ಚಾರ್ ಮಿನಾರ್
ಚಾರ್ ಮಿನಾರ್ (ತೆಲುಗು:చార్ మినార్, ಹಿಂದಿ:चार मीनार, ಉರ್ದು: چار مینار,) ಎಂದರೆ "ನಾಲ್ಕು ಸ್ತಂಭಗೋಪುರಗಳ ಮಸೀದಿ" ಮತ್ತು "ನಾಲ್ಕು ಗೋಪುರಗಳು" ಎಂಬ ಅರ್ಥಗಳಿವೆ. ಇದು ಭಾರತದ ಆಂಧ್ರಪ್ರದೇಶ ರಾಜ್ಯದ ರಾಜಧಾನಿಯಾದ ಹೈದರಾಬಾದ್ ನಗರದಲ್ಲಿನ ಅತ್ಯಂತ ಪ್ರಸಿದ್ಧ ಮಸೀದಿ ಮತ್ತು ಸ್ಮಾರಕವಾಗಿದೆ.[೧]
ಪರಿವಿಡಿ |
ಇತಿಹಾಸ [ಬದಲಾಯಿಸಿ]
ಕುತ್ಬ್ ಷಾಹಿ ರಾಜವಂಶದ 5ನೇ ರಾಜನಾದ ಸುಲ್ತಾನ್ ಮುಹಮ್ಮದ್ ಕುಲಿ ಕುತ್ಬ್ ಷಾ ಎಂಬಾತ ಚಾರ್ ಮಿನಾರ್ ಅನ್ನು 1591ರಲ್ಲಿ[೨] ನಿರ್ಮಿಸಿದ; ತನ್ನ ರಾಜಧಾನಿಯನ್ನು ಗೋಲ್ಕೊಂಡದಿಂದ ಈಗ ಹೈದರಾಬಾದ್ ಎಂದು ಕರೆಯಲ್ಪಡುತ್ತಿರುವ ಪ್ರದೇಶಕ್ಕೆ ವರ್ಗಾಯಿಸಿದ ಕೆಲವೇ ದಿನಗಳಲ್ಲಿ ಅವನು ಈ ಸ್ಮಾರಕವನ್ನು ನಿರ್ಮಿಸಿದ.[೩] ಪ್ಲೇಗ್ ಸಾಂಕ್ರಾಮಿಕ ರೋಗವೊಂದು ಈ ನಗರದಿಂದ ತೊಲಗಿಸಲ್ಪಟ್ಟಿದ್ದರ ನೆನಪಿಗಾಗಿ ಅವನು ಈ ಪ್ರಸಿದ್ಧ ರಚನೆಯನ್ನು ನಿರ್ಮಿಸಿದ. ತನ್ನ ನಗರವನ್ನು ಹಾಳುಗೆಡವುತ್ತಿದ್ದ ಪ್ಲೇಗ್ ಒಂದರ ಅಂತ್ಯಕ್ಕಾಗಿ ಅವನು ಪ್ರಾರ್ಥಿಸಿಕೊಂಡ ಮತ್ತು ತಾನು ಪ್ರಾರ್ಥಿಸುತ್ತಿದ್ದ ಅದೇ ಸ್ಥಳದಲ್ಲಿಯೇ ಮಸ್ಜಿದ್ (ಇಸ್ಲಾಮಿನ ಮಸೀದಿ) ಒಂದನ್ನು ನಿರ್ಮಿಸುವುದಾಗಿ ಅವನು ಹರಸಿಕೊಂಡ ಎಂದು ಹೇಳಲಾಗುತ್ತದೆ. 1591ರಲ್ಲಿ ಚಾರ್ಮಿನಾರ್ಗೆ ಅಡಿಪಾಯವನ್ನು ಹಾಕುವಾಗ, ಕುಲಿ ಕುತ್ಬ್ ಷಾ ಹೀಗೆ ಪ್ರಾರ್ಥಿಸಿದ: ಓ ಅಲ್ಲಾಹ್, ಈ ನಗರಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ದಯಪಾಲಿಸು. ನೀರಿನಲ್ಲಿ ಮೀನುಗಳು ನೆಲೆಯನ್ನು ಕಂಡುಕೊಳ್ಳುವಂತೆ ಎಲ್ಲಾ ಜಾತಿಗಳು, ಮತಗಳು ಮತ್ತು ಧರ್ಮಗಳಿಗೆ ಸೇರಿದ ಲಕ್ಷಾಂತರ ಜನರು ಇದನ್ನು ತಮ್ಮ ನೆಲೆಯಾಗಿಸಿಕೊಳ್ಳುವಂತಾಗಲಿ." ಸದರಿ ಪ್ರಾರ್ಥನೆಯು ಉತ್ತರಿಸಲ್ಪಡುತ್ತಿರುವುದರ ಒಂದು ಪುರಾವೆಯಾಗಿ ಈ ನಗರವನ್ನು ಇಂದಿಗೂ ಒರ್ವರು ಕಾಣಬಹುದು. ಈ ಮಸೀದಿಯು ಹೊಂದಿದ್ದ ನಾಲ್ಕು (ಪರ್ಷಿಯನ್/ಹಿಂದಿ ಚಾರ್ = ನಾಲ್ಕು) ಸ್ತಂಭಗೋಪುರಗಳ (ಮಿನಾರ್ (ಅರಬ್ಬೀ ಭಾಷೆಯ ಮನಾರಾ) = ಶೃಂಗ/ಗೋಪುರ) ಕಾರಣದಿಂದಾಗಿ, ಇದು ಚಾರ್ಮಿನಾರ್ ಎಂದೇ ಜನಪ್ರಿಯವಾಗಿ ಕರೆಯಲ್ಪಟ್ಟಿತು.[೪]
ಈ ಕಟ್ಟಡ ರಚನೆಯು ಗ್ರಾನೈಟು, ಸುಣ್ಣ, ಗಾರೆಯಿಂದ ಮಾಡಲ್ಪಟ್ಟಿದೆ, ಮತ್ತು ಕೆಲವೊಬ್ಬರು ಹೇಳುವ ಪ್ರಕಾರ, ಪುಡಿಮಾಡಲ್ಪಟ್ಟ ಅಮೃತಶಿಲೆಯನ್ನೂ ಇದಕ್ಕೆ ಬಳಸಲಾಗಿದೆ; ಇದು ಹಿಂದೊಮ್ಮೆ ನಗರದ ಹೃದಯಭಾಗವಾಗಿತ್ತು. ಆರಂಭದಲ್ಲಿ ನಾಲ್ಕು ಕಮಾನುಗಳನ್ನು ಹೊಂದಿದ್ದ ಈ ಸ್ಮಾರಕವು ಎಷ್ಟು ಸೂಕ್ತ ಪ್ರಮಾಣದಲ್ಲಿ ಯೋಜಿಸಲ್ಪಟ್ಟಿತ್ತೆಂದರೆ, ಕೋಟೆಯನ್ನು ಪ್ರವೇಶಕ್ಕೆ ಮುಕ್ತವಾಗಿಸಿದ ಸಂದರ್ಭದಲ್ಲಿ, ಸಡಗರದಲ್ಲಿ ಸಂಭ್ರಮಿಸುತ್ತಿರುವಂತೆ ತೋರುವ ಹೈದರಾಬಾದ್ ನಗರದ ಒಂದು ಕ್ಷಣದರ್ಶನವನ್ನು ವೀಕ್ಷಕರು ಸೆರೆಹಿಡಿಯಲು ಸಾಧ್ಯವಿತ್ತು; ಪೂರ್ವಜರ ಕಾಲದ ಅತ್ಯಂತ ಭವ್ಯವಾದ ಬೀದಿಗಳಿಗೆ ಈ ಚಾರ್ ಮಿನಾರ್ ನ ಕಮಾನುಗಳು ಅಭಿಮುಖವಾಗಿ ಇದ್ದುದು ಇದಕ್ಕೆ ಕಾರಣವಾಗಿತ್ತು. ಗೋಲ್ಕೊಂಡದಲ್ಲಿನ ಅರಮನೆಯಿಂದ ಚಾರ್ ಮಿನಾರ್ ಗೆ ಸಂಪರ್ಕಿಸುವ ಒಂದು ನೆಲದಡಿಯ ಸುರಂಗವೂ ಅಲ್ಲಿದೆ ಎಂಬುದಾಗಿ ಒಂದು ಐತಿಹ್ಯವಿದ್ದು, ಪ್ರಾಯಶಃ ಇದು ಸೈನಿಕ ಕಾರ್ಯಾಚರಣೆಯೊಂದರ ಸಂದರ್ಭದಲ್ಲಿ ಕುತುಬ್ ಷಾಹಿ ರಾಜರು ತಪ್ಪಿಸಿಕೊಳ್ಳುವುದಕ್ಕಾಗಿ ಇದ್ದ ಮಾರ್ಗ ಎಂದು ಹೇಳಲಾಗುತ್ತದೆ; ಆದರೂ ಸಹ ಸುರಂಗದ ನಿಖರವಾದ ತಾಣವು ತಿಳಿದಿಲ್ಲ.[೫]
ನಿರ್ಮಾಣ [ಬದಲಾಯಿಸಿ]
ಇಸ್ಲಾಮಿನ ವಾಸ್ತುಶೈಲಿಯ ವೈಶಿಷ್ಟ್ಯದ ಶೈಲಿಯನ್ನು ಚಾರ್ ಮಿನಾರ್ ಹೊಂದಿದೆ.[೬] ಕಲಾಮೀಮಾಂಸೆಗೆ ನೀಡಲ್ಪಟ್ಟ ಈ ಮಹಾನ್ ಗೌರವ-ಕಾಣಿಕೆಯನ್ನು ಒಂದಷ್ಟು ಅಂತರದಿಂದ ನೋಡಿದಾಗ ಗಟ್ಟಿಮುಟ್ಟಾಗಿರುವ ಮತ್ತು ಘನವಾಗಿರುವ ರೀತಿಯಲ್ಲಿ ಕಾಣುತ್ತದೆಯಾದರೂ, ನಿಕಟವಾಗಿ ಸಮೀಪಿಸಿದಾಗ ಒಂದು ಲಾವಣ್ಯಮಯವಾದ ಮತ್ತು ರಮ್ಯವಾದ ಭವ್ಯಸೌಧವಾಗಿ ಅದು ಹೊರಹೊಮ್ಮುತ್ತದೆ ಹಾಗೂ ತನ್ನೆಲ್ಲಾ ವಿವರ ಮತ್ತು ಘನತೆಯ ರೂಪದಲ್ಲಿ ತನ್ನ ವಾಸ್ತುಶಿಲ್ಪೀಯ ಹಿರಿಮೆಯನ್ನು ಹೊರಗೆಡಹುತ್ತಿರುವಂತೆ ತೋರುತ್ತದೆ. ರಾತ್ರಿ ವೇಳೆಯಲ್ಲಿ ಚಾರ್ಮಿನಾರ್ಗೆ ಬೆಳಕು ಕೊಟ್ಟಾಗ ಅಷ್ಟೇ ಸರಿಸಮನಾಗಿ ನಯನ ಮನೋಹರವಾಗಿ ಕಾಣುತ್ತದೆ. ಇದು ನಗರದ ಸಾಂಸ್ಕೃತಿಕ ಪರಿಸರದ ಒಂದು ಪ್ರಮುಖ ಭಾಗವಾಗಿರುವುದು ಮಾತ್ರವಲ್ಲದೇ, ಒಂದು ಛಾಪಿನ ಹೆಸರಾಗಿಯೂ ಮಾರ್ಪಟ್ಟಿದೆ.
ಚಾರ್ ಮಿನಾರ್ ಒಂದು ಸುಂದರವಾದ ಮತ್ತು ಪ್ರಭಾವಶಾಲಿಯಾದ ಚೌಕ ಸ್ಮಾರಕವಾಗಿದೆ. ಇದರ ಪ್ರತಿಯೊಂದು ಪಾರ್ಶ್ವವೂ 20 ಮೀ.ನಷ್ಟು ಅಳತೆಯನ್ನು ಹೊಂದಿದ್ದು, ಪ್ರತಿಯೊಂದು ಮೂಲೆಯೂ ಒಂದು ಎತ್ತರವಾದ, ಚೂಪಾದ ಸ್ತಂಭಗೋಪುರವನ್ನು ಹೊಂದಿದೆ. ಆಕರ್ಷಕವಾಗಿ ಕೆತ್ತಲ್ಪಟ್ಟಿರುವ ಈ ನಾಲ್ಕು ಸ್ತಂಭಗೋಪುರಗಳು ನೆಲದಿಂದ ಮೇಲಕ್ಕೆ 48.7 ಮೀ.ನಷ್ಟು ಎತ್ತರಕ್ಕೆ ಮೇಲಕ್ಕೇರುತ್ತವೆ ಮತ್ತು ಸುತ್ತಲಿನ ಸಾಕಷ್ಟು ಮೈಲುಗಳಷ್ಟು ದೂರದಿಂದ ಕಾಣುವ ಭೂದೃಶ್ಯಕ್ಕೆ ಸಾಕ್ಷಿಯಾಗಿವೆ. ಪ್ರತಿಯೊಂದು ಸ್ತಂಭಗೋಪುರವೂ ನಾಲ್ಕು ಅಂತಸ್ತುಗಳನ್ನು ಹೊಂದಿದ್ದು, ಸ್ತಂಭಗೋಪುರದ ಸುತ್ತಲೂ ಇರುವ ಒಂದು ಸೂಕ್ಷ್ಮವಾಗಿ ಕೆತ್ತಲ್ಪಟ್ಟ ಉಂಗುರದಿಂದಾಗಿ ಇವು ಗಮನ ಸೆಳೆಯುತ್ತವೆ. ಚಾರ್ ಮಿನಾರ್ ನ ನಾಲ್ಕು ಸ್ತಂಭಗೋಪುರಗಳು ತಾಜ್ಮಹಲ್ನ ಸ್ತಂಭಗೋಪುರಗಳಿಗಿಂತ ಭಿನ್ನವಾಗಿದ್ದು, ಕೊಳವೆ ಕೊರೆದಿರುವ ಸ್ವರೂಪದಲ್ಲಿರುವ ಇವನ್ನು ಕಟ್ಟಡದ ಮುಖ್ಯ ರಚನೆಯಲ್ಲಿ ಅಡಕವಾಗಿರುವಂತೆ ನಿರ್ಮಿಸಲಾಗಿದೆ. ಸ್ತಂಭಗೋಪುರಗಳ ಒಳಭಾಗದಲ್ಲಿ ಸುರುಳಿಯಾಕಾರದ 149 ಮೆಟ್ಟಿಲುಗಳಿದ್ದು, ಓರ್ವರು ಇಲ್ಲಿ ತಲುಪುಬಹುದಾದ ಅತ್ಯುನ್ನತ ಘಟ್ಟವಾಗಿರುವ ತುದಿಯ ಮಾಳಿಗೆಗೆ ಸಂದರ್ಶಕರು ಹೋಗುವಲ್ಲಿ ಇವು ಮಾರ್ಗದರ್ಶನ ನೀಡುತ್ತವೆ; ತುದಿಯ ಮಾಳಿಗೆಯು ನಗರದ ಒಂದು ಪರಿದೃಶ್ಯದ ನೋಟವನ್ನು ಒದಗಿಸುತ್ತದೆ.[೭]
ಮಸೀದಿಯ ವಾಸ್ತವಿಕ ಭಾಗವು ನಾಲ್ಕು-ಮಹಡಿಯ ರಚನೆಯ ತುದಿಯ ಮಾಳಿಗೆಯನ್ನು ಆಕ್ರಮಿಸಿಕೊಳ್ಳುತ್ತದೆ. ಮ್ಯಾಡಮ್ ಬ್ಲಾವಾಟ್ಸ್ಕಿಯು ವರದಿ ಮಾಡುವ ಪ್ರಕಾರ, ಬ್ರಿಟಿಷ್ ಚಕ್ರಾಧಿಪತ್ಯದ ಆಡಳಿತದ ವತಿಯಿಂದ ಸದರಿ ಕಟ್ಟಡ ರಚನೆಯು ಅಫೀಮು ಮತ್ತು ತೀಕ್ಷ್ಣ ಸಿಹಿಮದ್ಯಗಳನ್ನು ಸಂಗ್ರಹಿಸಿಡುವ ಒಂದು ಉಗ್ರಾಣವಾಗಿ ಮಾರ್ಪಾಡುಗೊಳ್ಳುವುದಕ್ಕೆ ಮುಂಚಿತವಾಗಿ, ಪ್ರತಿಯೊಂದು ಮಾಳಿಗೆಯೂ ಕಲಿಕೆಯ ಒಂದು ಪ್ರತ್ಯೇಕ ಶಾಖೆಗಾಗಿ ಮೀಸಲಿರಿಸಲ್ಪಟ್ಟಿತ್ತು.[೮]
ಒಳಭಾಗದಿಂದ ಒಂದು ಗುಮ್ಮಟದ ರೀತಿಯಲ್ಲಿ ಕಾಣಿಸುವ ಕಮಾನು ಚಾವಣಿಯೊಂದು, ಒಂದರ ಮೇಲೆ ಮತ್ತೊಂದರಂತಿರುವ ಚಾರ್ಮಿನಾರ್ ಒಳಗಿನ ಎರಡು ಚಾವಣಿ ಹಾದಿಗಳಿಗೆ ಆಧಾರವಾಗಿ ನಿಲ್ಲುತ್ತದೆ. ಅವುಗಳ ಮೇಲೆ ಒಂದು ತಾರಸಿ ನೆಲವಿದ್ದು ಅದು ಮಾಳಿಗೆಯಾಗಿ ಪಾತ್ರವಹಿಸುತ್ತದೆ. ಇದಕ್ಕೆ ಕಲ್ಲಿನ ಉಪ್ಪರಿಗೆಯೊಂದರಿಂದ ಅಂಚುಕಟ್ಟಲಾಗಿದೆ. ಮರೆಮಾಡಲ್ಪಟ್ಟಿರುವ 45 ಪ್ರಾರ್ಥನಾ ಸ್ಥಳಾವಕಾಶಗಳನ್ನು ಮುಖ್ಯ ಚಾವಣಿಯು ಹೊಂದಿದ್ದು, ಮುಂಭಾಗದಲ್ಲಿರುವ ಒಂದು ದೊಡ್ಡದಾದ ಮುಕ್ತ ಸ್ಥಳಾವಕಾಶದಲ್ಲಿ ಶುಕ್ರವಾರದ ಪ್ರಾರ್ಥನೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗುವ ಜನರಿಗಾಗಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಕುತ್ಬ್ ಷಾಹಿ ಮತ್ತು ಅಸಾಫ್ ಜಾಹಿ ಆಳ್ವಿಕೆಯ ನಡುವಿನ ಮುಘಲ್ ಗವರ್ನರ್ ಆಡಳಿತದ ಸಂದರ್ಭದಲ್ಲಿ, ನೈಋತ್ಯ ಸ್ತಂಭಗೋಪುರವು ಸಿಡಿಲಿನ ಬಡಿತಕ್ಕೆ ಈಡಾದ ನಂತರ "ಚೂರುಚೂರಾಗಿ ಕೆಳಕ್ಕೆ ಬಿದ್ದಿತಾದರೂ", ಸುಮಾರು 60,000 ರೂಪಾಯಿಗಳ ವೆಚ್ಚದಲ್ಲಿ ಅದು "ತತ್ಕ್ಷಣವೇ ದುರಸ್ತಿಗೊಳಿಸಲ್ಪಟ್ಟಿತು" ಎಂದು ಹೇಳಲಾಗುತ್ತದೆ.[೧] 1824ರಲ್ಲಿ, ಸುಮಾರು 100,000 ರೂಪಾಯಿಗಳ ವೆಚ್ಚದಲ್ಲಿ ಈ ಸ್ಮಾರಕಕ್ಕೆ ಮತ್ತೊಮ್ಮೆ ಗಿಲಾವು ಮಾಡಲಾಯಿತು.
ಮಕ್ಕಾಹ್ ಮಸ್ಜಿದ್ ಎಂದು ಕರೆಯಲ್ಪಡುವ ಮತ್ತೊಂದು ಸುಂದರವಾದ ಮತ್ತು ಭವ್ಯ ಮಸೀದಿಯನ್ನು ಮೇಲ್ಮಟ್ಟದಲ್ಲಿದ್ದುಕೊಂಡು ನೋಡುವ ರೀತಿಯಲ್ಲಿ ಈ ಸ್ಮಾರಕವು ನೆಲೆಗೊಂಡಿದೆ.[೯] ಚಾರ್ಮಿನಾರ್ನ್ನು ಸುತ್ತುವರೆದಿರುವ ಪ್ರದೇಶವೂ ಸಹ ಅದೇ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಅಭಿವೃದ್ಧಿಶೀಲ ಮಾರುಕಟ್ಟೆಯೊಂದು ಈಗಲೂ ಚಾರ್ಮಿನಾರ್ ಸುತ್ತಮುತ್ತಲಲ್ಲಿ ನೆಲೆಗೊಂಡಿದ್ದು, ಅದು ಜನರನ್ನು ಆಕರ್ಷಿಸುತ್ತಿದೆ ಮತ್ತು ಇಲ್ಲಿನ ಪ್ರತಿಯೊಂದು ವರ್ಣನೆಯನ್ನೂ ಜಾಹೀರುಗೊಳಿಸುತ್ತಿದೆ. ಚಾರ್ಮಿನಾರ್ ಮಾರುಕಟ್ಟೆಯು ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಏನಿಲ್ಲವೆಂದರೂ 14,000 ಮಳಿಗೆಗಳನ್ನು ಹೊಂದಿತ್ತು; ಇಂದು ಚಾರ್ಮಿನಾರ್ ಸಮೀಪದಲ್ಲಿರುವ ಲಾಡ್ ಬಜಾರ್ ಮತ್ತು ಪಥೇರ್ ಗಟ್ಟಿ ಎಂದು ಕರೆಯಲ್ಪಡುವ ಪ್ರಸಿದ್ಧ ಮಾರುಕಟ್ಟೆಗಳು ಪ್ರವಾಸಿಗಳಿಗೂ ಮತ್ತು ಸ್ಥಳೀಯರಿಗೂ ಏಕಪ್ರಕಾರವಾಗಿ ಅಚ್ಚುಮೆಚ್ಚಿನ ತಾಣಗಳೆನಿಸಿವೆ; ರತ್ನಾಭರಣಗಳಿಗೆ ಸಂಬಂಧಿಸಿದಂತೆ, ಅದರಲ್ಲೂ ವಿಶೇಷವಾಗಿ ಅತ್ಯುತ್ಕೃಷ್ಟವಾದ ಬಳೆಗಳು ಮತ್ತು ಮುತ್ತುಗಳಿಗಾಗಿ ಇವು ಕ್ರಮವಾಗಿ ಹೆಸರು ಪಡೆದಿವೆ.
ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹೈದರಾಬಾದಿನ ಮುಸ್ಲಿಮರು, ಕರಾಚಿಯಲ್ಲಿನ ಬಹದಾರಾಬಾದ್ ನೆರೆಹೊರೆಯ ಮುಖ್ಯ ಹಾಯಿದಾರಿಯ ಬಳಿ ಚಾರ್ ಮಿನಾರ್ ಪ್ರತಿರೂಪವೊಂದನ್ನು 2007ರಲ್ಲಿ ನಿರ್ಮಿಸಿದರು.[೧೦]
ಇವನ್ನೂ ನೋಡಿ [ಬದಲಾಯಿಸಿ]
- ಕುತ್ಬ್ ಷಾಹಿ ರಾಜವಂಶ
- ಹೈದರಾಬಾದ್ನ ಇತಿಹಾಸ
- ಹೈದರಾಬಾದ್ನಲ್ಲಿನ ಪ್ರವಾಸಿ ಆಕರ್ಷಣೆಗಳು
- ಹೈದರಾಬಾದ್ ರಾಜ್ಯ
ಉಲ್ಲೇಖಗಳು [ಬದಲಾಯಿಸಿ]
- ↑ http://www.heraldscotland.com/life-style/travel-outdoors/richard-goslan-travels-to-india-1.1074175
- ↑ http://www.indianexpress.com/news/year-after-repair-rain-damages-charminar-minaret/674648/0
- ↑ Qutb Shahi Style (mainly in and around Hyderabad city). AP Government. ಮರುಕಳಿಸಿದ ದಿನಾಂಕ 2010-05-16.
- ↑ http://www.deccanherald.com/content/92742/rain-damages-charminar-minaret.html
- ↑ http://www.hindu.com/yw/2010/02/09/stories/2010020951491400.htm
- ↑ http://timesofindia.indiatimes.com/city/hyderabad/Heritage-tag-Govt-on-a-tightrope-walk/articleshow/6483208.cms
- ↑ http://www.dawn.com/weekly/dmag/archive/060730/dmag8.htm
- ↑ ಫ್ರಂ ದಿ ಕೇವ್ಸ್ ಅಂಡ್ ಜಂಗಲ್ಸ್ ಆಫ್ ಹಿಂದೂಸ್ತಾನ್ , H.P.ಬ್ಲಾವಾಟ್ಸ್ಕಿ. ಅರ್ಬಾನಾ, ಇಲಿನಾಯ್ಸ್ (USA): ಪ್ರಾಜೆಕ್ಟ್ ಗುಟೆನ್ಬರ್ಗ್ಇ-ಪಠ್ಯ #6687. 2004. ಪುಟ 265
- ↑ http://www.indianmuslims.info/news/2007/may/18/mecca_masjid_has_witnessed_protests_never_blast.html
- ↑ M. ರಫೀಕ್ ಜಕಾರಿಯಾ, ಚಾರ್ ಮಿನಾರ್ ಇನ್ ಕರಾಚಿ, ಡಾನ್, ಏಪ್ರಿಲ್ 22, 2007
ಬಾಹ್ಯ ಕೊಂಡಿಗಳು [ಬದಲಾಯಿಸಿ]
- ಚಾರ್ಮಿನಾರ್ನ ಪಕ್ಷಿನೋಟ
- HyderabadPlanet.comನಲ್ಲಿರುವ ಚಾರ್ಮಿನಾರ್ನ ಛಾಯಾಚಿತ್ರಗಳು
- ಚಾರ್ಮಿನಾರ್ ಮಾಹಿತಿ - ಚಾರ್ಮಿನಾರ್ ಕುರಿತಾದ ವೆಬ್ಸೈಟ್
- ವಿಕಿಟ್ರಾವೆಲ್ನಲ್ಲಿನ ಹೈದರಾಬಾದ್
- ಹೈದರಾಬಾದ್ನ ಒಂದು ಸಂಪೂರ್ಣ ಮಾಹಿತಿ
- ಹೈದರಾಬಾದ್ನ ಏಳು ಅದ್ಭುತಗಳು
- ಸಾಂಸ್ಕೃತಿಕ ಪರಂಪರೆ
- ಹೈದರಾಬಾದ್
- ಗೂಗಲ್ ಅರ್ತ್ ಮಾದರಿ
- ಹೈದರಾಬಾದ್ - ಐತಿಹಾಸಿಕ ಅದ್ಭುತಗಳು ಮತ್ತು ಆಕರ್ಷಣೆಗಳು