ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Jesan dsouza/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುವ ಚೈತನ್ಯದ ಚಿಲುಮೆ - ಸ್ವಾಮಿ ವಿವೇಕಾನಂದ

ನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದ ಗಮನ ಸೆಳೆದಿದ್ದು ಕೇವಲ ೭ ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು ೧೮೯೩-೧೯೦೦ರ ನಡುವಿನ ಕೇವಲ ಸಪ್ತ ವರ್ಷಗಳಲ್ಲಿ. ಆ ಸಪ್ತ ವರ್ಷದಲ್ಲಿ ಅವರ ಕೀರ್ತಿ, ಖ್ಯಾತಿ ಸಪ್ತದ್ವೀಪಾ ವಸುಂದರಾ ಎನ್ನುವಂತೆ ಇಡೀ ವಿಶ್ವಕ್ಕೇ ಹಬ್ಬಿತ್ತು. ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ, ಇಂಗ್ಲೆಂಡ್, ಯುರೋಪ್ ಹಾಗೂ ಭಾರತದಲ್ಲಿ ಅವರು ಮಾಡಿದ ಭಾಷಣ, ಬರೆದ ಪತ್ರಗಳು, ನಡೆಸಿದ ಚರ್ಚೆ ಇಂದಿಗೂ ಆಕರ ಗ್ರಂಥಗಳಾಗಿವೆ. ವಿಶ್ವಜಾಗೃತಿಯ ಸೋಪಾನಗಳಾಗಿವೆ. ಹೀಗಾಗಿಯೇ ವಿಶ್ವ ಅವರನ್ನು ಯುಗಾಚಾರ್ಯ ಎಂದು ಗುರುತಿಸಿದ್ದು.

ಸ್ವಾಮಿ ವಿವೇಕಾನಂದರ ಬಗ್ಗೆ ಕಗ್ಗದ ಕವಿ ಶ್ರೇಷ್ಠ ಡಿ.ವಿ.ಜಿ. ಹೀಗೆ ಹೇಳುತ್ತಾರೆ:ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾ ಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದ ಸಂಚಾರ ಮಾಡತಕ್ಕದ್ದು, ಅದು ಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು, ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು. ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದ ಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ, ಒಂದು ಲಘುತೆ. ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ತ್ವ ಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದ ವಾಗ್ಧೋರಣೆ, ತದನುಗುಣವಾದ ಉತ್ತಾಲಧ್ವನಿ, ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ, ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ, ಹೃದಯವಿದ್ರಾವಕವಾದ ಗಾನಮಾಧುರ್ಯ ಇದೆಲ್ಲವೂ ಅವರಲ್ಲಿ ಸಮ್ಮಿಳಿತವಾಗಿದ್ದವು. ಈ ನಾನಾ ಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ’’.

ಡಿವಿಜಿ ಅವರ ಮನದಾಳದ ಈ ಮಾತುಗಳು ಇಡೀ ವಿವೇಕಾನಂದರ ಮೇರು ವ್ಯಕ್ತಿತ್ವವನ್ನು ಸಂಕ್ಷಿಪ್ತವಾಗಿ ಪರಿಚಯಿಸಿಬಿಡುತ್ತವೆ. ಅವರ ಅಭಿಪ್ರಾಯದ ಕೊನೆಯ ಸಾಲುಗಳು ಗುಣಶಕ್ತಿಗಳಿಗೆ ಕಿರೀಟಪ್ರಾಯವಾದದ್ದು ಶ್ರೀರಾಮಕೃಷ್ಣ ಪರಮಹಂಸ ಎಂಬುದನ್ನು ಸಾರುತ್ತವೆ. ನರೇಂದ್ರದತ್ತರು ವಿವೇಕಾನಂದರಾದದ್ದೇ ರಾಮಕೃಷ್ಣ ಪರಮಹಂಸರಿಂದ. ಬಾಲ್ಯದಿಂದಲೂ ದೇವರ ಅನ್ವೇಷಣೆಯಲ್ಲಿ ತೊಡಗಿದ್ದ ನರೇಂದ್ರದತ್ತರು ದೇವರಿದ್ದಾನೆಯೇ? ಅವನಿದ್ದಲ್ಲಿ ಅವನು ಯಾವ ರೀತಿ ಇದ್ದಾನೆ? ಇದ್ದರೆ ನಮಗೇಕೆ ಕಾಣುವುದಿಲ್ಲ ? ಮನುಷ್ಯನೊಂದಿಗೆ ಅವನ ಸಂಬಂಧವೇನು? ಎಲ್ಲೆಲ್ಲೂ ಅಕ್ರಮ, ಅನ್ಯಾಯ ತುಂಬಿರುವ ಈ ವಿಶ್ವವನ್ನು ಅವನು ನಿರ್ಮಿಸಿದನೇಕೆ? ಎಂಬಿತ್ಯಾದಿ ಪ್ರಶ್ನೆ ಕೇಳಿ ತಾಯಿ, ತಂದೆ, ಗುರುಗಳಿಗೆ ಇರುಸು ಮುರುಸು ಉಂಟು ಮಾಡುತ್ತಿದ್ದರು.

ಬಾಲ್ಯದಿಂದಲೂ ಬಲು ತಂಟೆಕೋರರಾಗಿದ್ದ ನರೇಂದ್ರ, ತಾಯಿ ಬೈದರೂ, ಹೊಡೆದರೂ ಜಗ್ಗುತ್ತಿರಲಿಲ್ಲ. ಆದರೆ, ತಲೆಯ ಮೇಲೆ ತಾಯಿ ನೀರು ಚುಮುಕಿಸಿ ಶಿವಶಿವ ಎಂದರೆ ಮಂತ್ರಮುಗ್ಧರಾದವರಂತೆ ತಟಸ್ಥರಾಗಿಬಿಡುತ್ತಿದ್ದರು. ನರೇಂದರು ಚಿಕ್ಕವರಾಗಿದ್ದಾಗ, ಒಂದು ದಿನ ಬೆಳಗ್ಗೆ ತಾಯಿಗೆ ಹನುಮಂತ ಎಲ್ಲಿದ್ದಾನೆ ತೋರಿಸು ಎಂದು ಹಠ ಹಿಡಿದರು, ಆಗ ತಾಯಿ ಊರಂಚಿನ ಬಾಳೆಯ ತೋಟದಲ್ಲಿದ್ದಾನೆ ಎಂದು ಹೇಳಿ ಕಾಟ ತಪ್ಪಿಸಿಕೊಂಡರು. ಆದರೆ ತಾಯಿಯ ಮಾತನ್ನು ವೇದ ವಾಕ್ಯ ಎಂದು ತಿಳಿದ ನರೇಂದ್ರರು ಬಾಳೆಯ ತೋಟಕ್ಕೆ ಹೋಗಿ ಹುಡುಕಾಡಿದರು, ಹನುಮನಿಗಾಗಿ ಕಾದು ಕುಳಿತರು. ಸಂಜೆಯಾಯಿತು, ರಾತ್ರಿಯಾಯಿತು ವಿಚಲಿತರಾಗದೆ ಆಂಜನೇಯ ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದರು. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಹುಡುಕಾಡಿದ ತಾಯಿ ಭುವನೇಶ್ವರಿ ದೇವಿ ಬಾಳೆಯ ತೋಟಕ್ಕೆ ಹೋಗಿ, ಶ್ರೀರಾಮದೇವರ ಆಣತಿಯ ಮೇರೆಗೆ ಹನುಮ ಇಂದು ಬೇರೆಡೆ ಹೋಗಿದ್ದಾನೆ ಇನ್ನೊಂದು ದಿನ ಕಾಣಿಸುತ್ತಾನೆ ಬಾ ಎಂದು ಮಗನನ್ನು ಸಮಾಧಾನ ಮಾಡಿ ಮನೆಗೆ ಕರೆತಂದರು. ತನ್ನ ಮಾತಿನ ಬಗ್ಗೆ, ದೇವರ ಬಗ್ಗೆ ಮಗನಿಗಿರುವ ನಂಬಿಕೆಗೆ ತಾಯಿ ಅವಕ್ಕಾಗಿದ್ದರು. ಹೀಗೆ ಭಗವಂತನ ಅನ್ವೇಷಣೆಯಲ್ಲಿದ್ದ ನರೇಂದ್ರರಿಗೆ ಭಗವಂತನಿದ್ದಾನೆಂಬ ಉತ್ತರ ಸಿಕ್ಕಿದ್ದು, ಭಗವತ್ ಸಾಕ್ಷಾತ್ಕಾರವಾಗಿದ್ದು ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣರ ಶಿಷ್ಯರಾದ ಬಳಿಕ. ಕಾಳಿದೇವಿಯನ್ನು ದೇವರೆಂದು ಒಪ್ಪಿದ ನರೇಂದ್ರರನ್ನು ೧೮೮೬ರಲ್ಲಿ ಪರಮಹಂಸರು ಕೆಲಕಾಲ ನಿರ್ವಿಕಲ್ಪ ಸಮಾಧಿ ಸ್ಥಿತಿಯಲ್ಲಿರಿಸಿ ದೈವಸಾಕ್ಷಾತ್ಕಾರ ಮಾಡಿಸಿದ್ದರು. ೧೮೮೭ರ ಜನವರಿಯಲ್ಲಿ ವಿರಾಜಹೋಮ ಮಾಡಿ ಸನ್ಯಾಸ ಸ್ವೀಕರಿಸಿದ ನರೇಂದ್ರರು ಮೊದಲಿಗೆ ಸಚ್ಚಿದಾನಂದ ಎಂಬ ಹೆಸರು ಪಡೆದರು, ನಂತರ ವಿವಿಧೀಶಾನಂದ ಎಂಬ ಹೆಸರು ಪಡೆದು ದೇಶ ಪರ್ಯಟನೆ ಮಾಡಿದರು. ೧೮೯೨ರಲ್ಲಿ ಕನ್ಯಾಕುಮಾರಿಗೆ ಬಂದು ಕೊರೆಯುವ ಚಳಿಯಲ್ಲಿ ಸಮುದ್ರದಲ್ಲಿ ಈಜಿ ಕನ್ಯಾಕುಮಾರಿಯ ಬೆಟ್ಟದ ಮೇಲೆ ಶಿಲೆಯಂತೆ ನಿಂತು ಅಖಂಡ ಭಾರತವನ್ನು ಅಡಿಯಿಂದ ಮುಡಿಯವರೆಗೆ ದರ್ಶಿಸಿದರು. ಭಾರತಾಂಬೆಯ ಸಂದೇಶ ಆಲಿಸಿದರು. ಅಮೆರಿಕದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರ್ಧಾರ ಮಾಡಿದರು. ಆಗ ಈ ವಿದೇಶ ಪ್ರವಾಸಕ್ಕೆ ನೆರವು ನೀಡಿದ ಖೇತಡಿಯ ಮಹಾರಾಜ ಅಜಿತ್‌ಸಿಂಹ ತಮ್ಮಲ್ಲಿ ವಿವೇಕವನ್ನೂ ಮತ್ತು ದರಿದ್ರ ನಾರಾಯಣನ ಸೇವೆಯಲ್ಲಿ ಆನಂದವನ್ನು ಪಡೆಯುತ್ತಿದ್ದ ವಿವಿಧೀಶಾನಂದ(ನರೇಂದ್ರ)ರಿಗೆ ವಿವೇಕಾನಂದ ಎಂಬ ಹೆಸರು ನೀಡಿದರು.

ಹೊಸ ಸೂರ್ಯನ ಉದಯ: ಅಜಿತ ಸಿಂಹರ ಆರ್ಥಿಕ ನೆರವು ಪಡೆದು ೧೮೯೩ರ ಮೇ ೩೧ರಂದು ಮುಂಬೈ ಬಂದರಿನಿಂದ ಹೊರಟು ಚೀಣಾ, ಹಾಂಕಾಂಗ್ ಮತ್ತು ಜಪಾನ್ ಮಾರ್ಗವಾಗಿ ಅಮೆರಿಕಕ್ಕೆ ತಲುಪಿದ ವಿವೇಕಾನಂದರು ೧೮೯೩ರ ಸೆಪ್ಟೆಂಬರ್ ೧೧ರಂದು ಸೋಮವಾರ ಶಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೆಲವೇ ನಿಮಿಷಗಳ ಭಾಷಣ ಅವರನ್ನು ಯುಗಪುರುಷನನ್ನಾಗಿ ಮಾಡಿತು. ಭಾರತದ ಸನಾತನ ಧರ್ಮದ ಹಿರಿಮೆ ವಿಶ್ವಕ್ಕೇ ತಿಳಿಯಿತು. ಅಂದು ವಿಶ್ವದಲ್ಲಿ ಹೊಸ ಸೂರ್ಯನ ಉದಯವಾಗಿತ್ತು.