ಜಿ. ಅಶೋಕಬಾಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜಿ. ಅಶೋಕಬಾಬು (೧೩.೦೧.೧೯೫೭)

ಅಂಗವಿಕಲನಾದರೂ ಧೃತಿಗೆಡದೆ ಏನಾದರೂ ಸಾಧಿಸಬೇಕೆಂಬ ಛಲದಿಂದ ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡು ರಂಗಭೂಮಿಯ ಸಂಗೀತದ ದೊಡ್ಡ ಆಸ್ತಿ ಎನಿಸಿರುವ ಅಶೋಕಬಾಬುರವರು ಹುಟ್ಟಿದ್ದು ಬೆಂಗಳೂರು. ತಂದೆ ಎಸ್. ಗೋವಿಂದರಾಜು, ತಾಯಿ ಸರಸ್ವತಿಯಮ್ಮ. ಓದಿದ್ದು ಎಸ್.ಎಸ್.ಎಲ್.ಸಿ. ವರೆಗೆ. ಓದಿನ ಹಂಬಲವಿದ್ದರೂ ಕಾರಣಾಂತರದಿಂದ ಓದಿಗೆ ತಡೆ. ಸಂಗೀತದ ಕಡೆ ಎಳೆದ ಮನಸ್ಸು.

ಶಿವರಾಂ, ಪುಟ್ಟರಾಜು, ಭವಾನಿ ತ್ಯಾಗರಾಜು ಇವರಲ್ಲಿ ಸತತವಾಗಿ ಸಂಗೀತದ ಅಭ್ಯಾಸ. ೧೯೭೭ರಲ್ಲಿ ಸಿ.ಎಸ್. ರಾಜೂರವರ ‘ದೂರಾದ ದೇವರು’ ನಾಟಕಕ್ಕೆ ಸಂಗೀತ ನೀಡುವ ಮೂಲಕ ಸಂಗೀತ ನಿರ್ದೇಶನದ ಹೊಣೆ, ೧೯೭೯ರಲ್ಲಿ ಹೈದರಾಬಾದ್ ದೂರದರ್ಶನದಲ್ಲಿ ‘ಸಂಗೊಳ್ಳಿ ರಾಯಣ್ಣ’, ೧೯೮೦ರಲ್ಲಿ ಮದರಾಸು ದೂರದರ್ಶಕ್ಕಾಗಿ ಪ್ರಭುಶಂಕರ ರವರ ‘ಅಂಗುಲಿ ಮಾಲ’ ೧೯೯೭ರಲ್ಲಿ ದೆಹಲಿಯ ಪೌಸಾ ಆಡಿಟೋರಿಯಂನಲ್ಲಿ ಪ್ರದರ್ಶನಗೊಂಡ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕ, ೧೯೯೮ರಲ್ಲಿ ವಾರಣಾಸಿ ಕನ್ನಡ ಸಂಘದ ಆಶ್ರಯದಲ್ಲೂ ನಡೆದ ಇದೇ ನಾಟಕ ಮತ್ತು ೩೬ ಅಲ್ಲ ೬೩ ನಾಟಕಗಳಿಗೆ, ೧೯೯೮ರಲ್ಲಿ ಕಾಡ್ಮಂಡುವಿನಲ್ಲಿ ನಡೆದ ‘ಜೋಕುಮಾರಸ್ವಾಮಿ’ ನಾಟಕಕ್ಕೆ ನೀಡಿದ ಸಂಗೀತ ನಿರ್ದೇಶನ.

ಹಲವಾರು ದೂರದರ್ಶನ ಧಾರವಾಹಿಗಳಿಗೂ ಸಂಗೀತ ನಿರ್ದೇಶನ ಆಕಾಶಗಂಗಾ, ನಿರುದ್ಯೋಗಿ ಮುಂತಾದುವು. ಸ್ವರ್ಣಮೂರ್ತಿ ಎಂಬ ನಾಟಕ, ಶಂಖಚೂಡ ಸಂಹಾರವೆಂಬ ಪೌರಾಣಿಕ ನಾಟಕ, ಕಡಿವಾಣ ಎಂಬ ಸಾಮಾಜಿಕ ನಾಟಕಗಳಿಗೂ ನೀಡಿದ ಸಂಗೀತ. ಹಂಸಲೇಖ, ಸಿ.ಜಿ.ಕೆ. ಸುರೇಶ್ ಆನಗಳ್ಳಿ, ಶಂಕರನಾಗ್, ಬಿ.ಆರ್.ಜಿ. ರಾವ್, ಆರ್.ಜಿ. ಸಿಂಗ್ ಮುಂತಾದ ರಂಗ ದಿಗ್ಗಜರ ನಾಟಕಗಳಿಗೆ ನೀಡಿದ ರಂಗಸಂಗೀತ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಉರ್ದು, ಕೊಂಕಣಿ, ತುಳು ಭಾಷಾ ನಾಟಕಗಳಿಗೂ ಸಂಗೀತ ನಿರ್ದೇಶನದ ಹೊಣೆ. ಸುಮಾರು ೩೦೦೦ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ.

೧೯೭೮ರಲ್ಲಿ ರಾಷ್ಟ್ರಕವಿ ಕುವೆಂಪುರವರ ಬೆರಳ್‌ಗೆ ಕೊರಳ್ ನಾಟಕಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶಕನೆಂಬ ರಾಜ್ಯಮಟ್ಟದ ಪ್ರಶಸ್ತಿ, ಭಾರತರತ್ನ ಅಂಬೇಡ್ಕರ್ ಸದ್ಭಾವನಾ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿಯಿಂದ ಸುವರ್ಣ ಕರ್ನಾಟಕ ಸನ್ಮಾನ, ಕೆ.ಎಸ್.ಆರ್.ಟಿ.ಸಿ. ನಾಟಕೋತ್ಸವ ಸ್ಪರ್ಧೆಯಲ್ಲಿ ನಾಗಮಂಡಲ ನಾಟಕಕ್ಕೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಮುಂತಾದುವು. ಸಿನಿಮಾಕ್ಕಿಂತ ರಂಗಭೂಮಿಯತ್ತ ಹೆಚ್ಚು ಒಲವು.