನಪಟ್ಟಣ, ರಾಮನಗರ, ಕನಕಪುರ, ಕೊಳ್ಳೆಗಾಲ ಮಾರುಕಟ್ಟೆಯಲ್ಲಿ ರೀಲರ್‌ಗಳು ಕೆ.ಜಿಗೆ ಗೂಡಿಗೆ ಕೇವಲ ರೂ.30, 40, 50ರಂತೆ ಹರಾಜು ಆಯಿತು.ರಾಜ್ಯ ಸರ್ಕಾರ ರೇಷ್ಮೆ ಗೂಡು ಅಥವಾ ಕಚ್ಚಾ ರೇಷ್ಮೆಯ ಉತ್ಪಾದನೆಯ ಧಾರಣೆ ಹಾಗೂ ಮಾರಾಟ ವ್ಯವಸ್ಥೆಯ ಸಮಗ್ರ ಅಧ್ಯಯನಕ್ಕೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡಾ. ಎಚ್‌. ಬಸವರಾಜ್‌ ಅವರ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿತು. ಈ ಸಮಿತಿಯು ವರದಿಯನ್ನು ನೀಡಿದೆ. [೩]

ಸುಧಾರಣೆಗೆ ಕೇಂದ್ರದ ಯೋಜನೆ[ಬದಲಾಯಿಸಿ]

  • 21 Dec, 2016
  • ಕನ್ನಡದಲ್ಲಿ ಶೀಘ್ರ ಆ್ಯಪ್‌: ‘ಕಚ್ಚಾ ವಸ್ತುಗಳು, ಸರಬರಾಜು ವಿಳಂಬ, ಉಗ್ರಾಣಗಳಲ್ಲಿನ ಸಂಗ್ರಹ ಹೀಗೆ ನೇಕಾರರಿಗೆ ಮಾಹಿತಿ ನೀಡಲು ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮ ‘ಇ–ಧಾಗ’ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಿದೆ. ಸದ್ಯ ಹಿಂದಿ, ಇಂಗ್ಲಿಷ್‌, ತೆಲುಗು ಭಾಷೆಯಲ್ಲಿ ಈ ಆ್ಯಪ್‌ ಇದೆ. ಜನವರಿ 15ರಂದು ಕನ್ನಡದಲ್ಲಿ ಈ ಆ್ಯಪ್‌ ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.
  • ಉತ್ಕೃಷ್ಟತಾ ತರಬೇತಿ ಕೇಂದ್ರ: ಉತ್ಕೃಷ್ಟತಾ ತರಬೇತಿ ಕೇಂದ್ರದ ಮೂಲಕ ವೃತ್ತಿನಿರತರು, ವಿಸ್ತರಣೆ ಏಜೆಂಟರು, ತರಬೇತುದಾರರು ಸೇರಿ 15 ಸಾವಿರ ಮಂದಿಗೆ ತರಬೇತಿ ನೀಡುವ ಗುರಿಯನ್ನು ಕೇಂದ್ರ ರೇಷ್ಮೆ ಮಂಡಳಿ ಹೊಂದಿದೆ. ಇದಕ್ಕಾಗಿ ಸಮಗ್ರ ರೇಷ್ಮೆ ಅಭಿವೃದ್ಧಿ ಯೋಜನೆ ಅಡಿ ₹3 ಕೋಟಿ ಅನುದಾನವನ್ನೂ ಪಡೆದಿದೆ.
  • ಸಿ–2 ಹೆಸರಿನ ಎರಿ ರೇಷ್ಮೆ ಹುಳು ತಳಿ, ಸುಧಾರಿತ ಹಿಪ್ಪು ನೇರಳೆಯ ತಳಿ, ಚಂದೇರಿ ರೇಷ್ಮೆ ಸೀರೆಗಳ ಬಿಡುಗಡೆ ಮಾಡಲಾಯಿತು. ರೇಷ್ಮೆ ಹುಳುಗಳ ಸಾಕಾಣಿಕೆ, ನೂಲುವ ಯಂತ್ರ, ಸಿದ್ಧ ಉಡುಪುಗಳ ಪ್ರದರ್ಶನ ನಡೆಯುತ್ತಿದೆ.

ಪ್ರಶಸ್ತಿ ಪ್ರದಾನ[ಬದಲಾಯಿಸಿ]

  • ರೇಷ್ಮೆ ಮಂಡಳಿಯ ತಂತ್ರಜ್ಞಾನ ಕ್ಷೇತ್ರದ 10 ಮಂದಿ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

[೪]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. FOOD AND AGRICULTURE ORGANIZATION OF THE UNITED NATIONS
  2. "Sericulture in Karnataka". Archived from the original on 2017-04-20. Retrieved 2016-08-21.
  3. "ರೇಷ್ಮೆ ಬೆಳೆಗಾರರಿಗೆ ಮಾರಕವಾದ ಉದಾರೀಕರಣ". Archived from the original on 2016-08-17. Retrieved 2016-08-21.
  4. ರೇಷ್ಮೆಗೆ ವಾಣಿಜ್ಯ ಮೌಲ್ಯ ಕಂಡುಕೊಳ್ಳಿ