ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಸನ ಜಿಲ್ಲೆಯ ಜೀವನದಿ ಎನಿಸಿರುವ ಹೇಮಾವತಿ ತಟದಲ್ಲಿ ಕಂಗೊಳಿಸುವ ಪಟ್ಟಣ ಸಿರಿಯನ್ನು ಹೊಂದಿದ ಹೊಳೇನರಸೀಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಭಕ್ತರ ಆಕರ್ಷಣೆಯ ಕೇಂದ್ರಬಿಂದು.

ವಶಿಷ್ಟ ಮಹಾ ಋಷಿಗಳ ತಪೋಸಿದ್ದಿಗೆ ಒಲಿದ ವಿಷ್ಣುವಿನ ಅವತಾರಗಳಲ್ಲಿ ಒಂದಾದ ಶ್ರೀ ಲಕ್ಷ್ಮೀ ಸಮೇತ ನರಸಿಂಹಸ್ವಾಮಿಯ ಆರಾಧನೆಗೆಂದೇ ಸ್ಥಾಪಿತವಾದ ಅಂಗರಕಡ್ಡಿ ಮಂಟಪವೇ ದೇವಾಲಯದ ಮೂಲ ಎನ್ನುವ ಐತಿಹಾಸಿಕ ಹಿನ್ನಲೆ ಇಲ್ಲಿನದು. ಹೇಮಾವತಿ ಹೊಳೆ ಹರಿಯುತ್ತಿರುವ ಮತ್ತು ನೃಸಿಂಹ ದೇವಾಲಯದ ಸಂಗಮ ಕ್ಷೇತ್ರವಾದ್ದರಿಂದ ಹೊಳೆನರಸೀಪುರಎಂಬ ಹೆಸರಿನಿಂದ ಪ್ರಚಲಿತವಾಗಿದೆ.

೧೦೦೫ ರ ಸುಮಾರಿಗೆ ಇಲ್ಲಿ ಹೊಯ್ಸಳ ಸಾಮ್ರಾಜ್ಯದ ಸಾಮಂತ ನರಸಿಂಹನಾಯಕ ಎಂಬ ಪಾಳೇಗಾರನ ಆಳ್ವಿಕೆ ಕಾಲದಲ್ಲಿ ನಿರ್ಮಾಣಕಂಡಿದೆ. ೧೧೬೭ ರಲ್ಲಿ ಪ್ರಜಾರಕ್ಷಣೆಯ ಉದ್ದೇಶದಿಂದ ಕೋಟೆ ನಿರ್ಮಾಣ ಕಂಡಿದ್ದು, ನಂತರ ೧೧೯೯ ರಲ್ಲಿ ಹೊಯ್ಸಳ ದೊರೆಗಳ ಪೈಕಿ ೩ ನೇ ನರಸಿಂಹನು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಅಭಿವೃದ್ದಿಗೊಳಿಸುವ ಹಿನ್ನಲೆಯಲ್ಲಿ ಮೂರು ಪ್ರತ್ಯೇಕ ಗರ್ಭಗುಡಿಯನ್ನು ಸ್ಥಾಪಿಸಿ ಉತ್ತರಾಭಿಮುಖವಾಗಿ ಶ್ರೀಮನ್ನಾರಾಯಣಸ್ವಾಮಿ, ಉತ್ತರಾಭಿಮುಖವಾಗಿ ಶ್ರೀವೇಣುಗೋಪಾಲಸ್ವಾಮಿ ಹಾಗೂ ಪಶ್ಚಿಮಾಭಿಮುಖವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿದನು. ಇದರಿಂದಾಗಿಯೇ ಮೂರು ದೇವರುಗಳ ತ್ರಿಕೂಟಾಚಲ ಸನ್ನಿದಿ ಎಂಬ ಹಿರಿಮೆಗೆ ಪಾತ್ರವಾದದ್ದು. ಹೊಯ್ಸಳ ಸಾಮ್ರಾಜ್ಯದ ಫತನದ ನಂತರ ಆಳ್ವಿಕೆಗೆ ಬಂದ ವಿಜಯನಗರ ಅರಸರ ಆಸ್ಥಾನದ ಮಹಾಮಂತ್ರಿ ಮಲ್ಲರಸ ೧೪೩೮ ರಲ್ಲಿ ದೇವಾಲಯದ ಮುಖ್ಯ ದ್ವಾರದಲ್ಲಿ ವಿಮಾನಗೋಪುರ ಹಾಗೂ ಗರ್ಭಗುಡಿಗಳ ಮೇಲ್ಬಾಗದಲ್ಲಿ ರಜಗೋಪುರಗಳನ್ನು ಕಟ್ಟಿಸಿ ದೇವಾಲಯದ ಆಕರ್ಷಣೆ ಮೆರೆದಿತು.