ವಿಜಯನಾರಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯನಾರಸಿಂಹ
ಜನನಜುಲೈ ೧೨, ೧೯೨೭
ಹಳೇಬೀಡು, ಪಾಂಡವಪುರ, ಮಂಡ್ಯ
ಮರಣಅಕ್ಟೋಬರ್ ೩೧, ೨೦೦೧
ವೃತ್ತಿಗೀತರಚನೆಕಾರ

ವಿಜಯನಾರಸಿಂಹ (೧೨, ಜುಲೈ ೧೯೨೭ - ೩೧, ಅಕ್ಟೋಬರ್ ೨೦೦೧), ಕನ್ನಡ ಚಲನಚಿತ್ರರಂಗದ ಪ್ರಮುಖ ಗೀತರಚನಕಾರರಲ್ಲಿ ಒಬ್ಬರು. ಚಲನಚಿತ್ರಗಳಿಗೆ ಅವರು ರಚಿಸಿದ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ.

ಜೀವನ[ಬದಲಾಯಿಸಿ]

ವಿಜಯನಾರಸಿಂಹ ಅವರು ಜುಲೈ ೧೨, ೧೯೨೭ ರಂದು ಮಂಡ್ಯದ ಹಳೇಬೀಡು ಎಂಬ ಹಳ್ಳಿಯಲ್ಲಿ ಹುಟ್ಟಿದರು. ಚಿಕ್ಕಂದಿನಿಂದಲೇ ನಾಟಕ-ಕಾದಂಬರಿ ಬರೆವ ಹವ್ಯಾಸ ರೂಢಿಸಿಕೊಂಡ ವಿಜಯನಾರಸಿಂಹ, ಕವಿಗಳಾದ ಪು.ತಿ.ನ, ಗೋಪಾಲ ಕೃಷ್ಣ ಅಡಿಗರಂಥ ಸಾಹಿತಿಗಳ ನಿಕಟವರ್ತಿಯಾಗಿದ್ದವರು. ಕೆಲವು ಕಾಲ ಪತ್ರಕರ್ತರಾಗಿಯೂ ದುಡಿದರು.

ಮೊದಲ ಹಾಡು[ಬದಲಾಯಿಸಿ]

೧೯೫೩ರಲ್ಲಿ ಜಿ.ಕೆ.ವೆಂಕಟೇಶ್ ಓಹಿಲೇಶ್ವರ ಚಿತ್ರಕ್ಕೆ ವಿಜಯನಾರಸಿಂಹ ಅವರನ್ನು ಚಿತ್ರಸಾಹಿತಿಯಾಗಿ ಕರೆತಂದರು. ಆ ಚಿತ್ರಕ್ಕೆ ವಿಜಯನಾರಸಿಂಹರು ಬರೆದ ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’ ಎಂಬುದು ಅವರ ಮೊದಲ ಚಿತ್ರಗೀತೆಯಾಗಿ, ಇಂದಿಗೂ ಪ್ರಸಿದ್ಧಿಯಾಗಿದೆ.

ಕೆಲವು ಜನಪ್ರಿಯ ಹಾಡುಗಳು[ಬದಲಾಯಿಸಿ]

‘ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ’, 'ನೋಡು ಬಾ ನೋಡು ಬಾ ನಮ್ಮೂರ', ‘ಪಂಚಮವೇದ ಪ್ರೇಮದ ನಾದ’, ‘ಬಾರೆ ಬಾರೆ ಚಂದದ ಚೆಲುವಿನ ತಾರೆ’, ‘ಆಸೆಯ ಭಾವ ಒಲವಿನ ಜೀವ’, ‘ವಸಂತ ಬರೆದನು ಒಲವಿನ ಓಲೆ’, ‘ವಿರಹಾ ನೂರು ನೂರು ತರಹ’, ‘ಆಡೋಣಾ ನೀನು ನಾನು’, ‘ನೀತಿವಂತ ಬಾಳಲೇ ಬೇಕು’, ‘ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ’, ‘ಭಾರತ ಭೂಶಿರ ಮಂದಿರ ಸುಂದರಿ’, ‘ಆ ದೇವರೆ ನುಡಿದ ಮೊದಲ ನುಡಿ’, ‘ಯಾವ ತಾಯಿಯು ಹಡೆದ ಮಗಳಾದರೇನು’, ‘ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ’, ‘ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ’, ‘ಸಂದೇಶ ಮೇಘ ಸಂದೇಶ’, ‘ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ’, ‘ನಿಲ್ಲು ನಿಲ್ಲೇ ಪತಂಗ’, ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ’, ‘ಕಾಪಾಡು ಶ್ರೀಸತ್ಯನಾರಾಯಣ’, ‘ಟೂ ಟೂ ಟೂ ಬೇಡಪ್ಪ ಓಡಿ ಬಂದು ನನ್ನ ಸಂಗ ಕಟ್ಟಪ್ಪ’, ‘ಸಂಗಮ ಅನುರಾಗ ಸಂಗ ಸಂಗಮ’, ‘ಸೇವಂತಿಗೆ ಚಂಡಿನಂತ ಮುದ್ದು ಕೋಳಿ’, ‘ನಗುವಿನ ಅಳುವಿನ ಸಂಕೋಲೆ’, ‘ಬಂದಿದೆ ಬದುಕಿನ ಬಂಗಾರದಾ ದಿನ’, ‘ಹನಿ ಹನಿಗೂಡಿದ್ರೆ ಹಳ್ಳ’ , ‘ಏನೇ ಸುಬ್ಬಿ ತುಂಬ ಕೊಬ್ಬಿ’, ‘ಹಿಂದೂಸ್ಥಾನವು ಎಂದೂ ಮರೆಯದ’, ‘ನೀನೇ ಸಾಕಿದಾ ಗಿಣಿ’, ‘ಕೇಳು ಮಗುವೆ ಕಥೆಯಾ ಆಸೆ ತಂದ ವ್ಯಥೆಯಾ’, 'ಸಕಲ ಕಾರ್ಯ ಕಾರಣಗೆ ಸಾಷ್ಟಾಂಗ ವಂದನೆ' ಮುಂತಾದ ಸಾವಿರಾರು ಹಾಡುಗಳನ್ನು ವಿಜಯನಾರಸಿಂಹ ಬರೆದಿದ್ದಾರೆ.

ಭಕ್ತಿಗೀತೆಗಳು[ಬದಲಾಯಿಸಿ]

ಭಕ್ತಿಗೀತೆಗಳ ರಚನೆಗೂ ಹೆಸರಾದ ವಿಜಯನಾರಸಿಂಹ ಅವರು ಸಾಕಷ್ಟು ಧ್ವನಿಸುರುಳಿಗಳಿಗೆ ಹಾಡುಗಳನ್ನು ಬರೆದಿದ್ದಾರೆ. ಇವತ್ತಿಗೂ ಜನಪ್ರಿಯವಾಗಿರುವ `ಗಜಮುಖನೆ ಗಣಪತಿಯೆ ನಿನಗೆ ವಂದನೆ’ ಅಂತಹ ಜನಪ್ರಿಯ ಭಕ್ತಿಗೀತೆಗಳಲ್ಲಿ ಒಂದು.

ಗದ್ಯ ಬರಹ[ಬದಲಾಯಿಸಿ]

ವಿಜಯನಾರಸಿಂಹ ಅವರು ಕಾದಂಬರಿಕಾರರೂ ಹೌದು. ಬದುಕಿನ ಭೈರಾಗಿ, ಶ್ರೀಮಾನ್ ಚಕ್ರಾಯಣ ಕಾದಂಬರಿಗಳ ಜೊತೆಗೆ ಪುಟ್ಟಣ್ಣ ಕಣಗಾಲ್ ಬದುಕನ್ನೂ ಪುಸ್ತಕವಾಗಿಸಿದ್ದಾರೆ.

ವಿದಾಯ[ಬದಲಾಯಿಸಿ]

೩೧ ಅಕ್ಟೋಬರ್ ೨೦೦೧ರಂದು ವಿಜಯನಾರಸಿಂಹ ನಿಧನರಾದರು.