ಹುಣಸೆಹೊಂಡ ವೆಂಕಟರಮಣಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋದೆ ಉತ್ತರ ಕನ್ನಡ ಜಿಲ್ಲೆ ಸಿರ್ಸಿ ಬಳಿ ಇರುವ ಪವಿತ್ರ ಪುಣ್ಯಕ್ಷೇತ್ರ. ಈ ಊರಿನ ಬಳಿ ಇರುವ ಹುಣಸೆಹೊಂಡದ ವೆಂಕಟರಮಣ ದೇವಾಲಯ ಅತ್ಯಂತ ಮನಮೋಹಕವಾದದ್ದು. ಈ ದೇವಾಲಯವನ್ನು ವೃದ್ಧರೊಬ್ಬರು ಹುಣಸೆ ಹಣ್ಣು ಮಾರಿದ ಹಣದಿಂದ ಕಟ್ಟಿಸಿದರೆಂದು ಹೇಳಲಾಗುತ್ತದೆ. ಈ ದಂತಕತೆಗೆ ಯಾವುದೇ ಆಧಾರಗಳಿಲ್ಲ. ಇತಿಹಾಸಜ್ಞರ ಪ್ರಕಾರ ಈ ಸುಂದರ ದೇವಾಲಯವನ್ನು ಮಧುಲಿಂಗನಾಯಕ 1672ರ ಅವಧಿಯಲ್ಲಿ ಕಟ್ಟಿಸಿರುವನೆಂದು ಹೇಳುತ್ತಾರೆ.

ಸುಂದರ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಬೇಲೂರು- ಹಳೇಬೀಡಿನ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿದೆ. ದೇವಾಲಯದ ವಾಸ್ತು ಶಿಲ್ಪ ವಿಜಯನಗರ ಮತ್ತು ಹೊಯ್ಸಳ ಶೈಲಿಯಿಂದ ಕೂಡಿದೆ. ದೇಗುಲದ ಗೋಪುರ ಕದಂಬನಾಗರ ಶೈಲಿಯಲ್ಲಿದ್ದು ಚಿಕ್ಕದಾಗಿದೆ.

ಪ್ರದಕ್ಷಣ ಪಥ ಸುತ್ತಿ ಸಭಾಮಂಟಪ ಪ್ರವೇಶಿಸಿದರೆ, ಸುಂದರ ಹಾಗೂ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ 12 ಕಂಬಗಳು ನೋಡುಗರ ಮನಸೆಳೆಯುತ್ತವೆ. ಇದಲ್ಲದೆ ಇಲ್ಲಿ 6 ಅರೆ ಕಂಬಗಳೂ ಇವೆ.

ಸುಂದರ ಹಾಗೂ ಮನಮೋಹಕವಾದ ಕೆತ್ತನೆಗಳಿಂದ ಕೂಡಿ ಆಕರ್ಷಿಸುವ ಈ ಕಂಬಗಳನ್ನು ಆಧರಿಸಿರುವ ನವರಂಗದ ಛಾವಣಿಗಳಲ್ಲಿ ಕೂಡ ಕಲಾತ್ಮಕವಾದ ಕೆತ್ತನೆಗಳಿವೆ. ಮಧ್ಯದಲ್ಲಿರುವ ಭುವನೇಶ್ವರಿಯಲ್ಲಿರುವ ಚಕ್ರಾಕಾರದ ಕಮಲಪುಷ್ಪ ಆಕರ್ಷಕ.

ಭಿತ್ತಿಗಳಲ್ಲಿ ಮತ್ತು ಛಾವಣಿಯಲ್ಲಿ ವಿಷ್ಣು ಭೂಮಿಯಲ್ಲಿ ಎತ್ತಿದ ಅವತಾರ, ಆಂಜನೇಯ, ಗಣೇಶ, ಮಹಿಷಾಸುರ ಮರ್ದಿನಿಯ ಶಿಲ್ಪಗಳಿವೆ.

ಪ್ರಧಾನ ಗರ್ಭಗುಡಿಯ ಮುಂಭಾಗದಲ್ಲಿ ಸ್ತ್ರೀದ್ವಾರಪಾಲಕರ ಮೂರ್ತಿಗಳಿರುವುದು ವಿಶೇಷ. ಗರ್ಭಗೃಹದಲ್ಲಿರುವ ವೆಂಕಟರಮಣನ ವಿಗ್ರಹ ಮೋಹಕವಾಗಿದೆ. ಶಂಖಚಕ್ರಧಾರಿಯಾದ ವೆಂಕಟರಮಣನ ಹಿಂದಿರುವ ಶಿಲಾ ಪ್ರಭಾವಳಿಯಲ್ಲಿ ಸುಂದರ ಶಿಲ್ಪಗಳಿವೆ. ಕಿರೀಟದಲ್ಲಿರುವ ಹಾಗೂ ಶಂಖ, ಚಕ್ರಗಳಲ್ಲಿರುವ ಸೂಕ್ಷ್ಮ ಕೆತ್ತನೆ ಮನಸೆಳೆಯುತ್ತದೆ. ದೇವಾಲಯದ ಹೊರ ಭಿತ್ತಿಗಳು ಕೂಡ ಮನಮೋಹಕವಾಗಿದ್ದು ಭಿತ್ತಿಗಳಲ್ಲಿ ಆನೆಗಳ ಸಾಲು, ಟಗರು ಕಾಳಗ, ಕುದುರೆ, ಒಂಟೆ, ಲತೆ, ಮಂಗ ಮೊದಲಾದ ಶಿಲ್ಪಾಲಂಕರಣಗಳಿವೆ. ನಾಟ್ಯವಾಡುತ್ತಿರುವ ಮತ್ತು ವಾದ್ಯ ಹಿಡಿದ ಶಿಲಾಬಾಲಕಿಯರ ಚಿತ್ರಣವೂ ಇಲ್ಲಿದೆ.