ಸದಸ್ಯ:Muhammadsafwanthurkalike/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದ್ಮಪ್ರಭ ಸ್ವಾಮಿ


ದೀಕ್ಷೆ[ಬದಲಾಯಿಸಿ]

ಧಾತಕೀಖಂಡದ ಪೂರ್ವವಿದೇಹದಲ್ಲಿ,ಸೀತಾನದಿಯ ದಕ್ಷಿಣಕ್ಕೆ ವತ್ಸದೇಶವಿದೆ. ಸುಸೀಮಾ ಅದರ ರಾಜಧಾನಿ.ಅಪರಾಜಿತನು ಅಲ್ಲಿಯ ರಾಜ. ಬಹುಕಾಲ ಧರ್ಮದಿಂದ ರಾಜ್ಯವನ್ನಾಳಿದ ಆತನಿಗೆ ಜಗತ್ತಿನ ಭೋಗಭಾಗ್ಯಗಳೆಲ್ಲ ನಶ್ವರವೆನಿಸಿತು.ಸುಮಿತ್ರನೆಂಬ ಪುತ್ರನಿಗೆ ರಾಜ್ಯವನ್ನಿತ್ತು ಆತನು ಜಿನದೀಕ್ಷೆಯನ್ನು ಕೈಗೊಂಡನು.ಸಮಾಧಿ ಮರಣದಿಂದ ಸತ್ತ ಆತನಿಗೆ ಊರ್ಧ್ವಗ್ರೈವೇಯಕದ ಪ್ರೀತಿಂಕರ ವಿಮಾನದಲ್ಲಿ ಅಹಮಿಂದ್ರಪದವಿ ದೊರೆಯಿತು.

ಜನನ[ಬದಲಾಯಿಸಿ]

ಅಪಾರ ಸುಖವನ್ನು ಬಹುಕಾಲ ಅನುಭವಿಸಿದ ಮೇಲೆ ಆತನು ಕೌಶಾಂಬಿ ನಗರದಲ್ಲಿ ಇಕ್ಷ್ವಾಕು ವಂಶೋತ್ಪನ್ನನಾದ ಧಾರಣ ಮಹಾರಾಜನ ಪತ್ನಿ ಸುಷೀಮಾದೇವಿಯ ಪುಣ್ಯ ಗರ್ಭದಲ್ಲಿ ಚರಮದೇಹಿಧಾರಿ ಯಾಗಿ, ಮಾಘ ಬಹುಳ ಷಷ್ಠಿಯ ಬೆಳಗಿನ ಜಾವ ಚಿತ್ರಾನಕ್ಷತ್ರ ಚಂದ್ರಸಂಯೋಗದಲ್ಲಿರುವ ಶುಭ ಮಹೂರ್ತದಲ್ಲಿ ಜನಿಸಿದನು.ದೇವೇಂದ್ರನು ಆತನಿಗೆ ಜನ್ಮಾಭಿಷೇಕ ಮಾಡಿ ಪದ್ಮಪ್ರಭನೆಂದು ನಾಮಕರಣ ಮಾಡಿದನು.ಸುಮತಿ ತೀರ್ಥಂಕರನು ಮುಕ್ತನಾಗಿ ತೊಂಭತ್ತು ಸಹಸ್ರ ವರ್ಷಗಳು ಕಳೆದ ಮೇಲೆ ಜನಿಸಿದ ಈ ಜಿನಕುಮಾರನು ಆರಕ್ತ ವರ್ಣನಾಗಿ ಇನ್ನೂರೈವತ್ತು ಬಿಲ್ಲುಗಳೆತ್ತರಕ್ಕೆ ಬೆಳೆದು ಯೌವನ ಪಡೆದನು.

ವೈರಾಗ್ಯ[ಬದಲಾಯಿಸಿ]

ಆತನು ಮೂವತ್ತು ಲಕ್ಷಪೂರ್ವ ವರ್ಷಗಳ ಆಯುಸ್ಸುಳ್ಳವನು.ಆತನು ಬಹುಕಾಲ ಐಹಿಕ ಸುಖಭಾಗ್ಯಗಳನ್ನೆಲ್ಲ ಸವಿಯುತ್ತಿರಲು, ಒಂದು ದಿನ ಆನೆಯೊಂದು ನೀರಿನ ಮಧ್ಯದಲ್ಲಿ ಸಿಕ್ಕಿಕೊಂಡಿರುವುದೆಂದು ಕೇಳಿ ವೈರಾಗ್ಯ ಉದಿಸಿತು. ದೇವತೆಗಳು ತಂದ ನಿವೃತ್ತಿ ಎಂಬ ಪಲ್ಲಕ್ಕಿಯನ್ನೇರಿ, ಮನೋಹರವೆಂಬ ವನದಲ್ಲಿ ಕಾರ್ತಿಕ ಕೃಷ್ಣ ತ್ರಯೋದಶಿಯ ಸಂಜೆ ಚಿತ್ರಾ ನಕತ್ರದಲ್ಲಿ ದೀಕ್ಷೆಯನ್ನು ವಹಿಸಿದನು. [೧]


ವೈರಾಗ್ಯ ಜೀವನ[ಬದಲಾಯಿಸಿ]

ಮನಃಪರ್ಯಯ ಜ್ಞಾನ ಉದಿಸಿದ ಮೇಲೆ ವರ್ಧಮಾನ ನಗರಿಯ ಸೋಮದತ್ತ ರಾಜನಿಂದ ಆಹಾರದಾನವನ್ನು ಪಡೆದನು. ಅನಂತರ ಪದ್ಮಪ್ರಭ ಸ್ವಾಮಿಯು ಆರು ತಿಂಗಳ ಮೌನದಲ್ಲಿ ತನ್ನ ಛದ್ಮಾವಸ್ಥೆಯನ್ನು ಕಳೆದನು.ಚೈತ್ರ ಶುಕ್ಲ ಪೂರ್ಣಿಮೆಯ ಮಧ್ಯಾಹ್ನ ಚಿತ್ರಾ ನಕತ್ರದಲ್ಲಿ ಆತನಿಗೆ ಕೇವ¯ಜ್ಞಾನವುಂಟಾಯಿತು.ಆನಂತರ ಪದ್ಮಪ್ರಭ ತೀರ್ಥಂಕರ ಸ್ವಾಮಿಯು ತನ್ನ ನೂರಹನ್ನೊಂದು ಗಣಧರರೊಡನೆ ಸಮವಸರಣ ಮಂಟಪದಲ್ಲಿ ವಿಹರಿಸುತ್ತಾ ಜಗತ್ತಿಗೆಲ್ಲ ಧರ್ಮಬೋಧೆ ಮಾಡಿದನು.

ನಿರ್ವಾಣ ಪದವಿ[ಬದಲಾಯಿಸಿ]

ಕಡೆಗೆ ಸಮ್ಮೇದ ಪರ್ವತದಲ್ಲಿ ಒಂದು ತಿಂಗಳ ಕಾಲ ಪ್ರತಿಮಾಯೋಗದಲ್ಲಿ ನಿಂತು, ಶುಕ್ಲಧ್ಯಾನ ದಿಂದ ಅಘಾತಿಕರ್ಮಗಳನ್ನು ನಾಶಮಾಡಿ ನಿರ್ವಾಣಪದವಿ ಯನ್ನು ಪಡೆದನು. ಈತನ ಚಹ್ನೆ ಕಮಲ. ಈತನ ಯಕ್ಷ-ಯಕ್ಷಿಣಿಯರು ಕುಸುಮವರ-ಮನೋವೇಗೀ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜುಶ್ರಿ ಪ್ರಿಂಟರ್ಸ್. p. ೪೩೧. {{cite book}}: More than one of |pages= and |page= specified (help)