ಬಿ. ಚಂದ್ರಶೇಖರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೊ. ಬಿ. ಚಂದ್ರಶೇಖರ್
ಜನನಮೇ ೧೬, ೧೯೧೬
ಮರಣಡಿಸೆಂಬರ್ ೧೩, ೨೦೦೦
ಉದ್ಯೋಗಪ್ರಾಧ್ಯಾಪಕರು, ರಂಗಕರ್ಮಿ

ಪ್ರೊ.ಬಿ. ಚಂದ್ರಶೇಖರ್ (ಮೇ ೧೬,೧೯೧೬ - ಡಿಸೆಂಬರ್ ೧೩.೨೦೦೦) ಕರ್ನಾಟಕ ಹವ್ಯಾಸಿ ರಂಗಭೂಮಿಯಲ್ಲಿ ಪ್ರಸಿದ್ಧ ಹೆಸರು.

ಜೀವನ[ಬದಲಾಯಿಸಿ]

ನಟ, ನಿರ್ದೇಶಕ, ನಾಟಕಕಾರ, ರಂಗತಜ್ಞ, ರಂಗ ಶಿಕ್ಷಕರಾಗಿದ್ದ ಚಂದ್ರಶೇಖರ್‌ ಅವರು ಮೇ ೧೬, ೧೯೧೬ರ ವರ್ಷದಲ್ಲಿ ಹಾಸನದಲ್ಲಿ ಜನಿಸಿದರು. ಅವರ ತಂದೆ ಪ್ರಸಿದ್ಧ ವಕೀಲರಾಗಿದ್ದ ಬೆಳವಾಡಿ ರಾಮಸ್ವಾಮಯ್ಯನವರು ಮತ್ತು ತಾಯಿ ಗುಂಡಮ್ಮನವರು. ಹಾಸನ, ಬೆಂಗಳೂರು, ಮೈಸೂರುಗಳಲ್ಲಿ ಚಂದ್ರಶೇಖರರ ವಿದ್ಯಾಭ್ಯಾಸ ನೆರವೇರಿತು. ಇಂಗ್ಲಿಷ್‌ನಲ್ಲಿ ಬಿ.ಎ. (ಆನರ್ಸ್), ಎಂ.ಎ. ಪದವಿ ಪಡೆದ ಚಂದ್ರಶೇಖರ್ ಅವರು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ ತುಮಕೂರು, ಮೈಸೂರು, ಬೆಂಗಳೂರಿನ ಸೆಂಟ್ರಲ್ ಕಾಲೇಜ್‌ಗಳಲ್ಲಿ ಪ್ರಾಧ್ಯಾಪನ ನಡೆಸಿದರು.

ರಂಗತಜ್ಞರಾಗಿ[ಬದಲಾಯಿಸಿ]

ಬೆಂಗಳೂರು ವಿಶ್ವವಿದ್ಯಾಲಯ ಆರಂಭಿಸಿದ ನಾಟಕ, ನೃತ್ಯ, ಸಂಗೀತದ ವಿಷಯದಲ್ಲಿ ಕರ್ನಾಟಕಕ್ಕೆ ಅನ್ವಯವಾಗುವಂತಹ ರಂಗ ಶಿಕ್ಷಣದ ಪಠ್ಯಕ್ರಮವನ್ನು ರೂಪಿಸಿದ ಕೀರ್ತಿ ಪ್ರೊ. ಬಿ. ಚಂದ್ರಶೇಖರ್ ಅವರದ್ದು. ಪ್ರೊ.ಬಿ.ಸಿ. ಎಂದೇ ಅವರು ಪ್ರಸಿದ್ಧರಾಗಿದ್ದರು.

ನಟ, ನಿರ್ದೇಶಕರಾಗಿ[ಬದಲಾಯಿಸಿ]

ಬಾಲ್ಯದಿಂದಲೂ ನಾಟಕದತ್ತ ಒಲವು ಮೂಡಿಸಿಕೊಂಡಿದ್ದ ಚಂದ್ರಶೇಖರರು ಹವ್ಯಾಸಿ ರಂಗಭೂಮಿಯ ಹಲವಾರು ಪ್ರಥಮಗಳನ್ನು ದಾಖಲಿಸಿದವರಾಗಿದ್ದಾರೆ. ಕನ್ನಡದ ಪ್ರಪ್ರಥಮ ಅಸಂಗತ ನಾಟಕ ’ಬೊಕ್ಕ ತಲೆಯ ನರ್ತಕಿ’ ನಿರ್ದೇಶಿಸಿದರು. ತುಘಲಕ್, ಮೃಗಗಳಿಗಂಜಿದೊಡೆಂತಯ್ಯ, ಯಮಳ ಪ್ರಶ್ನೆ, ಅಪಕಾರಿ ಕಥೆ, ಚಿರಸ್ಮರಣೆ, ಮಣ್ಣಿನ ಬಂಡಿ (ಮೃಚ್ಛಕಟಿಕ) ಮುಂತಾದುವುಗಳನ್ನು ಮೊದಲ ಬಾರಿಗೆ ನಿರ್ದೇಶಿಸಿದ ಕೀರ್ತಿ ಪ್ರೊ. ಬಿ. ಸಿ. ಅವರದ್ದು. ಅವರು ಬೆಂಗಳೂರಿನ ’ಲಿಟಲ್ ಥಿಯೇಟರ್ಸ್’ ಸ್ಥಾಪಕ ಸದಸ್ಯರಲ್ಲೊಬ್ಬರು. ಸಂಸ್ಥೆಗಾಗಿ ಪಾತ್ರಧಾರಿಯಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಅವರು ನಿರ್ವಹಿಸಿದ ಸೇವೆಗಳು ಅನುಪಮವಾದದ್ದು. ಬಿ.ಎಲ್.ಟಿ. ತಂಡದ ಪ್ರಥಮ ನಾಟಕ ’ದಿ ಪ್ರಾಡಿಜಿಯಸ್ ಸ್ನಾಬ್‌’ನಲ್ಲಿ ಮಾನ್ಸಾಯರ್‌ ಬೊಲ್ಡಾನ ಎಂಬ ಮುಖ್ಯಪಾತ್ರವಹಿಸಿ ಅವರು ತೋರಿದ ನಟನಾಕೌಶಲ ಅದ್ವಿತೀಯವೆನಿಸಿತ್ತು. ನಂತರ ಅದೇ ತಂಡಕ್ಕೆ ಅವರು ಅನೇಕ ಇಂಗ್ಲಿಷ್ ನಾಟಕಗಳ ನಿರ್ದೇಶನವನ್ನೂ ಕೈಗೊಂಡರು.

ಪ್ರೊ. ಬಿ. ಸಿ. ಅವರು ಕನ್ನಡದಲ್ಲಿ ಕಟ್ಟೆ ಪುರಾಣ, ಸಂತೆ ಸುದ್ದಿಯಲ್ಲಿ, ಟೊಳ್ಳುಗಟ್ಟಿ, ನಂಕಪ್ನಿ ಮುಂತಾದ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದರು. ಇಂಗ್ಲಿಷ್‌ನಲ್ಲೂ ಅವರು ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿದ್ದರು. ಪ್ರೊ. ಬಿ. ಸಿ. ಅವರು ನಿರ್ದೇಶಿಸಿದ ನಾಟಕಗಳ ಸಂಖ್ಯೆಯೇ ಸುಮಾರು ಮೂವತ್ತಕ್ಕೂ ಹೆಚ್ಚು. ಆಕಾಶವಾಣಿಗಾಗಿ ಸತ್ತವನ ಸಂತಾಪ, ಸ್ಮಶಾನ ಕುರುಕ್ಷೇತ್ರ, ರಕ್ತಾಕ್ಷಿ, ಬಿರುಗಾಳಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ ಹಲವಾರು ನಾಟಕಗಳನ್ನೂ ನಿರ್ದೇಶಿಸಿದ್ದರು.

ಚಲನಚಿತ್ರಗಳಲ್ಲಿ[ಬದಲಾಯಿಸಿ]

ಲಂಕೇಶರ ‘ಅನುರೂಪ’, ಎನ್. ಲಕ್ಷ್ಮೀ ನಾರಾಯಣ್‌ರವರ ‘ಮುಯ್ಯಿ’, ವಿಜಯ ಗುಜ್ಜಾರರ ‘ಕುರಿದೊಡ್ಡಿ ಕುರುಕ್ಷೇತ್ರ’. TUSK OF YOUNG FILMS CORPORATION OF PARIS ಮುಂತಾದ ಚಿತ್ರಗಳಲ್ಲಿ ಪ್ರೊ.ಬಿ. ಚಂದ್ರಶೇಖರರು ನಟಿಸಿದ್ದರು.

ನಾಟಕ ರಚನಾಕಾರರಾಗಿ[ಬದಲಾಯಿಸಿ]

ಪ್ರೊ. ಬಿ. ಸಿ. ಅವರು ಹಲವಾರು ನಾಟಕಗಳನ್ನೂ ರಚಿಸಿದ್ದರು. ಸಂಚಯನ, ಸಂಭವಾಯಿ ಯುಗೇ ಯುಗೇ ಸೇರಿದಂತೆ ಸುಮಾರು ೧೭ ನಾಟಕಗಳನ್ನು ಅವರು ರಚಿಸಿದ್ದರು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಈ ಮಹಾನ್ ಪ್ರತಿಭೆ ಪ್ರೊ. ಬಿ. ಚಂದ್ರಶೇಖರ್ ಅವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕಾರ ಸಂದಿತ್ತು. ೧೯೯೧ರಲ್ಲಿ ರಂಗಾಸಕ್ತರು ’ಬಹುರೂಪಿ’ ಎಂಬ ಗೌರವಗ್ರಂಥವನ್ನು ಅರ್ಪಿಸಿದರು.

ವಿದಾಯ[ಬದಲಾಯಿಸಿ]

ಪ್ರೊ. ಬಿ. ಚಂದ್ರಶೇಖರ್ ಅವರು ಡಿಸೆಂಬರ್ ೧೩, ೨೦೦೦ವರ್ಷದಲ್ಲಿ ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ಅನಂತ ನಮನಗಳು.