ಬಿ. ಕೆ. ನಾರಾಯಣರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೮೮೧-೧೯೬೫)

ಹಳೆಯ ಮೈಸೂರು ಸಂಸ್ಥಾನದಲ್ಲಿ ಕಣ್ಣಿನ ವಿಶೇಷ ಡಾಕ್ಟರ್ (Surgeon)ಆಗಿ ತಮ್ಮ ಜೀವನವನ್ನೇ ರೋಗಿಗಳ ಒಳಿತಿಗೆ ಸಹಾಯಕ್ಕಾಗಿ ಮುಡುಪಾಗಿಟ್ಟ, ಬಿ. ಕೆ. ನಾರಾಯಣ ರಾಯರು, ಒಬ್ಬ ಅತ್ಯುತ್ತಮ ವ್ಯಕ್ತಿಯಾಗಿ, ಮಾದರಿಯ ಜೀವನವನ್ನು ನಡೆಸಿದರು. ಆಗಿನ ಕಾಲದಲ್ಲಿ ಬೆಳಗಾಂನಗರದಲ್ಲಿದ್ದ ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿಯವರ ಕಣ್ಣಾಸ್ಪತ್ರೆ ಬಿಟ್ಟರೆ, ರಾಜ್ಯಮಟ್ಟದಲ್ಲಿ ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿದ್ದ 'ಪ್ರಭಾ ಐ ಕ್ಲಿನಿಕ್' ಬಹಳ ಪ್ರತಿಷ್ಠಿತ ಖಾಸಗಿ ಕಣ್ಣಿನ ಆಸ್ಪತ್ರೆಯೆಂದು ಗುರುತಿಸಲ್ಪಟ್ಟಿತ್ತು.

ಜನನ, ವಿದ್ಯಾಭ್ಯಾಸ, ವೃತ್ತಿಜೀವನ[ಬದಲಾಯಿಸಿ]

ಬಿ.ಕೆ.ನಾರಾಯಣರಾವ್, ಕೇಶವರಾವ್ ಮತ್ತು ಲಕ್ಷಮ್ಮ ದಂಪತಿಗಳ ಮೂರು ಜನ ಗಂಡುಮಕ್ಕಳಲ್ಲಿ ಹಿರಿಯ ಮಗ. ಅವರ ತಮ್ಮಂದಿರ ಹೆಸರುಗಳು, ಶಾಮಣ್ಣ ಮತ್ತು ಸುಬ್ಬರಾವ್. ನಾರಾಯಣರಾಯರ ತಾಯಿಯವರು ಮಕ್ಕಳು ಚಿಕ್ಕವರಾಗಿದ್ದಾಗಲೇ ಮರಣಹೊಂದಿದರು. ಕೆಲಸದ ಪ್ರಯುಕ್ತ, ತಂದೆಯವರು ಪ್ರವಾಸಮಾಡಬೇಕಾಗಿದ್ದರಿಂದ ೩ ಮಕ್ಕಳ ಲಾಲನೆಪಾಲನೆ ಮಾಡಲು ಚೆನ್ನಮ್ಮ ಎಂಬ ೧೨ ವಯಸ್ಸಿನ ಮಹಿಳೆಯನ್ನು ಮದುವೆಯಾದರು. ಚೆನ್ನಮ್ಮ, ರಾಯಾಯಣರಾವ್ ಗಿಂತ ವಯಸ್ಸಿನಲ್ಲಿ ೨ ವರ್ಷ ಚಿಕ್ಕವರು. ನಾರಾಯಣರಾಯರ ಪ್ರಾಥಮಿಕ ಶಿಕ್ಷಣ, ಮೈಸೂರಿನಲ್ಲಿ ನಡೆಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಮುಂದೆ, ಮದ್ರಾಸ್ ಗೆ ಹೋಗಿ ಕಾಲೇಜ್ ಶಿಕ್ಷಣ ಮುಂದುವರೆಸಿದರು. ಮೊದಲಿನಿಂದ ಅವರಿಗೆ ಡಾಕ್ಟರಾಗುವ ಆಶೆಯಿತ್ತು. ಅವರ ತಮ್ಮಂದಿರು ಇಂಗ್ಲೀಷ್ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಶಾಮಣ್ಣ ಭೂಮಿ-ಕಾಣಿ, ತೋಟ-ತುಡಿಗೆ ಆಳು-ಕಾಳುಗಳನ್ನು ತೆಂಗು-ಅಡಕೆ ತೋಟಗಳನ್ನು ನೋಡಿಕೊಂಡು ತುಮಕೂರಿನ ಹತ್ತಿರದ ತಮ್ಮ ಹಿರಿಯರಮನೆಯಲ್ಲಿದ್ದರು. ಸುಬ್ಬರಾವ್ ಪೋಸ್ಟ್ ಮಾಸ್ಟರ್ ಕೆಲಸದಲ್ಲಿ ಬಸವಾಪಟ್ಣದಲ್ಲಿ ವಾಸಮಾಡುತ್ತಿದ್ದರು. ನಾರಾಯಣರಾವ್, ಮದ್ರಾಸ್ ಗೆ ಹೋಗುವಮೊದಲು ಅವರ ತಂದೆಗೆ ಮಗನಿಗೆ ಮದುವೆಮಾಡಿಕಳಿಸಲು ಆಲೋಚಿಸಿದರು. ಮದುವೆಯ ನಂತರ ತಮ್ಮ ಹೆಂಡತಿಗೂ ಜೊತೆ ಇರುತ್ತೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಅವರು, ೮ ವರ್ಷ ಪ್ರಾಯದ ನಾಚರಮ್ಮ ಎಂಬ ಹುಡುಗಿಯನ್ನು ವಿವಾಹವಾದರು. ಆಕೆಯ ಇಬ್ಬರು ತಮ್ಮಂದಿರನ್ನೂ ತಮ್ಮ ಮನೆಯಲ್ಲಿ ಇಟ್ಟುಕೊಂಡು ಅವರ ವಿದ್ಯಾಭ್ಯಾಸ ಜವಾಬ್ದಾರಿಯನ್ನೂ ನಿರ್ವಹಿಸಿದರು.

ಯಶಸ್ವಿ ಕಣ್ಣಿನ ವೈದ್ಯರು[ಬದಲಾಯಿಸಿ]

ಪದವಿ ಪರೀಕ್ಷೆಯ ಫಲಿತಾಂಶ ಬಂದ ಬಳಿಕ ಮೆಡಿಕಲ್ ಕಾಲೇಜ್ ಸೇರಿದರು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೫ ವರ್ಷ ವೃತ್ತಿಜೀವನ. ಬೆಜವಾಡ (ವಿಜಯವಾಡ) ಪಳನಿ, ಕೊಯಂಬತ್ತೂರ್, ಮತ್ತಿತರ ತಮಿಳು ಮತ್ತು ತೆಲುಗು ಮಾತಾಡುವ ಜಾಗಗಳಲ್ಲಿ ಮೆಡಿಕಲ್ ಆಫೀಸರ್ ಆಗಿ, ಕೆಲಸಮಾಡಿದರು. ಮಕ್ಕಳಿಗೆ ಕನ್ನಡದಲ್ಲಿ ವಿದ್ಯಾಭ್ಯಾಸ ದೊರೆಯದೆ ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ, ಮೈಸೂರಿಗೆ ವಾಪಸ್ಸಾದರು. ಆಗ ನಾಲ್ಮಡಿ ಕೃಷ್ಣರಾಜ ವೊಡಿಯರ್ ಮೈಸೂರಿನ ಅರಸರಾಗಿದ್ದರು. ಅದೇ ಸಮಯದಲ್ಲಿ ಇಂಗ್ಲೆಂಡ್ ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗುವ ಮನಸ್ಸುಮಾಡಿದರು. ಅಲ್ಲಿಂದ ವ್ಯಾಸಂಗಮಾಡಿ ವಾಪಸ್ಸಾದ ಬಳಿಕ, ಮಿಂಟೋ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಕಣ್ಣಿನ ಸರ್ಜನ್ ಆಗಿ ನೇಮಿಸಲ್ಪಟ್ಟರು. ಮೈಸೂರ್ ರಾಜ್ಯದ ಮಿಂಟೋ ಆಸ್ಪತ್ರೆಯ ಆಫ್ಥಾಲ್ ಮಿಕ್ ಹಾಸ್ಪಿಟಲ್ ನ ವರ್ಗದ ಸೂಪರಿಂಟೆಂಡೆಂಟ್, (ಲಾರ್ಡ್ ಮಿಂಟೋ ಆಸ್ಪತ್ರೆ)ಆಗಿ ಬಹಳ ಕಾಲ, ಸೇವೆ ಸಲ್ಲಿಸಿದರು. ಮೆಡಿಕಲ್ ಸ್ಕೂಲಿನ ಪ್ರಾಂಶುಪಾಲ, ಸೀನಿಯರ್ ಸರ್ಜನ್, ಹುದ್ದೆ ಆಗಿನ ಕಾಲದಲ್ಲಿ ಮೈಸೂರು ರಾಜ್ಯದ ಬಹಳ ದೊಡ್ಡ ಹುದ್ದೆಯೆಂದು ಗುರುತಿಸಲಾಗಿತ್ತು.

ಅರಮನೆ ವೈದ್ಯರು[ಬದಲಾಯಿಸಿ]

ಮೈಸೂರು ರಾಜರ ಅರಮನೆ ವೈದ್ಯ,, ಮತ್ತು ಹೈದರಾಬಾದ್ ನಿಝಾಮನ ಖಾಸಗೀ ವೈದ್ಯರಾಗಿ ಸೇವೆಸಲ್ಲಿಸಿದರು. ತಮ್ಮ ವೃತ್ತಿಯಲ್ಲಿ ನಿವೃತ್ತರಾದ ನಂತರ ಪ್ರಭಾ ಐಕ್ಲಿನಿಕ್ ಎಂಬ ವಿಶ್ವೇಶ್ವರಪುರಂನಲ್ಲಿ ಕಣ್ಣಿನ ಆಸ್ಪತ್ರೆಯನ್ನು ತೆರೆದರು. ನರ್ಸಿಂಗ್ ಹೋಂನ್ನು ತಮ್ಮ ಅಳಿಯ ಡಾ. ಎಚ್.ಕೃಷ್ಣಮೂರ್ತಿಗೆ ವಹಿಸಿಕೊಡುವವರೆಗೆ ಅಲ್ಲಿಯೇ ಸೇವೆ ಸಲ್ಲಿಸಿದರು.

ಮಕ್ಕಳು[ಬದಲಾಯಿಸಿ]

ನಾರಾಯಣರಾಯರಿಗೆ ಒಟ್ಟು ೯ ಮಕ್ಕಳು, ೫ಹೆಣ್ಣುಮಕ್ಕಳು ೪ ಗಂಡುಮಕ್ಕಳು. ರಾಯರು ಒಬ್ಬ ಶಿಸ್ತಿನ ಸಿಪಾಯಿ. ೫-೬ ಕೆಲಸಗಾರರು ಮನೆಯಲ್ಲಿ ಇದ್ದರು. ತಮ್ಮ ಕೆಲಸ ತಾವೇ ಮಾಡಿಕೊಳ್ಳುವ ಬಗ್ಗೆ ಒತ್ತು ಕೊಡುತ್ತಿದ್ದರು. ತಮ್ಮ ಊಟದ ತಟ್ಟೆಯನ್ನು ತಾವೇ ತೊಳೆಯುತ್ತಿದ್ದರು. ಮನೆಗುಡಿಸುವುದು, ದನದ ಕೊಟ್ಟಿಗೆಯನ್ನು ಶುಚಿಗೊಳಿಸುವುದು ಅವರಿಗೆ ಬಹಳ ಪ್ರಿಯವಾಗಿತ್ತು. ಅವರು ಸಂಕೇತಿ ಬ್ರಾಹ್ಮಣರು. ಸಂಕೇತಿ ಅಸೋಸಿಯೇಷನ್ ನ ಮೊದಲ ಅಧ್ಯಕ್ಷರಾದರು. ೧೯೮೪ ಸಮಯದಿಂದ ಸಂಕೇತಿ ಸಮಾಜವನ್ನು ಒಂದುಗೂಡಿಸುವ ಪ್ರಯತ್ನಮಾಡಿದರು.

ಪ್ರಾಯಶ್ಚಿತ್ತ-ಕರ್ಮ, ಅವರಿಗೆ ಇಷ್ಟವಿರಲಿಲ್ಲ[ಬದಲಾಯಿಸಿ]

ಸಮುದ್ರದಮೇಲೆ ವಿದೇಶಕ್ಕೆ ಹೋಗಿ ಬಂದ ಮೇಲೆ ಕೆಲವು ಸಂಪ್ರದಾಯ ಹಿಂದೂ ಪರಿವಾರಗಳು ಪ್ರಾಯಶ್ಚಿತ್ತ ವಿಧಿಗಳನ್ನು ಮಾಡುವವಾಡಿಕೆ ಇತ್ತು. ಆದರೆ ಇದರಲ್ಲ್ಲಿ ನಾರಾಯಣರಾಯರಿಗೆ ನಂಬಿಕೆ ಇರಲಿಲ್ಲ. ತಮ್ಮ್ಮ ಮಕ್ಕಳು, ಮತ್ತು ಸೊಸೆಯರನ್ನು ಮದುವೆಯ ಬಳಿಕವೂ ಕಾಲೇಜಿಗೆ ಕಳಿಸಿದರು. ಅವರು ಒಬ್ಬ ದೈವಭಕ್ತರು.ನವರಾತ್ರಿ ಹಬ್ಬದ ಸಮಯದಲ್ಲಿ, ಪೂಜೆ-ಪುನಸ್ಕಾರಗಳ ಸಮಯದಲ್ಲಿ ಗೆಳೆಯರನ್ನೆಲ್ಲಾ ಮನೆಗೆ ಆಹ್ವಾನಿಸುತ್ತಿದ್ದರು. ತೋಟಗಾರಿಕೆ ಬಹಳ ಇಷ್ಟವಾದ ವಿಶಯ. ತಮ್ಮ ಮನೆಯ ಬಳಿಯ ಗಾರ್ಡನ್ ನಲ್ಲಿ ಬೆಳೆದ ಹುಲ್ಲನ್ನುತಾವೇ ಕತ್ತರಿಸುತಿದ್ದರು. ತಮ್ಮ ಹೋಂ ಗಾರ್ಡನ್ ನಲ್ಲಿ ಬೆಳೆಸಿದ ಬೇರೆದೇಶದ ಗಿಡಗಳನ್ನು ತಮ್ಮ ಮಕ್ಕಳಿಗೆ ಪರಿಚಯಿಸಿ, ಅವುಗಳ ವಿವರಗಳನ್ನು ಕೊಡುತ್ತಿದ್ದರು.

ಉದಾರ ಹೃದಯಿ[ಬದಲಾಯಿಸಿ]

ಜನರಿಗೆ ಹಣದ ಸಹಾಯಮಾಡುವುದು, ಉದಾರತೆ, ಅವರ ಹೃದಯದಿಂದ ಬಂದದ್ದು. ಬಡಹುಡುಗರನ್ನು ಮನೆಯಲ್ಲಿ ಇಟ್ಟುಕೊಂಡು ಅವರಿಗೆ ಬೇಕಾದ ಹಣ ಸಹಾಯಮಾಡಿ ಉತ್ತಮ ಕಾಲೇಜ್ ಶಿಕ್ಷಣ ಕೊಡಿಸುತ್ತಿದ್ದರು. ಅವರ ಚಿಕ್ಕಮ್ಮನವರನ್ನು ಬಹಳವಾಗಿ ಗೌರವಿಸುತ್ತಿದ್ದರು. ತಂದೆಯವರ ಬದಲು ಚಿಕ್ಕಮ್ಮನ ಸಲಹೆ ಅವರಿಗೆ ಬಹಳ ಮಹತ್ವದ್ದಾಗಿತ್ತು. ಮಿತ್ರ,ಡಾ. ಡಿ.ವಿ.ಗುಂಡಪ್ಪ ನವರ ಸ್ನೇಹದಿಂದ ಮನೆಯಲ್ಲಿ ಬಹುದೊಡ್ಡ ಪುಸ್ತಕಭಂಡಾರವಿತ್ತು. ಅಲ್ಲಿ, ಕನ್ನಡ ಇಂಗ್ಲೀಷ್ , ತೆಲುಗು, ಮಲಯಾಳಮ್, ಭಾಷೆಯ ಹಲವಾರು ಪುಸ್ತಕಗಳಿದ್ದವು. ತೆಲುಗು ಹಾಗೂ ಜರ್ಮನ್ ಭಾಷೆಗಳಲ್ಲಿ ಮಾತಾಡುವುದು ಅವರಿಗೆ ಬಲು ಇಷ್ಟ.

ಸಿನಿಮಾ ವೀಕ್ಷಣೆ[ಬದಲಾಯಿಸಿ]

ಸಿನಿಮಾ ನೋಡುವುದು, ಅವರಿಗೆ ಇಷ್ಟವಾಗುತ್ತಿರಲಿಲ್ಲ. ಆದರೂ ಗೆಳೆಯರು ಅವರನ್ನು ತಮ್ಮ ಜೊತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದರು. ನಾರಾಯಣರಾಯರು, ಶೋ ಮುಗಿಯುವವರೆಗೆ ತಮ್ಮ ಕಾರಿನಲ್ಲಿ ಕೂತಿರುತ್ತಿದ್ದರು. ಮಕ್ಕಳಿಗೆ ಹಣ ಮುಖ್ಯವಲ್ಲ, ಕೆಲಸಮುಖ್ಯ, ಶಿಸ್ತು, ನಿಯಮ ಪಾಲನೆ, ಬಗ್ಗೆ ಬಹಳ ಮಹತ್ವ ಕೊಡಲು ಪ್ರಚೋದಿಸುತ್ತಿದ್ದರು.