ಎಚ್. ಕೆ. ನಾರಾಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಚ್. ಕೆ. ನಾರಾಯಣ
ಜನನಮೇ ೧೪, ೧೯೩೪
ಹೊಳೆನರಸೀಪುರ
ಮರಣಫೆಬ್ರುವರಿ ೮, ೨೦೦೮
ವೃತ್ತಿಆಕಾಶವಾಣಿ ಸಂಗೀತ ಕಲಾವಿದರು
ವಿಷಯಸುಗಮಸಂಗೀತ

ಎಚ್. ಕೆ. ನಾರಾಯಣ (ಮೇ ೧೪,೧೯೩೪ - ಫೆಬ್ರುವರಿ ೮, ೨೦೦೮) ಆಕಾಶವಾಣಿ ಸಂಗೀತ ಕಲಾವಿದರಾಗಿ, ಸುಗಮ ಸಂಗೀತ ಕ್ಷೇತ್ರದ ಮಹಾನ್ ಗಾಯಕ, ಸಂಗೀತ ನಿರ್ದೇಶಕರಾಗಿ ಪ್ರಸಿದ್ಧರಾಗಿದ್ದಾರೆ.

ಜೀವನ[ಬದಲಾಯಿಸಿ]

ರೇಡಿಯೋ ಸಂಗೀತ – ಸುಗಮ ಸಂಗೀತಗಳಲ್ಲಿ ಅತ್ಯಂತ ಪ್ರಸಿದ್ಧ ಧ್ವನಿ ಎಚ್. ಕೆ. ನಾರಾಯಣ ಅವರದ್ದು ಎಂದರೆ ತಪ್ಪಾಗಲಾರದು. ಎಚ್. ಕೆ. ನಾರಾಯಣರು ಮೇ 14, 1934ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು. ಜನ್ಮತಃ ಸಂಗೀತ ಸಂಸ್ಕಾರದಲ್ಲಿ ಬೆಳೆದ ನಾರಾಯಣ ಅವರು ತಮ್ಮ ತಂದೆ ಕೇಶವ, ಮಾವ ನಾಗಮುತ್ತು ಅವರಿಂದ ಸಂಗೀತದ ಪಾಠಗಳನ್ನು ಕಲಿತು, ಮುಂದೆ ವಿದ್ವಾನ್ ಆರ್.ಕೆ. ಶ್ರೀಕಂಠನ್ ಅವರ ಶಿಷ್ಯರಾಗಿ ಸಂಗೀತದ ಉನ್ನತ ಪರಿಣತಿಯನ್ನು ಪಡೆದುದಲ್ಲದೆ ಮುಂದೆ ವಿದ್ವತ್ ಪರೀಕ್ಷೆಯಲ್ಲಿ ಸ್ವರ್ಣಪದಕವನ್ನು ಸಹಾ ಪಡೆದರು. ಹಿಂದೂಸ್ಥಾನಿ ಸಂಗೀತಕ್ಕೂ ಒಲಿದು ಅಲ್ಲೂ ಗಣನೀಯ ಪ್ರಗತಿ ಸಾಧಿಸಿದರು. ಪಿಟೀಲು ವಾದನದಲ್ಲಿ ತಂದೆಯವರೊಡನೆ ಸಾಕಷ್ಟು ಅಭ್ಯಾಸ ನಡೆಸಿದ್ದ ನಾರಾಯಣರು ಗಾಯನದತ್ತ ಹೆಚ್ಚು ಒಲವು ಬೆಳೆಸಿಕೊಂಡರು.

ಆಕಾಶವಾಣಿಯಲ್ಲಿ[ಬದಲಾಯಿಸಿ]

ಆಕಾಶವಾಣಿಯಲ್ಲಿ ಹಲವು ಹಂತಗಳಲ್ಲಿ ಕಾರ್ಯನಿರ್ವಹಿಸಿದ ನಾರಾಯಣರು ಹಲವಾರು ಪ್ರತಿಭೆಗಳನ್ನು ಸುಗಮ ಸಂಗೀತದಲ್ಲಿ ಅಳವಡಿಸಿ, ತಾವೂ ಹಾಡಿ ಕನ್ನಡದ ಕವಿಗಳ ಹಾಡುಗಳನ್ನು ಜನಮಾನಸದಲ್ಲಿ ನೆಲೆ ಊರುವಂತೆ ಮಾಡಿದರು. ಅವರ ಸಯೋಜನೆಯಾದ “ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ, ಜಯಭಾರತಿ” ಕನ್ನಡ ನಾಡಿನಲ್ಲಿ ಚಿರಸ್ಮರಣೀಯವಾದುದು. ಶುಭ ನುಡಿಯೇ ಶಕುನದ ಹಕ್ಕಿ, ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ, ಎಲ್ಲಿ ಹೋಯಿತು ನನ್ನ ಮುದ್ದು ಹಕ್ಕಿ, ಇದ್ಯಾವ ರಾಗ ಇದ್ಯಾವ ಹಾಡು, ನನ್ನ ಪುಟ್ಟ ಪುರಂದರ ವಿಠ್ಠಲ, ಮುಸುಕು ಮುಚ್ಚಿದೆ ಧರೆಗೆ ಇಂದು ಭುಗಿಲೆದ್ದಿದೆ ಧರೆ ಉರಿದುರಿದು, ನಟನವಾಡಿದಳ್ ತರುಣಿ ನಟನವಾಡಿದಳ್, ನೋಡಮ್ಮ ಮುಗಿಲ ತುಂಬ ಬೆಳ್ ಬೆಳಗಿನ ಮಲ್ಲಿಗೆ, ಇವೆಲ್ಲಾ ಎಚ್ ಕೆ ನಾರಾಯಣರ ಧ್ವನಿಯಲ್ಲಿ ಕನ್ನಡಿಗರ ಕಿವಿಯಲ್ಲಿ ಎಂದೆಂದೂ ಅಣುರಣಿಸುವಂತದ್ದಾಗಿದೆ. ಆಕಾಶವಾಣಿಯ 36 ವರ್ಷಗಳ ಸೇವೆಯಲ್ಲಿ 'ವಸಂತಕವಲಿ', 'ಪದ್ಮಚರಣ್', 'ವಿದ್ವಾನ್, ಆರ್. ಕೆ. ಶ್ರೀಕಂಠನ್', 'ವೀಣಾ ದೊರೈಸ್ವಾಮಿ ಅಯ್ಯಂಗಾರ್', 'ಎಸ್. ಕೃಷ್ಣಮೂರ್ತಿ', 'ಎಚ್. ಆರ್. ಲೀಲಾವತಿ', ಮುಂತಾದವರಿಗೆ, ಸಹಾಯಕರಾಗಿ, ಸಹೋದ್ಯೋಗಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿರುವುದರ ಜೊತೆಗೆ ನಾರಾಯಣರು ತಮ್ಮದೇ ಆದ ವಿಶಿಷ್ಟ ಛಾಪನ್ನು ಕೂಡಾ ಆಕಾಶವಾಣಿ ಸಂಗೀತದಲ್ಲಿ ಮೆರೆದರು. ಅವರಿಂದ ಅನೇಕ ಯುವ ಪ್ರತಿಭೆಗಳು ಪೋಷಣೆ ಪಡೆದವು. ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ, ತೊರೆದು ಹೋಗದಿರು ಜೋಗಿ, ಹೂವು ಹೊರಳುವುವು ಸೂರ್ಯನವರೆಗೆ ಮುಂತಾದ ಗೀತೆಗಳು ಅಂದಿನ ಯುವಗಾಯಕಿ ಬಿ.ಆರ್. ಛಾಯಾ ಅವರನ್ನು ಪ್ರಸಿದ್ಧರನ್ನಾಗಿಸಿತು.

ನೃತ್ಯಕ್ಕೆ ಸಹಗಾನ[ಬದಲಾಯಿಸಿ]

ಆಕಾಶವಾಣಿಯ ಕಾಯಕ, ಸುಗಮ ಸಂಗೀತಕ್ಕೆ ವಿಶಿಷ್ಟ ಕೊಡುಗೆಯಲ್ಲದೆ ಪೂರ್ಣ ಪ್ರಮಾಣದ ಸಂಗೀತ ಕಚೇರಿಗಳು ಮತ್ತು ನೃತ್ಯಕ್ಕೆ ಸಹಗಾನ ನೀಡುವುದರಲ್ಲಿ ಸಹಾ ಅವರು ವಿಶಿಷ್ಟರಾಗಿದ್ದರು. ಅವರ ಪತ್ನಿ ಶಾಂತಾ ಅವರು ನೃತ್ಯದಲ್ಲಿ ಪ್ರಸಿದ್ಧರಾದವರು. ಲಲಿತಾ ಶ್ರೀನಿವಾಸನ್ ಅವರ ಪ್ರಾಯೋಜಕತ್ವದ ನೂಪುರ್ ತಂಡಕ್ಕೆ ಅವರ ಗಾಯನ ವಿಶಿಷ್ಟ ಆಸ್ಥಿಯಂತತ್ತಿತ್ತು.

ಸಂಗೀತ ಸಂಯೋಜನೆ[ಬದಲಾಯಿಸಿ]

ಕನ್ನಡ ನಾಡಿನ ಸಂಗೀತಾಭಿಮಾನಿಗಳ ಕಣ್ಮಣಿ ವಿದ್ಯಾಭೂಷಣರ ಬಹಳಷ್ಟು ಪ್ರಸಿದ್ಧ ಕ್ಯಾಸೆಟ್ಟುಗಳಿಗೆ ಎಚ್. ಕೆ. ನಾರಾಯಣರ ಸಂಗೀತ ಸಂಯೋಜನೆಯಿದೆ. ಎಚ್. ಕೆ. ನಾರಾಯಣ ಅವರು ಸ್ವತಃ ಹಾಡಿರುವ ಕೆಲವು ಪ್ರಸಿದ್ಧ ಸುಗಮ ಸಂಗೀತದ ಆಲ್ಬಂಗಳೆಂದರೆ - ‘ನೀಲಾಂಜನ’, ‘ಛಾಯಾ’, ‘ಗೆಳತಿ’, ‘ಅಗ್ನಿಹಂಸ’, ‘ಸಂಗೀತ’, ಮುಂತಾದವು. ನಾರಾಯಣರು ಹಾಡಿದ್ದ ಹಕ್ಕಿಯಹಾಡಿಗೆ ತಲೆದೂಗುವ ಬಗೆ ನಾನಾಗುವ ಆಸೆ ಗೀತೆ ಅದರ ರಚನೆಕಾರರಾದ ಕೆ.ಎಸ್. ನರಸಿಂಹಸ್ವಾಮಿಗಳಿಗೆ ಅಪಾರವಾಗಿ ಮೆಚ್ಚುಗೆಯಾಗಿತ್ತು.

ಕುಟುಂಬ[ಬದಲಾಯಿಸಿ]

ಅವರ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರು ನೃತ್ಯಗಾತಿ, ತಂಜಾವೂರು ಶೈಲಿಯ ಚಿತ್ರಗಾತಿ ಮತ್ತು ಮತ್ತೊಬ್ಬರು ವಾದ್ಯಸಂಗೀತದಲ್ಲಿ ಪರಿಣತರು. ಪತ್ನಿ ಶಾಂತ ಕಥಕ್ ನೃತ್ಯಗಾತಿ. ತಮ್ಮ ಕೇಶವ ಪಿಟೀಲುವಾದಕರು. ಹೀಗೆ ಅವರ ಮನೆತನದ ಕಲಾಸಂಸ್ಕೃತಿ ನಿರಂತರವಾಗಿ ಸಾಗಿದೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಎಚ್ ಕೆ ನಾರಾಯಣ ಅವರ ಅನನ್ಯ ಸಾಧನೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 1984-85ರ ‘ಕರ್ನಾಟಕ ಕಲಾತಿಲಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು. 1987ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಸುಗಮ ಸಂಗೀತದ ಪರಮೋಚ್ಚ ‘ಸಂತ ಶಿಶುನಾಳ ಶರೀಫ ಪ್ರಶಸ್ತಿ’ಯು 2002 ವರ್ಷದಲ್ಲಿ ಲಭಿಸಿತು. ಪಿಟೀಲು ಚೌಡಯ್ಯನವರ ಹೆಸರಿನಲ್ಲಿನ ಪ್ರಶಸ್ತಿ ಹಾಗೂ ಹಲವಾರು ಗೌರವಗಳು ನಾರಾಯಣ ಅವರಿಗೆ ಸಂದಿವೆ.

ರಮಣಾಂಜಲಿ[ಬದಲಾಯಿಸಿ]

ಎಚ್. ಕೆ. ನಾರಾಯಣರು ತಮ್ಮ ನಿವೃತ್ತಿಯ ನಂತರ ‘ರಮಣಾಂಜಲಿ’ ತಂಡದ ಸದಸ್ಯರಾಗಿ ಶ್ರೀರಮಣ ಮಹರ್ಷಿಗಳ ಗೀತೆಗಳನ್ನು ವಿಶ್ವದಾದ್ಯಂತ ಹಾಡಿದ್ದಾರೆ.

ವಿದಾಯ[ಬದಲಾಯಿಸಿ]

ಎಚ್. ಕೆ. ನಾರಾಯಣ ಅವರು ಫೆಬ್ರುವರಿ ೨೦೦೮ರ ವರ್ಷದಲ್ಲಿ ಈ ಭುವಿಯನ್ನು ಅಗಲಿದರು. ರೇಡಿಯೋ ಸಂಗೀತದಲ್ಲಿ ಭಾವಗೀತೆಗಳ ಯುಗವನ್ನು ಅಮರರಾಗಿಸಿದವರಲ್ಲಿ ಎಚ್. ಕೆ. ನಾರಾಯಣರು ಪ್ರಧಾನರಾಗಿ ಕನ್ನಡಿಗರ ಹೃದಯದಲ್ಲಿ ಚಿರಂತನಾರಾಗಿರುತ್ತಾರೆ.

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ[ಶಾಶ್ವತವಾಗಿ ಮಡಿದ ಕೊಂಡಿ]