ನಿಲಂಬೂರಿನ ಜೈವವಿಭವ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಮೃದ್ಧ ನಿಲಂಬೂರಿನ ಕಾಡುಗಳು[ಬದಲಾಯಿಸಿ]

ನಿಲಂಬೂರಿನ ಜೈವವಿಭವ ಉದ್ಯಾನ. ಸಸ್ಯ ಶಾಸ್ತ್ರ ವಿದ್ಯಾರ್ಥಿಗಳ, ಹಾಗೂ ಸಸ್ಯ ಪ್ರೇಮಿಗಳ ಅಧ್ಯಾಯನ ಕೇಂದ್ರ - ನಿಲಂಬೂರು[೧] ನಿಲಂಬೂರು ಜೈವ ವಿಭವ ಉದ್ಯಾನ (ಬಯೋ ರಿಸೋರ್ಸಸ್ ನೇಚರ್ ಪಾರ್ಕ್)ಸುಮಾರು ಹದಿನೈದು ಎಕರೆಗೂ ಹೆಚ್ಚು ವಿಸ್ತಾರದಲ್ಲಿ ಈ ಜೀವ ವೈವಿದ್ಯ ಹರಡಿಕೊಂಡಿದೆ. ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ಮಲಪ್ಪುರಂ ಪಟ್ಟಣದಿದಂದ ೪೦ ಕಿ.ಮೀ ದೂರದಲ್ಲಿದೆ. ದಕ್ಷಿಣದ ಎಲ್ಲ ರಾಜ್ಯಗಳ ಸಸ್ಯ ಶಾಸ್ತ್ರ ವಿದ್ಯಾರ್ಥಿಗಳ, ಸಸ್ಯ ಪ್ರೇಮಿಗಳ ಅಧ್ಯಾಯನ ಕೇಂದ್ರವಾಗಿದೆ. ನಮ್ಮ ರಾಜ್ಯದ ಮೈಸುರಿನಿಂದ ಸುಮಾರು ೧೫೦ ಕಿ.ಮೀ ದೂರದಲ್ಲಿದೆ. ನಿಲಂಬೂರು ಒಂದು ಸಣ್ಣ ಪಟ್ಟಣ, ೧೮೪೦ರ ಅಸುಪಾಸಿನಲ್ಲಿ ಈ ಊರಿನಲ್ಲಿ ವೈಜ್ಞಾನಿಕ ರೀತಿಯನ್ನು ಅನುಸರಿಸಿ ನೆಟ್ಟು ಬೆಳೆಸಿದ ತೇಗದ ತೋಟವು ಪ್ರಪಂಚದಲ್ಲೇ ಮೊದಲ ತೇಗದ ತೋಟವೆಂದು ಹೆಸರು ಪಡೆದಿದೆ. ಚಾಲಿಯರ್ ನದಿಗೆ ಅಡ್ಡಲಾಗಿ ಕಟ್ಟಿರುವ ತೂಗುಸೇತುವೆಯ ಮೇಲೆ ನಡೆಯತೊಡಗಿದರೆ, ಗಗನಚುಂಬಿಗಳಾಗಿ ನಿಂತಿರುವ ತೇಗದ ಮರಗಳು ಸ್ವಾಗತಿಸುತ್ತವೆ. ನಿಲಂಬೂರು ಹತ್ತಿರದಲ್ಲಿರುವ ಮಾಂಜೇರಿ ಕಾಡುಗಳಿಗೆ ಹೋದರೆ ದೇಶದಲ್ಲೇ ಅತ್ಯಂತ ಪ್ರಾಚೀನ ಜನಾಂಗಗಳಲ್ಲಿ ಒಂದಾದ ಚೋಳನಾಯಕ ಆದಿವಾಸಿ ಜನಾಂಗದವರು ಕಾಣಸಿಗುತ್ತಾರೆ. ಪೂರ್ವಕ್ಕಿರುವ ನೀಲಗಿರಿ, ಉತ್ತರಕ್ಕಿರುವ ವೈನಾಡು ಕಾಡುಗಳ ಮತ್ತು ದಕ್ಷಿಣಕ್ಕಿರುವ ಸೈಲೆಂಟ್ ವ್ಯಾಲಿ ಕಾಡುಗಳ ಗುಣಲಕ್ಷಣಗಳನ್ನು ಹೊಂದಿರುವ ನಿಲಂಬೂರು ಕಾಡುಗಳು ನೀಲಗಿರಿ ಬಯೋಸ್ಪಿಯರ್ ರಿಸರ್ವ್ ನಲ್ಲೇ ಅತ್ಯಂತ ಸಮೃದ್ಧ ಕಾಡು. ನಮ್ಮ ಪಶ್ಚಿಮ ಘಟ್ಟವು ಈ ಭೂಮಂಡಲದಲ್ಲೇ ಅತಿ ಹೆಚ್ಚು ಜೀವವೈವಿಧ್ಯ ಸಂಪನ್ನ ಪ್ರದೇಶ. ತಂಪಾದ ಪ್ರದೇಶಗಳಲ್ಲಿ ಮತ್ತು ಘಟ್ಟಪ್ರದೇಶಗಳ ಮರಗಳ ಮೇಲೆ ನಾವು ಕಾಣುವ ಶೈವಲಗಳ (ಮೋಸೆಸ್) ೫೪೦ ಪ್ರಬೇಧಗಳು ಪಶ್ಚಿಮ ಘಟ್ಟದಲ್ಲಿವೆ. ಸುಮಾರು ೩೪೫ ಜರೀಸಸ್ಯಗಳನ್ನು, ೫೮೦೦ ಹೂಬಿಡುವ ಸಸ್ಯಗಳನ್ನು ಪಶ್ಚಿಮಘಟ್ಟದಲ್ಲಿ ಕಂಡುಹಿಡಿಯಲಾಗಿದ್ದು. ಅವುಗಳಲ್ಲಿ ಶೇಕಡಾ ೫೦ರಷ್ಟು ಪ್ರಬೇಧಗಳು ಅಲ್ಲಿ ಮಾತ್ರ ಕಾಣಸಿಗುತ್ತವೆ. ಈ ಸಸ್ಯಗಳು ಬೆಳೆಯಲು ಪರಿಸರದ ನಾಶ ಮತ್ತು ಸಸ್ಯಗಳ ಅಪಾರ, ಅವೈಜ್ಞಾನಿಕ ಬಳಕೆಯಿಂದ ಅನೇಕ ಪ್ರಬೇಧಗಳು ನಾಶದ ಅಂಚಿನಲ್ಲಿವೆ. ಇಂತಹ ಸಸ್ಯಗಳನ್ನು ಉಳಿಸಿ ಬೆಳೆಸಲು ಮಾತ್ರವಲ್ಲ. ಈ ಪ್ರಬೇಧಗಳ ಜ್ಞಾನವನ್ನು ಸಂಶೋಧನೆಗಳ ಮೂಲಕ ಮುಂದಿನ ಪೀಳಿಗೆಗೆ ದಾಟಿಸಲು ನಿಲಂಬೂರು 'ಜೈವವಿಭವ ಉದ್ಯಾನ'ವನ್ನು ನಿರ್ಮಿಸಲಾಗಿದೆ.

ಸಸ್ಯ ವೈವಿಧ್ಯ[ಬದಲಾಯಿಸಿ]

ಸುಮಾರು ೧೫ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನದಲ್ಲಿ ಸಸ್ಯಗಳನ್ನು ಏಳು ವಿಭಾಗಗಳಲ್ಲಿ ನೆಟ್ಟು ಬೆಳೆಸಲಾಗಿದೆ. ಒಂದೊಂದು ವಿಭಾಗದಲ್ಲೂ ಒಬ್ಬೊಬ್ಬ ಮಾರ್ಗದರ್ಶಕರಿದ್ದು ಪ್ರತಿಯೊಂದು ಗಿಡವನ್ನೂ ನಿಮಗೆ ಪರಿಚಯಿಸುತ್ತಾರೆ. ಅವುಗಳನ್ನು ನೆಟ್ಟು ಬೆಳೆಸುವ ಬಗ್ಗೆ ತಿಳುವಳಿಕೆ ನೀಡುತ್ತಾರೆ. ಉದ್ಯಾನದೊಳಗೆ ಕಾಲಿಟ್ಟೊಡನೆ ಸುಮಾರು ವಿಧದ ಆರ್ಕಿಡ್ ಗಳು ನಿಮ್ಮನ್ನು ಸ್ವಾಗತಿಸುತ್ತವೆ. ಮಲೆನಾಡಿನ ದಟ್ಟಕಾಡುಗಳಲ್ಲಿ ಅಪರೂಪಕ್ಕೆ ಮಾತ್ರ ಕಾಣುವ ಪ್ರಬೇಧಗಳು ಇಲ್ಲಿವೆ. ನೆಲದ ಮೇಲೆ ಹಾಗೂ ಮರಗಳ ಮೇಲೆ ಬೆಳೆಯುವ ಆರ್ಕಿಡ್ ಗಳನ್ನು ಕೃತಕ ಝರಿ ಹಾಗೂ ಮಂಜಿನಂತೆ ಬೀಳುವ ನೀರಿನ ಸೌಕರ್ಯಗಳನ್ನು ಒದಗಿಸಿ ಬೆಳೆಸಲಾಗಿದೆ. ಜರೀಗಿಡಗಳ ವಿಭಾಗದಲ್ಲಿ ಇರುವ ಸುಮಾರು ೧೨೧ ಪ್ರಬೇಧಗಳಲ್ಲಿ ೫೪ ಪ್ರಬೇಧಗಳು ವಂಶನಾಶದ ಭೀತಿಯಲ್ಲಿದ್ದು, ಪಶ್ಚಿಮಘಟ್ಟಗಳ ತಂಪಾದ ಪ್ರದೇಶಗಳಲ್ಲಿ ಮಾತ್ರವೇ ಕಾಣಸಿಗುವಂಥವು. ಒಣಪ್ರದೇಶಗಳಲ್ಲಿ, ಕಲ್ಲುಗುಡ್ಡೆಗಳಲ್ಲಿ ಹಾಗೂ ಮರುಭೂಮಿಗಳಲ್ಲಿ ಮಾತ್ರ ಬೆಳೆಯುವಂತಹ ನೂರಾರು ಗಿಡಗಳೂ ಇಲ್ಲಿವೆ. ಈ ಪ್ರಬೇಧಗಳು ನೀರಿನಂಶವನ್ನು ದೇಹದಲ್ಲಿ ಹಿಡಿದಿಟ್ಟುಕೊಂಡು ಬಹುಕಾಲ ಬದುಕುವ ಗುಣವುಳ್ಳವು. ಈ ಗುಂಪಿನಲ್ಲಿ ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳು ಹಾಗೂ ಜೈವಿಕ ಬೇಲಿಗೆ ಯೋಗ್ಯವಾದ ಗಿಡಗಳಿವೆ. ಪಕ್ಕದಲ್ಲೇ ಔಷಧೀಯ ಸಸ್ಯೋದ್ಯಾನವಿದೆ. ಈ ವಿಭಾಗದಲ್ಲಿ ಸುಮಾರು ೩೨೦ ಜಾತಿಗಳ ಸಸ್ಯಗಳಿದ್ದು ಪ್ರತಿಯೊಂದಿ ಜಾತಿಯ ಸಸ್ಯದ ಮುಂದೆಯೂ ಅದರ ವೈಜ್ಞಾನಿಕ ಹೆಸರು, ಸ್ಥಳೀಯ ಹೆಸರು, ಔಷಧಯೋಗ್ಯ ಭಾಗಗಳು ಹಾಗೂ ಯಾವ ರೋಗಗಳನ್ನು ಶಮನಗೊಳಿಸುತ್ತದೆ ಎಂಬ ವಿವರಣೆಗಳನ್ನು ನೀಡಲಾಗಿದೆ. ಅಲ್ಲಿಂದ ತಾಳೆ (ಪಾಮ್) ವರ್ಗದ ಗಿಡಗಳ ವಿಭಾಗ ಶುರುವಾಗುತ್ತದೆ. ರಾಯಲ್, ಮೆಜೆಸ್ಟಿಕ್, ಬಾಟಲ್, ಫ್ಯಾನ್, ಟ್ರಯಾಂಗಲ್ ಪಾಮ್ ಎಂಬಿತ್ಯಾದಿ ಅಲಂಕಾರಿಕ ತಾಳೆಗಳಿವೆ. ರಾಮಡಿಕೆ, ಶ್ರೀಲಂಕನ್ ಅಡಿಕೆ, ತೆಂಗು, ತಾಳೆ, ನಾಗರಬೆತ್ತ, ಹಂದಿಬೆತ್ತ ಮುಂತಾಗಿ ಇತರ ಗಿಡೆಗಳಿವೆ. 'ಸಸ್ಯವರ್ಗೀ‍ಕರಣ ಶಾಸ್ತ್ರದ ಉದ್ಯಾನ' ಮಹತ್ವದ್ದು. ಮನೆಯಂಗಳದಲ್ಲೇ ಕಾಣಸಿಗುವ ಬಹುತೇಕ ಗಿಡಗಳು ಇಲ್ಲಿವೆ. ಈ ಗಿಡಗಳು ಯಾವ ಕುಟುಂಬದ್ದು, ಭಿನ್ನ ಕುಟುಂಬಗಳ ವ್ಯತ್ಯಾಸವೇನು, ಸಸ್ಯಗಳನ್ನು ವರ್ಗೀಕರಿಸಲು ಕಾಂಡ ಹಾಗೂ ಹೂಗಳ ಯಾವ ಗುಣಲಕ್ಷಣಗಳನ್ನು ಗಮನಿಸಬೇಕು ಎಂಬ ವಿವಿರಗಳೆಲ್ಲ ಇಲ್ಲಿ ಸಿಗುತ್ತವೆ. ಒಂದೊಂದು ಸಸ್ಯ ಕುಟುಂಬಕ್ಕೆ ಸೇರಿದ ಹಲವು ಗಿಡಗಳನ್ನು ಒಂದೊಂದು ಅಂಕಣದಲ್ಲಿ ಬರುವಂತೆ ಸುಮಾರು ೧೬೦ ಅಂಕಣಗಳನ್ನು ರಚಿಸಿ ಗಿಡಗಳನ್ನು ಬೆಳೆಸಲಾಗಿದೆ. ವಿದ್ಯಾರ್ಥಿಗಳು ಸುಮಾರು ೬ ತಿಂಗಳ ಕಾಲ ಅಭ್ಯಸಿಸುವ ೨೦ ರಿಂದ ೫೦ ಕುಟುಂಬಗಳ ಅಂಕಣಗಳು ಇಲ್ಲಿದ್ದು ಎಲ್ಲ ವಿವರಗಳನ್ನೂ ೫-೬ ಗಂಟೆಗಳಲ್ಲಿ ಪೂರ್ಣವಾಗಿ ತಿಳಿದುಕೊಳ್ಳಬಹುದು.

ಚಿಟ್ಟೆ ಪಾರ್ಕ್[ಬದಲಾಯಿಸಿ]

ಚಿಟ್ಟೆಯ ಪಾರ್ಕ್ ಕೂಡ ಇಲ್ಲೇ ಇದೆ. ಚಿಟ್ಟೆಗಳು ಮೊಟ್ಟೆಗಳನ್ನಿಟ್ಟು, ಆ ಮೊಟ್ಟೆಗಳು ಬೆಳೆದು ಹುಳುಗಳಾಗಿ, ನಂತರ ನಿದ್ರಾವಸ್ಥೆಗೆ ಹೋಗಿ, ತದನಂತರ ಮತ್ತೆ ಬಣ್ಣ ಬಣ್ಣದ ಚಿಟ್ಟೆಗಳಾಗಿ ಹೊರಬಂದು ಹಾರಾಡುವರೆಗಿನ ವಿವಿಧ ಹಂತಗಳಲ್ಲಿ ಚಿಟ್ಟೆಗಳಿಗೆ ಬೇಕಾದ ಅಹಾರಗಳನ್ನು ನೀಡುವ ಸುಮಾರು ೬೫ ಜಾತಿಯ ಗಿಡಗಳನ್ನು ಈ ಚಿಟ್ಟೆ ಪಾರ್ಕ್ ನಲ್ಲಿ ನೆಟ್ಟು ಬೆಳಸಲಾಗಿವೆ. ಹಾಗಾಗಿಯೇ, ಇಲ್ಲಿ ಸದಾ ಕಾಲ ಹತ್ತಾರು ವರ್ಣಗಳ, ಹಲವಾರು ಗಾತ್ರ ಮತ್ತು ಆಕಾರಗಳ, ನೂರಾರು ಚಿಟ್ಟೆಗಳನ್ನು ಒಟ್ಟಿಗೇ ನೋಡಬಹುದು.

ತಲುಪುವುದು ಹೇಗೆ?[ಬದಲಾಯಿಸಿ]

ಶಾಲಾ ಕಾಲೇಜುಗಳಿಂದ ಅಧ್ಯಯನಕ್ಕಾಗಿ ಹೋಗುವ ವಿದ್ಯಾರ್ಥಿಗಳಿಗಾಗಿ, ಸಾರ್ವಜನಿಕರಿಗಾಗಿ ಉಳಿದು ಕೊಳ್ಳಲು ಇಲ್ಲಿ ಡಾರ್ಮಿಟರಿ ಸೌಲಭ್ಯ ಸಹಾಇದೆ. ಇಂತಹಾ ಈ ನಿಲಂಬೂರು ಸಸ್ಯ ಶಾಸ್ತ್ರ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಅಧ್ಯಾಯನಯೋಗ್ಯವಾಗಿದೆ. ನಿಲಂಬೂರು ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಗೆ ನಲವತ್ತು ಕಿ.ಮೀ ದೂರದಲ್ಲಿದೆ. ನಮ್ಮ ಮೈಸೂರಿನಿಂದ ನೂರ ಐವತ್ತು ಕಿ.ಮೀ. ಇಲ್ಲಿಗೆ ತಲುಪಲು ಸಮೀಪದ ರೈಲು ನಿಲ್ದಾಣ ವೆಂದರೆ, ನಿಲಂಬೂರು - ಶೊರನೂರು. ಮಲ್ಲಪುರಂ ನಿಂದ ಸುಮಾರು ಇಪ್ಪತ್ತಾರು ಕಿ.ಮೀ. ದೂರವಿರುವ ಕೋಯಿಕ್ಕೋಡು (ಕಲ್ಲಿಕೋಟೆ) ವಿಮಾನ ನಿಲ್ದಾಣವಾಗಿದೆ.

ಉಲ್ಲೇಖನಗಳು[ಬದಲಾಯಿಸಿ]

  1. www.nilambur.com

[೧]

  1. ಜೈವವಿಭವ ಉದ್ಯಾನ, ನಿಲಂಬೂರು (೧೦/೦೩/೨೦೧೬). ನಿಲಂಬೂರು ಜೈವವಿಭವ ಉದ್ಯಾನ. ಬಿ ಎ ರವಿ. pp. ೪೦, ೪೧. {{cite book}}: Check date values in: |date= (help)