ವಿದುಷಿ. ಜಟ್ಟಿ ತಾಯಮ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭರತನಾಟ್ಯ ನಮ್ಮ ದೇಶದ ಸುಂದರ ನೃತ್ಯ ಪ್ರಕಾರಗಳಲ್ಲಿ ಒಂದು. ೧೯ ನೇ ಶತಮಾನದವರೆಗೆ ದೇವಸ್ಥಾನಗಳಲ್ಲಿ ದೇವರ ಸೇವೆಗಾಗಿಯೇ ದೇವದಾಸಿಯರನ್ನು ಹಲವರು ತಮ್ಮ ತಮ್ಮ ಮನೆಗಳಿಂದ ಒಪ್ಪಿಸುತ್ತಿದ್ದರು. ರಾಜರ ಆಸ್ಥಾನಗಳಲ್ಲಿ ಅವರ ಆಸ್ಥಾನದ ಪ್ರಮುಖರ ಮನರಂಜನೆಯ ಪ್ರಕಾರವಾಗಿ ಪ್ರದರ್ಶಿತಗೊಳ್ಳುತ್ತಿದ್ದ ಭರತನಾಟ್ಯ ೨೦ ನೇ ಶತಮಾನದಲ್ಲಿ ಪರಿಪೂರ್ಣ ಪ್ರದರ್ಶಕ ಕಲೆಯಾಗಿ ರೂಪಗೊಂಡಿತು. ಸಂಗೀತ, ನೃತ್ಯ ಮತ್ತು ಚಿತ್ರಕಲೆಗಳ ಆರಾಧಕರಾಗಿದ್ದ ಮೈಸೂರು ಮಹಾರಾಜರುಗಳು ಭರತನಾಟ್ಯಕ್ಕೆ ರಾಜಾಶ್ರಯ ನೀಡಿದರು. ೨೦ ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಮೈಸೂರಿನಲ್ಲಿ ವಿಭಿನ್ನ ಶೈಲಿಯ ಗುರುಗಳ ವಿಭಿನ್ನ ಪರಂಪರೆಯ ಭರತನಾಟ್ಯ ಪ್ರಕಾರಗಳು ತಲೆಯೆತ್ತಿದವು. ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ, ಮುಗೂರು ಅಮೃತಪ್ಪ,, ಮೂಗೂರು ಜೇಜಮ್ಮ,, ಕೋಲಾರ ಸುಬ್ಬಣ್ಣ,, ಯಜಮಾನ ಕಿಟ್ಟಣ್ಣ, ಮತ್ತು ಪುಟ್ಟಪ್ಪ, ,ನಂಜನಗೂಡು ದಾಸಪ್ಪ , ಮತ್ತು ರಾಜಮ್ಮ ,ಮತ್ತಿತರ ನೃತ್ಯ ದಿಗ್ಗಜರು ತಮ್ಮದೇ ಪರಂಪರೆಯ ಶಿಷ್ಯರನ್ನು ಸೃಷ್ಟಿಸಿದ್ದರು. ಪ್ರಸ್ತುತ ಕರ್ನಾಟಕದಲ್ಲಿ ಮೈಸೂರು, ಮೂಗೂರು (ಟಿ. ನರಸೀಪುರ ತಾಲ್ಲೂಕು), ನಂಜನಗೂಡು ಮತ್ತು ಕೋಲಾರ ಪರಂಪರೆಯ ನೃತ್ಯ ಪ್ರಕಾರಗಳಿವೆ.

ಜಟ್ಟಿ ತಾಯಮ್ಮ ನವರ ಪರಿಚಯ[ಬದಲಾಯಿಸಿ]

'ಜಟ್ಟಿ ತಾಯಮ್ಮ' ಎಂದು ಸುಪ್ರಸಿದ್ಧರಾಗಿದ್ದ ಮೈಸೂರು ರಾಜರ ಆಸ್ಥಾನ ನರ್ತಕಿಯೆಂದು ಮೈಸೂರಿನ ಮನೆ ಮನೆಗಳಲ್ಲಿ ಮಾತಾಗಿದ್ದ ಮೈಸೂರು ಪರಂಪರೆಯ ನೃತ್ಯಾಂಗನೆ, ೨೦ ನೆಯ ಶತಮಾನದಲ್ಲಿ ವಿದೇಶದಲ್ಲಿ ಹೆಸರುಮಾಡಿದ್ದ ಉದಯಶಂಕರ್, ರಾಮಗೋಪಾಲ, ರಂತಹ ನೃತ್ಯ ಪಟುಗಳ ಗುರುವಾಗಿದ್ದವರು. ಅವರಿಗೆ ಅತಿ ಆಪ್ತ ಶಿಷ್ಯೆಯಾಗಿದ್ದವರಲ್ಲಿ ವೆಂಕಟಲಕ್ಷ್ಮಮ್ಮನವರು, ಪ್ರಮುಖರು. ಆ ಸಮಯದಲ್ಲಿ ಮೈಸೂರು ಪರಂಪರೆಯ ನಾಟ್ಯವನ್ನು ಕಲಿಯಲು ತಮಿಳುನಾಡಿನಿಂದ ಅನೇಕ ಭರತನಾಟ್ಯ ವಿದ್ಯಾರ್ಥಿಗಳು ಅವರ ಬಳಿಗೆ ಬರುತ್ತಿದ್ದರು. ಜಟ್ಟಿ ತಾಯಮ್ಮನೆಂದು ಬಹಳ ಜನಪ್ರಿಯರಾಗಿದ್ದ ನರ್ತಕಿಯ ಮನೆ ಹೆಸರು, 'ಲಕ್ಷ್ಮೀದೇವಮ್ಮ' ಎಂದು.

ಜನನ, ಭರತನಾಟ್ಯ ಕಲಾವಿದೆಯಾಗಿ ರೂಪಗೊಂಡಿದ್ದು[ಬದಲಾಯಿಸಿ]

ಮೈಸೂರರಸರ ಕಾಲದಲ್ಲಿ ಆಸ್ಥಾನ ನರ್ತಕಿಯಾಗಿ ಪ್ರಸಿದ್ಧರಾದ ಮೈಸೂರಿನ ಸಾಂಸ್ಕ್ರುತಿಕ ವಲಯದಲ್ಲಿ ಒಂದು ಧ್ರುವತಾರೆಯಂತೆ ಶೋಭಿಸುತ್ತಿದ್ದರು.ಮೈಸೂರಿನಲ್ಲಿ ೧೮೫೭ ರ ಅಕ್ಟೋಬರ್, ೧೮ ರಂದು ಜನಿಸಿದರು. ತಂದೆ, 'ದಾಸಾ ಜಟ್ಟಪ್ಪ', ತಂದೆಯವರೇ ಮೊದಲ ಗುರು. ೬ ನೆಯ ವಯಸ್ಸಿನಲ್ಲಿ ಸಂಗೀತ, ನೃತ್ಯ ಕಲೆಗಳು ಅವರಿಗೆ ಬಹಳ ಇಷ್ಟವಾಯಿತು. ಮುಂದೆ, 'ಉಪಾದೃ' ಎಂಬ ಗುರುವಿನಿಂದ ಭಕ್ತಿಗೀತೆಗಳನ್ನು ಕಲಿತರು. ವ್ಯಾಕರಣ ಶಾಸ್ತ್ರ, ಸಂಸ್ಕೃತ ಪಾಠಗಳನ್ನು 'ಪಂ.ಎಂ . ಸುಬ್ರಮಣ್ಯ ಶಾಸ್ತ್ರಿ'ಗಳಿಂದ ಕಲಿತುಕೊಂಡರು. ಆಗಿನ ಕಾಲದ ಶ್ರೇಷ್ಠ ವಾಗ್ಗೇಯಕಾರರಲ್ಲೊಬ್ಬರಾಗಿದ್ದ ಮೈಸೂರು ವಾಸುದೇವಾಚಾರ್ಯ ರ ಬಳಿ, ಸಂಗೀತ ಅಭ್ಯಾಸ ಮಾಡಿದ್ದರು.

ರಾಜ ನರ್ತಕಿ[ಬದಲಾಯಿಸಿ]

ಚಾಮರಾಜೇಂದ್ರ ಒಡೆಯರು, ವಿದುಷಿ ಜಟ್ಟಮ್ಮ ನವರ ಅದ್ಭುತ ನಾಟ್ಯ ಭಂಗಿಗಳನ್ನು ವೀಕ್ಷಿಸಿ, ಬಹಳ ಪ್ರಭಾವಿತರಾಗಿ ತಮ್ಮ ರಾಜಾಸ್ಥಾನದ ವಿದುಷಿಯನ್ನಾಗಿ ನೇಮಿಸಿದರು. ನಾಲ್ಮಡಿ ಕೃಷ್ಣರಾಜ ಒಡೆಯರ ವಿವಾಹ ೧೯೦೦ ರಲ್ಲಿ ಜರುಗಿದಾಗ, ವಿದುಷಿ. ಜಟ್ಟಿ ತಾಯಮ್ಮ ನವರು ನೃತ್ಯ ಪ್ರದರ್ಶನ ನೀಡಿ ರಸಿಕರೆಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಜಟ್ಟಿ ತಾಯಮ್ಮ, ಉತ್ತಮ ಕಲಾವಿದೆಯಲ್ಲದೆ ಒಳ್ಳೆಯ ಶಿಕ್ಷಕಿಯೆಂದು ಪ್ರಸಿದ್ಧರು. ಗುರುಕುಲ ಪದ್ಧತಿಯಲ್ಲಿ ಶಿಷ್ಯೆಯರನ್ನು ತರಪೇತುಗೊಳಿಸುತ್ತಿದ್ದರು. ಆ ಕಾಲದಲ್ಲಿ ನರ್ತಕಿಯರಿಗೆ ಹಾಡು ಸಹಿತ ಬಹಳ ಪ್ರಧಾನವಾದ ಅಂಗವೆಂದು ಪರಿಗಣಿಸಲಾಗಿತ್ತು. ರಾಗ, ತಾಳ, ಶೃತಿ, ಕಲಿತ ಬಳಿಕವೇ ನರ್ತನಾಭ್ಯಾಸಕ್ಕೆ ಒಪ್ಪಿಗೆ ಸಿಗುತ್ತಿತ್ತು. ಜಟ್ಟಿ ತಾಯಮ್ಮ ನವರ ಶಿಷ್ಯ-ಶಿಷ್ಯೆಯರು :

ತಮಿಳುನಾಡಿನಿಂದ ಬಹಳ ವಿದ್ಯಾರ್ಥಿಗಳು ಬರುತ್ತಿದ್ದರು.

ಮೈಸೂರು ಪರಂಪರೆಯ ನೃತ್ಯ ಶೈಲಿ[ಬದಲಾಯಿಸಿ]

ಜಟ್ಟಿ ತಾಯಮ್ಮ ನವರು ಮೈಸೂರು ಪರಂಪರೆಯ ಕಲೆಯನ್ನು ಅಭಿವೃದ್ಧಿಗೊಳಿಸಿ ಅದನ್ನು ಪ್ರಗತಿಯ ಪಧದಲ್ಲಿ ಕೊಂಡೊಯ್ದರು. ಅಭಿನಯಕ್ಕೆ ಅತ್ಯಂತ ಮಹತ್ವವನ್ನು ಕೊಡಲಾಗುತ್ತದೆ. ಗೀತ ಗೋವಿಂದ, ನೀತಿ ಶತಕ, ಮುಕುಂದ ಮಾಲಾ ಮತ್ತು ಕೆಲವು ಅಪರೂಪದ ಕನ್ನಡ ಕೃತಿಗಳನ್ನು ಸಮರ್ಥವಾಗಿ ದುಡಿಸಿಕೊಂಡು ಪೂರ್ವರಂಗ ವಿಧಿಯನ್ನು ಅಭಿನಯಿಸಲಾಗುತ್ತದೆ. ಈ ಶೈಲಿಯನ್ನು ಮುಂದುವರೆಸಿಕೊಂಡು ಬಂದ ಶ್ರೇಷ್ಠ ನೃತ್ಯಪಟುಗಳಲ್ಲಿ ಪದ್ಮ ಭೂಷಣ ಕೆ. ವೆಂಕಟಲಕ್ಷಮ್ಮ ನವರು ಬಹಳ ಮಹತ್ವದ ವ್ಯಕ್ತಿಯಾಗಿದ್ದಾರೆ. ಇದೇ ಶೈಲಿಯಲ್ಲಿ ಅವರು ತಮ್ಮ ಸಾರಥ್ಯದಲ್ಲಿ ನೂರಾರು ನೃತ್ಯಪಟುಗಳನ್ನು ಸಜ್ಜುಗೊಳಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ.

ಹಿಂದೂಸ್ಥಾನಿ ಸಂಗೀತದಲ್ಲೂ ಆಸಕ್ತರು[ಬದಲಾಯಿಸಿ]

ದಕ್ಷಿಣಾದಿ ಸಂಗೀತಜ್ಞೆಯಾಗಿದ್ದ, ಜಟ್ಟಿ ತಾಯಮ್ಮ ನವರು, ಹಿಂದೂಸ್ಥಾನಿ ಸಂಗೀತದಲ್ಲೂ ನಿಷ್ಣಾತರಾಗಿದ್ದರು. ಸುಪ್ರಸಿದ್ಧ ಗಾಯಕ, ಗೊಹರ್ ಜಾನ್ ರಿಂದ ಠುಮ್ರಿ, ಘಜಲ್, ಕಲಿತರು. ಮಹಾರಾಜಾ ಕಾಲೇಜಿನಲ್ಲಿ ಒಂದು ಭರತನಾಟ್ಯ ಸಮಾರಂಭದಲ್ಲಿ ಆಯೋಜಿಸಲಾಗಿತ್ತು. ಡಾ. ಎಸ್. ರಾಧಾಕೃಷ್ಣನ್ ಆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಲ್ಪಟ್ಟಿದ್ದರು.ಸರ್ವೆಪಲ್ಲಿ ರಾಧಾಕೃಷ್ಣನ್ ಜಟ್ಟಿತಾಯಮ್ಮನವರ ಮೇರು ನೃತ್ಯ ಶೈಲಿ,ಯನ್ನು ಕಂಡು ಮೂಕವಿಸ್ಮಿತರಾಗಿ, ಅವರಿಗೆ 'ನಾಟ್ಯ ಸರಸ್ವತಿ' ಎಂಬ ಬಿರುದನ್ನು ಪ್ರದಾನಮಾಡಿದರು. ಜಟ್ಟಿ ತಾಯಮ್ಮ ನವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಗೌರವಗಳನ್ನಿತ್ತು ಗೌರವಿಸಿವೆ.