ಎನ್.ಅನಂತರಂಗಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎನ್ . ಅನಂತರಂಗಾಚಾರ್ : ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ಇವರ ಹುಟ್ಟೂರು. ಕ್ರಿ.ಶ. 1904 ಜೂನ್ ತಿಂಗಳಲ್ಲಿ ಜನನ. ತಂದೆ ಶ್ರೋತ್ರೀಯ ಬ್ರಾಹ್ಮಣರಾದ ನರಸಿಂಹಾಚಾರ್ಯರು. ಆಚಾರ್ಯರೇ ಒಂದೆಡೆ ಹೇಳಿರುವಂತೆ ಇವರೇ ಅವರಿಗೆ ಕಾಯಕ ಮೌಲ್ಯವನ್ನೂ ಕಾಲಪ್ರಜ್ಞೆಯನ್ನು ಕಲ್ಪಿಸಿಕೊಟ್ಟವರು. ನಾಲ್ಕನೇ ವರ್ಷದಿಂದ ಹದಿಮೂರನೇ ವರ್ಷದವರೆಗೆ ಬೆಳಿಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಜೊತೆಯಲ್ಲಿಯೇ ಇರಿಸಿಕೊಂಡು ಆ ಅವಧಿಯಲ್ಲಿ ವೇದ , ಪ್ರಬಂಧ , ಪ್ರಯೋಗ , ಸಂಸ್ಕೃತ ಮೊದಲಾದವುಗಳನ್ನೆಲ್ಲಾ ಕಲಿಸಿದರು .ಇದೇ ಕಾಲದಲ್ಲಿ ಇವರು ತಿ. ನರಸೀಪುರದ ಎ.ವಿ. ಸ್ಕೂಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸದರು .ಮುಂದೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿದರು .ಅಲ್ಲಿ ಎಮ್. ಎಚ್. ಕೃಷ್ಣ ಅವರು ಇವರಿಗೆ ಅಧ್ಯಾಪಕರಾಗಿದ್ದರು . ಮುಖ್ಯವಾಗಿ ಆಚಾರ್ಯರಿಗೆ ಕನ್ನಡಾಭಿಮಾನ ಉಂಟು ಮಾಡಿದವರು ಇವರೇ .ನಂತರ 1924ರಲ್ಲಿ ಮುಂದಿನ ವಿದ್ಯಾಭ್ಯಾಕ್ಕಾಗಿ ಮೈಸೂರು ಮಹಾರಾಜ ಕಾಲೇಜನ್ನು ಸೇರಿದರು . ಆಗ ಅದು ಬಹುಪ್ರಖ್ಯಾತವಾದ ಸಂಸ್ಥೆ . ಸುಪ್ರಸಿದ್ಧರಾದ ಎನ್. ಎಸ್. ಸುಬ್ಬರಾಯರು , ಎಂ. ಹಿರಿಯಣ್ಣನವರು , ಎ. ಆರ್. ವಾಡಿಯ , ವೆಂಕಟೇಶ್ವರಯ್ಯರ್ ಮೊದಲಾದವರು ಇಲ್ಲಿ ಪ್ರಾಧ್ಯಾಪಕರಾಗಿದ್ದರು .ಬಿ. ಎಂ. ಶ್ರೀಯವರು ಕಿರಿಯ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು . ಆಗ ಕನ್ನಡಕ್ಕೆ ಪ್ರತ್ಯೇಕ ಪೀಠವಿರಲಿಲ್ಲ . ಶ್ರೀ ಬಿ. ಕೃಷ್ಣಪ್ಪ ಹಾಗೂ ಕಾನಕಾನಹಳ್ಳಿ ವರದಾಚಾರ್ಯರು ಕನ್ನಡದ ಪ್ರಾಧ್ಯಾಪಕರಗಿದ್ದರು .ಇವರ ಪ್ರಭಾವವನ್ನು ಆಚಾರ್ಯರು ಬಹಳ ಬಾರಿ ಸ್ಮರಿಸಿಕೊಂಡಿದ್ದಾರೆ . ಇವರುಗಳ ಮುಂದಾಳುತ್ವದಲ್ಲಿ 1924ರಲ್ಲಿ ಬಿ.ಎ. ಪದವೀಧರರಾದರು . ಈ ಸಮಯದಲ್ಲಿ ಆಚಾರ್ಯರ ಸಾಂಘಿಕ ಚಟುವಟಿಕೆಗಳು ಅವರ ಒಟ್ಟು ವ್ಯಕ್ತಿತ್ವದ ಅರಳುವಿಕೆಗೆ ಹಾಗೂ ಕನ್ನಡ ಸಾಹಿತ್ಯದ ಅವರ ಕೆಲಸ ಕಾರ್ಯಗಳಿಗೆ ಅಡಿಪಾಯವಾದವು .[೧]

ವಿದ್ಯಾಭ್ಯಾಸ[ಬದಲಾಯಿಸಿ]

ಮುಂದೆ 1927ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮೊತ್ತಮೊದಲ ಕನ್ನಡ ಎಂ.ಎ. ತರಗತಿಯು ಪ್ರಾರಂಭವಾಯಿತು . ಆದರೆ ಮೊದಲನೆಯ ಗುಂಪಿನ ವಿದ್ಯಾರ್ಥಿಗಳಲ್ಲಿ ಆಚಾರ್ಯರೂ ಒಬ್ಬರು . ಈ ಸಂದರ್ಭದಲ್ಲಿ ಪ್ರೊ. ವೆಂಕಣ್ಣಯ್ಯನವರು, ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಗಳು ಇವರ ಗುರುಗಳಾಗಿದ್ದರು . ಇಲ್ಲಿಂದ ಮುಂದೆ ಆಚಾರ್ಯರು 1930ರಲ್ಲಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ 60 ರೂಪಾಯಿಯ ಪಂಡಿತರಾಗಿ ಸೇರಿದರು . ಅಲ್ಲಿಂದ ಒಂದು ವರ್ಷದಲ್ಲೇ ಪ್ರಾಚ್ಯ ವಿದ್ಯಾ ಸಂಶೋಧನಾಲಯಕ್ಕೆ ವರ್ಗಯಿಸಲ್ಲಟ್ಟರು . ಇದು ಆಚಾರ್ಯರ ಸಾಹಿತ್ಯ ಕೃಷಿಯ ದೃಷ್ಟಿಯಿಂದ ಸುಗ್ಗಿಯ ಕಾಲ . ಈ ಕಾಲದಲ್ಲಿಯೇ ಅವರು ಕುಮಾರವ್ಯಾಸಭಾರತದ ಯುದ್ಧಪಂಚಕವನ್ನು ಸಂಶೋಧಿಸಿ ಪ್ರಕಟಿಸಿದರು . ಸಹಿತ ಸಂಶೋಧಿಸಿ ಪ್ರಕಟಿಸಿದರು . ನಂಜುಂಡ ಕವಿಯ 'ಕುಮಾರ ರಾಮ ಸಾಂಗತ್ಯ'ವನ್ನು ಮುದ್ರಣಕ್ಕೆ ಸಿದ್ದಪಡಿಸಿದರು. ಈ ಸಂದರ್ಭದಲ್ಲಿ ಆಚಾರ್ಯರು ಕೈಗೂಂಡ ಕೈಬರಹದ ಪುಸ್ತಕಾನ್ವೇಷಣೆಯ ಕೆಲಸ ಅವರ ಜೀವನದಲ್ಲಿ ಮಾತ್ರವಲ್ಲ ಇಡೀ ಕನ್ನಡದ ಸಾಹಿತ್ಯದ ದೃಷ್ಟಿಯಿಂದಲೇ ಅತಿ ಮಹತ್ವದ್ದು. ಈ ಸಮಯದಲ್ಲಿ ಅವರು ದೇಶದ ಒಳಗೂ ಹೊರಗೂ ಸಂಚರಿಸಿ ಅನೇಕ ಹೊಸ ಗ್ರಂಥಗಳನ್ನು ಕನ್ನಡಕ್ಕೆ ತಂದರು .

ಕೃತಿಗಳು[ಬದಲಾಯಿಸಿ]

ಸಾಹಿತ್ಯ ಚರಿತ್ರೆ ಕೃತಿ[ಬದಲಾಯಿಸಿ]

ಆಚಾರ್ಯರ ಮುಖ್ಯ ಸಾಹಿತ್ಯಕ್ಷೆತ್ರಗಳೆಂದರೆ ಗ್ರಂಥ ಸಂಪಾದನೆ, ಸಾಹಿತ್ಯ ಚರೀತ್ರೆ . ಇವರು ಸಂಪಾದಿಸಿದ ಕೃತಿಗಳಲ್ಲಿ ಪ್ರಧಾನವಾದುವು ಮಲ್ಲಿಕಾಖಾರ್ಜುನ ಸೂಕ್ತಿ ಸುಧಾರ್ಣವ ಮತ್ತು ಮಲ್ಲ ಕವಿಯ ಕಾವ್ಯಸಾರ. ಇವೆರಡೂ ಕಾವ್ಯದ ಅಷ್ಟಾದಶ ವರ್ಣನೆಗಳ ವಿಷಯಕವಾದ ಸಂಕಲನ ಗ್ರಂಥಗಳು . ಅಲ್ಲಿನ ಪದ್ಯಗಳೆಲ್ಲಾ ಅವಕ್ಕೆ ಹಿಂದೆ ಇದ್ದ ಎಲ್ಲ ಪ್ರಾಚೀನ ಗ್ರಂಥಗಳಿದ್ದ ಸಂಗ್ರಹಿತವಾದವು . ಒಂದರಲ್ಲಿ 2000 ಪದ್ಯಗಳೂ ಮತ್ತೊಂದರಲ್ಲಿ 3500 ಪದ್ಯಗಳೂ ಇವೆ .ಹಸ್ತಪ್ರತಿಗಳಲ್ಲಿ ಆವುದಕ್ಕೂ ಆಕರ ಗುರುತಿಸಿಲ್ಲ. ಈ ಕೆಲಸವನ್ನು ಸಂಪಾದನೆಯ ಸಂದರ್ಭದಲ್ಲಿ ಮಾಡಲಾಗಿದೆ. ಇದಕ್ಕಾಗಿ ಆ ಗ್ರಂಥಗಳಿಗೆ ಆಕರವಾದ, ಅಲ್ಲಿಯವರೆಗೆ ಉಪಲಬ್ಧವಾಗಿರುವ ಎಲ್ಲ ಚಂಪೂಕಾವ್ಯಗಳ ಅಕಾರಾದಿ ಅವಶ್ಯವಾಯ್ತು. ಅದಕ್ಕಾಗಿ ಅವರು ಅಲ್ಲಿಯವರೆಗೆ ಉಪಲಬ್ಧವಿದ್ದ 35 ಮುದ್ರಿತ ಮತ್ತು ಅಮುದ್ರಿತ ಕೃತಿಗಳ ಆಕಾರಾದಿಗಳನ್ನು ತಯಾರಿಸಿ ಅವುಗಳೊಡನೆ ತುಲನೆಮಾಡಿ ಆಕರಗಳನ್ನು ತಯಾರಿಸಿದ್ದಾರೆ. ಅದಕ್ಕಾಗಿ ಅವರು ಅಲ್ಲಿಯವರೆಗೆ ಉಪಲಬ್ಧವಿದ್ದ 35 ಮುದ್ರಿತ ಮತ್ತು ಅಮುದ್ರಿತ ಕೃತಿಗಳ ಆಕಾರಾದಿಗಳನ್ನು ತಯಾರಿಸಿ ಅವುಗಳೊಡನೆ ತುಲನೆಮಾಡಿ ಆಕರಗಳನ್ನು ಗುರುತಿಸಿದ್ದಾರೆ . ಆಕರ ಸಿಕ್ಕದಿರುವ 2500 ಪದ್ಯಗಳನ್ನು ಗುರುತಿಸಿದ್ದಾರೆ . ಈ ಪದ್ಯಗಳು ಕನ್ನಡವು ಕಳಕೊಂಡಿರುವ ಸಾಹಿತ್ಯದ ಅಗಾಧತೆಯನ್ನು ತೋರಿಸುತ್ತದೆ . ಈ ಸಂದರ್ಭದಲ್ಲಿ ಸಿದ್ಧವಾದ ಒಂದು ಲಕ್ಷ ಪಟ್ಟಿಕೆಗಳನ್ನು ಒಟ್ಟಿಗೆ ಸೇರಿಸಿ ಇವರು 'ಕನ್ನಡ ಚಂಪೂಕಾವ್ಯಗಳ ಪದ್ಯಾನುಕ್ರಮಣಿಕೆ' ಎಂಬ ಮತ್ತೊಂದು ದೊಡ್ಡ ಗ್ರಂಥವನ್ನು ರಚಿಸಿದ್ದಾರೆ . ಇದಲ್ಲದೇ ಇವರು ಗ್ರಂಥಗಳನ್ನೂ ಸಂಪಾದಿಸಿದ್ದಾರೆ .

ಭಾಷಾ ಸಾಹಿತ್ಯ ಚರಿತ್ರೆ ಕೃತಿ[ಬದಲಾಯಿಸಿ]

ಆಚಾರ್ಯರ ಮತ್ತೊಂದು ಹಿರಿಯ ಕೃತಿ ಸಾಹಿತ್ಯ ಭಾರತಿ . ಇವರು ಬಿ. ಎ. ಆನರ್ಸ್ ತರಗತಿಗೆ ಭಾರತೀಯ ಮತ್ತು ಇತರ ಭಾಷಾಸಾಹಿತ್ಯ ಚರಿತ್ರೆಗಳನ್ನು ಕುರಿತು ಭೋದಿಸಬೇಕಾಗಿ ಬಂದಾಗ ಅದಕ್ಕೆ ಸಹಾಯವಾಗುವ ಪುಸ್ತಕಗಳಾವುವೂ ಕನ್ನಡದಲ್ಲಿ ದೊರೆಯುತ್ತಿರಲಿಲ್ಲವೆಂಬ ಕಾರಣದಿಂದ ರಚಿಸಿದ ಕೃತಿ ಇದು . ಇದರಲ್ಲಿ ಭಾರತದ ಇಪ್ಪತ್ತು ಅಧಿಕೃತ ಭಾಷೆಗಳ ಸಾಹಿತ್ಯ ಚರಿತ್ರೆ ಅಡಕವಾಗಿದೆ . ಅಲ್ಲದೆ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯ ಚರಿತ್ರೆಗಳ ವಿಸ್ತಾರವಾದ ಪರಿಶೀಲನೆ ಇದೆ. ಒಂದು ಸಾವಿರ ಪುಟಗಳಷ್ಟಿರುವ ಬೃಹದ್ಗ್ರಂಥವಿದು. ಒಟ್ಟಿನಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನ ಕಾಲದಲ್ಲಿ ಏನು ಮಾಡಬಹುದು, ಎಷ್ಚು ಮಾಡಬಹುದು? ಏನೂ ಮಾಡಬಹುದು, ಎಷ್ಟೂ ಮಾಡಬಹುದು, ಎಷ್ಟು ರಂಗದಲ್ಲಿ ಬೇಕಾದರೂ ತನ್ನನ್ನು ತೊಡಗಿಸಿಕೊಳ್ಳಬಹುದು ಎಂದು ಬಾಳಿ ತೋರಿಸಿ ಸಾಧನೆಗೆ, ಸೇವೆಗೆ ಯಾವುದೇ ಮಿತಿ ಇಲ್ಲವೆಂಬುದನ್ನು ಪ್ರತ್ಯಕ್ಷವಾಗಿ ತೋರಿಸಿದ ಆಚಾರ್ಯರು ಒಬ್ಬ ಧೀಮಂತ ವ್ಯಕ್ತಿಯಾಗಿ, ಅಕ್ಕರೆಯ ತಂದೆಯಾಗಿ, ಹಿರಿಯ ಸಾಹಿತಿಯಾಗಿ, ಕಾಳಜಿಯ ಸಮಾಜಸೇವಕರಾಗಿ, ಸಮರ್ಥ ಅಧ್ಯಾಪಕರಾಗಿ, ನಿಷ್ಠೆಯ ಪುರೋಹಿತರಾಗಿ ಬದುಕಿನ ಬಹುಮುಖಗಳನ್ನು ಬಿಡಿಸಿ ನೋಡಲು ಪ್ರಯತ್ನಿಸಿದವರು, ಜಯಶೀಲರಾದವರು ಕೂಡ .

ಉಲ್ಲೇಖ[ಬದಲಾಯಿಸಿ]

  1. ಹೊಂಬಿದಿರು, ಪ್ರಧಾನ ಸಂಪಾದಕರು:ಡಾ.ನಾ.ದಾಮೋದರ ಶೆಟ್ಟಿ, ಸ್ವಾಗತ ಸಮಿತಿ, ಅಖಿಲಭಾರತ ೭೧ನೆಯ ಸಾಹಿತ್ಯ ಸಮ್ಮೇಳನ, ಮೂಡಬಿದಿರೆ ೨೦೦೩