ಆಂಡಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡಾಳ್
ಜನನ3005 BCE
ಶ್ರೀವಳ್ಳಿಪುತ್ತೂರು
ಜನ್ಮ ನಾಮಗೋದಾ
ಗೌರವಗಳುಆಳ್ವಾರ್
ತತ್ವಶಾಸ್ತ್ರಶ್ರೀವೈಷ್ಣವ ಭಕ್ತಿ
ಪ್ರಮುಖ ಕೃತಿಗಳುತಿರುಪ್ಪಾವೈ, Naachiyaar Thirumozhi

ಆಂಡಾಳ್ ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು.ತಮಿಳು ಭಾಷೆಯಲ್ಲಿ ಪ್ರಸಿದ್ಧವಾಗಿರುವ ತಿರುಪ್ಪಾವೈಗಳ ರಚನೆ ಮಾಡಿರುವವಳು. ಈಕೆ ಪರಿಯಾಳ್ವಾರರ ಸಾಕುಮಗಳು. ಗೋದಾದೇವಿಯೆಂದೂ ಹೆಸರು. ಕಟಕಮಾಸದ ಪೂರ್ವಫಾಲ್ಗುಣಿ ನಕ್ಷತ್ರದಲ್ಲಿ ಸಾಕ್ಷಾತ್ ಭೂದೇವಿ ಎಂದೇ ಪರಿಭಾವಿತಳಾಗಿರುವ ಈಕೆಯ ಜನ್ಮದಿನೋತ್ಸವ ಜರುಗುತ್ತದೆ. ಈಕೆ ಬಾಳಿದ್ದು ಬಹು ಸ್ವಲ್ಪ ಕಾಲ; ಆದರೆ ಜಗಕ್ಕಾದ ಉಪಕಾರವೋ ಅಪಾರ.

ಇತಿವೃತ್ತ[ಬದಲಾಯಿಸಿ]

  • ಈ ಹೆಣ್ಣು ಮಗಳು ಕನಸಿನ ದೈವವೊಂದಕ್ಕೆ ಉಸಿರು ಹೊಯ್ದು ಆತನನ್ನು ವರಿಸಿ ಆತನಲ್ಲೇ ಮೈಗರೆದಳು. ತಂದೆ ತನ್ನ ತೋಟದಿಂದ ಆರಿಸಿ ತಂದ ಹೂಗಳನ್ನು ಮಾಲೆಗಟ್ಟಿ ಈ ಮಾಲೆ ದೇವರಿಗೆ ಸೊಗಸುವುದೇ ಎಂಬುದನ್ನು ತಾನು ಮೊದಲು ಮುಡಿದು ಪರೀಕ್ಷಿಸಿ ಆಳ್ವಾರರ ಬುಟ್ಟಿಯಲ್ಲಿ ಇಡುತ್ತಿದ್ದ ಈಕೆಯ ಪರಿಪಾಠವನ್ನು ಒಂದು ದಿನ ಅವರು ಕಂಡು ಕೋಪಿಸಿ, ಹೂಮಾಲೆಯನ್ನು ಅದು ಅಶುದ್ಧವೆಂಬ ಕಾರಣಕ್ಕಾಗಿ ಗುಡಿಗೊಯ್ಯಲಿಲ್ಲ. ಆದರೆ ವಟಪತ್ರಶಾಯಿಗೆ ಇವಳು ಮುಡಿದ ಮಾಲೆಯಲ್ಲದೆ ಬೇರೊಂದು ಸೇರದು.
  • ಆಳ್ವಾರರು ಈಕೆ ಮುಡಿದದ್ದನ್ನೇ ದೇವರಿಗೊಪ್ಪಿಸ ಬೇಕಾಯಿತು. ಗೋದಾದೇವಿ ಶೂಡಿಕ್ಕುಡುತ್ತ ನಾಚ್ಚಿಯಾರ್ ಎನಿಸಿದುದು ಈ ರೀತಿಯಲ್ಲಿ. ಹರೆಯಕ್ಕೇರಿ ದೈವವನ್ನು ನಂಬಿ ಉನ್ಮತ್ತಳಂತೆ ಇದ್ದ ಈ ಹುಡುಗಿಯನ್ನು ಏನು ಮಾಡಬೇಕೆಂಬ ಬಗ್ಗೆ ಆಳ್ವಾರರು ಚಿಂತೆಗೀಡಾದರು. ಇದು ಸಿಕ್ಕ ಹಸುಳೆ, ಸಾಕಿದ ಮಗು, ಸುಸಂಸ್ಕೃತಳೂ ಕೋಮಲಮನಸ್ಕಳೂ ಸುಂದರಿಯೂ ಆದ ಇವಳ ವರ್ತನೆಯೋ ಸಾಮಾನ್ಯ ಸ್ತ್ರೀಯರದಿದ್ದಂತಲ್ಲ. ಇವಳನ್ನು ಯಾರಿಗೆ ವಹಿಸಿ ಕೃತಾರ್ಥನಾಗೋಣ ಎಂದವರು ಆತಂಕಗೊಂಡರು.
  • ಒಮ್ಮೆ ಆಂಡಾಳ್ ಇದನ್ನರಿತು ನನ್ನನ್ನು ಹಕ್ಕಿಯ ಬಾಯನ್ನು ಸೀಳಿದ ಮಣಿವರ್ಣನಿಗೆ ವಹಿಸಿಬಿಡಿ ಎಂದಳು; ಆತ ಶ್ರೀರಂಗನಾಥದಲ್ಲಿ ನೆಲಸಿದ್ದಾನೆಂದು ತಂದೆಯ ಮಾತಿನಿಂದಲೇ ತಿಳಿದು ತನ್ನನ್ನು ಆತನಿಗೇ ಅರ್ಪಿಸಲು ಬೇಡಿದಳು. ಶ್ರೀರಂಗನಾಥ ಈ ವಧುವನ್ನೊಪ್ಪಿದ; ಮದುವೆ ಕನಸುಗಳ ಮೂಲಕ ತನ್ನವರಿಗೂ ಆಳ್ವಾರರಿಗೂ ನಡೆಸಬೇಕೆಂದೂ ಆಣತಿಯಿತ್ತ. ಪೆರಿಯಾಳ್ವಾರರು ಕನ್ಯೆಯನ್ನು ಶ್ರೀರಂಗಕ್ಕೆ ಕರೆದೊಯ್ದು ವೈಭವದಿಂದ ವಿವಾಹ ಜರುಗಿಸಿದರು; ಆಂಡಾಳ್ ಸ್ವಾಮಿಗೆ ವರಣಮಾಲೆಯನ್ನು ಹಾಕಿ ಆತನ ಹೃದಯವನ್ನು ಹೊಕ್ಕು ಕಣ್ಮರೆಯಾದಳು.
  • ಇದಿಷ್ಟು ಇವಳ ಕಥೆ. ಈಕೆಯಿಂದ ನಮಗೆ ಲಭಿಸಿರುವುದು ಉಪನಿಷತ್ಸಾರವೆಂದು ಪ್ರಖ್ಯಾತವಾದ ತಿರುಪ್ಪಾವೈ ಎಂಬ ಮೂವತ್ತು ಬಿಡಿ ಪದ್ಯಗಳ ಗೀತ ಮತ್ತು ನಾಚ್ಚಿಯಾರ್ ತಿರುಮೊಳಿ ಎಂಬ 147 ಬಿಡಿ ಪದ್ಯಗಳ ಅವಳಿ. ಈಕೆಯ ಕವಿತೆ ಎಂಥವರ ಮನಸ್ಸನ್ನೂ ಮರುಳು ಮಾಡುತ್ತದೆ. ರಾಮಾನುಜರು ತಿರುಪ್ಪಾವೈ ಎಂಬುದನ್ನು ನಿತ್ಯ ಹೇಳುತ್ತಾ ಆಗಾಗ ಕಣ್ಣೀರಿಡುತ್ತಿದ್ದರಂತೆ.
  • ವೇದಾಂತದೇಶಿಕರು ಗೋದಾ ಸ್ತುತಿ ಎಂಬ ಸುಂದರವಾದ ಸ್ತೋತ್ರದಲ್ಲಿ ಈಕೆಯನ್ನು ಕೊಂಡಾಡಿದ್ದಾರೆ. ಪೂಜಾವೇಳೆಯಲ್ಲಿ ತಿರುಪ್ಪಾವೈಯ ಕೊನೆಯೆರಡು ಪಾಶುರಗಳನ್ನು ಶ್ರೀವೈಷ್ಣವರೆಲ್ಲರೂ ತಪ್ಪದೆ ಅನುಸಂಧಾನ ಮಾಡುತ್ತಾರೆ. ತಾನು ಕನಸಿನಲ್ಲಿ ರಂಗನಾಥನೊಡನೆ ಮದುವೆಗೆ ನಿಂತದ್ದನ್ನು ಈಕೆ ವರ್ಣಿಸಿರುವ ವಾರಣಮಾಯಿರಂ ಎಂಬ ಮಾಂಗಲ್ಯ ಗೀತೆ ಮದುವೆ ಕಾಲದಲ್ಲಿ ಪ್ರಯುಕ್ತವಾಗುತ್ತಿದೆ.

ಮಾಂಗಲ್ಯ ಗೀತೆ[ಬದಲಾಯಿಸಿ]

  • ಉನ್ ತನ್ನೊಡುತ್ತೋಮೇಯಾವೋಂ ಉನಕ್ಕೇ ನಾಮಾಳ್ಚೈಯ್ವೊಂ ಮತ್ತೈನಮ್ ಕಾಮಂಗಳ್ ಮಾತ್ತು.
  • ನಿನ್ನೊಡಗೊಡಿಯೇ ಬಾಳುವೆವು, ನಿನಗೇ ಸೇವೆಗೈವೆವು. ಮಿಕ್ಕೆಲ್ಲ ಕಾಮಗಳನ್ನೂ ಕಳೆ. ಇದು ಗೋದಾದೇವಿಯ ಮೊರೆ; ಸಮಸ್ತ ಭಕ್ತ ಮುಮುಕ್ಷುಗಳ ಒಳ ಮೊರೆಯೂ ಇದೇ. ರಾಮಾನುಜ ಸಿದ್ಧಾಂತದ ಪ್ರಕಾರ ಮುಕ್ತರು ಬಯಸುವುದೂ ಈ ಐಶ್ವರ್ಯವನ್ನೇ.
"https://kn.wikipedia.org/w/index.php?title=ಆಂಡಾಳ್&oldid=833550" ಇಂದ ಪಡೆಯಲ್ಪಟ್ಟಿದೆ