ಉಡುಪಿ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಡುಪಿ ಇಂದ ಪುನರ್ನಿರ್ದೇಶಿತ)
ಉಡುಪಿ(ಒಡಿಪು)
ಒಡಿಪು
Temple City
ಉಡುಪಿ ಕೃಷ್ಣಮಠ
ಉಡುಪಿ ಕೃಷ್ಣಮಠ
ದೇಶ ಭಾರತ
ರಾಜ್ಯಕರ್ನಾಟಕ
Regionತುಳುನಾಡು
ಜಿಲ್ಲೆಉಡುಪಿ
Government
 • TypeCity Municipal Council
 • Council PresidentDivakar Shetty
Area
 • Total೬೮.೨೩ km (೨೬.೩೪ sq mi)
Elevation
೩೯ m (೧೨೮ ft)
Population
 (2011)[೧][೨]
 • Total೧,೬೫,೪೦೧
 • Density೨,೪೦೦/km (೬,೩೦೦/sq mi)
Time zoneUTC+5:30 (IST)
PIN
576101 (City)
Telephone code0820
Vehicle registrationಕೆಎ ೨೦
Websitewww.udupicity.gov.in
"Udupi - The Temple City"
ಉಡುಪಿಯ ಸಸ್ಯಹಾರಿ ಊಟ
ಉಡುಪಿ ಮಲ್ಲಿಗೆ

ಉಡುಪಿ (Tulu: ಒಡಿಪು) ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಶುದ್ಧವಾದ ವೈಷ್ಣವಮತ ಪ್ರತಿಪಾದಿಸಿದ ತ್ರೈಲೋಕ್ಯಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಶ್ರೀ ವ್ಯಾಸತೀರ್ಥರು, ಶ್ರೀಮದ್ ವಾದಿರಾಜ ತೀರ್ಥರು, ಶ್ರೀರಾಘವೇಂದ್ರ ತೀರ್ಥ ಗುರುರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು ಈ ಎಲ್ಲ ಮಹನೀಯರೂ ಸಹ ಶ್ರೀಮನ್ ಮಧ್ವಾಚಾರ್ಯರನ್ನು ನಿತ್ಯ ಉಪಾಸಿಸುವ, ಅವರ ಅನುಯಾಯಿಗಳೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ತಿತ್ವಕ್ಕೆ ಬಂದಿತು. ಉತ್ತರದ ನಾಲ್ಕು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ಹೆಬ್ರಿಗಳನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಬ್ರಹ್ಮಾವರ ತಾಲೂಕನ್ನು ೨೦೧೮ರಲ್ಲಿ ರೂಪಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೧೧ ರಂತೆ) ೧೧,೭೭,೩೬೧ ಇದರಲ್ಲಿ ೫,೩೨,೧೩೧ ಜನ ಪುರುಷರು ೬,೧೫,೨೩೦ ಮಹಿಳೆಯರು ಇದ್ದಾರೆ.

ಇಲ್ಲಿನ ಪ್ರಮುಖ ಭಾಷೆಗಳು[ಬದಲಾಯಿಸಿ]

  1. ತುಳು ಇಲ್ಲಿನ ಅಧೀಕೃತ ಭಾಷೆಯಾಗಿದೆ.
  1. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಜಿಲ್ಲೆಯ ತೆಂಕು ಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳಕಾಸರಗೋಡು ಜಿಲ್ಲೆಯ ಬಡಗು ಭಾಗವನ್ನು ಒಟ್ಟಾಗಿ ತುಳುನಾಡು ಎಂದು ಕರೆಯುತ್ತಾರೆ.

ಇಲ್ಲಿನ ಇತರ ಭಾಷೆಗಳೆಂದರೆ[ಬದಲಾಯಿಸಿ]

ಕನ್ನಡ- ಕುಂದಾಪುರ ಕನ್ನಡ ಸೇರಿಸಿ.

  1. ಕೊಂಕಣಿ
  2. ನವಾಯತಿ
  3. ಬ್ಯಾರಿ
  4. ಕೊರಗ
  5. ಉರ್ದು

ಇನ್ನೂ ಹತ್ತು ಹಲವು ಭಾಷೆಗಳಿವೆ.

ಉಡುಪಿ ಹೆಸರಿನ ನಿಷ್ಪತ್ತಿ[ಬದಲಾಯಿಸಿ]

  • ಒಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ತುಳುವಿನ ಹೆಸರು "ಒಡಿಪು"ವಿನಿಂದ ಬಂದಿರುವುದಾಗಿ ನಂಬಲಾಗಿದೆ. ತುಳುವಿನ ಈ ಹೆಸರು ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನದಿಂದಾಗಿ ಬಂದಿರುವುದಾಗಿ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ಸಂಸ್ಕೃತ ದ "ಉಡು" ಹಾಗೂ "ಪ" ಶಬ್ದಗಳಿಂದ ಬಂದಿರುವುದಾಗಿ ನಂಬಲಾಗಿದೆ. ಸಂಸ್ಕೃತ ಶಬ್ದ "ಉಡು"ವಿನ ಅರ್ಥ "ನಕ್ಷತ್ರಗಳು" ಹಾಗೂ "ಪ"ವಿನ ಅರ್ಥ "ಒಡೆಯ".
  • ದಂತಕತೆಯ ಪ್ರಕಾರ, ಚಂದ್ರನ ಪ್ರಕಾಶವು ಒಂದು ಸಾರಿ ದಕ್ಷರಾಜನ ಶಾಪದಿಂದಾಗಿ ಕಡಿಮೆಯಾಯಿತು. ಚಂದ್ರನು ದಕ್ಷರಾಜನ ೨೭ ಹೆಣ್ಣುಮಕ್ಕಳನ್ನು (ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ೨೭ ನಕ್ಷತ್ರಗಳು) ಮದುವೆ ಆಗಿದ್ದನು. ಚಂದ್ರ ಹಾಗು ಚಂದ್ರನ ಹೆಂಡತಿಯರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಶಿವನು ಒಲಿದು ಚಂದ್ರನ ಪ್ರಕಾಶವು ಮರಳಿ ಬರುವಂತೆ ಮಾಡಿದನು.
  • ಹಾಗಾಗಿ ನಕ್ಷತ್ರಗಳ ಒಡೆಯ (ಸಂಸ್ಕೃತ: ಉಡುಪ) ತಪಸ್ಸು ಮಾಡಿದ್ದರಿಂದ ಈ ಕ್ಷೇತ್ರಕ್ಕೆ ಉಡುಪಿ ಎಂಬ ಹೆಸರು ಬಂದಿತೆಂದು ಎಂದು ಪ್ರತೀತಿ. ಆದರೆ, ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ, 'ಒಡಿಪು' ಶಬ್ದದಿಂದ ಉಡುಪಿ ಎಂಬ ಹೆಸರು ಹುಟ್ಟಿದೆ ಎಂಬುದು ಹೆಚ್ಚು ಸಮರ್ಪಕವಾಗಿದೆ. ಈಗಲೂ ತುಳುವಿನಲ್ಲಿ ಈ ಊರನ್ನು ಒಡಿಪು ಎಂದು ಕರೆಯಲಾಗುತ್ತಿರುವುದು ನಿಜಕ್ಕೂ ವಿಶೇಷ.

ಇತಿಹಾಸ[ಬದಲಾಯಿಸಿ]

  • ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಇತಿಹಾಸ ಪರಂಪರೆಯು ಹೆಚ್ಚು ಸಮಾನ ಸ್ವರೂಪದ್ದು. ಇಡೀ ಕರ್ನಾಟಕದ ಕರಾವಳಿ ಪ್ರದೇಶ ಪರಶುರಾಮ ಸೃಷ್ಟಿಯೆಂದು ಪ್ರತೀತಿಯುಂಟು. ಮಾರ್ಕಂಡೇಯ, ವಾಯು ಮತ್ತು ಭವಿಷ್ಯೋತ್ತರ ಪುರಾಣಗಳು ಇಲ್ಲಿನ ಕೆಲವು ನದಿಗಳ ಮತ್ತು ಪರ್ವತಗಳ ಹೆಸರುಗಳನ್ನು ಉಲ್ಲೇಖಿಸುತ್ತವೆ. ತಮಿಳಿನ ‘ಸಂಗಂ’ ಕಾಲದ ಸಾಹಿತ್ಯದಲ್ಲಿ ತುಳುನಾಡಿನ ಪ್ರಸ್ತಾಪ ಬರುತ್ತದೆ.
  • ಅಶೋಕನ ಶಾಸನಗಳಲ್ಲಿ ಬರುವ ಸಾತಿಯಪುತ್ರ ಅಥವಾ ಸತ್ಯಪುತ್ರರೆಂಬ ಸಮುದಾಯದ ಉಲ್ಲೇಖ ಈ ಪ್ರದೇಶದ ಜನರನ್ನು ಕುರಿತದ್ದೆಂದು ಕೆಲವು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಉಡುಪಿ ಜಿಲ್ಲೆ ತೀರಪ್ರದೇಶದಲ್ಲಿರುವುದರಿಂದ ಇದು ಹೊರಗಿನ ಪ್ರಪಂಚದ ಸಂಪರ್ಕವನ್ನು ತಪ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಪ್ರಸಕ್ತ ಶಕೆಯ ಆಚೀಚೆಗಿನ ಶತಮಾನಗಳಿಗೆ ಸೇರಿದ ಗ್ರೀಕ್ ಮತ್ತು ರೋಮನ್ನರ ಪ್ರವಾಸಿ ಕಥನಗಳಲ್ಲಿ ಈ ತೀರದ ಅನೇಕ ಸ್ಥಳಗಳ ಉಲ್ಲೇಖಗಳಿವೆ.
  • ಅವುಗಳಲ್ಲಿ ನೇತ್ರಾವತಿ, ಮಂಗಳೂರು, ಬಸರೂರುಗಳು ಸೇರಿವೆ. ಪ್ರಾಚೀನಕಾಲದಿಂದಲೂ ಹೊರದೇಶಗಳೊಂದಿಗೆ ವಾಣಿಜ್ಯ ಸಂಪರ್ಕ ಬೆಳೆದುಬಂದದ್ದು ನಿಸ್ಸಂದೇಹ. ಗ್ರೀಕ್ ನಾಟಕವೊಂದರಲ್ಲಿ ಬರುವ ಪಾತ್ರಗಳ ಸನ್ನಿವೇಶ ಈ ಕಡಲತೀರದ್ದೆಂದು ಮತ್ತು ಅಲ್ಲಿನ ಸಂಭಾಷಣೆಯಲ್ಲಿ ಬಳಸಿರುವ ಕೆಲವು ಪದಗಳು ತುಳು ಹಾಗೂ ಕನ್ನಡ ಪದಗಳೆಂದು ಗೋವಿಂದ ಪೈಯವರು ಅಭಿಪ್ರಾಯಪಟ್ಟಿದ್ದಾರೆ. ಇವು ಹಳಗನ್ನಡ ಪದಗಳೆಂದು ಪ್ರತಿಪಾದಿಸುವವರೂ ಇದ್ದಾರೆ.
  • ಒಟ್ಟಿನಲ್ಲಿ ಈ ಜಿಲ್ಲೆ ಪ್ರ.ಶ.ಪೂರ್ವ ಕಾಲದಿಂದಲೂ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವ್ಯವಸ್ಥೆಗಳನ್ನು ಹೊಂದಿದ್ದ ಪ್ರದೇಶವೆಂಬುದು ದೃಢಪಡುತ್ತದೆ. ಈ ಜಿಲ್ಲೆಯ ಇತಿಹಾಸ ಕಾಲದ ಸ್ಪಷ್ಟ ಪುರಾವೆಗಳು ದೊರಕುವುದು ಆಳುಪರ ಕಾಲದಲ್ಲಿ. ಆಳುಪರ ಆಳ್ವಿಕೆ ಪ್ರಸಕ್ತ ಶಕಾರಂಭದ ಕಾಲಕ್ಕೇ ಪ್ರಾರಂಭವಾಗುತ್ತದೆಂದು ತಿಳಿದುಬರುತ್ತದೆ. ಅವರು ನಾಗಾರಾಧಕರಾಗಿದ್ದರು ಮತ್ತು ಶೈವ ಪಂಥೀಯರಾಗಿದ್ದರು. ಕದಂಬರು ನೆರೆಯ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ರಾಜ್ಯ ಸ್ಥಾಪಿಸಿದ ಮೇಲೆ ಈ ಪ್ರದೇಶವೂ ಅವರ ಸಾರ್ವಭೌಮತ್ವಕ್ಕೆ ಒಳಪಟ್ಟಿತ್ತು.
  • ಆಗ ಅವರು ಇಲ್ಲಿ ಅಹಿಚ್ಫತ್ರದಿಂದ ಬ್ರಾಹ್ಮಣರನ್ನು ಕರೆಸಿ ಇಲ್ಲಿನ ಮಠ ಮತ್ತು ಅಗ್ರಹಾರ ಪರಂಪರೆಗೆ ಬುನಾದಿ ಹಾಕಿದರೆಂದು ಹೇಳಲಾಗಿದೆ. ಜಮೀನು ಸಾಗುವಳಿ ಮತ್ತು ನಿರ್ವಹಣೆಯಲ್ಲಿ ಅನೇಕ ಕಟ್ಟುಪಾಡುಗಳನ್ನು ಕದಂಬರು ತಂದರೆಂಬ ನಂಬಿಕೆಯಿದೆ. ಕದಂಬರ ಪ್ರಾಬಲ್ಯ ಕಡಿಮೆಯಾಗಿ ಬಾದಾಮಿ ಚಾಳುಕ್ಯರು ಮತ್ತು ತಲಕಾಡಿನ ಗಂಗರು ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಿದಾಗ ಆಳುಪರು ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ತಮ್ಮ ರಾಜ್ಯವನ್ನು ವಿಸ್ತರಿಸಿದರು.
  • ಆಳುಪರನ್ನು ಸೋಮಕುಲದವರೆಂದೂ ಮೀನ ಲಾಂಛನದವರೆಂದೂ ಹೇಳಲಾಗಿದೆ. ಇವರು ೬ನೆಯ ಶತಮಾನದ ಹೊತ್ತಿಗೆ ಉಡುಪಿ ಜಿಲ್ಲೆಯ ಉದಯಪುರ (ಉದ್ಯಾವರ) ಮಂಗಳಪುರ (ಮಂಗಳೂರು)ಗಳಲ್ಲಿ ರಾಜಧಾನಿಗಳನ್ನು ಸ್ಥಾಪಿಸಿ ಆಳಿದ್ದರಲ್ಲದೆ ಘಟ್ಟದ ಮೇಲಿನ ಕೆಲವು ಭಾಗಗಳಲ್ಲೂ ಆಳ್ವಿಕೆ ನಡೆಸಿದರು. ಪಶ್ಚಿಮ ಚಾಳುಕ್ಯರ ಬೆಂಬಲದೊಂದಿಗೆ ಅವರು 8ನೆಯ ಶತಮಾನದವರೆಗೂ ಆಳ್ವಖೇಡ, ಬನವಾಸಿ ಮಂಡಲ ಮತ್ತು ಹೊಂಬುಚರ್ಚ್‌ (ಹೊಸನಗರ ತಾಲ್ಲೂಕು) ಪ್ರಾಂತ್ಯಗಳನ್ನು ಆಳಿದರೆಂದು ಹೇಳಬಹುದು.
  • ಉಡುಪಿ ಜಿಲ್ಲೆಯ ಬಾರಹಕನ್ಯಾಪುರ ಅಥವಾ ಬಾರಕೂರು ಇವರ ರಾಜಧಾನಿಗಳಲ್ಲೊಂದಾಗಿತ್ತು. ರಾಷ್ಟ್ರಕೂಟರ ಕಾಲದಲ್ಲಿ ಇವರ ಪ್ರಭಾವ ತಗ್ಗಿತ್ತು. ಗಂಗರಿಗೆ ಇವರು ನಾಮಮಾತ್ರ ಅಧೀನತೆ ತೋರಿಸಿ ಅವರೊಂದಿಗೆ ರಕ್ತಸಂಬಂಧ ಮಾಡುವ ಮೂಲಕ ಸೌಹಾರ್ದ ಬಾಂಧವ್ಯ ಹೊಂದಿದ್ದರು. ಇವರು ಕೆಲವೆಡೆ ತಮ್ಮನ್ನು ಪಾಂಡ್ಯರೆಂದು ಕರೆದುಕೊಂಡಿದ್ದಾರೆ. ಮೀನು ಇವರ ಲಾಂಛನವಾಗಿತ್ತು.
  • ಹೊಯ್ಸಳರು ಪ್ರಾರಂಭದಲ್ಲಿ ಆಳುಪರ ಮೇಲೆ ಸಾಂಕೇತಿಕ ಆಧಿಪತ್ಯ ಹೊಂದಿದ್ದರೂ ಮೂರನೆಯ ಬಲ್ಲಾಳನ ಕಾಲದಲ್ಲಿ ಈ ಪ್ರದೇಶದ ಆಗುಹೋಗುಗಳಲ್ಲಿ ಅವರು ಹೆಚ್ಚಾಗಿ ಭಾಗವಹಿಸಿದ್ದು ಕಂಡುಬರುತ್ತದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮುಖ್ಯವಾಗಿ ಶೈವ ಪರಂಪರೆ ಹೊಂದಿದ್ದ ಪ್ರದೇಶಗಳು. ನಾಗಾರಾಧನೆ ಮತ್ತು ಶಿವ ಪೂಜೆ ಇಲ್ಲಿನ ಮೂಲ ಧಾರ್ಮಿಕ ಪರಂಪರೆಯ ಸ್ವರೂಪವಾಗಿತ್ತು. ತರುವಾಯ ವೈಷ್ಣವ ಪಂಥ ಪ್ರವೇಶಿಸಿತು.
  • ಮಧ್ವಚಾರ್ಯರು ೧೩ನೆಯ ಶತಮಾನದಲ್ಲಿ ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪನೆ ಮಾಡಿದ ಮೇಲೆ ಮಾಧ್ವ ವೈಷ್ಣವಮತ ಪ್ರಬಲವಾಯಿತು. ಜೈನಧರ್ಮ ಪ್ರಾರಂಭದಿಂದಲೂ ರಾಜಾಶ್ರಯ ಪಡೆದಿದ್ದು ೧೮ನೆಯ ಶತಮಾನದವರೆಗೂ ಕ್ರಿಯಾಶೀಲ ಧರ್ಮವಾಗಿ ಬೆಳೆಯಿತು. ಸ್ಥಳೀಯ ಪಂಜರವಳ್ಳಿ, ಭೂತ ಮೊದಲಾದ ಶಕ್ತಿಗಳ ಆರಾಧನೆ ಪ್ರಾರಂಭದಿಂದಲೂ ನಡೆದುಬಂದಿದೆ. ಪಾರ್ವತಿಯ ಅವತಾರವಾದ ಶಕ್ತಿದೇವತೆಗಳ ಆರಾಧನೆ (ಉದಾ: ಕೊಲ್ಲೂರು ಮೂಕಾಂಬಿಕೆ) ಜನಪ್ರಿಯವಾಗಿದೆ.
  • ಈ ಪ್ರಾಂತದ ಜನರಿಗೆ ಧರ್ಮಶ್ರದ್ಧೆ ಹೆಚ್ಚು. ಭೂತಾರಾಧನೆಯಾಗಲೀ, ಕೃಷ್ಣಪೂಜೆಯಾಗಲೀ ಹೋಮ-ಹವನಗಳಾಗಲೀ ಎಲ್ಲದರಲ್ಲೂ ಇವರಿಗೆ ಹೆಚ್ಚಿನ ನಿಷ್ಠೆ. ವಿಜಯನಗರದ ಆಳ್ವಿಕೆ ಪ್ರಾರಂಭವಾದಾಗ ಹಿಂದಿನ ಪಾಳೆಯಗಾರರ ಅಥವಾ ಸ್ಥಾನಿಕ ರಾಜರ ಆಳ್ವಿಕೆಯ ಪ್ರಭಾವ ತಗ್ಗಿತು. ಆ ಕಾಲದಲ್ಲಿ ವಿಜಯನಗರದ ಸಾಮ್ರಾಟರು ನೇರವಾಗಿ ತಮ್ಮ ಪ್ರಾಂತಾದಿಕಾರಿಗಳ ಮೂಲಕ ಆಳ್ವಿಕೆ ನಡೆಸಲು ಪ್ರಾರಂಭಿಸಿದರು. ಬಾರಕೂರು ಮತ್ತು ಮಂಗಳೂರು ಈ ಆಡಳಿತ ಕೇಂದ್ರಗಳಾಗಿದ್ದವು.
  • ಮಂಗಳೂರು ರಾಜ್ಯವೆಂದೇ ಈ ಪ್ರಾಂತ್ಯವನ್ನು ಕರೆಯುತ್ತಿದ್ದರು. ೧೩೪೨ರಲ್ಲಿ ಈ ಮಾರ್ಗವಾಗಿ ಹಾದುಹೋದ ಇಬ್ನಬೂತೂತ ರಾಜ್ಯಾಧಿಕಾರಿಗಳು ಆಗಾಗ ಬದಲಾಗುತ್ತಿದ್ದುದರ ಬಗ್ಗೆ ತಿಳಿಸಿದ್ದಾನೆ. ಪೋರ್ಚುಗೀಸ್ ನಾವಿಕ ವಾಸ್ಕೋಡಿಗಾಮ ಉಡುಪಿಯ ಬಳಿಯ ದ್ವೀಪಗಳಿಗೆ ಭೇಟಿ ಕೊಟ್ಟಿದ್ದನೆಂದು ತಿಳಿದುಬರುತ್ತದೆ. ಈಗ ಆ ದ್ವೀಪಗಳು ಸಂತಮೇರಿ ದ್ವೀಪಗಳೆಂದು ಹೆಸರು ಪಡೆದಿವೆ.
  • ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಪೋರ್ಚುಗೀಸರೊಂದಿಗೆ ಹೆಚ್ಚಿನ ಸ್ನೇಹದಿಂದ ನಡೆದುಕೊಂಡ. ಆಗ ಪೋರ್ಚುಗೀಸರು ಕರಾವಳಿಯ ಬಂದರುಗಳಲ್ಲಿ ವ್ಯಾಪಾರದ ನೆಪದಲ್ಲಿ ಬಲವಾಗಿ ನೆಲೆಗೊಂಡರು. ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಮತ್ತು ಬಿದನೂರಿನ ನಾಯಕರು ವಿಜಯನಗರದ ಪತನದ ಅನಂತರ ಪೋರ್ಚುಗೀಸರನ್ನು ಹತೋಟಿಯಲ್ಲಿಡಲು ಅನೇಕ ಕಾರ್ಯಾಚರಣೆಗಳನ್ನು ನಡೆಸಿದರು. ಬಿದನೂರ ನಾಯಕರು ಮಲ್ಪೆ ಮತ್ತು ಕುಂದಾಪುರಗಳಲ್ಲಿ ಕೋಟೆಗಳನ್ನು ನಿರ್ಮಿಸಿದರು.
  • ಅನೇಕ ದಂಡರಸರು ವಿಜಯನಗರ ಕಾಲದಲ್ಲಿ ಮುಂದುವರೆದಿದ್ದು ಅನಂತರ ಪ್ರಬಲರಾಗಿ ಈ ಪ್ರದೇಶದಲ್ಲಿ ಆಳಿದರು. ಅವರಲ್ಲಿ ಕಾರ್ಕಳದ ಭೈರರಸರು ಮತ್ತು ವೇಣೂರಿನ ಅಜಿಲರು ಪ್ರಮುಖರು. ಇವರ ಕಾಲದಲ್ಲಿ ಈ ಊರುಗಳಲ್ಲಿ ಅನೇಕ ಜೈನ ಬಸದಿಗಳು ವಿಶ್ವವಿಖ್ಯಾತ ಗೊಮ್ಮಟ ವಿಗ್ರಹಗಳು ನಿರ್ಮಾಣವಾದವು. ಉಡುಪಿಯ ಬಳಿ ಸುರಳದಲ್ಲಿ ತೊಳಹಾರರು ಮತ್ತು ಹೊನ್ನಕಂಬಳಿ ಅರಸರು ಆಳುತ್ತಿದ್ದರು. ಉತ್ತರಕನ್ನಡ ಜಿಲ್ಲೆಯ ಹಾಡುವಳ್ಳಿಯಿಂದ ಆಳುತ್ತಿದ್ದ ಅರಸರು ಉಡುಪಿ ಜಿಲ್ಲೆಯ ಉತ್ತರದ ಕೆಲವು ಭಾಗಗಳಲ್ಲಿ ಆಡಳಿತ ನಡೆಸಿದರು.
  • ಮೈಸೂರು ರಾಜ್ಯದ ಹೈದರಾಲಿ ಮತ್ತು ಟಿಪ್ಪುಸುಲ್ತಾನರು ಈ ಇಡೀ ಕರಾವಳಿ ಭಾಗವನ್ನು ಗೆದ್ದಕೊಂಡರು. ಆದರೆ ಇಂಗ್ಲಿಷರ ಪ್ರಬಲ ಪ್ರತಿರೋಧದಿಂದಾಗಿ ೧೭೯೨ರ ಯುದ್ಧದಲ್ಲಿ ಅನಂತರದ ಒಪ್ಪಂದದ ಮೇರೆಗೆ ಈ ಭಾಗ ಬ್ರಿಟಿಷರ ವಶವಾಯಿತು. ಟಿಪ್ಪುಸುಲ್ತಾನನು ಇಲ್ಲಿನ ಅನೇಕ ಸ್ಥಳೀಯ ರಾಜರನ್ನು ಪದಚ್ಯುತಿಗೊಳಿಸಿದ್ದ. ೧೮೩೭ ರಲ್ಲಿ ಕಲ್ಯಾಣಸ್ವಾಮಿ ಮತ್ತು ಲಕ್ಷ್ಮಪ್ಪ ಬಂಗೇಶ ಎಂಬ ಅರಸುಗಳು ಬ್ರಿಟಿಷರ ವಿರುದ್ಧ ದಂಗೆಯೆದ್ದರು. ಬ್ರಿಟಿಷರು ಈ ದಂಗೆಯನ್ನು ಅಡಗಿಸಿದರು.
  • ೧೮೬೦ರಲ್ಲಿ ಕನ್ನಡ ಜನರಿದ್ದ ಕರಾವಳಿ ಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳೆಂದು ವಿಭಜಿಸಲಾಯಿತು. ೧೮೬೭ ರಲ್ಲಿ ಮೊದಲನೆಯದನ್ನು ಮುಂಬಯಿ ಪ್ರಾಂತ್ಯಕ್ಕೂ ಎರಡನೆಯದನ್ನು ಮದರಾಸು ಪ್ರಾಂತ್ಯಕ್ಕೂ ಸೇರಿಸಲಾಯಿತು. ಬ್ರಿಟಿಷ್ ಭಾರತದ ಭಾಗವಾಗಿದ್ದ ಈ ಕರಾವಳಿ ಜಿಲ್ಲೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಂದಿತ್ತು. ಸತ್ಯಾಗ್ರಹಿಗಳು ಸ್ವತಂತ್ರ್ಯವಾಗಿ ಪತ್ರಿಕೆಗಳನ್ನು ಹೊರಡಿಸಿ ಜನತೆಯನ್ನು ಜಾಗೃತಿಗೊಳಿಸಿದರು.
  • ಸ್ವದೇಶಾಭಿಮಾನಿ, ತಿಲಕ ಸಂದೇಶ (೧೯೧೯), ಸತ್ಯಾಗ್ರಹಿ (೧೯೨೧), ಸ್ವದೇಶಿ ಪ್ರಚಾರಕ (೧೯೪೦) ಮೊದಲಾದ ದೇಶಪ್ರೇಮಿ ಪತ್ರಿಕೆಗಳು ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದವು. ಕಾರ್ನಾಡು ಸದಾಶಿವರಾವ್, ಯು.ಎಸ್.ಮಲ್ಯ, ಕಮಲಾದೇವಿ ಚಟ್ಟೋಪಾಧ್ಯಾಯ, ಎಚ್.ವಿ.ಕಾಮತ್ ಮೊದಲಾದವರು ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದರು. ಎ.ಬಿ.ಶೆಟ್ಟಿ, ಮೋನಪ್ಪ ತಿಂಗಳಾಯ, ಬಿ.ವಿ.ಬಾಳಿಗರಂತಹ ಸಮಾಜ ಸೇವಾಕರ್ತರು ಜನರನ್ನು ಸಂಘಟಿಸಿದರು.
  • ೧೯೨೦ರಲ್ಲಿ ಗಾಂಧೀಜಿ ಮತ್ತು ಶೌಕತ್ ಅಲಿಯವರು ಜಿಲ್ಲೆಗೆ ಭೇಟಿ ನೀಡಿದ್ದರು. ೧೯೨೨ರಲ್ಲಿ ಸರೋಜಿನಿ ನಾಯ್ಡು ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಅಖಿಲ ಕರ್ನಾಟಕ ರಾಜಕೀಯ ಸಮ್ಮೇಳನ ನಡೆಯಿತು. ೧೯೩೪ರಲ್ಲಿ ಮತ್ತೆ ಗಾಂಧೀಜಿಯವರು ಈ ಪ್ರದೇಶಕ್ಕೆ ಭೇಟಿ ನೀಡಿದರು. ಮಾರನೆಯ ವರ್ಷ ರಾಜೇಂದ್ರಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಇನ್ನೊಂದು ರಾಜಕೀಯ ಸಮ್ಮೇಳನ ಇಲ್ಲಿ ಏರ್ಪಟ್ಟಿತು. ೧೯೩೭ರಲ್ಲಿ ಪಂಡಿತ ಜವಾಹರಲಾಲ್ ನೆಹರು ಅವರು ಜಿಲ್ಲೆಯನ್ನು ಸಂದರ್ಶಿಸಿ ಭಾಷಣ ಮಾಡಿದರು.
  • ೧೯೪೨ರ 'ಚಲೇಜಾವ್ ಚಳವಳಿ'ಯು ಇಲ್ಲಿ ಬಿರುಸಾಗಿ ನಡೆಯಿತು. ಆಗ ನೇತೃತ್ವ ವಹಿಸಿದ್ದ ಪ್ರಮುಖರಲ್ಲಿ ಕೆ.ಆರ್.ಕಾರಂತ, ವಿಠಲದಾಸ ಶೆಟ್ಟಿ, ಶ್ರೀನಿವಾಸ ಮಲ್ಯ, ನಾಗಪ್ಪ ಆಳ್ವ, ಎಂ.ಡಿ.ಅಧಿಕಾರಿ, ಶಂಕರ ಆಳ್ವ ಮುಂತಾದವರಿದ್ದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಹಾಲಿ ಉಡುಪಿ ಜಿಲ್ಲೆಯು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆ ಮದರಾಸು ರಾಜ್ಯದಲ್ಲೇ ಮುಂದುವರಿಯಿತು. ೧೯೫೬ರ ನವೆಂಬರ್ ೧ರಂದು ಅಸ್ತಿತ್ವಕ್ಕೆ ಬಂದ ಭಾಷಾವಾರು ಪ್ರಾಂತ್ಯದ ರಚನೆಯಲ್ಲಿ ಇದು ವಿಶಾಲ ಮೈಸೂರು ರಾಜ್ಯದ ಭಾಗವಾಯಿತು.

ಮೇಲ್ಮೈಲಕ್ಷಣ[ಬದಲಾಯಿಸಿ]

  • ಈ ಜಿಲ್ಲೆಯ ಪೂರ್ವ ಗಡಿಯುದ್ದಕ್ಕೂ ಎತ್ತರವಾದ ಮತ್ತು ದಟ್ಟವಾದ ಕಾಡಿನಿಂದ ಕೂಡಿದ ಪಶ್ಚಿಮ ಘಟ್ಟದ ಶ್ರೇಣಿಗಳಿವೆ. ಅಲ್ಲಲ್ಲಿ ಎತ್ತರವಾದ ಗಿರಿಶಿಖರಗಳು ಮತ್ತು ಮಧ್ಯೆ ಮಧ್ಯೆ ಕಂದರಗಳಿಂದ ಕೂಡಿರುವ ಭೂದೃಶ್ಯ ರುದ್ರರಮಣೀಯವಾಗಿವೆ. ಸಹ್ಯಾದ್ರಿ ಘಟ್ಟಗಳ ಶ್ರೇಣಿಗಳ ನಡುವೆ ಇರುವ ಆಗುಂಬೆ ಘಾಟ್ ರಸ್ತೆಯು ಕರ್ನಾಟಕದ ಮೈದಾನ ಪ್ರದೇಶದೊಂದಿಗೆ ಸಂಪರ್ಕಮಾರ್ಗವಾಗಿದೆ.
  • ಕಾರ್ಕಳದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಗಡಿಯನ್ನು ಸೇರಿ ಮುಂದೆ ಶೃಂಗೇರಿ ಮತ್ತು ಕುದುರೆಮುಖಗಳತ್ತ ಕವಲಾಗಿ ಹೋಗುವ ಹೆದ್ದಾರಿ ಈ ಪ್ರದೇಶದ ಇನ್ನೊಂದು ಪ್ರಮುಖ ಮಾರ್ಗ. ಆಗುಂಬೆಗೆ ಉತ್ತರದಲ್ಲಿರುವ ಕೊಡಚಾದ್ರಿ ಬೆಟ್ಟ ಈ ಜಿಲ್ಲೆಯ ಅತ್ಯಂತ ಎತ್ತರದ ಶಿಖರ (೧೩೪೧ಮೀ) ಇದು ಪ್ರವಾಸಿಗಳ ಆಕರ್ಷಣೀಯ ತಾಣವೂ ಹೌದು. ನದಿಗಳು ತೊರೆಗಳು ಮತ್ತು ನಿತ್ಯಹಸಿರು ಕಾಡುಗಳಿಂದ ಕೂಡಿರುವ ಈ ಭಾಗದ ಪ್ರಕೃತಿ ತುಂಬಾ ರಮ್ಯವಾಗಿದೆ.
  • ಘಟ್ಟದಿಂದ ಕೆಳಗೆ ಪಶ್ಚಿಮಾಭಿಮುಖವಾಗಿ ಬಂದಂತೆಲ್ಲಾ ಮೈದಾನ ಪ್ರದೇಶ ತೆರೆದು ಕೊಳ್ಳುತ್ತದೆ. ಅಷ್ಟೇನೂ ಕಡಿದಾಗಿರದ ಇಳಿಜಾರಿನ ಪ್ರದೇಶದಲ್ಲಿ ಅಲ್ಲಲ್ಲಿ ಎತ್ತರದ ಗುಡ್ಡಬೆಟ್ಟಗ ಳುಂಟು. ವ್ಯವಸಾಯದ ಜಮೀನಿನಲ್ಲಿ ಗದ್ದೆಗಳು, ತೆಂಗು, ಅಡಕೆ, ಗೋಡಂಬಿ ತೋಟಗಳಿವೆ. ಕೆಲವೆಡೆ ಕೆಮ್ಮಣ್ಣಿನಿಂದ ಕೂಡಿದ ಬರಡು ದಿಣ್ಣೆಗಳಿವೆ. ಈ ಜಿಲ್ಲೆಯಲ್ಲಿ ಸಮತಟ್ಟಾದ ನೆಲ ಕಡಿಮೆಯೇ.
  • ಜಿಲ್ಲೆಯ ತೀರಪ್ರದೇಶ ಅತ್ಯಂತ ಮುಖ್ಯವಾದ ಭಾಗ. ಇಲ್ಲಿಯ ಜನಸಾಂದ್ರತೆ ಅಧಿಕ. ಇದು ಆರ್ಥಿಕ ಚಟುವಟಿಕೆಗಳಿಂದ ಕೂಡಿದ ಪ್ರದೇಶ. ಇಲ್ಲಿಯ ತೀರ ಪ್ರದೇಶದ ಅಂಚು ಸಾಮಾನ್ಯವಾಗಿ ನೇರವಾಗಿದೆ. ನದಿಗಳು ಸಮುದ್ರ ಸೇರುವ ಎಡೆಗಳಲ್ಲಿ ಕೊಲ್ಲಿಗಳುಂಟಾಗಿವೆ. ಸಮುದ್ರದ ಹಿನ್ನೀರಿನ ಪ್ರದೇಶಗಳು ಮೀನುಗಾರಿಕೆಗೆ ಮತ್ತು ದೋಣಿಗಳ ಸಂಚಾರಕ್ಕೆ ಉಪಯುಕ್ತವಾಗಿವೆ. ಬೈಂದೂರು,ಗಂಗೊಳ್ಳಿ, ಕುಂದಾಪುರ, ಮಲ್ಪೆ, ಪಡುಬಿದ್ರಿ ಮೊದಲಾದ ಪಟ್ಟಣಗಳು ಮೀನುಗಾರಿಕೆಗೆ ಮತ್ತು ವ್ಯಾಪಾರದಿಂದಾಗಿ ಅಭಿವೃದ್ಧಿಗೆ ಬಂದಿವೆ.
  • ಮಲ್ಪೆ ಬಳಿ ಸಂತ ಮೇರಿ ದ್ವೀಪ ಸಮೂಹವಿದೆ. ತೀರದಲ್ಲಿ ವಿರಳವಾಗಿರುವ ದ್ವೀಪಗಳಲ್ಲಿ ಈ ದ್ವೀಪಸಮೂಹ ಪ್ರಮುಖವಾದದ್ದು. ಜಿಲ್ಲೆಯ ಭೂಶಿಲಾರಚನೆಯನ್ನು ಮುಖ್ಯವಾಗಿ ಧಾರವಾಡ ಶಿಲಾವರ್ಗ, ಮಧ್ಯಂತರ ಸೇರ್ಪಡೆಗಳು ಮತ್ತು ಈಚಿನ ರಚನೆಗಳು ಎಂದು ವಿಂಗಡಿಸಬಹುದು. ಧಾರವಾಡ ಶಿಲಾವರ್ಗದಲ್ಲಿ ರೂಪಾಂತರಗೊಂಡ ಅನೇಕ ಪ್ರಾಚೀನ ಶಿಲೆಗಳಿವೆ.
  • ಇವುಗಳಲ್ಲಿ ಮುಖ್ಯವಾಗಿ ಪದರ ಪದರವಾದ ಕಬ್ಬಿಣ ಮಿಶ್ರಿತವಾದ ಕ್ವಾರ್ಟ್ಸೈಟ್ ಮತ್ತು ಟಾಲ್ಕ್‌ ಹಾಗೂ ಹಾರ್ನ್ಬ್ಲೆಂಡ್ ಶಿಷ್ಟ್‌ಗಳು ಕಂಡುಬರುತ್ತವೆ. ಹಾರ್ನ್ಬ್ಲೆಂಡ್ ಹೊಡೆಪೊರೆಗಳು ಅಲ್ಲಲ್ಲಿ ವಿರಳವಾಗಿ ಕಾಣಸಿಗುತ್ತವೆ. ಜಂಬುಕಲ್ಲು ಕರಾವಳಿ ಪ್ರದೇಶದಲ್ಲಿ ಬಹುಮಟ್ಟಿಗೂ ಒಳಭಾಗದಲ್ಲಿ ಸ್ವಲ್ಪಮಟ್ಟಿಗೂ ಇದೆ. ಕರಾವಳಿಯಲ್ಲಿ ಕಂಡುಬರುವ ಮೆಕ್ಕಲು, ಜೇಡಿ ಮತ್ತು ಸುಣ್ಣಕಲ್ಲು ಪದರಗಳು ಈಚಿನ ರಚನೆಗಳಾಗಿವೆ.

ಜಲಸಂಪತ್ತು[ಬದಲಾಯಿಸಿ]

  • ಇಲ್ಲಿಯ ಭೌಗೋಳಿಕ ಸನ್ನಿವೇಶ ಹಾಗೂ ವಾಯುಗುಣದಿಂದಾಗಿ ಇಲ್ಲಿ ಹೆಚ್ಚಿನ ಜಲಸಂಪನ್ಮೂಲವಿದೆ. ನೈರುತ್ಯ ಮಾರುತಗಳು ಇಲ್ಲಿನ ತೀರ ಮತ್ತು ಘಟ್ಟ ಪ್ರದೇಶದಲ್ಲಿ ಹೇರಳವಾಗಿ ಮಳೆ ಸುರಿಸುತ್ತವೆ. ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗಿನ ಮುಂಗಾರಿನ ಕಾಲದಲ್ಲಿ ಬರುವ ಮಳೆಯಿಂದಾಗಿ ಪಶ್ಚಿಮ ಘಟ್ಟಗಳಲ್ಲಿ ಅನೇಕ ನದಿತೊರೆಗಳು ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದುಬರುತ್ತವೆ. ಇವುಗಳ ಉದ್ದ ಕಡಿಮೆಯಾದರೂ ನೀರು ಅಧಿಕವಾಗಿರುತ್ತದೆ.
  • ಗಂಗೊಳ್ಳಿ ನದಿಯು (ಕುಂದಾಪುರದ ಬಳಿ) ಐದು ಉಪ ಹೊಳೆಗಳನ್ನು ಕೂಡಿಕೊಂಡು ಸಮುದ್ರಸೇರುವುದರಿಂದ ಈ ಸ್ಥಳವನ್ನು ಪಂಚಗಂಗಾವಳಿ ಎಂದು ಕರೆಯುತ್ತಾರೆ. ಇಲ್ಲಿ ವಿಸ್ತಾರವಾದ ಅಳಿವೆ ಇದೆ. ಇಲ್ಲಿ ಬಂದರು ಇದೆ. ಗುರುಪುರ, ಸ್ವರ್ಣ, ಸೀತಾ, ಹಳದಿ, ಚಕ್ರಾ ಮತ್ತು ಕೊಲ್ಲೂರು ನದಿಗಳು ಮುಖ್ಯವಾದವು. ಸೀತಾನದಿ ಮತ್ತು ಸ್ವರ್ಣನದಿಗಳು ಬಾರಕೂರು ಬಳಿ ಒಟ್ಟುಗೂಡಿ ಸಮುದ್ರ ಸೇರುತ್ತವೆ.
  • ಈ ಎಲ್ಲ ನದಿಗಳು ಸೇರುವ ಹಿನ್ನೀರು ಪ್ರದೇಶ ದೋಣಿಗಳ ಸಂಚಾರಕ್ಕೆ ಅನುಕೂಲಕರವಾಗಿದೆ. ಜಿಲ್ಲೆಯಲ್ಲಿ ಜಲಸಂಪತ್ತು ಹೇರಳವಾಗಿದ್ದರೂ ಅದು ವ್ಯವಸಾಯಕ್ಕೆ ಉಪಯೋಗವಾಗುವುದಕ್ಕಿಂತ ಸಮುದ್ರಕ್ಕೆ ಹರಿದುಹೋಗುವುದೇ ಹೆಚ್ಚು. ಕಾರ್ಕಳ ತಾಲ್ಲೂಕಿನ ಭಂಡಾಜಿ ಜಲಪಾತದಲ್ಲಿ ನೀರು ೭೦೦ ಮೀ ಗಳ ಎತ್ತರದಿಂದ ಧುಮುಕುತ್ತದೆ. ಇದರೊಂದಿಗೆ ತಾಲ್ಲೂಕಿನ ರಾಮಸಾಗರ ಸರೋವರ ಮುಖ್ಯ ಆಕರ್ಷಣೆಯಾಗಿವೆ.

ಅರಣ್ಯಸಂಪತ್ತು[ಬದಲಾಯಿಸಿ]

  • ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಿತ್ಯಹರಿದ್ವರ್ಣ ಮತ್ತು ಎಲೆ ಉದುರುವ ಸಸ್ಯವರ್ಗಗಳಿವೆ. ಇಲ್ಲಿನ ಅರಣ್ಯಗಳು ಪ್ರಪಂಚದಲ್ಲಿ ಅತ್ಯಂತ ವೈವಿಧ್ಯಮಯ ಸಸ್ಯಗಳನ್ನು ಹೊಂದಿರುವ ವಿರಳ ಅರಣ್ಯಗಳ ಸಾಲಿಗೆ ಸೇರುತ್ತವೆ. ಒಟ್ಟು ೯೯೪೩೯ ಹೆಕ್ಟೇರುಗಳ ಅರಣ್ಯ ಪ್ರದೇಶವಿದೆ. ಶ್ರೀಗಂಧ, ತೇಗ, ನಂದಿ, ಮತ್ತಿ, ಬೀಟೆ, ಸಿರಿಹೊನ್ನೆ, ದಬ್ಬೆ, ಕೋಗಿಲೆ, ಹಲಸು ಮೊದಲಾದ ಮೌಲ್ಯಯುತವಾದ ಮರಗಳು ಇಲ್ಲಿಯ ಕಾಡುಗಳಲ್ಲಿವೆ.
  • ಆಲ, ಅತ್ತಿ, ಸಂಪಿಗೆ, ಅರಳೆ, ಮಾವು, ಹೊಂಗೆ ಮರಗಿಡಗಳು ಇವೆ. ಕೆಲವೆಡೆ ಬಿದಿರು, ಬೆತ್ತ, ವಾಟಿ, ಕೇದಿಗೆ, ಈಚಲು, ಬಗನಿ ಮುಂತಾದವು ಇವೆ. ಏಲಕ್ಕಿ, ಕಾಡುಮೆಣಸು, ಸೀಗೆ, ಗೇರು, ಅಂಟುವಾಳ, ಚಕ್ಕೆ ಮೊದಲಾದವು ಇಲ್ಲಿಯ ಅರಣ್ಯೋತ್ಪನ್ನಗಳು. ನಿಂಬೆ, ಕಾಡು, ಕಂಚಿ, ದೊಡ್ಡಳ್ಳಿಕಾಯಿ, ಕಾಡುಕಿತ್ತಳೆ, ಚಕ್ಕೋತ, ನೆಲ್ಲಿಕಾಯಿ ಮುಂತಾದವೂ ಇವೆ.
  • ಇಲ್ಲಿ ದಕ್ಷಿಣ ಭಾರತದ ಎಲ್ಲ ಪ್ರಾಣಿವರ್ಗವಿದೆ. ಹುಲಿ, ಚಿರತೆ, ಆನೆ, ಕಾಟಿ, ಕಡವೆ, ಕಾಡುಹಂದಿಗಳಂತಹ ದೊಡ್ಡ ಪ್ರಾಣಿಗಳಿಂದ ಹಿಡಿದು ಮೊಲ, ಕೆಂಜಳಿಲು, ಮುಸಿಯ, ಮಂಗಗಳಂತಹ ಬಗೆಬಗೆಯ ಪ್ರಾಣಿಗಳಿವೆ. ಉರಗ ಮತ್ತು ಪಕ್ಷಿ ಜಾತಿಗಳು ಸಮೃದ್ಧವಾಗಿವೆ. ಇಲ್ಲಿಯ ಸಮುದ್ರಕ್ಕಿಂತಲೂ ಕೆರೆಗಳೇ ಮೀನು ಅಭಿವೃದ್ಧಿಗೆ ಅನುಕೂಲವಾಗಿವೆ. ವಾಯುಗುಣ: ಈ ಜಿಲ್ಲೆಯು ಪಶ್ಚಿಮ ಕರಾವಳಿ ವಾಯುಗುಣದ ಲಕ್ಷಣಗಳನ್ನು ಪಡೆದಿದೆ.
  • ಸಮುದ್ರ ಮಟ್ಟದಿಂದ ಹೆಚ್ಚು ಎತ್ತರವಲ್ಲದ ಭೂಪ್ರದೇಶವೇ ಇಲ್ಲಿ ಅಧಿಕ ಇರುವುದರಿಂದಾಗಿ ವರ್ಷದ ಬಹುಭಾಗ ಮೈಯಲ್ಲಿ ಬೆವರು ಬರಿಸುವ ಉಷ್ಣಾಂಶ ಮತ್ತು ತೇವಾಂಶದಿಂದ ಕೂಡಿದ ಸೆಕೆ ಇರುತ್ತದೆ. ಹಗಲು ರಾತ್ರಿ ಉಷ್ಣಾಂಶ ಏರಿಕೆಯಲ್ಲೇ ಇರುತ್ತದೆ. ಚಳಿಗಾಲದಲ್ಲಿ ಗರಿಷ್ಠ ಉಷ್ಣಾಂಶ ಅಪರೂಪಕ್ಕೆ ೩೮º ಸೆಲ್ಸಿಯಸ್ಗೆ ಹೋದರೆ ಕನಿಷ್ಠ ಉಷ್ಣಾಂಶ ೧೭º ಸೆಲ್ಸಿಯಸ್ ಗೆ ಇಳಿಯುವುದುಂಟು. ಮಾರ್ಚ್ನಿಂದ ಮೇ ತಿಂಗಳ ಅಂತ್ಯದವರೆಗೆ ಕಡುಬೇಸಿಗೆಯಿದ್ದು, ವಿರಳವಾಗಿ ಬಿರುಮಳೆಗಳಾಗುತ್ತವೆ.
  • ಪಶ್ಚಿಮ ಘಟ್ಟದತ್ತ ಹೋದಂತೆಲ್ಲಾ ತಂಪು ಹವೆ ಕಂಡುಬರುತ್ತದೆ. ಜೂನ್ ನಿಂದ ಆರಂಭವಾಗುವ ನೈರುತ್ಯ ಮಾರುತದ ಮುಂಗಾರು ಮಳೆಯು ಸೆಪ್ಟೆಂಬರ್ ಅಂತ್ಯದವರೆಗೆ ತೀಕ್ಷ್ಣವಾಗಿರುತ್ತದೆ. ಈ ಅವಧಿಯಲ್ಲಿ ಭಾರಿ ಮಳೆಯಾಗುತ್ತದೆ. ರಾಜ್ಯದ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯೂ ಒಂದು. ವಾರ್ಷಿಕವಾಗಿ ಸರಾಸರಿ ೩೫೦೦-೪೦೦೦ಮಿಮೀ ಮಳೆಯಾಗುವ ಸಂಭವವಿದೆ.
  • ಅಕ್ಟೋಬರ್ ನಿಂದ ಮಳೆ ವಿರಳವಾಗುತ್ತಾ ಬರುತ್ತದೆ. ಡಿಸೆಂಬರ್ ನಿಂದ ಫೆಬ್ರವರಿಯವರೆಗಿನ ಚಳಿಗಾಲದ ತಿಂಗಳುಗಳಲ್ಲಿ ಉಷ್ಣಾಂಶ ಕಡಿಮೆ ಕೆಲವು ವರ್ಷಗಳಲ್ಲಿ ಅತ್ಯಧಿಕ ಮಳೆಯಾದ ದಾಖಲೆ ಈ ಜಿಲ್ಲೆಗಿದೆ. ೧೯೬೧ ರಲ್ಲಿ ಉಡುಪಿ ಮತ್ತು ಕಾರ್ಕಳ ಪಟ್ಟಣಗಳಲ್ಲಿ ಅನುಕ್ರಮವಾಗಿ ೬೩೩೫ ಮತ್ತು ೬೪೬೪ ಮಿಮೀ. ಅಧಿಕ ಮಳೆಯಾದ ದಾಖಲೆ ಇದೆ.

ವ್ಯವಸಾಯ[ಬದಲಾಯಿಸಿ]

  • ಕರ್ನಾಟಕದ ಇತರ ಜಿಲ್ಲೆಗಳಂತೆಯೇ ಇಲ್ಲಿಯೂ ವ್ಯವಸಾಯವೇ ಆರ್ಥಿಕತೆಯ ಬೆನ್ನೆಲುಬು. ಸು. ೧,೨೨,೧೩೨ ಹೆಕ್ಟೇರು ಬಿತ್ತನೆ ಪ್ರದೇಶವಿದೆ. ಇದು ವರ್ಷದಲ್ಲಿ ನಾಲ್ಕು ತಿಂಗಳು ಅಧಿಕ ಮಳೆ ಬೀಳುವ ಪ್ರದೇಶವಾಗಿರುವುದರಿಂದ ಇಲ್ಲಿ ನೀರಾವರಿ ಬೆಳೆಗಳೇ ಹೆಚ್ಚು. ಒಟ್ಟು ೧೧,೧೭೮ ಹೆಕ್ಟೇರುಗಳಿಗೆ ನೀರಾವರಿ ಪೂರೈಕೆಯಿದೆ. ಕಾಲುವೆ ನೀರಾವರಿಯಿಲ್ಲ. ಏತ ನೀರಾವರಿ (೩೭೧೭ ಹೆ) ಮತ್ತು ಬಾವಿ ನೀರಾವರಿ (೪೫೧೪ ಹೆ.) ವಿಧಗಳು ಪ್ರಮುಖ, ಇವು ಶೇ.೭೫ ಭಾಗ ನೀರಾವರಿ ಸೌಲಭ್ಯ ಕಲ್ಪಿಸುತ್ತವೆ.
  • ಅಲ್ಲದೆ ಕೆರೆ ನೀರಾವರಿ (೧೫೩೨ಹೆ.) ಹಾಗೂ ಇತರೆ (೧೨೦೧ಹೆ.) ನೀರಾವರಿ ವಿಧಾನಗಳಿಂದಲೂ ಸೌಕರ್ಯ ಪಡೆಯಲಾಗುವುದು. ಭತ್ತ ಪ್ರಮುಖ ಆಹಾರ ಬೆಳೆ. ಇಲ್ಲಿ ಬತ್ತದ ಗದ್ದೆಗಳನ್ನು ಅವುಗಳ ಸನ್ನಿವೇಶಕ್ಕನುಗುಣವಾಗಿ ವಿಂಗಡಿಸುತ್ತಾರೆ. ಕೊಳಕ ಗದ್ದೆ, ಬೈಲು ಗದ್ದೆ ಮತ್ತು ಪಟ್ಲ್‌ ಗದ್ದೆಗಳೆಂದು ಅವನ್ನು ಕರೆಯಲಾಗುತ್ತದೆ. ಕೆಲವೆಡೆ ಬೇಸಿಗೆ ಬೆಳೆ ಬೆಳೆಯುವುದುಂಟು. ವಾಣಿಜ್ಯ ಬೆಳೆಗಳಲ್ಲಿ ತೆಂಗು ಮುಖ್ಯವಾದುದು. ಸಮುದ್ರತೀರದಲ್ಲಿ ಮತ್ತು ಒಳನಾಡಿನಲ್ಲಿ ವ್ಯಾಪಕವಾಗಿ ತೆಂಗಿನಮರಗಳಿವೆ.
  • ಬೆಟ್ಟದ ತಪ್ಪಲಲ್ಲಿ ಮೆಣಸು ಮತ್ತು ಏಲಕ್ಕಿ ವಾಣಿಜ್ಯ ಬೆಳೆಗಳು. ನೀರಾವರಿ ಅನುಕೂಲವಿರುವ ಹೆಚ್ಚಿನ ಭಾಗಗಳಲ್ಲಿ ಅಡಕೆ ತೋಟಗಳಿವೆ. ಹೊಸ ಹೊಸ ಬೇಸಾಯ ವಿಧಾನಗಳಿಂದ ಮತ್ತು ಹೊಸ ತಳಿಗಳ ಹಾಗೂ ಬೆಳೆಗಳ ಪ್ರಯೋಗದಿಂದ ಇಂದು ಇಲ್ಲಿನ ವ್ಯವಸಾಯಕ್ಷೇತ್ರ ವೈವಿಧ್ಯ ಮಯವಾಗಿದೆ. ಅಲ್ಲಲ್ಲಿ ರಾಗಿ, ಉದ್ದು, ಹೆಸರು, ಹುರುಳಿ, ಅವರೆ, ಗೆಣಸು, ಪರಂಗಿ ಬೆಳೆಯಲಾಗುತ್ತದೆ. ಕಬ್ಬು, ಗೋಡಂಬಿ, ಮೆಣಸಿನಕಾಯಿ, ಸಪೋಟ, ಮಾವು, ಹಲಸು, ಬಾಳೆಗಳ ಸಾಗುವಳಿಯೂ ಉಂಟು.
  • ಈಚಿನ ದಶಕಗಳಲ್ಲಿ ತಾಳೆ ಮರಗಳನ್ನು ಬೆಳೆಯುವುದು ಪ್ರಾರಂಭವಾಗಿದೆ. ಈ ಜಿಲ್ಲೆಯಲ್ಲಿ ಕೆರೆ ನೀರಾವರಿ ಕಡಿಮೆ. ಇಲ್ಲಿ ಅನೇಕ ಸಣ್ಣ ದೊಡ್ಡ ಕೆರೆಗಳಿವೆ. ಕುಂದಾಪುರ ತಾಲ್ಲೂಕಿನ ಚಂತರ ಮಡಗ ಮತ್ತು ಮರನಾಡ ಮಡಗ ಎಂಬ ಕೆರೆಗಳು ನೀರಾವರಿಗೆ ಹೆಚ್ಚು ಉಪಯುಕ್ತ ವಾಗಿವೆ. ಕಾರ್ಕಳದ ಬಳಿಯ ರಾಮಸಾಗರ ದೊಡ್ಡದು. ಜಿಲ್ಲೆಯಲ್ಲಿ ಒಟ್ಟು ೯೭,೨೫೮ ಜನ ಸಾಗುವಳಿದಾರರಿದ್ದಾರೆ.
  • ೮೭,೭೬೧ ಕೃಷಿಕಾರ್ಮಿಕರಿದ್ದಾರೆ (೨೦೦೧). ಭತ್ತ ಅತಿ ವಿಸ್ತಾರ ಪ್ರದೇಶದಲ್ಲಿ ಬೆಳೆಯುವ ಬೆಳೆ (೬೨,೨೯೦ ಹೆ). ಗೇರು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ೨೦೫೫೭ ಹೆಕ್ಟೇರುಗಳಲ್ಲಿ ಬೆಳೆಯುತ್ತಾರೆ. ತರುವಾಯದ ಸ್ಥಾನವನ್ನು ತೆಂಗು (೧೪೮೪೪ ಹೆ), ದ್ವಿದಳ ಧಾನ್ಯ (೭೬೮೪ ಹೆ) ಮತ್ತು ಅಡಕೆ (೮೪೧೯ ಹೆ), ಮೆಣಸು (೨೩೨ ಹೆ) ಬೆಳೆಗಳು ಪಡೆದಿವೆ.

ಮೀನುಗಾರಿಕೆ[ಬದಲಾಯಿಸಿ]

  • ಉಡುಪಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಲ್ಲಿ ಮೀನುಗಾರಿಕೆ ಗಮನಾರ್ಹ ಸ್ಥಾನ ಪಡೆದಿದೆ. ಈ ಜಿಲ್ಲೆ ಪಾರಂಪರಿಕವಾಗಿ ಮೀನುಗಾರಿಕೆಗೆ ಹೆಸರಾದುದು. ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೪೧ಕಿಮೀ ತೀರಪ್ರದೇಶವಿತ್ತು. ಈಗ ಉಡುಪಿ ಜಿಲ್ಲೆಯಲ್ಲಿ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶೇ.60ರಷ್ಟು ಉದ್ದದ ಕರಾವಳಿ ಈ ಜಿಲ್ಲೆಗೆ ಸೇರಿದೆ. ದಕ್ಷಿಣದ ಯರಮಾಲುವಿನಿಂದ ಉತ್ತರದ ಬೈಂದೂರಿನವರೆಗೂ ಅನೇಕ ಮೀನುಗಾರಿಕೆ ಕೇಂದ್ರಗಳಿವೆ.
  • ಅವುಗಳಲ್ಲಿ ಉಡುಪಿ ಬಳಿ ಇರುವ ಮಲ್ಪೆಯಲ್ಲಿ ಮತ್ತು ಕುಂದಾಪುರದ ದಡಗಳಲ್ಲಿ ಮತ್ಸ್ಯೋದ್ಯಮ ಹೆಚ್ಚಾಗಿ ಬೆಳೆದಿದೆ. ಹಿಂದೆ ಸಮುದ್ರದಲ್ಲಿ ಮೀನು ಹಿಡಿಯುವುದು ಒಂದು ಉಪಜೀವನ ವೃತ್ತಿಯಾಗಿತ್ತು. ಮೀನುಗಾರರು ತಮ್ಮ ಸೀಮಿತ ಸಾಮಗ್ರಿ ಸಲಕರಣೆಗಳ ನೆರವಿನಿಂದ ದೋಣಿಗಳಲ್ಲಿ ಹೋಗಿ ಮೀನುಗಳನ್ನು ಹಿಡಿಯುತ್ತಿದ್ದರು. ಈಗ ಆಧುನಿಕ ಯಂತ್ರಚಾಲಿತ ಮೋಟಾರು ದೋಣಿಗಳು ಮತ್ತು ಸುಧಾರಿತ ಬಲೆಗಳು ಲಭ್ಯವಿವೆ. ಮೀನುಗಾರಿಕೆಯ ವಿಧಾನ ಹೆಚ್ಚು ವೈಜ್ಞಾನಿಕವಾಗಿದೆ.
  • ಆದ್ದರಿಂದ ಸಮುದ್ರದಲ್ಲಿ ದೂರದ ಆಳ ಕಡಲಿನಲ್ಲಿ ಸಾಗಿ ಮೀನನ್ನು ಹಿಡಿದು ತರುತ್ತಾರೆ. ಇಂದು ಮೀನು ಮಾತ್ರವಲ್ಲದೆ ಏಡಿ, ಸೀಗಡಿ ಚಿಪ್ಪು ಹಾಗೂ ಹವಳ ಸಂಗ್ರಹಣೆಯೂ ಮೀನುಗಾರಿಕೆಯ ಅಂಗವಾಗಿ ಬೆಳೆದಿದೆ. ಇಲ್ಲಿ ಹಿಡಿಯುವ ಮೀನುಗಳಲ್ಲಿ ಬಂಗಡೆ ಅಥವಾ ಬಗ್ಗಡೆ ಪ್ರಸಿದ್ಧ ವಾದುದು. ಅದು ಈ ತೀರದಲ್ಲಿ ಯಥೇಚ್ಫವಾಗಿ ದೊರಕುತ್ತದೆ. ಮಾಂಸ ಹಾಗೂ ರುಚಿಯ ದೃಷ್ಟಿಯಿಂದ ಇದು ಜನಪ್ರಿಯ. ಇದಲ್ಲದೆ ಭೂತಾಯಿ ಎಂಬ ಚಿಕ್ಕಮೀನು ಇಲ್ಲಿ ಹೆಚ್ಚಾಗಿ ಸಿಗುತ್ತದೆ.
  • ಸಾರ್ಡೀಶ್ ಮೀನುಗಳನ್ನು ಹೆಚ್ಚಾಗಿ ಎಣ್ಣೆ ತೆಗೆಯಲು ಬಳಸುತ್ತಾರೆ. ನದಿ ಮುಖದ ಹಿನ್ನೀರಿನಲ್ಲೂ ಒಳನಾಡಿನ ನದಿ ಕೆರೆಗಳಲ್ಲೂ ಸಾಕಷ್ಟು ಮೀನು ಲಭ್ಯವಿದೆ. ಈಗ ಮೀನುಸಾಕಣೆ ಒಂದು ಮುಖ್ಯ ಉದ್ಯಮ. ಮೀನನ್ನು ಸಂಸ್ಕರಿಸುವ, ಒಣಗಿಸುವ, ಡಬ್ಬಕ್ಕೆ ತುಂಬುವ ಮತ್ತು ಕೆಡದಂತೆ ರಕ್ಷಿಸುವ ಉದ್ಯಮಗಳೂ ಇಲ್ಲಿ ಬೆಳೆದಿವೆ. ಇದರಿಂದ ಅನೇಕರಿಗೆ ಉದ್ಯೋಗ ದೊರಕಿದೆ. ಮೀನುಗಾರಿಕೆ ವರ್ಷಪೂರ್ತಿ ನಡೆಯುವ ಉದ್ಯೋಗವಲ್ಲ. ಸೆಪ್ಟೆಂಬರ್ ತಿಂಗಳಿನಿಂದ ಫೆಬ್ರವರಿಯವರೆಗೂ ಚಟುವಟಿಕೆ ಚುರುಕಾಗಿರುತ್ತದೆ.
  • ಮುಂದೆ ಏಪ್ರಿಲ್ ವರೆಗೂ ಕಡಿಮೆ. ಮೇ-ಆಗಸ್ಟ್‌ವರೆಗೆ ಸಮುದ್ರದಲ್ಲಿ ಮೀನು ಹಿಡಿಯಲಾಗುವುದಿಲ್ಲ. ಮುಂಗಾರಿನ ತೀವ್ರತೆಯ ಕಾರಣ ಈ ಅವಧಿಯಲ್ಲಿ ಮೀನುಗಾರರು ಬಹುತೇಕ ನಿರುದ್ಯೋಗಿಗಳಾಗಿರುತ್ತಾರೆ. ಈಗ ಸೀಗಡಿಗಳಿಗೆ ವಿಶ್ವ ಮಾರುಕಟ್ಟೆ ಯಲ್ಲಿ ಬೇಡಿಕೆ ಹೆಚ್ಚಿದೆ. ಸೀಗಡಿಗಳನ್ನು ಹಿಡಿಯುವ, ಸಾಕಿ ಬೆಳೆಸುವ ಕಾಯಕಕ್ಕೆ ಈಗ ಪ್ರಾಮುಖ್ಯತೆ ಬಂದಿದೆ. ವಾರ್ಷಿಕವಾಗಿ ಸಾಗರೋತ್ಪನ್ನವಾಗಿ ಹಿಡಿದ ಮೀನಿನ ಪ್ರಮಾಣ 70388 (2006) ಟನ್ಗಳು. ಸಿಹಿ ನೀರು ಮೀನು 82.68 ಟನ್ಗಳು (2006).

ಮೋಗವೀರ ಆರಾಧ್ಯ ದೈವ ನಂಬಿ ಮೀನುಗಾರಿಕೆ ನಡೆಸುತ್ತಾರೆ

ಖನಿಜ ಸಂಪತ್ತು[ಬದಲಾಯಿಸಿ]

ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಕಬ್ಬಿಣದ ಅದಿರು ಹೇರಳವಾಗಿದೆ. ಕೊಡಚಾದ್ರಿಯ ಬಳಿ ಈ ಅದಿರನ್ನು ತೆಗೆಯಲಾಗುತ್ತದೆ. ಕುಂದಾಪುರ ತಾಲ್ಲೂಕಿನಲ್ಲಿ ಉತ್ತಮ ದರ್ಜೆಯ ಬಾಕ್ಸೈಟ್ ಇದೆ. ಸುಣ್ಣದ ಚಿಪ್ಪು, ಸಿಲಿಕ ಮರಳು, ಸಿಲಿಮನೈಟ್, ಸೋಪುಕಲ್ಲು, ಹಂಚಿನ ತಯಾರಿಕೆಯ ಮಣ್ಣು-ಇವು ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊರೆಯುತ್ತವೆ. ಕಾಪು, ಪಡುಬಿದರೆ, ಉದ್ಯಾವರ ಮೊದಲಾದೆಡೆಗಳಲ್ಲಿ ಅಭ್ರಕದಿಂದ ಕೂಡಿದ ಬೆಣಚುಕಲ್ಲಿನ ಶಿಲೆಗಳಿವೆ. ಮಲ್ಪೆ ಬಳಿ ಹೆಂಚು ತಯಾರಿಕೆಗೆ ಉಪಯುಕ್ತವಾದ ಮಣ್ಣು ದೊರೆಯುತ್ತದೆ.

ಕೈಗಾರಿಕೆ[ಬದಲಾಯಿಸಿ]

  • ಉಡುಪಿ ಜಿಲ್ಲೆ ಕೈಗಾರಿಕಾಪ್ರಧಾನ ಜಿಲ್ಲೆಯಲ್ಲ. ಸಣ್ಣ ಕೈಗಾರಿಕೆ, ವ್ಯಾಪಾರ ಮತ್ತು ಇತರ ವ್ಯವಸಾಯೇತರ ಚಟುವಟಿಕೆಗಳಲ್ಲಿ ತೊಡಗಿರುವವರ ಪ್ರಮಾಣ ಜಿಲ್ಲೆಯ ಒಟ್ಟು ಜನಸಂಖ್ಯೆಯ ಸುಮಾರು ಶೇ.೪೦ ರಷ್ಟು . ಮೀನುಗಳ ಸಂಸ್ಕರಣೆ, ವ್ಯಾಪಾರ, ವಿದೇಶಗಳಿಗೆ ರಫ್ತು ಮಾಡುವುದು ಮುಂತಾದ ಕಾರ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ತೊಡಗಿದ್ದಾರೆ. ಮಲ್ಪೆ, ಕುಂದಾಪುರ, ಕೋಡಿ ಮೊದಲಾದವು ಈ ಚಟುವಟಿಕೆಗಳ ಕೇಂದ್ರಗಳಾಗಿವೆ. ನಿಸರ್ಗಸಂಪನ್ಮೂಲಗಳನ್ನು ಬಳಸಿಕೊಂಡು ಅನೇಕ ಉದ್ಯಮಗಳು ತಲೆ ಎತ್ತಿವೆ.
  • ಅವುಗಳಲ್ಲಿ ಹಂಚಿನ ಕಾರ್ಖಾನೆಗಳು ಮುಖ್ಯವಾದವು. ಕುಂದಾಪುರ ಮತ್ತು ಉಡುಪಿಯಲ್ಲಿ ಈ ಕಾರ್ಖಾನೆಗಳು ಹೆಚ್ಚಾಗಿ ನೆಲೆಸಿವೆ. ವಿಶ್ವಪ್ರಸಿದ್ಧವಾದ ಮಂಗಳೂರು ಹಂಚುಗಳು ಇಲ್ಲಿಂದ ರಫ್ತಾಗುತ್ತವೆ. ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿ ಬಳಸುವ ಮೊಸಾಯಿಕ್ ಹಂಚುಗಳು ಈಗೀಗ ಹೆಚ್ಚಾಗಿ ತಯಾರಾಗುತ್ತವೆ. ಮನೆಗಳ ಗೋಡೆಗಳನ್ನು ಕಟ್ಟಲು ಬಳಸುವ ಜಂಬಿಟ್ಟಿಗೆ ಕಲ್ಲು ಜಿಲ್ಲೆಯಲ್ಲಿ ಹೇರಳವಾಗಿ ಸಿಗುತ್ತವೆ. ಇದನ್ನು ಇಟ್ಟಿಗೆ ಮಾಡಿ ಘಟ್ಟದ ಮೇಲಿನ ಪಟ್ಟಣಗಳಿಗೆ ಮತ್ತು ಗ್ರಾಮಗಳಿಗೆ ಕಳುಹಿಸಲಾಗುತ್ತದೆ.
  • ಇತ್ತೀಚೆಗೆ ಹೆಚ್ಚಾಗಿ ತೆಂಗಿನ ನಾರಿನಿಂದ ಹಗ್ಗ, ಜಮಖಾನೆ, ಕಾಲೊರೆಸುವ ತಾಟು ಮೊದಲಾದವನ್ನು ತಯಾರಿಸಲಾಗುತ್ತಿದೆ. ಇದೊಂದು ಮುಖ್ಯ ಗೃಹಕೈಗಾರಿಕೆಯಾಗಿ ಬೆಳೆದಿದೆ. ಉದ್ಯಾವರ, ಪಡುಬಿದ್ರಿ, ಕಲ್ಯಾಣಪುರಗಳಲ್ಲಿ ಈ ಚಟುವಟಿಕೆಗಳು ಹೆಚ್ಚು. ಇಲ್ಲಿ ಅರಣ್ಯ ಪ್ರದೇಶ ಸಾಕಷ್ಟಿರುವುದರಿಂದ ಮರ, ಬೆತ್ತ, ಬಿದಿರುಗಳನ್ನು ಬಳಸಿ ವಿವಿಧ ಪೀಠೋಪಕರಣಗಳು, ಕುಕ್ಕೆಗಳು, ಚಾಟುಗಳು, ಮಳೆಗಾಲದಲ್ಲಿ ತಲೆಯ ಮೇಲೆ ಹಾಕಿಕೊಳ್ಳುವ ಗೊರಗಗಳು, ಗೋಡೆಗಳ ನಿರ್ಮಾಣಕ್ಕೆ ಬಳಸುವ ಬಿದಿರಿನ ತಡಿಕೆಗಳು ಮೊದಲಾದವನ್ನು ತಯಾರಿಸಲಾಗುತ್ತದೆ. *ಕಾಡಿನಲ್ಲಿ ದೊರೆಯುವ ಈಚಲಿನಿಂದ ಮತ್ತು ದೊಡ್ಡ ಹುಲ್ಲಿನಿಂದ ಚಾಪೆ ತಯಾರು ಮಾಡುತ್ತಾರೆ. ವ್ಯವಸಾಯ ಸಂಬಂಧವಾದ ಇನ್ನೂ ಹಲವಾರು ಉದ್ಯಮಗಳು ಜಿಲ್ಲೆಯಲ್ಲಿವೆ. ಕೊಬ್ಬರಿಯಿಂದ ಎಣ್ಣೆತೆಗೆಯುವ ಗಿರಣಿಗಳು, ಅಕ್ಕಿಗಿರಣಿಗಳು, ಗೋಡಂಬಿ ಸಂಸ್ಕರಣ ಘಟಕಗಳು, ಗೋಡಂಬಿ ಯ ಓಟೆಯಿಂದ ಎಣ್ಣೆ ತಯಾರಿಸುವ ಗಿರಣಿಗಳು, ಬೆಲ್ಲ ತಯಾರಿಕೆಯ ಘಟಕಗಳು-ಇವು ಮುಖ್ಯವಾದವು.
  • ಬೀಡಿ ಕಟ್ಟುವುದು ಒಂದು ಹಳೆಯ ಉದ್ಯಮ. ಇದು ಕರಾವಳಿಯ ಊರುಗಳಲ್ಲಿ ಅಭಿವೃದ್ಧಿ ಹೊಂದಿದೆ. ಕಾರ್ಕಳ ಉಡುಪಿಗಳಲ್ಲಿ ಬೀಡಿ ತಯಾರಿಕೆ ಕಾರ್ಖಾನೆಗಳಿವೆ. ಕೈ ಮಗ್ಗದ ಬಟ್ಟೆಗಳು,ಲುಂಗಿಗಳು ಚೌಕಗಳು ಮೊದಲಾದ ವನ್ನು ತಯಾರಿಸುವ ಉದ್ಯಮಗಳು ಉಡುಪಿ, ಬ್ರಹ್ಮಾವರ ಮುಂತಾದ ಕಡೆಗಳಲ್ಲಿವೆ. ಮಣಿಪಾಲ, ಉಡುಪಿ, ಕುಂದಾಪುರ, ಪಟ್ಟಣಗಳು ಆಧುನಿಕ ಕೈಗಾರಿಕೆಗಳಲ್ಲಿ ಮುಂದುವರೆದಿವೆ.
  • ಉಕ್ಕಿನ ಉಪಕರಣಗಳು ಮೋಟಾರುವಾಹನದ ಬಿಡಿಭಾಗಗಳು, ಲೋಹದ ಪಾತ್ರೆಗಳು ಮುಂತಾದವುಗಳ ತಯಾರಿಕೆ, ತಂತಿ ತಯಾರಿಕೆ ಮತ್ತು ವಿದ್ಯುತ್ ಉಪಕರಣಗಳ ತಯಾರಿಕೆಗೆ ಸಂಬಂಧಿಸಿದ ಕಾರ್ಖಾನೆಗಳು ಇಲ್ಲಿವೆ. ಮುದ್ರಣ, ಪತ್ರಿಕೋದ್ಯಮಗಳಿಗೆ ಮಣಿಪಾಲ ಎತ್ತಿದ ಕೈ, ಉದಯವಾಣಿ ಪತ್ರಿಕೆ, ರೂಪತಾರ, ತರಂಗ ಎಂಬ ನಿಯತಕಾಲಿಕ ಗಳು ಇಲ್ಲಿಂದ ಮುದ್ರಿತವಾಗಿ ಹೊರಬರುತ್ತವೆ. ಮಣಿಪಾಲದ ಮುದ್ರಣಾಲಯ ವಿಶ್ವವಿಖ್ಯಾತವಾದುದು.
  • ಮರಗೆಲಸ, ಕಬ್ಬಿಣದ ಕೆಲಸ. ಚಿನ್ನದ ಕೆಲಸ, ಚರ್ಮ ಕೈಗಾರಿಕೆ, ರಬ್ಬರ್ ಸಂಸ್ಕರಣ ಮುಂತಾದವುಗಳಲ್ಲಿ ಸಾವಿರಾರು ಜನ ದುಡಿಯುತ್ತಿದ್ದಾರೆ. ಗಂಗೊಳ್ಳಿ, ಬೈಂದೂರು, ಮಲ್ಪೆ, ಹಂಗಾರಕಟ್ಟೆ ಬಂದರುಗಳು ಜನರಿಗೆ ಉದ್ಯೋಗ ಒದಗಿಸಿವೆ. ಜಿಲ್ಲೆಯಲ್ಲಿ ಒಟ್ಟು ೬೭೭೨ ವಿವಿಧ ಬಗೆಯ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಸ್ಥಾಪನೆಗೊಂಡಿದ್ದು ಅವುಗಳಲ್ಲಿ ೪೩೩೭೫ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಮಧ್ಯಮ ಪ್ರಮಾಣದ ಉದ್ಯಮಗಳ ಸಂಖ್ಯೆ ೨೭೦ (೨೦೦೬). ಎರಡು ಜವಳಿ ಉದ್ದಿಮೆ, ೩ ರಾಸಾಯನಿಕ ಕೈಗಾರಿಕೆ ಮತ್ತು ೨ ಸಕ್ಕರೆ ಕಾರ್ಖಾನೆಗಳಿವೆ.
  • ಉಡುಪಿ ಜಿಲ್ಲೆಯ ಮಲ್ಲಿಗೆ ಮತ್ತು ಸೀರೆಗಳಿಗೆ ಭೌಗೋಲಿಕ ಗುರುತಿನ (geological identification) ಟ್ಯಾಗ್ ದೊರೆತಿದೆ.

ಅಷ್ಟ ಮಠಗಳು[ಬದಲಾಯಿಸಿ]

ಉಡುಪಿಯ ಕೇಂದ್ರಬಿಂದುವಾದ ಕೃಷ್ಣ ಮಠವನ್ನು ಅಷ್ಟ ಮಠಗಳು ನಡೆಸುತ್ತವೆ. ಅಷ್ಟ ಮಠಗಳು ಕೆಳಕಂಡಂತಿವೆ:

  1. ಫಲಿಮಾರು
  2. ಅದಮಾರು
  3. ಸೋದೆ
  4. ಕೃಷ್ಣಾಪುರ
  5. ಪುತ್ತಿಗೆ
  6. ಶಿರೂರು
  7. ಕಾಣಿಯೂರು
  8. ಪೇಜಾವರ

ಉಡುಪಿ ಶೈಲಿಯ ಅಡುಗೆ[ಬದಲಾಯಿಸಿ]

  • ಉಡುಪಿ ಶೈಲಿಯ ಅಡುಗೆ ವಿಶ್ವವಿಖ್ಯಾತ. ಉಡುಪಿ ಹೋಟೆಲ್‌ಗಳೂ ವಿಶ್ವದಾದ್ಯಂತ ಪ್ರಸಿದ್ಧ. ಉಡುಪಿ ಶೈಲಿಯ ಪಾಕಶಾಸ್ತ್ರ, ವಿದೇಶಗಳಲ್ಲೂ ಪ್ರಸಿದ್ಧ. ಕೃಷ್ಣ ದೇವರಿಗೆ ಪ್ರತಿದಿನವೂ ಬೇರೆ ಬೇರೆ ರೀತಿಯ ಅಡುಗೆ ಮಾಡುತ್ತಾರೆ. ಚಾತುರ್ಮಾಸದ (ಮಳೆಗಾಲದ ನಾಲ್ಕು ತಿಂಗಳ ಅವಧಿ) ಸಮಯದಲ್ಲಿ ತಯಾರಿಸಲಾಗುವ ಅಡುಗೆಗಳಿಗೆ ಕೆಲವು ನಿರ್ಬಂಧಗಳಿವೆ. ಈ ನಿರ್ಬಂಧಗಳು ಹಾಗೂ ಅವಶ್ಯಕತೆಗಳು, ಆ ಸಮಯದಲ್ಲಿ ಸಿಗುವ ಹಾಗು ಹತ್ತಿರದಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿ.
  • ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ದಾರಿ ಮಾಡಿದುವು. ಕೃಷ್ಣ ದೇವರಿಗೆ ಅಡುಗೆ ಮಾಡುವ ಶಿವಳ್ಳಿ ಬ್ರಾಹ್ಮಣರು ಈ ಅಡುಗೆ ಶೈಲಿಯನ್ನು ಸೃಷ್ಟಿಸಿದರು. ಇಂದು ದಕ್ಷಿಣಭಾರತದಾದ್ಯಂತ ಉಡುಪಿ ಜಿಲ್ಲೆಯವರು ನಡೆಸುವ ಹೋಟೆಲ್ ಗಳು "ಉಡುಪಿ ಹೋಟೆಲ್'ಎಂಬ ಹೊಸ ಬ್ರಾಂಡ್ ನ್ನು ಸೃಷ್ಟಿಸಿವೆ. ಬೆಂಗಳೂರಿನ ಎಂ.ಟಿ.ಆರ್. ಸಹಾ ಮೂಲತ: ಉಡುಪಿ ಅಡುಗೆಯ ಶೈಲಿಯಿಂದ ರೂಪುಗೊಂಡಿದ್ದು, ಈಗ ಸಿದ್ದ ಆಹಾರಗಳ ತಯಾರಿಯಲ್ಲೂ ಹೆಸರಾಗಿದೆ.

ಸಾರಿಗೆ[ಬದಲಾಯಿಸಿ]

  • ರಾಷ್ಟ್ರೀಯ ಹೆದ್ದಾರಿ ೧೭ ಉಡುಪಿಯ ಮೂಲಕ ಹಾದುಹೋಗುತ್ತದೆ. ಕಾರ್ಕಳಕ್ಕೆ, ಧರ್ಮಸ್ಥಳಕ್ಕೆ ಹಾಗೂ ಶಿವಮೊಗ್ಗಕ್ಕೆ ಶೃಂಗೇರಿಗೆ ಹೋಗುವ ರಾಜ್ಯ ಹೆದ್ದಾರಿಗಳು ಉಡುಪಿಯನ್ನು ಸಂಪರ್ಕಿಸುವ ಬೇರೆ ಮುಖ್ಯ ರಸ್ತೆಗಳು. ರಾಷ್ಟೀಯ ಹೆದ್ದಾರಿ ೧೭ ಮಂಗಳೂರು ಹಾಗೂ ಕಾರವಾರವನ್ನು ಸಂಪರ್ಕಿಸುತ್ತದೆ. ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಉಡುಪಿಯಿಂದ ಕರ್ನಾಟಕದ ವಿವಿಧ ಪ್ರದೇಶಗಳಿಗೆ ಹೋಗುತ್ತವೆ. ಕೊಂಕಣ ರೈಲೂ ಸಹಾ ಉಡುಪಿಯ ಮಾರ್ಗವಾಗಿ ಹೋಗುತ್ತದೆ.
  • ಸುಮಾರು ೫೦ ಕಿ.ಮೀ. ದೂರದಲ್ಲಿರುವ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣವು ಉಡುಪಿಯ ಹತ್ತಿರದ ವಿಮಾನ ನಿಲ್ದಾಣ. ಉಡುಪಿ ಜಿಲ್ಲೆಯ ಒಂದು ಬದಿಯಲ್ಲಿ ಸಮುದ್ರವೂ ಇನ್ನೊಂದು ಬದಿಯಲ್ಲಿ ಎತ್ತರದ ಘಟ್ಟಗಳೂ ಇವೆ. ಒಳನಾಡು ಚಿಕ್ಕ ದೊಡ್ಡ ಅಸಂಖ್ಯಾತ ನದಿಕೊಳ್ಳಗಳಿಂದ ಕೂಡಿದ ಭೌಗೋಳಿಕ ಸನ್ನಿವೇಶವು ಭೂಸಾರಿಗೆಗೆ ಅಷ್ಟೇನೂ ಅನುಕೂಲಕರವಾಗಿಲ್ಲ. ಹಿಂದೆ ಗಾಡಿ ರಸ್ತೆಗಳು ಹೆಚ್ಚಾಗಿದ್ದವು.
  • ಆಧುನಿಕವಾದ ರಸ್ತೆಗಳು ಹೆಚ್ಚಾಗಿರಲಿಲ್ಲ. ಅವು ಮಳೆಗಾಲದಲ್ಲಿ ಬಹುತೇಕ ಸಂಚಾರಕ್ಕೆ ನಿರುಪಯುಕ್ತವಾಗಿರುತ್ತಿದ್ದವು. ಜಿಲ್ಲೆಯ ಭೌಗೋಳಿಕ ಮಹತ್ತ್ವ ಮತ್ತು ಬಂದರುಗಳಿಂದಾಗಿ ಬ್ರಿಟಿಷ್ ಸರ್ಕಾರ ಕೆಲವು ಘಾಟಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿತು. ಇದರಿಂದ ಜಿಲ್ಲೆಯೊಂದಿಗೆ ಒಳನಾಡಿನ ಸಂಪರ್ಕ ಬೆಳೆಯಲು ಸಹಾಯವಾಯಿತು.
  • ಕೊಲ್ಲೂರು ಸಮೀಪದಲ್ಲಿ ಹಾದು ಹೋಗುವ ಉಡುಪಿ-ಸಾಗರ ರಸ್ತೆ ಶಿವಮೊಗ್ಗ ಜಿಲ್ಲೆಯ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆ, ಉಡುಪಿ-ಆಗುಂಬೆ-ಶಿವಮೊಗ್ಗ ರಸ್ತೆ ಇತ್ತೀಚಿನವರೆಗೂ ದೊಡ್ಡ ವಾಹನಗಳ ಸಂಚಾರಕ್ಕೆ ಅನುಕೂಲಕರವಾಗಿರಲಿಲ್ಲ. ಉಡುಪಿ-ಕಾರ್ಕಳ-ದಕ್ಷಿಣಕನ್ನಡದ ಎಲ್ಲೆ ಮತ್ತು ಶೃಂಗೇರಿ ರಸ್ತೆ ಉತ್ತಮ ಸ್ಥಿತಿಯಲ್ಲಿರುವ ಘಾಟಿಮಾರ್ಗ; ಇದು ಕುದುರೆಮುಖ ಗಣಿ ಪ್ರದೇಶಕ್ಕೂ ಸಂಪರ್ಕ ಕಲ್ಪಿಸುತ್ತದೆ.
  • ಉಡುಪಿ-ಶಂಕರ ನಾರಾಯಣ-ಹೊಸಂಗಡಿ-ಹುಲಿಕಲ್ ಮೂಲಕ ಇನ್ನೊಂದು ಘಾಟಿ ಮಾರ್ಗ ಶಿವಮೊಗ್ಗ ಜಿಲ್ಲೆ ತಲುಪುತ್ತದೆ. ಉಡುಪಿ, ಭಟ್ಕಳ ರಸ್ತೆಯು ರಾಷ್ಟ್ರೀಯ ಹೆದ್ದಾರಿ. ಇದು ಉತ್ತರ ಕನ್ನಡ ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ಉಡುಪಿ-ಮಂಗಳೂರು ಮಾರ್ಗವೂ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದೆ. 143ಕಿಮೀ ರಾಷ್ಟ್ರೀಯ ಹೆದ್ದಾರಿ, 353 ಕಿಮೀ ರಾಜ್ಯ ಹೆದ್ದಾರಿ, 735 ಕಿಮೀ ಮುಖ್ಯ ಜಿಲ್ಲಾರಸ್ತೆಗಳು. ಒಟ್ಟು 1230 ಕಿಮೀಗಳ ರಸ್ತೆಗಳ ಉದ್ದವಿದೆ. ಇದರಲ್ಲಿ 1209 ಪಕ್ಕರಸ್ತೆ, 24 ದೊಡ್ಡ ಸೇತುವೆಗಳಿವೆ.
  • ಈಚಿನ ದಶಕಗಳಲ್ಲಿ ಇಲ್ಲಿನ ನದಿಗಳು ಮತ್ತು ಉಪನದಿಗಳಿಗೆ ಅನೇಕ ಸೇತುವೆಗಳನ್ನು ಕಟ್ಟಿದ್ದರಿಂದ ಒಳನಾಡಿನ ಸಂಪರ್ಕ ವ್ಯವಸ್ಥೆ ಉತ್ತಮಗೊಂಡಿದೆ. ಉಡುಪಿ-ಕಾರ್ಕಳ-ಬೆಳ್ತಂಗಡಿ ರಸ್ತೆ ಚಾರ್ಮಾಡಿ ಘಾಟ್ ರಸ್ತೆಗೆ ಸಂಪರ್ಕ ಕಲ್ಪಿಸುತ್ತವೆ. ತಿರುವನಂತಪುರ ಮುಂಬಯಿ-ಕೊಂಕಣ ರೈಲು ಮಾರ್ಗ ಇಲ್ಲಿಯ ಏಕೈಕ ರೈಲ್ವೆ ಸಂಪರ್ಕವ್ಯವಸ್ಥೆ ಇದರಿಂದ ಬೈಂದೂರು, ಕುಂದಾಪುರ, ಉಡುಪಿ, ಹಂಗಾರಕಟ್ಟೆ ಮೊದಲಾದ ತೀರದ ಪಟ್ಟಣಗಳಿಂದ ಭಾರತದ ಇತರ ಭಾಗಗಳಿಗೆ ರೈಲು ಸಂಪರ್ಕ ಒದಗಿಬಂದಿದೆ.
  • ಜಿಲ್ಲೆಯ ಒಟ್ಟು ರೈಲು ಮಾರ್ಗದ ಉದ್ದ 49 ಕಿ.ಮೀ.ಗಳು. ಜಲಸಾರಿಗೆಗೆ ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮುಖ್ಯ. ಕರಾವಳಿಯ ಬಂದರುಗಳಿಗೆ ಮತ್ತು ಪಟ್ಟಣಗಳಿಗೆ ದೋಣಿಗಳು ಸ್ಟೀಮರ್ ಗಳು ಮತ್ತು ಸಣ್ಣ ಹಡಗುಗಳ ಮೂಲಕ ಜನ ಸಂಚಾರ ಮತ್ತು ಸಾಮಗ್ರಿಗಳ ಸಾಗಣೆ ನಡೆಯುತ್ತದೆ. ನದಿ ಮುಖಗಳು ಹಿನ್ನೀರು ದೋಣಿ ಸಂಚಾರಕ್ಕೆ ಅನುಕೂಲವಾಗಿವೆ. ಆಧುನಿಕ ದೂರಸಂಪರ್ಕ ವ್ಯವಸ್ಥೆ ಬಳಕೆಯಲ್ಲಿದೆ.

ವಾಣಿಜ್ಯ ಹಾಗೂ ಉದ್ದಿಮೆ[ಬದಲಾಯಿಸಿ]

  • ಉಡುಪಿಯು ಕರ್ನಾಟಕದ ಒಂದು ಮುಖ್ಯ ನಗರವಾಗಿ ಬೆಳೆಯುತ್ತಿದೆ. ಒಂದು ಖಾಸಗೀ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಬೆಂಗಳೂರು ಹಾಗೂ ಮಂಗಳೂರಿನ ನಂತರ ಉಡುಪಿಯ ಒಬ್ಬ ವ್ಯಕ್ತಿಯ ಸರಾಸರಿ ಆದಾಯವು ಮೂರನೇ ಸ್ಥಾನದಲ್ಲಿದೆ. ಉಡುಪಿಯ ವಾಣಿಜ್ಯವು ಮುಖ್ಯವಾಗಿ ಕೃಷಿ ಹಾಗೂ ಮೀನುಗಾರಿಕೆಯನ್ನು ಅವಲಂಬಿಸಿದೆ. ಗೇರು, ಬೇರೆ ತರಹದ ಆಹಾರ, ಹಾಲಿನಂತಹ ಸಣ್ಣ ಪ್ರಮಾಣದ ಉದ್ದಿಮೆಗಳು ಇತರ ಮುಖ್ಯ ಉದ್ದಿಮೆಗಳು. ಉಡುಪಿ ಜಿಲ್ಲೆಯ ಶಂಕರಪುರವು ಮಲ್ಲಿಗೆ ಕೃಷಿಗೆ ಹೆಸರುವಾಸಿಯಾಗಿದೆ.
  • ಉಡುಪಿಯಲ್ಲಿ ದೊಡ್ಡ ಪ್ರಮಾಣದ ಉದ್ದಿಮೆಗಳು ಇಲ್ಲ. ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಕರ್ನಾಟಕ ಸರಕಾರವು ಕೋಜೆಂಟ್ರಿಕ್ಸ್ ಜೊತೆ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಉಡುಪಿ ಜನರ ಹಾಗೂ ಪರಿಸರವಾದಿ ಸಂಘಟನೆಗಳ ತೀವ್ರ ವಿರೋಧವಿದ್ದಾಗಲೂ ನಾಗಾರ್ಜುನ ಕಂಪನಿ ನಂದಿಕೂರಿನ ಬಳಿ ಉಷ್ಣ ವಿದ್ಯುತ್ ಸ್ತಾವರವನ್ನು ನಿರ್ಮಿಸಿದೆ. ಪಡುಬಿದರೆಯ ಬಳಿ ಇದೇ ತರಹದ ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಲು ನಾಗಾರ್ಜುನ ವಿದ್ಯುತ್ ಸಂಸ್ಥೆಯ ಪ್ರಯತ್ನವೂ ತೀವ್ರ ವಿರೋಧದಿಂದಾಗಿ ಸ್ಥಗಿತಗೊಂಡಿದೆ.
  • ಸುಜಲಾನ್ ಗಾಳಿ ವಿದ್ಯುತ್ ತಯಾರಿಕಾ ಕೇಂದ್ರವೂ ಉಡುಪಿಯಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ಭೂಮಿ ಕಳೆದುಕೊಂಡವರ ಜೊತೆಗೆ ಪರಿಸರವಾದಿಗಳು ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಾರೆ. ವಿಂಡೊಸ್ ಹಾಗೂ Mac OS ಗಳಲ್ಲಿ ಕೆಲಸ ಮಾಡುವ ಪ್ರಖ್ಯಾತ software ಕಂಪೆನಿಯಾದ ರೊಬೊಸಾಫ್ಟ್ ಉಡುಪಿಯಲ್ಲೇ ಹುಟ್ಟಿ ಬೆಳೆದ ಕಂಪೆನಿ. ಈ ಕಂಪೆನಿಯು ಉಡುಪಿಗೆ IT ಜಗತ್ತಿನಲ್ಲಿ ಉತ್ತಮ ಸ್ಥಾನವನ್ನು ತಂದು ಕೊಟ್ಟಿದೆ.
  • ಉಡುಪಿ ಜಿಲ್ಲೆ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ತವರು. ಇಲ್ಲಿ 20ನೆಯ ಶತಮಾನದಲ್ಲಿ ಸ್ಥಾಪಿತವಾದ ಬ್ಯಾಂಕಿಂಗ್ ಸಂಸ್ಥೆಗಳು ಹಲವು. 1906ರಷ್ಟು ಹಿಂದೆಯೇ ಕೆನರಾಬ್ಯಾಂಕ್ ಅಸ್ತಿತ್ವಕ್ಕೆ ಬಂದಿತು. ಅನಂತರ ಬಂದ ಹಲವಾರು ಬ್ಯಾಂಕ್ ಗಳಲ್ಲಿ ಕೆಲವು ಉಳಿದಿವೆ. ಮತ್ತು ಅಂತಾರಾಷ್ಟ್ರೀ ಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಬ್ಯಾಂಕ್ ಗಳು ಉಡುಪಿ ಮತ್ತು ಮಂಗಳೂರು ಮೂಲದವು. ಅವುಗಳಲ್ಲಿ -
  1. ಕೆನರಾ ಬ್ಯಾಂಕ್ ಅಲ್ಲದೆ
  2. ಸಿಂಡಿಕೇಟ್ ಬ್ಯಾಂಕ್, (ಈಗ ಕೆನರಾ ಬ್ಯಾಂಕ್ ಜೊತೆಗೆ ವಿಲೀನವಾಗಿದೆ)
  3. ವಿಜಯಾ ಬ್ಯಾಂಕ್ (೧೯೩೧),
  4. ಕರ್ನಾಟಕ ಬ್ಯಾಂಕ್ ೧೯೨೪),
  5. ಕಾರ್ಪೊರೇಷನ್ ಬ್ಯಾಂಕ್-ಇವು ಪ್ರಮುಖವಾದವು.
  • ಜಿಲ್ಲೆಯಲ್ಲಿ ೨೧೭ ವಾಣಿಜ್ಯ ಬ್ಯಾಂಕುಗಳು, ೧೧ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ೩೦ ನಗರ ಸಹಕಾರಿ ಬ್ಯಾಂಕುಗಳು, ೭ ವ್ಯವಸಾಯ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳು ಮತ್ತು ೮೯೩ ಕೃಷಿ ಸಾಲ ಹಾಗೂ ಇತರ ಸಹಕಾರ ಸಂಘಗಳಿವೆ (೨೦೦೬). ಉಡುಪಿಯಲ್ಲಿ ಬಹಳಷ್ಟು ವ್ಯಾಪಾರ ಕೇಂದ್ರಗಳಿವೆ. ಉದಾಹರಣೆಗಳು ರಥಬೀದಿಯಲ್ಲಿರುವ ಸಂಪೂರ್ಣ, ಗೀತಾಂಜಲಿ ಚಿತ್ರಮಂದಿರದ ಹತ್ತಿರದ Little ಪೈ, ಕವಿ ಮುದ್ದಣ್ಣ ಮಾರ್ಗದಲ್ಲಿರುವ ಡಯಾನ ಸ್ಟೋರ್ಸ್,ಕಡಿಯಾಳಿಯ ಪಕ್ಕದಲ್ಲಿ ಮೋರ್. ಹೊಸದಾಗಿ ಶುರುವಾಗಿದೆ.
  • ಉಡುಪಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳೆಂದರೆ, ಅಡಿಕೆ, ಗೋಡಂಬಿ, ರಬ್ಬರ್, ತೆಂಗು ಇತ್ಯಾದಿ. ಹಲವಾರು ಗೋಡಂಬಿ ಸಂಸ್ಕ್ರರಣಾ ಕಾರ್ಖಾನೆಗಳು ಈ ಜಿಲ್ಲೆಯಲ್ಲಿವೆ.ಉಡುಪಿಯ ಆಭರಣಗಳು ಹಾಗೂ ಕಲೆ ವಿಶ್ವ ಪ್ರಸಿದ್ಧ. ಮೇ ತಿಂಗಳಲ್ಲಿ ಬರುವ ಅಕ್ಷಯ ತದಿಗೆಯ ದಿನ ಜನರು ಬಹಳಷ್ಟು ಆಭರಣಗಳನ್ನು ಖರೀದಿಸುತ್ತಾರೆ. ಆಭರಣ ಹಾಗೂ ಸ್ವರ್ಣ ಇಲ್ಲಿಯ ಪ್ರಸಿದ್ಧ ಚಿನ್ನದ ಅಂಗಡಿಗಳು.

ಕಲೆ ಹಾಗೂ ಸಂಸ್ಕೃತಿ[ಬದಲಾಯಿಸಿ]

  • ಉಡುಪಿಯ ಸಂಸ್ಕೃತಿಯಲ್ಲಿ ಭೂತ ಕೋಲ, ಆಟಿ ಕಳಂಜ, ಕರಂಗೋಲು ,ಪಾಣಾರಾಟ ಹಾಗೂ ನಾಗಾರಾಧನೆ ಒಳಗೊಂಡಿವೆ. ಇಲ್ಲಿಯ ಜನರು ಆಚರಿಸುವ ಕೆಲವು ಪ್ರಮುಖ ಹಬ್ಬಗಳಲ್ಲಿ ದೀಪಾವಳಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ , ನವರಾತ್ರಿ, ದಸರಾ, ರಂಜಾನ್, ಹಾಗೂ ಕ್ರಿಸ್ಮಸ್ ಒಳಗೊಂಡಿವೆ. ಸಾಂಸ್ಕೃತಿಕ ಕಲೆಯಾದ ಯಕ್ಷಗಾನ, ನಾಟಕ, ಭರತನಾಟ್ಯ ತುಂಬಾ ಪ್ರಸಿಧ್ಧ.
    • ಕಳೆದ ಐದುವರೆ ದಶಕಗಳಿಂದ ನಾಟಕ ರಂಗದಲ್ಲಿ ಸಕ್ರಿಯವಾಗಿರುವ, ದೇಶ ವಿದೇಶಗಳಲ್ಲಿ ನಾಟಕ ಪ್ರದರ್ಶನ ನೀಡುವ, ಸತತವಾಗಿ ನಾಲ್ಕು ದಶಕಗಳಿಂದ ರಾಜ್ಯದ ಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ನಡೆಸುತ್ತಿರುವ, ರಾಜ್ಯದ ಅತ್ಯಂತ ಪ್ರಮುಖ ಹವ್ಯಾಸಿ ರಂಗತಂಡವಾದ ರಂಗಭೂಮಿ (ರಿ.) ಉಡುಪಿ, ರಥಬೀದಿ ಗೆಳೆಯರು,ಸುಮನಸಾ ಕೊಡವೂರು ಎಂಬ ಸಂಸ್ಥೆಗಳು ಉಡುಪಿಯ ಸಂಸ್ಕೃತಿಯನ್ನು ಉಳಿಸಲು ಬಹಳಷ್ಟು ಕೆಲಸವನ್ನು ಮಾಡುತ್ತಿದೆ.ಕುಂದಾಪುರದ ರಂಗ ಅಧ್ಯಯನ ಕೇಂದ್ರ, ಲಾವಣ್ಯ ಬೈಂದೂರು, ಸುರಭಿ ಬೈಂದೂರು, ಅಮೋಘ ಹಿರಿಯಡಕ, ಭೂಮಿಕಾ ಹಾರಾಡಿ, ಸಂಗಮ ಕಲಾವಿದರು ಮಣಿಪಾಲ,ಭೂಮಿಗೀತ ಪಟ್ಲ,ವನಸುಮ ವೇದಿಕೆ,ನವಸುಮ ರಂಗತಂಡ ಜಿಲ್ಲೆಯ ಪ್ರಮುಖ ಹವ್ಯಾಸಿ ರಂಗತಂಡಗಳು.
  • ಉಡುಪಿ ಜಿಲ್ಲೆಯಾದ್ಯಂತ ಪ್ರಚಲಿತದಲ್ಲಿರುವ ವಿಶ್ವವಿಖ್ಯಾತ ಕಲೆಯೆಂದರೆ ಯಕ್ಷಗಾನ. ಮುಖ್ಯವಾಗಿ ಬಡಗು ತಿಟ್ಟು ಯಕ್ಷಗಾನ ಇಲ್ಲಿ ಮತ್ತು ನೆರೆಯ ಉತ್ತರಕನ್ನಡ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ. ದೇವರ ಸೇವೆಯ ರೂಪದಲ್ಲಿ ಆರಂಭಗೊಂಡ ಈ ಕಲೆಯು ೨೦ ನೆಯ ಶತಮಾನದ ಉತ್ತರಾರ್ಧದಲ್ಲಿ ವಾಣಿಜ್ಯ ರೂಪವನ್ನು ಪಡೆದುಕೊಂಡು, ನಾಟಕಗಳ ರೀತಿ ಟಿಕೇಟು ಮೂಲಕ ನೋಡುವಂತಹ ಕಲೆಯಾಗಿ ರೂಪುಗೊಂಡಿದೆ.
  • ಈ ಜಿಲ್ಲೆಯ ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ, ಅಮೃತೇಶ್ವರಿ ಮೇಳ, ಹಾಲಾಡಿ ಮೇಳ, ಮಂದಾರ್ತಿ ಮೇಳ, ಕಮಲಶಿಲೆ ಮೇಳ, ಮಾರಣಕಟ್ಟೆ ಮೇಳ, ಸೌಕೂರು ಮೇಳ, ಸಾಲಿಗ್ರಾಮ ಮಕ್ಕಳ ಮೇಳ ಮೊದಲಾದವುಗಳು ಇಲ್ಲಿನ ಯಕ್ಷಗಾನದ ನಂಟನ್ನು ಋಜುವಾತುಪಡಿಸುತ್ತವೆ. ಯಕ್ಷಗಾನದ ವೃತ್ತಿ ಕಲಾವಿದರಿಗೆ ಹೊಸ ಚೈತನ್ಯ ನೀಡುತ್ತಿರುವ ಯಕ್ಷಗಾನ ಕಲಾರಂಗ, ದೇಶ ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಗಳಿಸಿರುವ ಯಕ್ಷಗಾನದ ಪಾರಂಪರಿಕ ಶಿಕ್ಷಣ ನೀಡುವ ಯಕ್ಷಗಾನ ಕೇಂದ್ರ ಇಲ್ಲಿಯ ಮೆರುಗು.

ತುಳು ರಂಗಭೂಮಿಯಲ್ಲಿ ಇತ್ತೀಚೆಗೆ ಸಾಕಷ್ಟು ಬದಲಾವಣೆ ಗಳು,ಹೊಸತನ ಬಂದಿದೆ. ಕಾಪುವಿನ 'ರಂಗ ತರಂಗ' ಎಂಬ ಸಕ್ರಿಯ ನಾಟಕ ತಂಡವು 'ತಿಲಕೆ ತಿರ್ಗಯೆ','ಪಿರ ಬನ್ನಗ','ಆಯೆ ಸುಬಗೆ' ಮುಂತಾದ ನಾಟಕಗಳನ್ನು ಉಡುಪಿ ಜಿಲ್ಲೆಯಾದ್ಯಂತ ಹಾಗೂ ದ.ಕ.,ಮುಂಬಯಿಗಳಲ್ಲಿ ಆಡಿ ತೋರಿಸಿ ಪ್ರಸಿದ್ದಿ ಗಳಿಸಿದೆ.

  • ಅದಲ್ಲದೆ ದಿ.ಬಾಲಕೃಷ್ಣ ಪೈ ಯವರ 'ಮೂರು ಮುತ್ತು', ಸಾಸ್ತಾನದ ಸಾಧನಾ ಕಲಾವಿದರು, ಕಟಪಾಡಿಯ ರಂಜನಾ ಕಲಾವಿದರು ಮುಂತಾದ ರಂಗಭೂಮಿ ನಾಟಕ ತಂಡಗಳು ಉಡುಪಿ ಜಿಲ್ಲೆಯಲ್ಲಿವೆ. ಕೊಳಿ ಅಂಕ ಕೂಡಾ ಒಂದು ಜನಪದ ಕ್ರೀಡೆ ಪಾರಂಪರಿಕವಾದ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳು ನಡೆದಿವೆ.
  • ಉಡುಪಿಯ ಜಾನಪದ ಅಧ್ಯಯನ ಕೇಂದ್ರ (RRC) ದೇಶಕ್ಕೇ ಪ್ರಖ್ಯಾತ.
  • ಕೆರೋಡಿ ಸುಬ್ಬರಾವ್, ಮುದ್ದಣ, [[ಗೋವಿಂದ ಪೈ

https://kn.wikipedia.org/s/31t

|ಎಂ. ಗೋವಿಂದಪೈ]], ಪಂಜೆ ಮಂಗೇಶರಾವ್, ಕಡೇಕಾರು ರಾಜಗೋಪಾಲ, ಕೃಷ್ಣರಾಯ, ಎಂ.ಎನ್. ಕಾಮತ್, ಉಗ್ರಾಣ ಮಂಗೇಶರಾವ್, ಉಲ್ಲಾಳ ಮಂಗೇಶ್ರಾವ್, ಪೇಜಾವರ ಸದಾಶಿವರಾವ್, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣಭಟ್ಟ, ಎಂ. ಮರಿಯಪ್ಪ ಭಟ್ಟ , ಡಾ.ಬನ್ನಂಜೆ ಗೋವಿಂದಾಾಚಾರ್ಯ ಮೊದಲಾದದ ಸಾಹಿತ್ಯ ಶ್ರೇಷ್ಠರ ಕಾರ್ಯಕ್ಷೇತ್ರ ಇದು. ಕೆ.ಕೆ. ಹೆಬ್ಬಾರರಂತಹ ಮಹಾಚಿತ್ರಕಲಾವಿದರ ಮೂಲ ಇಲ್ಲಿಯದು. ರಂಜಾಲ ಗೋಪಾಲಶೆಣೈರ ಶಿಷ್ಯರ ವಿಕ್ರಮಶಿಲ್ಪ ಕಾರ್ಯಾಗಾರವಿದೆ.

  • ಭರತ ನಾಟ್ಯ, ಯಕ್ಷಗಾನ ಹಾಗೂ ವಿವಿಧ ನೃತ್ಯಗಳನ್ನು ಕಲಿಸುವ ಮತ್ತು ಕಲಾವಿದರ ಸಂಸ್ಥೆಗಳು ಇಲ್ಲಿ ಬೇರುಬಿಟ್ಟಿವೆ. ಫೋಕಲ್ ಫೋಟೋಕ್ಲಬ್‍ನಂತಹ ಛಾಯಾಗ್ರಹಣ ಕಲೆ, ಆರ್ಟಿಸ್ಟ್ ಫೋರಂ ಅಂತಹ ಚಿತ್ರ ಕಲೆ ರೂಢಿಸುವ ಸಂಸ್ಥೆಗಳಿವೆ. ಉಡುಪಿ ಜಿಲ್ಲೆ ಮತ್ತು ಪಟ್ಟಣ ಇಂತಹ ಕಲಾಸಂಪತ್ತು ಜೀವಂತವಾಗಿರಲು ಸಾಕಷ್ಟು ಕಾಣಿಕೆ ಸಲ್ಲಿಸಿವೆ. ಕೋಳಿಅಂಕ, ಕಂಬಳ ಮೊದಲಾದ ಗ್ರಾಮೀಣ ಪಂದ್ಯಗಳು ಇಂದಿಗೂ ನಡೆದುಬಂದಿವೆ.
  • ಪಿಲಿ ಏಸ: ಪಿಲಿ ಏಸ ನವರಾತ್ರಿ ಸಮಯದಲ್ಲಿ ಕ೦ಡು ಬರುವ ಆಚರಣೆಯಾಗಿದೆ. ಮೈ ಮೇಲೆ ಹುಲಿಯ೦ತೆ ಬಣ್ಣ ಮತ್ತು ಬಟ್ಟೆ ಧರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ.

ಉಡುಪಿ ತಾಲ್ಲೂಕು[ಬದಲಾಯಿಸಿ]

  • ವಿಸ್ತೀರ್ಣ ೯೨೯ಚ.ಕಿಮೀ. ಜನಸಂಖ್ಯೆ 529225 (2001). ಉತ್ತರದಲ್ಲಿ ಕುಂದಾಪುರ, ದಕ್ಷಿಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆ. ಪೂರ್ವದಲ್ಲಿ ಕಾರ್ಕಳ ತಾಲ್ಲೂಕುಗಳಿಂದಲೂ ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಲೂ ಸುತ್ತುವರೆದಿದೆ. ಕಾಪು, ಕೋಟ, ಉಡುಪಿ ಮತ್ತು ಬ್ರಹ್ಮಾವರ ಹೋಬಳಿ ಗಳು. ಈ ತಾಲ್ಲೂಕಿನಲ್ಲಿ 4 ಪಟ್ಟಣಗಳು ಮತ್ತು 99 ಗ್ರಾಮಗಳು ಇವೆ. ಪಶ್ಚಿಮ ಕರಾವಳಿಯಲ್ಲಿದ್ದು ಸಸ್ಯಸಮೃದ್ಧವಾಗಿರುವ ಈ ತಾಲ್ಲೂಕಿನಲ್ಲಿ ಸಾಗರಿಕ ವಾಯುಗುಣವಿದೆ. ನೈರುತ್ಯ ಮಾರುತಗಳಿಂದ ಸಾಕಷ್ಟು ಮಳೆ ಬೀಳುತ್ತದೆ.
  • ವಾರ್ಷಿಕ ಸರಾಸರಿ 4188ಮಿಮೀ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಅನೇಕ ತೊರೆಗಳು ಹಾಗೂ ಸೀತಾ ಮತ್ತು ಸ್ವರ್ಣ ನದಿಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತವೆ. ಈ ತಾಲ್ಲೂಕಿನಲ್ಲಿ 4686 ಹೆಕ್ಟೇರ್ ಗಳಷ್ಟು ಕಾಡು ಪ್ರದೇಶವಿದೆ. ಕಾಡಿನಲ್ಲಿ ಕರಿಮರ, ಮಾವು, ಮತ್ತಿ, ಕಿರಲಬೋಗಿ ಮತ್ತು ಬೆನ್ ಟೀಕ್ ಮುಂತಾದ ಮರಗಳು ಬೆಳೆಯುವುದಲ್ಲದೆ ಹುಣಸೆ, ಸೀಗೇಕಾಯಿ, ಬಿದಿರು ಈ ಉಪಯುಕ್ತ ವಸ್ತುಗಳೂ ದೊರೆಯುತ್ತವೆ. ಸ್ವಲ್ಪ ಮೆಣಸಿನ ಬೆಳೆಯೂ ಇದೆ.
  • ಉಡುಪಿ ತಾಲ್ಲೂಕಿನಲ್ಲಿ ದೊಡ್ಡ ನೀರಾವರಿ ಯೋಜನೆಗಳಿಲ್ಲ. ಆದರೆ ಸಾಕಷ್ಟು ಮಳೆ ಬೀಳುವುದರಿಂದ ನದಿ-ತೊರೆಗಳು ಇದ್ದು ಜಲಾಭಾವವಿಲ್ಲ. ಈ ತಾಲ್ಲೂಕಿನ ಚಂತರ ಮಡಗ ಮತ್ತು ಮರನಾಡ ಮಡಗ ಕೆರೆಗಳಿಂದ 370 ಎಕರೆಗಳಿಗೆ ನೀರೊದಗುತ್ತದೆ. ತಾಲ್ಲೂಕಿನಲ್ಲಿ ಪರ್ಷಿಯನ್ ಚಕ್ರ ಅಥವಾ ಪಂಪ್ಸೆಟ್ ಇರುವ, ಕಪಿಲೆ ಮತ್ತು ಇನ್ನಿತರ ನೀರಾವರಿ ಬಾವಿಗಳಿವೆ. ತಾಲ್ಲೂಕಿನ ತೀರದ ಉದ್ದಕ್ಕೂ ಮತ್ತು ಸ್ವಲ್ಪ ಒಳಭಾಗದಲ್ಲೂ ಜಂಬು ಮಣ್ಣನ್ನು (ಲ್ಯಾಟರೈಟ್) ಕಾಣಬಹುದು.
  • ಇಲ್ಲಿನ ಕಲ್ಲುಗಳು ಹೆಚ್ಚು ಒತ್ತಾಗಿದ್ದು ಪುಡಿಪುಡಿಯಾಗುವ ಕೆಂಪು ಜೇಡಿ ಮಣ್ಣನ್ನು ಒಳಗೊಂಡಿದೆ. ಚಿಪ್ಪು ಸುಣ್ಣ ಕಲ್ಲಿನ ಮತ್ತು ಜೇಡಿಮಣ್ಣಿನ ಸಂಗ್ರಹವೂ ಇದೆ. ನದಿ ಕಣಿವೆಗಳ ಉದ್ದಕ್ಕೂ ನಾನಾ ಬಣ್ಣದ ಜೇಡಿಮಣ್ಣು ಮೆಕ್ಕಲು ಮಣ್ಣಿನೊಡನೆ ಇರುವುದನ್ನು ಕಾಣಬಹುದು. ಕಟ್ಟಡ ಕಲ್ಲುಗಳು ಇದ್ದು-ಅಲಿಯೂರು, ಶಿರ, ಪಾಡು, ಕಡವೂರು ಮತ್ತು ಹರಡಿಯಲ್ಲಿ ಕಲ್ಲುಚಪ್ಪಡಿ ತೆಗೆಯುತ್ತಾರೆ. ಈ ತಾಲ್ಲೂಕಿನ 59.34 ಹೆಕ್ಟೇರುಗಳಲ್ಲಿ ಚಿಪ್ಪು ಸುಣ್ಣವನ್ನು ಸಂಗ್ರಹಿಸುತ್ತಾರೆ.
  • ಶುದ್ಧ ಬಿಳುಪಿನಿಂದ ಬೂದ ಮಿಶ್ರಿತ ಬಿಳಿ ರೀತಿಗಳ ಸಿಲಿಕ ಮರಳು ಹರಹುಗಳು ತೀರದ ಉದ್ದಕ್ಕೂ ಮುಳೂರು, ಕಾಪು, ಹೆಜಮಾಡಿ, ತೋನ್ಸೆ ಮತ್ತು ಉಳಿಯಾರಗೋಳಿ ಮುಂತಾದೆಡೆಗಳಲ್ಲಿ 30ಸೆ.ಮೀ. ನಿಂದ 1ಮೀ ಮಂದದಲ್ಲಿ ಹರಡಿವೆ. 12,000 ಟನ್ ಸಿಲಿಕ ಮರಳನ್ನು ಪ್ರತಿವರ್ಷ ಈ ಪ್ರದೇಶದಿಂದ ತೆಗೆದು ಬಳಸಿಕೊಳ್ಳಲಾಗುತ್ತಿದೆ. ಅಭ್ರಕದಿಂದ ಕೂಡಿದ ಬೆಣಚುಕಲ್ಲಿನ ಶಿಲೆಯನ್ನು ಈ ತಾಲ್ಲೂಕಿನ ಕಾಪು, ಪಡು, ಮೂಳೂರು, ಉಳಿಯಾರಗೋಳಿ, ಉದ್ಯಾವರ, ನಡಸಾಲು ಮತ್ತು ಹೆಜಮಾಡಿಗಳಲ್ಲಿ ಕಾಣಬಹುದು.
  • ಹಂಚು ತಯಾರಿಕೆಗೆ ಬೇಕಾದಂಥ ವಿಶಿಷ್ಟವಾದ ಮಣ್ಣು ಈ ತಾಲ್ಲೂಕಿನ ಮಲ್ಪೆ ಮುಂತಾದೆಡೆ ದೊರೆಯುತ್ತದೆ. ಬತ್ತ, ಕಬ್ಬು ಮತ್ತು ನೆಲಗಡಲೆ ಮುಖ್ಯ ವ್ಯವಸಾಯ ಬೆಳೆಗಳು. ತೆಂಗು, ಅಡಕೆ, ಗೇರು ಮುಖ್ಯ ತೋಟಗಾರಿಕೆ ಬೆಳೆಗಳು 2004-05 ಅಂಕಿ ಅಂಶಗಳ ಪ್ರಕಾರ ಹಣ್ಣುಗಳು 5989 ಹೆ, ಕರಿಮೆಣಸು 50 ಹೆ., ರಬ್ಬರ್ 33, ಹಲಸು 394, ತೆಂಗು (5857), ಕಬ್ಬು (110), ಬತ್ತ (25562), ಗೇರು (4168), ನೆಲಗಡಲೆ (1506), ದ್ವಿದಳ ಧಾನ್ಯಗಳು (5318), ಅಡಕೆ (586), ಬಾಳೆ (338), ಮಾವು (618), ಸಿಹಿ ಗೆಣಸು (217), ಮೊದಲಾದ ಬೆಳೆಗಳು ಬೆಳೆಯುತ್ತಿವೆ.

ಇಲ್ಲಿಯ ಜನರ ಮುಖ್ಯ ಕಸಬು[ಬದಲಾಯಿಸಿ]

  • ಇಲ್ಲಿಯ ಜನರ ಮುಖ್ಯ ಕಸಬು ವ್ಯವಸಾಯವಾದರೂ ಇತರ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದುತ್ತಿದ್ದಾರೆ. ಸ್ವರ್ಣ ನದಿ ಮತ್ತು ಸೀತಾ ನದಿಗಳಲ್ಲಿ ಹಾಗೂ ಸಮುದ್ರದಲ್ಲಿ ಮೀನು ಹಿಡಿದು ಮತ್ಸ್ಯೊದ್ಯಮವನ್ನೇ ಮುಖ್ಯ ಕಸಬನ್ನಾಗಿ ಮಾಡಿಕೊಂಡಿರುವವರೂ ಇದ್ದಾರೆ. ಈ ತಾಲ್ಲೂಕಿನಲ್ಲಿ ಕೋಳಿಸಾಕಣೆ ಮತ್ತು ಪಶುಪಾಲನೆ ಕೆಂದ್ರಗಳೂ ಇವೆ. ಜಿಲ್ಲೆಯ ಎಲ್ಲ ಕಡೆಗೂ ಉತ್ತಮ ರಸ್ತೆ ಸಂಪರ್ಕವಿದೆ. ಒಟ್ಟು 343 ಪ್ರಾಥಮಿಕ ಶಾಲೆಗಳು 100 ಪ್ರೌಢ ಶಾಲೆಗಳು ಮತ್ತು ಕಾಲೇಜುಗಳೂ ಇವೆ.

ಇತರೆ ಸೌಲಭ್ಯಗಳು[ಬದಲಾಯಿಸಿ]

  • ಉಡುಪಿಗೆ ಉತ್ತರದಲ್ಲಿ 3 ಕಿಮೀ ದೂರದಲ್ಲಿರುವ ಮಣಿಪಾಲದಲ್ಲಿ ಮಣಿಪಾಲ ಮುದ್ರಣಾಲಯ, ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಶಿಕ್ಷಣ ತರಬೇತಿ ಕಾಲೇಜುಗಳಿವೆ. ಸಿಂಡಿಕೇಟ್ ಬ್ಯಾಂಕ್ ನ ಕೇಂದ್ರ ಕಚೇರಿ ಇದೆ. ಇಲ್ಲಿ ಸ್ಥಾಪಿತವಾಗಿರುವ ದಿ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಸಂಸ್ಥೆ ವಿದ್ಯಾಪ್ರಸಾರಣಾ ಕಾರ್ಯದಲ್ಲಿ ವಿಶೇಷ ರೀತಿಯ ಸೇವೆ ಸಲ್ಲಿಸುತ್ತಿದೆ. 35 ಪದವಿ ಪೂರ್ವ ಕಾಲೇಜುಗಳು, 4 ಸರ್ಕಾರಿ ಕಾಲೇಜುಗಳೂ ಇವೆ. ಖಾಸಗಿ ಕಾಲೇಜುಗಳು 5, ಮಣಿಪಾಲದಲ್ಲಿ ವೈದ್ಯಕೀಯ 2 ಮತ್ತು ಎಂಜಿನಿಯರಿಂಗ್ 2 ಕಾಲೇಜು ಗಳಿವೆ.
  • ಪಾಲಿಟೆಕ್ನಿಕ್ ಕಾಲೇಜು, 1 ದಂತ ಕಾಲೇಜು ಉದ್ಯಾವರ, ಕಲ್ಯಾಣಪುರ, ತೋನ್ಸೆ, ಪೆರ್ಡೂರು, ಬ್ರಹ್ಮಾವರ, ಬಾರಕೂರು, ಮಂದಾರ್ತಿ - ಇವು ತಾಲ್ಲೂಕಿನ ಕೆಲವು ಮುಖ್ಯ ಸ್ಥಳಗಳು (ಇವುಗಳಿಗೆ ಪ್ರತ್ಯೇಕ ಲೇಖನಗಳಿವೆ). ಉಡುಪಿಗೆ ಹತ್ತಿರವಿರುವ ಕರಂಕರಪಾಡಿಯಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ಕೆಲವು ಕುರುಹುಗಳು ಸಿಕ್ಕಿವೆ. ಎಣ್ಣೆ ಹೊಳೆ ಮತ್ತು ಸ್ವರ್ಣನದಿ ಸಂಗಮದಲ್ಲಿರುವ ಭದ್ರಗಿರಿಯಲ್ಲಿ ವಿಠ್ಠಲ ದೇವಾಲಯವಿದೆ. ಕಟಪಾಡಿಯಲ್ಲಿ ಪುರಾತನ ದೇವಾಲಯಗಳಿವೆ.
  • ಕಾಪುವಿನಲ್ಲಿ ಜೈನಬಸದಿ ಮತ್ತು ಮಾರಿಯಮ್ಮನ ಗುಡಿಗಳೂ ಕೋಟದಲ್ಲಿ ನರಸಿಂಹ, ಮಹಾದೇವ ಮತ್ತು ಅಮೃತೇಶ್ವರಿ ದೇವಾಲಯಗಳೂ ಇವೆ. ನಂದಿಕೂರಿನ ಅಮೃತೇಶ್ವರ, ಬಂಟ ಕಲ್ಲಿನಲ್ಲಿ ದುರ್ಗಾಪರಮೇಶ್ವರಿ, ನಾಯಂಪಳ್ಳಿಯ ಗೋಪಾಲಕೃಷ್ಣ, ನೀಲಾವರದ ದುರ್ಗಾ ಭಗವತಿ, ಸಾಲಿಗ್ರಾಮದ ಯೋಗನರಸಿಂಹ ಹೆಸರಿಸಬೇಕಾದ ಇತರ ದೇವಾಲಯಗಳು. ಸುರುಳುವಿನ ಮಹಾದೇವ ದೇವಾಲಯ ಪೂರ್ಣ ಕಪ್ಪು ಶಿಲೆಯಲ್ಲಿ ನಿರ್ಮಿತವಾದುದು.
  • ಅಲೆಮೂರಿನಲ್ಲಿ ದುರ್ಗಾ ಮತ್ತು ಜನಾರ್ದನ ದೇವಾಲಯಗಳಿವೆ. ಈ ಜನಾರ್ದನ ದೇವಾಲಯ ಕದಂಬ ಮಯೂರವರ್ಮ ಕಟ್ಟಿಸಿದ್ದೆಂದು ಪ್ರತೀತಿ. ಚಿತ್ರಪದಿ ದಕ್ಷಿಣ ಕನ್ನಡ ಜಿಲ್ಲೆಯ ಬಲ್ಲಾಳವಂಶದವರ ಮೂಲಸ್ಥಾನ. ಕುಂಜಾರು ಮಧ್ವಾಚಾರ್ಯರು ಹುಟ್ಟಿದ ಸ್ಥಳ. ಇಲ್ಲಿ ಮಹಿಷಾಸುರ ಮರ್ಧಿನಿ ದೇವಾಲಯವೂ ನಾಲ್ಕು ಪುಷ್ಕರಣಿಗಳೂ ಇವೆ. ಹತ್ತಿರದಲ್ಲಿ ಕುಂಜಾರುಗಿರಿ ಮತ್ತು ಪರಶುರಾಮಗಿರಿ ಎಂಬ ಎರಡು ಚಿಕ್ಕ ಬೆಟ್ಟಗಳಿವೆ. ಪರಶುರಾಮಗಿರಿಯ ಮೇಲೆ ಪರಶುರಾಮ ವಿಗ್ರಹವಿದೆ.
  • ಎರ್ಮಾಳಿನಲ್ಲಿ ಒಂದು ಚಂದ್ರನಾಥ ಬಸದಿ ಮತ್ತು ಮಧ್ವಾಚಾರ್ಯರು ಸ್ಥಾಪಿಸಿದ ಜನಾರ್ದನ ದೇವಾಲಯ ಇವೆ. ನಿಡಂಬೂರಿನಲ್ಲಿ ಆಂಜನೇಯ ದೇವಾಲಯವಿದೆ. ಇಲ್ಲಿ ಪ್ರಥಮವಾಗಿ ಪೂಜೆ ಸಲ್ಲಿಸಿದ ಅನಂತರವೇ ಉಡುಪಿಯ ಪರ್ಯಾಯ ಮಠಾಧಿಪತಿಗಳು ತಮ್ಮ ಪೂಜೆಯನ್ನು ಆರಂಭಿಸುವುದು ಪದ್ಧತಿ. ಪಡುಬಿದ್ರಿ ಒಂದು ದೊಡ್ಡ ಊರು, ಮೀನು ವ್ಯಾಪಾರಕ್ಕೆ ಪ್ರಸಿದ್ಧಿ, ಇಲ್ಲಿ ಕೆಲವು ದೇವಾಲಯ(ಶ್ರೀ ಮಹಾ ಗಣಪತಿ ದೇವಸ್ಥಾನ , ಶ್ರೀ ಬ್ರಹ್ಮ ಸ್ಥಾನ ನಾಗ ದೇವಸ್ಥಾನ,

ಶ್ರೀ ಗುಡ್ಡೆ ಗಣಪತಿ ದೇವಾಲಯ) ಗಳೂ, ಎರಡು ಪ್ರೌಢಶಾಲೆಗಳೂ ಇವೆ.

ಪಟ್ಟಣ[ಬದಲಾಯಿಸಿ]

  • ಉಡುಪಿ ಈ ತಾಲ್ಲೂಕಿನಲ್ಲಿ ಆಡಳಿತ ಕೇಂದ್ರ. ಜಿಲ್ಲೆಯ ದೊಡ್ಡ ನಗರ. ಜನಸಂಖ್ಯೆ 113112 (2001). ಮಂಗಳೂರಿಗೆ ಉತ್ತರದಲ್ಲಿ 58 ಕಿಮೀ ದೂರದಲ್ಲಿದ್ದು ಮಂಗಳೂರು, ಕಾರ್ಕಳ, ಕುಂದಾಪುರ ಮುಂತಾದ ಪ್ರದೇಶಗಳೊಡನೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಉಡುಪಿಯ ಪಶ್ಚಿಮಕ್ಕೆ 5 ಕಿಮೀ ದೂರದಲ್ಲೇ ಮಲ್ಪೆ ಬಂದರಿದೆ. ಉಡುಪಿ ಪ್ರಸಿದ್ಧ ಧಾರ್ಮಿಕ ಕೇಂದ್ರ ಹಾಗೂ ಯಾತ್ರಾಸ್ಥಳ. ಶಿಕ್ಷಣ, ಕೈಗಾರಿಕೆಗಳಲ್ಲಿ ಸಹ ಪ್ರಗತಿಪಥದಲ್ಲಿರುವ ಊರು.

ಶಿಕ್ಷಣ ವ್ಯವಸ್ಥೆ[ಬದಲಾಯಿಸಿ]

  • ಲಾ ಕಾಲೇಜು, ಆಯುರ್ವೇದ ಕಾಲೇಜು, ಪೂರ್ಣಪ್ರಜ್ಞಾ ಕಾಲೇಜು, ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು, ಸಂಗೀತ, ಯಕ್ಷಗಾನ ಇತ್ಯಾದಿಗಳನ್ನು ಕಲಿಸುವ ಲಲಿತಕಲಾ ಕಾಲೇಜು ಮತ್ತು ವೇದ ವೇದಾಂತ ತರ್ಕ ವ್ಯಾಕರಣ ಇತ್ಯಾದಿಗಳನ್ನು ಕಲಿಸುವ ಸಂಸ್ಕೃತ ಮಹಾವಿದ್ಯಾಲಯ, ಎಂ.ಗೋವಿಂದ ಪೈ ಸಂಶೋಧನ ಕೇಂದ್ರ, ಸರ್ಕಾರಿ ಗ್ರಂಥಾಲಯ ಮುಂತಾದವು ಇಲ್ಲಿವೆ. ಏಳು ಪ್ರೌಢ ಶಾಲೆಗಳೂ ಹಲವಾರು ಮಾಧ್ಯಮಿಕ ಪ್ರಾಥಮಿಕ ಶಾಲೆಗಳೂ ಇವೆ. ಒಂದು ಹಂಚು ಕಾರ್ಖಾನೆ ಮತ್ತು ಕೊಬ್ಬರಿ ಎಣ್ಣೆ ಕಾರ್ಖಾನೆಗಳು ಇವೆ. *ಮ್ಯಾಜಿಸ್ಟ್ರೇಟ್ ಮತ್ತು ಮುನ್ಸಿಫ್ ನ್ಯಾಯಾಲಯಗಳಿವೆ. ವ್ಯಾಪಾರೋದ್ಯಮಕ್ಕೆ ಅನುಕೂಲವಾಗುವ ಬಂಡವಾಳವನ್ನೊದಗಿಸುವ ಬ್ಯಾಂಕುಗಳು, ಹಣಕಾಸು, ಸಂಸ್ಥೆಗಳು, ಇಲ್ಲಿವೆ. ಭಾರತ ಜೀವವಿಮಾ ಸಂಸ್ಥೆಯ ವಿಭಾಗ ಕೇಂದ್ರ ಕಚೇರಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಇವೆ. ಅನೇಕ ಸಾಂಸ್ಕೃತಿಕ ಸಂಘ ಸಂಸ್ಥೆಗಳಿವೆ. ಉಡುಪಿಯಲ್ಲಿ ಪುರಸಭೆ ಇದೆ. ನದಿ ನೀರನ್ನು ಕುಡಿಯಲು ಬಳಸಿಕೊಳ್ಳುತ್ತಿದೆ.

ಭೌಗೋಳಿಕತೆ[ಬದಲಾಯಿಸಿ]

  • 14ನೆಯ ಶತಮಾನದ ತನಕ ಉಡುಪಿ ಎಂಬ ಹೆಸರು ಇಲ್ಲಿನ ಅನಂತೇಶ್ವರ ದೇವಾಲಯದ ಪರಿಸರದಲ್ಲಿ ಒಂದು ಅಗಲ ಕಿರಿದಾದ ಸ್ಥಳಕ್ಕೆ ಮಾತ್ರ ಅನ್ವಯಿಸಿತ್ತು. ಕಾಲಕ್ರಮೇಣ ಈ ಹೆಸರು ವೈಶಾಲ್ಯವನ್ನು ಪಡೆಯಿತು. ಉಡುಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಕ್ಕೆ ಶಿವಳ್ಳಿ ಎಂಬ ಹೆಸರು 8ನೆಯ ಶತಮಾನದಿಂದಲೇ ಇತ್ತು. ಇದರ ಸಮೀಪವೇ ಕಕ್ಕುಂಜೆ ಎಂಬಲ್ಲಿ ಬಹು ಪ್ರಾಚೀನವಾದ ಒಂದು ಜನಾರ್ದನ ಬಿಂಬ ಚಿಕ್ಕದಾದೊಂದು ಗುಡಿಯಲ್ಲಿದೆ.
  • ಇತಿಹಾಸ ಕಾಲದಲ್ಲಿ ಉಡುಪಿ-ಶಿವಳ್ಳಿ-ನಿಡಂಬೂರು ಮತ್ತು ಬೆಟ್ಟುಪಾಡಿ ಬೀಡುಗಳು ಎಂಬ ಎರಡು ಪ್ರಮುಖ ವಿಭಾಗಗಳಿಂದ ಕೂಡಿತ್ತು. ಈ ಬೀಡುಗಳ ಅಧಿಕಾರಿಗಳು ಬ್ರಾಹ್ಮಣರಾಗಿದ್ದರು. ಆನಂದಗಿರಿ ವಿರಚಿತ ಶಂಕರ ವಿಜಯದಲ್ಲೂ ಉಡುಪಿ ಮಹಾತ್ಮ್ಯದಲ್ಲೂ ಉಡುಪಿಗೆ ರಜತಪೀಠಪುರವೆಂಬ ಹೆಸರಿದೆ. ಸು.10ನೆಯ ಶತಮಾನದಲ್ಲಿ ಈ ಹೆಸರು ಬಳಕೆಯಲ್ಲಿತ್ತು. ತುಳು ನಾಡಿನ ಸಪ್ತಕ್ಷೇತ್ರಗಳಲ್ಲಿ ರೌಪ್ಯಪೀಠ ಅಥವಾ ರಜತಪೀಠಪುರ ಒಂದಾಗಿದೆ.
  • ಚಂದ್ರ (ಉಡು+ಪಿ) ಶಾಪದಿಂದ ವಿಮೋಚನೆಯನ್ನು ಪಡೆಯುವುದಕ್ಕೋಸ್ಕರ ಶಿವನನ್ನು ಕುರಿತು ತಪ್ಪಸ್ಸು ಮಾಡಿದಾಗ ಶಿವನು ಪ್ರತ್ಯಕ್ಷನಾದ ಸ್ಥಳ ಉಡುಪಿ ಎಂದು ಸ್ಥಳಪುರಾಣದ ಹೇಳಿಕೆ. ಉಡುಪಿ ಶಬ್ದ ನಾಗ ಸಂಬಂಧಿಯೂ ಆಗಿದ್ದುದರಿಂದ ಉಡುಪಿ ನಾಗಾರಾಧನೆಗೆ ಹೆಸರುವಾಸಿ ಯಾದ ಸ್ಥಳವೆನ್ನಬಹುದು. ಇಲ್ಲಿಯ ಬಹು ಪ್ರಾಚೀನ ಚಾರಿತ್ರಿಕ ಅವಶೇಷ ಶ್ರೀ ಅನಂತೇಶ್ವರ ದೇವಾಲಯ, ಸು.8-9ನೆಯ ಶತಮಾನದ್ದು. ಇದು ಗಜಪೃಷಾಕಾರವಾಗಿದ್ದು ಕರ್ನಾಟಕದ ಹಿರಿಯ ದೇವಾಲಯಗಳಲ್ಲಿ ಒಂದೆನ್ನಬಹುದು.
  • ಈ ದೇವಾಲಯದ ಎದುರು ತಗ್ಗಾದ ಸ್ಥಳದಲ್ಲಿ ಚಂದ್ರಮೌಳೀಶ್ವರವೆಂಬ ದೇವಾಲಯವಿದೆ. ಇದು ಸಹ ಸು.9-10ನೆಯ ಶತಮಾನದ ದೇಗುಲ. ಈ ದೇವಾಲಯದ ನಿರ್ಮಾಣಕ್ಕಿಂತ ಮೊದಲು ಇದು ಕೆರೆಯಾಗಿರಬೇಕು. ಇಲ್ಲಿನ ಕೃಷ್ಣದೇವಾಲಯ ಅಖಿಲ ಭಾರತದಲ್ಲೇ ಸಾಕಷ್ಟು ಖ್ಯಾತಿ ಪಡೆದಿದೆ. ಶ್ರೀ ಕೃಷ್ಣಮಠವೆಂದು ಕರೆಯಲ್ಪಡುವ ಈ ದೇವಾಲಯ ಅನಂತೇಶ್ವರ ದೇವಾಲಯದ ಪರಿಸರದಲ್ಲಿ ಈಶಾನ್ಯ ದಿಕ್ಕಿಗಿದೆ.
  • ಈ ಮಠದ ರಚನೆ ಸರಳವಾಗಿದ್ದರೂ ಇದೊಂದು ಆಯುತಾಕಾರದ ಕಟ್ಟಡವಾಗಿದ್ದು ಉತ್ತರ ಭಾಗದಲ್ಲಿ ಒಳಗೆ ಪ್ರವೇಶವಿದ್ದು ಪಶ್ಚಿಮ ಭಾಗದ ಕಿಂಡಿಯಿಂದ (ಕನಕನ ಕಿಂಡಿ) ಶ್ರೀಕೃಷ್ಣನ ದರ್ಶನವನ್ನು ಮಾಡುವ ವ್ಯವಸ್ಥೆಯಿಂದ ಕೂಡಿದೆ. ಈ ಮೂರ್ತಿಯನ್ನು ಮಧ್ವಾಚಾರ್ಯರು 13ನೆಯ ಶತಮಾನದ ಅಂತ್ಯ ಭಾಗದಲ್ಲಿ ಪ್ರತಿಷ್ಠಾಪಿಸಿದರು. ಕೃಷ್ಣನ ಮೂರ್ತಿ ಉಡುಪಿಗೆ ಹಡಗಿನ ಮೂಲಕ ಬಂದ ವಿಚಾರದಲ್ಲಿ ಸಾಂಪ್ರದಾಯಿಕವಾದ ಒಂದು ಹೇಳಿಕೆ ಇದ್ದರೂ ಇದನ್ನು ಮಧ್ವಾಚಾರ್ಯರು ತಮ್ಮ ಔತ್ತರೇಯ ಪರ್ಯಟನ ಸಮಯದಲ್ಲಿ ತಂದು ಉಡುಪಿಯಲ್ಲಿ ಸ್ಥಾಪಿಸಿದರೆನ್ನಬಹುದು. *ಬಲ ಕೈಯಲ್ಲಿ ದಂಡ ಹಿಡಿದಿರುವ 15" ಎತ್ತರದ ಈ ಮೂರ್ತಿ ಬಹು ಪ್ರಾಚೀನವೂ ಮಹತ್ವವುಳ್ಳದ್ದೂ ಆಗಿದೆ. ಶ್ರೀ ಕೃಷ್ಣಮಠದಲ್ಲೇ ಶಂಕರಾಚಾರ್ಯರ ಶಿಷ್ಯರಾದ ಹಸ್ತಾಮಲಕಾ ಚಾರ್ಯರಿಂದ ಪ್ರತಿಷ್ಠಿತವಾದದ್ದೆನ್ನಲಾದ ತೈಲಕೃಷ್ಣ ಎಂಬ ವ್ಯಾವಹಾರಿಕ ಹೆಸರನ್ನು ಪಡೆದಿರುವ ಇನ್ನೊಂದು ಸುಂದರ ಮೂರ್ತಿ ಇದೆ. ಇದು ಸು.9ನೆಯ ಶತಮಾನದ ವೇಣುಗೋಪಾಲ ಕೃಷ್ಣಮೂರ್ತಿ, ಶ್ರೀ ಕೃಷ್ಣಮಠದ ಒಂದು ಭಾಗದಲ್ಲಿ ಮಧ್ವಪುಷ್ಕರಿಣಿ ಇದೆ.
  • ಉಡುಪಿಯಲ್ಲಿ ಸೋದೆ, ಶಿರೂರು, ಕಾಣಿಯೂರು, ಕೃಷ್ಣಾಪುರ, ಆದಮಾರು, ಪಲಿಮಾರು, ಪೇಜಾವರ, ಪುತ್ತಿಗೆ ಎಂಬ ಅಷ್ಟ ಮಠಗಳಿವೆ. ಈ ಮಠಗಳ ಯತಿಗಳು ಶ್ರೀಕೃಷ್ಣನ ಪೂಜೆಯನ್ನು ಪರ್ಯಾಯ ಕ್ರಮದಲ್ಲಿ ಎರಡೆರಡು ವರ್ಷಗಳ ಕಾಲ ಮಾಡುತ್ತಾರೆ. ಅಷ್ಟಯತಿಗಳ ಪರಂಪರೆ ಯನ್ನು ಸ್ಥಾಪಿಸಿದುದು ಮಧ್ವಾಚಾರ್ಯರಾದರೂ ಪರ್ಯಾಯ ಕ್ರಮವನ್ನು ಅನುಷ್ಠಾನಕ್ಕೆ ತಂದುದು ಸೋದೆ ಮಠದ ಯತಿವರ್ಯರಾದ ಶ್ರೀ ವಾದಿರಾಜರು.
  • ಅನುಕ್ರಮವಾಗಿ ಒಂದು ಮಠದ ಸ್ವಾಮಿಗಳಿಂದ ಇನ್ನೊಂದು ಮಠದ ಸ್ವಾಮಿಗಳು ಶ್ರೀ ಕೃಷ್ಣಮಠದ ಪೂಜಾಧಿಕಾರ ವಹಿಸಿಕೊಳ್ಳುವ ಸಮಾರಂಭವೇ ಪರ್ಯಾಯ ಮಹೋತ್ಸವ. ಇದು ಉಡುಪಿಯ ಅತ್ಯಂತ ದೊಡ್ಡ ಉತ್ಸವ, ಈ ಸಂದರ್ಭದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಉಡುಪಿಗೆ ಬರುತ್ತಾರೆ. ಉಡುಪಿಯಲ್ಲಿ ನಡೆಯುವ ಲಕ್ಷದೀಪೋತ್ಸವ, ಮಕರ ಸಂಕ್ರಮಣೋತ್ಸವ, ಶ್ರೀಕೃಷ್ಣ ಜಯಂತಿ ಇತರ ಪ್ರಮುಖ ಉತ್ಸವಗಳು.

ಕೆಲವು ಪ್ರಮುಖ ತಾಣಗಳು[ಬದಲಾಯಿಸಿ]

  1. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
  2. ಮರವಂತೆಯ ತೀರ
  3. ಸಾಲಿಗ್ರಾಮ ನರಸಿಂಹ ಮತ್ತು ಹನುಮಾನ್ ದೇವಸ್ಥಾನ
  4. ಕೋಟ ಅಮೃತೇಶ್ವರಿ ದೇವಸ್ಥಾನ
  5. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ
  6. ಕೋಟ ಶನೇಶ್ವರ ದೇವಸ್ಥಾನ
  7. ಕುಂಭಾಸಿ ಅಮ್ಮನವರ ದೇವಸ್ಥಾನ
  8. ಕೋಟಿ ಲಿಂಗೇಶ್ವರ ಕೋಟೇಶ್ವರ ದೇವಸ್ಥಾನ
  9. ಮೋಗವೀರ ಕುಲಮಹಸ್ರೀ ದೇವಸ್ಥಾನ
  10. ಮಲ್ಪೆ
  11. ಕಾಪು ದ್ವೀಪಸ್ತಂಭ
  12. ಕಾರ್ಕಳಗೊಮ್ಮಟೇಶ್ವರ, ಚತುರ್ಮುಖ ಬಸದಿ, ಅನಂತಶಯನ ದೇವಸ್ಥಾನ.
  13. ವೇಣೂರಿನ ಗೊಮ್ಮಟೇಶ್ವರ
  14. ಅತ್ತೂರಿನ ಸಂತ ಲಾರೆನ್ಸರ ಚರ್ಚ್
  15. ಸೈಂಟ್ ಮೇರೀಸ್ ದ್ವೀಪ
  16. ಮೂಡಬಿದಿರೆಯ ಸಾವಿರ ಕಂಬದ ಬಸದಿ
  17. ಮಣಿಪಾಲ
  18. ಹೂಡೆ ಸಮುದ್ರ
  19. ಹೆಬ್ರಿ
  20. ಬೇಳಂಜೆ
  21. ಕತ್ತಲೆ ಬಸದಿ ಬಾರ್ಕೂರು
  22. ಸೂರಾಲು ಅರಮನೆ
  23. ಬೈಂದೂರು ಕೋಸಳ್ಳಿ ಜಲಪಾತ
  24. ನಂದಳಿಕೆಯಲ್ಲಿನ ಕವಿ ಮುದ್ದಣನ ಮನೆ
  25. ಎಲ್ಲೂರು


ಇವನ್ನೂ ನೋಡಿ[ಬದಲಾಯಿಸಿ]

  1. ಪಾಜಕ
  2. ಕೃಷ್ಣ ಮಠ
  3. ಶ್ರೀ ಮಧ್ವಾಚಾರ್ಯರು
  4. ಕನಕದಾಸರು
  5. ಪುರಂದರದಾಸರು
  6. ಉಡುಪಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಹೊರಗಿನ ಸಂಪರ್ಕಗಳು[ಬದಲಾಯಿಸಿ]

  1. http://www.census2011.co.in/census/district/268-udupi.html
  2. http://censusindia.gov.in/2011-prov-results/paper2/data_files/India2/Table_2_PR_Cities_1Lakh_and_Above.pdf