ನವಕರ್ನಾಟಕ ಪ್ರಕಾಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನವಕರ್ನಾಟಕ ಪ್ರಕಾಶನವು ಒಂದು ಪುಸ್ತಕ ಪ್ರಕಾಶನ ಸಂಸ್ಥೆ. ೧೯೬೦ರಲ್ಲಿ ಬೆಂಗಳೂರಲ್ಲಿ ಸ್ಥಾಪಿತವಾಯಿತು. ಪುಸ್ತಕ ಪ್ರಕಾಶನ ಮತ್ತು ಹಂಚಿಕೆಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದು ಹಲವಾರು ವಿಷಯಗಳ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಿದೆ.

ನವಕರ್ನಾಟಕ ಪ್ರಕಾಶನವು ಇದುವರೆಗೂ (ಜುಲೈ ೨೦೨೩) ಸುಮಾರು ೬೫೦೦ ಪ್ರಕಟಣೆಗಳನ್ನು ಮಾಡಿದೆ. ಅವುಗಳಲ್ಲಿ ಬಹುಪಾಲು ಕನ್ನಡದ್ದಾಗಿದೆ ಮತ್ತು ಸುಮಾರು ಮುನ್ನೂರು ಇಂಗ್ಲೀಷ್ ಪ್ರಕಟಣೆಗಳಿವೆ. ಕೆಲವು ಹಿಂದಿ ಪ್ರಕಟಣೆಗಳನ್ನೂ ಕೂಡ ಮಾಡಿದೆ. ಇದರಲ್ಲಿ ಹಲವಾರು ಪ್ರಕಟಣೆಗಳು ಅನೇಕ ಮರುಮುದ್ರಣಗಳನ್ನು ಕಂಡು ಜನಪ್ರಿಯವಾಗಿವೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಕಲಬುರಗಿಯಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿದ್ದು ಒಟ್ಟು ಏಳು ಮಳಿಗೆಗಳಿವೆ.[೧] ಕರ್ನಾಟಕದ ಹಲವಾರು ಊರುಗಳಲ್ಲಿ ವರ್ಷಪೂರ್ತಿ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸುವ ಮೂಲಕ ಓದುಗರಿಗೆ ಪುಸ್ತಕಗಳನ್ನು ಕೊಳ್ಳಲು ವ್ಯವಸ್ಥೆ ಕಲ್ಪಿಸುತ್ತದೆ. ಜೊತೆಗೆ ಕೆಲವು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನೂ ಆಯೋಜಿಸುತ್ತದೆ.

ಇತಿಹಾಸ[ಬದಲಾಯಿಸಿ]

೧೯೫೦ರ ದಶಕದಲ್ಲಿ ನ್ಯೂ ಸೆಂಚುರಿ ಬುಕ್ ಹೌಸ್-ಬೆಂಗಳೂರು, ಪ್ರಭಾತ್ ಬುಕ್ ಹೌಸ್-ಮಂಗಳೂರು, ಜನಶಕ್ತಿ ಪ್ರಿಂಟರ್ಸ್ ಮತ್ತು ಜನಶಕ್ತಿ ಪ್ರಕಾಶನ-ಬೆಂಗಳೂರು - ಈ ನಾಲ್ಕು ಸಂಸ್ಥೆಗಳೂ ಪುಸ್ತಕ ಪ್ರಕಟಣೆ, ಪತ್ರಿಕೆಗಳ ಮುದ್ರಣ, ಪ್ರಕಟಣೆ ಮತ್ತು ವಿತರಣೆಯನ್ನು ಮಾಡುತ್ತಿದ್ದವು. ಈ ನಾಲ್ಕೂ ಸಂಸ್ಥೆಗಳನ್ನು ಒಗ್ಗೂಡಿಸಿ ೧೯೬೦ರಲ್ಲಿ 'ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್' ಎಂಬ ಸಂಸ್ಥೆಯನ್ನು ಆರಂಭಿಸಲಾಯಿತು. ಬಿ. ಎ. ಕಕ್ಕಿಲ್ಲಾಯ ಇದರ ಸ್ಥಾಪಕ ಅಧ್ಯಕ್ಷರು, ಎಸ್. ಆರ್. ಭಟ್ ಸ್ಥಾಪಕ ಕಾರ್ಯದರ್ಶಿ. ಎಂ. ಎಸ್. ಕೃಷ್ಣನ್, ಸಿ. ಆರ್. ಕೃಷ್ಣರಾವ್, ಕೆ. ಸುಬ್ಬರಾವ್, ಎನ್. ಸಿ. ರಣನವರೆ, ಆರ್. ಎಸ್. ರಾಜಾರಾಮ್, ನಂತರದಲ್ಲಿ ಎ. ಸಿ. ನರಸಿಂಹನ್, ಕೆ. ಎಲ್. ಗೋಪಾಲಕೃಷ್ಣರಾವ್ ಮುಂತಾದ ನಾಯಕರು, ಚಿಂತಕರು ಈ ಸಂಸ್ಥೆಯನ್ನು ಕಟ್ಟುವುದರಲ್ಲಿ ಜೊತೆಯಾದರು.

೧೯೭೬ರಿಂದ ಕಾರ್ಯನಿರ್ವಹಿಸುತ್ತಿರುವ 'ರಮೇಶ್ ಉಡುಪ' ಅವರು ಈಗಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ ಹಾಗೂ ೨೦೧೬ರಿಂದ 'ಡಾ. ಸಿದ್ದನಗೌಡ ಪಾಟೀಲ'ರು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಪ್ರಮುಖ ಮೈಲಿಗಲ್ಲುಗಳು [೧][ಬದಲಾಯಿಸಿ]

  • ೧೯೮೦ರ ದಶಕದಲ್ಲಿ ನಿರಂಜನ ಅವರ ಸಂಪಾದಕತ್ವದಲ್ಲಿ ವಿಶ್ವಕಥಾಕೋಶವನ್ನು ರಚಿಸಿನೆಯ ಮೂಲಕ ಹೆಚ್ಚಿನ ಜನಪ್ರಿಯತೆ.
  • ಪ್ರಪಂಚದ ೧೧೦ ದೇಶಗಳ, ಸುಮಾರು ೧೬೦ ಭಾಷೆಗಳ ೩೨೪ ಕಥೆಗಳನ್ನೊಳಗೊಂಡ ೨೫ ಸಂಪುಟಗಳನ್ನು ಹೊರತರಲಾಯಿತು.
  • ಬೆಂಗಳೂರಿನಲ್ಲಿ ಕಲರ್‌ ಪ್ರಿಂಟಿಂಗ್‌ ಇನ್ನೂ ಪ್ರವರ್ಧಮಾನಕ್ಕೆ ಬಾರದ ಕಾರಣ ತಮಿಳುನಾಡಿನ ಶಿವಕಾಶಿಯಲ್ಲಿ ಪುಸ್ತಕದ ಮುಖಪುಟವನ್ನು ಮಾತ್ರ ಬಹುವರ್ಣದಲ್ಲಿ ಮುದ್ರಣ ಮಾಡಿಸಿದರು.
  • ಸೋವಿಯತ್‌ ರಷ್ಯಾ ದೇಶದ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದ ಏಕೈಕ ಅಧಿಕೃತ ಸಂಸ್ಥೆ ನವಕರ್ನಾಟಕ ಪ್ರಕಾಶನ. ಸಂಸ್ಥೆಯು ನಿಯಮಿತವಾಗಿ ಸೋವಿಯತ್‌ ಪುಸ್ತಕ ಪ್ರದರ್ಶನವನ್ನೂ ಏರ್ಪಡಿಸುತ್ತಿತ್ತು.
  • ೧೯೯೦ರಲ್ಲಿ ಪುಸ್ತಕ ಸರಬರಾಜು ನಿಲ್ಲಿಸಿದ ಕಾರಣ ನಂತರದ ದಿನಗಳಲ್ಲಿ ನವಕರ್ನಾಟಕ ಪುಸ್ತಕ ಪ್ರದರ್ಶನ ಆರಂಭಿಸಲಾಯಿತು.
  • ೧೯೯೦ರಲ್ಲಿ ದೇವಿಪ್ರಸಾದ ಚಟ್ಟೋಪಾಧ್ಯಾಯ ಸಂಪಾದಕತ್ವದಲ್ಲಿ ‘ವಿಶ್ವ ತತ್ವಶಾಸ್ತ್ರಕೋಶ’ ಪ್ರಕಟಿಸಲಾಯಿತು.
  • ೧೯೯೮ರಲ್ಲಿ ನವಕರ್ನಾಟಕ ‘ಜ್ಞಾನ ವಿಜ್ಞಾನ ಕೋಶ’ವನ್ನು ಲೋಕಾರ್ಪಣೆ ಮಾಡಲಾಯಿತು. ಈ ಪುಸ್ತಕದ ನಾಲ್ಕು ಸಂಪುಟಗಳ ೨೫ ಸಾವಿರ ಪ್ರತಿಗಳು ಮಾರಾಟವಾಗಿದ್ದು ಕನ್ನಡ ಪುಸ್ತಕೋದ್ಯಮದಲ್ಲಿ ಒಂದು ದಾಖಲೆ.
  • ೧೯೯೯ರಲ್ಲಿ ‘ಹೊಸತು’ ಮಾಸಪತ್ರಿಕೆ ಆರಂಭಿಸಲಾಯಿತು.
  • ಆನ್ ಲೈನ್ ಪುಸ್ತಕ ಮಾರಾಟ[೨].
  • ಡೈಲಿಹಂಟ್ ಎಂಬ ಇ-ರೀಡರ್ ಕಿರುತಂತ್ರಾಂಶದ ಮೂಲಕ ಇ–ಪುಸ್ತಕಗಳ ಪ್ರಕಟಣೆ.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ನವ ಪಲ್ಲವದ ಆಶಯದಲ್ಲಿ ನವಕರ್ನಾಟಕ, ಪ್ರಜಾವಾಣಿ-೨೧ ಮೇ ೨೦೧೬
  2. "ನವಕರ್ನಾಟಕ ಪ್ರಕಾಶನದ ಅಧಿಕೃತ ಆನ್‍ಲೈನ್ ಪುಸ್ತಕ ಮಾರಾಟ ತಾಣ". Archived from the original on 2016-07-07. Retrieved 2016-07-20.

ಹೊರಕೊಂಡಿಗಳು[ಬದಲಾಯಿಸಿ]