ಸತ್ಯಕಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತ್ಯಕಾಮ ಎನ್ನುವ ಕಾವ್ಯನಾಮದಲ್ಲಿ ಖ್ಯಾತರಾದ ಶ್ರೀ ಅನಂತ ಕೃಷ್ಟಾಚಾರ್ಯ ಶಹಪೂರ ಇವರು ಬಾಗಲಕೋಟೆ ಜಿಲ್ಲೆಯಲ್ಲಿರುವ ಬೀಳಗಿ ತಾಲೂಕಿನ ಗಲಗಲಿ ಗ್ರಾಮದವರು. ಇವರು ಹುಟ್ಟಿದ್ದು ೧೯೨೦ ಎಪ್ರಿಲ್ ೧೬ ರಂದು ತಮ್ಮ ತಾಯಿ ರುಕ್ಮಿಣಿಯವರ ತವರೂರಾದ ಜಮಖಂಡಿಯ ಹತ್ತಿರವಿರುವ ಮೈಗೂರು ಎನ್ನುವ ಗ್ರಾಮದಲ್ಲಿ . ೧೯೩೪ರವರೆಗೆ ಇವರ ಶಿಕ್ಷಣ ಗಲಗಲಿಯಲ್ಲಿಯೆ ಆಯಿತು. ಮುಲ್ಕಿ ಪರಿಕ್ಷೆ ಉತ್ತೀರ್ಣರಾದ ಬಳಿಕ ಒಂದು ವರ್ಷ ಗಲಗಲಿಯಲ್ಲಿ ಖಾಲಿ ಕಳೆದರು. ೧೯೩೫ರಲ್ಲಿ ಬಾಗಿಲುಕೋಟೆಯ ಸಕ್ರಿ ಹೈಸ್ಕೂಲಿನಲ್ಲಿ ಮುಂದಿನ ಶಿಕ್ಷಣಕ್ಕಾಗಿ ಸೇರಿಕೊಂಡರು. ಆದರೆ ಓದು ಮುಂದುವರಿಸದೆ ಅಲ್ಲಿಗೆ ನಿಲ್ಲಿಸಿಬಿಟ್ಟರು.

ಸಾಮಾಜಿಕ ಹಾಗು ಸಾಂಸ್ಕೃತಿಕ ಚಟುವಟಿಕೆಗಳು[ಬದಲಾಯಿಸಿ]

೧೯೩೦-೩೧ರಲ್ಲಿ ಭಾರತದಲ್ಲೆಲ್ಲ ಉಪ್ಪಿನ ಸತ್ಯಾಗ್ರಹ ಪ್ರಖರವಾಗಿ ನಡೆದಿತ್ತು. ಬಾಲಕ ಅನಂತ (ಇವನಿಗೆ ‘ ಬಾಬು ’ ಎನ್ನುವದು ಪ್ರೀತಿಯ ಹೆಸರು) ಐದನೆಯ ತರಗತಿಯಲ್ಲಿ ಕಲಿಯುತ್ತಿದ್ದ. ತನ್ನ ಶಾಲೆಯ ೨೦-೨೫ ವಿದ್ಯಾರ್ಥಿಗಳನ್ನು ಕೂಡಿಸಿ ಮೆರವಣಿಗೆ ಪ್ರಾರಂಭಿಸಿದ. ಪೋಲೀಸರು ಬಂಧಿಸಿದರು. ಕ್ಷಮೆ ಕೇಳಲು ಸಿದ್ಧನಿಲ್ಲದ ಹುಡುಗನಿಗೆ ೫ ಫಟಕಿಯ ಶಿಕ್ಷೆ ಆಯಿತು!

೧೯೪೦ರಲ್ಲಿ 'ಜೀವನ ನಾಟ್ಯ ವಿಲಾಸಿ ಸಂಘವನ್ನು ಸ್ಥಾಪಿಸಿ ಎನ್ಕೆ, ಬೇಂದ್ರೆ, ಶ್ರೀರಂಗ ಮೊದಲಾದವರ ನಾಟಕಗಳನ್ನು ಆಡಿದರು.

೧೯೪೩ರಲ್ಲಿ ಧಾರವಾಡದ ಸ್ವಾತಂತ್ರ್ಯ ಹೋರಾಟಗಾರ ಬುರ್ಲಿ ಬಿಂದುಮಾಧವರ ಜೊತೆಗೆ ೬ ತಿಂಗಳು ಕಳೆದು ಬಂದ ಇವರು ಬೀಳಗಿ, ಗಲಗಲಿ, ಬೇವೂರು, ಕಡ್ಲಿಮಟ್ಟಿ, ಬಬಲೇಶ್ವರ, ವಿಜಾಪುರ ಇಲ್ಲೆಲ್ಲ ಭೂಗತ ಚಟುವಟಿಕೆಗಳನ್ನು ನಡೆಯಿಸಹತ್ತಿದರು. ಇವರ ನಾಟ್ಯವಿಲಾಸಿ ಸಂಘದ ಕೆಲ ಗೆಳೆಯರು ಸ್ವಾತಂತ್ರ್ಯಹೋರಾಟದಲ್ಲಿ ಇವರಿಗೆ ಜೊತೆಯಾದರು. ೧೯೪೩ ಜೂನ್ ‍ದಲ್ಲಿ ಪೋಲಿಸರನ್ನು ತಪ್ಪಿಸುತ್ತ ಅಲೆಯುವಾಗ ಉಡುಪಿಯಲ್ಲಿ ಆದಮಾರು ಮಠದ ಸ್ವಾಮಿಯವರಲ್ಲಿ (ಸುಳ್ಳು ಹೆಸರಿನಲ್ಲಿ) ಆಶ್ರಯ ಪಡೆದು ೬ ತಿಂಗಳುಗಳ ವರೆಗೆ ಸಂಸ್ಕೃತ ಅಧ್ಯಯನ ಮಾಡಿದರು.


ಸಾಹಿತ್ಯಸೃಷ್ಟಿ[ಬದಲಾಯಿಸಿ]

ಸತ್ಯಕಾಮರು ೫೦ಕ್ಕೂ ಮಿಕ್ಕಿ ಗ್ರಂಥಗಳನ್ನು ಬರೆದಿದ್ದಾರೆ. ೨-೩ ಕೃತಿಗಳನ್ನು ಬಿಟ್ಟರೆ ಉಳಿದೆಲ್ಲವುಗಳಿಗೂ ಪುರಾಣವಸ್ತುಗಳೇ ಆಧಾರ.

ಅನಂತ ಜೀವನ, ಆಹುತಿ, ಮಾತೃಮಂದಿರ, ಋಷಿಪಂಚಮಿ, ರಾಜಬಲಿ, ಶೃಂಗಾರತೀರ್ಥ, ಲಾವಣ್ಯ, ವಿ-ಪ್ರಯೋಗ, ಪುರುಷಸೂಕ್ತ, ನಾಯಿಮೂಗು, ರಾಜಕ್ರೀಡೆ, ಚಂಡ ಪ್ರಚಂಡ, ಕೃಷ್ಣಾರ್ಪಣ, ಮನ್ವಂತರ, ವಿಚಿತ್ರವೀರ್ಯ, ಪಂಚ ‘ಮ’ ಗಳ ನಡುವೆ .. ಇವು ಇವರ ಕೆಲವು ಕೃತಿಗಳು.


ತಂತ್ರವಿದ್ಯಾ ಪ್ರಯೋಗಗಳು[ಬದಲಾಯಿಸಿ]

ಸತ್ಯಕಾಮರು ೧೯೪೪ರಿಂದ ೧೯೫೬ರವರೆಗೆ ಕೇರಳದಿಂದ ಟಿಬೇಟದ ವರೆಗೆ ಅಲೆದಾಡಿದರು ಈ ಸಮಯದಲ್ಲಿ ಅವರಿಗೆ ತಾಂತ್ರಿಕರ ಪರಿಚಯವು ಅಯಿತು. ಪರಿಣಾಮವಾಗಿ ಸತ್ಯಕಾಮರು ತಾಂತ್ರಿಕ ವಿದ್ಯೆಯನ್ನು ಸಿದ್ಧಿಸಿಕೊಂಡರು. ಇದರ ವಿವರಗಳು “ ಪಂಚ ‘ಮ’ ಗಳ ನಡುವೆ ” ಎನ್ನುವ ಅವರ ಕೃತಿಯಲ್ಲಿ ದೊರೆಯುತ್ತವೆ.


ಕೃಷಿಕರ್ಮ[ಬದಲಾಯಿಸಿ]

೧೯೫೬ರಲ್ಲಿ ಜಮಖಂಡಿಯ ಹತ್ತಿರದ ಕಲ್ಲೊಳ್ಳಿ ಎಂಬ ಹಳ್ಳಿಯಲ್ಲಿ ರಾಜ್ಯಸರಕಾರದಿಂದ ಸ್ವಲ್ಪ ಭೂಮಿಯನ್ನು ಪಡೆದು ಸತ್ಯಕಾಮರು ಬೇಸಾಯ ಮಾಡುವದನ್ನು ಇತರರಿಗೆ ಮಾದರಿಯಾಗುವಂತೆ ಮಾಡಿ ತೋರಿಸಿದರು.

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
"https://kn.wikipedia.org/w/index.php?title=ಸತ್ಯಕಾಮ&oldid=328638" ಇಂದ ಪಡೆಯಲ್ಪಟ್ಟಿದೆ