ಕತಾರ್ಸಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಥಾರ್ಸಿಸ್ : ಭಾವರೇಚನ ಎಂಬ ಅರ್ಥವನ್ನುಳ್ಳ ಈ ಪ್ರಾಚೀನ ಗ್ರೀಕ್ ಪದ ವೈದ್ಯಕ್ಕೆ ಸೇರಿದುದು. ತತ್ತ್ವಜ್ಞರು ಕ್ರಮೇಣ ಇದನ್ನು ಕೆಲವು ಕಲೆಗಳು ಉಂಟುಮಾಡುವ ಪರಿಣಾಮಕ್ಕೆ ಅನ್ವಯಿಸಿದರು.

ಪ್ಲೇಟೋನ ಅಭಿಪ್ರಾಯ[ಬದಲಾಯಿಸಿ]

ಗ್ರೀಕ್ ರುದ್ರನಾಟಕದ (ಗಂಭೀರ ನಾಟಕ) ಮೇಲೆ ಪ್ಲೇಟೊ ಮಹಾಶಯನಿಗೆ ವಿಶೇಷ ಆಗ್ರಹ. ಅದರಿಂದ ಆಗುವ ಕೇಡನ್ನು ಆತ ಹೀಗೆ ಬಣ್ಣಿಸಿದ: ನಾಟಕಶಾಲೆಯಲ್ಲಿ ಅದನ್ನು ವೀಕ್ಷಿಸುತ್ತ ನೋಟಕರು ತಮ್ಮ ಮರುಕವನ್ನು ತಡೆದಿಡಲಾರದೆ ಎಲ್ಲರೆದುರಿಗೂ ಗಟ್ಟಿಯಾಗಿ ರೋದಿಸುತ್ತಾರೆ. ಆ ವರ್ತನೆಯಿಂದ ಅವರ ದಾರ್ಡ್ಯಕ್ಕೂ ಸಂಯಮಕ್ಕೂ ಹಾನಿ, ಅವರ ಪೌರುಷಕ್ಕೇ ಅಪಾಯ. ಆದ್ದರಿಂದ ಆದರ್ಶ ಗಣರಾಜ್ಯದಿಂದ ನಾಟಕಕರ್ತರನ್ನು ಗಡೀಪಾರು ಮಾಡತಕ್ಕದ್ದು.

ಅರಿಸ್ಟಾಟಲ್ ಅಭಿಪ್ರಾಯಗಳು[ಬದಲಾಯಿಸಿ]

ಪ್ಲೇಟೊವಿನ ಆಕ್ಷೇಪಕ್ಕೆ ಸೂಕ್ತ ಸಮಾಧಾನವನ್ನಿತ್ತು ರುದ್ರನಾಟಕವನ್ನು ಅರಿಸ್ಟಾಟಲ್ ಸಮರ್ಥಿಸಿದ. ಅವನ ವಿವರಣೆಯಂತೆ ರುದ್ರನಾಟಕ ಮೂರು ತೆರದಲ್ಲಿ ಪ್ರಯೋಜಕ. ಆದರೆ ಅವನ ಅಭಿಪ್ರಾಯಗಳು ವಿಶದವಾಗಿ ಪೋಷಿತವಾಗಿಲ್ಲ. ತನ್ನ ಪಾಲಿಟಿಕ್ಸ್‌ ಗ್ರಂಥದಲ್ಲಿ ಆತ ಸಂಗೀತ ಒದಗಿಸಿಕೊಡುವ ವಿರೇಚನವನ್ನು ಪ್ರಾಸಂಗಿಕವಾಗಿ ನಮೂದಿಸಿ, ಮುಂದೆ ಅದನ್ನು ತನ್ನ ಪೊಯಟಿಕ್ಸ್‌ನಲ್ಲಿ ಬಿಡಿಸಿ ಬಿಡಿಸಿ ತಿಳಿಯಪಡಿಸುವುದಾಗಿ ಭರವಸೆ ಕೊಟ್ಟ. ನಮಗೆ ಉಪಲಬ್ಧವಾಗಿರುವ ಪೊಯಟಿಕ್ಸ್‌ನ ಒಂದನೆಯ ಭಾಗದಲ್ಲಾದರೂ ಗಂಭೀರ ನಾಟಕದ ಕಾರ್ಯವನ್ನು ಹೇಳುವ ಸಂದರ್ಭದಲ್ಲಿ ಭಯ ಮರುಕಗಳ ಮೂಲಕ ಆ ಭಾವಗಳ ವಿರೇಚನವನ್ನು ಅದು ಎಸಗುತ್ತದೆ ಎಂಬ ಒಂದೇ ಒಂದು ಸಂದಿಗ್ಧ ವಾಕ್ಯವಿದೆ. ಮತ್ತಾವ ಕಡೆಯಲ್ಲೂ ಕತಾರ್ಸಿಸ್ ಪದದ ಯಾವ ವಿವರಣೆಯೂ ಸಿಕ್ಕುವುದಿಲ್ಲ. ಅವನ ನಿಜವಾದ ಅಭಿಪ್ರಾಯ ಏನಾಗಿತ್ತೆಂಬುದನ್ನು ನಿರ್ದಿಷ್ಟವಾಗಿ ತಿಳಿಯುವಂತಿಲ್ಲ. ಪಾಶ್ಚಾತ್ಯ ಪಂಡಿತರು ಅದಕ್ಕೆ ಅರವತ್ತು ವಿಧದ ಅರ್ಥಗಳನ್ನು ಊಹಿಸಿದ್ದಾರಂತೆ; ಹೀಗಿದ್ದರೂ ಅರಿಸ್ಟಾಟಲನ ಇಂಗಿತ ಏನಾಗಿದ್ದಿರಬಹುದೆಂದು ಹೆಚ್ಚು ಕಡಿಮೆ ಮನವೊಪ್ಪುವಂತೆ ಗೊತ್ತುಹಿಡಿಯಲು ಅವಕಾಶ ಇಲ್ಲದಿಲ್ಲ.

ರುದ್ರನಾಟಕ ನೋಟಕನ ಭಾವನೆಗಳನ್ನು ಕೆರಳಿಸಿ ಹೊರಗೆಳೆಯುವುದನ್ನು ಅರಿಸ್ಟಾಟಲ್ ಒಪ್ಪಿಕೊಂಡ. ಹಾಗಾಗುವದರಿಂದ ಕೆಡುಕಿಗೆ ಬದಲು ಒಳ್ಳೆಯದೇ ಆಗುವುದೆಂದು ಅವನ ಜವಾಬು. ಭಾವಗಳನ್ನು ಆಂತರ್ಯದೊಳಗೆ ಅದುಮಿಟ್ಟರೆ ಕಲ್ಮಷವನ್ನು ಒಳಗಿಟ್ಟುಕೊಂಡಂತೆ ಮಾನಸಿಕ ಆರೋಗ್ಯಕ್ಕೆ ಬಾಧೆ. ಯುಕ್ತ ರೀತಿಯಲ್ಲಿ ಅವನ್ನು ಆಗಾಗ ಹೊರಗೆಡವಿದರೆ ಚಿತ್ತ ತನ್ನ ಮೇಲಣ ಭಾರವನ್ನು ಕೊಡವಿಕೊಂಡು ಹಗುರವಾಗುತ್ತದೆ. ಜೀವನದ ಲವಲವಿಕೆ ದೃಢವಾಗುತ್ತದೆ. ಹೀಗೆ ರುದ್ರನಾಟಕ ಹೋಮಿಯೋಪತಿ ವೈದ್ಯದ ಔಷಧದಂತೆ ಚಿಕಿತ್ಸೆ ನಡೆಸುತ್ತದೆ.

ರುದ್ರನಾಟಕದ ಇನ್ನೆರಡು ಪ್ರಯೋಜನಗಳೂ ಅರಿಸ್ಟಾಟಲನ ಮನಸ್ಸಿಗೆ ಹೊಳೆದಿತ್ತೆಂಬುದು ವಿದ್ವಾಂಸರ ಅಭಿಮತ. ಅದು ತಂದೀಯುವ ಸಂತೋಷ ಪ್ರಾಪ್ತಿಯೇ ಎರಡನೆಯ ಪ್ರಯೋಜನ. ಯಾವ ಬಗೆಯ ಸಂತೋಷ ಅದು? ರುದ್ರ ನಾಟಕದ ನಾಯಕ ದುರುಳನಲ್ಲ. ಒಟ್ಟಿನಲ್ಲಿ ಅವನು ಸದ್ಗುಣಿ. ಯಾವುದೋ ಅಲ್ಪ ಅಜಾಗ್ರತೆಗೊ ಗುಣಾತಿಶಯಕ್ಕೋ ಪಕ್ಕಾಗಿ ಆತ ತಪ್ಪು ಮಾಡುತ್ತಾನೆ. ಅದರಿಂದ ಅವನಿಗೆ ಆಗುವ ತೊಂದರೆಯೂ ಸಂಕಟವೂ ವಿಪರೀತ. ಅದಷ್ಟಕ್ಕೂ ಅವನೆಂದಿಗೂ ಅರ್ಹನಲ್ಲ. ಕಾರಣ, ಅವನ ವಿಷಾದ ಚರಿತ್ರೆ ಪ್ರೇಕ್ಷಕರಲ್ಲಿ ಭೀತಿಯನ್ನೂ ಅನುಕಂಪವನ್ನೂ ಉತ್ಪಾದಿಸುತ್ತದೆ. ಪ್ರೇಕ್ಷಕರು ಸಾಮಾನ್ಯವಾಗಿ ತಮ್ಮ ತಮ್ಮ ಕ್ಷುಲ್ಲಕ ದಿನಚರಿ ಕಷ್ಟವ್ಯಸನಗಳಲ್ಲಿ ಲೀನರಾದ ಅತ್ಯಂತ ಸ್ವಾರ್ಥದ ಮಂದಿ. ನಾಟಕ ಮಂದಿರದಲ್ಲಿ ನಾಯಕನ ಭಾರಿ ಸಂತಾಪಗಳಿಗೆ ಮನಸೋತು ತಮ್ಮ ಸ್ವಂತ ಯೋಗಕ್ಷೇಮದ ಸಂಕೋಚದಿಂದ ವಿಮುಖರಾಗಿ ಕೊಂಚಕಾಲ ಮೇಲ್ಮಟ್ಟಕ್ಕೆ ಏರುತ್ತಾರೆ. ಹೀಗೆ ಮನಶ್ಶುದ್ಧಿಯನ್ನು ಆಗಗೊಳಿಸಿ ರುದ್ರನಾಟಕ ಆನಂದದಾಯಕವಾಗುತ್ತದೆ. ಮೂರನೆಯದಾಗಿ, ಗಂಭೀರನಾಟಕದ ನಾಯಕ ಕೇವಲ ಒಬ್ಬ ಬಿಡಿ ವ್ಯಕ್ತಿಯಲ್ಲ. ಮಾನವಕೋಟಿಯ ಉದಾತ್ತ ಪ್ರತಿನಿಧಿ. ಅವನ ಆಗುಹೋಗುಗಳ ನಿಕಟ ಪರಿಚಯದಿಂದ ಮನುಷ್ಯ ಜೀವನದ ಆಳವೂ ವಿಶಾಲವೂ ಆದ ಸಾರ್ವತ್ರಿಕ ಅನುಭವ ನೋಟಕರಿಗೆ ದಕ್ಕುತ್ತದೆ. ತನ್ಮೂಲಕ ಅವರ ಬಾಳು ಎತ್ತರವಾಗಬಹುದು. ಲಲಿತಕಲೆಯ ಪಾಲಿಗೆ ನೇಮಕವಾಗಿರುವ ಕರ್ತವ್ಯವನ್ನು ರುದ್ರನಾಟಕ ಹೀಗೆ ಅತ್ಯುತ್ಕೃಷ್ಟವಾಗಿ, ಭಾಷೆಕೊಟ್ಟು ನೆರೆವೇರಿಸಬಲ್ಲುದು.

ಈ ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ಅರಿಸ್ಟಾಟಲನದೊ ಹೇಳುವಂತಿಲ್ಲ. ಪಾಶ್ಚಾತ್ಯ ವಿಮರ್ಶೆಯಲ್ಲಿ ಕತಾರ್ಸಿಸ್ ಪದದಷ್ಟು ಚರ್ಚಿತವಾಗಿರುವ ಉಕ್ತಿ ಬೇರೊಂದಿಲ್ಲ. ಹರ್ಷನಾಟಕವೂ ನಗುವಿನ ಮೂಲಕ ಇದೇ ರೀತಿ ಭಾವಶುದ್ಧಿಯನ್ನು ದೊರಕಿಸುತ್ತದೆ ಯೆಂದು ಪ್ರಾಯಶಃ ಅರಿಸ್ಟಾಟಲನ ಅಭಿಮತವಾಗಿತ್ತು. ಆದರೆ ಹರ್ಷನಾಟಕವನ್ನು ಕುರಿತ ಅವನ ಲೇಖನ ಕಣ್ಮರೆಯಾಗಿದೆಯಾಗಿ ಖಚಿತವಾಗಿ ಏನನ್ನೂ ಹೇಳುವಂತಿಲ್ಲ. ಕತಾರ್ಸಿಸ್ ತತ್ತ್ವ ಅರಿಸ್ಟಾಟಲನ ಬಗೆಗೇ ರುದ್ರನಾಟಕದ ಬಗೆಗೇ ಮಿತಿಗೊಂಡಿಲ್ಲ. ಪಾಶ್ಚಾತ್ಯ ಕಲಾಮೀಮಾಂಸೆಯಲ್ಲಿ ಅದಕ್ಕೆ ಹೆಚ್ಚಿನ ವ್ಯಾಪ್ತಿ ಲಭಿಸಿದೆ. ಲಲಿತ ಕಲೆಯ ಸ್ವರೂಪದ ಮೇಲೆ ಕತಾರ್ಸಿಸ್ ಬೆಳಕು ಚೆಲ್ಲುತ್ತದೆಯೇ ಇದೊಂದು ಗಹನ ಪ್ರಶ್ನೆ. ಇಲ್ಲವೆಂದು ಅನೇಕರ ವಾದ. ಕಲೆಗೋಸ್ಕರ ಕಲೆ ಇರುವುದರಿಂದ ಅದಕ್ಕೆ ಪ್ರತ್ಯೇಕ ಉದ್ದೇಶವನ್ನು ಆರೋಪಿಸುವುದು ತಪ್ಪು. ನಾಟಕ ಒಂದು ವಿನೋದ ಅಷ್ಟೇ. ವಿನೋದ ಮುಖ್ಯವಲ್ಲ. ಅದರಿಂದ ಉಂಟಾಗಬಹುದಾದ ಭಾವಶುದ್ಧಿ ಇತ್ಯಾದಿಗಳು ಕೇವಲ ಗೌಣ-ಎಂದವರ ವಾದ.

ಅರಿಸ್ಟಾಟಲ್ ಟ್ರ್ಯಾಜಿಡಿಯು ಭಯ ಇತ್ಯಾದಿಗಳನ್ನು ಪ್ರಚೋದಿಸಿ ಅವುಗಳ ಕೆತಾರ್ಸಿಸ್ಅನ್ನು ಸಾಧಿಸುತ್ತದೆ ಎಂದ. ಟ್ರ್ಯಾಜೆಡಿಯ ಕ್ರಿಯೆಯನ್ನು ವೀಕ್ಷಿಸಿ ಪ್ರೇಕ್ಷಕರು ಖಿನ್ನವಾಗುವುದಿಲ್ಲ, ಉದ್ವೇಗಗೊಳ್ಳುವುದಿಲ್ಲ, ಒಂದು ರೀತಿಯ ಬಿಡುಗಡೆಯನ್ನು ಅನುಭವಿಸುತ್ತಾರೆ ಎಂದು ಪ್ರತಿಪಾದಿಸಿದ. ಅನಾರೋಗ್ಯಕರವಾಗಬಹುದಾದ ಭಾವಗಳು ನಾಟಕದ ನಾಯಕನ ಬಗೆಗೆ ಸಹಾನುಭೂತಿಯಿಂದ ಬಹಿರ್ಮುಖಿಯಾಗುತ್ತವೆ, ಹೀಗೆ ಮಾನಸಿಕ ಸಾಮರಸ್ಯವಾಗುತ್ತದೆ ಎಂದು ಅರಿಸ್ಟಾಟಲನ ವಿವರಣೆ ಎಂಬುದು ಕೆಲವು ವಿಮರ್ಶಕರ ಅಭಿಪ್ರಾಯ. ಇದರಿಂದ ಬದುಕಿನ ನೋವಿನ ಮೇಲೆ ಪ್ರೇಕ್ಷಕನ ಮನಸ್ಸು ಪ್ರಭುತ್ವವನ್ನು ಸಾಧಿಸುತ್ತದೆ, ಟ್ರ್ಯಾಜಿಡಿಯು ಮನುಷ್ಯನ ನೈತಿಕ ಸ್ವಭಾವವನ್ನು ದುರ್ಬಲಗೊಳಿಸುವುದಿಲ್ಲ, ಇನ್ನೂ ಬಲಗೊಳಿಸುತ್ತದೆ ಎಂದು ವಿಮರ್ಶಕರು ವಿವರಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: