ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:1-Shimoga visit (2012-13) HP 156.JPG
'ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ' (೨೦೧೩)
'ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ' (೨೦೧೩)
ಚಿತ್ರ:1-Shimoga visit (2012-13) HP 142.JPG
'ತಾಳ್ಯದ ಆಂಜನೇಯಸ್ವಾಮಿ'

ತಾಳ್ಯ,[೧] ಚಿತ್ರದುರ್ಗ ಜಿಲ್ಲೆಯ ಇತರ ಹಳ್ಳಿಗಳಂತೆ, ಕುಡಿಯುವ ನೀರಿನವ್ಯವಸ್ಥೆಯೂ ಇಲ್ಲದ ಒಂದು ಅತ್ಯಂತ ಚಿಕ್ಕಹಳ್ಳಿಯಾಗದೆ ಇರಲು ಕಾರಣ, ಇಲ್ಲಿಯ ವಿಶಾಲವಾದ ಕೆರೆಯ ಅಸ್ತಿತ್ವದಿಂದ. ಹೋಬಳಿ ಕೇಂದ್ರವಾದ ತಾಳ್ಯದ ಸುತ್ತಮುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಅರ್ಥಚಂದ್ರಾಕೃತಿಯ ಮಾದರಿಯ ಭೂಭಾಗದಲ್ಲಿ ಗ್ರಾಮದ ಪೂರ್ವದಿಕ್ಕಿನಲ್ಲಿ ಸುಂದರವಾದ ಹಾಗೂ ವಿಶಾಲವಾದ ಕೆರೆಯನ್ನು ಹೊಂದಿದೆ. ಈ ಕೆರೆಯು ೧೮೦ ಎಕರೆ ೨೩ ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು ಇದರ ಅಂಕು-ಡೊಂಕಾದ ಏರಿ ೭೦೦-೮೦೦ ಮೀಟರ್ ವ್ಯಾಪ್ತಿ ಹೊಂದಿದೆ. ಈ ಕೆರೆ ಬತ್ತಿದ ದಿನಗಳೇ ಅಪರೂಪವೆಂದು ಗ್ರಾಮದ ಜನ ನೆನೆಸಿಕೊಳ್ಳುತ್ತಾರೆ. ಇಂಥ ತಾಣದಲ್ಲಿ ಹನುಮಪ್ಪ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನವಿದ್ದು ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ತಾಳ್ಯದ ತೇರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಿನಲ್ಲಿ ಅಂದರೆ, ಬೆಂಗಳೂರಿನಲ್ಲಿ ಕರಗವಾಗುವ ಸಮಯದಲ್ಲಿಚಿತ್ರದುರ್ಗ ಬಸ್ ಮಾರ್ಗದಲ್ಲಿ ಸಿಗುವ ಶಿವಗಂಗ ಗ್ರಾಮದಿಂದ ೮ ಕಿ.ಮೀ.ದೂರದಲ್ಲಿದೆ. ತಾಳ್ಯ ಗ್ರಾಮದ ಆರಂಭದಲ್ಲೇ ಆಂಜನೇಯ ಸ್ವಾಮಿಯ ಗುಡಿಯಿದೆ. [೨]

ಚಿತ್ರ:Image (56) (1).jpg
'ಹನುಮ ಬಂಧು,ವಜ್ರ ಮಹೋತ್ಸವ ಸ್ಮರಣ ಸಂಚಿಕೆ'

ದೇವಸ್ಥಾನದ ವೈಶಿಷ್ಟ್ಯಗಳು[ಬದಲಾಯಿಸಿ]

ಸುಮಾರು ೪೦೦ ವರ್ಷಗಳ ಹಿಂದೆ, ಚಿತ್ರದುರ್ಗದ ಪಾಳೇಗಾರರು ಆಂಜನೇಯ ಸ್ವಾಮಿಗೆ ನಡೆದು ಕೊಳ್ಳುತ್ತಿದ್ದರು ಎನ್ನುವುದನ್ನು ಬಿಟ್ಟರೆ, ಈ ದೇವಾಲಯ ಸ್ಥಾಪಕರಾರು ಎನ್ನುವುದಕ್ಕೆ ಯಾವ ಆಧಾರಗಳು ದೊರೆತಿಲ್ಲ. ಅಜಾನುಬಾಹುವಾಗಿ ನಿಂತಿರುವ ಸ್ವಾಮಿಯ ವಿಗ್ರಹ, ಸುಮಾರು ೧೧ ಅಡಿ ಎತ್ತರವಿದೆ. ಪಕ್ಕದಲ್ಲಿ ದಶಾವತಾರದ ಭಂಗಿಗಳಿವೆ. ಅಷ್ಟದಿಕ್ಪಾಲಕರು, ಆದಿಶಕ್ತಿ, ಮತ್ತು ಶ್ರೀರಾಮ ಪಟ್ಟಾಭಿಷೇಕ, 'ರಾಮಾಯಣದ ಅರಣ್ಯಕಾಂಡದ ಚಿತ್ರಣ'ಗಳು ಸುಂದರವಾಗಿಮೂಡಿಬಂದಿವೆ. ಸಭಾಂಗಣದ ಕಂಭಗಳಲ್ಲಿ ಶಿವ,ಪಾರ್ವತಿ,ನಂದಿ ಗರುಡ, ಲಿಂಗ, ಮತ್ತು ಮಾರುತಿಯ ಕೆತ್ತನೆಗಳಿವೆ. ಹತ್ತಿರದಲ್ಲೇ ಇರುವ 'ಹಾಲುರಾಮೇಶ್ವರ ಮಟ್ಟಿ'ಯಿಂದ 'ಮಲಸಿಂಗನಹಳ್ಳಿ'ಯ 'ಕಿಟ್ಟದಹಳ್ಳಿ'ಯ ಮೂರ್ತಿಗಳು ಒಂದೇ ಬೃಹತ್ ಬಂಡೆಯಿಂದ ನಿರ್ಮಿಸಲ್ಪಟ್ಟಿವೆ. 'ತಾಳ್ಯದ ಮೂರ್ತಿ'ಯು 'ವೀರ ಭಾವ'ವನ್ನು ಹೊಂದಿದ್ದು, 'ಕಿಟ್ಟದ ಹಳ್ಳಿಯ ಮೂರ್ತಿ', 'ಶಿಶು'ವಿನಂತೆ ಮತ್ತು ಮಲಸಿಂಗನಹಳ್ಳಿಮೂರ್ತಿ, 'ನರ'ನಂತೆ ಕಾಣಬರುತ್ತದೆ. ಗರ್ಭಗುಡಿಯ ಬಾಗಿಲಿಗೆ ಹಿತ್ತಾಳೆಯಲ್ಲಿ ಮಾಡಿಸಿದ ರಾಮಾಯಣದ ಚಿತ್ತಾರಗಳನ್ನು ಹೊರಸೂಸುವ ತಗಡನ್ನು ೧೯೧೬ ರಲ್ಲಿ ಅಳವಡಿಸಿದ್ದಾರೆ. ಮಹಾದ್ವಾರದ ಬಳಿ 'ಬಾಣಪ್ಪ ದೇವರ ಚಿಕ್ಕಗುಡಿ'ಯಿದೆ. ಈ ದೇವತೆ ಭೂತ ಪ್ರೇತ ಪಿಶಾಚಿಗಳ, ಮತ್ತು ರೋಗಗಳನ್ನು ವಾಸಿಮಾಡಲು, ಕಷ್ಟಗಳನ್ನು ಪರಿಹರಿಸಲು 'ನಂದನ ಹೊಸೂರಿನ ರಾಜ'ನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಆಚರಿಸುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರೂ ಭಾಗವಹಿಸಿ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. 'ಶ್ರೀ ಮಾರುತಿ ಬ್ರಾಹ್ಮಣ ಸೇವಾ ಸಂಘ', ತಾಳ್ಯ ಜಾತ್ರೆಯ ಸಮಯದಲ್ಲಿ ಮತ್ತು ವರ್ಷದ ಇತರ ಸಮಯದಲ್ಲೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತಾದಿಗಳಿಗೆ ಸಹಾಯಮಾಡುತ್ತಿದೆ.

ಹನುಮಪ್ಪನ ತೇರಿನ ವಿವರಗಳು[ಬದಲಾಯಿಸಿ]

ಪ್ರತಿವರ್ಷವೂ ಚೈತ್ರ ಶುದ್ಧ ಚಿತ್ರ ಪೂರ್ಣಿಮೆಯದಿನ ಶ್ರೀ ಆಂಜನೇಯನಿಗೆ ಬ್ರಹ್ಮ ರಥೋತ್ಸವ (ಆನೆ ಉತ್ಸವ) ಜರುಗುವುದು. ಅಂಕುರಾರ್ಪಣದ ಬಳಿಕ ಕುದುರೆ ವಾಹನ, ಸಿಂಹವಾಹನ, ಇಂದ್ರಜಿತು ವಾಹನ, ನಂತರ ಆನೆ ವಾಹನೋತ್ಸವ ಅಥವ ಬ್ರಹ್ಮರಥೋತ್ಸವ ಜರುಗುತ್ತದೆ. ಆಂಜನೇಯ ಸ್ವಾಮಿಯ ಜಾತ್ರೆಯಂದು ಗುಡ್ಡದ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ಬರಮಾಡಿಕೊಂಡು ಪೂಜೆ ಸಲ್ಲಿಸಿದ ನಂತರವೇ ಮೊದಲ ದಿನ ವಿಪ್ರಬಂಧುಗಳಿಂದವಿಶೇಷ ಪೂಜೆ-ಪ್ರಾರ್ಥನೆಗಳನಂತರ ಹಾಗೂ ಶ್ರೀಗುಡ್ಡದ ತಿಮ್ಮಪ್ಪನ ಉತ್ಸವಮೂರ್ತಿಗಳನ್ನು ಬ್ರಹ್ಮರಥದಲ್ಲಿ ಅಲಂಕೃತಗೊಳಿಸಿ ಗ್ರಾಮದ ಸುತ್ತಲೂ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಆದಿನ ರಾತ್ರಿ ರಥಕ್ಕೆ ಎಣ್ಣೆ ಎರೆಯಲಾಗುತ್ತದೆ.

'ತೇಜಿಕುಣಿತ'[ಬದಲಾಯಿಸಿ]

ಚಿತ್ರ:1-Shimoga visit (2012-13) HP 145.JPG
'ತೇಜೀ ಕುಣಿತದ ಪರಿಕ್ರಮ'

ಮಾರನೆಯದಿನ, ದಾಸಯ್ಯನು, ಸೀಗೆಮರದ ಮುಳ್ಳಿನಮೇಲೆ ನಡೆಯುವ ಪರಿಪಾಠವಿದೆ. ಆ ದಿನ ಅವನು ಬೆಳಿಗ್ಯೆ ನಸುಕಿನಲ್ಲಿಯೇ ಎದ್ದು ಸ್ನಾನಾದಿವಿಧಿಗಳನ್ನು ಮುಗಿಸಿ, ಪೂರ್ತಿದಿನ ಉಪವಾಸದಿಂದಲೂ, ನೇಮದಿಂದಲೂ ಶುಚಿಯಿಂದಲೂ ಹನುಮಪ್ಪನನ್ನು ಆರಾಧಿಸಬೇಕು. ಬೆಳಗಿನ ಜಾವದಲ್ಲಿ ನಡೆಯುವ ಸೀಗೆ ಮೆಳೆ ತುಳಿಯುವ ವಿಧಿ ಬಹಳ ವಿಶೇಷವಾದದ್ದು. ಸುಮಾರು ೪ ಅಂಗುಲದ ಮಳೆಗಳಿಂದ, ಮುಳ್ಳಿನ ಹಾವಿಗೆಯಮೇಲೆ ನಡೆಯುವ ಕ್ರಿಯೆ ಅತ್ಯಂತ ವಿಸ್ಮಯದಾಯಕವಾಗಿದೆ. ತೇಜಿಕುಣಿತವೆಂಬ ಕುದುರೆ ಕುಣಿತವನ್ನು, ಆದಿನ ನೋಡಬಹುದು. ಆದಿನವೇ ಬ್ರಹ್ಮರಥೋತ್ಸವವನ್ನು ಅಲ್ಲಿನ ಬ್ರಾಹ್ಮಣ ಸಮಾಜದವರು ನಡೆಸಿಕೊಡುತ್ತಾರೆ. ಶ್ರೀ ಆಂಜನೇಯ ಸ್ವಾಮಿಉತ್ಸವಮೂರ್ತಿ ತೇಜಿಕುಣಿತದೊಂದಿಗೆ ಸೀಗೆ ಮೆಳೆಯ ಹತ್ತಿರ ಸಾಗುತ್ತದೆ. ಅಲ್ಲಿ ದಾಸಯ್ಯನ (ಉಡೇದರ ತಿಮ್ಮಪ್ಪ)ಬಲಗಾಲಿಗೆ ಒಂದುಗುಂಡಿನ ಸರಪಳಿ ಬಿಗಿದಿರುತ್ತಾರೆ. ಆ ಸಮಯದಲ್ಲಿ ದಾಸಯ್ಯನಮೇಲೆ ದೇವರು ಬಂದಿರುತ್ತದೆ. ಆಗ ತೇಜಿ ದಾಸಯ್ಯನಿಗೆ ನಿವಾಳಿ ತೆಗೆದನಂತರ ಎಚ್ಚರಗೊಂಡ ದಾಸಯ್ಯ, ಸೀಗೆ ಮೆಳೆಯನ್ನು ಬರಿಗಾಲಿನಲ್ಲಿ ಏರಲು ಹೋಗುತ್ತಾನೆ. ಅಲ್ಲಿ ನೆರೆದ ಹಲವು ಯುವಕರೂ ಸೀಗೆ ಮೆಳೆಯಮೇಲೆ ಏರುವುದನ್ನು ನಾವು ಕಾಣಬಹುದು. ಅವರೆಲ್ಲರ ದೇಹಕ್ಕೆ ಹರಳೆಣ್ಣೆ ಹಚ್ಚಲಾಗುತ್ತದೆ. ಆದಿನದ ಬೆಳಿಗ್ಯೆ ರಥವನ್ನು ಅಲಂಕರಿಸಲಾಗುವುದು. ಈ ರಥದಲ್ಲಿ 'ಗುಡ್ಡದ ತಿಮ್ಮಪ್ಪ' ಹಾಗೂ 'ಆಂಜನೇಯ ಸ್ವಾಮಿ'ಗೆ, ಪೂಜೆ-ಮಂಗಳಾರತಿ ಮಂಗಳವಾದ್ಯಗಳೊಂದಿಗೆ ಸಲ್ಲಿಸಲಾಗುವುದು.

ಮೂರನೆಯದಿನ ಆ ಊರಿನ ಓಕಳಿ ಸೇವೆ ಜರುಗುತ್ತದೆ. ಊರಿನ ಮುಖ್ಯಸ್ಥರ ಮನೆಯಲ್ಲಿ ಊಟ[ಬದಲಾಯಿಸಿ]

೩ ನೆಯ ದಿನ,ಸಾಮೂಹಿಕ ಉಪನಯನದ ಕಾರ್ಯಕ್ರಮ ನಡೆಯುತ್ತದೆ. ಆಂಜನೇಯ, ತಿಮ್ಮಪ್ಪ ಮುಂತಾದ ಉತ್ಸವಮೂರ್ತಿಗಳು ತಾಳ್ಯದ ಶ್ಯಾನುಭೋಗರ ಮನೆಯಲ್ಲಿ ಬೀಡುಬಿಡುತ್ತವೆ. ಪಾನಕ, ಕೋಸಂಬರಿಸೇವೆ ನಡೆಯುತ್ತದೆ. ರಾತ್ರಿಹೊತ್ತಿಗೆ ಪುನಃ ದೇವರುಗಳು ದೇವಸ್ಥಾನಕ್ಕೆ ವಾಪಸ್ ಹೋಗುತ್ತವೆ. ಅಭಿಷೇಕ, ಮತ್ತು ಹಲವಾರು ಸೇವೆಗಳು ದಿನವಿಡೀ ನಡೆಯುತ್ತವೆ. ತಾಳ್ಯದ ಹಳೆಯ ನಿವಾಸಿ, ಹೋಟೆಲ್ ಲಕ್ಷ್ಮಣರಾಯರ ಮನೆಯವರ ಸೇವೆ, ಮತ್ತು ಶ್ರೀ ಸೀತಾರಾಮರಾಯರ ಮನೆಯವರಿಂದ ಸಮಾರಾಧನೆ ಆ ದಿನದ ವಿಶೇಷಗಳು.ತಾಳ್ಯದಲ್ಲಿ ಪ್ರಾಥಮಿಕ,ಮತ್ತು ಪ್ರೌಢವಿದ್ಯಾಭ್ಯಾಸವನ್ನು ಜಾರಿಗೆ ತರುವಲ್ಲಿ ಈ ಕುಟುಂಬಗಳು ಅಪರಿಮಿತವಾಗಿ ಶ್ರಮಿಸಿವೆ.

ಹೊರಕೆದೇವಪುರದ ಲಕ್ಷ್ಮೀನರಸಿಂಹ ಸ್ವಾಮಿ ದೇವರು[ಬದಲಾಯಿಸಿ]

ಈ ಕ್ಷೇತ್ರದ ಸಮೀಪದಲ್ಲಿರುವ ಹೊರಕೇದೇವಪುರದಲ್ಲಿ ಲಕ್ಶ್ಮೀನರಸಿಂಹ ದೇವಸ್ಥಾನವಿದೆ. ತಾಳ್ಯಕ್ಕೆ ಅನೇಕ ಗ್ರಾಮದೇವತೆಗಳನ್ನು ಸ್ವಾಗತಿಸಿ ,ಶ್ರೀಸ್ವಾಮಿಯ ಮೂಲಕ ’ನೂರೊಂದೆಡೆ ಸೇವೆ’ ಅರ್ಪಿಸುವ ಪದ್ಧತಿಯಿದೆ. ಕೆರೆಯಂಗಳದಲ್ಲಿ ಹೊರಬೀಡು ಭೋಜನದ ಏರ್ಪಾಡಾಗುತ್ತವೆ.

'ನೂರೊಂದೆಡೆಯ ಸೇವೆ'[ಬದಲಾಯಿಸಿ]

ಚಿತ್ರ:211.JPG
ತಾಳ್ಯ ಕೃಷಿ ಉತ್ಪನ್ನ ಸಹಕಾರಿ ಸಂಘ'

ಇದರ ಸಂಖ್ಯೆ ೧೦೧. ನೂರೊಂದೆಡೆಯ ಹರಕೆ, ವಿಶೇಷ ವಿಶೇಷ ಮಹತ್ವದ್ದು. ನೂರೊಂದು ಸೂರ್ಯ ನಮನಗಳು,ನೂರೊಂದು ಕಾಯಿಒಡೆಸುವುದು,ನೂರೊಂದು ದೇವತೆಗಳನ್ನು ಒಟ್ಟಾಗಿಸೇರಿಸಿ ಆ ಪ್ರದೇಶದ ಅಧಿದೇವರಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ಸನ್ನಿಧಿಯಲ್ಲಿ ನೂರೊಂದು ದೇವತೆಗಳಿಗೆ, ನೂರೊಂದು ಉಂಡೆಗಳನ್ನು ಮಾಡಿ ಪೂಜಿಸಿ ಎಲ್ಲದೇವರುಗಳಿಗೆ ಸಮರ್ಪಿಸುತ್ತಾರೆ. ನೈವೇದ್ಯ, ಅಡ್ಡ ಹೂವಿನ ಪಲ್ಲಕ್ಕಿಯಲ್ಲಿ ತಾಳ್ಯದ ಗ್ರಾಮಸ್ತರು ಕೆರೆಯ ಕೋಡಿಯಲ್ಲಿ ಬರಮಾಡಿಕೊಂಡು ವಿಶೇಷ ಪೂಜೆ, ಧೂಪದ ಸೇವೆ,ಬಾನೋತ್ಸವ ಸೆವೆ,ಮತ್ತು ಕೊನೆಯಲ್ಲಿ ಅನ್ನಸಂತರ್ಪಣೆ ಸಲ್ಲಿಸುತ್ತಾರೆ. ಗ್ರಾಮದ ಪರವಾಗಿ ದಾಸಯ್ಯನ ಭವನಾಸಿಯಲ್ಲಿ ನೈವೇದ್ಯ ಅರ್ಪಿಸುತ್ತಾರೆ. ೧೯೭೨ ರಲ್ಲಿ ಮತ್ತೆ ೧೯೯೩ ರಲ್ಲಿ ನಡೆದ ನೂರೊಂದೆಡೆಯ ಮಹೋತ್ಸವ ವಿಶೇಷವಾಗಿದ್ದು, ನಾಡಿನ ಹಾಗೂ ವಿದೇಶಗಳ ಭಕ್ತಾದಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ಬಾರೆಹಳ್ಳಿ ಮನೆತನ, ಮತ್ತು ಕೋಡೆಪ್ಳರ ಮನೆತನದ ಭಕ್ತರ ಸೇವೆಗಳು[ಬದಲಾಯಿಸಿ]

ಬಾರೆಹಳ್ಳಿ ಮನೆತನದವರು ರಥದ ಮುಂದೆ ಇದ್ದು ದೊಡ್ಡ ಸೇವೆಗೆ ಭಾಗಿಯಾಗುತ್ತಾರೆ. ಇಲ್ಲಿ ನಡೆಯುವ ದೊಡ್ಡೆಡೆ ಅತಿ ಪ್ರಮುಖವಾದ ವಿಧಿಗಳಲ್ಲೊಂದು. ಬಾಳೆ ಎಲೆಯಲ್ಲಿ ಅನ್ನ, ಹಾಲು, ಮೊಸರು, ತುಪ್ಪ, ಬೆಲ್ಲದ ಹಾಲು, ಬಾಳೆಹಣ್ಣುಗಳನ್ನು ಮಿಶ್ರಣಮಾಡಿ ಪೂಜೆ ಸಲ್ಲಿಸಿ ಭಕ್ಷಿಸುವ ಪ್ರಥದಲ್ಲಿ ಕೇಕೆಹಾಕುತ್ತಾ ಸಾಗುತ್ತಾರೆ.

ಪಂಜು ಕಳ್ಳರ ತಪ್ಪೊಪ್ಪಿಗೆ[ಬದಲಾಯಿಸಿ]

ಸ್ವಾಮಿಯಮೇಲಿದ್ದ ಆಭರಣಗಳನ್ನು ಒಮ್ಮೆ ಪಂಜುಗಳ್ಳರು ಅಫರಿಸಿದರು. ನಂತರ,ಅವರಿಗೆ ಇಡೀರಾತ್ರಿ ಕಣ್ಣು ಕಾಣಿಸದಾಗ ಪರಿತಪಿಸಿ, ತಪ್ಪೊಪ್ಪಿಗೆಯ ಪ್ರಕಾರ ಸ್ವಾಮಿಗೆ ಬೆಳ್ಳಿಯ ಕಿರೀಟ ಮಾಡಿಸಿಕೊಟ್ಟರಂತೆ.

'ಗ್ರಾಮದೇವತೆ, ಬಂಡೆಮ್ಮನವರ ಜಾತ್ರೆ'[ಬದಲಾಯಿಸಿ]

ಚಿತ್ರ:1-P1010200.JPG
ಜಾತ್ರೆಯ ಸಮಯದ ಪರಿಕರಗಳು'

ತಾಳ್ಯದ ಹನುಮಪ್ಪನ ತೇರಾದ ೧೫ ದಿನಗಳ ತರುವಾಯ, ಗ್ರಾಮದೇವತೆ,ಬಂಡೆಮ್ಮನವರ ಜಾತ್ರೆ ನಡೆಯುತ್ತದೆ. ಹೀಗೆ ಕುಡಿಯುವನೀರಿಗೆ ಅಭಾವವಾದಾಗ್ಯೂ ಭಕ್ತಾದಿಗಳ ಸಹಾಯದಿಂದ ಹನುಮಪ್ಪನ ತೇರು, ಮತ್ತು 'ಬಂಡೆಮ್ಮನ ಜಾತ್ರೆ' ವಿಜೃಂಭಣೆಯಿಂದ ನಡೆಯುತ್ತದೆ. ಲಾರಿಗಳಲ್ಲಿ ಕುಡಿಯುವನೀರಿನವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಕ್ಕಪಕ್ಕದ ಗ್ರಾಮಸ್ಥರು, ಮತ್ತು ಊರಿನ ಹೊರಗಡೆಯಿಂದಲೂ ಭಕ್ತರ ಗುಂಪು ಇಲ್ಲಿಗೆ ಧಾವಿಸಿಬಂದು, ಹನುಮಪ್ಪನ ಕೃಪೆಗೆ ಪಾತ್ರರಾಗುವುದನ್ನು ನಾವು ಗಮನಿಸಬಹುದು. ದೇಗುಲಗಳ ಗ್ರಾಮವೆಂದು ಹೆಸರಾದ 'ತಾಳ್ಯ'ದಲ್ಲಿ, 'ಹನುಮಪ್ಪನ ದೇವಸ್ಥಾನ'ವಲ್ಲದೆ,

ಚಿತ್ರ:1-PA190142.JPG
'ದೇವಿಯವರ ದೇವಸ್ಥಾನ'
  • 'ಶ್ರೀ ಕಾಳಿಕಾಂಬ ದೇವಸ್ಥಾನ',
  • 'ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ',
  • 'ಬಸವಣ್ಣನ ದೇವಸ್ಥಾನ',
  • 'ಶ್ರೀ ವಿನಾಯಕ ದೇವಸ್ಥಾನ',
  • 'ಶ್ರೀ ಕರಿಯಮ್ಮ ದೇವಿ ದೇವಸ್ಥಾನ',
  • 'ದುರ್ಗಾಂಬಿಕಾ ದೇವಿ ದೇವಸ್ಥಾನ',
  • 'ಗೌರಸಂದ್ರ ಮಾರಮ್ಮನ ದೇವಸ್ಥಾನ',
  • 'ಜುಂಜಪ್ಪನ ದೇವಸ್ಥಾನ',
  • ಕೆರೆಯ ಬಳಿಯಿರುವ 'ಚೌಡೇಶ್ವರಿ ದೇವಸ್ಥಾನ',
  • 'ರಂಗಾಪುರದ ಶ್ರೀ ತಿಮ್ಮಪ್ಪನ ದೇವಸ್ಥಾನ',
  • 'ಬಾರೆಹಳ್ಳಿ ಬಂಡೆಯ ಮೇಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ',
  • 'ಕೆರೆ ಕೋಡಿಯಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ',
  • 'ಶ್ರೀ ಹಾಲುರಾಮಪ್ಪನ ದೇವಸ್ಥಾನ',(ಗ್ರಾಮದಿಂದ ಸ್ವಲ್ಪ ದೂರದಲ್ಲಿದೆ)

ಹೀಗೆ ಅನೇಕ ದೇವಿ-ದೇವತೆಗಳ ದೇವಾಲಯಗಳನ್ನು ನಾವು ಇಲ್ಲಿ ಕಾಣುತ್ತೇವೆ.

ಕೋಡೆಪ್ಳರ ಮನೆತನದ ಮುಳ್ಳಿನ ಹಾವಿಗೆ ಸೇವೆ (ಮುಳ್ಳಾವುಗೆ)[ಬದಲಾಯಿಸಿ]

ಕೋಡೆಪ್ಳರಮನೆತನವು ಪರಂಪರಾನುಗತವಾಗಿ ಪೀಳಿಗೆಯಿಂದ ಪೀಳಿಗೆಗೆ ತಾಳ್ಯದ ಆಂಜನೇಯ ಸ್ವಾಮಿಯ ಆರಾಧಕರಾಗಿದ್ದು ಸದರಿ ಮನೆತನದ ವ್ಯಕ್ತಿಯೊಬ್ಬರು ದಾಸಯ್ಯನಾಗಿ ಆಂಜನೇಯ ಸ್ವಾಮಿಯ ಮುದ್ರಾ ಲಾಂಛನ ಹಾಕಿಸಿಕೊಂಡಿರುತ್ತಾರೆ ಅವರು ಮೂರು ಹಗಲು ಮೂರು ರಾತ್ರಿಯೆಲ್ಲಾ ಉಪವಾಸವಿದ್ದು ಜಾತ್ರೆಯ ದಿನ ಆಂಜನೇಯಸ್ವಾಮಿ ನೇಮ ನ್ಯೆಮಿತ್ಯಗಳಿಂದ ಗರ್ಭಗುಡಿಯ ಒಳಗೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯವನ್ನು ಪ್ರದಕ್ಷಿಣೆ ಮಾಡುವ ವೇಳೆ ಮೂರ್ಛೆಹೋಗುತ್ತಾರೆ.ಆಗ ಭಕ್ತ ವೃಂದದ ಮುಗಿಲು ಮುಟ್ಟುವ ಆಂಜನೇಯ ಸ್ವಾಮಿಯ ನಾಮಾವಳಿಗಳೋಂದಿಗೆ ಸದರಿ ದಾಸಯ್ಯನವರಿಗೆ ಮುಳ್ಳಿನ ಹಾವಿಗೆಯನ್ನು ತೊಡಿಸುತ್ತಾರೆ,ಆಗ ಕೋಡಪ್ಳರ ಮನೆತನದ ದಾಸಯ್ಯನವರು ಮೂರ್ಚಾ ಸ್ಥಿತಿಯಲ್ಲೇ ಗುಡಿಗೆ ಪ್ರಧಕ್ಷಿಣೆ ಹಾಕಿ ತೇರಿನ ಬಲವಂದು ಮರಳಿ ಭಕ್ತ ವೃಂದವು ಆಂಜನೇಯಸ್ವಾಮಿಯ ನಾಮಾವಳಿಗಳನ್ನೂ ಕೂಗುತ್ತಿರಲು ದೇವಾಲಯಕ್ಕೆ ಮರಳುತ್ತಾರೆ. ಈ ವಿಧಿಯನ್ನುಮುಳ್ಳಾವುಗೆ ಎಂದು ಕರೆಯುತ್ತಾರೆ. ಮೋರ್ಛೆಗೊಂಡ ಭಕ್ತರು ಎಚ್ಚರಗೊಳ್ಳುವುದು ಸ್ವಾಮಿಯಸನ್ನಿಧಿಯಲ್ಲಿ ತೀರ್ಥ ಪ್ರೋಕ್ಷಿಸಿದ ಬಳಿಕವೇ. ಮುಳ್ಳಾವುಗೆ ಧರಿಸಿರುತ್ತಾರೆ.ಅದೇದಿನದ ರಾತ್ರಿ ಊರಿನ ಜನರಿಂದ ದೊಡ್ಡೆಡೆ ದೇವಾಲಯದ ಮುಂದೆ ನಡೆಯುತ್ತದೆ. ಹೂವಿನ ಪಲ್ಲಕ್ಕಿ ಉತ್ಸವ ಸಹಾ ಏರ್ಪಾಡಾಗಿರುತ್ತದೆ, ಮತ್ತೊಂದು ದೊಡ್ಡೆಡೆ ಮಾರನೆಯ ದಿನ ನಡೆಯುತ್ತದೆ ಇದರ ಸೇವಾಕರ್ತರು, ಮುದ್ದು ರಂಗಪ್ಳರ ಮನೆಯವರು.

ಜಾತ್ರೆಯ ಇತರ ಕಾರ್ಯಕ್ರಮಗಳು[ಬದಲಾಯಿಸಿ]

ನಂತರ ದಿನಗಳಲ್ಲಿ ಕ್ರಮವಾಗಿ ವೈದಿಕರಿಂದ ಓಕಳಿಯಾಡುವ ಪದ್ಧತಿ. ಶಯನೋತ್ಸವದ ಸೇವೆ ಕೊನೆಯ ದಿನ ನಂತರ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.

ಇತರೆ ವಿವರ[ಬದಲಾಯಿಸಿ]

ಬೃಹದಾಕಾರದ ಮೂರ್ತಿ, ಮಲಸಿಂಗನಹಳ್ಳಿ ಹಾಗೂ ಕಿಟ್ಟದಹಳ್ಳಿ ಯಲ್ಲಿರುವ ಹನುಮನ ಮೂರ್ತಿಗಳನ್ನು ಸಮೀಪದ ’ಹಾಲುರಾಮನ ಮಟ್ಟಿ’ಯೆಂಬ ಜಾಗದಲ್ಲಿದ್ದ ಒಂದೇ ಭಾರಿ ಶಿಲೆಯಿಂದ ಕಡೆಯಲಾಗಿದೆ. ಎತ್ತರ ೧೦ ಅಡಿ. ದಶಾವತಾರದ ಭಂಗಿಗಳು, ಅಷ್ಟ ದಿಗ್ಪಾಲಕರು, ಆದಿಶಕ್ತಿ ಮತ್ತು ರಾಮ ಪಟ್ಟಾಭಿಷೇಕ, ರಾಮಾಯಣದ ಚಿತ್ರಣ ಸುಂದರವಾಗಿ ಮೂಡಿಬಂದಿದೆ. ಅರಣ್ಯಕಾಂಡದ ಚಿತ್ರಗಳು, ಸಭಾಂಗಣದ ಕಂಭಗಳಲ್ಲಿ ಶಿವ, ಪಾರ್ವತಿ, ನಂದಿ, ಗರುಡ, ಲಿಂಗ, ಮತ್ತು ಮಾರುತಿಯ ಕೆತ್ತನೆಗಳಿವೆ. ೪೦೦ ವರ್ಷಗಳಷ್ಟು ಪುರಾತನ. ಪ್ರತಿ ಶನಿವಾರವೂ ವಿಶೇಷ ಪೂಜೆ ಇದ್ದು ಭಕ್ತರುಗಳ ಅಪಾರ ಕೊಡುಗೆಗಳಿಂದಾಗಿ ದೇಗುಲವು ಕಂಗೊಳಿಸುತ್ತದೆ. ಬೆಂಗಳೂರಿನಲ್ಲಿ ಜರುಗುವ ಕರಗದ ಇದೇ ದಿನ ನಡೆಯುತ್ತದೆ. ಹೊಸೂರಿನ ನಂದನ ರಾಜನು ದಾಸಯ್ಯನಿಗೆ ನೀಡಿದ ಚಿತ್ರಹಿಂಸೆಗಳನ್ನೇ ಜಾತ್ರೆಯ ವೇಳೆ ಬೇರೆಬೇರೆ ಸ್ಥಳಗಳಲ್ಲಿ ಆಚರಿಸುವ ಪರಿಪಾಠವಿದೆ. ಗುಡದಪ್ಪನ ಮನೆಯಲ್ಲಿ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆಮಾಡುತ್ತಿದ್ದರು. ೧೯೩೯ ರಲ್ಲಿ ಒಂದು ಸಂಘವನ್ನು ಸ್ಥಾಪಿಸಲಾಯಿತು. ಮಾರುತಿ ಬ್ರಾಹ್ಮಣ ಸಂಘ. ಜಾಜೂರಿನ ಭಕ್ತಮಂಡಳಿಯವರು ಕಾಲಾನುಕ್ರಮದಲ್ಲಿ ಮುಂದೆಬಂದು ಬ್ರಹ್ಮರಥೋತ್ಸವದ ಒಂದು ದಿನದ ವೆಚ್ಚವನ್ನು ವಹಿಸಿಕೊಂಡರು. ಚಿತ್ರದುರ್ಗದ ಅನಂತಪ್ಪ ಶೆಟ್ಟರು. ಮದ್ದೇರು ಶ್ಯಾನುಭೋಗ ಶ್ರೀ ಹನುಮಂತರಾಯರು ಜಾತ್ರೆಯಕಾಲದಲ್ಲಿ ಐದುದಿನ ಅನ್ನ ಸಂತರ್ಪಣೆಯ ವಿಧಿ ಸತತವಾಗಿ ನಡೆದುಕೊಂಡುಬರುತ್ತಿದೆ.

                                                                                (ಸಂಪಾದನೆ-ಶ್ರೀಧರ ತಾಳ್ಯ)

ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲ್ಯಾಣಮಂಟಪ, ಧರ್ಮೋಪನಯನ, ವಸತಿಗೃಹ, ಇತಿಹಾಸ[ಬದಲಾಯಿಸಿ]

ಸ್ವಾಮಿ ದೇವಾಲಯವು ಹದಿನಾರನೆ ಶತಮಾನದಲ್ಲಿ ಶ್ರೀವೈಷ್ಣವ ಆಳ್ವಾರರ ಪ್ರೇರಣೆಯಿಂದ ಆಗಿರಬಹುದೆಂದು ಮತ್ತು ಸಂತೆ ಬೆನ್ನೂರಿನ ನಾಯಕರು ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿರಬಹುದೆಂದೂ ಊಹಿಸಲಾಗಿದೆ. ಸೆವೂಣರು, ಹೊಯ್ಸಳರು, ನೊಳಂಬರು, ವಿಜಯನಗರದರಸರು, ಮೈಸೂರಿನ ರಾಜರು, ಚಿತ್ರದುರ್ಗದ ಪಾಳೆಗಾರರು, ಹೈದರಾಲಿ, ಸಂತೆಬೆನ್ನೂರಿನನಾಯಕರು, ಹಾಗೂ ಬ್ರಿಟಿಷರು ಆಳಿದ್ದಾರೆ. ಶಾಸನಗಳು ಲಭ್ಯವಾಗಿಲ್ಲ. ಬ್ರಿಟಿಷ್ ಶಾಸನತಜ್ಞ ಬಿ.ಎಲ್.ರೈಸರು, ಎಪಿಗ್ರಾಫಿಯ ಕರ್ನಾಟಕ ಸಂಪುಟ-೧೧ ರಲ್ಲಿ ಇಲ್ಲಿನ ಶಾಸನ ಸಂಪತ್ತನ್ನು ಗುರುತಿಸಿ ದಾಖಲಿಸಿದ್ದಾರೆ. ಹಾಗಾಗಿ, ಆದಿ ಹಳೇಯುಗದ ಹಾಗೂ ಬೃಹತ್ ಶಿಲಾಯುಗದ ಸಾಂಸ್ಕೃತಿಕ ನೆಲೆಯೆಂಬ ಮಾತನ್ನು ಪುಷ್ಟೀಕರಿಸಲು ೧೯೧೬ ರಲ್ಲಿ ರಾಬರ್ಟ್ ಬ್ರಸ್ ಫೂಟ್ ಎಂಬ ವ್ಯಕ್ತಿ, ಪತ್ತೆಹಚ್ಚಿದ್ದರು. ತಮ್ಮ ಸಂಶೋಧನೆಗಳ ಫಲಿತಗಳನ್ನು ’Indian Prehistoric and Proto-Historic Antiquities, Madras' ಎಂಬ ಕೃತಿಯಲ್ಲಿ ಪಟ್ಟಿಮಾಡಿದ್ದಾರೆ. ಅನೇಕ ಶಿಲಾಯುಧಗಳು ಕಪ್ಪು ಮತ್ತು ಕೆಂಪು ವರ್ಣದ ಮಡಕೆಗಳ ಅವಶೇಷಗಳು ಇಲ್ಲಿ ದೊರೆತಿವೆ.

ಶಾಸನಗಳು[ಬದಲಾಯಿಸಿ]

ದೇವಾಲಯದ ನಿರ್ಮಾಣದ ಕುರಿತು ಯಾವುದೆ ಶಾಸನಗಳು, ದಾಖಲೆಗಳು, ಮಾಹಿತಿಗಳು ಲಭ್ಯವಿಲ್ಲ. ವಾಸ್ತುಶೈಲಿಯನ್ನು ಆಧರಿಸಿ ಕಾಲವನ್ನು ನಿರ್ಧರಿಸಬಹುದು. ದೊರೆತ ಶಾಸನಗಳೊಂದರಲ್ಲಿ ಧಾರ್ಮಿಕ ಮನೋಭಾವದಿಂದ ಹಾಗೂ ದಾನ ಶಾಶ್ವತವಾಗಿ ಮುಂದುವರೆಯಲು ಹಾಕಿಸುತ್ತಿದ್ದರು. ಕೆರೆಕೋಡಿಯ ಬಳಿ ಮತ್ತೊಂದು ಶಾಸನವಿದೆ. ಇದು 'ಹೊರಕೆದೇವಪುರದ ಲಕ್ಷ್ಮೀನರಸಿಂಹ ದೇವಸ್ಥಾನ'ಕ್ಕೆ ಭೂದಾನ ಮಾಡಿದ್ದರ ಬಗ್ಗೆ ತಿಳಿಸುತ್ತದೆ. ಕ್ರಿ.ಶ. ೧೫೭ ರಲ್ಲಿ, ೭ ಸಾಲುಗಳ ಈ ಚಿಕ್ಕ ಶಾಸನದಲ್ಲಿ ಬಹುಧಾನ್ಯ ಸಂವತ್ಸರದ, ಭಾದ್ರಪದ ಒಂದರಲ್ಲಿ ಹೊರಕೆ ದೇವಪುರದ ಲಕ್ಷ್ಮೀನರಸಿಂಹ ದೇವರ ನೈವೇದ್ಯಕ್ಕೆ' ಕೋಡಿಹಳ್ಳಿಗ್ರಾಮ'ವನ್ನು 'ಸಂತೆಬೆನ್ನೂರ ಹನುಮಂತನಾಯಕ'ನ ಶ್ರೇಯಸ್ಸಿಗಾಗಿ 'ಬಾಲಿನಾಯಕ'ನೆಂಬಾತನು ದಾನನೀಡಿದನೆಂಬ ದಾಖಲಿಸಿದ್ದಾರೆ.

ಎರಡನೆಯ ಶಾಸನ[ಬದಲಾಯಿಸಿ]

ಮತ್ತೊಂದು ಶಾಸನ ಇದೇಗ್ರಾಮದ 'ವೀರಭದ್ರ ದೇವಸ್ಥಾನದ ಇಂಜಾಮಿನ ಮೂಲೆ'ಯಲ್ಲಿ ಲಭ್ಯವಾಗಿತ್ತು. ಆದರೆ ಇದು ತೃಟಿಗೊಂಡಿದ್ದು ಈಗ ; ಅಭ್ಯವಿಲ್ಲ. ಆದರೆ ಚಿತ್ರದುರ್ಗದ ಶಾಸನ ಸಂಪುಟದಲ್ಲಿ ೬ ಸಾಲಿನ ಶಾನಸನದಲ್ಲಿ ದಾಖಲಿಸಲಾದ ಪಂಕ್ತಿಗಳು ಹೀಗಿವೆ. ’ಸಾಧಾರಣ ಸಂವತ್ಸರದ ಜ್ಯೇಷ್ಠ ಬಹುಳ ೪, ಮಂಗಳವಾರ...(ಕಾಮಗೇತಿ) ಕಸ್ತೂರಿ ಬರಮಣ್ಣ ನಾಯಕರು, ಮದಕರಿ ನಾಯಕರು, ಬಾಗೂಹಾರಲಿ ಬಸ'.. ಎಂದು ಮಾತ್ರ ಕಾಣಿಸುತ್ತದೆ, ಬಾಕಿ ವಿಷಯಗಳು ಛಿದ್ರವಾಗಿವೆ. ಚಿತ್ರದುರ್ಗ ನಾಯಕರ ಆಡಳಿತದಲ್ಲಿದ್ದಿತು ಎಂದು ನಿಸ್ಸಂಶಯವಾಗಿ ಹೇಳಬಹುದು. 'ದ್ರಾವಿಡ ಶೈಲಿ', 'ಮಿಶ್ರಿತ ಪ್ರಾದೇಶಿಕ ಶೈಲಿ'ಯಲ್ಲಿದೆ. 'ವಿಜಯ ನಗರದ ಸಾಮ್ರಾಜ್ಯ'ದ ಅವನತಿಯ ಸಮಯ ಇಲ್ಲವೇ ಪಾಳೇಗಾರರ ಕಾಲದಲ್ಲಿ 'ಕಣಶಿಲೆ'ಯನ್ನು ಬಳಸಿ ಗ್ರಾನೈಟ್, ಇಟ್ಟಿಗೆ ಗಾರೆಗಳ ಬಳಕೆಯಾಗಿದೆ.

ತಳ ವಿನ್ಯಾಸ[ಬದಲಾಯಿಸಿ]

ಗರ್ಭಗೃಹ ಮತ್ತು ಅದಕ್ಕೆ ಹೊಂದಿದಂತಹ ಅಂತರಾಳ ಮತ್ತು ರಂಗಮಂಟಪಗಳನ್ನು ಹೊಂದಿದೆ. ತಳವಿನ್ಯಾಸ ಸಾಮಾನ್ಯ ಮಾದರಿಯಲ್ಲಿದೆ. ಹತ್ತಿರದ ಹಾಲುರಾಮೇಷ್ವರ ಮಟ್ಟಿಯಿಂದ ಮೂರ್ತಿಯನ್ನು ಕೆತ್ತನೆಮಾಡಿ ತರಲಾಗಿದೆ. ರಂಗಮಂಟವು ೪ ಬೃಹತ್ ಗಾತ್ರದ ಕಂಬಗಳನ್ನು ಹೊಂದಿದೆ. ಕಂಬಗಳ ಕಾಂಡ ಭಾಗವು ಚಚ್ಚೌಕಾರವಾಗಿದೆ. ಹಾಗೂ 'ನಾಗಬಂಧ'ಗಳನ್ನು ಒಳಗೊಂಡಿದೆ. ಕಂಬಗಳು ಅನೇಕ ಉಬ್ಬುಶಿಲ್ಪಗಳಿಂದ ಅಲಂಕೃತವಾಗಿದೆ. ’ಬೋದಿಗೆಗಳು’ ಇಳಿಬಿದ್ದ ಬಾಳೆಗೊನೆಯಂತಿವೆ. ಕಂಬಗಳ ಮೇಲೆ ಶಿವಲಿಂಗ, ಪಾರ್ವತಿ, ವೀರಭದ್ರ, ದ್ವಾರಪಾಲಕರು, ಗರುಡ, ನಂದಿ, ವಟಪತ್ರಶಾಹಿಕೃಣ, ಈಹಾಂ ಮೃಗ,ಶಿವಲಿಂಗವನ್ನು ಪೂಜಿಸುತ್ತಿರುವ ಕೆತ್ತನೆಗಳಿವೆ. ಮೆಟ್ಟಿಲುಗಳ ಬದಿಯಲ್ಲಿ ಸುರುಳಿಯಾಳಿಯ ಕೆತ್ತನೆಯು ಇದೆ.

’ಲಜ್ಜಾ ಗೌರಿ'[ಬದಲಾಯಿಸಿ]

ದೇವಾಲಯದ ಹೊರಭಾಗ ಸಾಧಾರಣ. ತಳಭಾಗದ ಆದಿಷ್ಠಾನವು ಚಚ್ಚೌಕಾರದ ಅಲಂಕಾರವಿಲ್ಲದ ಮೌಲ್ಡ್ ಗಳಿಂದ ಸೇರಿಸಲ್ಪಟ್ಟಿದೆ. ಭಿತ್ತಿಯ ಭಾಗಗಳು ಸಾಧಾರಣ. ಚಜ್ಜದ ಭಾಗ ಇಳಿಜಾರಾಗಿದೆ. ದೇವಾಲಯದ ಹೊರಭಾಗದಲ್ಲಿ ಉಬ್ಬುಶಿಲ್ಪದಲ್ಲಿ 'ನಗ್ನ ಹೆಣ್ಣೊಬ್ಬಳು' ತಾನೆ ಹೆರಿಗೆ ಮಾಡಿಕೊಳ್ಳುತ್ತಿರುವ, ’ಲಜ್ಜಾಗೌರಿ' ವಿಗ್ರಹವಿದೆ. ಹಿಂದೆ ಇಲ್ಲಿನ ಮನೆಗಳಲ್ಲಿ ಹೆರಿಗೆ ಸಂಕಷ್ಟದಲ್ಲಿರುವವರಿಗೆ ಈ ವಿಗ್ರಹವನ್ನು ಪೂಜಿಸಿ ಅದರ ಮೇಲಿನ ನೀರನ್ನು ಕುಡಿಸಿದರೆ ಹೆರಿಗೆ ಸುಲಭವಾಗಿ ಆಗುವುದೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಮೇಲಿನ ಗೋಪುರ, ಅಥವಾ ವಿಮಾನವು ಗಚ್ಚುಗಾರೆ ಮತ್ತು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮೂರ್ತಿ ಶಿಲ್ಪಗಳಿವೆ. ವಿಮಾನ ಮಧ್ಯಭಾಗದಲ್ಲಿ ಎರಡು ಹಂತಗಳಲ್ಲಿ ಚಿಕ್ಕ ಚಿಕ್ಕ ರಂಧ್ರಗಳ ಮಾದರಿಯ ಗೂಡುಗಳಿವೆ. ತನ್ನದೇ ಆದ ವಿಶಿಷ್ಟ ಲಕ್ಷಣಳ ಜೊತೆಗೆ ಹೊಂದಿಸಿರುವ, ಪ್ರಾದೇಶಿಕ ಶೈಲಿಗೆ ಇದೊಂದು ಅತ್ಯುತ್ತಮ ಉದಾಹರಣೆ.

ಉಲ್ಲೇಖಗಳು[ಬದಲಾಯಿಸಿ]

  1. "'ತಾಳ್ಯ ಗ್ರಾಮದ ಮಾಹಿತಿ'". Archived from the original on 2018-06-15. Retrieved 2015-02-11.
  2. "ತಾಳ್ಯದ ಹನುಮನ ನೋಡಿದಿರಾ ಮಂಗಳವಾರ, ೦೫/೦೮/೨೦೧೨,ಎಂ.ಅಹಲ್ಯಾ,ಪ್ರಜಾವಾಣಿ". Archived from the original on 2021-02-24. Retrieved 2014-07-17.
  • ೧. ತಾಳ್ಯ ಇತಿಹಾಸ ಪರಿಚಯ-ಎಸ್.ಎಲ್.ಗೌಡ, ತಾಳ್ಯ, ’ಹನುಮ ಬಂಧು’,’ವಜ್ರಮಹೋತ್ಸವ ಸ್ಮರಣ ಸಂಚಿಕೆ’, ಪುಟ, ೩೮-೩೯