ಎಂ. ಟಿ. ವಿ. ಆಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಂ. ಟಿ. ವಿ. ಆಚಾರ್ಯ
Bornಜುಲೈ ೨೦, ೧೯೨೦
Died೧೯೯೨
Occupation(s)ಚಿತ್ರಕಲಾವಿದರು, ಚಂದಮಾಮ ಕಲಾ ಸಂಪಾದಕರು, ಕಲಾಶಿಕ್ಷಕರು

ಎಂ. ಟಿ. ವಿ. ಆಚಾರ್ಯ (ಜುಲೈ ೨೦, ೧೯೨೦ - ೧೯೯೨) ಮೈಸೂರು ಶೈಲಿಯ ಮಹಾನ ಚಿತ್ರಕಲಾವಿದರೆನಿಸಿದ್ದು, ಚಂದಮಾಮ ಪತ್ರಿಕೆಯಲ್ಲಿನ ತಮ್ಮ ಸುಂದರ ವರ್ಣಚಿತ್ರಗಳಿಂದ 'ಚಂದಾಮಾಮ ಆಚಾರ್ಯರೆಂದೇ ಮನೆಮಾತಾಗಿದ್ದವರು ಚಂದಮಾಮ ಎಂದರೆ ಮೊದಲು ನೆನಪಾಗುವುದು ಅದರಲ್ಲಿನ ಸುಂದರ ಚಿತ್ರಗಳು ಮತ್ತು ಮೋಹಕ ಕಥೆಗಳು. ಇಪ್ಪತ್ತನೆಯ ಶತಮಾನದ ದ್ವಿತೀಯ ಭಾಗದಲ್ಲಿ ಈ ಚಂದಮಾಮ ಓದದೆ, ಅದರಲ್ಲಿನ ಕಥೆ ಕೇಳದೆ, ಅದರಲ್ಲಿನ ಚಿತ್ರಗಳನ್ನು ನೋಡದ ಮಕ್ಕಳೇ ಇರಲಿಲ್ಲ. ಚಂದಮಾಮದ ನೆನಪನ್ನು ಮುದವಾಗಿ ಉಳಿಸಿರುವ ವರ್ಣ ಚಿತ್ರಗಳಲ್ಲಿ ಕನ್ನಡಿಗರಾದ ಎಂ. ಟಿ. ವಿ. ಆಚಾರ್ಯರ ಕೊಡುಗೆಯೂ ಪ್ರಧಾನವಾದುದು.

ಜೀವನ[ಬದಲಾಯಿಸಿ]

ಚಂದಮಾಮ ಆಚಾರ್ಯರೆಂದೇ ಪ್ರಖ್ಯಾತರಾಗಿದ್ದ ಎಂ.ಟಿ. ವಿ. ಆಚಾರ್ಯರು ಜನಿಸಿದ ದಿನ ಜುಲೈ ೨೦, ೧೯೨೦. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಆಚಾರ್ಯರ ಚಿತ್ರಗಳು ಮೈಸೂರು ದಸರಾ ಪ್ರದರ್ಶನ ಸಂದರ್ಭದಲ್ಲಿ ಬಹುಮಾನ ಗಳಿಸುತ್ತಿದ್ದವು. ಆಚಾರ್ಯರು ಕೆಲವು ಕಾಲ ಬೆಂಗಳೂರಿನ ಎಚ್.ಎ.ಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಚಂದಮಾಮ ಆಚಾರ್ಯ[ಬದಲಾಯಿಸಿ]

೧೯೪೫ರ ವರ್ಷದಲ್ಲಿ ಅವರ ಚಿತ್ರ ಪ್ರದರ್ಶನವು ಚೆನ್ನೈನಲ್ಲಿ ಏರ್ಪಾಡಾಗಿತ್ತು. ಆ ಖ್ಯಾತಿ ಅವರನ್ನು ೧೯೪೭ರ ವರ್ಷದಲ್ಲಿ ಆ ಕಾಲದಲ್ಲಿ ತಮಿಳಿನಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ‘ಚಂದಮಾಮ’ ಮಾಸಪತ್ರಿಕೆಗೆ ಕರೆದು ತಂದಿತು. ಮುಂದೆ ಅವರು ಕನ್ನಡ ಚಂದಮಾಮ ಅವತರಣಿಕೆ ಪ್ರಾರಂಭಗೊಂಡಾಗ ಅದರ ಸಂಪಾದಕರಾದರು. ಚಂದಮಾಮ ಪತ್ರಿಕೆಗಾಗಿ ಆಚಾರ್ಯ ಮತ್ತು (ವಿಕ್ರಂ ಬೇತಾಳ ಚಿತ್ರ ಖ್ಯಾತಿಯ) ಶಂಕರ್ ಅವರುಗಳು ಬಹಳಷ್ಟು ಪ್ರಖ್ಯಾತ ಚಿತ್ರಗಳನ್ನು ಮೂಡಿಸುತ್ತಿದ್ದರು.

ತಾಯಿ ನಾಡು ಪತ್ರಿಕೆಯಲ್ಲಿ[ಬದಲಾಯಿಸಿ]

ಎಂ. ಟಿ. ವಿ. ಆಚಾರ್ಯರು ೧೯೬೩ರಿಂದ ೧೯೬೫ರ ವರ್ಷಗಳಲ್ಲಿ ‘ತಾಯಿ ನಾಡು’ ಪತ್ರಿಕೆಯ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.

ಆಚಾರ್ಯ ಚಿತ್ರಕಲಾ ಭವನ[ಬದಲಾಯಿಸಿ]

ಮುಂದೆ ಆಚಾರ್ಯರು ‘ಆಚಾರ್ಯ ಚಿತ್ರಕಲಾ ಭವನ’ ಎಂಬ ಅಂಚೆಯ ಮೂಲಕ ಕಲಾ ಶಿಕ್ಷಣವನ್ನು ನೀಡುವ ಶಾಲೆಯನ್ನು ಪ್ರಾರಂಭಿಸಿ ಸಹಸ್ರಾರು ಜನರಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಲು ಪ್ರೇರಕರೂ ಮಾರ್ಗದರ್ಶಿಗಳೂ ಆದರು.

ವಿದಾಯ[ಬದಲಾಯಿಸಿ]

ಈ ಕಲಾಚಾರ್ಯ ಎಂ.ಟಿ.ವಿ. ಆಚಾರ್ಯರು ೧೯೯೨ರ ವರ್ಷದಲ್ಲಿ ಈ ಲೋಕವನ್ನಗಲಿದರು.