ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ (ಕ್ರಿ.ಶ. 1888 - 1936)[ಬದಲಾಯಿಸಿ]

ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರರು ಸಂಗೀತಗಾರರು, ವಾಗ್ಗೇಯಕಾರರು, ನಟರು, ಲೇಖಕರು, ಶಿಕ್ಷಕರು ಹಾಗೂ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದರು. ಹಿಂದುಸ್ತಾನಿ ಕಾಪಿ ರಾಗದಲ್ಲಿ ಇಂದು ಪ್ರಚಾರದಲ್ಲಿರುವ ಪುರಂದರ ದಾಸರ ಆಡಿಸಿದಳೆಶೋದ ಪದಕ್ಕೆ ರಾಗ ಸಂಯೋಜನೆ ಮಾಡಿ ಜೀವ ತುಂಬಿದವರೇ ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರರು.

ಬಾಲ್ಯ/ಸಂಗೀತಾಭ್ಯಾಸ ಮತ್ತು ಜೀವನ[ಬದಲಾಯಿಸಿ]

ಶ್ರೀವೈಷ್ಣವ ಸಂಪ್ರದಾಯಕ್ಕೆ ಸೇರಿದ್ದ ಶ್ರೀನಿವಾಸ ರಂಗಾಚಾರರು, ಶಿವನಸಮುದ್ರದ ಜಗನ್ಮೋಹನ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಇವರ ಧರ್ಮಪತ್ನಿ ವೆಂಕಟಲಕ್ಷ್ಮಮ್ಮ ತಮಗೆ ಹುಟ್ಟಿದ್ದ ಐದು ಮಕ್ಕಳನ್ನೂ ಕಳೆದುಕೊಂಡಿದ್ದರು. ಈ ದಂಪತಿ ಗಳಿಗೆ ರಂಗನಾಥನ ದಯೆಯಿಂದ, ೧೩ ನೇ ಮಾರ್ಚಿ ೧೮೮೮ ರಂದು, ಕರ್ನಾಟಕದ ಶಿವಗಂಗೆಯ ಹತ್ತಿರವಿದ್ದ ಶ್ರೀಗಿರಿಪುರದಲ್ಲಿ ಗಂಡು ಮಗುವೊಂದು ಜನಿಸಿತು. ಕುಪ್ಪಸ್ವಾಮಿ ಎಂದು ನಾಮಕರಣ ಮಾಡಿದರೂ, ಮುಂದೆ ಆ ಮಗು ಹೆಸರುವಾಸಿಯಾದದ್ದು ಶ್ರೀನಿವಾಸ ಐಯಂಗಾರರೆಂದು. ತಮ್ಮ ಆರನೆ ವಯಸ್ಸಿನಲ್ಲಿ ದುರದೃಷ್ಠವಶಾತ್ ತಂದೆಯನ್ನು ಕಳೆದುಕೊಂಡ ಶ್ರೀನಿವಾಸ ಐಯ್ಯಂಗಾರರು, ಚಿಕ್ಕಪ್ಪ ವರದೇಶಿಕಾಚಾರ್ಯರ ಮನೆಯಲ್ಲಿ ಬೆಳೆದರು. ವರದೇಶಿಕಾಚಾರ್ಯರು ವೇದಾಂತ, ತರ್ಕ, ವ್ಯಾಕರಣ, ಸಂಸ್ಕೃತ, ಜ್ಯೋತಿಷ್ಯ, ಸಾಹಿತ್ಯಗಳಲ್ಲಿ ಪಂಡಿತರಾಗಿದ್ದರಲ್ಲದೇ, ಆಯುರ್ವೇದ ವೈದ್ಯರೂ ಆಗಿದ್ದರು. ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದ ದೇಶಿಕಾಚಾರ್ಯರು ಎಂಟು ವರ್ಷದ ಶ್ರೀನಿವಾಸನಿಗೆ ಹಾಡುಗಾರಿಕೆಯನ್ನ ಪ್ರಾರಂಭ ಮಾಡಿದರು. ಶ್ರೀಗಿರಿಪುರದಲ್ಲಿದ್ದ ಸೋದರಮಾವ ಕುಪ್ಪಾಚಾರ್ಯರಿಂದ ಪಿಟೀಲನ್ನು ಕಲಿತು ನಂತರ ಕೊಳ್ಳೇಗಾಲದ ಕೃಷ್ಣಾ ಭಾಗವತ ರಿಂದ ಸಂಗೀತವನ್ನು ಮುಂದುವರೆಸಿದರು. ಹನ್ನೆರಡನೇ ವಯಸ್ಸಿನಲ್ಲಿ ಬೆಳಕವಾಡಿಯ ಲಕ್ಷ್ಮಮ್ಮನವರನ್ನು ಲಗ್ನವಾದರು. ಆದರೆ ದೈವೇಚ್ಛೆ ಬೇರೆಯೇ ಆಗಿತ್ತು. ಲಕ್ಷ್ಮಮ್ಮನವರು ಪ್ಲೇಗ್ ರೋಗಕ್ಕೆ ಬಲಿಯಾಗಿ, ತಮ್ಮ ಮೂರು ಮಕ್ಕಳು ಶ್ರೀರಂಗಮ್ಮ ಶ್ರೀನಿವಾಸ ರಂಗಾಚಾರ್ಯ ಮತ್ತು ವರದರಾಜರನ್ನು ತಬ್ಬಲಿ ಮಾಡಿ ಮೃತರಾದರು. ಮೂರು ವರ್ಷಗಳ ನಂತರ ಅಲಮೇಲಮ್ಮನವರನ್ನು ಲಗ್ನವಾದರು. ಇವರಿಗೆ ಹುಟ್ಟಿದ ಮಕ್ಕಳೇ ನಾಗರತ್ನ ಮತ್ತು ರಂಗಸ್ವಾಮಿ. ಈ ಹೊತ್ತಿಗಾಗಲೇ ಶ್ರೀನಿವಾಸ ಐಯ್ಯಂಗಾರರು ಸಂಗೀತ ಕಚೇರಿಗಳನ್ನು ನೀಡಿ, ಹೆಸರುವಾಸಿಯಾಗಿದ್ದರು. ಆಗಿನ ಕಾಲದಲ್ಲಿ ಊರೂರು ತಿರುಗಲು ರೈಲಿನ ಸೌಲಭ್ಯ ಅಷ್ಟಾಗಿರಲಿಲ್ಲ. ಸ್ವಲ್ಪ ದೂರ ರೈಲಿನಲ್ಲಿ ಪ್ರಯಾಣ ಮಾಡಿ ನಂತರ ಬಂಡಿಯಲ್ಲಿ ಪಯಣ ಮುಂದುವರೆಸುವ ವಾಡಿಕೆಯಿತ್ತು. ಹೀಗೆ ಗದ್ವಾಲ್, ವಾನಪರ್ತಿ ಆತ್ಮಾಕೂರ್ ಮತ್ತು ತೆಲುಗು ಸೀಮೆಯ ಇನ್ನೂ ಅನೇಕ ಸಂಸ್ಥಾನಗಳಲ್ಲಿ ಕಚೇರಿಗಳನ್ನು ನಡೆಸಿ, ಎಲ್ಲಾ ಕಡೆ ಶಾಲು ಜೋಡಿ ಮತ್ತು ೧೦೧/ ರೂ. ಗಳ ಸಂಭಾವನೆಯೊಂದಿಗೆ ಗೌರವಿಸಲ್ಪಟ್ಟಿದ್ದರು. ಕೆಲವು ಕಡೆ ಕಂಠಿಹಾರದಿಂದಲೂ ಸನ್ಮಾನಿತರಾಗಿದ್ದರು.

ಆಸ್ಥಾನ ವಿದ್ವಾಂಸರಾಗಿ[ಬದಲಾಯಿಸಿ]

ಮೈಸೂರಿನಲ್ಲಿ ಆಗ ವೀಣೆ ಶೇಷಣ್ಣ, ಭಕ್ಷಿ ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ ಮುಂತಾದ ಇನ್ನೂ ಅನೇಕ ದಿಗ್ಗಜರುಗಳು ಇದ್ದಂಥಾ ಕಾಲ. ಶ್ರೀನಿವಾಸ ಐಯ್ಯಂಗಾರರು, ವೀಣಾ ಭಕ್ಷಿ ಸುಬ್ಬಣ್ಣನವರ ಶಿಷ್ಯರಾಗಬೇಕೆಂಬ ಆಸೆಯಿಂದ ೧೯೧೨ ರಲ್ಲಿ ಮೈಸೂರಿಗೆ ಬಂದರು. ಸುಬ್ಬಣ್ಣನವರು ಸಂತೋಷ ದಿಂದ ಇವರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ನಾಲ್ಕು ವರ್ಷಗಳು ಸುಬ್ಬಣ್ಣನವರ ಗುರುಕುಲವಾಸದಲ್ಲಿ ಸಂಗೀತವನ್ನು ಮತ್ತಷ್ಟು ವೃದ್ಧಿ ಮಾಡಿಕೊಂಡು, ಒಬ್ಬ ಅತ್ಯುತ್ತಮ ಸಂಗೀತಗಾರರೆನಿಸಿಕೊಂಡರು. ಗುರುವಿಗಂತೂ ಶಿಷ್ಯನ ಸಂಗೀತವೆಂದರೆ ಬಲು ಮೆಚ್ಚಿಗೆ! ಅಂದಿನ ಮೈಸೂರು ದೊರೆ ಗಳಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರಲ್ಲಿ, ಶಿಷ್ಯನ ಸಂಗೀತವನ್ನು ಕೇಳಬೇಕೆಂದು ವಿನಂತಿಸಿಕೊಂಡರು. ಮಹಾರಾಜರು ಶೇಷಣ್ಣ, ಸುಬ್ಬಣ್ಣನವರ ಮಾತುಗಳನ್ನು ಎಂದೂ ತೆಗೆದುಹಾಕುತ್ತಿರಲಿಲ್ಲ. ಒಡೆಯರ ಸಮ್ಮುಖದಲ್ಲಿ ಐಯ್ಯಂಗಾರರ ಮೂರು ಕಚೇರಿಗಳು ನಡೆದವು. ಇವರ ವಿದ್ವತ್ತಿಗೆ ಮೆಚ್ಚಿ, ೧೯೧೬ ರಲ್ಲಿ ನಾಲ್ವಡಿ ಕೃಷ್ಣರಾಜರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರರನ್ನು, ತಿಂಗಳಿಗೆ ೧೫/ ರೂ. ಗಳ ಸಂಬಳದ ಮೇಲೆ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿಕೊಂಡರು.(ಅರಮನೆ ಪತ್ರಾಗಾರದ ಮಾಹಿತಿಯಿಂದ) ಸಾಮಾನ್ಯ ಜನರು ಸಂಗೀತ ಕಲಿಯಲೆಂದು, ಮಹಾರಾಜ ರು ಅರಮನೆಯ ಚಂದ್ರಶಾಲಾ ತೊಟ್ಟಿಯಲ್ಲಿ ಸಂಗೀತ ಶಾಲೆಯನ್ನು ಪ್ರಾರಂಭಿಸಿದ್ದರು. ಹಿರಿಯ ವಿದ್ವಾಂಸರು ಪಾಠ ಮಾಡುತ್ತಿದ್ದ ಆ ಶಾಲೆಯಲ್ಲಿ ಐಯ್ಯಂಗಾರ್ಯರನ್ನೂ ಶಿಕ್ಷಕರನ್ನಾಗಿ ನೇಮಿಸಿದರು. ಅರಮನೆಯ ವಾದ್ಯವೃಂದದಲ್ಲಿ ಭಾಗವಹಿಸುವುದಲ್ಲದೇ, ಕಿವುಡರು ಮತ್ತು ಮೂಗರ ಶಾಲೆಯಲ್ಲಿ ಅಧ್ಯಾಪಕರೂ ಆಗಿದ್ದರು. ನಂತರ ೧೯೨೮ ರಲ್ಲಿ ಮೈಸೂರು ಸರ್ಕಾರದ ತರಬೇತಿ ಕಾಲೇಜಿಗೆ ವರ್ಗವಾಗಿ ೧೯೩೬ ರವರೆಗೆ ಸೇವೆ ಸಲ್ಲಿಸಿದರು.

ಗೋಟುವಾದಕರಾಗಿ[ಬದಲಾಯಿಸಿ]

ಶ್ರೀನಿವಾಸ ಐಯ್ಯಂಗಾರ್ಯರಿಗೆ ಹಾಡುಗಾರಿಕೆ, ಪಿಟೀಲುಗಳಲ್ಲದೆ ಗೋಟುವಾದ್ಯವನ್ನು ನುಡಿಸುವುದರಲ್ಲೂ ಪರಿಶ್ರಮವಿತ್ತು. ಆಗ ಮೈಸೂರಿನಲ್ಲಿ ಗೋಟುವಾದ್ಯ ಅಷ್ಟು ಪ್ರಚಾರದಲ್ಲಿರಲಿಲ್ಲ. ಅಂಥ ಅಪರೂಪ ವಾದ್ಯವನ್ನು ಎಲ್ಲರೂ ಕಲಿಯಲೆನ್ನುವ ದೃಷ್ಠಿಯಿಂದ, ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಗೋಟುವಾದ್ಯ ನುಡಿಸುವ ಸ್ಪರ್ಧೆಯನ್ನು ಏರ್ಪಡಿಸಿ, ಬಹಳಷ್ಟು ವಿದ್ವಾಂಸರು ಆ ವಾದ್ಯವನ್ನು ಕಲಿತು ನುಡಿಸುವಂತೆ ಪ್ರೋತ್ಸಾಹಿಸಿದರು. ಈ ಸ್ಪರ್ಧೆಯಲ್ಲಿ ಮೊದಲ ಬಹುಮಾನವಾಗಿ ಚಿನ್ನದ ಸರ ಮತ್ತು ಪದಕವನ್ನು ಪಡೆದು ಸನ್ಮಾನಿತರಾದದ್ದು ಶ್ರೀನಿವಾಸ ಐಯ್ಯಂಗಾರ್ಯರು! ಮುಂದೆ ೧೯೩೪ ರಲ್ಲಿ ಗುಬ್ಬಿ ವೀರಣ್ಣ ನವರ ಸದಾರಮೆ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಗೋಟುವಾದ್ಯವನ್ನು ನುಡಿಸಿದರು. ಇದರ ಧ್ವನಿ ಮುದ್ರಣಕ್ಕೆ ಹೋಗಿ ಬರುವ ಖರ್ಚಲ್ಲದೇ ೧೦೦೦/ ರೂ. ಗಳ ಸಂಭಾವನೆಯನ್ನು ಕೊಟ್ಟು, ನಿರ್ಮಾಪಕರು ಐಯ್ಯಂಗಾರ್ಯರನ್ನು ಕರೆಸಿಕೊಂಡರು.

ನಟರಾಗಿ[ಬದಲಾಯಿಸಿ]

  • ಆಗಿನ ಕಾಲದಲ್ಲಿ ನಾಟಕಗಳು ಶಾಸ್ತ್ರೀಯ ಸಂಗೀತದಿಂದ ತುಂಬಿ ತುಳುಕುತ್ತಿದ್ದವು. ಸಾಧಾರಣವಾಗಿ ಮುಖ್ಯ ಪಾತ್ರಗಳನ್ನ ಸಂಗೀತಗಾರರೇ ಅಭಿನಯಿಸುತ್ತಿದ್ದರು. ನಾಟಕಗಳಲ್ಲಿ ಹಾಡುಗಳ ಮುಖಾಂತರವೇ ತಮ್ಮ ಅನಿಸಿಕೆಗಳನ್ನು ತೋಡಿಕೊಳ್ಳುತ್ತಿದ್ದುದು! ಪಾತ್ರಧಾರಿಗಳು ರಾಗಮಾಲಿಕೆ ಗಳಲ್ಲಿ ವಾದ ವಿವಾದಗಳನ್ನು ನಡೆಸುತ್ತಿದ್ದರು. ಅಷ್ಟು ಶಾಸ್ತ್ರೀಯವಾಗಿಯೂ ಉತ್ಕೃಷ್ಟವಾಗಿಯೂ ಇರುತ್ತಿದ್ದವು ಅಂದಿನ ನಾಟಕಗಳು. ಶ್ರೀನಿವಾಸ ಐಯ್ಯಂಗಾರ್ಯರು ಒಳ್ಳೆ ನಟರು.
  • ಚಿಕ್ಕ ವಯಸ್ಸಿನಿಂದಲೇ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಬೆಳಕವಾಡಿಯಲ್ಲಿ ಒಂದು ನಾಟಕ ಕಂಪೆನಿಯನ್ನು ಪ್ರಾರಂಭ ಮಾಡಿದ್ದರು. ಹೆಚ್ಚಾಗಿ ಪೌರಾಣಿಕ ನಾಟಕಗಳನ್ನೇ ಆಡಿಸುತ್ತಿದ್ದರು. ಅವುಗಳಲ್ಲಿ ಐಯ್ಯಂಗಾರ್ಯರೇ ನಾಯಕನ ಪಾತ್ರವನ್ನು ಅಭಿನಯಿಸುತ್ತಿದ್ದುದು!
  • ಮೈಸೂರಿಗೆ ಬಂದ ನಂತರ ಇವರ ನಟನೆಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿತು. ಅರಮನೆ ನಾಟಕ ಕಂಪನಿಯಲ್ಲಿ ಸೇರುವ ಮೊದಲು ಎ.ವಿ ವರದಾಚಾರ್ ಕಂಪನಿಯಲ್ಲಿ ಪಾತ್ರ ಮಾಡುತ್ತಿದ್ದರು. ಅರಮನೆಗೆ ಸೇರಿದ್ದ ಶಾಕುಂತಲ ನಾಟಕ ಕರ್ನಾಟಕ ಸಭೆಯಲ್ಲಿ ಚಿಕ್ಕ ರಾಮರಾಯರೊಂದಿಗೆ ಬಹಳಷ್ಟು ನಾಟಕಗಳಲ್ಲಿ ಭಾಗವಹಿಸಿದ್ದರು. ಇವರಿಬ್ಬರ ಜೋಡಿ ಅದ್ಭುತವಾಗಿರುತ್ತಿತ್ತೆಂದು ನೋಡಿರುವವರು ನೆನೆಸಿಕೊಂಡಿರುವುದುಂಟು.
  • ಶ್ರೀನಿವಾಸ ಐಯ್ಯಂಗಾರ್ಯರು ಅರ್ಜುನನಾದರೆ ಚಿಕ್ಕರಾಮರಾಯರು ಬಭ್ರುವಾಹನನಾಗುತ್ತಿದ್ದರು. ಅಥವಾ ಐಯ್ಯಂಗಾರ್ಯರು ರಾಮನಾದರೆ, ರಾಮರಾಯರು ದಶರಥ. ಹೀಗೆ ೧೯೨೪ ರವರೆಗೂ ನಟಿಸಿ, ನಂತರ ನಾಟಕಗಳಿಂದ ನಿವೃತ್ತಿ ಹೊಂದಿದರು. ವೀರಸಿಂಹ ಚರಿತ್ರೆ, ಬಭ್ರುವಾಹನ, ಸುಧನ್ವ ಚರಿತ್ರೆ, ಗುಲೇಬಕಾವಲಿ, ವಿರಾಟ ಪರ್ವ, ಗಯ ಚರಿತ್ರೆ, ರುಕ್ಮಾಂಗದ ಚರಿತ್ರೆ, ಅಭಿಜ್ಞಾನ ಶಾಕುಂತಲ ಮುಂತಾದ ನಾಟಕಗಳಲ್ಲಿ ನಾಯಕ ನಟನಾಗಿ ಅಭಿನಯಿಸಿ ಜನರ ಮೆಚ್ಚುಗೆಯನ್ನು ಪಡೆದಿದ್ದರು. ಒಮ್ಮೆ ಇವರ ನಾಟಕ ಕಂಪನಿ ಮದರಾಸಿನಲ್ಲಿ ಪ್ರದರ್ಶನ ನೀಡಿದಾಗ, ಐಯ್ಯಂಗಾರ್ಯರ ಅಭಿನಯಕ್ಕೆ ಮೆಚ್ಚಿ, ಬೆಳ್ಳಿ ಲೋಟವನ್ನಿತ್ತು ಸನ್ಮಾನಿಸಿದ್ದರು.

ವಾಗ್ಗೇಯಕಾರರಾಗಿ[ಬದಲಾಯಿಸಿ]

ಶ್ರೀನಿವಾಸ ಐಯ್ಯಂಗಾರ್ಯರು ಬೆಳಕವಾಡಿಯಿಂದ ಮೈಸೂರಿಗೆ ಬಂದ ನಂತರವೇ ವಾಗ್ಗೇಯಕಾರರಾದದ್ದು. ಕಿವುಡರು ಮತ್ತು ಮೂಗರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೇಳಿಕೊಡುವ ಸಲುವಾಗಿ, ಪುಟ್ಟ ಹಾಡುಗಳನ್ನು ರಚಿಸಿದರು. ಮುಂದೆ ವರ್ಣಗಳು ಮತ್ತು ಕೃತಿಗಳು ರೂಪ ತಾಳಿದವು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯವಿದ್ದಿದ್ದರಿಂದ ಕೃತಿಗಳು ಆ ಭಾಷೆಗಳಲ್ಲಿವೆ. ಶ್ರೀನಿವಾಸ ಇವರು ಬಳಸಿರುವ ಅಂಕಿತ. ಒಮ್ಮೆ ಮಧುರೈ ಪೊನ್ನುಸ್ವಾಮಿಯು ನಾಗಸ್ವರದಲ್ಲಿ ನುಡಿಸಿದ ಸಿಂಹೇಂದ್ರ ಮಧ್ಯಮ ರಾಗಾಲಾಪನೆಯಿಂದ ಪ್ರೇರಿತರಾಗಿ "ಮನಸುಲೋನಿ" ಎಂಬ ಕೃತಿಯನ್ನು ಅದೇ ರಾಗದಲ್ಲಿ ರಚಿಸಿದರು. ಸರಸ್ವತಿ ರಾಗದಲ್ಲಿ ರಚಿತವಾಗಿರುವ "ಏಪಾಪಮು" ಕೃತಿ ರೂಪ ತಾಳಿದ್ದು ತಂದೆಯ ನಂತರ ಸಾಕಿ ಸಲುಹಿದ್ದ ಚಿಕ್ಕಪ್ಪ ನಿಧನರಾದಾಗ. ಹೀಗೆ ಹಲವಾರು ಸನ್ನಿವೇಶಗಳಿಂದ ಪ್ರೇರಿತರಾಗಿ, ಐಯ್ಯಂಗಾರ್ಯರು ಕೃತಿಗಳನ್ನು ರಚಿಸಿದರು.

೭೨ ಮೇಳಕರ್ತ ರಾಗಗಳಲ್ಲಿ ಕೃತಿ ರಚನೆ[ಬದಲಾಯಿಸಿ]

ಒಮ್ಮೆ ನಾಗಸ್ವರ ವಿದ್ವಾಂಸರಾದ ಮಧುರೈ ಪೊನ್ನುಸ್ವಾಮಿಯವರು ಮೈಸೂರು ಸಂಸ್ಥಾನಕ್ಕೆ ಭೇಟಿಯಿತ್ತಾಗ, ೭೨ ಮೇಳಕರ್ತ ರಾಗಗಳಲ್ಲಿ ಕೆಲವು ಮಾತ್ರ ಕೃತಿ ರಚನೆಗೆ ಯೋಗ್ಯವೆಂದೂ, ಮಿಕ್ಕವು ಉಪಯುಕ್ತವಲ್ಲವೆಂದು, ಅವುಗಳನ್ನು ತೆಗೆದುಬಿಡಬಹುದೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಇದರಿಂದ ಬೇಸರಗೊಂಡು ೭೨ ಮೇಳಕರ್ತ ರಾಗಗಳೆಲ್ಲದರಲ್ಲೂ ಕೃತಿ ರಚನೆ ಮಾಡಬೇಕೆಂದು ಆಸ್ಥಾನ ವಿದ್ವಾಂಸರಿಗೆ ಆದೇಶವನ್ನಿತ್ತರು. ಹೀಗೆ ೭೨ ಮೇಳಕರ್ತ ರಾಗಗಳಲ್ಲೂ ಕೃತಿ ರಚನೆಗಳನ್ನು ಮಾಡಿ, ಮಹಾರಾಜರಿಗೆ ಸಮರ್ಪಿಸಿದ ಮೊದಲ ವಿದ್ವಾಂಸರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ಯರು. ಆಗಿನ ಕಾಲದಲ್ಲಿ ರಾಜ ನಿಷ್ಠೆ ಎಷ್ಟಿತ್ತೆಂದರೆ, ಕೃತಿಗಳ ಒಂದು ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡು, ಮತ್ತೊಂದನ್ನ ಅರಮನೆಗೆ ನೀಡಬೇಕೆಂದು ಆಲೋಚನೆಯಿರಲಿಲ್ಲ. ಇದ್ದ ಒಂದೇ ಪ್ರತಿಯನ್ನು ಮಹಾರಾಜರಿಗೆ ಅರ್ಪಿಸಿದ್ದರಿಂದ, ನಮಗಿಂದು ಅವು ಲಭ್ಯವಾಗಿಲ್ಲ. ಇವರು ೭೨ ಮೇಳಕರ್ತ ರಾಗಗಳಲ್ಲಿ ಕೃತಿ ರಚನೆ ಮಾಡಿ ಅರಮನೆಗೆ ಅರ್ಪಿಸಿರುವುದಕ್ಕೆ ಸಾಕ್ಷಿ, ಅರಮನೆ ಪತ್ರಾಗಾರದಲ್ಲಿ ಸಿಗುವ ಮಾಹಿತಿಗಳಿಂದ ಮಾತ್ರ.

೫ ನೇ ಏಪ್ರಿಲ್ ೧೯೨೬ ಮತ್ತು ೩ ನೇ ಮೇ ೧೯೨೭ ರಂದು ಸ್ವತಃ ಭಕ್ಷಿಯವರೇ ಮಹಾರಾಜರಿಗೆ ಬರೆದ ಪತ್ರಗಳ ಪ್ರಕಾರ, ಬೇಸಿಗೆ ಅರಮನೆಯಲ್ಲಿ ಮಹಾರಾಜರ ಸಮ್ಮುಖದಲ್ಲಿ ಐಯ್ಯಂಗಾರ್ಯರು ೭೨ ರಾಗಗಳಲ್ಲೂ ಕೃತಿಗಳನ್ನು ಪಿಟೀಲಿನಲ್ಲಿ ನುಡಿಸಿದ್ದರೆಂದೂ, ಅವುಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದರೆಂದೂ ತಿಳಿದುಬರುತ್ತದೆ. ಇವರ ಸಾಧನೆಯನ್ನು ಮೆಚ್ಚಿ, ಮಹಾರಾಜರು ೧೦೦೦/ ರೂ. ಗಳ ಬಹುಮಾನ ನೀಡಿದ್ದರೆಂದು ದಾಖಲೆಗಳಿಂದ ತಿಳಿಯುತ್ತದೆ.

ಲೇಖಕರಾಗಿ[ಬದಲಾಯಿಸಿ]

ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್ಯರು ಸಂಗೀತದ ಶಾಸ್ತ್ರ ಮತ್ತು ಪ್ರಯೋಗ ಭಾಗಗಳೆರಡೂ ಒಳಗೊಂಡಿರುವಂತೆ "ಗಾನಾಮೃತ" ಎಂಬ ಪುಸ್ತಕವನ್ನು ಕನ್ನಡದಲ್ಲಿ ಬರೆದರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲೆಂದು, ಪಬ್ಲಿಕ್ ಇನ್ ಸ್ಟ್ರಕ್ಷನ್ನಿನ ನಿರ್ದೇಶಕರಾಗಿದ್ದ ಎನ್.ಎಸ್. ಸುಬ್ಬರಾಯರು ಶ್ರೀನಿವಾಸ ಐಯ್ಯಂಗಾರ್ಯರಿಂದ ಈ ಪುಸ್ತಕವನ್ನು ಬರೆಸಿದರು. ದುರದೃಷ್ಟವಶಾತ್ ಈ ಪುಸ್ತಕ ಪ್ರಕಟಣೆಯಾಗುವ ಮೊದಲೇ ಐಯ್ಯಂಗಾರ್ಯರು ನಿಧನರಾದರು. ಅವರ ಮಗ ಶ್ರೀನಿವಾಸ ಐಯ್ಯಂಗಾರ್ಯರು ಪುಸ್ತಕದ ಮೊದಲ ಪ್ರತಿಯನ್ನು ಪ್ರಕಟಿಸಿದರು. (ಶಾಲೆಯಲ್ಲಿ ಹೆಸರು ತಪ್ಪಾಗಿ ನೋಂದಣಿಸಿದ್ದರಿಂದ,ತಂದೆ ಮತ್ತು ಮಗನ ಹೆಸರು ಒಂದೇ ಆಗಿತ್ತು)

ಶಿಷ್ಯ ಪರಂಪರೆ[ಬದಲಾಯಿಸಿ]

ಶ್ರೀನಿವಾಸ ಐಯ್ಯಂಗಾರ್ಯರ ಶಿಷ್ಯರನೇಕರಲ್ಲಿ ಅವರ ಪುತ್ರರು ಬೆಳಕವಾಡಿ ಶ್ರೀನಿವಾಸ ಐಯ್ಯಂಗಾರ್, ಬೆಳಕವಾಡಿ ವರದರಾಜ ಐಯ್ಯಂಗಾರ್ (ಇಬ್ಬರೂ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದರು), ಬೆಳಕವಾಡಿ ರಂಗಸ್ವಾಮಿ ಐಯ್ಯಂಗಾರ್, ಪಿಟೀಲು ವೆಂಕಟರಮಣಯ್ಯ, ಸುಬ್ಬುಕೃಷ್ಣಯ್ಯ , ರಾಮಯ್ಯರ್ ಮುಂತಾದವರು ಪ್ರಮುಖರು.

ಬಿರುದು ಸನ್ಮಾನಗಳು[ಬದಲಾಯಿಸಿ]

  • ಮೈಸೂರಲ್ಲದೆ ಮದರಾಸು,ತಿರುಚಿರಾಪಲ್ಲಿ, ರಾಮೇಶ್ವರಂ, ದೇವಕೋಟೆ, ಮಧುರೈ ಮುಂತಾದ ಅನೇಕ ಸಂಸ್ಥಾನಗಳಲ್ಲಿ ಕಚೇರಿಗಳನ್ನು ನಡೆಸಿ ಬಿರುದು ಸನ್ಮಾನಗಳನ್ನು ಪಡೆದಿದ್ದರು. ತೋಡಿ ಮತ್ತು ಕಾಂಭೋಜಿ ಇವರ ಅಚ್ಚುಮೆಚ್ಚಿನ ರಾಗಗಳು.
  • ಆಲಾಪನೆಯಲ್ಲಿ ಪುನರಾವರ್ತಗಳಿಲ್ಲದ ಸಂಗತಿಗಳೊಂದಿಗೆ, ಆ ರಾಗದ ಸಂಪೂರ್ಣ ಚಿತ್ರವನ್ನು ತೋರಿಸುವುದು ಶ್ರೀನಿವಾಸ ಐಯ್ಯಂಗಾರ್ಯರ ವೈಶಿಷ್ಟ್ಯತೆ ಎಂದು ಅವರ ಸಂಗೀತವನ್ನು ಕೇಳಿದವರು ನೆನೆಪಿಸಿಕೊಳ್ಳುವುದುಂಟು. ಒಮ್ಮೆ ಕೊಟ್ಟಿಯೂರಿನಲ್ಲಿ ಮದುವೆ ಸಮಾರಂಭ. ಅಲ್ಲಿ ಐಯ್ಯಂಗಾರ್ಯರದ್ದೇ ಹಾಡುಗಾರಿಕೆ. ಕಾರೈಕುಡಿ ಸಹೋದರರಲ್ಲದೇ ಇನ್ನೂ ಅನೇಕ ಸಂಗೀತ ವಿದ್ವಾಂಸರು ಉಪಸ್ಥಿತರಿದ್ದರು. ರಾಗ ತಾನವನ್ನು ವಿಸ್ತರಿಸಿ ಇನ್ನೇನು ಪಲ್ಲವಿಯನ್ನು ಹಾಡಬೇಕೆನ್ನುವಷ್ಟರಲ್ಲಿ ಕಾರೈಕುಡಿ ಸಹೋದರರಲ್ಲೊಬ್ಬರಾದ ಸಾಂಬಶಿವ ಐಯ್ಯರ್ ರವರು ವೇದಿಕೆಗೆ ಬಂದರು. ಎಲ್ಲರೂ ಆಶ್ಚರ್ಯದಿಂದ ನೋಡುತ್ತಿದ್ದ ಹಾಗೆ, ಒಂದು ಜರತಾರಿ ಅಂಗವಸ್ತ್ರವನ್ನು ಐಯ್ಯಂಗಾರ್ಯರಿಗೆ ಹೊದ್ದಿಸಿ, ಮೈಸೂರಿನ ಮಧುರಾಯಿ ಪುಷ್ಪವನಂ ಎಂದು ಹೊಗಳಿದರು.
  • ಮೈಸೂರಿನ ಕಲಾರಸಿಕರು ರಂಗಾಚಾರ್ಯಲು ಸ್ಮಾರಕ ಭವನದಲ್ಲಿ ಒಂದು ಸಮಾರಂಭವನ್ನು ಏರ್ಪಡಿಸಿ, ಶ್ರೀನಿವಾಸ ಐಯ್ಯಂಗಾರ್ಯರಿಗೆ ಗಜಲಕ್ಷ್ಮಿಯನ್ನು ಕೆತ್ತಿದ್ದ ಪದಕದೊಂದಿಗೆ ಬಂಗಾರದ ಸರವನ್ನ ವೀಣೆ ಶೇಷಣ್ಣನವರಿಂದ ತೊಡಿಸಿ ಸನ್ಮಾನಿಸಿದರು.
  • ಆಗಿನ ದಿನಗಳಲ್ಲಿ ಶೇಷಣ್ಣ, ಸುಬ್ಬಣ್ಣ ಮುಂತಾದವರ ಮನೆಗಳಲ್ಲಿ ಸ್ಥಳೀಯ ಮತ್ತು ಪರಸ್ಥಳಗಳಿಂದ ಬರುತ್ತಿದ್ದ ವಿದ್ವಾಂಸರ ಕಚೇರಿಗಳು ನಡೆಯುತ್ತಿದ್ದವು. ಹಾಗೊಮ್ಮೆ ಅರಿಯಾಕುಡಿ ರಾಮಾನುಜ ಐಯ್ಯಂಗಾರ್ಯರು ಶೇಷಣ್ಣನವರ ಮನೆಗೆ ಬಂದಾಗ, ಶ್ರೀನಿವಾಸ ಐಯ್ಯಂಗಾರ್ಯರಿಂದ ಹಾಡಿಸಿ, "ನಮ್ಮ ಮೈಸೂರಿನ ಸಂಗೀತ ಕೇಳಿ ಅಯ್ಯಂಗಾರ್ಯರೆ" ಎಂದು ಜಂಬದಿಂದ ಶೇಷಣ್ಣನವರು ಹೇಳಿಕೊಂಡರಂತೆ. ಅಂದು ಇವರ ಹಾಡುವಿಕೆಗೆ, ಪಿಟೀಲಿನಲ್ಲಿ ವೆಂಕಟರಮಣ ಮತ್ತು ಮುತ್ತುಸ್ವಾಮಿ ತೇವರ್ ಮೃದಂಗದಲ್ಲಿ ಸಹಕರಿಸಿದರಂತೆ. ಕಚೇರಿ ಮುಗಿದ ಮೇಲೆ "ನಾಮಕ್ಕೆ ನಾಮಾನೇ ಎದುರಾಯಿತಲ್ಲಾ" ಎಂದು ಶೇಷಣ್ಣನವರು ತಮಾಷೆ ಮಾಡಿದ್ದನ್ನ ಉಪಸ್ಥಿತರಿದ್ದ ಹಲವಾರು ವಿದ್ವಾಂಸರು ನೆನೆಪಿಸಿಕೊಂಡಿರುವುದುಂಟು.
  • ಇನ್ನೊಮ್ಮೆ ಶೇಷಣ್ಣನವರ ಮನೆಯಲ್ಲಿ ಐಯ್ಯಂಗಾರ್ಯರು ಭೈರವಿ ರಾಗವನ್ನು ಹಾಡಿದರು. ಆ ಇಂಪು ಮತ್ತು ವಿದ್ವತ್ತಿಗೆ ಮೆಚ್ಚಿ ಶೇಷಣ್ಣನವರು ಸಂತೋಷದಿಂದ "ನಿನ್ನೆ ನನ್ನದಾಗಿದ್ದ ಭೈರವಿ ಇವೊತ್ತು ನಿಂದಾಯಿತಲ್ಲೋ ಶ್ರೀನಿವಾಸ" ಅಂದರಂತೆ. ಅಲ್ಲೇ ಇದ್ದ ವೀಣೆ ವೆಂಕಟಗಿರಿಯಪ್ಪ ನವರು ತಮ್ಮ ಉಂಗುರವನ್ನು ತೆಗೆದು "ಶ್ರೀವೈಶ್ಣವರು ತುಂಬಾ ಚೆನ್ನಾಗಿ ಹಾಡಿದ್ದಾರೆ, ಇದನ್ನ ಅವರಿಗೆ ತೊಡಿಸಿ" ಎಂದು ಶೇಷಣ್ಣನವರಿಗೆ ಕೊಟ್ಟರಂತೆ.
  • ಚಿಕ್ಕವರೇ ಆಗಲಿ ದೊಡ್ಡವರೇ ಆಗಲಿ, ವಿದ್ವತ್ ಪ್ರದರ್ಶನವಾದಾಗ, ಅಂದಿನ ಹಿರಿಯ ವಿದ್ವಾಂಸರು ತಲೆದೂಗಿ, ಪ್ರಶಂಸಿಸಿ ಉತ್ತೇಜನವನ್ನು ನೀಡಿ ಬಹುಮಾನಗಳನ್ನು ಕೊಡುತ್ತಿದ್ದ ಕಾಲ. ೧೯೨೬ ರಲ್ಲಿ ಶರ್ಮ ಸಹೋದರರು ಮೈಸೂರಿಗೆ ಬಂದಿದ್ದರು. ಒಬ್ಬರು ವೀಣೆ ಮತ್ತೊಬ್ಬರು ಪಿಟೀಲು ನುಡಿಸಿ ದ್ವಂದ್ವ ಕಚೇರಿಗಳನ್ನು ನೀಡುತ್ತಿದ್ದರು. ಇದರಿಂದ ಪ್ರೇರಿತರಾಗಿ ಶ್ರೀನಿವಾಸ ಐಯ್ಯಂಗಾರ್ಯರು ಮತ್ತು ಭೈರವಿ ಲಕ್ಷ್ಮೀನಾರಣಪ್ಪನವರು ಪಿಟೀಲು ಮತ್ತು ವೀಣೆಯನ್ನು ನುಡಿಸಿ ದ್ವಂದ್ವ ಕಚೇರಿಗಳನ್ನು ನೀಡಿ, ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು. ೧೯೨೪ ರಲ್ಲಿ ಬೆಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮೈಸೂರಿನ ಪ್ರತಿಷ್ಠಿತ ವಿದ್ವಾಂಸರನೇಕರು ಪಾಲ್ಗೊಂಡಿದ್ದರು. ಅದರಲ್ಲಿ ಐಯ್ಯಂಗಾರ್ಯರೂ ಒಬ್ಬರಾಗಿ, ಮಹಾತ್ಮ ಗಾಂಧಿ ಮತ್ತು ಇತರ ಗಣ್ಯ ವ್ಯಕ್ತಿಗಳ ಸಮಕ್ಷಮದಲ್ಲಿ ಹಾಡಿ, ಪ್ರಶಂಸೆ ಪಡೆದಿದ್ದರು.
ನಿಧನ[ಬದಲಾಯಿಸಿ]

ಶ್ರೀನಿವಾಸ ಐಯ್ಯಂಗಾರ್ಯರು ತಮ್ಮ ೪೮ ನೇ ವಯಸ್ಸಿನಲ್ಲಿ ನೌಕರಿಯಲ್ಲಿರುವಾಗಲೇ ನಿಧನರಾದರು. ಸಂಗೀತ ಪ್ರಪಂಚಕ್ಕೆ ಇನ್ನೂ ಬಹಳಷ್ಟು ಸೇವೆಯನ್ನು ಮಾಡಬೇಕಾಗಿದ್ದವರು, ವಿಧಿವಶದಿಂದ ಮಧ್ಯವಯಸ್ಸಿನಲ್ಲೇ, ಅಂದರೆ ೧೭ ನೇ ಸೆಪ್ಟಂಬರ್ ೧೯೩೬ ರಂದು ದೈವಾಧೀನರಾದರು. .

References[ಬದಲಾಯಿಸಿ]

Musical Composers during Wodeyar Dynasty (1638-1947 AD) by Dr. Meera Rajaram Pranesh, March 2003 Edition, Vee Emm Publications