ತುಳು ನಾಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಳು ನಾಡು ಅಥವಾ ತುಳುನಾಡ್, ತುಳು ಭಾಷೆ ಪ್ರಭಾವಿಯಾಗಿ ಮಾತನಾಡುವ ಭಾರತದ ಪ್ರದೇಶವಾಗಿದೆ. ತುಳುವರೆಂದು ಕರೆಯಲ್ಪಡುವ ಭಾರತ ಜನರು ಈ ಪ್ರದೇಶದ ಸ್ಥಳೀಯರು. ಹಳೆಯ ದಕ್ಷಿಣ ಕೆನರಾ ಜಿಲ್ಲೆಯನ್ನು ಪ್ರಸ್ತುತ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ[೧]. ಈ ಪ್ರದೇಶವು ಅಧಿಕೃತ ಆಡಳಿತಾತ್ಮಕ ಘಟಕವಲ್ಲ ಆದರೆ ಭಾರತದ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ರಾಜ್ಯತ್ವವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಚಳುವಳಿ ನಡೆಯುತ್ತಿದೆ. ಮಂಗಳೂರು, ಉಡುಪಿ ಮತ್ತು ಕಾಸರಗೋಡುಗಳು ಇಲ್ಲಿನ ಪ್ರಮುಖ ನಗರಗಳಾಗಿವೆ.

ವ್ಯಾಪ್ತಿ[ಬದಲಾಯಿಸಿ]

ತುಳು ನಾಡು - ತುಳುವ, ತುಳುವ ನಾಡು, ತುಳು ದೇಶ ಎಂಬುದಾಗಿಯೂ ಕರೆಯಲ್ಪಡುವ ತುಳು ನಾಡಿನ ಭಾಗ ಕರ್ನಾಟಕ ರಾಜ್ಯದ ಈಗಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ತೆಂಕಣ ಭಾಗ ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಡಗಣ ಭಾಗ.

ತುಳು ಶಬ್ಧ[ಬದಲಾಯಿಸಿ]

ತುಳು ಶಬ್ದ ವ್ಯುತ್ಪತ್ತಿಯ ಬಗ್ಗೆ ವಿದ್ವಾಂಸರಲ್ಲಿ ಅಭಿಪ್ರಾಯಭೇಧವಿದೆ. ತು¿ು ಎಂಬ ಶಬ್ದದಿಂದ ತುಳು ಬಂತೆಂದು ಒಂದು ಅಭಿಪ್ರಾಯವಾದರೆ, ತುಳುವೆ (ಮೃದು) ಶಬ್ದದಿಂದ (ಮೃದುನೆಲ) ಬಂತೆಂದು ಇನ್ನೊಂದು. ತುಳು ಎಂಬುದು ಪ್ರದೇಶವಾಚಕವೂ ಹೌದು. ಭಾಷಾವಾಚಕವೂ ಹೌದು. ತುಳು ನಾಡಿನ ಕಲ್ಯಾಣಪುರದ ಉತ್ತರ ಭಾಗದಲ್ಲಿ ತುಳು ಭಾಷೆ ಇಲ್ಲದಿರುವಾಗ ತುಳು ಎಂಬ ಶಬ್ದ ಮೂಲತಃ ಪ್ರದೇಶವಾಚಕವೇ ಇದ್ದಿರಬೇಕು. ಈ ಪ್ರದೇಶಕ್ಕೆ ಮತ್ತೆ ಬಂದು ನೆಲಸಿದ ಜನಾಂಗವೊಂದರ ಭಾಷೆಯೂ ತುಳು ಎಂಬ ಅಭಿಧಾನವನ್ನು ಪಡೆದಿರಬಹುದು. ತುಳು ಭಾಷೆ ದಕ್ಷಿಣದ ಇತರ ದ್ರಾವಿಡ ಭಾಷೆಗಳಲ್ಲಿ ಯಾವುದಕ್ಕೆ ಹತ್ತಿರವಾದುದು ಎಂಬುದನ್ನು ಕುರಿತ ಅಭಿಪ್ರಾಯಭಿನ್ನತೆಯಿಂದ ಮೇಲಿನ ಸಂದೇಹ ಬಲಪಡುತ್ತದೆ. ತುಳು ಭಾಷೆ ಬಳಕೆಯಲ್ಲಿಲ್ಲದ ಬಾರಕೂರು, ಬಸರೂರು, ಹಾಡುವಳ್ಳಿ, ಗೇರುಸೊಪ್ಪಗಳು ತುಳು ನಾಡಿನ ಕೇಂದ್ರಗಳಾಗಿದ್ದವು.

ಇತಿಹಾಸ[ಬದಲಾಯಿಸಿ]

  • ಐತಿಹಾಸಿಕವಾಗಿ, ತುಳು ನಾಡು ಹೈವ ಮತ್ತು ತುಳುವಾದ ಎರಡು ಪ್ರತ್ಯೇಕ ಪ್ರದೇಶಗಳನ್ನು ಒಳಗೊಂಡಿತ್ತು. ತುಳುನಾಡಿನ ಸುದೀರ್ಘವಾದ ಆಳ್ವಿಕೆಯ ಮತ್ತು ಅತ್ಯಂತ ಹಳೆಯ ಸ್ಥಳೀಯ ರಾಜವಂಶವು ಅಲುಪರದಾಗಿತ್ತು . ಅವರ ಸಾಮ್ರಾಜ್ಯವನ್ನು ಅಲ್ವಾಖೇಡಾ ಎಂದೂ ಕರೆಯಲಾಗುತ್ತಿತ್ತು. ೧೮ ನೇ ಶತಮಾನದವರೆಗೂ ವಿಜಯನಗರ ಸಾಮ್ರಾಜ್ಯದ ಸ್ಥಳೀಯ ರಾಜರು ತುಳುನಾಡಿನ ಆಡಳಿತವನ್ನು ಹೊಂದಿದ್ದರು .ವಿಜಯನಗರ ಕಾಲದಲ್ಲಿ ಬಾರಕೂರು ಮತ್ತು ಮಂಗಳೂರು ಪ್ರಾಮುಖ್ಯತೆಯನ್ನು ಪಡೆದು ಈ ಪ್ರದೇಶವು ಅತ್ಯಂತ ಶ್ರೀಮಂತವಾಯಿತು. ವಿಜಯನಗರ ಸಾಮ್ರಾಜ್ಯದ ಅವನತಿಯ ನಂತರ, ಇಕ್ಕೇರಿನ ಕೆಳದಿ ನಾಯಕರು ತುಳುನಾಡಿನ ಹೆಚ್ಚಿನ ಭಾಗವನ್ನು ನಿಯಂತ್ರಿಸಿದರು. .ಕೆಲವು ಶತಮಾನಗಳ ನಂತರ, ಇತರೆ ಜನಾಂಗೀಯ ಗುಂಪುಗಳು ಈ ಪ್ರದೇಶಕ್ಕೆ ವಲಸೆ ಬಂದವು. ಗೋವಾದ ಕೊಂಕಣಿಗಳು ಸಮುದ್ರದಿಂದ ಆಗಮಿಸಿದರು, ಅರಬ್ಬರು ಮಾತ್ರವಲ್ಲದೆ ಪೋರ್ಚುಗೀಸರೂ ಕೂಡಾ ಮಂಗಳೂರು ಬಂದರನ್ನು ವ್ಯಾಪಾರಕ್ಕೆ ಬಳಸುತ್ತಿದ್ದರು. ಸಣ್ಣ ಸಂಖ್ಯೆಯಿದ್ದರೂ, ಜೈನರು ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿ ಬಾಹುಬಲಿಯ ಏಕಶಿಲಾ ಮೂರ್ತಿಗಳನ್ನೂ, ಅನೇಕ ಬಸದಿಗಳನ್ನೂ ನಿರ್ಮಿಸಿದ್ದಾರೆ.
  • ಸ್ಕಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿ ತುಳು ನಾಡಿಗೆ ಸಂಬಂಧಿಸಿದ ಹಲವು ಉಲ್ಲೇಖಗಳಿವೆ. ತುಳು ನಾಡು ಪರಶುರಾಮ ಕ್ಷೇತ್ರದ ಭಾಗವೆಂಬ ಕತೆಯೂ ಇದೆ.
  • ಕ್ರಿ. ಪೂ. ಸುಮಾರು ೩೦೦-೪೦೦ ರ ವರೆಗೆ ತುಳು ನಾಡಿನಲ್ಲಿ ಬೃಹತ್ ಶಿಲಾಯುಗದ ಒಂದು ಸಂಮ್ಮಿಶ್ರ ಸಂಸ್ಕೃತಿ ಅಸ್ತಿತ್ವದಲ್ಲಿತ್ತು. ಅಶೋಕನ ಶಿಲಾಲೇಖನದಲ್ಲಿ ಬರುವ ಸತಿಯಪುತ ತುಳು ನಾಡಿರಬಹುದು. ಕ್ರಿ. ಶ. ೩ ನೆಯ ಶತಮಾನದ ಟಾಲಮಿಯ ಭೂಗೋಳದಲ್ಲಿ ನಮೂದಿತವಾದ ಒಲೊಖೊಯ್ರಾ ತುಳು ನಾಡಿನ ನಾಮಾಂತರವಾದ ಆಳ್ವಖೇಡವಿರಬೇಕು. ಕ್ರಿ. ಶ. ೩-೪ ನೆಯ ಶತಮಾನದ ತಮಿಳಿನ ಸಂಗಮ್ ಸಾಹಿತ್ಯದಲ್ಲಿ ತುಳು ನಾಡಿನ ಉಲ್ಲೇಖವಿದೆ. ಪಲ್ಲವ ಅರಸನಾದ 2ನೆಯ ನಂದಿವರ್ಮನ ಕಾಲದ (೭೩೧ - ೭೯೫) ಪಟ್ಟಟ್ಟಾಲ್ ಮಂಗಲಮ್ ತಾಮ್ರ ಶಾಸನದಲ್ಲೂ ೧೦೧೨ ರ ಕೊಂಗಾಳ್ವನ ಬಲ್ಮುರಿಯ ಶಾಸನದಲ್ಲೂ ತು¿ುವರ ಉಲ್ಲೇಖವಿದೆ. ಇದು ಕನ್ನಡ ಭಾಷೆಯಲ್ಲಿ ತು¿ುವರನ್ನು ಕುರಿತ ಮೊದಲ ಶಾಸನ. ೧೧ ನೆಯ ಶತಮಾನದ ಬಂಕಿಯಾಳುಪೇಂದ್ರನ ಕಾಲದ ಬಾರಕೂರು ಶಾಸನದಲ್ಲಿ ಮೊದಲಾಗಿ ತುಳು ನಾಡಿನಲ್ಲಿ ನಾಡಿನ ಉಲ್ಲೇಖ ದೊರೆಕುತ್ತದೆ. ಹೊಯ್ಸಳ ವಿಜಯನಗರ ಕಾಲದ ಶಾಸನಗಳಲ್ಲಿ ಹೇರಳವಾಗಿ ತುಳು ನಾಡಿನ ಉಲ್ಲೇಖಗಳು ದೊರೆಯುತ್ತವೆ. ರತ್ನಾಕರವರ್ಣಿಯ ಭರತೇಶವೈಭವ ಕೃತಿಯಲ್ಲಿ ಮೊದಲಾಗಿ ತುಳು ವಾಕ್ಯವೂ ತುಳುವ ಶಬ್ದವೂ ಸಿಗುತ್ತವೆ.
  • ಕ್ರಿ,ಸ್ತಶಕೆಯ ಆರಂಭದಿಂದ ೧೫ ನೆಯ ಶತಮಾನದ ವರೆಗೆ ಆಳುಪರು (ಆಳಿವರು) ಇಲ್ಲಿ ಆಳಿಕೊಂಡಿದ್ದರು. ಇವರು ಕರ್ನಾಟಕದ ಸಾರ್ವಭೌಮರ ಆಶ್ರಿತರಾಜರಾಗಿದ್ದರೂ ಹೆಚ್ಚಿನ ಸ್ವಾಯತ್ತತೆಯನ್ನು ಪಡೆದು ಇಲ್ಲಿಯ ಸಂಸ್ಕøತಿಯ ಬೆಳವಣಿಗೆಗೆ ನೆರವಾದರು. ಇವರು ಬಾದಾಮಿ ಚಾಳುಕ್ಯರು ಹಾಗೂ ಹೊಂಬುಚ್ಚದ ಸಾಂತರಸರ ರಕ್ತಸಂಬಂಧಿಗಳು. ಇವರು ಉಚ್ಛ್ರಾಯ ಸ್ಥಿತಿಯಲ್ಲಿ ಕದಂಬ ಮಂಡಲವನ್ನಾಳುತ್ತಿದ್ದರು. 7ನೆಯ ಶತಮಾನದ ವಡ್ಡರ್ಸೆ ಶಾಸನ ಇವರಿಗೆ ಸಂಬಂಧಿಸಿದ ದಕ್ಷಿಣ ಕನ್ನಡದ ಮೊದಲ ಶಾಸನ. ಇವರದು ಮತ್ಸ್ಯಲಾಂಛನ (ಮತ್ಸ್ಯಲಾಂಛನೋಪೇತ). ಬಂಗಾರದ ನಾಣ್ಯಗಳ ಒಂದು ಬದಿಯಲ್ಲಿ ಎರಡು ಮೀನು, ಶಂಖ ಹಾಗೂ ಪೂರ್ಣಕುಂಭ ಅಥವಾ ಕಾಲುದೀಪವೂ ಇನ್ನೊಂದು ಬದಿಯಲ್ಲಿ ದೇವನಾಗರಿಯಲ್ಲಿ ಅಥವಾ ಕನ್ನಡ ಲಿಪಿಯಲ್ಲಿ ಪಾಣ್ಡ್ಯಧನಂಜಯ ಎಂಬ ಹೆಸರೂ ಇವೆ. ಇವರು ಶೈವರಾದರೂ ಜೈನಮತಕ್ಕೂ ನಾಥಪಂಥಕ್ಕೂ ಪ್ರೋತ್ಸಾಹವನ್ನಿತ್ತರು.
  • ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ತುಳು ನಾಡಿನ ಬಾರಕೂರು ಮತ್ತು ಮಂಗಳೂರು ಪ್ರಾಂತ್ಯಗಳಾಗಿ ವಿಭಾಗವಾಯಿತು. ಅವರಿಂದ ನೇಮಿತರಾದ ರಾಜ್ಯಪಾಲರು ಇದನ್ನು ಆಳುತ್ತಿದ್ದರು. ತುಳುವ ವಂಶದ ಕೃಷ್ಣದೇವರಾಯನ ಪೂರ್ವಜರು ಮೂಲತಃ ತುಳು ನಾಡಿನ ಪಾಡುವಳ್ಳಿಯವರೆಂದು ಕೆಲವರ ಅಭಿಪ್ರಾಯವಿದೆ. ವಿಜಯನಗರ ಕಾಲದಲ್ಲಿ ಸುರಾಲಿನ ತೊಳಹರು (ಈಗಿನ ತೋಳಾರರು), ಬಂಗಾಡಿಯ ಬಂಗರು, ಪುತ್ತಿಗೆಯ ಚೌಟರು, ಕೇಣೂರಿನ ಅಜಿಲರು, ಸಿಮಂತೂರಿನ ಸಾವಂತರು, ಕಾರ್ಕಳದ ಬೈರರಸರು, ಹೊಸಂಗಡಿಯ ಹೊನ್ನೆಕಂಬಳಿಯವರು, ನಗಿರೆಯ ಅರಸರು, ಹಾಡುವಳ್ಳಿಯ ರಾಜರು, ಎಮಾಗಳಿನ ಮಾರಮ್ಮ ಹೆಗ್ಗಡೆ, ಕಾಪುವಿನ ಮದ್ದಗ ಹೆಗ್ಗಡೆ, ಎಲ್ಲೂರಿನ ಕುಂದ ಹೆಗ್ಗಡೆ, ಪಡುಬಿದರೆಯ ಬಲ್ಲಾಳರು ಮೊದಲಾದವರು ವಿಜಯನಗರದ ಕಾಲದ ತುಳು ನಾಡಿನ ಜೈನ ಅರಸರು.
  • ಕಾಸರಗೋಡಿನ ಹೆಚ್ಚಿನ ಭಾಗ ಕುಂಬಳ ಅರಸರ ವಶದಲ್ಲಿತ್ತು. ತುಳು ನಾಡು ವಿಜಯನಗರದ ಅರಸರ ಬಳಿಕ ಕೆಳದಿಯ ನಾಯಕರ ಅಧೀನವಾಯಿತು. ಆಗಾಗ ತುಳು ನಾಡಿನ ಅರಸರ ಪರಸ್ಪರ ಕಲಹದಿಂದ ಕೆಳದಿಯ ನಾಯಕರು ಖೇದಗೊಂಡಿದ್ದರು. ಕೆಳದಿಯ ಅರಸರ ಬಳಿಕ ತುಳು ನಾಡು ಹೈದರ್ ಅಲಿಯ ಅಧೀನವಾಯಿತು. ಅದು ೧೯ ನೆಯ ಶತಮಾನದಲ್ಲಿ ಬ್ರಿಟಿಷರ ಕೈಸೇರಿ, ದಕ್ಷಿಣ ಕನ್ನಡ ಉತ್ತರ ಕನ್ನಡಗಳಾಗಿ ವಿಭಜಿಸಲಾಯಿತು. ದಕ್ಷಿಣ ಕನ್ನಡ ಮದ್ರಾಸ್ ಪ್ರಾಂತ್ಯಕ್ಕೂ ಉತ್ತರ ಕನ್ನಡ ಬೊಂಬಾಯಿ ಪ್ರಾಂತ್ಯಕ್ಕೂ ಸೇರಿದವು. ಭಾರತ ರಾಜ್ಯ ಪುನರ್ ವಿಂಗಡಣೆಯಾದಾಗ ಕಾಸರಗೋಡು ಬಿಟ್ಟು ಉಳಿದ ತುಳು ನಾಡು ಕರ್ನಾಟಕಕ್ಕೆ ಸೇರಿತು.
  • ತುಳು ನಾಡಿನಲ್ಲಿ ಮೊಗೇರ ಬಿಲ್ಲವ ನಾಡವ ಬಂಟ ಜೈನ ಬ್ರಾಹ್ಮಣರೂ ಕೊರಗ ಮೊದಲಾದ ಆದಿವಾಸಿಗಳೂ ಇದ್ದಾರೆ. ಕೊರಗರ ಭಾಷೆ ಅವರದೇ ಆದ ದಕ್ಷಿಣ ದ್ರಾವಿಡೆರ ಭಾಷೆ- ಕೊರಗರ ಭಾಷೆ. ಬ್ರಾಹ್ಮಣರು ಮಾತನಾಡುವ ತುಳು ಇತರರ ತುಳುವಿಗಿಂತ ಸ್ವಲ್ಪ ಭಿನ್ನವಾಗಿವೆ. ಬ್ರಾಹ್ಮಣರಿಗೆ ಗೋತ್ರವಿದ್ದಂತೆ, ಬ್ರಾಹ್ಮಣೇತರರಿಗೆ ಬಳಿ ಇದೆ. ಅಳಿಯ ಸಂತಾನ ಕಟ್ಟು ತುಳು ನಾಡಿನ ವೈಶಿಷ್ಟ್ಯ. ಭೂತಾಳ ಪಾಂಡ್ಯನ ಕಟ್ಟುಕಟ್ಟಲೆಯಲ್ಲಿ ಇದರ ವಿವರವಿದೆ. ಆದರೆ ಈ ಕತೆಗೆ ಸಾಕಷ್ಟು ಆಧಾರಗಳಿಲ್ಲ. ೧೨ ನೆಯ ಶತಮಾನದಿಂದಲೂ ಅಳಿಯ ಸಂತಾನ ಕಟ್ಟು ಬೆಳೆದು ಬಂದಿರಬೇಕು. ಇತ್ತೀಚೆಗೆ ಇಂಡೊ-ಆರ್ಯನ್ ಬುಡಕಟ್ಟುಗಳಿಗೆ ಸೇರಿದ ಭಾಷೆಗಳನ್ನಾಡುವ ಕುಡುಬಿ, ಮರಾಠಿ ಮತ್ತು ಗೌಡ ಸಾರಸ್ವತರೂ ಇಲ್ಲಿ ನೆಲೆಸಿದ್ದಾರೆ. ಭೂತಾರಾಧನೆ ತುಳು ನಾಡಿನ ವೈಶಿಷ್ಟ್ಯಗಳಲ್ಲೊಂದು. ಅಗೆಲು, ತಂಬಿಲ, ಕೋಲ, ನೇಮ ಮೊದಲಾದ ಆರಾಧನಾ ವಿಧಾನಗಳಿಂದ ಬೊಬ್ಬರ್ಯ, ಪಂಜುರ್ಳಿ, ಕಲ್ಕುಡ, ಚಿಕ್ಕು, ಗುಳಿಗ, ಹಾಯ್ಗುಳಿ, ಕೋಟಚೆನ್ನಯ, ಹಳೆಯಮ್ಮ, ಪಿಲಿಚಾಮುಂಡಿ, ಮಾಸ್ತಿ, ಜುಮಾದಿ ಮೊದಲಾದ ನೂರಾರು ದೈವಗಳನ್ನು ಆರಾಧಿಸುತ್ತಾರೆ. ನಾಗ, ನಂದಿ ಕೋಣ, ಲೆಕ್ಕಸಿರಿ, ಬೆರ್ಮ, ಕ್ಷೇತಪಾಲ-ಇವು ಪಂಚದೆವಗಳು. ಇವನ್ನು ಆಲಡೆ ಅಥವಾ ಬ್ರಹಸ್ಥಾನಗಳಲ್ಲಿ ಆರಾಧಿಸುತ್ತಾರೆ. ಅಬ್ಬಕ್ಕ ದಾರಕ್ಕ ದೈವಗಳನ್ನು ತುಳುನಾಡಿನ ಸಿರಿ ಎಂದು ಜನತೆ ಪೂಜಿಸುತ್ತದೆ. ನಾಗ ಸುಬ್ರಹ್ಮಣ್ಯರನ್ನು ಅಭೇದವಾಗಿ ಕಲ್ಪಿಸಿ ಅದರ ಪ್ರೀತ್ಯರ್ಥವಾಗಿ ನಾಗಮಂಡಲ, ಧಕ್ಕೆ ಬಲಿಯನ್ನು ಆಚರಿಸುತ್ತಾರೆ. ಇದೂ ತುಳು ನಾಡಿಗೇ ವಿಶಿಷ್ಟವಾದ್ದು. ಆಗಮ ದೇವಾಲಯಗಳಲ್ಲಿ ಶಿವ, ಶಕ್ತಿ, ವಿಷ್ಣು, ಆದಿತ್ಯ, ಗಣಪತಿ, ಶಂಕರ, ನಾರಾಯಣ, ಶಾಸ್ತಾರ ಆರಾಧನೆ ಇದೆ. ಕ್ರಿಸ್ತಶಕದ ಆದಿಯಿಂದ ದೇಗುಲ ನಿರ್ಮಾಣಕ್ಕೆ, ದಾಖಲೆಯಿದೆ. ರಜತಪೀಠ (ಉಡುಪಿ), ಶಿವಾಲಯ, ಕುಮಾರಾದ್ರಿ (ಸುಬ್ರಹ್ಮಣ್ಯ), ಕುಂಭಕಾಶಿ(ಕುಂಭಾಶಿ), ಧ್ವಜೇಶ್ವರ (ಕೋಟೇಶ್ವರ), ಕ್ರೋಢ (ಶಂಕರನಾರಾಯಣ), ಮೂಕಾಂಬಾ (ಕೊಲ್ಲೂರು) - ಇವು ತುಳುನಾಡಿನ ಸಪ್ತಕ್ಷೇತ್ರಗಳು. ಮಣ್ಣು (ಪೊಳಲಿ), ಶಿಲೆ, ಪಂಚಲೋಹ ಹಾಗೂ ಮರದ ಕೆತ್ತನೆಗಳಲ್ಲಿ (ಮೆಕ್ಕಿಕಟ್ಟೆಯ ಭೂತದ ಉರುಗಳು) ಚಾಳುಕ್ಯ, ಕದಂಬ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮತ್ತು ಕೆಳದಿಯ ಶಿಲ್ಪ ಮಾದರಿಗಳು ಅಲ್ಪ ಸ್ವಲ್ಪ ಪ್ರಾದೇಶೀಕ ಭೇದಗಳೊಂದಿಗೆ ಇಲ್ಲಿ ಒಡಮೂಡಿವೆ. ಕದಿರೆಯ ಪಂಚಲೋಹದ ಲೋಕೇಶ್ವರ ಮೂರ್ತಿ (ಕ್ರಿ. ಶ. ೯೬೮), ಕಾರ್ಕಳ ಹಾಗೂ ವೇಣೂರ ಗೊಮ್ಮಟೇಶ್ವರ, ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಪಂಚಲೋಹದ ಚಂದ್ರನಾಥ (೭೧/೨ ಅಡಿ ಮೂಡಬಿದರೆ), ಉಡುಪಿಯ ಮಠದ ಕಡಗೋಲು ಕೃಷ್ಣ ಹಾಗೂ ತೈಲಕೃಷ್ಣಬಿಂಬಗಳು - ಇವು ತುಳು ನಾಡಿನ ಉಲ್ಲೇಖಾರ್ಹ ಶಿಲ್ಪಗಳು.
  • ಕರ್ನಾಟಕದ ಪ್ರಥಮ ತಾಮ್ರ ಶಾಸನ (ಬೆಳ್ಮಣ್ಣು - ೮ ನೆಯ ಶತಮಾನ) ತುಳು ನಾಡಿನದು. ದ್ವೈತಮತಸ್ಥಾಪಕರಾದ ಮಧ್ವಾಚಾರ್ಯರು ಇಲ್ಲೇ ಜನಿಸಿ, ಉಡುಪಿಯನ್ನು ಕೇಂದ್ರವಾಗಿಟ್ಟುಕೊಂಡು ತತ್ತ್ವವಾದವನ್ನು ಪ್ರಚಾರಮಾಡಿದರು. ಮಧ್ವಾಚಾರ್ಯರಿಗೆ ಮೊದಲು ವ್ಯಾಪಕವಾಗಿ ಹರಡಿದ್ದ ಭಾಗವತ ಸಂಪ್ರದಾಯದ ಎಡನೀರು ಹಾಗೂ ಬಾಳೆ ಕುದುರು ಮಠಗಳಿವೆ. ಕದಿರೆಯಲ್ಲಿ ನಾಥಪಂಥದ ದೇಗುಲಗಳಿವೆ. ಮೂಡಬಿದರೆ ಜೈನಕಾಶಿ ಎಂದು ಪ್ರಸಿದ್ಧವಾಗಿದೆ. ಬೌದ್ಧಮತ ಪ್ರಚಾರದಲ್ಲಿತ್ತು ಎನ್ನುವುದಕ್ಕೆ ಅಲ್ಪಸ್ವಲ್ಪ ದಾಖಲೆಗಳಿವೆ. ಜಂಗಮರ ಮಠಗಳು ಅಲ್ಲಲ್ಲಿ ಕಾಣಸಿಗುತ್ತವೆ. ಜನಪದ ಸಾಹಿತ್ಯಗಳಲ್ಲಿ ಜಂಗಮರ ಉಲ್ಲೇಖವಿದೆ. ತುಳು ಭಾಷೆಯಲ್ಲಿ ಪಾಡ್ದನಗಳ ರೂಪದಲ್ಲೂ ಕನ್ನಡದಲ್ಲೂ ವಿಪುಲವಾದ ಜನಪದ ಸಾಹಿತ್ಯವಿದೆ. ಇಲ್ಲಿಯ ಕನ್ನಡದಲ್ಲಿ ಹವ್ಯಕ ಮತ್ತು ಕುಂದಾಪುರ ಎಂಬ ಪ್ರಾದೇಶಿಕ ಭೇದವಿದೆ.

ಚರಿತ್ರೆ[ಬದಲಾಯಿಸಿ]

ಅಶೋಕನ 2ನೆಯ ಬಂಡೆಗಲ್ಲಿನ ಶಾಸನದಲ್ಲಿ ಆತನ ಸಾಮ್ರಾಜ್ಯದ ಮೇರೆಗಳನ್ನು ಹೇಳುವಾಗ ಸತಿಯಪುತವನ್ನು ಉಲ್ಲೇಖಿಸಿದೆ. ಈ ಭೌಗೋಳಿಕ ಪ್ರದೇಶವನ್ನು ಗುರುತಿಸುವುದರಲ್ಲಿ ಹಲವಾರು ಅಭಿಪ್ರಾಯಗಳು ಮಂಡಿತವಾಗಿವೆಯಾದರೂ ಈಗ ಇದು ತುಳು ದೇಶಕ್ಕೆ ಅನ್ವಯವಾಗುವ ಪದವೆಂದು ಸಮಾನ್ಯವಾಗಿ ಒಪ್ಪಲಾಗಿದೆ. ತುಳು ದೇಶದ ಬಹುಶ: ಮೊಟ್ಟಮೊದಲ ಐತಿಹಾಸಿಕ ಉಲ್ಲೇಖ ಇದು. ಕ್ರಿ. ಶ. ಸುಮಾರು 3ನೆಯ ಶತಮಾನಕ್ಕೆ ಸೇರಿದ ಮಾಮೂಲನಾರ್ ಎಂಬ ತಮಿಳು ಕವಿ ತನ್ನ ಒಂದು ಪದ್ಯದಲ್ಲಿ ತುಳು ನಾಡನ್ನು ಪ್ರಸ್ತಾಪಿಸಿದ್ದಾನೆ. ತಮಿಳು ನಾಡಿನ ಸಂಗಮ್ ಸಾಹಿತ್ಯದಲ್ಲಿ ಮೌರ್ಯ, ಕೋಶ, ಪಡುಗ, ಮೋಗೂರು ಮುಂತಾದ ಜನರ ಪ್ರದೇಶಗಳ ಪ್ರಸ್ತಾಪವಿದೆ. ಇವನ್ನು ಗುರುತಿಸಲು ಹಲವಾರು ಯತ್ನಗಳು ನಡೆದಿವೆ. ಮೌರ್ಯ ಸಾಮ್ರಾಜ್ಯದ ಪತನಾನಂತರ ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಉತ್ತರ ಭಾಗದ ಕೊಂಕಣ ಪ್ರದೇಶದಲ್ಲಿ ನೆಲಸಿದ್ದ, ಮೌರ್ಯ ಸಂತತಿಗೆ ಸೇರಿದವರೆನ್ನಲಾದ ಕೆಲವರಲ್ಲಿ ಒಬ್ಬ ತುಳು ನಾಡಿನ ಕೋಶರ್ ಜನರ ನೆರವಿನಿಂದ ತಮಿಳು ನಾಡಿನ ಮೋಗೂರ ಮೇಲೆ ದಂಡೆತ್ತಿದ. ಸ್ವಲ್ಪ ಕಾಲದ ಅನಂತರ ಕೋಶರ್ ಹಾಗೂ ಮೌರ್ಯರ ನಡುವೆ ಕಲಹ ಉಂಟಾಗಿ ಕೋಶರನ್ನು ಮೌರ್ಯರ ನನ್ನನ್ ಯುದ್ಧದಲ್ಲಿ ಎದುರಿಸಿದ. ಈ ಕೆಲವು ಅಂಶಗಳನ್ನು ಸಾಹಿತ್ಯಾಧಾರಗಳಿಂದ ಊಹಿಸಲಾಗಿದೆ. ಇವು ಎಷ್ಟರಮಟ್ಟಿಗೆ ಐತಿಹಾಸಿಕ ಎಂದು ಹೇಳಲಾಗದು.

ಟಾಲಮಿಯ ಭೂಗೋಳದಲ್ಲಿ ಬರುವ ಒಲೊಖೊಯಿರಾ ಎಂಬುದು ಆಳ್ವಖೇಡವೆಂದೂ ಇದು ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡ ಪ್ರದೇಶವೆಂದೂ ರೈಸ್ ಸೂಚಿಸಿದ್ದಾರೆ. ಇದು ಒಪ್ಪಿಗೆಯಾದಲ್ಲಿ ಆಳುಪರು ಆಳಿದ ಈ ಪ್ರದೇಶ ಕ್ರಿ. ಶ. 2ನೆಯ ಶತಮಾನದಲ್ಲೇ ಪ್ರಸಿದ್ಧವಾಗಿತ್ತೆನ್ನಬೇಕು. ಹಲ್ಮಿಡಿ ಶಾಸನದಲ್ಲಿ ಉಕ್ತನಾದ ಆಳಪಗಣ ಪಶುಪತಿಯು ಆಳುಪನೆಂದು ಹೇಳಲಾಗಿದೆ. ಈತ ಕದಂಬ ಮಯೂರ ಶರ್ಮನ ಸಾಮಂತನಾಗಿದ್ದನೆಂದೂ ಭಟರಿಕುಲಜನೆಂದೂ ಊಹಿಸಲಾಗಿದೆ. ತಾಳಗುಂದ ಶಾಸನವೊಂದರಲ್ಲಿ ಭಟರಿವಂಶದ ಕಾಕುಸ್ಥನೆಂಬಾತ ಕದಂಬ ರಾಜಕುಮಾರಿ ಲಕ್ಷ್ಮಿಯ ಮಗನೆಂದು ಹೇಳಿರುವ ಕಾರಣ, ಈಕೆ ಮೇಲೆ ಹೇಳಿದ ಪಶುಪತಿಯ ಪತ್ನಿ ಎಂದೂ ಇವರಿಗೆ ಜನಿಸಿದಾತನೇ ಕಾಕುಸ್ಥನೆಂದೂ ಕದಂಬ ಕಾಕುಸ್ಥನ ಮಗಳೇ ಲಕ್ಷ್ಮಿ ಎಂದೂ ಭಾವಿಸಲಾಗಿದೆ.

ಬಾದಾಮಿ ಚಾಳುಕ್ಯರ 1ನೆಯ ಕೀರ್ತಿವರ್ಮ ಆಳುಕ ದೇಶವನ್ನು ಗೆದ್ದ. ಇದು ದಕ್ಷಿಣ ಕನ್ನಡ ಜಿಲ್ಲೆಯ ಅಂದಿನ ಹೆಸರು. ಅಲ್ಲಿ ಆಗ ಆಳುಪರು ಅಧಿಕಾರದಲ್ಲಿದ್ದರು. ಅವರು ಚಾಳುಕ್ಯರ ಸಾಮಂತರಾಗಿರಲು ಒಪ್ಪಿಕೊಂಡರು. ಇಮ್ಮಡಿ ಪುಲಕೇಶಿಯ ದಿಗ್ವಿಜಯ ಯಾತ್ರೆಯಲ್ಲಿ 1ನೆಯ ಆಳುವರಸ ಭಾಗವಹಿಸಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕಲ್ಲೂರಿನ ವರೆಗೂ ಹೋದ. ಇವನ ರಾಜಧಾನಿ ಮಂಗಲಪುರ - ಈಗಿನ ಮಂಗಳೂರು. ಈತನ ಮಗ ಚಿತ್ರವಾಹನ, ಮಹಾದೇವಿಯ ಮಗ, ಚಾಳುಕ್ಯ ವಿನಯಾದಿತ್ಯನ ಮಗಳಾದ ಕುಂಕುಮ ಮಹಾದೇವಿಯ ಗಂಡ. ಬಾದಾಮಿ ಚಾಳುಕ್ಯರ ಅನಂತರ ರಾಷ್ಟ್ರಕೂಟರು ಆಳತೊಡಗಿದಾಗ ಆಳುವರು ಪಲ್ಲವರ ಸಾಮಂತರಾದರು. ಇಮ್ಮಡಿ ಆಳುವರಸ ಪಟ್ಟಿಯೊಡೆಯನ್ ಎಂದು ಬಿರುದಾಂಕಿತನಾಗಿದ್ದ. ಈ ವೇಳೆಗೆ ಕದಂಬ ಮಂಡಲ ಇವರ ಕೈಯಿಂದ ಜಾರಿತ್ತು. ಪಟ್ಟಿ ಎಂಬುದು ಪೊಂಬುಚ್ಚಪುರಕ್ಕೆ ಇನ್ನೊಂದು ಹೆಸರಾದ ಕಾರಣ ಇವರು ಆ ಪ್ರದೇಶವನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದರೆಂದು ತೋರುತ್ತದೆ. ಉದ್ಯಾವರ ಇವನ ರಾಜಧಾನಿಯಾಗಿತ್ತು. ಇವನ ಅನಂತರ ಇವನ ಇಬ್ಬರು ಮಕ್ಕಳ ನಡುವೆ ಕಲಹಗಳಾದವು. ದೇಶದಲ್ಲಿ ಕ್ಷೋಭೆ ಉಂಟಾಯಿತು. ಇವನ ಮೊಮ್ಮಗ, ರಣಸಾಗರನಮಗ ಪೃಥ್ವೀಸಾಗರ ಮುಮ್ಮಡಿ ಶಳುವರಸನ ಅನಂತರ ತುಳು ನಾಡು ಶಾಂತಿಯನ್ನು ಕಂಡಿತು.

ಚೋಳರ ಒಂದನೆಯ ರಾಜರಾಜ ತುಳು ನಾಡನ್ನು ವಶಪಡಿಕೊಂಡ. ಸು. 1010 ರಿಂದ ಈ ಪ್ರದೇಶ ತಮಿಳು ನಾಡಿನ ಹಾಗೂ ಕರ್ನಾಟಕದ ಸಾರ್ವಭೌಮರನ್ನು ಆಕರ್ಷಿಸಿತು. ಆದರೆ 1ನೆಯ ಬಂಕಿದೇವ, ಪಟ್ಟೆಯೊಡೆಯ ಮುಂತಾದವರು ಈ ಶತ್ರುಗಳನ್ನು ಹಿಮ್ಮೆಟ್ಟಿಸಲು ಹೋರಾಡಿದರು. ಇದಕ್ಕಾಗಿ ಅವರು ಸಾಂತರ ಮನೆತನದವರ ಸಹಾಯ ಕೋರಿದರು. ಅವರೊಂದಿಗೆ ರಕ್ತಸಂಬಂಧಗಳನ್ನೂ ಬೆಳೆಸಿದರು. 1ನೆಯ ಬಂಕಿದೇವ ಸಾಂತರ ಅಮ್ಮಣನ ಮಗಳಾದ ಬೀರಲ ದೇವಿಯನ್ನು ಲಗ್ನವಾಗಿದ್ದ. ಇವರಿಗೆ ಜನಿಸಿದ ಮಂಕಬ್ಬರಸಿ ಸೋದರ ಮಾವನಾದ ಅಮ್ಮಣನ ಮಗ ತೈಲಪನನ್ನುವರಿಸಿದಳು. ತೈಲಪನಮಗ ವೀರಶಾಂತರಸು ಬಂಕಿದೇವನ ಮಗ 5ನೆಯ ಆಳುವರಸನ ಮಗಳಾದ ಅಚಲ ದೇವಿಯನ್ನು ಲಗ್ನವಾದ. ಹೀಗೆ ಇವರ ಬಾಂಧವ್ಯ ಮುಂದುವರೆಯಿತು. 1220 ರಲ್ಲಿ ಒಂದನೆಯ ಕುಲಶೇಖರನ ಬಳಿಕ ಸಾಂತರ ಮನೆತನದ ತ್ರಿಭುವನ ರಾಜನ ಮಗ ಕುಂದಣ ತುಳು ನಾಡಿನ ಅರಸನಾಗಿ ಹತ್ತು ವರ್ಷಗಳ ಕಾಲ ಆಳಿದ. ಅನಂತರ ಕುಲಶೇಖರನ ಮಗ ವಲ್ಲಭದೇವ ಪಟ್ಟಕ್ಕೆ ಬಂದ. 1275 ರಿಂದ ವೀರಪಾಂಡ್ಯನ ಪತ್ನಿ ಬಲ್ಲಮಹಾದೇವಿ ಸುಮಾರು ಎರಡು ದಶಕಗಳ ಕಾಲ ಆಳಿದಳು. ಈಕೆಯ ಅಳಿಯ ಬಂಕಿದೇವ ರಾಜ್ಯಲೋಭಿ. ಅದುವರೆಗೂ ಇಲ್ಲದಿದ್ದ ಅಳಿಯ ಸಂತಾನ ಪದ್ಧತಿಯನ್ನು ಅನುಸರಿಸಿ ರಾಜ್ಯ ತನ್ನದಾಗಬೇಕೆಂದು ಅವನು ಬಯಸಿದ. ರಾಣಿ ರಾಜ್ಯವನ್ನು ಇಬ್ಬಾಗ ಮಾಡಿದಕ್ಷಿಣಾರ್ಧವನ್ನು ಬಂಕಿದೇವನಿಗಿತ್ತಳು. ಇವನ ರಾಜಧಾನಿ ಮಂಗಳಪುರ. ರಾಣಿ ಬಾರಹಕನ್ಯಾಪುರದಿಂದ (ಬಾರಕೂರು) ಆಳುತ್ತಿದ್ದಳು. ಆಕೆಯ ಬಳಿಕ ಆಕೆಯ ಮಗನಾದ ನಾಗದೇವರಸ ತುಳು ನಾಡಿನ ಉತ್ತರಾರ್ಧದ ಅಧಿಪತಿಯಾದ (1300). ಆದರೆ ಕೆಲವೇ ವರ್ಷಗಳಲ್ಲಿ ಆಳಿಯ ಬಂಕಿದೇವ ಇವನನ್ನು ಹೊರದೂಡಿ ತುಳುನಾಡನ್ನು ಆಳತೊಡಗಿದ.

ಬಂಕಿದೇವನ ಮಗ ಸೋಯಿದೇವನ ಕಾಲದಲ್ಲಿ ಹೊಯ್ಸಳ 3ನೆಯ ಬಲ್ಲಾಳ ತುಳು ನಾಡಿನ ಮೇಲೆ ದಂಡೆತ್ತಿ ಬಂದ. ಶತ್ರುವನ್ನು ಎದುರಿಸಲಾರದ ಅರಸ ಬಹುಶಃ ಅವನ ತಂಗಿಯಾಗಿದ್ದರಿರಬಹುದಾದ ಚಿಕ್ಕಾಯಿ (ಕಿಕ್ಕಾಯಿ) ತಾಯಿಯನ್ನು ಹೊಯ್ಸಳನಿಗೆ ಮದುವೆ ಮಾಡಿಕೊಟ್ಟ. ಸೋಯಿ ದೇವನ ಕಾಲದಲ್ಲಿ ಪುನಃ ಬಾರಹಕನ್ಯಾಪುರ ರಾಜಧಾನಿಯಾಯಿತು. ಇವರು ಹೊಯ್ಸಳರ ಸಾಮಂತರಾದರು. ಬಲ್ಲಾಳನ ಮರಣಾನಂತರ ಚಿಕ್ಕಾಯಿತಾಯಿ ಬಾರಕೂರಿನಿಂದ ಆಳತೊಡಗಿದಳು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಬಳಿಕ ತೀರಪ್ರದೇಶವಾದ ತುಳು ನಾಡು ಪ್ರಾಮುಖ್ಯ ಪಡೆಯಿತು. ಮುಸ್ಲಿಮರೊಡನೆ ಹೋರಾಡಲು ಹಿಂದೂ ಅರಸರಿಗೆ ಅಶ್ವಗಳ ಆವಶ್ಯಕತೆ ಅತಿಯಾಗಿತ್ತು. ಎಂತಲೇ ಅವರು ತೀರಪ್ರದೇಶಗಳ ಮೇಲೆ ಹತೋಟಿ ಹೊಂದಿದ್ದರು. ತುಳು ನಾಡನ್ನು ಆಗ ಬಾರಕೂರು ಮತ್ತು ಮಂಗಳೂರು ರಾಜ್ಯಗಳೆಂದು ವಿಭಜಿಸಿ ಒಂದೊಂದು ರಾಜ್ಯಕ್ಕೂ ಸಾಮ್ರಾಟರು ತಮ್ಮ ನೇರವಾದ ಆಧೀನದಲ್ಲಿದ್ದ ದಂಡನಾಯಕರನ್ನೂ ಮಹಾಪ್ರಧಾನರನ್ನೂ ಪ್ರಾಂತ್ಯಾಧಿಕಾರಿಗಳನ್ನಾಗಿ ನೇಮಿಸತೊಡಗಿದರು. ಆಗಿಂದಾಗ್ಗೆ ಏಳುತ್ತಿದ್ದ ದಂಗೆಗಳನ್ನು ಅವರು ಅಡಗಿಸುತ್ತಿದ್ದರು. 14ನೆಯ ಶತಮಾನದ ಕೊನೆಯಲ್ಲಿ ಚೌಟರು ದಂಗೆ ಎದ್ದಾಗ ಮಹಾಪ್ರಧಾನ ಮಂಗಪ್ಪರಸ ಅವರನ್ನು ಸದೆಬಡಿದ.

ಆಕಾಲಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಾಡುವಳ್ಳಿ ನಗಿರೆಗಳಲ್ಲಿ ಸಣ್ಣ ರಾಜ್ಯಗಳು ಸಾಮಂತ ಪದವಿ ಪಡೆದಿದ್ದವು. ಅಂತೆಯೇ ಕಳಸ ಕಾರ್ಕಳದಲ್ಲಿ ಸಹ ತುಂಡರಸರು ತಲೆ ಎತ್ತಿದ್ದರು. ಇವರಲ್ಲಿ ಪರಸ್ಪರಕಲಹಗಳು ಆಗಿಂದಾಗ್ಗೆ ಸಂಭವಿಸುತ್ತಿದ್ದವು. ಇದರಲ್ಲಿ ವಿಜಯನಗರದ ಅಧಿಕಾರಿಗಳು ತಲೆಹಾಕಿ, ಹಲವಾರು ಸಂದರ್ಭಗಳಲ್ಲಿ ಇವರನ್ನು ಹತೋಟಿಯಲ್ಲಿಡುತ್ತಿದ್ದರು. 1565ರ ತಾಳೀಕೋಟೆಯ ಕದನದ ಬಳಿಕ ಪರದೇಶಗಳಿಂದ ಬಂದ ವರ್ತಕರ ರಾಜಕೀಯಕ್ಕೆ ತುಳು ನಾಡು ಬಲಿಯಾಗಿ ತನ್ನ ಪ್ರತ್ಯೇಕತೆಯನ್ನು ಕಳೆದುಕೊಂಡಿತು.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ, ಈ ಪ್ರದೇಶದ ಜನಸಂಖ್ಯೆಯು ೩೦೦೫,೮೯೮ ಆಗಿತ್ತು. ತುಳುನಾಡಿನ ಬಹುಸಂಖ್ಯೆಯ ಜನಸಂಖ್ಯೆ ತುಳುವಾಗಳು, ಇತರ ಸ್ಥಳೀಯ ಜನಾಂಗೀಯ ಗುಂಪುಗಳು ಕನ್ನಡಿಗರು, ಕೊಂಕಣಿಗಳು ಮತ್ತು ಬೇರಿಗಳನ್ನೊಳಗೊಂಡಿದೆ.

ಭಾಷೆ[ಬದಲಾಯಿಸಿ]

ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆ ತುಳು ಭಾಷೆಯಾಗಿದ್ದು, ದ್ರಾವಿಡ ಕುಟುಂಬದ ಭಾಷೆಗಳಿಗೆ ಸೇರಿದೆ ಮತ್ತು ಅವರ ಸ್ಥಳೀಯ ಭಾಷಣಕಾರರನ್ನು ತುಳುವಾ ಎಂದು ಉಲ್ಲೇಖಿಸಲಾಗುತ್ತದೆ. ತುಳುನಾಡಿನಲ್ಲಿ ಮಾತನಾಡುವ ಇತರ ಭಾಷೆಗಳು ಕನ್ನಡ, ಮಲಯಾಳಂ, ಕೊಂಕಣಿ, ಕೋರಗಾ ಮತ್ತು ಬೀರಿ. ಶತಮಾನಗಳವರೆಗೆ ಇದನ್ನು ತುಳುವಾಸ್ ಬಳಸುತ್ತಿದ್ದರು, ಮೊದಲು ಇದನ್ನು ಕನ್ನಡ ಲಿಪಿಯಿಂದ ಬದಲಾಯಿಸಲಾಯಿತು. ಹೆಚ್ಚಿನ ಲಿಖಿತದಲ್ಲಿ ಕೆಲವು ಸಂಸ್ಕೃತ ಕೃತಿಗಳು ಮತ್ತು ತುಳು ಶಾಸ್ತ್ರೀಯ ಈ ಲಿಪಿಯಲ್ಲಿ ಇರುತ್ತವೆ.

ಸಂಸ್ಕೃತಿ[ಬದಲಾಯಿಸಿ]

ಯಕ್ಷಗಾನವು ತುಳುನಾಡಿನಲ್ಲಿ ನಡೆಸುತ್ತಿರುವ ರಾತ್ರಿಯ ನೃತ್ಯ ಮತ್ತು ನಾಟಕ ಪ್ರದರ್ಶನವಾಗಿದೆ. ಪಿಲಿವೇಶಾ ಎಂಬುದು ಈ ಪ್ರದೇಶದಲ್ಲಿನ ಜಾನಪದ[ಶಾಶ್ವತವಾಗಿ ಮಡಿದ ಕೊಂಡಿ] ನೃತ್ಯದ ಒಂದು ವಿಶಿಷ್ಟ ರೂಪವಾಗಿದೆ, ಇದು ಯುವ ಮತ್ತು ಹಳೆಯವರನ್ನು ಆಕರ್ಷಿಸುತ್ತದೆ.ಕರಡಿ ವೇಶ (ಕರಡಿ ನೃತ್ಯ) ತುಳು ನಾಡಿನ ದಸರಾ ಸಮಯದಲ್ಲಿ ಪ್ರದರ್ಶನಗೊಂಡ ಒಂದು ಜನಪ್ರಿಯ ನೃತ್ಯ. ಉಡುಪಿ ಪಾಕಪದ್ಧತಿಯು ದಕ್ಷಿಣ ಭಾರತದಾದ್ಯಂತ ಜನಪ್ರಿಯವಾಗಿದೆ, ಮುಖ್ಯವಾಗಿ ಉಡುಪಿ ಉಪಾಹಾರ ಮಂದಿರಗಳು, ಸಸ್ಯಾಹಾರಿಗಳಾಗಿವೆ. ದಕ್ಷಿಣ ಭಾರತದ ಹೊರತಾಗಿ, ಮುಂಬೈ ಮತ್ತು ನವದೆಹಲಿಯಲ್ಲಿ ಪ್ರಸಿದ್ಧ ಉಡುಪಿ ಉಪಾಹಾರ ಮಂದಿರಗಳಿವೆ

ಶಿಕ್ಷಣ[ಬದಲಾಯಿಸಿ]

ತುಳು ನಾಡು ಭಾರತದ ಪಶ್ಚಿಮ ಕರಾವಳಿಯಲ್ಲಿ ಅತ್ಯಂತ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದೆ. ತುಳುನಾಡಿನಲ್ಲಿ ನೂರಾರು ವೃತ್ತಿಪರ ಕಾಲೇಜುಗಳಿವೆ.ಭಾರತದಾದ್ಯಂತ ಮತ್ತು ವಿದೇಶಗಳಲ್ಲಿರುವ ದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. 1–16