ಸದಸ್ಯ:Shrigouri.s.joshi/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ. ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಡಿಯಲ್ಲಿ ಆಳ್ವಾಸ್ ನುಡಿಸಿರಿ ಪ್ರತಿವರ್ಷವೂ ನಡೆದುಕೊಂಡು ಬರುತ್ತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಈ ನುಡಿಸಿರಿಯ ರೂವಾರಿ. ಸಾಹಿತ್ಯ,ಸಂಸ್ಕೃತಿಯ ಬಹುದೊಡ್ಡ ವೇದಿಕೆಯಾಗಿ ಆಳ್ವಾಸ್ ನುಡಿಸಿರಿ ಹೆಸರು ಮಾಡಿದೆ. ಕರ್ನಾಟಕದ ಸಂಸ್ಕೃತಿ ಹಾಗೂ ಭಾಷಾ ಶ್ರೀಮಂತಿಕೆಯನ್ನು ಬಿಂಬಿಸುವ ಕೆಲಸವನ್ನು ನುಡಿಸಿರಿ ಮಾಡುತ್ತಿದೆ.

ಹಿನ್ನೆಲೆ[ಬದಲಾಯಿಸಿ]

ಕನ್ನಡ ಭಾಷೆಗೆ ಸಂಬಂಧಿಸಿದ ಕಾರ್ಯಗಳನ್ನು ಕೇವಲ ಸರಕಾರ, ಅಕಾಡೆಮಿಗಳು ಮಾತ್ರ ಏಕೆ ಮಾಡಬೇಕು? ಒಬ್ಬ ಸಾಮಾನ್ಯ ಮನುಷ್ಯ ಕೂಡ ಕನ್ನಡಪರ ಕಾರ್ಯಗಳನ್ನು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಡಾ.ಮೋಹನ ಆಳ್ವರು ಆಳ್ವಾಸ್ ನುಡಿಸಿರಿಯನ್ನು ಆರಂಭಿಸಿದರು. ಪ್ರಥಮ ವರ್ಷದ ನುಡಿಸಿರಿಯು ೨೦೦೪ರಲ್ಲಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಿತು. ಖ್ಯಾತ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪನವರು ಮೊದಲ ನುಡಿಸಿರಿಯ ಸರ್ವಾಧ್ಯಕ್ಷತೆ ವಹಿಸಿದ್ದರು. ವಿದ್ಯಾಗಿರಿಯ ಕುವೆಂಪು ಸಭಾಂಗಣ, ರತ್ನಾಕರವಣಿ‍ ವೇದಿಕೆಯಲ್ಲಿ ಡಿಸೆಂಬರ್ ೧೭, ೧೮ ಮತ್ತು ೧೯ರಂದು ಪ್ರಥಮ ನುಡಿಸಿರಿ ನಡೆದಿತ್ತು.

೨೦೦೪ರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ನುಡಿಸಿರಿ ಹನ್ನೆರಡು ವರ್ಷಗಳನ್ನು ಪೂರೈಸಿದೆ. ಪ್ರತಿ ವರ್ಷವೂ ನಾಡಿನ ಖ್ಯಾತ ಸಾಹಿತಿಗಳು, ವಿದ್ವಾಂಸರು ನುಡಿಸಿರಿಯ ಸವಾ‍ಧ್ಯಕ್ಷತೆಯ ಪೀಠವನ್ನು ಅಲಂಕರಿಸಿದ್ದಾರೆ. ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಕಲಾಕ್ಷೇತ್ರದ ದಿಗ್ಗಜರಿಂದ ಹಿಡಿದು ಶ್ರೀಸಾಮಾನ್ಯರವರೆಗೂ ಸಾವಿರಾರು ಜನ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ನುಡಿಸಿರಿಯೂ ಒಂದೊಂದು ಮುಖ್ಯ ಪರಿಕಲ್ಪನೆಯಡಿಯಲ್ಲಿ ನಡೆಯುತ್ತದೆ. ಈ ಮುಖ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿಗಳು, ಚರ್ಚೆಗಳು ಖ್ಯಾತ ವಿದ್ವಾಂಸರಿಂದ ನಡೆಯುತ್ತವೆ.ಸಮ್ಮೇಳನದಲ್ಲಿ ಉದ್ಘಾಟಕರು ಹಾಗು ಸರ್ವಾಧ್ಯಕ್ಷರಿದ್ದು ಅವರ ಭಾಷಣಗಳೇ ನುಡಿಸಿರಿ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದೆ.

ಆಳ್ವಾಸ್ ನುಡಿಸಿರಿ ಪ್ರಶಸ್ತಿ[ಬದಲಾಯಿಸಿ]

ಸಾಹಿತ್ಯ, ಸಂಸ್ಕೃತಿ, ಕಲೆ, ಶಿಕ್ಷಣ, ಶಿಲ್ಪಕಲೆ, ಕೃಷಿ, ರಂಗಭೂಮಿ, ಜಾನಪದ, ಸಿನಿಮಾ, ಸಮಾಜಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಯನ್ನು ನೀಡಿದ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿಯು ರೂ. ೨೫,೦೦೦ ನಗದು, ಸ್ಮರಣಿಕೆ, ಪ್ರಶಸ್ತಿಪತ್ರಗಳನ್ನು ಒಳಗೊಂಡಿರುತ್ತದೆ. ಸಮಾರೋಪ ಸಮಾರಂಭದಂದು ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಸಮ್ಮೇಳನದ ಪರಿಕಲ್ಪನೆ[ಬದಲಾಯಿಸಿ]

ಪ್ರತಿವಷ‍ವೂ ಆಳ್ವಾಸ್ ನುಡಿಸಿರಿಯು ಒಂದು ಮುಖ್ಯಪರಿಕಲ್ಪನೆಯಡಿಯಲ್ಲಿ ನಡೆಯುತ್ತದೆ. ಕನ್ನಡ ಮನಸ್ಸನ್ನು ಕೇಂದ್ರವಾಗಿಟ್ಟುಕೊಂಡು ಸಾಹಿತ್ಯಿಕ-ಸಾಂಸ್ಕೃತಿಕ ಸವಾಲುಗಳು, ಬೌದ್ಧಿಕ ಸ್ವಾತಂತ್ರ್ಯ, ಪ್ರಚಲಿತ ಪ್ರಶ್ನೆಗಳು, ಸಾಹಿತಿಯ ಜವಾಬ್ದಾರಿ,ಶಕ್ತಿ ಮತ್ತು ವ್ಯಾಪ್ತಿ,ಸಮನ್ವಯದೆಡೆಗೆ, ಜೀವನ ಮೌಲ್ಯಗಳು,ಸಂಘರ್ಷ ಮತ್ತು ಸಾಮರಸ್ಯ, ಜನಪರ ಚಳವಳಿಗಳು, ಕನ್ನಡ ಮನಸ್ಸು:ಅಂದು-ಇಂದು-ಮುಂದು, ಕರ್ನಾಟಕ:ವರ್ತಮಾನದ ತಲ್ಲಣಗಳು, ಹೊಸತನದ ಹುಡುಕಾಟ ವಿಷಯಗಳ ಮೇಲೆ ಸಮ್ಮೇಳನಗಳನ್ನು ನಡೆಸಲಾಗಿದೆ. ಸಮ್ಮೇಳನದಲ್ಲಿ ನಡೆಯುವ ವಿಚಾರ ಗೋಷ್ಠಿಗಳು, ಚರ್ಚೆಗಳು, ಸಂವಾದಗಳು ಮುಖ್ಯ ಪರಿಕಲ್ಪನೆಗೆ ಅನುಸಾರವಾಗಿಯೇ ನಡೆಯುತ್ತವೆ. ಕವಿಸಮಯ-ಕವಿನಮನ ನುಡಿಸಿರಿಯ ಮತ್ತೊಂದು ಪ್ರಮುಖ ಆಕರ್ಷಣೆ. ಖ್ಯಾತನಾಮ ಕವಿಗಳ ಕವನಗಳಿಗೆ ರಾಗ ಸಂಯೋಜಿಸಿ,ಹಾಡುವ ಮೂಲಕ ಕವಿಗಳಿಗೆ ಸಂಸ್ಥೆಯ ವಿದ್ಯಾರ್ಥಿಗಳು ಗೌರವಿಸುತ್ತಾರೆ. ಇದರ ಜೊತೆಗೆ ಆ ಕವಿತೆಗಳಿಗೆ ನೃತ್ಯ ಸಂಯೋಜನೆಯನ್ನೂ ಮಾಡಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಗುತ್ತದೆ.

ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಗಳು ಈ ವಿಚಾರಗೋಷ್ಠಿಗಳಲ್ಲಿ ಹಾಗೂ ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆ. ನಾಡಿನ ಖ್ಯಾತನಾಮ ಸಾಹಿತಿಗಳು, ತಜ್ಞರು, ಕವಿಗಳು,ಕಥೆಗಾರರು, ವಿಚಾರವಾದಿಗಳು ನುಡಿಸಿರಿಯಲ್ಲಿ ಭಾಗವಹಿಸಿದ್ದಾರೆ. ಅವರಿಂದ ನಡೆಸಲ್ಪಟ್ಟ ಗೋಷ್ಠಿಗಳು, ವಿಚಾರ-ಚರ್ಚೆಗಳು ಸಾವಿರಾರು ಜನರ ಜ್ಞಾನದಾಹವನ್ನು ತಣಿಸಿವೆ.

ಸಾಂಸ್ಕೃತಿಕ ಕಾರ್ಯಕ್ರಮಗಳು[ಬದಲಾಯಿಸಿ]

ಆಳ್ವಾಸ್ ನುಡಿಸಿರಿ ಕೇವಲ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ, ಅದು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಸವವೂ ಹೌದು. ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ರಂಗಕ್ಕೆ ಸೇರಿದ ಕಲಾವಿದರಿಗೆ ಅಪೂರ್ವ ಅವಕಾಶವನ್ನು ನೀಡಿದೆ. ಕರ್ನಾಟಕದ ಸಾಂಪ್ರದಾಯಿಕ, ಜಾನಪದ, ರಂಗಭೂಮಿ ಕಲೆಗಳಿಗೆ ನುಡಿಸಿರಿ ಅತಿದೊಡ್ಡ ವೇದಿಕೆಯನ್ನು ಕಲ್ಪಿಸಿದೆ. ಬೆಳಗ್ಗೆ ವಿಚಾರಗೋಷ್ಠಿಗಳಿಗೆ ಮೀಸಲಾದ ವೇದಿಕೆಗಳು ಜೊತೆಗೆ ()-ಆರು ವೇದಿಕೆಗಳು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರೆದುಕೊಳ್ಳುತ್ತವೆ. ಯಕ್ಷಗಾನ, ಭರತನಾಟ್ಯ, ಕೂಚುಪುಡಿ, ಮೋಹಿನಿಯಟ್ಟಂ,