ಕಂದಗಲ್ಲ ಹನುಮಂತರಾಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂದಗಲ್ಲ ಹನುಮಂತರಾಯರು (೧೧-೦೧-೧೮೯೬, ೧೩-೦೫-೧೯೬೬)

ಕನ್ನಡದ ಶೇಕ್ಸ್‌ಪಿಯರ್ ಎಂದೇ ಪ್ರಸಿದ್ಧರಾಗಿದ್ದ ನಾಟಕಕಾರ ಹನುಮಂತರಾಯರು ಹುಟ್ಟಿದ್ದು ಬಾಗಲಕೋಟ (ಹಳೆಯ ಜಿಲ್ಲೆ ವಿಜಯಪುರ) ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ. ತಂದೆ ಭೀಮರಾಯರು, ತಾಯಿ ಗಂಗೂಬಾಯಿ, ಹುಟ್ಟಿದ ವರ್ಷದೊಳಗೆ ತಂದೆಯ ಪ್ರೀತಿಯಿಂದ ವಂಚಿತರು. ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿ. ಮಾಧ್ಯಮಿಕ ಓದಿದ್ದು ವಿಜಯಪುರ. ಓದಿನ ಕಡೆ ಗಮನ ಹರಿಯದೆ ಊರಿನಲ್ಲಿ ನಡೆಯುತ್ತಿದ್ದ ಭಜನೆ, ಮೇಳ, ದೊಡ್ಡಾಟಗಳಿಂದ ಆಕರ್ಷಿತರಾದರು. ತಾಯಿಗೆ ಓದಿ ಕುಲಕರ್ಣಿ ಕೆಲಸ ಹಿಡಿಯಲೆಂಬ ಆಸೆ. ಹುಡುಗನಿಗೆ ನಾಟಕದ ಹುಚ್ಚು. ಎಲ್ಲಿ ನಾಟಕವೆಂದರೆ ಅಲ್ಲಿಗೆ ಓಡು. ಗಣೇಶೋತ್ಸವಕ್ಕಾಗಿ ಚೌತಿಚಂದ್ರ, ಸುಕನ್ಯ, ಭಕ್ತಧ್ರುವ, ಸತ್ಯವಾನ ಸಾವಿತ್ರಿ, ಕೃಷ್ಣ ಸುಧಾಮ, ತರಲಿಟೊಪಿಗಿ ಮುಂತಾದ ಏಕಾಂಕ ನಾಟಕಗಳ ರಚನೆ, ಪ್ರದರ್ಶನ.

ಕೆರೂರು ವಾಸುದೇವಾಚಾರ್ಯರ ಕೃತಿಗಳನ್ನೋದಿ ಪ್ರೇರಿತರಾಗಿ ತಾವೂ ನಾಟಕಕಾರರಾಗಬೇಕೆಂಬ ಹಂಬಲ. ಮೆಟ್ರಿಕ್‌ ನಪಾಸು. ಪುಣೆಗೆ ಪಯಣ, ಪುಣೆ ನಾಟಕಗಳ ಕೇಂದ್ರ. ಮಿಲ್ಟ್ರಿ ಕಾರಕೂನನಾಗಿ ಸೇರಿ ನೋಡಿದ್ದು ಹಲವಾರು ನಾಟಕಗಳು, ಹೆಸರಾಂತ ರಂಗ ಕರ್ಮಿಗಳಾದ ಗಡಕರಿ, ಗೋಖಲೆ, ದೇಶಪಾಂಡೆ ಮುಂತಾದವರ ಸಹವಾಸ, ಸಮಾಲೋಚನೆ. ತಾಯಿಯ ಅನಾರೋಗ್ಯದಿಂದ ವಾಪಸ್ ಊರಿಗೆ.

ಮೊದಲು ಬರೆದದ್ದು ‘ಸಂಧ್ಯಾರಾಗ’- ಮೂರಂಕದ ನಾಟಕ, ಹಲವಾರು ಪ್ರದರ್ಶನ ಕಂಡು ನಾಟಕಕಾರರೆನಿಸಿದರು. ಸೇರಿದ್ದು ಬಾಗಲಕೋಟೆಯಲ್ಲಿ ಬ್ಯಾಂಕ್ ಉದ್ಯೋಗ, ರಂಗ ಚಟುವಟಿಕೆಗಳಿಗೆ ಸಿಕ್ಕ ಅನುಕೂಲಕರವಾದ ವಾತಾವರಣ. ಗುಳೇದಗುಡ್ಡ, ಇಳಕಲ್ ಜನಕ್ಕೆ ನಾಟಕ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಇವರಿಗೆ ಸಿಕ್ಕ ಬೆಂಬಲ.

ವೀರರಾಣಿ ಕಿತ್ತೂರು ಚೆನ್ನಮ್ಮ ಮುಂತಾದ ಹಲವಾರು ನಾಟಕಗಳನ್ನು ರಚಿಸಿ ರಂಗ ಪ್ರಯೋಗ. ರಕ್ತ ರಾತ್ರಿ, ಚಿತ್ರಾಂಗದ, ಬಾಣಸಿಗ ಭೀಮ, ಅಕ್ಷಯಾಂಬರ, ರಾಜಾ ಹರಿಶ್ಚಂದ್ರ, ಬಡತನದ ಭೂತ, ಮಾತಂಗ ಕನ್ಯೆ, ಕುರುಕ್ಷೇತ್ರ ಮುಂತಾದ ನಾಟಕಗಳಿಂದ ಜನರನ್ನು ರಂಜಿಸಿ ಗಳಿಸಿದ ಖ್ಯಾತಿ.

ಇವರ ರಂಗ ತಾಲೀಮಿನಲ್ಲಿ ತಯಾರಾದ ನಟರು ಹಾಗೂ ಸಂಗೀತಗಾರರಾದ ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಸೋನುಬಾಯಿ ದೊಡ್ಡಮನಿ, ಏಣಗಿ ಬಾಳಪ್ಪ, ಸುಭದ್ರಮ್ಮ ಮನಸೂರ, ಗರೂಡ ಸದಾಶಿವರಾಯರು, ಜುಬೇದಬಾಯಿ ಸವಣೂರ, ಕೆ. ನಾಗರತ್ನ, ಅಂಬುಜಾ, ವಸಂತ ಕುಲಕರ್ಣಿ ಮುಂತಾದ ಪ್ರಸಿದ್ಧರ ಬಹುದೊಡ್ಡ ಶಿಷ್ಯವರ್ಗ.