ಕನ್ನಡ ಚಳುವಳಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ[ಬದಲಾಯಿಸಿ]

ಏಕೀಕರಣೋತ್ತರ ಕರ್ನಾಟಕವನ್ನು ಪ್ರಗತಿ ಪರವಾಗಿ ರೂಪಿಸಲು ಬೌದ್ಧಿಕ ಹಾಗೂ ಭೌತಿಕ ಈ ಎರಡು ನೆಲೆಗಳಲ್ಲೂ ನಡೆಸಿದ ಚಳವಳಿಗಳನ್ನು ಕನ್ನಡ ಚಳವಳಿ ಎಂದು ಗುರುತಿಸಲಾಗುತ್ತದೆ. ಬೌದ್ಧಿಕವಾಗಿ ಅಥವಾ ಸೈದ್ಧಾಂತಿಕವಾಗಿ ಕರ್ನಾಟಕವನ್ನು ರೂಪಿಸುವ ಕಾರ್ಯದಲ್ಲಿ ಪ್ರಧಾನವಾದ ಪಾತ್ರವೆಂದರೆ, ಛಿದ್ರಗೊಂಡಿದ್ದ ಕನ್ನಡ ಪ್ರದೇಶಗಳಲ್ಲಿನ ಸೃಜನಶೀಲದ ಸಾಹಿತ್ಯಕ ಸೃಷ್ಟಿ. ಇದು ಕನ್ನಡದ ಸಂವೇದನೆಯನ್ನು ಕಾಯ್ದುಕೊಂಡು ಬಂದ ಸಾಂಸ್ಕೃತಿಕ ಪ್ರಕ್ರಿಯೆ. ಈ ಪ್ರಕ್ರಿಯೆ ಕವಿರಾಜಮಾರ್ಗಕಾರನಿಂದ ಮೊದಲ್ಗೊಂಡು ಬೇಂದ್ರೆ, ಕುವೆಂಪು ಅವರನ್ನು ಒಳಗೊಂಡಂತೆ ಇತ್ತೀಚಿನ ಸಾಹಿತ್ಯ ಸೃಷ್ಟಿಯವರೆಗೂ ಮುಂದುವರಿದಿದೆ. ಅಂದರೆ ನಾಡು, ನುಡಿ ಮತ್ತು ಕನ್ನಡಿಗರನ್ನು ಕುರಿತಂತೆ ಸಂಸ್ಕೃತ, ಇಂಗ್ಲಿಷ್ ಇನ್ನಿತರ ಭಾಷೆಗಳನ್ನು ಎದುರುಗೊಳ್ಳುವುದರೊಂದಿಗೆ ಕನ್ನಡದ ಅನನ್ಯತೆಯನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ. 12ನೆಯ ಶತಮಾನದ ಎಲ್ಲ ವರ್ಗಗಳ ವಚನಕಾರರು ಕನ್ನಡ ಸಂವೇದನೆಯನ್ನು ಮೆರೆದದ್ದು ಮಹತ್ವಪೂರ್ಣ ವಾದುದು. ಎಲ್ಲ ರೀತಿಯ ಸಂವಹನ, ಅನುಸಂಧಾನಗಳಿಗೆ ಕನ್ನಡ ಭಾಷೆಯೊಂದನ್ನೇ ಮಾಧ್ಯಮವನ್ನಾಗಿಸಿದ್ದು ವಚನಗಳ, ವಚನಕಾರರ ಹೆಗ್ಗಳಿಕೆ. ಈ ದಿಸೆಯಲ್ಲಿ ವಚನಕಾರರನ್ನು ಮೊದಲ ಭಾಷಿಕ (ಕನ್ನಡ) ಹರಿಕಾರರು ಎನ್ನಬಹುದು. ಅನಂತರದ ನವೋದಯ, ಪ್ರಗತಿಶೀಲರ ಸಾಹಿತ್ಯ ಸೃಷ್ಟಿ, ಭಾರತದ ಸ್ವಾತಂತ್ರ್ಯ ಏಕೀಕರಣದ ಪ್ರಕ್ರಿಯೆ ಇವುಗಳು ಈ ಕನ್ನಡ ಚಳವಳಿಗಳಿಗೆ ಪ್ರೇರಣೆ ನೀಡಿದವು. ಇಂಥ ಪ್ರೇರಣೆ, ಪ್ರಯತ್ನಗಳಿಂದಾಗಿ ವಸಾಹತು ಕಾಲದಲ್ಲಿ ತುಂಡಾಗಿದ್ದ ಕನ್ನಡ ಭೂ ಪ್ರದೇಶಗಳು ಒಂದುಗೂಡಿದವು. ಹೀಗೆ ಒಂದಾದದ್ದೂ ಕನ್ನಡ ಚಳವಳಿಯೇ ಆಗಿದೆ. ಆದರೂ ಭಿನ್ನ ಸ್ವರೂಪದ ಚಳವಳಿಯ ಪ್ರಕ್ರಿಯೆಗಳು ಕಾಣಿಸಿಕೊಂಡದ್ದು ಏಕೀಕರಣದ ಅನಂತರವೇ.[೧]

ಸಾಂಸ್ಕೃತಿಕವಾಗಿ ದತ್ತವಾದ ಕನ್ನಡದ ಸಂವೇದನೆಗಳನ್ನು ತನ್ನದಾಗಿಸಿಕೊಂಡಿದ್ದ ರಾಜಕಾರಣ ಸೋಲನ್ನು ಅನುಭವಿಸತೊಡಗಿದ್ದು ಏಕೀಕರಣದ ಅನಂತರವೇ. ಆಡಳಿತದ ದೃಷ್ಟಿಯಿಂದ ಒಂದುಗೂಡಿದ ವಿಭಿನ್ನ ಪ್ರದೇಶಗಳ ಕನ್ನಡಿಗರ ಅಭಿರುಚಿ, ಸಂಸ್ಕೃತಿಗಳು ಭಿನ್ನವಾಗಿದ್ದುದರಿಂದ, ಇದನ್ನು ಅರಿಯಲು ಹಾಗೂ ಅರಿತು ಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಲು ರಾಜಕಾರಣಿಗಳು ಸೋತರು. ಇದರ ಪರಿಣಾಮವಾಗಿಯೇ ಕನ್ನಡ ಚಳವಳಿ ಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿತು. 1960ರ ದಶಕದಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಆಶೋತ್ತರಗಳ ಈಡೇರಿಕೆಗಾಗಿ ಕನ್ನಡಿಗರು ಮತ್ತೆ ಸಂಘಟಿತರಾಗುವ ಅನಿವಾರ್ಯತೆ ಹುಟ್ಟಿಕೊಂಡಿತು. ಏಕೀಕೃತ ಕರ್ನಾಟಕ ಎಲ್ಲ ಕನ್ನಡ ಪ್ರದೇಶಗಳನ್ನು ಒಂದೇ ಆಡಳಿತದ ತೆಕ್ಕೆಗೆ ಪುರ್ತಿಯಾಗಿ ತೆಗೆದುಕೊಂಡಿರಲಿಲ್ಲ. ಜತ್, ಅಕ್ಕಲಕೋಟೆ, ಸೊಲ್ಲಾಪುರ, ಕಾಸರಗೋಡು, ಆಲೂರು, ಆದವಾನಿ, ರಾಯದುರ್ಗ, ಮಡಕಶಿರ, ಗೂಳ್ಯಂ, ಕೌತಾಳ್, ಬದನೆಹಾಳ್, ಹೊಸೂರು, ತಾಳವಾಡಿ, ನೀಲಗಿರಿ ಮೊದಲಾದವು ಕನ್ನಡ ರಾಜ್ಯಕ್ಕೆ ಸೇರಲಿಲ್ಲ. ಬದಲಾಗಿ, ತೆಲುಗು, ತಮಿಳು, ಮಲೆಯಾಳ, ಮರಾಠಿ ಮೊದಲಾದ ಭಾಷಿಕರೊಂದಿಗೆ ಆಯಾ ರಾಜ್ಯ ಸರ್ಕಾರಗಳ ಒತ್ತಡಗಳಿಗೆ ಮಣಿಯುವಂತೆ ಆಗಿತ್ತು. ಏಕೀಕರಣ ಸ್ಥಳೀಯ ಗಡಿಭಾಗಗಳ ಕನ್ನಡಿಗರನ್ನು ಭಾಷಿಕ ಕೀಳರಿಮೆಗೆ ಒಳಗಾಗುವಂತೆ ಮಾಡಿತು. ಈ ಕುರಿತ ಸಮಸ್ಯೆಗಳು ಕರ್ನಾಟಕ ಸರ್ಕಾರದ ಆಡಳಿತ ನೀತಿಗೆ ಸವಾಲಾಗಿ ಪರಿಣಮಿಸಿದವು.

ನಾಡಿನ ರಾಜಧಾನಿಯೂ ಆಡಳಿತ ವ್ಯವಸ್ಥೆಯ ಕೇಂದ್ರವೂ ಆಗಿದ್ದ ಬೆಂಗಳೂರು ನಗರ ಕನ್ನಡೇತರರ ಪ್ರಾಬಲ್ಯದ ಕೇಂದ್ರವಾಯಿತು. ಹಳೆಯ ಮೈಸೂರು, ಮುಂಬಯಿ, ಹೈದರಾಬಾದ್, ಮದರಾಸು ಹಾಗೂ ಕೊಡಗು ಪ್ರದೇಶಗಳಲ್ಲಿ ಕನ್ನಡಿಗರ ಮನೋಗತವನ್ನು ಅರಿಯುವಲ್ಲಿ ರಾಜಕಾರಣ ವಿಫಲವಾಯಿತು. ಸಾಂಸ್ಕೃತಿಕವಾಗಿ ಒಪ್ಪುತ್ತಿದ್ದ ಕರ್ನಾಟಕ ಎಂಬ ಹೆಸರಿಗೆ ಬದಲಾಗಿ ವಿಶಾಲ ಮೈಸೂರು ರಾಜ್ಯವೆಂಬ ಹೆಸರಿನಿಂದ ಏಕೀಕರಣವನ್ನು ಸಾಧಿಸಿದ್ದು ಕನ್ನಡಿಗರಲ್ಲಿ ಆಘಾತವನ್ನುಂಟುಮಾಡಿತ್ತು. ಇದಕ್ಕೆ ಮುಂಬಯಿ ಕರ್ನಾಟಕದ (ಉತ್ತರದ) ಕನ್ನಡಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದೂ ಉಂಟು. ಇಂಥ ಹಲವು ಕಾರಣಗಳಿಂದಾಗಿ ನಾಡಿನ ಏಕೀಕರಣ ಸಮಾಧಾನವನ್ನುಂಟು ಮಾಡಿರಲಿಲ್ಲ. ಇದರ ಪರಿಣಾಮವೇ ಬೆಂಗಳೂರಿನ ಪರಿಸರದಲ್ಲಿ ಕನ್ನಡ ಚಳವಳಿ ಸಂಘಟಿತ ರೂಪ ಪಡೆದು, ನಾಡಿನ ಉಳಿದೆಡೆಗಳಿಗೆ ಅದು ಕ್ರಮೇಣ ಪಸರಿಸಿತು. ಆದರೆ ಇದರಲ್ಲಿ ಬೆಂಗಳೂರು ಕೇಂದ್ರಿತ ಕನ್ನಡ ಚಳವಳಿಗಳ ಪಾಲು ದೊಡ್ಡದು.

ಬೆಂಗಳೂರಿನ ಕನ್ನಡ ಪರಿಸರ[ಬದಲಾಯಿಸಿ]

ಮೈಸೂರು ಸಂಸ್ಥಾನದ ಆಡಳಿತ ಕೇಂದ್ರವಾಗಿದ್ದ ಬೆಂಗಳೂರು ಏಕೀಕರಣದ ಅನಂತರ ರಾಜ್ಯದ ರಾಜಧಾನಿಯಾಗಿ ಮುಂದುವರಿಯಿತು. ಅದರಿಂದ ನಗರದ ಬೆಳೆವಣಿಗೆಯೂ ಸಾಧಿಸಿತು. ಆದರೆ ನಾಡು, ನುಡಿ, ಸಂಸ್ಕೃತಿಗಳ ಕೇಂದ್ರಸ್ಥಾನವಾಗಿ ಅದು ತನ್ನನ್ನು ಗುರುತಿಸಿಕೊಳ್ಳಲಿಲ್ಲ. ಕನ್ನಡಿಗರಿಗೆ ಭರವಸೆ ಮೂಡಿಸುವ ಹಾಗೂ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಬೆಂಗಳೂರು ವಿಫಲವಾಯಿತು. ಇದಕ್ಕೆ ಕಾರಣವೆಂದರೆ ಅಲ್ಲಿ ನೆಲೆಸಿದ್ದ ಕನ್ನಡೇತರರ ಪ್ರಾಬಲ್ಯ, ಹಿಂದಿನ ಕಮೀಷನರು, ದಿವಾನರುಗಳ ಆಡಳಿತದಿಂದಲೂ ಶಿಕ್ಷಣ, ಉದ್ಯೋಗಗಳನ್ನರಸಿ ಬರುವ ಕನ್ನಡೇತರರಿಗೆ ಪ್ರೇರಣೆ ನೀಡಿತ್ತು. ದೇಶದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣದ ಅನಂತರವೂ ಅನೇಕ ಉದ್ದಿಮೆಗಳು ಬೆಂಗಳೂರಿನಿಂದ ಆಕರ್ಷಿತವಾದವು. ಇವುಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಬಹುಪಾಲು ಪಕ್ಕದ ತಮಿಳುನಾಡಿನ ತಮಿಳುಭಾಷಿಕರೇ ಆಗಿದ್ದರು. ಜೊತೆಗೆ ಇತರ ಭಾಷಿಕರೂ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಕೇಂದ್ರ ಸರ್ಕಾರಿ ಉದ್ಯಮಗಳಲ್ಲೂ ಇವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿದ್ದ ಐ.ಟಿ.ಐ., ಬಿ.ಇ.ಎಲ್., ಎಚ್.ಎಂ.ಟಿ., ಮೈಕೋ ಮೊದಲಾದ ಕಾರ್ಖಾನೆಗಳಲ್ಲಿ ಕನ್ನಡಿಗರ ಸಂಖ್ಯೆ ತೀರ ಕಡಿಮೆ. ಸ್ಥಳೀಯ ಕನ್ನಡಿಗರಿಗೆ ಸೇಕಡ 50ರಷ್ಟು ಪ್ರಾತಿನಿಧ್ಯ ಕೊಡಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರಿ ಸಂಘ ಸಂಸ್ಥೆಗಳು ಮುರಿದಿದ್ದವು. ಅಂಚೆ, ತಂತಿ, ರೈಲ್ವೆ ಮೊದಲಾದ ಇಲಾಖೆಗಳಲ್ಲಿ ಕನ್ನಡ ಮಾತನಾಡುವವರೇ ಇರಲಿಲ್ಲ. ಸಾರಿಗೆ, ಪೋಲೀಸು ಇಲಾಖೆಗಳಂಥ ರಾಜ್ಯ ಸರ್ಕಾರಿ ನೌಕರಿಗಳಲ್ಲೂ ತಮಿಳರು ಉದ್ಯೋಗಗಳನ್ನು ಪಡೆದಿದ್ದರು.

ಬೆಂಗಳೂರಿನ ಜನನಿಬಿಡ ಪ್ರದೇಶಗಳಾದ ರೈಲ್ವೆ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ (ಇಂದಿನ ಮೆಜಿಸ್ಟಿಕ್ ಪ್ರದೇಶ), ಗಾಂಧಿನಗರ ಮೊದಲಾದ ಕಡೆಗಳಲ್ಲಿ ತಮಿಳು ಮಾತನಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕನ್ನಡದ ನಾಮಫಲಕಗಳು ಕಾಣುತ್ತಿರಲಿಲ್ಲ. ಬದಲಾಗಿ ತಮಿಳು ಹಾಗೂ ಇಂಗ್ಲಿಷನವೆ ಹೆಚ್ಚು. ಕನ್ನಡಿಗರನ್ನು ಸ್ವಾಗತಿಸುತ್ತಿದ್ದ ಕೂಲಿ ಆಳುಗಳು, ರಿP್ಷÁ ಚಾಲಕರು ತಮಿಳರೇ ಆಗಿದ್ದರು. ತೆಲುಗು, ಮಲೆಯಾಳ, ಹಿಂದಿ, ಮರಾಠಿ ಭಾಷೆಗಳನ್ನು ಆಡುವವರನ್ನೂ ನೋಡಬಹುದಿತ್ತು. ದೂರದ ಊರುಗಳಿಂದ ಬೆಂಗಳೂರಿಗೆ ಬರುತ್ತಿದ್ದ ಕನ್ನಡಿಗರು ಕನ್ನಡೇತರರಿಂದ ಅವಮಾನ, ಕೀಟಲೆಗಳನ್ನು ಅನುಭವಿಸುವ ಪರಿಸ್ಥಿತಿ ಉದ್ಭವವಾಗಿತ್ತು. ಆಗ ಇದನ್ನು ಪ್ರತಿಭಟಿಸುವ ಯಾವುದೇ ಸಂಘಟಿತ ಮಾರ್ಗಗಳು ಕನ್ನಡಿಗರಿಗೆ ಇರಲಿಲ್ಲ. ಇಂಥ ವೇದಿಕೆಗಳನ್ನು ನಿರ್ಮಿಸಿಕೊಂಡು ಕನ್ನಡತನವನ್ನು ಮೂಡಿಸಲು ಮುಂದೆ ಬಂದವರು ಬೆರಳೆಣಿಕೆಯಷ್ಟು ಸಂಖ್ಯೆಯ ಮಂದಿ ಮಾತ್ರ. ಅ.ನ.ಕೃಷ್ಣರಾವ್, ಕೋಣಂದೂರು ಲಿಂಗಪ್ಪ, ಮ.ರಾಮಮೂರ್ತಿ, ನಾಡಿಗೇರ ಕೃಷ್ಣರಾವ್, ಮೈ.ಸು.ನಟರಾಜ, ಮೈ.ಸು.ಶೇಷಗಿರಿರಾವ್, ಕರ್ಲಮಂಗಲಂ ಶ್ರೀಕಂಠಯ್ಯ, ಬೆ.ನಿ.ಈಶ್ವರಪ್ಪ, ತಿ.ತಾ.ಶರ್ಮ, ಎಂ.ವಿ.ಸುಬ್ಬರಾವ್ ಮೊದಲಾದವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಇವರೆಲ್ಲ 1960ರ ದಶಕದ ಆರಂಭಿಕ ವರ್ಷಗಳಲ್ಲಿ ಕನ್ನಡದ ಚಳವಳಿಗಾಗಿ ತಮ್ಮನ್ನು ತೊಡಗಿಸಿಕೊಂಡವರು. ಆದರೆ ಇವರನ್ನು ಒಂದು ವೇದಿಕೆಯಡಿಗೆ ತಂದ ಕೋಣಂದೂರು ಲಿಂಗಪ್ಪ ಅವರ ಪ್ರಯತ್ನಗಳು ಪ್ರಧಾನವಾದವು. ಕನ್ನಡ ಚಳವಳಿಗೆ ಆರಂಭಿಕ ನೆಲೆಗಟ್ಟನ್ನು ಹಾಕಿಕೊಟ್ಟ ಕೀರ್ತಿ ಅವರಿಗೂ ಇತರ ಆದ್ಯ ಹೋರಾಟಗಾರರಿಗೂ ಸಲ್ಲುತ್ತದೆ.

ಚಳವಳಿಯ ಮೊದಲ ಘಟ್ಟ[ಬದಲಾಯಿಸಿ]

ರಾಮಮನೋಹರ ಲೋಹಿಯ ಅವರ ಭಾಷಿಕ ಸಿದ್ಧಾಂತಗಳಿಂದ ಪ್ರೇರಿತರಾಗಿದ್ದ ಶಾಂತವೇರಿ ಗೋಪಾಲಗೌಡರು ತಮ್ಮದೇ ಆದ ರೀತಿಯಲ್ಲಿ ಕನ್ನಡಕ್ಕಾಗಿ ಚಿಂತನೆ ನಡೆಸಿದ್ದರು. ರಾಜಕಾರಣದಲ್ಲಿ ಇವರು ಪ್ರಯತ್ನ ನಡೆಸಿದ್ದಂತೆ ಇದೇ ದಿಕ್ಕಿನಲ್ಲಿ ಸಾಹಿತ್ಯಕವಾಗಿ ಕುವೆಂಪು ಮೊದಲಾದವರು ಚಿಂತನೆ ನಡೆಸಿದ್ದರು. ಪ್ರಗತಿಶೀಲದ ವಲಯದಲ್ಲಿ ಅ.ನ.ಕೃ. ಆದಿಯಾಗಿ ಅನೇಕರು ಈ ಕುರಿತು ತಾತ್ತ್ವಿಕ ತಳಹದಿಯನ್ನು ರೂಪಿಸಲು ಪ್ರಯತ್ನಗಳನ್ನು ಮಾಡಿದ್ದು ಗಮನಾರ್ಹ. ಶಾಂತವೇರಿಯವರ ಶಿಷ್ಯರಾಗಿದ್ದ ಕೋಣಂದೂರು ಲಿಂಗಪ್ಪ ಬೆಂಗಳೂರಿಗೆ (ವಿದ್ಯಾರ್ಥಿ ದೆಸೆಯಲ್ಲಿ) ಬಂದಾಗ ತಮಿಳರಿಂದ ಅಪಮಾನಕ್ಕೆ ಒಳಗಾದರು. ಈ ಅಪಮಾನದ ಪರಿಣಾಮವಾಗಿ ಅವರು ಕರ್ನಾಟಕ (ಕನ್ನಡ) ಯುವಜನ ಸಭಾವನ್ನು ಹುಟ್ಟುಹಾಕಿದರು. 1957ರ ವೇಳೆಗೆ ಲೋಹಿಯ ಕರೆಯನ್ನು ಅನುಸರಿಸಿ ಅಂಗ್ರೇಜಿ (ಇಂಗ್ಲಿಷ್) ಹಠಾವೋ ಚಳವಳಿ ಆರಂಭಗೊಂಡಿತ್ತು. ಮೈಸೂರಿನಲ್ಲಿ ಕುವೆಂಪು ಅವರು ಸಹ ಈ ಕರೆಗೆ ಸ್ಪಂದಿಸಿದರು. ಇಂಗ್ಲಿಷ್ ಪ್ರಾಧ್ಯಾಪಕರ ರಾಷ್ಟ್ರೀಯ ಸಭೆಯೊಂದು ಮೈಸೂರಿನಲ್ಲಿ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಲು ಕೋಣಂದೂರು ಲಿಂಗಪ್ಪ, ಪುರ್ಣಚಂದ್ರತೇಜಸ್ವಿ, ಕೆ.ಎಚ್. ಶ್ರೀನಿವಾಸ, ಕಡಿದಾಳ್ ಶಾಮಣ್ಣ ಮೊದಲಾದ ವಿದ್ಯಾರ್ಥಿಗಳಿಗೆ ಕುವೆಂಪು ಪ್ರೇರಣೆ ನೀಡಿದ್ದರು. ಈ ಪ್ರತಿಕ್ರಿಯೆಗೆ ಇಂಗ್ಲಿಷಿನಲ್ಲಿಯೇ ಪ್ರತಿಭಟನಾ ಕರಪತ್ರಗಳನ್ನು ರಚಿಸುವುದು ಅನಿವಾರ್ಯವಾಯಿತು. ಆಗ ಇಂಗ್ಲಿಷ್ ವಿರುದ್ಧ ಇಂಗ್ಲಿಷಿನಲ್ಲಿಯೇ ಕರಪತ್ರವೊಂದನ್ನು ಬರೆದುಕೊಟ್ಟವರು ಯು.ಆರ್.ಅನಂತಮೂರ್ತಿ, ಇಂಗ್ಲಿಷ್ ಪ್ರಾಧ್ಯಾಪಕರ ಸಭೆಯಲ್ಲಿ ಕನ್ನಡದ ಯುವಕರು ಈ ಕರಪತ್ರಗಳನ್ನು ಹಂಚುವುದರ ಮುಖೇನ ಕನ್ನಡದ ಪ್ರಾಶಸ್ತ್ಯದ ಕಡೆಗೆ ಗಮನ ಸೆಳೆದಿದ್ದರು. ಇಂಥ ಚಟುವಟಿಕೆಗಳನ್ನು ಹುಟ್ಟುಹಾಕಿದ ಮೊತ್ತಮೊದಲ ಯುವ ಸಂಘಟನೆಯೇ ಕನ್ನಡ ಯುವಜನ ಸಭಾ. ಇದು ಮೈಸೂರಿನ ಇಂದಿನ ದಾಸ್ ಪ್ರಕಾಶ್ ಹೊಟೇಲ್ ಬಳಿ ತನ್ನ ಮೊದಲ ಸಭೆ ಸೇರಿ ಕನ್ನಡದ ಅಳಿವು ಉಳಿವಿನ ಬಗ್ಗೆ ಚಿಂತನೆ ನಡೆಸಿತ್ತು. ಇದು ಕನ್ನಡ ಚಳವಳಿಯ ಚರಿತ್ರೆಯಲ್ಲಿಯೇ ಮೊದಲ ಸಂಘಟನೆಯಾಗಿತ್ತು.

ಬೆಂಗಳೂರಿನಲ್ಲಿ ಕನ್ನಡತನವನ್ನು ಮೂಡಿಸುವುದಕ್ಕೆ ಕನ್ನಡ ಯುವಜನ ಸಭಾದ ವೇದಿಕೆಯನ್ನು ಬಳಸಿಕೊಳ್ಳಲಾಯಿತು. ಬೆಂಗಳೂರಿನಲ್ಲಿ ಚಳವಳಿ ಹೂಡುವುದಕ್ಕೆ ಮೊದಲು ನಾಡಿನ ಇತರ ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ 120ಕ್ಕೂ ಹೆಚ್ಚಿನ ಸಭಾದ ಶಾಖೆಗಳನ್ನು ತೆರೆದು ಸಂಘಟಿಸಿದ್ದು ಗಮನಾರ್ಹ ಸಂಗತಿ. 1959ರ ವೇಳೆಗೆ ಕನ್ನಡದ ಸ್ಥಿತಿಗತಿಗಳ ಸುಧಾರಣೆಗಾಗಿ ಕನ್ನಡಿಗರು ಸಂಘಟಿತರಾಗುವುದು ಅನಿವಾರ್ಯ ಎಂಬ ವಾತಾವರಣವನ್ನು ಮೂಡಿಸಲಾಗಿತ್ತು. ಇದಕ್ಕೆ ಸಾಹಿತಿ ಅ.ನ.ಕೃ. ಅವರ ಪ್ರಯತ್ನ, ಪ್ರವಾಸ ಕಾರ್ಯಕ್ರಮಗಳು ಹೆಚ್ಚಿನ ಹುರುಪನ್ನು ತಂದಿದ್ದವು. ಅ.ನ.ಕೃ. ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೆಂದು ಪರಿಷತ್ತು (ಕ.ಸಾ.ಪ.) ಈ ವೇಳೆಗಾಗಲೇ ಘೋಷಿಸಿತ್ತು. ಅ.ನ.ಕೃ. ಅವರು ತಮ್ಮ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ (ಮಣಿಪಾಲ, 1960), ಕನ್ನಡದ ಬಂಟರ ಆವಶ್ಯಕತೆಯನ್ನು ಒತ್ತಿ ಹೇಳಿದ್ದರು. ಸಮ್ಮೇಳನದಲ್ಲಿದ್ದ ಈ ಕನ್ನಡ ಯುವಜನ ಸಭಾದ ಯುವಕರು ಕನ್ನಡ ಯುವಜನ ಸಭೆಯನ್ನು ವರಕವಿ ಬೇಂದ್ರೆ ಅವರಿಂದ ವಿದ್ಯುಕ್ತವಾಗಿ ಉದ್ಘಾಟನೆ (28-12-1960) ಮಾಡಿಸಿದ್ದು ಒಂದು ದಾಖಲೆ. ಲಿಂಗಪ್ಪನವರು ಸಭಾದ ಸಂಚಾಲಕರಾಗಿ ನಾಡಿನ ವಿವಿಧ ಕಡೆಗಳಲ್ಲಿ ಅ.ನ.ಕೃ. ಅವರಿಂದ ಭಾಷಣ ಮಾಡಿಸಿ ಜಾಗೃತಿ ಮೂಡಿಸಿದರು. ಮುಂದೆ ಬೆಂಗಳೂರಿನಲ್ಲಿ ಸಭೆ ಸೇರಿ ಎಂ.ವಿ.ಸುಬ್ಬರಾಯರ ಸಾಹಿತ್ಯ ಕುಟೀರದ ಅಡಿಯಲ್ಲಿ ಕನ್ನಡ ಕೆಲಸದ ರೂಪ ರೇಷೆಗಳನ್ನು ಸಿದ್ಧಪಡಿಸಲಾಯಿತು. ಇದರಲ್ಲಿ ಬಹುಪಾಲು ಹಿರಿಯ ಸಾಹಿತಿ,

ಕಲಾವಿದರು ಭಾಗವಹಿಸಿದ್ದರು. ಸಭಾದವರು ಹಿರಿಯರ ಸಹಕಾರ ಪಡೆದು ಆಲೂರ ವೆಂಕಟರಾಯರ ಕರೆಗೆ ಓಗೊಟ್ಟು ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವವನ್ನು (1961) ಆಚರಿಸಿದ್ದು ಗಮನಾರ್ಹ. ಅಲ್ಲದೆ ಬೆಂಗಳೂರಿನಲ್ಲಿ ಕನ್ನಡಿಗರನ್ನು ಸಂಘಟಿಸಿ ಪ್ರತಿಕ್ರಿಯಿಸುವಂತೆ ಮಾಡಲು ಸಭಾದ ಯುವಕರು ಕನ್ನಡ ದಿನವನ್ನು ಆಚರಿಸಲು ಕರೆಕೊಟ್ಟರು. ಅದರಂತೆ 23-11-1961ರಂದು ನಾಡು ನುಡಿಗಳ ಬಗ್ಗೆ ಅರಿವು ಮೂಡಿಸಲಾಯಿತು. ಇದಾದ ಅನಂತರ ದಾವಣಗೆರೆಯಲ್ಲಿ ಬೃಹತ್ ಸಮಾವೇಶವೊಂದನ್ನು ನಡೆಸಲು ಸಿದ್ಧತೆಗಳನ್ನು ಮಾಡಲಾಯಿತು. ಬೆಂಗಳೂರಿನಲ್ಲಿ ಸಭಾದ ಮೊದಲ ಬೃಹತ್ ಅಧಿವೇಶನ ನಡೆಯಿತು. ಕನ್ನಡ ಭುವನೇಶ್ವರಿ ಬಾವುಟವನ್ನು ಹಾರಿಸುವುದರೊಂದಿಗೆ (4-12-1962) ಉದ್ಘಾಟನೆಗೊಂಡ ಈ ಬೃಹತ್ ಅಧಿವೇಶನ ಕನ್ನಡ ಚಳವಳಿಯ ಚರಿತ್ರೆಯಲ್ಲಿ ಮುಖ್ಯವಾದುದು. ಇಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕಗಳಿಗೆ ಸಂಬಂಧಿಸಿದಂತೆ 15 ನಿರ್ಣಯಗಳನ್ನು ಮಂಡಿಸಿ ಸ್ವೀಕರಿಸಲಾಯಿತು. ನಾಡಿನ ಗಡಿಗಳು, ರೈಲ್ವೆ, ಪ್ರಶಸ್ತಿ, ಕನ್ನಡ ಬೆರಳಚ್ಚುಯಂತ್ರ, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಮಾಧ್ಯಮ, ಕನ್ನಡ ಕಲಾವಿದರಿಗೆ ಆದ್ಯತೆ, ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ, ಆರ್ಥಿಕ, ಅಭಿವೃದ್ಧಿ ಮೊದಲಾದ ಎಲ್ಲ ವಿಚಾರಗಳೂ ನಿರ್ಣಯಗಳಲ್ಲಿ ಸೇರಿದ್ದವು. ಈ ನಿರ್ಣಯಗಳನ್ನು ನಾಡಿನ ಎಲ್ಲ ಕನ್ನಡಪರವಾದ ಸಂಘಟನೆಗಳಿಗೂ ಕಳುಹಿಸಿಕೊಡಲಾಯಿತು. ಆದರೆ ಬೆಂಗಳೂರಿನ ಚಾಮರಾಜಪೇಟೆಯ ರಾಮಸೇವಾ ಮಂಡಲಿಯವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕನ್ನಡ ಕಲಾವಿದರನ್ನು ಕರೆಸದೆ ಸಭೆಯ ನಿರ್ಣಯಗಳನ್ನು ಮುರಿದರು. ಮದರಾಸಿನಿಂದ ಎಂ.ಎಸ್. ಸುಬ್ಬುಲಕ್ಷ್ಮಿಯವರನ್ನು ಕರೆಸಿ ಸಂಗೀತ ಕಛೇರಿಯನ್ನು ನಡೆಸಿದ್ದು ಕನ್ನಡ ಕಾರ್ಯಕರ್ತರ ಪ್ರತಿಭಟನೆಗೆ ಗುರಿಯಾಗುವಂತೆ ಮಾಡಿತು.

ಶಾಂತ ರೀತಿಯಲ್ಲಿ ಕನ್ನಡದ ಕಳಕಳಿಯನ್ನು ಪ್ರದರ್ಶಿಸಲು ಹಾತೊರೆದಿದ್ದ ಕಾರ್ಯಕರ್ತರನ್ನು ಕಿಡಿಗೇಡಿಗಳು ಕೆಣಕಿದರು. ಪರಿಸ್ಥಿತಿ ಹಿಂಸಾತ್ಮಕ ರೂಪ ಪಡೆದು, ಪೊಲೀಸರಿಂದ ಲಾಠಿ ಪ್ರಹಾರ ಆಯಿತು. ತಮಿಳು ಪತ್ರಿಕೆಗಳು ಇದನ್ನು ಭಾಷಿಕ ದ್ವೇಷವೆಂದು ತಿರುಚಿ ಬರೆದವು. ಕನ್ನಡಿಗರಿಗೆ ಸಂಕುಚಿತರೆಂಬ ಪಟ್ಟ ಕಟ್ಟಲು ಪ್ರಯತ್ನಿಸಿದ ಈ ಘಟನೆ ಕನ್ನಡ ಚಳವಳಿಯನ್ನು ಭಿನ್ನ ಸ್ವರೂಪದಲ್ಲಿ ಗ್ರಹಿಸಲು ಎಡೆಮಾಡಿಕೊಟ್ಟಿತು.

ಕನ್ನಡ ಜಾಗೃತ ಪರಿಷತ್ ಹಾಗೂ ಸಂಯುಕ್ತ ರಂಗ[ಬದಲಾಯಿಸಿ]

ಬೆಂಗಳೂರಿನಲ್ಲಿ ಅ.ನ.ಕೃ., ಮ. ರಾಮಮೂರ್ತಿ ಮೊದಲಾದ ಚಳವಳಿ ನಾಯಕರು ಕನ್ನಡಪರವಾದ ಸಂಘ ಸಂಸ್ಥೆಗಳನ್ನು ಕಟ್ಟಿಕೊಳ್ಳಲು ಕರೆ ನೀಡಿದ್ದರು. ತಮಿಳರ ಸಂಘಟನೆಗಳು ವಿಪರೀತವಾಗತೊಡಗಿದ್ದವು. ಅದರಲ್ಲೂ ಡಿ.ಎಂ.ಕೆ. (ದ್ರಾವಿಡ ಮುನ್ನೇಟ್ರ ಕಳಗಂ) ಪಕ್ಷದವರ ಕಪ್ಪು ಮತ್ತು ಕೆಂಪು ಬಣ್ಣದ ಬಾವುಟಗಳ ಹಾರಾಟ ಹೆಚ್ಚಾಯಿತು. ಕನ್ನಡಿಗರಿಗೆ ನಿರ್ದಿಷ್ಟ ಕನ್ನಡ ಬಾವುಟ ಇರಲಿಲ್ಲ. ಭುವನೇಶ್ವರಿ, ಕರ್ನಾಟಕ ಭೂಪಟ, ಗಂಡಭೇರುಂಡ, ಚಿತ್ರಗಳಿರುವ ಬಾವುಟಗಳನ್ನೇ ಬಳಸುತ್ತಿದ್ದರು. ಹೀಗಾಗಿ ಕನ್ನಡದ ಈ ಸಂಘಟನೆಗಳು ಬಾವುಟದ ಕೊರತೆಯನ್ನು ಮನಗಂಡು ಕ್ರಿಯಾಶೀಲವಾಗಿದ್ದವು. ಕನ್ನಡಿಗರಲ್ಲಿ, ಸಂಘ ಸಂಸ್ಥೆಗಳಲ್ಲಿ ಅಭಿಮಾನವನ್ನು ಮೂಡಿಸಲು ಕನ್ನಡ ಜಾಗೃತ ಪರಿಷತ್ ಎಂಬ ಸಂಘಟನೆ ಹುಟ್ಟಿಕೊಂಡಿತು. ಕನ್ನಡದ ಅಭಿಮಾನಕ್ಕಾಗಿ, ಚಳವಳಿಯ ರೂಪರೇಷೆಗಳಿಗಾಗಿ ಈ ಸಂಘಟನೆ ಹೊರಡಿಸಿದ ಪತ್ರಿಕೆಯೇ ‘ಕನ್ನಡ ಜಾಗೃತ ಪತ್ರ’. ಇದು ತ್ರೈಮಾಸಿಕವಾಗಿತ್ತು. ಕೆಲವೇ ದಿನಗಳಲ್ಲಿ ಇದೇ ಆಶಯಕ್ಕಾಗಿ ಧ್ರುವ ಎಂಬ ಮಾಸಿಕ ಹೊರಬಂತು. ಎಂ.ನಾಗರಾಜ್ ಅವರು ಇವೆರಡರ ಸಂಪಾದಕರಾಗಿದ್ದರು. ಪತ್ರಿಕೆ ನಡೆಸಿ, ನಷ್ಟ ಅನುಭವಿಸಿ ಆತ್ಮಹತ್ಯೆ, ಮಾಡಿಕೊಂಡರು. ಈ ದುರಂತ ಘಟನೆ ಕನ್ನಡ ಯುವಜನ ಸಭಾದವರಿಗೆ ಮತ್ತಷ್ಟು ಕೆಚ್ಚು, ಹುಮ್ಮಸ್ಸುಗಳನ್ನು ತುಂಬಿತು. ಸಭಾದವರು ಚಳವಳಿಗಳಿಗಾಗಿಯೇ `ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಲಾರಂಭಿಸಿದರು. ಇದರ ಸಂಪಾದಕರಾಗಿದ್ದವರು ಚಳವಳಿಗಾರ ಮ. ರಾಮಮೂರ್ತಿ. ಅ.ನ.ಕೃ. ಮತ್ತು ಮ.ರಾಮಮೂರ್ತಿ ಅವರು ಜನ ಕರೆದೆಡೆಗೆ ಹೋಗಿ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಸಲಹೆ ನೀಡಿ ಸಂಘಟಿಸತೊಡಗಿದರು.

ಇದರ ಪರಿಣಾಮವಾಗಿ ಹುಟ್ಟಿಕೊಂಡಿದ್ದೇ ಕರ್ನಾಟಕ ಸಂಯುಕ್ತ ರಂಗ. ಕನ್ನಡದ ಎಲ್ಲ ಸಂಸ್ಥೆಗಳನ್ನು ಒಂದೇ ವೇದಿಕೆಯಡಿಗೆ ತರುವುದು ಇದರ ಆಶಯವಾಗಿತ್ತು. 1962ರಲ್ಲಿ ಅಸ್ತಿತ್ವಕ್ಕೆ ಬಂದ ಈ ರಂಗದ ಅಧ್ಯಕ್ಷರು ಅ.ನ.ಕೃ., ಕಾರ್ಯದರ್ಶಿ ಮ. ರಾಮಮೂರ್ತಿ. ಇವರೊಂದಿಗೆ ತ.ರಾ.ಸು., ಅ.ನ.ಸುಬ್ಬರಾವ್, ಬೀಚಿ, ವೀರಕೇಸರಿ ಸೀತಾರಾಮಶಾಸ್ತ್ರೀ, ನಾ.ಕೃ. ಸತ್ಯನಾರಾಯಣ, ಭಾರತೀಂದ್ರಸ್ವಾಮಿ, ಸುಬ್ಬರಾವ್ ಮೊದಲಾದವರು ಸೇರಿಕೊಂಡಿದ್ದರು. ಸಂಯುಕ್ತ ರಂಗದಿಂದಾಗಿ ಪ್ರಧಾನ ಧಾರೆಗೆ ಸಭಾವು ಬರಲಾಗದಿದ್ದರೂ ತನ್ನದೇ ಆದ ಮಿತಿಗಳ ನಡುವೆಯೇ ಕನ್ನಡದ ಚಟುವಟಿಕೆಗಳನ್ನು ಚಾಲ್ತಿಯಲ್ಲಿ ಇಟ್ಟಿತ್ತು.

ಕನ್ನಡ ನಾಡು ಏಕೀಕೃತವಾಗಿ 1963ರ ವೇಳೆಗೆ ಏಳು ವರುಷಗಳಾಗಿದ್ದವು. ಆದರೆ ಕನ್ನಡಿಗರ ಆಶಯಗಳು ಈಡೇರಿರಲಿಲ್ಲ. ಈ ಕುರಿತು ಜಾಗೃತಿ ಮೂಡಿಸಲು ಆ ವರ್ಷದ ನವೆಂಬರ್ ಒಂದರಂದು ಸ್ವಾತಂತ್ರ್ಯೋತ್ಸವದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಿಸಲು ಸಂಯುಕ್ತ ರಂಗ ಯೋಜಿಸಿತು. ಅದರಂತೆ 1963ರ ನವೆಂಬರ್ 1ದನ್ನು ರಾಜ್ಯೋತ್ಸವ ದಿನವನ್ನಾಗಿ ಅದ್ದೂರಿಯಾಗಿ ಆಚರಿಸಲಾಯಿತು. ನಾಡಿನ ಎಲ್ಲ ಕನ್ನಡಪರ ಸಂಘಟನೆಗಳನ್ನೂ ಬೆಂಗಳೂರಿನ ಧರ್ಮಾಂಬುಧಿ ಕೆರೆಯ (ಸುಭಾಶ್ ನಗರ, ಈಗಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ನಿಲ್ದಾಣವಿರುವ ಪ್ರದೇಶ) ಮೈದಾನದಲ್ಲಿ ಸೇರುವಂತೆ ಮಾಡಿತು. ಕನ್ನಡ ಚಳವಳಿ ಚರಿತ್ರೆಯಲ್ಲಿ ಇದೇ ಪ್ರಥಮಬಾರಿ ರಾಜ್ಯೋತ್ಸವ ನಡೆಯಿತು. ಅನಂತರ ಪ್ರತಿ ವರ್ಷವೂ ಈ ಆಚರಣೆ ಜಾರಿಗೆ ಬಂತು. ಕನ್ನಡಕ್ಕಾಗಿ ದುಡಿದ ರಾಮಮೂರ್ತಿ ಅವರ ಉತ್ಸಾಹ, ಅಭಿಮಾನಗಳನ್ನು ಕಂಡು ಅವರನ್ನು ಕನ್ನಡ ಸೇನಾನಿ ಎಂದು ಕರೆಯಲಾಯಿತು. ಏಕೆಂದರೆ ಕನ್ನಡ ಕಾರ್ಯಕರ್ತರ ಮೊಕದ್ದಮೆಗಳಲ್ಲಿ ಇವರೇ ಜಾಮೀನುದಾರರು. ಕನ್ನಡದ ಕಾರಣಕ್ಕಾಗಿ ಇವರು ಅನೇಕ ಮೊಕದ್ದಮೆಗಳನ್ನು ಎದುರಿಸಿದರು.

ಚಲನಚಿತ್ರ ಮತ್ತು ಕನ್ನಡ ಚಳವಳಿ[ಬದಲಾಯಿಸಿ]

ಇದೇ ವೇಳೆಗೆ ಕನ್ನಡ ಚಲನಚಿತ್ರ ರಂಗದಲ್ಲಿಯೂ ಕನ್ನಡತನ ಬಡವಾಗಿತ್ತು. ಕನ್ನಡ ಕಲಾವಿದರಿಗೆ ನಿರ್ಮಾಪಕ ನಿರ್ದೇಶಕರಿಗೆ ಕನ್ನಡನಾಡಿನಲ್ಲಿ ಪ್ರಾತಿನಿಧ್ಯವಿರಲಿಲ್ಲ. ಹೆಚ್ಚಾಗಿ ಪರಭಾಷೆಯ ಚಿತ್ರಗಳು ಓಡುತ್ತಿದ್ದವು. ಕನ್ನಡ ಚಿತ್ರಗಳಿಗೆ ಎರಡು ಅಥವಾ ಮೂರನೆಯ ಸ್ಥಾನ ಮೀಸಲಾಗಿತ್ತು. ಕನ್ನಡದ ಕಲಾವಿದರಲ್ಲಿ ಕೆಲವರು ಅನ್ಯಭಾಷೆಗಳಲ್ಲಿ ನೆಲೆನಿಂತು ಅಭಿಮಾನಶೂನ್ಯರಾಗಿದ್ದರು. ಕನ್ನಡಿಗರಿಗೆ ಥಿಯೇಟರ್, ಸ್ಟುಡಿಯೋ ಸಮಸ್ಯೆಗಳ ಜೊತೆಗೆ ಡಬ್ಬಿಂಗ್ ಹಾವಳಿಯೂ ಆವರಿಸಿಕೊಂಡಿತ್ತು. ಬೇರೆ ಭಾಷೆಗಳಲ್ಲಿನ ಚಿತ್ರಗಳು ಕನ್ನಡ ಭಾಷೆಗೆ ಡಬ್ ಆಗಿ ಕನ್ನಡತನವಿಲ್ಲದಂತೆ ಮಾಡಿದ್ದವು. ಕರ್ನಾಟಕ ಸರ್ಕಾರದಿಂದಲೂ ಕನ್ನಡ ಚಲನಚಿತ್ರೋದ್ಯಮಕ್ಕೆ ಆದ್ಯತೆ ದೊರೆತಿರಲಿಲ್ಲ. ಇಂಥ ಸಮಸ್ಯೆಗಳನ್ನು ಕನ್ನಡ ಚಳವಳಿಗಾರರು ಕೈಗೆತ್ತಿಕೊಂಡರು. ಮ.ರಾಮಮೂರ್ತಿ, ಅ.ನ.ಕೃ. ಮೊದಲಾದವರು ಪ್ರತಿಭಟನೆಯ ಹಾದಿ ಹಿಡಿದರು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜರಂಥ ಯುವಕರು ಚಳವಳಿಗೆ ಧುಮುಕಿದರು. ಕನ್ನಡದ ಮೇರು ನಟ ರಾಜಕುಮಾರ್ ಅವರನ್ನೂ ಒಳಗೊಂಡಂತೆ ಜಿ.ವಿ. ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ಸೇರಿ ಕನ್ನಡ ಚಲನಚಿತ್ರ ಕಲಾವಿದರ ಸಂಘವನ್ನು ರಚಿಸಲಾಯಿತು. ಈ ಸಂಘಟನೆಯ ಅಡಿಯಲ್ಲಿ ಅನೇಕ ಕನ್ನಡ ಚಿತ್ರಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆದವು. ಇಂಥ ಚಿತ್ರಗಳನ್ನು ಸಿನಿಮಾ ಮಂದಿರದ ಮಾಲೀಕರು ಕಡ್ಡಾಯವಾಗಿ ಪ್ರದರ್ಶಿಸಲು ಒತ್ತಾಯಿಸಲಾಯಿತು. ಖಾಸಗಿ ಉದ್ಯಮಗಳ, ಸಂಘಸಂಸ್ಥೆಗಳ ಯುವಕರೂ ಈ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ಕನ್ನಡದ ನಿರ್ಮಾಪಕರುಗಳಿಗೆ, ಕನ್ನಡ ಚಿತ್ರಗಳಿಗೆ ಭರವಸೆಯ ವಾತಾವರಣ ಮೂಡುವಂತಾಯಿತು.

ಮದರಾಸಿನಲ್ಲಿ ಚಲನಚಿತ್ರದ ಉದ್ಯಮ ಪ್ರಗತಿಪರವಾಗಿತ್ತು. ಇದಕ್ಕೆ ಅಲ್ಲಿನ ಕಲಾವಿದರ, ರಾಜಕಾರಣಿಗಳ ಸ್ವಭಾಷಿಕ ಪ್ರೇಮವೇ ಕಾರಣವಾಗಿತ್ತು. ತಮಿಳು ಚಿತ್ರರಂಗಕ್ಕೆ ಎಂ.ಜಿ.ಆರ್.(ಎಂ.ಜಿ.ರಾಮಚಂದ್ರನ್), ಎಂ.ಕರುಣಾನಿಧಿ ಅವರು ನೀಡಿದ ಪ್ರೋತ್ಸಾಹ ಬಹು ದೊಡ್ಡದು. ಬೆಂಗಳೂರಿನ ಡಿ.ಎಂ.ಕೆ. ಪಕ್ಷದ ಕಾರ್ಯಕರ್ತರು ಇತರೆ ತಮಿಳು ಸಂಘಟನೆಗಳೊಂದಿಗೆ ಸೇರಿಕೊಂಡು ತಮಿಳು ಚಲನಚಿತ್ರಗಳಿಗೆ ಅತಿಯಾಗಿ ಪ್ರೋತ್ಸಾಹಿಸುತ್ತಿದ್ದರು. 1964ರ ವೇಳೆಗೆ ಎಂ.ಜಿ.ಆರ್. ನಟಿಸುತ್ತಿದ್ದ ಚಲನಚಿತ್ರಗಳು ಬೆಂಗಳೂರಿನ ತಮಿಳರನ್ನು ಅತಿಯಾಗಿ ವರ್ತಿಸುವಂತೆ ಮಾಡಿದ್ದವು. ಇದರ ಪರಿಣಾಮವಾಗಿ ‘ಕಾಂಚಿ ತಲೈವನ್’ ಚಲನಚಿತ್ರದ ವಿರುದ್ಧ ಕನ್ನಡ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿತು. ‘ಕಾಂಚಿ ತಲೈವನ್’ ಚಲನಚಿತ್ರ (1964) ಕಂಚಿಯ ಪಲ್ಲವರ ದೊರೆ 1ನೆಯ ನರಸಿಂಹವರ್ಮ ಬಾದಾಮಿ ಚಳುಕ್ಯ ದೊರೆ ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಕಥೆಯನ್ನೊಳಗೊಂಡಿದೆ. ಕನ್ನಡಿಗರನ್ನು ಅವಮಾನಿಸಲೋ ಎಂಬಂತೆ ತಮಿಳು ದೊರೆ ಕರ್ನಾಟಕದ ಬಾವುಟವನ್ನು ಕಾಲಿನಲ್ಲಿ ತುಳಿಯುವ ದೃಶ್ಯಗಳನ್ನು ಆ ಚಿತ್ರದಲ್ಲಿ ಚಿತ್ರೀಕರಿಸಲಾಗಿತ್ತು. ಚರಿತ್ರೆಯ ಸೂಕ್ಷ್ಮ ಸಂಗತಿಗಳನ್ನು ಭಾಷಿಕ ನೆಲೆಯಲ್ಲಿ ವೈಯಕ್ತಿಕವಾಗಿ ತೆಗೆದುಕೊಂಡ ಸಂದರ್ಭ ಇದಾಗಿತ್ತು. ತಮಿಳರ ಈ ವರ್ತನೆ ಕನ್ನಡಿಗರನ್ನು ಕೆರಳಿಸಿತು. ಚಳವಳಿಗಾರರು, ಇತಿಹಾಸ ತಜ್ಞರು, ವಿದ್ವಾಂಸರು, ಕನ್ನಡಾಬಿsಮಾನಿಗಳು ಚಲನಚಿತ್ರದ ಕೆಲವು ಭಾಗಗಳನ್ನು ತೆಗೆದುಹಾಕಲು ಒತ್ತಾಯಿಸಿ ಪ್ರತಿಭಟಿಸಿದರು. ಆದರೂ ಆಕ್ಷೇಪಾರ್ಹ ಭಾಗಗಳನ್ನು ತೆಗೆಯದೆ ಚಿತ್ರವನ್ನು ಪ್ರದರ್ಶಿಸತೊಡಗಿದ್ದು ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿತು. ಈ ಘಟನೆ ಹಿಂಸಾರೂಪಕ್ಕೆ ತಿರುಗಿತು. ಈ ಘಟನೆಯೇ ಅ.ನ.ಕೃ. ಹಾಗೂ ರಾಮಮೂರ್ತಿಯವರಲ್ಲಿ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ಭಾವೋದ್ವೇಗ ಬಿಟ್ಟು ಚರಿತ್ರೆಯನ್ನು ನೋಡಬೇಕೆಂಬ ವಿಚಾರ ಅ.ನ.ಕೃ. ಅವರದು. ಭಾವನೆಯೂ ಚರಿತ್ರೆಯ ಭಾಗ ಎಂಬುದು ರಾಮಮೂರ್ತಿಯವರ ನಿಲವು. ಇಂಥ ತಾತ್ವಿಕ ಭಿನ್ನಾಭಿಪ್ರಾಯದಿಂದಾಗಿ ಕಡೆಗೆ ಅ.ನ.ಕೃ. ಕನ್ನಡ ಚಳವಳಿಯಿಂದ ಹಿಂದಕ್ಕೆ ಸರಿದರು. ಆದರೆ ನಾಡಿನ ಬೇರೆಡೆಗಳಲ್ಲೂ ಈ ಚಲನಚಿತ್ರ ಪ್ರದರ್ಶಿತವಾಗದಂತೆ ಮ.ರಾಮಮೂರ್ತಿ ಚಳವಳಿ ಹೂಡಿದರು. ಭದ್ರಾವತಿ, ಹಾಸನ ಮೊದಲಾದೆಡೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಚಳವಳಿಗಾರರ ಮೇಲೆ ಪೋಲೀಸರು ಮೊಕದ್ದಮೆಗಳನ್ನು ದಾಖಲು ಮಾಡಿದ್ದೂ ಇದೆ. ಇವೆಲ್ಲ ಕಾರಣಗಳಿಂದ ತಮಿಳರ ಹಾಗೂ ಕನ್ನಡಿಗರ ಮಧ್ಯೆ ಭಾಷಿಕ ವೈಷಮ್ಯ ವೃದ್ಧಿಸಿತು. ಇದರಿಂದಾಗಿ ಚಳವಳಿ ಹಾಗೂ ಪ್ರತಿಭಟನೆಗಳ ಮೂಲಕ ಕನ್ನಡ ಚಲನಚಿತ್ರರಂಗ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬರುವಂತಾಯಿತು. ಮ. ರಾಮಮೂರ್ತಿ ಮತ್ತು ಕನ್ನಡ ಚಳವಳಿ: ಅ.ನ.ಕೃ. ಅವರು ದೂರ ಸರಿದರೂ ಮ.ರಾಮಮೂರ್ತಿ ಅವರು ಏಕಾಂಗಿಯಾಗಿ ಸಂಯುಕ್ತ ರಂಗವನ್ನು ಮುನ್ನಡೆಸಿದರು. ತಮಿಳರು ಡಿ.ಎಂ.ಕೆ. ಪಕ್ಷದವರ ಸಹಕಾರದಿಂದ ತಾವು ವಾಸಿಸುವ ಕಡೆಗಳಲ್ಲಿ ತಮಿಳು ಬಾವುಟಗಳನ್ನು ಹಾರಾಡಿಸಿದರು. ಈ ಸಂಗತಿ ಕನ್ನಡ ಕಾರ್ಯಕರ್ತರನ್ನು ಪ್ರಚೋದಿಸಿತು. ಕನ್ನಡದ ಪ್ರದೇಶಗಳಲ್ಲಿ ಕನ್ನಡದ ಬಾವುಟಕ್ಕೆ ಪ್ರಾಶಸ್ತ್ಯವೆಂದು ರಾಮಮೂರ್ತಿ ಚಳವಳಿ ಹೂಡಿದರು. ಇದರ ಪರಿಣಾಮವಾಗಿ ಹಿಂಸಾಕೃತ್ಯಗಳೂ ಜರುಗಿದವು. ತಮಿಳರ ಸಂಖ್ಯೆ ಹೆಚ್ಚಿದ್ದ ಕಡೆಗಳಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆದವು. ಬೆಂಗಳೂರಿನಲ್ಲಿ ತಮಿಳರೇ ಹೆಚ್ಚಾಗಿದ್ದ ಶ್ರೀರಾಮಪುರ, ಜೋಗುಪಾಳ್ಯ, ನಾಗಪ್ಪ ಬ್ಲಾಕ್, ಕಾಕ್ಸ್‌ ಟೌನ್, ಫ್ರೇಜರ್ ಟೌನ್, ದಂಡು ಪ್ರದೇಶ ಮೊದಲಾದ ಕಡೆಗಳಲ್ಲಿ ಕನ್ನಡ ಚಳವಳಿ ಹಾಗೂ ಕನ್ನಡದ ಸಂಘಟನೆ ತೀವ್ರಗೊಂಡಿತು. ತಮಿಳರೇ ಹೆಚ್ಚಾಗಿದ್ದ ಕೆಲವು ಕಾರ್ಖಾನೆಗಳಲ್ಲಿ ಕನ್ನಡ ಕಾರ್ಮಿಕರು ಹಿಂಸೆ ಹಾಗೂ ಹಲ್ಲೆಗೆ ಒಳಗಾದರು. ಇದಕ್ಕೆ ಕೆಲವೊಮ್ಮೆ ಡಿ.ಎಂ.ಕೆಯಂಥ ರಾಜಕೀಯ ಪಕ್ಷದ ಬೆಂಬಲವೂ ಕೆಲವು ತಮಿಳುಪರ ಪತ್ರಿಕೆಗಳ ಬರೆವಣಿಗೆಯ ಬೆಂಬಲವೂ ಇತ್ತು. ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿದ್ದ ಚುನಾವಣೆಗಳಿಗೆ ತಮಿಳರೂ ಸ್ಪರ್ಧಿಸುವ ಮಟ್ಟಿಗೆ ಬಲಾಢ್ಯರಾದರು. ಹಿರಿಯೂರಿನಲ್ಲಿ ತಮಿಳರೇ ಹೆಚ್ಚು ಸಂಖ್ಯೆಯಲ್ಲಿದ್ದರು. ಇವರು ತಮ್ಮ ಕ್ಷೇತ್ರದಲ್ಲಿ ಡಿ.ಎಂ.ಕೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರೊಂದಿಗೆ ಪ್ರಾತಿನಿಧ್ಯ ಪಡೆದದ್ದು ಗಮನಾರ್ಹ ಸಂಗತಿ. ಹಿರಿಯೂರಿನ ವೃತ್ತದಲ್ಲಿ ಡಿ.ಎಂ.ಕೆ. ಪಕ್ಷದ ಬಾವುಟವನ್ನೂ ಪ್ರದರ್ಶಿಸಲಾಗಿತ್ತು. ಇದಕ್ಕೆ ಸ್ಥಳೀಯ ಕನ್ನಡಿಗರು ಪ್ರತಿಭಟಿಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ರಾಮಮೂರ್ತಿ ಅವರು ತಮ್ಮ ಕಾರ್ಯಕರ್ತರೊಂದಿಗೆ ಖುದ್ದಾಗಿ ಬಂದು ಡಿ.ಎಂ.ಕೆ. ಬಾವುಟವನ್ನು ತೆಗೆಸಿ ಕನ್ನಡಿಗರನ್ನು ಹುರಿದುಂಬಿಸಿದರು. ಈ ಎಲ್ಲ ಪ್ರಯತ್ನಗಳೂ ಕನ್ನಡಿಗರನ್ನು ಸಂಘಟಿಸುವುದರ ಜೊತೆಗೆ ಕನ್ನಡ ಬಾವುಟದ ಅನಿವಾರ್ಯತೆ ರಾಜಕಾರಣಿಗಳ ನಿರಭಿಮಾನವನ್ನು ಸಾಬೀತುಪಡಿಸಿದ್ದವು. ಇದರ ಪರಿಣಾಮವಾಗಿ ಚಳವಳಿಯಲ್ಲಿ ಜಾತೀಯತೆ, ರಾಜಕಾರಣದ ಸ್ವಾರ್ಥ ಚಿಂತನೆಗಳು ನುಸುಳುವಂತೆ ಆಯಿತು. ಕನ್ನಡೇತರರ ಮತಗಳನ್ನು ತಮ್ಮ ದೃಷ್ಟಿಯಲ್ಲಿ ಇಟ್ಟುಕೊಂಡಿದ್ದ ಕೆಲವು ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ಹಿಂಜರಿದವು. ಹೀಗಾಗಿ ಕನ್ನಡಿಗರ ಆಶೋತ್ತರಗಳಿಗಾಗಿ

ಪ್ರಾದೇಶಿಕವಾದ ರಾಜಕೀಯ ಪಕ್ಷವೊಂದರ ಅಗತ್ಯತೆ ಕಾರ್ಯಕರ್ತರನ್ನು ಕಾಡಿತು. ಈ ನಿಟ್ಟಿನಲ್ಲಿ ಆಲೋಚಿಸುವುದಕ್ಕೆ ಮೊದಲೇ ಕನ್ನಡ ಚಳವಳಿಯಲ್ಲಿ ಜಾತೀಯವಾದ ತಲೆದೋರಿತು. ಬ್ರಾಹ್ಮಣ ಹಾಗೂ ಬ್ರಾಹ್ಮಣೇತರರೆಂಬ ಎರಡು ಗುಂಪುಗಳು ಹುಟ್ಟಿಕೊಂಡವು. ಸಂಯುಕ್ತ ರಂಗದ ಚಳವಳಿ ನಾಯಕರನ್ನು (ರಾಮಮೂರ್ತಿ ಅವರನ್ನೂ ಒಳಗೊಂಡಂತೆ) ಬ್ರಾಹ್ಮಣರ ಗುಂಪಿಗೆ ಸೇರಿಸಲಾಗಿತ್ತು. ಚಳವಳಿಯನ್ನು ಭಿನ್ನ ರೀತಿಯಾಗಿ ನಡೆಸುವಲ್ಲಿ, ಉತ್ಸಾಹ ತೋರಿದ್ದ ವಾಟಾಳ್ ನಾಗರಾಜರ ನೇತೃತ್ವದ ಗುಂಪು ಬ್ರಾಹ್ಮಣೇತರರೆಂದು ಗುರುತಿಸಿಕೊಳ್ಳುವಂತೆ ಆಯಿತು. ಆ.ಸಂಜೀವಪ್ಪ, ಸಾ.ಕೃ.ಸಂಪಂಗಿ, ಜಿ.ನಾರಾಯಣ ಕುಮಾರ್ ಮೊದಲಾದವರು ವಾಟಾಳರೊಂದಿಗೆ ಸೇರಿದರು. ಸೈದ್ಧಾಂತಿಕ ಒಡಕಿನಿಂದಾಗಿ ವಾಟಾಳ್ ನಾಗರಾಜರ ನೇತೃತ್ವದ ಕಾರ್ಯಕರ್ತರು ಸಂಯುಕ್ತ ರಂಗದಿಂದ ಹೊರಬಂದಿದ್ದರು. ವಾಟಾಳರು ಅಟೋ ಚಾಲಕರು, ಹೋಟೆಲು ಕಾರ್ಮಿಕರು, ಸಾರಿಗೆ ಸಿಬ್ಬಂದಿ ಮೊದಲಾದವರು ಕನ್ನಡ ಚಳವಳಿಯನ್ನು ತೀವ್ರ ಸ್ವರೂಪದಲ್ಲಿ ಗುರುತಿಸಿಕೊಳ್ಳುವಂತೆ ಸಾಹಿತಿ ಕಲಾವಿದರಿಗಿಂತ ಹೆಚ್ಚಾಗಿ ಜನಸಾಮಾನ್ಯ ಕನ್ನಡಿಗರು ಈ ವಿಚಾರದಲ್ಲಿ ಒಗ್ಗೂಡುವಂತೆ ತಂತ್ರ ರೂಪಿಸಿದರು. ಈ ಘಟ್ಟದಿಂದ ಕನ್ನಡ ಚಳವಳಿ ಛಿದ್ರವಾಗುತ್ತಾ ಹೋಯಿತು.

ಮಹಾಜನ್ ಆಯೋಗ ಮತ್ತು ಚಳವಳಿಗಾರರು: 1965ರ ವೇಳೆಗೆ ಬೆಂಗಳೂರಿನಲ್ಲಿ ರಾಜ್ಯೋತ್ಸವವನ್ನು ಎರಡು ಸ್ಥಳಗಳಲ್ಲಿ ನಡೆಸಲು ಆರಂಭವಾಯಿತು. ಆದರೂ ಮ. ರಾಮಮೂರ್ತಿ ಹಾಗೂ ವಾಟಾಳರು ಬೆಂಗಳೂರಿನಲ್ಲಿ ಕನ್ನಡ ಬಾವುಟದ ವಿಚಾರಕ್ಕಾಗಿ ಒಂದೆಡೆ ಸೇರಿದ್ದು ಗಮನಾರ್ಹ. ಅಲ್ಲದೆ ಈ ವೇಳೆಗೆ (1966) ಮರಾಠಿಗರ ಆಕ್ರಮಣಕಾರಿ ಭಾಷಿಕ ಪ್ರವೃತ್ತಿ ಹೆಚ್ಚಾಗತೊಡಗಿದ್ದವು. ಶಿವಸೇನೆಯ ಬಾಳಠಾಕ್ರೆ ಮೊದಲಾದವರಿಂದ ಕನ್ನಡಿಗರಿಗೆ (ಮುಂಬಯಿಯಲ್ಲಿ) ಕಿರುಕುಳ ಆರಂಭವಾಗಿತ್ತು. ಇದೇ ವೇಳೆಗೆ ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದ ಗಡಿಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥಕ್ಕೆ ಮಹಾಜನ್ ಆಯೋಗ ನೇಮಕ ಆಗಿತ್ತು. ಈ ಆಯೋಗದ ಮೇಲೆ ಹಾಗೂ ಕೇಂದ್ರ ಸರ್ಕಾರದ ಮೇಲೆ ಮರಾಠಿಗರು ಒತ್ತಡ ಹೇರತೊಡಗಿದ್ದರು. ಇದಕ್ಕೆ ಕನ್ನಡಿಗರಿಂದ ಎಲ್ಲೆಡೆ ಪ್ರತಿರೋಧಗಳು ಕಾಣಿಸಿಕೊಂಡವು. ಬೆಳಗಾಂವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದನ್ನು ಸಾಬೀತುಪಡಿಸುವುದು ಚಳವಳಿಗಾರರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಸಭಾದವರು 29-7-1966ರಂದು ನಡೆಸಿದ ಸಂಪೂರ್ಣ ಕರ್ನಾಟಕ ಸರ್ವಪಕ್ಷ ಸಮ್ಮೇಳನ ಪ್ರಧಾನವಾದುದು. ಹೀಗಾಗಿ ನಾಡಿನ ಎಲ್ಲೆಡೆ ಮಹಾಜನ್ ಆಯೋಗದ ವಿರುದ್ಧ ತೀವ್ರವಾದ ಪ್ರತಿಭಟನೆಗಳು ನಡೆದವು. ರಸ್ತೆ ತಡೆ, ರೈಲು ತಡೆ, ಮೆರವಣಿಗೆ, ಪ್ರದರ್ಶನಗಳು, ಬಂದ್ ಆಚರಣೆ ಇತ್ಯಾದಿಗಳು ಚಳವಳಿಕಾರರನ್ನು ಇನ್ನಷ್ಟು ಹುರಿದುಂಬಿಸಿದ್ದವು.

ಮಹಾಜನ್ ಆಯೋಗದ ವರದಿ ಜತ್, ಅಕ್ಕಲಕೋಟೆ, ಕಾಸರಗೋಡುಗಳನ್ನು ಕರ್ನಾಟಕಕ್ಕೂ ನಿಪ್ಪಾಣಿ, ಖಾನಾಪುರ, ಹಳಿಯಾಳಗಳನ್ನು ಮಹಾರಾಷ್ಟ್ರಕ್ಕೂ ಸೇರಿಸಬೇಕೆಂದು ಶಿಫಾರಸು ಮಾಡಿತ್ತು. ಅಲ್ಲದೆ ಕನ್ನಡ ನೆಲವಾದ ಬೆಳಗಾಂವಿಯನ್ನು ಕರ್ನಾಟಕದಲ್ಲಿಯೇ ಉಳಿಸಬೇಕೆಂದೂ ಶಿಫಾರಸ್ಸು ಮಾಡಿತ್ತು. ಈ ಆಯೋಗದ ವರದಿಗೆ ಒಪ್ಪಿಕೊಳ್ಳುವುದಾಗಿ ಹೇಳಿದ್ದ ಮರಾಠಿಗರು ಮಾತು ಮುರಿದು ಪ್ರತಿಕ್ರಿಯಿಸಿದರು. ಈ ವಿಚಾರ 1970 ರಲ್ಲಿ ದೆಹಲಿಯ ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಚರ್ಚೆಗೆ ಬಂತು. ಮರಾಠಿಗರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿದ್ದರು. ಇದರಿಂದ ಕನ್ನಡಿಗರ ಪ್ರತಿಭಟನೆಗಳು ತೀವ್ರಸ್ವರೂಪ ಪಡೆದವು. ಈ ಘಟ್ಟದಲ್ಲಿ ಕೆಲವರು ಕನ್ನಡ ಚಳವಳಿಗಾರರು ಕರ್ನಾಟಕ ಎಕ್ಸೆಪ್ರೆಸ್ ರೈಲನ್ನು ತಡೆಯಲು ಮುಂದಾದರು. ಈ ಪ್ರಯತ್ನದಲ್ಲಿ ಮು. ಗೋವಿಂದರಾಜು ಎಂಬ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಈ ಘಟನೆ (13-12-1970) ತಾತ್ಕಾಲಿಕವಾಗಿ ಮಹಾಜನ್ ವರದಿಯ ಅನುಷ್ಠಾನವನ್ನು ತಡೆಹಿಡಿಯಿತು. ಅಂದಿನಿಂದಲೂ ಇದುವರೆಗೂ ಕರ್ನಾಟಕಕ್ಕೆ ಸೇರಬೇಕಾದ ಕನ್ನಡದ ಭೂಪ್ರದೇಶಗಳು ಕರ್ನಾಟಕದ ಹೊರಗೇ ಉಳಿದಿವೆ.

ಕನ್ನಡ ಬಾವುಟದ ಚರಿತ್ರೆ[ಬದಲಾಯಿಸಿ]

1966ರ ವರೆಗೂ ಕನ್ನಡದ ಕಾರ್ಯಕರ್ತರಿಗೆ ಯಾವುದೇ ನಿರ್ದಿಷ್ಟ ಕನ್ನಡ ಬಾವುಟವೆಂಬುದು ಇರಲಿಲ್ಲ. ಕನ್ನಡ ಬಾವುಟದ ಕೊರತೆಯನ್ನು ನೀಗಲು ರಾಮಮೂರ್ತಿ ಹಾಗೂ ವಾಟಾಳರು ಬೆಂಗಳೂರಿನಲ್ಲಿ ಕನ್ನಡ ಸಂಘಟನೆಗಳ ಸಭೆ ಸೇರಿಸಿದರು. ಇಲ್ಲಿ ಪರಿಚಯಿಸಿದ ಬಾವುಟ ಕರ್ನಾಟಕದ ನಕಾಶೆಯನ್ನು ಹೊಂದಿತ್ತು. ನಕಾಶೆಯ ಮಧ್ಯೆ ಬೆಳೆಯುತ್ತಿರುವ ಪೈರಿನ ಚಿತ್ರಣವಿತ್ತು. ಈ ಬಾವುಟ ಕರ್ನಾಟಕಕ್ಕೆ ಸೇರಬೇಕಾದ ಗಡಿಭಾಗಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿಕೆ ನೀಡಲಾಯಿತು. ಎಲ್ಲರೂ ಈ ಬಾವುಟವನ್ನು ಒಪ್ಪಿದ್ದರು. ಆದರೆ ರಾಮಮೂರ್ತಿಯವರು ಬಾವುಟವನ್ನು ಬದಲಾಯಿಸಿದ್ದು (ನವೆಂಬರ್ 1969) ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತು. ಬಾವುಟದ ಬದಲಾವಣೆಯ ಪ್ರಕ್ರಿಯೆಗೆ ಅಂದಿನ ರಾಜಕಾರಣವೇ ಪ್ರಮುಖ ಕಾರಣ. ಮ. ರಾಮಮೂರ್ತಿ ಹಾಗೂ ವಾಟಾಳ್ ಇವರಿಬ್ಬರ ತಾತ್ವಿಕ ಭಿನ್ನಾಭಿಪ್ರಾಯಗಳು ಎರಡು ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾದವು. ರಾಮಮೂರ್ತಿ ಅವರ ಕನ್ನಡ ಪಕ್ಷ 1966ರ ನಗರಸಭಾ ಹಾಗೂ 1969ರ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿತು. ವಾಟಾಳರ ಚಳವಳಿ ಪಕ್ಷ ಕೊಂಚ ರಾಜಕೀಯ ಶಕ್ತಿಯನ್ನು ಪಡೆಯಿತು. ಜೊತೆಗೆ ಬ್ರಾಹ್ಮಣೇತರ ಚಳವಳಿಗಾರರ ಗುಂಪಾಗಿ ಗುರುತಿಸಿಕೊಂಡಿತ್ತು. ವಾಟಾಳರು ತಮ್ಮ ಪಕ್ಷದ ಚಿಹ್ನೆಯಾಗಿ ನಕಾಶೆಯಿರುವ ಬಾವುಟವನ್ನೇ ಬಳಸಿದ್ದರು. ಇದರಿಂದ ರಾಮಮೂರ್ತಿ ಅವರು ತಮ್ಮ ಕನ್ನಡ ಪಕ್ಷಕ್ಕಾಗಿ ಹೊಸ ಬಾವುಟವನ್ನು ಪರಿಚಯಿಸುವುದು ಅನಿವಾರ್ಯವಾಯಿತು. ಮ. ರಾಮಮೂರ್ತಿ 1968ರ ವೇಳೆಗೆ ಸಂಯುಕ್ತ ರಂಗದ ಕಾರ್ಯಕರ್ತರ ಸಭೆ ಕರೆದು ಹೊಸ ಬಾವುಟವನ್ನು ಪರಿಚಯಿಸಿದರು. ಕರ್ನಾಟಕ ಮಿತ್ರ ಮಂಡಲಿಯ ಬಿ.ನಿ. ಈಶ್ವರಪ್ಪನವರು ಸೂಚಿಸಿದ ಬಾವುಟವನ್ನು ರಾಮಮೂರ್ತಿ ಒಪ್ಪಿದ್ದರು. ಕಾಟನ್ಪೇಟೆಯಲ್ಲಿ ನಡೆದ ಸಭೆಯಲ್ಲಿ ನಾಲ್ಕು ಮೂಲೆಗಳ ಹಳದಿ ಕೆಂಪು ಬಣ್ಣಗಳಿದ್ದ ಬಾವುಟವನ್ನು ಸರ್ವರೂ ಒಪ್ಪಿದ್ದರು. ಆದರೆ ಇದರಲ್ಲಿ ಕರ್ನಾಟಕದ ನಕಾಶೆ ಇರಲಿಲ್ಲ. ಬದಲಾಗಿ ಹಳದಿ ಕೆಂಪು ಬಣ್ಣಗಳನ್ನು ಶಾಂತಿ, ಸಹನೆ, ಕ್ರಾಂತಿಗಳ ಸಂಕೇತವೆಂದೂ ಅರಿಸಿನ ಕುಂಕುಮಗಳು ಮುತ್ತೈದೆತನದ ಸಂಕೇತವೆಂದೂ ವಿವರಣೆ ನೀಡಲಾಗಿತ್ತು. ಮ.ರಾಮಮೂರ್ತಿ ಅವರು ಕನ್ನಡ, ಕನ್ನಡಿಗ, ಕರ್ನಾಟಕಗಳನ್ನು ಪ್ರತಿನಿಧಿಸುವ ಯಾವುದೇ ಸಭೆ, ಸಮಾರಂಭಗಳಿಗೆ ಈ ಹೊಸ ಬಾವುಟವನ್ನೇ ಬಳಸಲು ಕರೆಯಿತ್ತರು. ತಮ್ಮ ಕನ್ನಡ ಪಕ್ಷಕ್ಕೂ ಇದೇ ಬಾವುಟವನ್ನೇ ಬಳಸಿದ್ದರು. ಹೀಗಾಗಿ ಇಂದಿಗೂ ಹಳದಿ ಕೆಂಪು ಬಣ್ಣದ ಬಾವುಟಗಳೂ ಕನ್ನಡದ ಸಂಕೇತವಾಗಿ ಬಳಕೆಯಾಗುತ್ತಿವೆ.

ವಾಟಾಳ್ ನಾಗರಾಜ್ ಮತ್ತು ಕನ್ನಡ ಚಳವಳಿ: 1970ರ ದಶಕ ಬಹುಪಾಲು ವಾಟಾಳ್ ನೇತೃತ್ವದ ಕನ್ನಡ ಚಳವಳಿಯಾಗಿ ಪರಿಣಮಿಸಿತು. ಸಂಯುಕ್ತ ರಂಗದ ಅಧ್ಯಕ್ಷರಾಗಿದ್ದ ರಾಮಮೂರ್ತಿ ಅವರು ಆಕಸ್ಮಿಕ ಮರಣಕ್ಕೀಡಾದರು (25-12-1967). ತ.ರಾ.ಸು. ಅವರು ಕನ್ನಡ ಪಕ್ಷದ ಚುಕ್ಕಾಣಿ ಹಿಡಿದಿದ್ದರು. ಆದರೆ ವಾಟಾಳರ ಜನಪ್ರಿಯತೆಯ ಮುಂದೆ ಇನ್ನಾವುದೇ ನಾಯಕನೂ ಚಳವಳಿಯ ನೇತಾರನಾಗಲಿಲ್ಲ. ವಾಟಾಳರ ಹಿಂದೆ ಬೆಂಬಲಕ್ಕಿದ್ದವರೆಂದರೆ ಅ.ಸಂಜೀವಪ್ಪ, ಸಾ.ಕೃ.ಸಂಪಗಿ, ಜಿ.ನಾರಾಯಣ ಕುಮಾರ್, ಪ್ರಭಾಕರ್ ರೆಡ್ಡಿ ಮೊದಲಾದ ಚಳವಳಿಗಾರರು. ಇವರೆಲ್ಲರ ಬೆಂಬಲದಿಂದ ಕನ್ನಡ ಚಳವಳಿ ಪಕ್ಷ ರಾಜಕಾರಣದ ಬಲವನ್ನೂ ಪಡೆದಿತ್ತು. ಕನ್ನಡಿಗರ ಸಮಸ್ಯೆಗಳಿಗೆ ಇಂಥ ಪ್ರಾದೇಶಿಕ ಪಕ್ಷವೊಂದು ಸ್ಪಂದಿಸುವುದು ಎಲ್ಲರ ಗಮನ ಸೆಳೆಯಿತು. ಆದರೆ ವಾಟಾಳರ ಒಡನಾಡಿಗಳು ಭಿನ್ನಾಭಿಪ್ರಾಯಗಳನ್ನು ತಳೆದದ್ದು ಮತ್ತೆ ಕನ್ನಡ ಚಳವಳಿಯಲ್ಲಿ ಬಿರುಕನ್ನುಂಟುಮಾಡಿತು. 1980ರಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಎಂದು ಹೊಸ ಹೆಸರು ಪಡೆಯುವವರೆಗೂ ವಾಟಾಳರು ನಾಡಿನ ಸಮಸ್ಯೆಗಳನ್ನು ಕುರಿತಂತೆ ಚಳವಳಿಗಳನ್ನು ಹೂಡುತ್ತಲೇ ಇದ್ದರು. ಅಂಥವುಗಳಲ್ಲಿ ತಾಳವಾಡಿ ಮುತ್ತಿಗೆ (1967) ಚಳವಳಿಯೂ ಒಂದು. ಕರ್ನಾಟಕಕ್ಕೆ ಸೇರಬೇಕಿದ್ದ ಹೊಸೂರು, ತಾಳವಾಡಿಗಳನ್ನು ತಮಿಳುನಾಡಿಗೆ ಸೇರಿಸಲಾಗಿತ್ತು. ಇವುಗಳನ್ನು ಪಡೆಯಲು ತಾಳವಾಡಿ ಮುತ್ತಿಗೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಯಿತು. ಇದರಲ್ಲಿ ಭಾಗವಹಿಸಿದ್ದ ವಾಟಾಳರನ್ನು ಅಂದಿನ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಬಂಧಿಸಲು ಆದೇಶಿಸಿದ್ದರು. ಬಂಧನಕ್ಕೊಳಗಾದ ವಾಟಾಳರ ಬಿಡುಗಡೆಗಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ, ಹಿಂಸಾಚಾರಗಳು ನಡೆದವು. ತಮಿಳರ ವಿರುದ್ಧ ಕನ್ನಡಿಗರು ಉಗ್ರ ರೂಪದಲ್ಲಿ ಪ್ರತಿಭಟನೆಗಳನ್ನು ಸಾರಿದರು. ಕನ್ನಡೇತರರ ಮತಗಳಿಗಾಗಿ ಕಾದಿದ್ದ ಕನ್ನಡದ ರಾಜಕಾರಣಿಗಳು ಈ ಘಟನೆಗೆ ಸ್ಪಂದಿಸದೆ ಇದ್ದದ್ದು ಕನ್ನಡಿಗರನ್ನು ಕೆರಳಿಸದಿರಲಿಲ್ಲ. ಅದೇ ರೀತಿ 1968ರಲ್ಲಿ ಸಿ.ರಾಜಗೋಪಾಲಾಚಾರಿ (ರಾಜಾಜಿ) ಅವರು ಕನ್ನಡಕ್ಕೆ ಅಪಮಾನವಾಗುವ ಮಾತುಗಳನ್ನು ಆಡಿದಾಗ ವಾಟಾಳ್ ನಾಗರಾಜ್ ಮತ್ತು ಇತರ ಚಳವಳಿಗಾರರು ಪ್ರತಿಕ್ರಿಯಿಸಿರಲಿಲ್ಲ. ಅಂತೆಯೇ ಕನ್ನಡ ಸಾಹಿತ್ಯ ಪರಿಷತ್ತೂ ಸಹ. ಇಂಥ ವಿರೋಧಾಭಾಸಗಳೂ ಕನ್ನಡ ಚಳವಳಿಯ ಚರಿತ್ರೆಯಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಬಿಟ್ಟವು.

ಗೋಕಾಕ್ ಚಳವಳಿ: ಹಿಂದಿನ ಅವೈಜ್ಞಾನಿಕ ಶಿಕ್ಷಣ ನೀತಿಯೊಂದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೊಡಕಾಗಿ ಪರಿಣಮಿಸಿತ್ತು. ಇದನ್ನು ಸರಿಪಡಿಸಲು ವ್ಯಾಪಕವಾದ ಭಾಷಿಕ ಚಳವಳಿಯನ್ನೇ ಕನ್ನಡಿಗರು ಹೂಡಿದ್ದು ಗಮನಾರ್ಹ ಸಂಗತಿ. ಸಂಸ್ಕೃತ ಭಾಷೆಯನ್ನು ಮಾತೃಭಾಷೆಗೆ ಸರಿಸಮವೆಂದು ಕರ್ನಾಟಕ ಸರಕಾರದ ಶಿಕ್ಷಣ ನೀತಿ ಪರಿಗಣಿಸಿದ್ದು ಚಳವಳಿಗಳಿಗೆ ಕಾರಣವಾಗಿತ್ತು. ಅಂದರೆ ಕೇವಲ ಪ್ರೌಢಶಾಲೆಯಲ್ಲಿ ಶಿಕ್ಷಣ ಕ್ರಮ ಆರಂಭಿಸಲಾಗುವ ಸಂಸ್ಕೃತ ಹಿಂದಿನ ಏಳು ವರ್ಷಗಳಲ್ಲಿ ವಿದ್ಯಾರ್ಥಿಗಳು ಓದಿದ ಭಾಷೆಯೊಂದಕ್ಕೆ ಸಮವೆನಿಸಿತ್ತು. ಸಂಸ್ಕೃತ ಅಧ್ಯಾಪಕರ ಉದಾರ ಪ್ರೋತ್ಸಾಹ ಮತ್ತು ಹೆಚ್ಚು ಅಂಕ ನೀಡುವ ಪ್ರವೃತ್ತಿಯಿಂದ ಕನ್ನಡದ ವಿದ್ಯಾರ್ಥಿಗಳೂ ಸಂಸ್ಕೃತ ಭಾಷೆಯನ್ನು ಪ್ರಥಮ ಭಾಷೆಯಾಗಿ ಓದಲು ಆರಂಭಿಸಿದ್ದರು. ಇದರಿಂದ ರ್ಯಾಂಕ್ ಗಳಿಕೆ ಸುಲಭವಾಗಿತ್ತು. ಇಲ್ಲಿ ಇನ್ನೊಂದು ಅನುಕೂಲವೂ ಇತ್ತು. ಅದು ಈ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಅಥವಾ ಇಂಗ್ಲಿಷಿನಲ್ಲಿ ಉತ್ತರಿಸುವುದು. ಈ ಬಗೆಯ ನೀತಿಯಿಂದ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯ ದಕ್ಕಿರಲಿಲ್ಲ. ಹೀಗಾಗಿ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ತೆಗೆದು ಮೂರನೆಯ ಸ್ಥಾನಕ್ಕೆ ಇಳಿಸುವ ಸರ್ಕಾರದ ಆe್ಞೆಗೆ (1969 ರ ಅಕ್ಟೋಬರ್) ಸಂಸ್ಕೃತವಾದಿಗಳಿಂದ ವಿರೋಧಗಳು ವ್ಯಕ್ತವಾದವು. ಇದಕ್ಕೆ ವಿರುದ್ಧವಾಗಿ ಕನ್ನಡ ಪರವಾದಿಗಳು ಸಹ ವಿರೋಧಿಸಲಾರಂಭಿಸಿದ್ದರು. ಕೊನೆಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗದೆ ಸರ್ಕಾರ ವಿ.ಕೃ. ಗೋಕಾಕ್ ಅಧ್ಯಕ್ಷತೆಯಲ್ಲಿ ಭಾಷಾತಜ್ಞರ ಸಮಿತಿಯೊಂದನ್ನು ರಚಿಸಿತು (1980). ಈ ಸಮಿತಿಯಲ್ಲಿದ್ದ ಬಹುಪಾಲು ಸದಸ್ಯರು ಸಂಸ್ಕೃತದ ವಾದಿಗಳೆಂದೇ ಕನ್ನಡದ ವಾದಿಗಳು ಆರಂಭದಲ್ಲಿ ಶಂಕಿಸಿದ್ದರು. ಹೀಗಾಗಿ ಸಮಿತಿಯ ವಿರುದ್ಧವೇ ಮೊದಲ ಪ್ರತಿಭಟನೆಗಳು ಆರಂಭಗೊಂಡವು. ಈ ಸಮಿತಿ ವರದಿಯ ಸಿದ್ಧತೆಗೆ ನಾಡಿನಾದ್ಯಂತ ಕೈಗೊಂಡ ಪ್ರವಾಸಕ್ಕೆ ಆಗ ಪ್ರತಿರೋಧಗಳು ಕಂಡುಬಂದವು. ಆದರೆ ವರದಿ ಕನ್ನಡ ಪರವಾಗಿದ್ದು ಅಂಥ ಶಂಕೆ ಸಂದೇಹ ನಿವಾರಿಸಿತು. ಅಂತೆಯೆ ವರದಿಯನ್ನು ಅನುಷ್ಠಾನಗೊಳಿಸುವಲ್ಲಿ ಚಳವಳಿಗಾರರು ತೀವ್ರತರವಾದ ಹೋರಾಟಕ್ಕೆ ಇಳಿದಿದ್ದರು. ಗೋಕಾಕ್ ವರದಿ ಕುರಿತು ನಡೆದ ಚಳವಳಿ ಕನ್ನಡ ಚಳವಳಿಯೇ ಆಗಿ ಗೋಕಾಕ್ ಚಳವಳಿ ಎಂದೇ ಪ್ರಚಾರಕ್ಕೆ ಬಂತು.

ಗೋಕಾಕ ಚಳವಳಿಗೆ ಧಾರವಾಡದಿಂದ ಆರಂಭಿಕ ಚಾಲನೆ ದೊರೆತು ನಾಡಿನಾದ್ಯಂತ ವಿಭಿನ್ನ ಘಟ್ಟಗಳಲ್ಲಿ ಚಳವಳಿ ನಡೆಯಿತು. ಚಂದ್ರಶೇಖರ ಪಾಟೀಲ, ಎಂ.ಎಂ.ಕಲಬುರ್ಗಿ, ಬಸವರಾಜ ಕಟ್ಟೀಮನಿ, ಚನ್ನವೀರ ಕಣವಿ ಪಾಟೀಲ ಪುಟ್ಟಪ್ಪ ಮೊದಲಾದ ಸಾಹಿತಿಗಳು ಹಾಗೂ ಕಲಾವಿದರು, ಮಾಠಾಧೀಶರು ಉತ್ತರ ಕರ್ನಾಟಕದಲ್ಲಿ ಪ್ರತಿಕ್ರಿಯಿಸಲಾರಂಭಿಸಿದರು. ಅಂತೆಯೇ ಹಳೆಯ ಮೈಸೂರಿನ ಜಿಲ್ಲೆಗಳಿಂದ, ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಚಳವಳಿ ಆರಂಭಗೊಂಡಿತು. ಇದರಲ್ಲಿ ಪಿ.ಲಂಕೇಶ್, ಜಿ.ಎಸ್.ಶಿವರುದ್ರಪ್ಪ, ಗೊರೂರು, ಸಿದ್ಧಯ್ಯಪುರಾಣಿಕ್, ಎಂ.ಚಿದಾನಂದಮೂರ್ತಿ, ಹಾ.ಮಾ.ನಾಯಕ, ಕೋ.ಚೆನ್ನಬಸಪ್ಪ, ಮಳಗಿ, ತ.ರಾ.ಸು., ಸತ್ಯು, ಪೂರ್ಣಚಂದ್ರತೇಜಸ್ವಿ ಮೊದಲಾದ ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದರು. ಸಾಹಿತಿಗಳ, ಕಲಾವಿದರ ಬಳಗ ಹುಟ್ಟಿಕೊಂಡದ್ದು ಇದೇ ಸಂದರ್ಭದಲ್ಲಿಯೇ. ಚಳವಳಿಗಾರ ರಹಮಾನ್ ಖಾನ್, ಜಿ.ನಾರಾಯಣಕುಮಾರ್, ಕೆ.ಪ್ರಭಾಕರ ರೆಡ್ಡಿ ಮೊದಲಾದವರು ತೀವ್ರವಾಗಿ ಪ್ರತಿಕ್ರಿಯಿಸಿದರು. ಈ ಚಳವಳಿಗೆ ಕೇಂದ್ರ ಹಾಗೂ ಸ್ಥಳೀಯ ಕನ್ನಡ ಕ್ರಿಯಾ ಸಮಿತಿಗಳು, ಕನ್ನಡ ಸಂರಕ್ಷಣಾ ಸಮಿತಿ, ಕನ್ನಡ ಸಂಘರ್ಷ ಸಮಿತಿ, ಕನ್ನಡ ಪಕ್ಷ, ಮೈಸೂರಿನ ಚೇತನ ಕನ್ನಡ ಸಂಘ ಮೊದಲಾದ ಸಂಘಟನೆಗಳು ತಮ್ಮನ್ನು ತೊಡಗಿಸಿಕೊಂಡಿದ್ದವು. ಕರ್ನಾಟಕದ ಬಹುಪಾಲು ಎಲ್ಲ ಹಿರಿಕಿರಿಯ ಸಾಹಿತಿ ಕಲಾವಿದರೂ ಗೋಕಾಕ ಚಳವಳಿಯ ಸಂದರ್ಭದಲ್ಲಿ ಭಾಗವಹಿಸಿದ್ದು ಇಲ್ಲಿ ಉಲ್ಲೇಖನೀಯ. ಈ ಸಂದರ್ಭದಲ್ಲಿ ಪರ ವಿರೋಧದ ಧ್ವನಿಗಳೂ ಹುಟ್ಟಿಕೊಂಡಿದುಂಟು. ಸರ್ಕಾರ ಕನ್ನಡವನ್ನು ಒಂದು ಹಂತದಲ್ಲಿ ಕಡ್ಡಾಯವಾಗಿ ಪ್ರೌಢಶಾಲಾ ಹಂತದಲ್ಲಿ ಜಾರಿಗೊಳಿಸುವ ಸೂತ್ರ ಮುಂದಿಟ್ಟಿತು. ಆಗ ಅದನ್ನು ಒಪ್ಪಿ ಹಾ.ಮಾ.ನಾ., ಹಂಪನಾ, ವಿ.ಎಚ್.ಗೌಡ ಮೊದಲಾದವರು ಸ್ವಾಗತಿಸಿದರು. ಆದರೆ ಇದಕ್ಕೊಪ್ಪದವರು ಚಿದಾನಂದಮೂರ್ತಿಗಳು ಮತ್ತು ಪಾಟೀಲ ಪುಟ್ಟಪ್ಪನವರ ನೇತೃತ್ವದಲ್ಲಿ ಚಳವಳಿಯನ್ನು ಮುಂದವರಿಸಿ ಪ್ರಾಥಮಿಕ ಹಂತದಿಂದ ಕನ್ನಡ ಕಡ್ಡಾಯಮಾಡಲು ಆಗ್ರಹಿಸಿದರು. ಸರ್ಕಾರ ಗೋಕಾಕ್ ಭಾಷಾ ಸೂತ್ರವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಹಿಂದೇಟು ಹಾಕಿದಾಗ ಚಳವಳಿ ವ್ಯಾಪಕವೂ ಹಿಂಸಾತ್ಮಕವೂ ಆಯಿತು. ಖ್ಯಾತ ನಟ ರಾಜಕುಮಾರ್ ಅವರು ಜಾಥಾದ ಮುಂದಾಳತ್ವವನ್ನು ವಹಿಸಿದ ಮೇಲೆ ಚಳವಳಿಗೆ ಇನ್ನಷ್ಟು ಚುರುಕು, ಬಿರುಸು ಪ್ರಾಪ್ತವಾಯ್ತು. ಮೆರವಣಿಗೆ, ಬಂದ್, ರಸ್ತೆ ರೈಲು ತಡೆ, ಜೈಲು ತುಂಬುವ ಚಳವಳಿ, ಪೋಲೀಸರ ಗೋಲಿಬಾರ್ ಸಾಮಾನ್ಯವಾದವು. ಅರಸಪ್ಪ ಎಂಬ ಕಾರ್ಯಕರ್ತರೊಬ್ಬರು ಪೊಲೀಸರು ಗುಂಡಿಗೆ ಬಲಿಯಾದರು. ಪರಿಸ್ಥಿತಿಗೆ ಮಣಿದ ಸರ್ಕಾರ ಸರ್ವಸಮ್ಮತ ಭಾಷಾಸೂತ್ರವನ್ನು ಪ್ರಕಟಿಸಿತು. ನಾಲ್ಕು ತಿಂಗಳ ಕಾಲ ನಡೆದ ಚಳವಳಿ ಅಂತ್ಯಗೊಂಡಿತು. ಆದರೆ ಕನ್ನಡೇತರರು, ಸಂಸ್ಕೃತಪರ ವಾದಿಗಳು ಅಲ್ಪಸಂಖ್ಯಾತರು ಕೋರ್ಟಿನಲ್ಲಿ ಕಟ್ಲೆಗಳನ್ನು ಹಾಕಿದ್ದರಿಂದ ವರದಿ ಜಾರಿಗೆ ಬರಲಿಲ್ಲ. 1984 ಜನವರಿ 24ರಂದು ಸರ್ಕಾರ ಈ ಎಲ್ಲ ಕಟ್ಲೆಗಳ ವಿಲೇವಾರಿ ಮಾಡಿ ಭಾಷಾಸೂತ್ರವನ್ನು ಜಾರಿಗೆ ತಂದಿತು. ಆದರೆ ವರದಿಯ ಸಂಪೂರ್ಣ ಅನುಷ್ಠಾನದ ಬಗ್ಗೆ ಇನ್ನೂ ಯಾವುದೇ ರೀತಿಯ ನಿರೀಕ್ಷಿತ ಫಲಿತಾಂಶ ಕಂಡುಬಂದಿಲ್ಲ.

ಕನ್ನಡ ದೇಶ ಮತ್ತು ಕರ್ನಾಟಕ ಪ್ರಗತಿರಂಗ: ಗೋಕಾಕ್ ಚಳವಳಿ ಅಂತ್ಯವಾಗುವ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಕೊನೆಗೊಂಡಿತು. ರೈತ (1983), ದಲಿತ ಹಾಗೂ ಭಾಷಾ ಚಳವಳಿಗಳ ಆಶೋತ್ತರಗಳನ್ನು ಈಡೇರಿಸುವ ಭರವಸೆಯನ್ನು ನೀಡಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಆದರೆ ಬಹಳ ಬೇಗ ಈ ಸರ್ಕಾರವೂ ಕನ್ನಡಿಗರ ಅಸಹನೆಗೆ ಗುರಿಯಾಯಿತು. ಈ ಸಂದರ್ಭದಲ್ಲಿ ಸ್ಥಳೀಯವಾದ ರಾಜ್ಯಪಕ್ಷವೊಂದರ ಅಗತ್ಯ ಕಂಡುಬಂತು. ಆಗ ಹೊಸ ರಾಜಕೀಯ ಪಕ್ಷವೊಂದರ ತುರ್ತು ಕನ್ನಡಿಗರಲ್ಲಿ ಕಾಣಿಸಿಕೊಂಡಿತು. ಇದರ ಪರಿಣಾಮವಾಗಿ ಹುಟ್ಟಿಕೊಂಡದ್ದೇ ಕನ್ನಡ ದೇಶ ಹಾಗೂ ಕರ್ನಾಟಕ ಪ್ರಗತಿರಂಗ ಎಂಬ ಪಕ್ಷಗಳು.

ವಾಟಾಳರ ಚಳವಳಿಪಕ್ಷ ಪ್ರಾದೇಶಿಕವಾಗಿ ಗುರುತಿಸಿಕೊಂಡಿದ್ದರೂ ಅದು ರಾಜ್ಯವ್ಯಾಪಿ ಪಕ್ಷವಾಗಿ ವಿಸ್ತೃತಗೊಂಡಿರಲಿಲ್ಲ. ಹೀಗಾಗಿ 1987ರಲ್ಲಿ ಕನ್ನಡ ದೇಶ ಪಕ್ಷ ಕವಿ ಕುವೆಂಪು ಅವರ ಪ್ರೇರಣೆಯಿಂದ ಅಸ್ತಿತ್ವಕ್ಕೆ ಬಂತು. ಈ ಪಕ್ಷದ ನೇತೃತ್ವವನ್ನು ವಹಿಸಿದ್ದವರು ರೈತ ಸಂಘದ ಎಂ.ಡಿ.ನಂಜುಂಡಸ್ವಾಮಿ ಅವರು. ಕನ್ನಡ ದೇಶ ಪಕ್ಷ ಕನ್ನಡಿಗರ ಅಶೋತ್ತರಗಳ ಈಡೇರಿಕೆಗೆ ದುಡಿಯುವ ಮುನ್ನವೇ ಸೋಲನ್ನು ಕಂಡಿತು. ಈ ಘಟ್ಟದಲ್ಲಿ ಎ.ಕೆ.ಸುಬ್ಬಯ್ಯನವರ ಕನ್ನಡಪರ ಪ್ರಯತ್ನಗಳೂ ಗಮನಾರ್ಹವೆನಿಸಿವೆ.

ಪ್ರಗತಿಪರ ಮನಸ್ಸುಳ್ಳ ವ್ಯಕ್ತಿಗಳು ಅದುವರೆಗಿನ ಎಲ್ಲ ಕೊರತೆಗಳನ್ನು ಪರಿಶೀಲಿಸಿ 1988ರಲ್ಲಿ ಕರ್ನಾಟಕ ಪ್ರಗತಿರಂಗ ಎಂಬ ರಾಜಕೀಯ ಪಕ್ಷವನ್ನು ರೂಪಿಸಿದರು. ಈ ರಂಗಕ್ಕೆ ಲಂಕೇಶ್ ಪತ್ರಿಕೆಯ ಮೂಲಕ ರೂಪಿಸಲಾದ ಹಿನ್ನೆಲೆ ಮತ್ತು ಸಿದ್ಧಾಂತಗಳಿದ್ದವು. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗೆ ಪರ್ಯಾಯವಾಗಿ ಹುಟ್ಟಿಕೊಂಡ ಪಕ್ಷವಿದು. ಇದರ ನೇತೃತ್ವ ಪಿ.ಲಂಕೇಶ್ ಅವರದು. ಕನ್ನಡ, ಕನ್ನಡಿಗ, ಕರ್ನಾಟಕಗಳ ಬಗೆಗಿನ ಕಾಳಜಿಯಿಂದ ರಚನೆಗೊಂಡ ಈ ಪಕ್ಷಕ್ಕೆ ಕನ್ನಡಿಗರಿಂದ ನಿರೀಕ್ಷಿಸಲಾಗಿದ್ದ ಬೆಂಬಲ, ಪ್ರೋತ್ಸಾಹಗಳು ದೊರೆಯಲಿಲ್ಲ. ಈ ಪಕ್ಷವೂ ಸಂಘಟನಾ ಹಂತದಲ್ಲೇ ಕ್ಷೀಣಿಸಿತು. ಕನ್ನಡ ಚಳವಳಿಯ ಚರಿತ್ರೆಯಲ್ಲಿ ಈ ರಾಜಕೀಯ ಪಕ್ಷಗಳಿಗೆ ದೊರೆಯದೆ ಹೋದ ಬೆಂಬಲಗಳು ಕನ್ನಡಿಗರಿಂದ ಮತ್ತೆ ರಾಷ್ಟ್ರೀಯ ಪಕ್ಷಗಳಿಗೆ ದೊರೆತವು.

ಗೋಕಾಕ್ ಚಳವಳಿಯ ಅನಂತರ ಸಂಭವಿಸಿದ ರಾಜಕೀಯ ಬದಲಾವಣೆಗಳು ಚಳವಳಿಯ ಸ್ವರೂಪ ಬಹುಮುಖಿ ನೆಲೆಗಳನ್ನು ಕಂಡುಕೊಳ್ಳುವಂತೆ ಮಾಡಿತು. ಇದಕ್ಕೆ ಪ್ರಾತಿನಿಧ್ಯ, ಆಮಿಷ, ಅಗ್ಗದ ಪ್ರಚಾರ ಪ್ರಿಯತೆ, ಕನ್ನಡದ ಹೆಸರಿನಲ್ಲಿ ಲೂಟಿ, ಹಿಂಸೆಗಳು, ಜಾತಿ ಮುಖಂಡರ, ರಾಜಕಾರಣಿಗಳ ಭ್ರಷ್ಟಾಚಾರಗಳು ಎಲ್ಲವೂ ಕಾರಣ. 1980 ಹಾಗೂ 1990ರ ದಶಕದಲ್ಲಾದ ಈ ವೈಪರೀತ್ಯಗಳು ಕನ್ನಡ ಚಳವಳಿಯನ್ನು ಭಿನ್ನ ರೀತಿಯಲ್ಲಿ ಗ್ರಹಿಸಲು ಎಡೆಮಾಡಿಕೊಟ್ಟವು. ಆದರೆ ಇವೆಲ್ಲವುಗಳನ್ನೂ ಹೊರತುಪಡಿಸಿ ನಾಡು, ನುಡಿ, ಸಂಸ್ಕೃತಿಯ ನೆಲೆಗಳಲ್ಲಿ ಕಾರ್ಯನಿರ್ವಹಿಸಿದ ನಿಸ್ವಾರ್ಥ ಕನ್ನಡ ಚಳವಳಿಗಾರರನ್ನು, ಸಂಘಟನೆಗಳನ್ನು ಇಲ್ಲಿ ಪ್ರಸ್ತಾಪಿಸಬಹುದು.

ಕನ್ನಡ ಶಕ್ತಿ ಕೇಂದ್ರ ಮತ್ತು ಇತರ ಸಂಘಟನೆಗಳು: ಚಳವಳಿಗಳಿಗೆ ಸಂಬಂಧಿಸಿದ ಮಾರ್ಗದರ್ಶನಗಳನ್ನು ನೀಡಿ ನಡೆಸಿಕೊಂಡು ಹೋಗಲು ಸಾಹಿತಿ, ಕಲಾವಿದರ ಬಳಗ ಹುಟ್ಟು ಹಾಕಿದ ಸಂಸ್ಥೆಯೇ ಕನ್ನಡ ಶಕ್ತಿ ಕೇಂದ್ರ. 1988ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕೇಂದ್ರ ಎಂ. ಚಿದಾನಂದಮೂರ್ತಿಯವರ ನೇತೃತ್ವದಲ್ಲಿ ಮುನ್ನಡೆದಿದೆ. ಇದು ಗೋಕಾಕ್ ಚಳವಳಿಯ ಅನಂತರ ಕನ್ನಡದ ಹೋರಾಟವನ್ನು ಇತರೆ ಸಮಸ್ಯೆಗಳ ಕಡೆಗೂ ಕೇಂದ್ರೀಕರಿಸುವಂತೆ ಮಾಡಿತು.

ಕನ್ನಡ ಶಕ್ತಿ ಕೇಂದ್ರ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕಾಗಿ ಒತ್ತಾಯಿಸಿತು. ಅಲ್ಲದೆ ನೈರುತ್ಯ ರೈಲ್ವೆ ವಲಯದ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸುವವರೆಗೂ ಅನೇಕ ರೀತಿಯಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕಗಳ ಬೇಡಿಕೆಗಳಿಗೆ ಸ್ಪಂದಿಸುತ್ತಿದೆ. ರಾಜ್ಯ ಲೋಕಸೇವಾ ಆಯೋಗದಲ್ಲಿ ಕನ್ನಡಕ್ಕೆ ಆದ್ಯತೆ, ದೂರದರ್ಶನದ ಕನ್ನಡೀಕರಣ, ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ, ಉರ್ದು ವಾರ್ತಾಪ್ರಸಾರ ತಡೆ, ಕಾವೇರಿ ಜಲವಿವಾದ ಚಳವಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳ ಸ್ಥಾಪನೆ, ಬೆಳಗಾಂವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯದ ಸ್ಥಾಪನೆ ಇತ್ಯಾದಿ ಕನ್ನಡ ಪರವಾದ ಸಾಧನೆಗಳಿಗಾಗಿ ಇದು ಶ್ರಮಿಸಿದೆ. ಕೆ.ಜಿ.ಎಫ್.ನಲ್ಲಿ ತಮಿಳರ ದೌರ್ಜನ್ಯ, ಬೀದರ್ನಲ್ಲಿ ಸಿಖ್ಖರಿಂದ ಆಗುತ್ತಿರುವ ಅತ್ಯಾಚಾರಗಳು, ಹಂಪಿ ಮತ್ತು ಗೋಕರ್ಣಗಳಲ್ಲಿನ ಹಿಪ್ಪಿಗಳ ಸ್ವೇಚ್ಫಾಚಾರ, ಬೆಳಗಾಂವಿಯಲ್ಲಿ ಎಂ.ಇ.ಎಸ್. ಪಕ್ಷದವರ ಕನ್ನಡ ವಿರೋಧಿ ಕಾರ್ಯಕ್ರಮಗಳ ವಿರುದ್ಧವೂ ಕನ್ನಡ ಶಕ್ತಿ ಕೇಂದ್ರ ಚಳವಳಿ ಮಾಡಿದೆ. ವಲಸಿಗರ ತಡೆ, ಅಂಚೆ ತಂತಿ ರೈಲ್ವೆ ಆಡಿಟರ್ ಕಚೇರಿಗಳಲ್ಲಿ ಕನ್ನಡೇತರರ ನೇಮಕಗಳ ಬಗೆಗೂ ಕನ್ನಡಪರವಾದ ಸಂಘಟನೆಗಳು ಪ್ರಯತ್ನಿಸುತ್ತಿವೆ. ಶಕ್ತಿ ಕೇಂದ್ರದ ಜೊತೆಗೆ ಕನ್ನಡ ಸಂಘರ್ಷ ಸಮಿತಿ, ಕನ್ನಡ ಸೇನೆ, ಕನ್ನಡ ಸಂರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಮೊದಲಾದ ಸಂಘಟನೆಗಳೂ ಸೇರಿಕೊಂಡಿವೆ. ಸಾರಿಗೆ, ಹೋಟೆಲು, ಚಿತ್ರಮಂದಿರ, ಆಟೋರಿP್ಷÁ, ಬ್ಯಾಂಕುಗಳು, ಉದ್ಯಮಗಳು ಮೊದಲಾದ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳಲ್ಲಿನ ಕನ್ನಡ ಸಂಘಟನೆಗಳು ಗಮನಾರ್ಹವಾಗಿ ಕಾರ್ಯ ನಿರತವಾಗಿವೆ. ಅಂತೆಯೇ ಕರ್ನಾಟಕ ಕೆಥೊಲಿಕ್ ಕ್ರೈಸ್ತರ ಕನ್ನಡ ಸಂಘಗಳು ಕ್ರೈಸ್ತ ಮಂದಿರಗಳಲ್ಲಿ ಕನ್ನಡದಲ್ಲಿ ಕಲಾಪಗಳನ್ನು ನಡೆಸಲು ಚಳವಳಿ ಹೂಡಿವೆ. ಕನ್ನಡ ಚಳವಳಿಗಳು ಕನ್ನಡ ಹೋರಾಟಗಳಾದದ್ದು 1990ರ ದಶಕದಿಂದೀಚೆಗೆ. ಕರ್ನಾಟಕದಲ್ಲೂ ರಾಜಕಾರಣಿಗಳ ಆಸೆ, ಆಮಿಷಗಳಿಂದಾಗಿ ಕೋಮುವಾದಿ ಬೀಜಗಳ ಬಿತ್ತನೆ ಆಯಿತು. ಭ್ರಷ್ಟಾಚಾರ ಮನೋವೃತ್ತಿಯ ರಾಜಕಾರಣಿಗಳು ಜನಸಾಮಾನ್ಯರನ್ನು ಶೋಷಿಸಲು ಕನ್ನಡ ಚಳವಳಿಗಳಿಗೆ ಹಿಂಸಾತ್ಮಕ ರೂಪ ಕೊಟ್ಟರು ಎಂಬುದೊಂದು ಗುರುತರ ಆರೋಪ. ಕನ್ನಡಿಗರ ಭಾಷಿಕ ಭಾವೋದ್ವೇಗಗಳು ಜಾತಿ, ಧರ್ಮ, ಕೋಮು, ಜನಾಂಗ, ಪ್ರದೇಶ, ನೀರು ಮೊದಲಾದ ಸೂಕ್ಷ್ಮ ಸಂವೇದನೆಗಳಿಗೆ ಬಂಡವಾಳವಾಗುವಂತೆ ಆಯಿತು. ಕನ್ನಡದ ಹೆಸರಿನಲ್ಲಿ ಕಿಡಿಗೇಡಿಗಳು ತಮಿಳು, ಮುಸ್ಲಿಮ್ ಸಹೋದರರ ಜೊತೆಗೆ ಕನ್ನಡಿಗರೂ ಪ್ರಾಣಗಳನ್ನು ತೆರುವಂತೆ ಮಾಡಿದರು. ಇಂಥ ಸನ್ನಿವೇಶಗಳಲ್ಲಿಯೇ ಕನ್ನಡ ಚಳವಳಿಗಳು ಕನ್ನಡ ಹೋರಾಟಗಳು ಎಂಬ ಭಿತ್ತಿಯನ್ನು ಅನಾವರಣಗೊಳಿಸಿದ್ದು.

ಕೇಂದ್ರ ಸರ್ಕಾರದ ಧೋರಣೆಗಳಿಂದಾಗಿ ಕರ್ನಾಟಕದಂಥ ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ಬರಿದುಮಾಡಿಕೊಳ್ಳುತ್ತಿವೆ. ಜಪಾನ್ ಕೈಗಾರಿಕಾ ವಸಾಹತು, ಸಿಂಗಪುರ್ ಟೌನ್ಷಿಪ್, ಗ್ಯಾಟ್ ಒಪ್ಪಂದಗಳು, ಗಂಗಡಿಕಲ್ಲು ಅದಿರು ಯೋಜನೆ, ತುಂಗಾ ಮೂಲ ನಾಶ, ಪರಿಸರ ಮಾಲಿನ್ಯ ಹೀಗೆ ಕನ್ನಡಿಗರು ಶೋಷಣೆಗೆ ಒಳಗಾಗುತ್ತಿದ್ದುದ್ದನ್ನು ಕನ್ನಡ ಚಳವಳಿಗಾರರು ಪ್ರತಿಭಟಿಸಿದರು. ಈ ನಿಟ್ಟಿನಲ್ಲಿ ಕರ್ನಾಟಕ ವಿಮೋಚನಾರಂಗ, ಪ್ರಜಾತಾಂತ್ರಿಕ ಜನರ ವೇದಿಕೆ, ತುಂಗಾಮೂಲ ಉಳಿಸಿ ಸಂಘಗಳಂಥ ಸಂಘಟನೆಗಳ ಹೋರಾಟಗಾರರ ಪಾತ್ರ ದೊಡ್ಡದು.

ಒಟ್ಟಾರೆ ಕನ್ನಡ ಚಳವಳಿಗಳ ಕಳೆದ ಎರಡು ದಶಕಗಳ ಚರಿತ್ರೆಯನ್ನು ಪರಿಶೀಲಿಸಿದರೆ ರಾಜಕಾರಣದ ಆಮಿಷ, ಪ್ರಚಾರಪ್ರಿಯತೆ, ಅಸಂಖ್ಯ ಪೋಷಿತ ಹಾಗೂ ಘೋಷಿತ ನಾಯಕರ ಸಂಘಟನೆಗಳು ಗೋಚರವಾಗುತ್ತವೆ. ಕನ್ನಡದ ರಾಜಕಾರಣಿಗಳು ಕನ್ನಡೇತರ ರಾಜಕೀಯ ಪಕ್ಷಗಳೊಂದಿಗೆ ಡಿ.ಎಂ.ಕೆ., ಅಣ್ಣಾ ಡಿ.ಎಂ.ಕೆ. ಇತ್ಯಾದಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸ್ಪರ್ಧಿಸುವುದೂ ಕಂಡುಬಂದಿದೆ. ಕನ್ನಡ, ಕನ್ನಡಿಗ, ಕರ್ನಾಟಕ ಪರವಾದ ಪ್ರಾದೇಶಿಕ ರಾಜಕೀಯ ಪಕ್ಷವೊಂದನ್ನು ರಚಿಸಿ ಅಧಿಕಾರಕ್ಕೆ ತರಲಾಗದ ಕನ್ನಡಿಗರ ಅಸಹಾಯಕತೆಯ ಸ್ಥಿತಿಯನ್ನು ಇದು ಸಂಕೇತಿಸುತ್ತದೆ. ಸಂಕುಚಿತ, ಭಾಷಿಕ ಭಾವೋದ್ವೇಗಗಳಿಂದ, ಅತಿರೇಕದ ಭಾಷಾಭಿಮಾನದಿಂದ ಕನ್ನಡ ಚಳವಳಿ ಮತ್ತು ಚಿಂತನೆಗಳು ಕೆಲವೊಮ್ಮೆ ಸೋತಿವೆಯೆನಿಸುತ್ತದೆ. ಕನ್ನಡದ ಅಧಿಕಾರಿಗಳೂ ನೌಕರರೂ ಕನ್ನಡವನ್ನು ಆಡಳಿತದಲ್ಲಿ ಬಳಸುವಲ್ಲಿ ಹೆಚ್ಚು ಉತ್ಸುಕರಾಗದಿರುವುದು ಕಂಡುಬಂದಿದೆ. ಆದ್ದರಿಂದಲೇ ಇಂದಿಗೂ ಶಿಕ್ಷಣ ರಂಗದಲ್ಲಿ ಕನ್ನಡ ಮಾಧ್ಯಮವಾಗಲಿ, ಸರೋಜಿನಿ ಮಹಿಷಿ ವರದಿಯ ಅನುಷ್ಠಾನವಾಗಲಿ, ಆಡಳಿತ ಭಾಷೆ ಕನ್ನಡವಾಗಲಿ ಪೂರ್ಣವಾಗಿ ಸಾಧ್ಯವಾಗಿಲ್ಲ. ಇತ್ತೀಚಿನ ಕೆಲವು ಪ್ರಕರಣಗಳು ಕನ್ನಡಿಗರನ್ನು ಭಿನ್ನವಾಗಿ ಆಲೋಚಿಸುವಂತೆ ಮಾಡಿವೆ. ಕಾಡುಗಳ್ಳ ವೀರಪ್ಪನ್ನಿಂದ ಆದ ನಟ ರಾಜಕುಮಾರ್ ಅಪಹರಣ, ಅಂತೆಯೇ ಸಚಿವ ನಾಗಪ್ಪ ಅವರ ಅಪಹರಣಗಳು ಹಾಗೂ ಅವರ ಸಾವು ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡಿವೆ. ಜೊತೆಗೆ ಕಾವೇರಿ ನದಿಯ ನೀರಿನ ವಿವಾದ, ಹೋರಾಟಗಳು ಉಗ್ರರೂಪ ತಳೆದು ರಾಜಕಾರಣದ ಸ್ವಾರ್ಥ, ಅಸಹಾಯಕತೆಗಳನ್ನು ಅನಾವರಣಗೊಳಿಸಿವೆ. ನಿಷ್ಠಾವಂತ ಕನ್ನಡಿಗರಿಂದ ಹಾಗೂ ಕರ್ನಾಟಕ ಸರ್ಕಾರದ ಪ್ರಗತಿಪರ ಸ್ವಾಭಿಮಾನಪೂರಿತಪ್ರಯತ್ನಗಳಿಂದ ಮುಂದೆ ಕರ್ನಾಟಕದ ಹಿತಗಳನ್ನು ಕಾಯ್ದುಕೊಳ್ಳುವುದು ಸಾಧ್ಯವಾಗಬಹುದೆಂದು ಆಶಿಸಬಹುದು. (ಸಿ.ಆರ್.ಜಿ.)


ಉಲ್ಲೇಖಗಳು[ಬದಲಾಯಿಸಿ]