ಜಯಕರ್ ಜರೋಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಯಕರ್ ಜರೋಂ, ೧೯೮೩ರ ಬ್ಯಾಚ್ ನ ಕರ್ನಾಟಕ ಕೇಡರ್ ನ ಐ.ಎ.ಎಸ್ ಅಧಿಕಾರಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ)ದ ೧೯೯೯ರಿಂದ ೨೦೦೨ರ ವರೆಗೆ ಆಯುಕ್ತರಾಗಿದ್ದರು. ಬೆಂಗಳೂರು ರಿಂಗ್ ರಸ್ತೆ, ಕೆರೆಗಳ ಹೂಳು ಎತ್ತುವಿಕೆ ಮತ್ತು ಪುನರ್ರುಜ್ಜೀವನ, ಫ಼್ಲೈ ಓವರ್ ಗಳ ನಿರ್ಮಾಣ ಇವೇ ಮುಂತಾದ ಅಭಿವೃದ್ಧಿ ಕಾರ್ಯಗಳಿಂದ ಬೆಂಗಳೂರು ನಗರದ ಸಾರಿಗೆ ಮತ್ತು ಸಂಚಾರಗಳನ್ನು ಸುಗಮಗೊಳಿಸಿದ ಶ್ರೇಯ ಜರೋಂರದ್ದು. ಸರ್ಕಾರದ ಅನುದಾನವಿಲ್ಲದೆ, ಬಿ.ಡಿ.ಎ ಬಾಂಡ್ ಗಳ ನೆರವಿನಿಂದ ಇವನ್ನೆಲ್ಲಾ ಮಾಡಿದ್ದು ಜರೋಂರ ಹೆಗ್ಗಳಿಕೆ. ೨೦೧೦ರಿಂದ ೨೦೧೩ರವರೆಗೆ ಸ್ಲೊವೇನಿಯ ದೇಶಕ್ಕೆ ಭಾರತದ ರಾಯಭಾರಿಯಾಗಿದ್ದರು. ೨೦೦೬ರಲ್ಲಿ ನಿವೃತ್ತಿ ಹೊಂದಿದ ಜರೋಂ, ೨೦೦೮ರಲ್ಲಿ ಪುರುವಂಕರ ನಿರ್ಮಾಣ ಸಂಸ್ಥೆಯ ಸಲಹೆಗಾರರಾಗಿ ಸೇರಿಕೊಂಡರು.

ಹುಟ್ಟು[ಬದಲಾಯಿಸಿ]

ಬೆಂಗಳೂರಿನ ರಿಚರ್ಡ್ಸ್ ಟೌನ್ ನಲ್ಲಿ ಬೆಳೆದ ಜರೋಂ, ಪತ್ರಕರ್ತರಾಗುವ ಆಸೆ ಹೊತ್ತಿದ್ದರು.ಎಂ ಎಸ್ ಡಬ್ಲು ಪದವಿ ಪಡೆದು, ಸರ್ಕಾರಿ ನೌಕರಿಗೆ ಸೇರಿದರು.

ಸರ್ಕಾರೀ ಸೇವೆ (ಕಿರು ವಿವರ)[ಬದಲಾಯಿಸಿ]

ಪ್ರೊಬೇಷನರಿ ಅಧಿಕಾರಿ, ರಾಯಚೂರು

ಕಾರ್ಮಿಕ ಕಲ್ಯಾಣ ಇಲಾಖೆ

ಹಾಸನ ಜಿಲ್ಲೆ ಪ್ರಾದೇಶಿಕ ಆಯುಕ್ತ

ಬಿಡಿಎ ಆಯುಕ್ತ (೧೯೯೯-೨೦೦೨)

ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ

ಸ್ಲೊವೇನಿಯಾ ದೇಶದ ಭಾರತೀಯ ರಾಯಭಾರಿ

ಹಿರಿಮೆ[ಬದಲಾಯಿಸಿ]

೧೯೭೪ರಲ್ಲಿ ರಾಜ್ಯ ಸರ್ಕಾರದ ಸೇವೆಗೆ ನಿಯುಕ್ತಿಗೊಂಡ ಜರೋಂ, ೧೯೮೩ರಲ್ಲಿ ಐ.ಎ.ಎಸ್ ಗೆ ಆಯ್ಕೆಗೊಂಡರು. ಬಹುಕಾಲ ರಾಜ್ಯಪಾಲರ ಆಡಳಿತದಲ್ಲಿ ಕೆಲಸ ಮಾಡಿದ ಜರೋಂ, ೧೯೯೯ರಲ್ಲಿ ಎಸ್ ಎಂ ಕೃಷ್ಣರ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ)ದ ಆಯುಕ್ತರಾದರು. ತಮ್ಮ ಮುಂಚಿನ ಆಯುಕ್ತ ಡಾ ಎ ರವೀಂದ್ರ ಸಂಗ್ರಹಿಸಿದ್ದ ಬಿ.ಡಿ.ಎ ಮುನಿಸಿಪಲ್ ಬಾಂಡ್ ಗಳನ್ನು ಬಳಸಿ ಬೆಂಗಳೂರು ರಿಂಗ್ ರಸ್ತೆ, ಕೆರೆಗಳ ಹೂಳು ಎತ್ತುವಿಕೆ ಮತ್ತು ಪುನರ್ರುಜ್ಜೀವನ, ಫ಼್ಲೈ ಓವರ್ ಗಳ ನಿರ್ಮಾಣ ಇವನ್ನು ಕೈಗೊಂಡರು.
ಸರ್ಕಾರದ ಅನುದಾನ, ಪ್ಯಾಕೇಜ್ ಗಳನ್ನು ಬಳಸದೆಯೇ ಈ ಎಲ್ಲಾ ಕಾಮಗಾರಿಗಳನ್ನು ಕ್ಷಿಪ್ರವಾಗಿ ಮುಗಿಸಿದ ಹಿರಿಮೆ ಜರೋಂರದ್ದು.

ನೌಕರರಿಗೆ ಸಂಬಳ ನೀಡಲು ಕಾರ್ನರ್ ನಿವೇಶನಗಳನ್ನು ಹರಾಜು ಹಾಕುತ್ತಿದ್ದ ಬಿ.ಡಿ.ಎ, ಜರೋಂರ ಅವಧಿಯಲ್ಲಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿ, ಬಹುಮೌಲ್ಯದ ಸ್ವತ್ತುಗಳನ್ನು ಹಿಂಪಡೆಯಿತು. ಕರ್ನಾಟಕ ಸರ್ಕಾರದ ಬಾಂಡ್ ಗಳಿಗಿಂತಲೂ ಹೆಚ್ಚಿನ ಮೌಲ್ಯದ AAA+ ರೇಟಿಂಗ್ ಅನ್ನು ಬಿಡಿಎ ಪಡೆದುಕೊಂಡದ್ದು ಜರೋಂರ ಕಾಲದಲ್ಲಿ ನಡೆದ ವಿಶೇಷ ಘಟನೆ.
ಬನಶಂಕರಿ ೬ ಹಂತ, ಅಂಜನಾಪುರ ಬಡಾವಣೆ, ವಿಶ್ವೇಶರಯ್ಯ ಬಡಾವಣೆ, ಜೆಪಿ ನಗರ ೭ ಹಂತ ಮತ್ತು ಬನಶಂಕರಿ ೬ ಹಂತದ ಮುಂದುವರೆದ ಭಾಗ, ಹೀಗೆ ೫ ಹೊಸ ಬಿ.ಡಿ.ಎ ಬಡಾವಣೆಗಳಲ್ಲಿ ೫೦೦೦ ನಿವೇಶನಗಳನ್ನು ಜರೋಂ ಅವಧಿಯಲ್ಲಿ ಹಂಚಲಾಯಿತು.

ಟೀಕೆ[ಬದಲಾಯಿಸಿ]

  • ನೆಲಗಳ್ಳರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಜರೋಂ, ನಿವೃತ್ತಿಯ ನಂತರ ಸ್ಥಿರಾಸ್ಥಿ ಸಂಸ್ಥೆಯಾದ ಪುರುವಂಕರಕ್ಕೆ ಸಲಹೆಗಾರರಾಗಿ ಸೇರಿದ್ದು, ಟೀಕೆಗೆ ಒಳಗಾಯಿತು. ನಿವೃತ್ತಿಯ ೨ ವರ್ಷದ ನಂತರ ಸೇರಿದರೂ, ಜರೋಂ ಪತ್ರಕರ್ತರ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳಿಂದ ಉನ್ನತ ನಡೆ ನಿರೀಕ್ಷಿಸುವವರಿಂದ ಟೀಕೆಗೆ ಗುರಿಯಾದರು.
  • ಎಸ್ ಎಂ ಕೃಷ್ಣರ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ)ದ ಮೂಲಕ ನೀಡಲಾದ ಜಿ ಕೆಟಗರಿ (ಮುಖ್ಯಮಂತ್ರಿಗಳ ಸ್ವ-ವಿವೇಚನೆಯಿಂದ ನೀಡಲಾಗುವ ಉಚಿತ ನಿವೇಶನಗಳು) ನಿವೇಶನಗಳನ್ನು ಹಲವು ಮಂದಿ ಪ್ರಭಾವಿ ಪತ್ರಕರ್ತರು ಮತ್ತಿತರರು ಪಡೆದರು. ಇದರಲ್ಲಿ ಬಹುತೇಕವು ಹೆಚ್ ಎಸ್ ಆರ್ ಬಡಾವಣೆಯವು. ಕೃಷ್ಣರ ಈ ನಡೆಗೆ ಜರೋಂ ಕೂಡಾ ಒತ್ತಾಸೆಯಾಗಿದ್ದರು ಎಂಬುದು ಟೀಕೆ.
  • ಬಿ.ಡಿ.ಎ ನಿವೇಶನಗಳನ್ನು ನಿರ್ಮಿಸಲು, ಬೆಂಗಳೂರು ಸುತ್ತಲ ಕೆರೆಗಳು ಮತ್ತು ಕೃಷಿಭೂಮಿಯನ್ನು ನಗರಕೇಂದ್ರಿತ ವ್ಯವಸ್ಥೆಗೆ ಅಣಿಯಾಗುವಂತೆ ರೂಪಿಸಿದ ಜರೋಂರ ನಡೆಯು, ಕೃಷಿಕೇಂದ್ರಿತ ವ್ಯವಸ್ಥೆಯನ್ನು ಒಪ್ಪುವ ವರ್ಗಕ್ಕೆ ಸರಿಬರಲಿಲ್ಲ.

ಉಲ್ಲೇಖ[ಬದಲಾಯಿಸಿ]