ಚಿತ್ರಮೂಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರಮೂಲ

ಚಿತ್ರ ಮೂಲ[ಬದಲಾಯಿಸಿ]

ಸಂ:ಚಿತ್ರಕ

ಹಿಂ:ಚೀತ

ಮ:ಚಿತ್ರಮೂಲ್

ಗು:ಚಿತ್ರೋ

ತೆ:ತೆಲಚಿತ್ರ

ತ:ಚತ್ತಿರ್

ವರ್ಣನೆ[ಬದಲಾಯಿಸಿ]

ಚಿತ್ರಮೂಲವು ಸಣ್ಣ ಪೊದೆ, ಬುಡದಿಂದಲೇ ಹಲವು ಕವಲುಗಳು ಹೊರಟು ಹಸುರೆಲೆಗಳಿಂದ ಕೂಡಿರುವುವು, ಹೂವು ಬಿಳಿಯವು, ಇದರಲ್ಲಿ ಹಲವಾರು ತರಹಗಳಿವೆ. ಕೆಂಪು, ನೀಲಿ, ಹಳದಿ, ಪುಷ್ಪಗಳನ್ನು ಬಿಡುವ ಚಿತ್ರಮೂಲಗಳಿವೆ. ಸಾಮಾನ್ಯವಾಗಿ ಬಿಳೀ ಹೂವಿನದೆ ಹೆಚ್ಚಾಗಿ ಕಾಣಲು ಸಿಗುವುದು. ಎಲೆಗಳು ಎದುರು ಬದುರು ಎಲೆಗಳ ತೊಟ್ಟು ಕವಲಿಗೆ ಅಂಟಿಕೊಂಡಿರುವುದು. ಕವಲಿನ ತುದಿಯಲ್ಲಿ ಹೂವಿನ ಗುಚ್ಚವಿರುವುದು. ಹೂ ಗೊಂಚಲಿನ ಉದ್ದಕ್ಕೂ ಅಂಟು ಅಂಟಾದ ರೋಮಗಳಿರುವುವು. ಬೇರುಗಳು ಆಳವಾಗಿ ಭೂಮಿಯಲ್ಲಿ ಇಳಿದಿರುವುವು ಮತ್ತು ಗಟ್ಟಿಯಾಗಿರುವುವು. ಕಂದು ಬಣ್ಣ ಹೊಂದಿರುವುವು. ಸಣ್ಣ ಸಣ್ಣ ಸಪೂರಾದ ಕಾಯಿಗಳಿರುವುವು. ಹೂವಿನಲ್ಲಿ ಐದು ದಳಗಳಿರುವುವು. ಹಳ್ಳಿಯ ಹೆಣ್ಣು ಮಕ್ಕಳು ಈ ಹೂವನ್ನು ಓಲೆಯಂತೆ ಕಿವಿಗಳಿಗೆ ಧರಿಸುವರು. ರಸಾಯನಿಕವಾಗಿ ಇದರಲ್ಲಿ ‘ಪ್ಲಂಬ್ಯಾಗಿನ್’ ಅನ್ನುವ ಹಳದಿ ಅಂಟಿರುವುದು ಮತ್ತು ಘಾಟಿನ ವಾಸನೆಯಿರುವುದು.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ನೂತಿ, ಕೊಳೆಯುತ್ತಿರುವ ಹುಣ್ಣುಗಳು[ಬದಲಾಯಿಸಿ]

ದುರ್ನಾತದಿಂದ ಕೂಡಿದ ವ್ರಣಗಳಲ್ಲಿ ವಿಷಾಣುಗಳನ್ನು ನಾಶಪಡಿಸುವ ಶಕ್ತಿ ಈ ಮೂಲಿಕೆಗಿದೆ. ಚಿತ್ರಮೂಲದ ಬೇರನ್ನು ನಿಂಬೆರಸದಲ್ಲಿ ತೇದು ಹಚ್ಚುವುದು. ಔಷಧ ಹಚ್ಚುವ ಮೊದಲು ತ್ರಿಫಲದ ಕಷಾಯದಲ್ಲಿ ಹುಣ್ಣನ್ನು ತೊಳೆದು ಶುದ್ಧಿಮಾಡುವುದು. ಈ ಔಷಧಿಯನ್ನು ಹಚ್ಚುವುದಕ್ಕೆ ಮೊದಲು ತ್ರಿಫಲ ಚೂರ್ಣವನ್ನು ದಿವಸಕ್ಕೆ ಒಂದು ವೇಳೆ ಕಾಲು (1/4) ಟೀ ಚಮಚ ಸೇವಿಸುವುದು.

ವಾಯು ನೋವು, ಕೀಲು ನೋವು, ಸೊಂಟ ನೋವು ಮತ್ತು ಬೆನ್ನು ನೋವಿಗೆ[ಬದಲಾಯಿಸಿ]

ಚಿತ್ರಮೂಲದ ಬೇರುಗಳನ್ನು ನುಣ್ಣಗೆ ಚೂರ್ಣಿಸಿ, ಎಳ್ಳೆಣ್ಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ, ತಣ್ಣಗಾದ ಮೇಲೆ ಎಣ್ಣೆಯನ್ನು ಶೋಧಿಸಿಕೊಂಡು, ನೋವಿರುವ ಜಾಗದಲ್ಲಿ ಹಚ್ಚುವುದು. ಪ್ರಮಾಣ : 25 ಗ್ರಾಂ ಚಿತ್ರಮೂಲದ ಬೇರು, ಅದಕ್ಕೆ ಕಾಲು(1/4) ಲೀಟರು ಎಳ್ಳಣ್ಣೆ ಹಾಕಿ ಕಾಯಿಸುವುದು.

ಅಜೀರ್ಣ, ಮಂದಾಗ್ನಿ, ಹೊಟ್ಟೆ ನೋವು[ಬದಲಾಯಿಸಿ]

ಶುದ್ಧಿ ಮಾಡಿದ ಚಿತ್ರಮೂಲ, ಸೈಂಧವ ಲವಣ, ಶುಂಠಿ, ಹಿಪ್ಪಲಿ, ಮೋಡಿ, ಹಿಂಗು, ಓಮ, ಚವ್ಯ, ಬಿದುರುಪ್ಪು, ಸಜ್ಜೆಕಾರ, ಅಡಿಗೆ ಉಪ್ಪು, ಸಮಪ್ರಮಾಣ ಸೇರಿಸಿ ಚೆನ್ನಾಗಿ ಜಜ್ಜಿ, ಕುಟ್ಟಿ, ನಯವಾಗಿ ಚೂರ್ಣ ಮಾಡಿಕೊಳ್ಳುವುದು. ದಾಳಿಂಬೆ ಹಣ್ಣಿನ ರಸದಲ್ಲಿ ಚೆನ್ನಾಗಿ ಮಸೆದು, ಕಡಲೆ ಗಾತ್ರದ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ಪ್ರತಿದಿವಸ 3-4 ಮಾತ್ರೆಗಳನ್ನು ಸೇವಿಸಿ ನೀರು ಕುಡಿಯುವುದು.

ಚಿತ್ರಮೂಲದ ಶುದ್ಧಿ[ಬದಲಾಯಿಸಿ]

ಬೇರು ಮತ್ತು ತಿರುಳುಗಳನ್ನು, ಸುಣ್ಣದ ತಿಳಿನೀರಿನಲ್ಲಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಹೊರ ತೆಗೆದು ಶುದ್ಧವಾದ ನೀರಿನಲ್ಲಿ ತೊಳೆದು, ಒಣಗಿಸುವುದು. ಹೀಗೆ ಒಂದರೆಡು ಸಾರಿ ಮಾಡುವುದು.

ಅಸಾಧ್ಯ ಸಂಗ್ರಹಣೆಯಲ್ಲಿ[ಬದಲಾಯಿಸಿ]

ಶುದ್ಧಿ ಮಾಡಿದ ಚಿತ್ರಮೂಲ ಮತ್ತು ಸೈಂದ್ರವ ಲವಣಗಳನ್ನು 10-10 ಗ್ರಾಂ ತೂಕ ನಯವಾಗಿ ಚೂರ್ಣಿಸುವುದು. ಒಂದು ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣವನ್ನು ಹಸುವಿನ ಮಜ್ಜಿಗೆಯಲ್ಲಿ ಕದಡಿ ಕುಡಿಸುವುದು. ಹೀಗೆ 3-7 ದಿವಸ. ಶುಂಠಿ, ಬಿಲ್ವದ ಹಣ್ಣಿನ ತಿರುಳು, ಶುದ್ಧ ಮಾಡಿದ ಚತ್ರಮೂಲ, ಚವ್ಯ ಸಮತೂಕ ಸೇರಿಸಿ, ಚೆನ್ನಾಗಿ ಜಜ್ಜಿ, ಮಜ್ಜಿಗೆಯಲ್ಲಿ ಅರೆದು, ಸೋಸಿ, ಮತ್ತಷ್ಟು ಮಜ್ಜಿಗೆ ಸೇರಿಸಿ ಪ್ರತಿದಿವಸ ಎರಡು ಬಾರಿ ಸೇವಿಸುವುದು. ಬಹುಕಾಲದಿಂದ ಪೀಡಿಸುವ ಸಂಗ್ರಹಣೆ ವ್ಯಾಧಿಯು ಪರಿಹಾರವಾಗುವುದು. ಒಂದು ಹೊತ್ತಿಗೆ 1/2 ಟೀ ಚಮಚ ಚೂರ್ಣ ಸೇವಿಸುವುದು.

ತಲೆಯಲ್ಲಿ ಹುಣ್ಣು[ಬದಲಾಯಿಸಿ]

ಚಿತ್ರಮೂಲದ ಬೇರನ್ನು ನೀರಿನಲ್ಲಿ ತೇದು ಹುಣ್ಣುಗಳಿಗೆ ಹಚ್ಚುವುದು, ಜೊಲ್ಲು ರಸದಲ್ಲಿ ಸಹ ತೇದು ಹಚ್ಚಬಹುದು. ಸ್ವಲ್ಪ ಉರಿಯಾಗುವುದು. ಕೆಟ್ಟ ಹುಣ್ಣು, ಬೆನ್ನು ಪಣಿ, ರಾಜ ಹುಣ್ಣು ಮತ್ತು ಕ್ಯಾನ್ಸರ್ ಗಡ್ಡೆ ಅಥವಾ ಹುಣ್ಣುಗಳಿಗೆ ಚಿತ್ರಮೂಲದ ಬೇರನ್ನು ನಿಂಬೆ ಹಣ್ಣಿನ ರಸದಲ್ಲಿ ತೇದು ಹಚ್ಚುವುದು. ತಜ್ಞರ ಮೇಲ್ವಿಚಾರಣೆಯಲ್ಲಿ ಈ ಉಪಚಾರ ನೀಡುವುದು.

ಮೂಲವ್ಯಾಧಿಯಲ್ಲಿ[ಬದಲಾಯಿಸಿ]

ಚಿತ್ರಮೂಲದ ಬೇರನ್ನು ಜೊಲ್ಲಿನ ರಸದಲ್ಲಿ ತೇದು ಮೂಲದ ಮೂಳೆಗಳಿಗೆ ಹಚ್ಚುವುದು. ಚಿತ್ರಮೂಲದ ಬೇರನ್ನು ನೀರಿನಲ್ಲಿ ತೇದು ಮಣ್ಣಿನ ಮಡಿಕೆ ಒಳಭಾಗದಲ್ಲಿ ಲೇಪಿಸುವುದು. ನಂತರ ಮಣ್ಣಿನ ಮಡಿಕೆಯಲ್ಲಿ ಮಜ್ಜಿಗೆಯನ್ನು ಹಾಕಿ ಇಡುವುದು (10ತಾಸು) ದಿವಸಕ್ಕೆ 4-5 ಬಾರಿ ಕುಡಿಸುವುದು. ಶುದ್ಧ ಚಿತ್ರಮೂಲ, ಅಳಲೆಕಾಯಿಸಿಪ್ಪೆ, ಶುಂಠಿ 10-10 ಗ್ರಾಂ ಚೆನ್ನಾಗಿ ಜಜ್ಜಿ, ಕಷಾಯವನ್ನು ಮಾಡುವುದು. ಈ ಕಷಾಯಕ್ಕೆ, ಸ್ವಲ್ಪ ಯವಕ್ಷಾರ ಸೇರಿಸಿ, ಪ್ರತಿನಿತ್ಯ ಎರಡು ವೇಳೆ ಸೇವಿಸುವುದು. ಪ್ರಮಾಣ 4 ಟೀ ಚಮಚ.

ಪಾಂಡು ರೋಗ, ಕೆಮ್ಮು, ಉಬ್ಬಸ, ಎಳವು ನಿವಾರಣೆ[ಬದಲಾಯಿಸಿ]

ಚಿತ್ರಮೂಲದ ತೊಕ್ಕು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ, ತಾರೆಕಾಯಿ ಸಿಪ್ಪೆ, ಮೆಣಸು, ವಾಯುವಿಳಂಗ, ಸೈಂದವ ಲವಣ ಸಮತೂಕ ಸೇರಿಸಿ, ನುಣ್ಣಗೆ ಚೂರ್ಣಿಸುವುದು. ಇದರಲ್ಲಿ ಅರ್ಧ ಟೀ ಚಮಚ ಚೂರ್ಣವನ್ನು ನೀರಿನೊಂದಿಗೆ ಸೇವಿಸುವುದು. ಜೀರ್ಣಶಕ್ತಿ ಹೆಚ್ಚಿ, ಮೈಕಾಂತಿ ವೃದ್ಧಿಯಾಗುದು.

ಉಲ್ಲೇಖ[ಬದಲಾಯಿಸಿ]

ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್

ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು