ವ್ಯಾಸರಾಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವ್ಯಾಸತೀರ್ಥರು ಇಂದ ಪುನರ್ನಿರ್ದೇಶಿತ)

ಶ್ರೀ ವ್ಯಾಸರಾಯರು (ಕ್ರಿ.ಶ.೧೪೪೭ -೧೫೪೮)
'ಕನ್ನಡ ಭಾಷೆಯಲ್ಲಿ ದೇವರ ನಾಮಗಳನ್ನು ಬರೆದು ಬರೆಯಿಸಿ ತನ್ನ ಗುರು ಶ್ರೀಪಾದರಾಯರ ಹೊಸ ಸಂಪ್ರದಾಯವನ್ನು ಶ್ರದ್ಧೆಯಿಂದ ಅವರು ಮುಂದುವರೆಸಿದರು.ದೇವರಿಗೆ ಕನ್ನಡ ಅರ್ಥವಾಗುತ್ತೆ ಎಂದು ಪಂಡಿತರಿಗೆ ಮನದಟ್ಟು ಮಾಡಿದರು'. ಕನ್ನಡನಾಡಿನ ಭವ್ಯ ಸಂಸ್ಕೃತಿಯನ್ನು ವಿಜಯ ನಗರ ಆಳರಸರ ಕಾಲದಲ್ಲಿ ರಾಜ ಗುರುಗಳಾಗಿ ರಕ್ಷಿಸಿದ್ದಾರೆ.ಇವರು ತಮ್ಮ ಕೀರ್ತನೆಗಳ ಮೂಲಕ ಸಾಮಾನ್ಯ ಜನರಲ್ಲಿ ಹರಿ ಭಗವದ್ಭಕ್ತಿಯನ್ನು ನೀಡಿದ್ದಾರೆ.ಈ ಅಂಶವನ್ನು ಸಂಗೀತ ಶಾಸ್ತ್ರಜ್ಞ ತುಳಜಾಜಿ ಮಹಾರಾಜರು ತನ್ನ ಕೃತಿ ಸಂಗೀತ ಸಾರಮೃತದಲ್ಲಿ ವ್ಯಾಸರಾಯರನ್ನು ಸಂಗೀತ ವಿದ್ಯಾ ಸಂಪ್ರದಾಯದ ಪ್ರವರ್ತಕರೆಂದು ಕರೆದು ಗೌರವಿಸಿದ್ದಾರೆ.ಅವರು ಕನ್ನಡ ಪದ್ಯಗಳನ್ನು ತಮ್ಮ ವ್ಯಾಸಪೀಠದಲ್ಲಿಟ್ಟು ಪಂಡಿತರ ಬಾಯಿಕಟ್ಟಿ ಅದಕ್ಕೆ ಪುರಂದರೋಪನಿಷತ್ತು ಎಂಬ ಮನ್ನಣೆ ನೀಡಿದ ಮಹೋನ್ನತ ಗುರುಗಳಿವರು.

ಜೀವನ[ಬದಲಾಯಿಸಿ]

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.

ಕಾಲವಾದ ಸ್ಥಳ ಮತ್ತು ದಿನ[ಬದಲಾಯಿಸಿ]

ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆ ಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳು[ಬದಲಾಯಿಸಿ]

ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. /ಹರಿಸರ್ವೋತ್ತಮ ವಾಯು ಜೀವೋತ್ತಮ /

ಕೀರ್ತನೆಗಳು[ಬದಲಾಯಿಸಿ]

 ೧.ಕೊಳಲನೂದುವ ಚದುರನ್ಯಾರೆ ನೋಡಮ್ಮ|ಪ|
  ತಳಿರಂತೆ ತಾ ಪೊಮೆಲೊ ಕರದಿ ಪಿಡಿದು|| ಅ.ಪ||.

 ೨.ಎನ್ನ ಬಿಂಬ ಮೂರುತಿಯ ಪೂಜಿಪೆ ನಾನು.ಪ. ಮನಮುಟ್ಟಿ ಅನುದಿನ ಮರೆಯದೆ ಮರೆಯದೆ||ಅ.ಪ||.

ಗಾತ್ರವೆ ಮಂದಿರ ಹೃದಯವೆ ಮಂಟಪ.
ನೇತ್ರವೆ ಮಹದೀಪ
ಹಸ್ತ ಚಾಮರವು.
ಯಾತ್ರೆಯೆ ಪ್ರದಕ್ಷಿಣೆ ವಾಯುನೆಲೆ ನಮಸ್ಕಾರ.
ಶ್ರೋತ್ರ ಮಾತುಗಳೆಲ್ಲ ಮಂತ್ರಗಳು|೧|.

೩.ಕಾಣದೆ ನಿಲ್ಲಲಾರದೆ ಕಾಮಿನೀಯ ಮೂರುತಿಯ ಪ್ರಾಣೀಶನ ತೋರಿದೆ ಗಿಣಿಯೆ.
ಮಾಣಿಕ್ಯ ಪದಕವನ್ನು ಮನ್ನಿಸಿ ನಿನಗೀವೆ.
ಜಾಣ ಕೃಷ್ಣ ತೋರಿದೆ ಗಿಣಿಯೆ|ಅ.ಪ|.
 
೪.ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನ. ಹೀನ ವಿಷಯಗಳು ಶ್ವಾನನಂತಿರುವೆ|ಪ|.

                          
೫.ಹರಿದಾಸರ ಸಂಗಕ್ಕೆ ಸರಿಯುಂಟೆ
ಗುರು ಕರುಣೆ ಇನ್ನು ಪಡಿಯುಂಟೆ ದೇವ|ಪ|/

ದಾವಾನಲವ ತಪ್ಪಿಸಿ ಕಾಡಾನೆಯ ದೇವಗಂಗೆಗೆ ತಂದು ಹೊಗಿಸಿದಂತೆ ಆವರಿಸಿರುವ ಷಡ್ವರ್ಗ ತಪ್ಪಿಸಿ ಎನ್ನಶ್ರೀವರನ ಕರುಣಾರಸದಿ ತೋಯಿಸುವ.||ಪ||./

                             

ಉಗಾಭೋಗಗಳು[ಬದಲಾಯಿಸಿ]

೧• ಜಾರತ್ವದಲಿ ಮಾಡಿದ ಪಾಪಗಳಿಗೆಲ್ಲ
ಗೋಪೀಜನಜಾರನೆಂದರೆ ಸಾಲದೇ

ಚೋರತ್ವದಲಿ ಮಾಡಿದ ಪಾಪಗಳಿಗೆಲ್ಲ

ನವನೀತ ಚೋರನೆಂದರೆ ಸಾಲದೇ

ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ

ಮಾವನ ಕೊಂದವನೆಂದರೆ ಸಾಲದೇ

ಪ್ರತಿ ದಿವಸ ಮಾಡಿದ ಪಾಪಗಳಿಗೆಲ್ಲ

ಪತಿತಪಾವನನೆಂದರೆ ಸಾಲದೇ

ಇಂತಿಪ್ಪ ಮಹಿಮೆಯೊಳೊಂದನಾದರೂ ಒಮ್ಮೆ

ಸಂತತ ನೆನೆವರ ಸಲಹುವ ಸಿರಿಕೃಷ್ಣ


೨• ನಿನ್ನ ಎಂಜಲನುಟ್ಟು ನಿನ್ನ ಬೆಳ್ಳುಡೆಯುಟ್ಟು

ಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆ

ನಿನ್ನ ಓಲೈಸಲೇಕೋ ಕೃಷ್ಣ

ಸಂಚಿತವನುಂಡು ಪ್ರಪಂಚದೊಳಗೆ ಬಿದ್ದು

ನಿನ್ನ ಓಲೈಸಲೇಕೋ ಕೃಷ್ಣ

ದಿನಕರನುದಿಸಿ ಕತ್ತಲು ಪೋಗದಿದ್ದರೆ

ಹಗಲೇನೋ ಇರುಳೇನೂ ಕುರುಡಗೆ ಸಿರಿಕೃಷ್ಣ

ಉಲ್ಲೇಖಗಳು[ಬದಲಾಯಿಸಿ]