ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)
ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)
ಮತಕ್ಷೇತ್ರ ಮಂಡ್ಯ
ವೈಯಕ್ತಿಕ ಮಾಹಿತಿ
ಜನನ (1965-06-24) ೨೪ ಜೂನ್ ೧೯೬೫ (ವಯಸ್ಸು ೫೮)
ಮಂಡ್ಯ, ಕರ್ನಾಟಕ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಕುಸುಮ
ಜಾಲತಾಣ https://www.starchandru.com

ಸ್ಟಾರ್ ಚಂದ್ರು ಎಂದು ಸ್ಥಳೀಯವಾಗಿ ಕರೆಸಿಕೊಳ್ಳುವ ವೆಂಕಟರಮಣೇಗೌಡ ಅವರು ಕರ್ನಾಟಕ ರಾಜ್ಯದಲ್ಲಿ ಉದ್ಯಮಿಯಾಗಿದ್ದಾರೆ ಮತ್ತು 2024ರ ಲೋಕಸಭಾ ಚುನಾವಣೆಯ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘೋಷಿತ ಅಭ್ಯರ್ಥಿಯಾಗಿದ್ದಾರೆ. ವೆಂಕಟರಮಣೇಗೌಡ ಅವರು ಮಂಡ್ಯ ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದರು. ಇವರು ಬೆಂಗಳೂರಿನಲ್ಲಿ ತಮ್ಮ ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ಅವರು ಸ್ಥಾಪಿಸಿದ ʻಸ್ಟಾರ್ ಇನ್ಫ್ರಾಟೆಕ್’ ಸಂಸ್ಥೆಯು ಈಗ ಬೆಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಮಂದಿಗೆ ಉದ್ಯೋಗ ನೀಡುತ್ತಿದೆ.

ಬಾಲ್ಯ ಮತ್ತು ಕುಟುಂಬ ಜೀವನ[ಬದಲಾಯಿಸಿ]

ಸ್ಟಾರ್‌ ಚಂದ್ರು ಅವರು 1965ರ ಜೂನ್ 24ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ಬೆಳ್ಳೂರು ಹೋಬಳಿಗೆ ಸೇರಿದ ಕನ್ನಾಘಟ್ಟ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ದಿವಂಗತ ಹೊನ್ನೇಗೌಡ ಮತ್ತು ತಾಯಿ ಶ್ರೀಮತಿ ಗಂಗಮ್ಮ. ದಂಪತಿಯ ಮೂವರು ಗಂಡು ಮಕ್ಕಳಲ್ಲಿ ಮೊದಲನೆಯವರು ಕೆ.ಎಚ್.ಪುಟ್ಟಸ್ವಾಮಿಗೌಡ. ಎರಡನೆಯವರು ಕೆ.ಎಚ್. ವೆಂಕಟೇಶ್ ಹಾಗೂ ಮೂರನೆಯವರು ವೆಂಕಟರಮಣೇಗೌಡ ಅಂದರೆ ʻಸ್ಟಾರ್ ಚಂದ್ರು'. ಇವರ ಜೊತೆಗೆ ನಾಲ್ವರು ಸೋದರಿಯರಿದ್ದ ಕೂಡುಕುಟುಂಬದಲ್ಲಿ ಬೆಳೆದ ಸ್ಟಾರ್ ಚಂದ್ರು ಅವರಿಗೆ ಪತ್ನಿ ಕುಸುಮ ಮತ್ತು ಇಬ್ಬರು ಮಕ್ಕಳೂ ಇದ್ದಾರೆ. ಆದಿಚುಂಚನಗಿರಿಯ ಪರಿಸರದಲ್ಲಿ ಚಂದ್ರು ಅವರ ಬಾಲ್ಯ ಕಳೆಯಿತು. ಬೆಳ್ಳೂರು ಹೋಬಳಿಯ ಅಗಚಹಳ್ಳಿ ಮತ್ತು ಬೆಳ್ಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮುಗಿಸಿ, ಆದಿಚುಂಚನಗಿರಿಯಲ್ಲಿ ಪಿಯುಸಿ ಶಿಕ್ಷಣ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದರು. ಅವರು ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ, ಬಿಎಸ್ಸಿ ಪದವಿ ಪಡೆದಿದ್ದಾರೆ.

ಉದ್ಯಮಿಯಾಗಿ ಸ್ಟಾರ್‌ ಚಂದ್ರು[ಬದಲಾಯಿಸಿ]

ಸ್ಟಾರ್‌ ಚಂದ್ರು ಅವರು ಸುಮಾರು ಮೂರು ದಶಕಗಳ ಕಾಲ ಉದ್ಯಮಜೀವನದಲ್ಲಿದ್ದಾರೆ. ತಮ್ಮ ಪದವಿ ಶಿಕ್ಷಣ ಪಡೆದ ನಂತರ ಅವರಿಗೆ ಸರ್ಕಾರಿ ಉದ್ಯೋಗ ದೊರೆಯಿತು. ಆದರೆ ಅದಕ್ಕೆ ಸೇರಿಕೊಳ್ಳದ ವೆಂಕಟರಮಣೇಗೌಡ ಅವರು, ಆರಂಭದಲ್ಲಿ ತಮ್ಮ ಹಿರಿಯಣ್ಣ ಕೆ.ಎಚ್.ಪುಟ್ಟಸ್ವಾಮಿಗೌಡ ಅವರು ಆರಂಭಿಸಿದ್ದ ಉದ್ದಿಮೆಯಲ್ಲಿ ಕೈಜೋಡಿಸಿದರು. ನಂತರ ಸ್ವತಂತ್ರ ಉದ್ದಿಮೆ ʻಸ್ಟಾರ್ ಇನ್ಫ್ರಾಟೆಕ್’ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ ಅವರು, ’ಸ್ಟಾರ್ ಚಂದ್ರು’ ಎಂಬ ಹೆಸರಿನಿಂದ ಉದ್ಯಮ ಕ್ಷೇತ್ರದಲ್ಲಿ ಪರಿಚಿತರಾದರು.

’ಸ್ಟಾರ್ ಇನ್ಫ್ರಾಟೆಕ್’ ಸಂಸ್ಥೆಯು ಈಗ ಬೆಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಮಂದಿಗೆ ಉದ್ಯೋಗ ನೀಡುತ್ತಿದೆ. ಕರ್ನಾಟಕ ಸರ್ಕಾರದ ಅನೇಕ ನಿರ್ಮಾಣದ ಕಾಮಗಾರಿಗಳನ್ನು, ಮೂಲಭೂತ ಸೌಲಭ್ಯಗಳನ್ನು ಸಂಸ್ಥೆಯು ನಿರ್ಮಿಸಿ, ನಿರ್ವಹಿಸಿದೆ.

ಸಮಾಜ ಸೇವೆಯಲ್ಲಿ ಸ್ಟಾರ್ ಚಂದ್ರು[ಬದಲಾಯಿಸಿ]

ಮರಳಿಗ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರ ಜೊತೆಗೆ ಮಾತನಾಡುತ್ತ ಸ್ಟಾರ್ ಚಂದ್ರು.

ಸ್ಟಾರ್ ಚಂದ್ರು ಅವರು ತಮ್ಮ ಹಳ್ಳಿ ಮತ್ತು ಜಿಲ್ಲೆಯ ಶ್ರೇಯೋಭಿವೃದ್ಧಿಗಾಗಿ ತಮ್ಮ ಗ್ರಾಮದಲ್ಲಿ ಸಹೋದರನ ಜೊತೆಗೂಡಿ ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡುವುದರ ಜೊತೆಗೆ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಇಷ್ಟೆಲ್ಲಾ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರೂ, ಸ್ಟಾರ್ ಚಂದ್ರು ಪ್ರಚಾರದಿಂದ ದೂರವೇ ಇದ್ದಾರೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಅವರ ಶಿಕ್ಷಣಕ್ಕೆ ನೆರವಾಗಿದ್ದಾರೆ. ಮಾನಸಿಕ ಅಸ್ವಸ್ಥ ಮಕ್ಕಳ ಕೇಂದ್ರಕ್ಕೆ ಆಸರೆಯಾಗಿ ನಿಂತಿದ್ದಾರೆ. ಅನೇಕ ಸಂಘ ಸಂಸ್ಥೆಗಳ ಮಾನವೀಯ ಚಟುವಟಿಕೆಗಳಿಗೆ ಚಂದ್ರು ಅವರ ಕೊಡುಗೆ ಇದೆ.

ಕೊರೋನಾ ಸಾಂಕ್ರಾಮಿಕ ವೇಳೆ ಸ್ಟಾರ್ ಚಂದ್ರು ಸಾಮಾಜಿಕ ಬದ್ಧತೆ[ಬದಲಾಯಿಸಿ]

ತಮ್ಮ ಉದ್ಯಮದ ಯಶಸ್ಸಿಗೆ ಕಾರಣರಾಗಿದ್ದ ಕಾರ್ಮಿಕರನ್ನು ಅವರು ಕೊರೋನಾ ವೇಳೆಯಲ್ಲಿ ಕೈಬಿಡಲಿಲ್ಲ. ಕಾರ್ಮಿಕರನ್ನು ತಮ್ಮ ಉದ್ಯಮದ ಪ್ರಗತಿಯ ಪಾಲುದಾರರೆಂದು ಪರಿಗಣಿಸಿದ್ದ ಅವರು, ಕೊರೋನಾ ಕಾಲದಲ್ಲಿ ಕೆಲಸ ಸ್ಥಗಿತಗೊಂಡಾಗ ಮತ್ತೆ ಆರಂಭವಾಗುವವರೆಗೆ ಅವರಿಗೆ ವೇತನ ನೀಡುವ ಮೂಲಕ ಅವರ ಕುಟುಂಬಗಳಿಗೆ ಆಸರೆಯಾಗಿದ್ದರು. ಅಲ್ಲದೆ ಬೃಹತ್ ಮಟ್ಟದಲ್ಲಿ ಉಪಹಾರಗೃಹವೊಂದನ್ನು ನಿರ್ಮಿಸಿ, ಹಸಿವು ನೀಗಿಸುವ ದಾಸೋಹವನ್ನು ಮಾಡಿದ್ದಾರೆ.

ಕೃಷಿ ಪ್ರಧಾನ ತವರು ಜಿಲ್ಲೆಯ ರೈತರನ್ನು ರೈತೋದ್ಯಮಿಗಳಾಗಿಸುವ ಕನಸು[ಬದಲಾಯಿಸಿ]

ನಾಗಮಂಗಲದ ಶಾಸಕ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕೃಷಿ ಮಂತ್ರಿ ಚಲುವನಾರಾಯಣ ಸ್ವಾಮಿ ಅವರೊಂದಿಗೆ ಸ್ಟಾರ್ ಚಂದ್ರು

ರೈತರ ಮಕ್ಕಳು ಉದ್ಯಮಿಗಳಾಗಿ ಬೆಳೆಯಬೇಕೆಂಬುದು ಚಂದ್ರು ಅವರ ದೊಡ್ಡ ಕನಸು. ಅವರು ಕೇವಲ ಉದ್ಯೋಗಿಗಳಾಗದೆ, ಉದ್ಯಮಿಗಳಾದರೆ ಹಲವರಿಗೆ ಉದ್ಯೋಗದಾತರಾಗಬಹುದೆಂಬ ಉದ್ದೇಶದಿಂದ ಅವರು ಯುವಕರನ್ನು ತರಬೇತಿಗೊಳಿಸಲು ಕಾರ್ಯಾಗಾರ, ವಿಚಾರ ಸಂಕಿರಣ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬೆಂಬಲವಾಗಿ ನಿಂತಿದ್ದಾರೆ. ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನ ಪ್ರದೇಶವಾಗಿದ್ದರೂ, ಅವರ ಜೀವನ ನಿರ್ವಹಣೆಯು ಅಸ್ಥಿರತೆಯಿಂದಲೇ ಕೂಡಿರುತ್ತದೆ. ಇದೇ ಕಾರಣಕ್ಕೆ, ರೈತೋದ್ಯಮದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದರೆ ತನ್ನ ಮಣ್ಣಿನ ಜನರು ಕೂಡಾ ಸಮೃದ್ಧ ಜೀವನವನ್ನು ನಡೆಸುವಂತಾಗುತ್ತದೆ ಎಂಬುವುದು ಅವರ ಆಶಯ. ಈ ನಿಟ್ಟಿನಲ್ಲಿ ಸುಸ್ಥಿರ ಕೃಷಿ ಹಾಗೂ ತಂತ್ರಜ್ಞಾನ ಆಧಾರಿತ ಕೃಷಿಗೆ ಒತ್ತು ನೀಡಿ ಪ್ರಾಥಮಿಕ ವಲಯವನ್ನು ಇನ್ನಷ್ಟು ಬಲವರ್ಧನೆಗೊಳಿಸುವ ಯೋಜನೆಯನ್ನು ರೂಪಿಸಿಕೊಂಡಿದ್ದಾರೆ.

ರಾಜಕೀಯ ಹಿನ್ನೆಲೆ[ಬದಲಾಯಿಸಿ]

ಸ್ಟಾರ್ ಚಂದ್ರು ಅವರ ಒಬ್ಬ ಸಹೋದರ ಉದ್ಯಮಿಯಾಗಿ, ಮತ್ತೊಬ್ಬರು ಕೃಷಿಕರಾಗಿ ಯಶಸ್ಸು ಗಳಿಸಿದ್ದಾರೆ. ಆದರೆ ಅವರ ಕುಟುಂಬಕ್ಕೆ ರಾಜಕೀಯ ನಂಟು ಹೊಸದಲ್ಲ. ಹಿರಿಯ ಅಣ್ಣ ಕೆ.ಎಚ್.ಪುಟ್ಟಸ್ವಾಮಿಗೌಡರು 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕರಾದವರು. ಅವರ ಅಳಿಯ ಶರತ್ ಬಚ್ಚೇಗೌಡ ಹಾಲಿ ಶಾಸಕರಾಗಿದ್ದರೆ, ಅವರ ಬೀಗರಾದ ಹಿರಿಯ ರಾಜಕಾರಣಿ ಬಿ.ಎನ್.ಬಚ್ಚೇಗೌಡ ಅವರು ಸಂಸತ್ ಸದಸ್ಯರಾಗಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು[ಬದಲಾಯಿಸಿ]

ಉದ್ಯಮಿಯಾಗಿ ಯಶಸ್ಸು ಕಂಡಿರುವ ಸ್ಟಾರ್ ಚಂದ್ರು ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘೋಷಿತ ಅಭ್ಯರ್ಥಿಯಾಗಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  1. https://timesofindia.indiatimes.com/city/mysuru/eyes-firmly-set-on-mandya-congress-ticket-hopeful-chandru-hopes-for-a-star-turn/articleshow/108249914.cms
  2. https://vijaykarnataka.com/news/mandya/lok-sabha-election-2024-mandya-probable-congress-candidate-venkataramane-gowda-and-sharath-bache-gowda-are-relatives/articleshow/108293432.cms
  3. https://kannada.news18.com/photogallery/state/is-cm-and-dcm-finalized-mandya-congress-candidate-mrq-1558589.html
  4. https://www.vijayavani.net/mp-election-congress-candidate-mandya
  5. https://suddiyaana.com/star-chandru-candidate-for-mandya/
  6. https://bnnbreaking.com/politics/mandyas-electoral-battleground-star-chandru-and-sumalatha-vie-for-dominance-in-2024-lok-sabha-elections

ಉಲ್ಲೇಖಗಳು[ಬದಲಾಯಿಸಿ]