ಅರವಿಂದ್, ಜಿ. ಸವುರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರವಿಂದ್, ಜಿ. ಸವುರ್ : (೧೯೪೧-). ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರ. ೧೯೪೧ ಡಿಸೆಂಬರ್ ೧೭ರಂದು ಮುಂಬಯಿಯಲ್ಲಿ ಜನಿಸಿದರು. ಬೆಂಗಳೂರನ ಸೇಂಟ್ ಜೋಸೆಫ್ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಕ್ರೀಡೆಯಲ್ಲಿ ಆಸಕ್ತಿ ತಳೆದು ೧೯೪೭ರಲ್ಲಿ ಟೇಬಲ್ ಟೆನ್ನಿಸ್ ಆಟದಲ್ಲಿ ಕಿರಿಯರ ರಾಷ್ಟೀಯ ಟೇಬಲ್ ಚಾಂಪಿಯನ್‍ಷಿಪ್ ಸ್ವರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದರು . ಅನಂತರ ಇವರು ಬಿಲಿಯರ್ಡ್ಸ್ ಗೆ ಒಲಿದರು. ಆ ಕ್ರೀಡೆಯ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ ಸೆಣಸಿದರು. ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ೧೯೬೦ರಲ್ಲಿ ಪ್ರತಿನಿಧಿಸಿದರು. ಅನಂತರ ನಿರಂತರವಾಗಿ ೧೯೬೬ರ ತನಕ ರಾಷ್ಟ್ರೀಯ ಹಾಗೂ ಅಂತರರಾಷ್ಟೀಯ ಪಂದ್ಯಾವಳಿ ಗಳಲ್ಲಿ ರಾಜ್ಯದ ಪ್ರತಿನಿಧಿಯಾಗಿದ್ದರು. ೧೯೭೫-೮೭ರ ತನಕ ಕರ್ನಾಟಕ ರಾಜ್ಯ ತಂಡದ ನಾಯಕರಾಗಿದ್ದರು. ಸವುರ್ ಅವರ ದೇಹದ ತೂಕ ಹಾಗೂ ನಿಲವು ಬಿಲಿಯರ್ಡ್ಸ್ ಆಟಗಾರರಿಗೆ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ ಬಿಲಿಯರ್ಡ್ಸ್ಆಟಕ್ಕೆ ಸರಿ ತೂಗದ ಆಕೃತಿ ಇವರದು. ಇವರನ್ನು ೧೯೬೭ರಲ್ಲಿ ರಾಷ್ಟ್ರೀಯ ಚಾಂಪಿಯನ್ ಎಂದು ಘೋಷಿಸಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ೧೯೭೬ರ ತನಕ ಇವರು ಸ್ನೂಕರ್ ಆಟದಲ್ಲಿ ಪ್ರಮುಖ ಸ್ಥಾನ ಗಳಿಸಿದ್ದೊಂದು ವೈಶಿಷ್ಟ್ಯ. ೧೯೭೬ರಲ್ಲಿ ಇವರು ರಾಷ್ಟ್ರೀಯ ಸ್ನೂಕರ್ ಚಾಂಪಿಯನ್ ಎನಿಸಿಕೊಂಡರು. ೧೯೭೨ರಲ್ಲಿ ಇಂಗೆಂಡಿನ ವೇಲ್ಸ್ ನಲ್ಲಿ ನಡೆದ ಪ್ರಥಮ ವಿಶ್ವ ಚಾಂಪಿಯನ್ ನಲ್ಲಿ ಭಾಗವಹಿಸಿಸಿದರು . ೧೯೮೦ರ ವಿಶ್ವವ ಚಾಂಪಿಯನ್‍ಷಿಪ್‍ನಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ತಲಪಿದರು. ಇದಲ್ಲದೆ ೧೯೭೪ ಹಾಗೂ ೭೮ರಲ್ಲಿ ಐರ್ಲೆಂಡ್ ಹಾಗೂ ಮಾಲ್ಟದಲ್ಲಿ ನಡೆದ ವಿಶ್ವ ಚಾಂಪಿಯನ್‍ಷಿಪ್ ಪಂದ್ಯಗಳಲ್ಲೂ ಇವರು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದರು. ಇವರು ಭಾರತೀಯ ರೈಲ್ವೆ ವಿಭಾಗದ ಕ್ರೀಡಾಪಟುವಾಗಿ ೧೯೬೮ರಲ್ಲಿ ಅತ್ಯುತ್ತಮ ರೈಲ್ವೆ ಕ್ರೀಡಾಪಟು ಎನಿಸಿಕೊಂಡರು. ಇವರು ಆಟಗಾರರಷ್ಟೇ ಅಲ್ಲದೆ ಭಾರತದ ಮುಖ್ಯ ತರಬೇತುದಾರರಾಗಿ ಮಾಧ್ಯಮದ ನಿರ್ವಾಹಕರಾಗಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‍ಷಿಪ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಖಿಲ ಭಾರತ ವೃತ್ತಿನಿರತ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಸಂಘದ ಕಾರ್ಯದರ್ಶಿಯಾಗಿಯೂ ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷ ರಾಗಿಯೂ ಇದ್ದರು. ೧೯೯೮ರ ಬ್ಯಾಂಕಾಕ್ ಏಷ್ಯನ್ ಕ್ರೀಡೆಗಳಲ್ಲಿ ಭಾಗªಹಿಸಿದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ತಂಡದ ಮುಖ್ಯ ತರಬೇತುದಾರರಾಗಿ ೧ ಚಿನ್ನ, ೧ ಬೆಳ್ಳಿ ಹಾಗೂ ೪ ಕಂಚಿನ ಪದಕವನ್ನು ಭಾರತ ತಂಡ ಪಡೆಯಲು ನೆರವಾಗಿದ್ದಾರೆ. ವಿಶ್ವ ಬಿಲಿಯರ್ಡ್ಸ್ ಕ್ರೀಡಾಗಾರರ ಬೆಳವಣಿಗೆಗೆ ಸ್ಫೂರ್ತಿ ದೊರಕಿಸಿಕೊಟ್ಟಿದ್ದಾರೆ. ಇವರು ಉತಮ ಬರಹಗಾರರೂ ಕ್ರೀಡಾ ವಿಮರ್ಶಕರೂ ಆಗಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತವ ಪ್ರಶಸ್ತಿ (೧೯೮೨) ಏಕಲವ್ಯ ಪ್ರಶಸ್ತಿ (೧೯೯೩) ಲಭಿಸಿವೆ. ಭಾರತ ಸರ್ಕಾರ ಇವರಿಗೆ ಅರ್ಜುನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ (೧೯೭೮-೭೯). (ಎಸ್.ಆರ್.ಯು.)