ಗರುಡ ಸದಾಶಿವರಾವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗರುಡ ಸದಾಶಿವರಾಯ

ಗರುಡ ಸದಾಶಿವರಾಯರು : - ಕ್ರಿ.ಶ.೧೮೮೦ರ ಸುಮಾರಿಗೆ ಜನಿಸಿದ್ದರು. ಇವರ ತಂದೆ ಗುರುನಾಥ ಶಾಸ್ತ್ರಿ. ಗರುಡ ಸದಾಶಿವರಾಯರು ‘ಗದಗ ಶ್ರೀ ದತ್ತಾತ್ರೇಯ ನಾಟಕ ಮಂಡಳಿ’ ಯನ್ನು ಕಟ್ಟಿ, ಕರ್ನಾಟಕದ ಉದ್ದಗಲಕ್ಕೂ ಸಹಸ್ರಾರು ಪ್ರದರ್ಶನಗಳನ್ನು ನೀಡಿದರು.

ಲೋಕಮಾನ್ಯ ತಿಲಕರ ರಾಷ್ಟ್ರೀಯ ಹೋರಾಟಕ್ಕೆ ಸಂಬಂಧಿಸಿದ ‘ಬಂಧವಿಮೋಚನೆ’ ನಾಟಕದಿಂದ ರಂಗಪ್ರವೇಶ ಮಾಡಿದ ಗರುಡರು ೫೦ಕ್ಕೂ ಹೆಚ್ಚು ವರ್ಷಗಳನ್ನು ರಂಗಭೂಮಿಯ ಮೇಲೆ ಕಳೆದಿದ್ದಾರೆ. ಸುಮಾರು ೫೦ ಪೌರಾಣಿಕ,ಸಾಮಾಜಿಕ,ಐತಿಹಾಸಿಕ ಹಾಗು ರಾಷ್ಟ್ರೀಯ ನಾಟಕಗಳನ್ನು ಬರೆದು ಪ್ರಯೋಗಿಸಿದ್ದಾರೆ. ಇವರ ‘ಶ್ರೀ ರಾಮಪಾದುಕಾ ಪಟ್ಟಾಭಿಷೇಕ’ ರಂಗಭೂಮಿಯ ಇತಿಹಾಸದಲ್ಲಿಯೆ ಮಹತ್ವದ ನಾಟಕ.

"ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಕಟ್ಟಿ ಬೆಳೆಸಿ, ಅದಕ್ಕಾಗಿ ನಾಟಕಗಳನ್ನು ಕೂಡ ಬರೆದು ಪ್ರದರ್ಶಿಸಿದ ಕೀರ್ತಿ ಶ್ರೀ ಸದಾಶಿವರಾವ್ ಗರುಡ ಅವರದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕೂಡ ಶ್ರೀ ಸದಾಶಿವರಾವ್ ಗರುಡ ಅವರ "ಸತ್ಯ ಸಂಕಲ್ಪ" ನಾಟಕವನ್ನು ನೋಡಿ ಮೆಚ್ಚಿಕೊಂಡಿದ್ದು ವಿಶೇಷ. ಶ್ರೀ ಸದಾಶಿವರಾವ್ ಗರುಡ ಅವರ "ಕಂಸವಧ", "ಕೃಷ್ಣಲೀಲಾ", ಲಂಕಾದಹನ" ಮುಂತಾದ ನಾಟಕಗಳು ಬ್ರಿಟಿಷ್ ಆಡಳಿತದ ವಿರುದ್ಧ ಪರೋಕ್ಷವಾಗಿ ಧ್ವನಿ ಎತ್ತಿದ್ದು ಗಮನ ಸೆಳೆದ ಅಂಶ. ಈ ನಾಟಕಗಳನ್ನು ಆಗ ನೋಡಿದ ಪ್ರೇಕ್ಷಕರು ಉತ್ಸಾಹದಿಂದ "ಜೈ ಭಾರತ ಮಾತಾ", "ಬ್ರಿಟಿಷರಿಗೆ ಧಿಕ್ಕಾರ"ಎಂದು ಘೋಷಣೆ ಕೂಗುತ್ತಿದ್ದರು ಎನ್ನುವುದನ್ನೂ ಸ್ಮರಿಸಬಹುದು.

"ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ", "ನಾಟ್ಯಾಚಾರ್ಯ" ಹೀಗೆ ಹತ್ತು ಹಲವು ಬಿರುದಾವಳಿಗಳನ್ನು ಪಡೆದ ಶ್ರೀ ಸದಾಶಿವರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು "ಗರೂಡ ಸದಾಶಿವರಾಯರು" ಎಂದೇ ಕರೆಯುತ್ತಿದ್ದರು. ರಂಗಭೂಮಿಯು ಉಚ್ರಾಯ ಸ್ಥಿತಿಯಲ್ಲಿದ್ದ ೧೯೦೫ ರಿಂದ ೧೯೪೦ರ ಅವಧಿಯಲ್ಲಿ ಬಂದ ವೃತ್ತಿನಿರತ ರಂಗಕರ್ಮಿಗಳು ಹಾಗೂ ನಾಟಕಕಾರರಲ್ಲಿ ಶ್ರೀ ಸದಾಶಿವರಾವ್ ಗರುಡ ಅವರದ್ದು ದೊಡ್ಡ ಹೆಸರು. ವೃತ್ತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದುಕೊಟ್ಟ ಕೀರ್ತಿಯೂ ಶ್ರೀ ಗರೂಡ ಸದಾಶಿವರಾವ್ ಅವರದ್ದು. ಈಗಲೂ ಅನೇಕ ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವರಾವ್ ಗರುಡ ಅವರ "ರಂಗಭೂಮಿ ಶಿಸ್ತು" ಪಾಲಿಸಿಕೊಂಡು ಹೋಗುತ್ತಿದ್ದಾರೆ."ನಮನ"

ಗರುಡ ನಾಟ್ಯ ಸಂಘ (ರಿ)[ಬದಲಾಯಿಸಿ]

ಗರುಡ ನಾಟ್ಯ ಸಂಘ (ರಿ):ಇದು "ನಾಟಕಾಲಂಕಾರ" ಬಿರುದಾಂಕಿತ ಶ್ರೀ ಗರುಡ ಸದಾಶಿವರಾಯರ ಕುಟುಂಬದ ಮೂರನೇ ತಲೆಮಾರಿನವರು ಸ್ಥಾಪಿಸಿರುವ ಕಲಾ ಹಾಗೂ ಸಾಂಸ್ಕೃತಿಕ ಸಂಘಟನೆ. ಈ ಗರುಡ ನಾಟ್ಯ ಸಂಘವು ಮೊದಲು ಚಟುವಟಿಕೆ ಆರಂಭಿಸಿದ್ದು ಗದಗ ಜಿಲ್ಲೆಯಲ್ಲಿ. ಅದೇ ಗರುಡ ಸದಾಶಿವರಾಯರು ವಾಸವಾಗಿದ್ದ ಊರು. ಅಲ್ಲಿಯೇ ಗರುಡ ಸದಾಶಿವರಾಯರ ನೆನಪಿನಲ್ಲಿ ಆರಂಭಗೊಂಡ ಸಂಘವು ಈಗ ಬೆಂಗಳೂರಿನಲ್ಲಿ ಹೊಸದೊಂದುಹುರುಪಿನೊಂದಿಗೆ ಬೆಳೆಯುತ್ತಿದೆ.ರಂಗಭೂಮಿಯಲ್ಲಿ ಖ್ಯಾತಿ ಪಡೆದ ಶ್ರೀ ಗರುಡ ಸದಾಶಿವರಾಯರ ನೆನಪನ್ನು ಹಸಿರಾಗಿ ಉಳಿಸುವ ಉದ್ದೇಶದೊಂದಿಗೆ ಈ ಸಂಘವನ್ನು ಸ್ಥಾಪಿಸಿದ್ದು ಅವರ ಮಕ್ಕಳಾದ ದತ್ತಾತ್ರೇಯ, ಶ್ರೀಪಾದರಾವ್, ವಲ್ಲಭರಾವ್ ಹಾಗೂ ನರಹರಿರಾವ್ ಅವರು. ಆದರೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ನಿರಂತರವಾಗಿ ಚಟುವಟಿಕೆಯಲ್ಲಿ ಉಳಿಸಿಕೊಂಡು ಬಂದ ಶ್ರೇಯ ಸಲ್ಲುವುದು ಮಾತ್ರ ಶ್ರೀಪಾದರಾವ್ ಗರುಡ ಅವರಿಗೆ ಮಾತ್ರ."ನಮನ"


ಗರುಡರ ಕೆಲವು ಪ್ರಸಿದ್ಧ ನಾಟಕಗಳು:

  • ಶ್ರೀ ರಾಮಪಾದುಕಾ ಪಟ್ಟಾಭಿಷೇಕ.
  • ಸತ್ಯಸಂಕಲ್ಪ
  • ಎಚ್ಚಮನಾಯಕ
  • ಮಾರ್ಕಂಡೇಯ
  • ಕೀಚಕವಧೆ
  • ಬಲಸಿಂಹ ತಾರಾ
  • ಶಕ್ತಿವಿಲಾಸ
  • ಶಶಿಕಲಾ
  • ಉಗ್ರಕಲ್ಯಾಣ
  • ವಿಷಮ ವಿವಾಹ
  • ಕಂಸವಧೆ
  • ನಾನು ಕನ್ನಡಿಗ
  • ಶ್ರೀ ಶರಣ ಬಸವೇಶ್ವರ
  • ತುಕಾರಾಮ


೧೯೫೪ರಲ್ಲಿ ಗರುಡ ಸದಾಶಿವರಾಯರು ನಿಧನರಾದರು.