ಪ್ರತಿಭಾ ಪಾಟೀಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರತಿಭಾ ಪಾಟೀಲ್
ಪ್ರತಿಭಾ ಪಾಟೀಲ್


ಪ್ರಸಕ್ತ
ಅಧಿಕಾರ ಪ್ರಾರಂಭ 
ಜುಲೈ ೨೫, ೨೦೦೭
ಪೂರ್ವಾಧಿಕಾರಿ ಎ ಪಿ ಜೆ ಅಬ್ದುಲ್ ಕಲಾಮ್
ಉತ್ತರಾಧಿಕಾರಿ ಪ್ರಣಬ್ ಮುಖರ್ಜಿ

ಜನನ ಡಿಸೆಂಬರ್ ೧೯, ೧೯೩೪
ನಾಡಗಾವ್, ಮಹಾರಾಷ್ಟ್ರ
ರಾಜಕೀಯ ಪಕ್ಷ ಕಾಂಗ್ರೆಸ್ (ಐ)
ಜೀವನಸಂಗಾತಿ ದೇವಿಸಿಂಗ್ ರಾಣ್‍ಸಿಂಗ್ ಶೇಖಾವತ್
ಧರ್ಮ ಹಿಂದು

ಪ್ರತಿಭಾ ದೇವಿಸಿಂಗ್ ಪಾಟೀಲ್ (Hindi: प्रतिभा देवीसिंह पाटिल) ಭಾರತದ ಪ್ರಸಕ್ತ ರಾಷ್ಟ್ರಾಧ್ಯಕ್ಷೆ. ದೇಶದ ಮೊದಲ ಮಹಿಳಾ ರಾಷ್ಟ್ರಪತಿ. ಜುಲೈ ೨೫, ೨೦೦೭ ರಂದು ಅಧಿಕಾರ ಸ್ವೀಕರಿಸಿದರು. ಮಹಾರಾಷ್ಟ್ರನಾಡ್ ಗಾವ್ ನಲ್ಲಿ ಡಿಸೆಂಬರ್ ೧೯, ೧೯೩೪ರಲ್ಲಿ ಇವರು ಜನಿಸಿದರು.

ಭಾರತದ ಮೊದಲ ರಾಷ್ಟ್ರಾಧ್ಯಕ್ಷೆ[ಬದಲಾಯಿಸಿ]

ಪ್ರತಿಭಾ ಪಾಟೀಲ್, ತಮ್ಮ ೨೮ ನೇ ವಯಸ್ಸಿನಲ್ಲಿಯೇ ಶಾಸಕಿಯಾದರು. ೩೩ ನೇ ವಯಸ್ಸಿನಲ್ಲಿ, ಸಹಾಯಕ ಸಚಿವೆಯಾಗಿ ಅನೇಕ ಖಾತೆಗಳನ್ನು ನಿರ್ವಹಿಸಿದ್ದಾರೆ. ಸ್ತ್ರೀ- ಶಿಕ್ಷಣ, ಸಹಕಾರ ಚಳವಳಿ, ಇವರ ಆಸಕ್ತಿಯ ಕ್ಷೇತ್ರಗಳು. ಸುಮಾರು ೩ ಲಕ್ಷ ಓಟುಗಳ ಅಂತರದ ಗೆಲುವಿನಿಂದ ನಮ್ಮ ದೇಶದ ೧೨ ನೆಯ,ಮಹಿಳಾ-ರಾಷ್ಟ್ರಪತಿಯಾಗಿ (ರಾಷ್ಟ್ರಾಧ್ಯಕ್ಷೆಯಾಗಿ) ಚುನಾಯಿಸಲ್ಪಟ್ಟರು. ಜುಲೈ ೨೫, ೨೦೦೭ ಬುಧವಾರದಂದು ಶ್ರೀಮತಿ ಪ್ರತಿಭಾ ಪಾಟೀಲರು ತಮ್ಮ ಹೊಸಪದವಿಯನ್ನು ಸ್ವೀಕರಿಸಿದರು.

ಮಹಿಳೆಯೊಬ್ಬರು ರಾಷ್ಟ್ರಾಧ್ಯಕ್ಷೆಯಾದಾಗ[ಬದಲಾಯಿಸಿ]

ಮಹಿಳೆಯಾದ್ದರಿಂದ ದೇಶದ ಆಗುಹೋಗುಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸುವಾಗ ಒಂದು ಮಾತೃತ್ವದಪ್ರೀತಿ, ವಾತ್ಸಲ್ಯ, ಮಮತೆಗಳ ಛಾಯೆಯನ್ನು ನಾವು ಅವರ ಕಾರ್ಯವಿಧಾನಗಳಲ್ಲಿ ನಿರೀಕ್ಷಿಸಬಹುದೆನ್ನಿಸುತ್ತದೆ ! ಜಲಗಾವ್ ನಂತಹ ಚಿಕ್ಕ ಹಳ್ಳಿಯಿಂದ ದೆಹಲಿಯ ರಾಷ್ಟ್ರಪತಿ ಭವನವನ್ನು ಮುಟ್ಟುವವರೆಗಿನ ಜೀವನ ಸಂಘರ್ಷ ಅತ್ಯಂತ ರೋಚಕವಾಗಿದೆ ! ಎಲ್ಲೂ ಹೆಚ್ಚಿನ ವಿವಾದಗಳಿಗೆ ಎಡೆಮಾಡಿಕೊಡದೆ, ಸದ್ದು -ಗದ್ದಲವಿಲ್ಲದೆ, ತಮ್ಮ ಕಾರ್ಯಗಳನ್ನು ನಿಭಾಯಿಸಿಕೊಂಡು ಬಂದ ಪ್ರತಿಭಕ್ಕನವರು, ಯಾವುದೇ ಜವಾಬ್ದಾರಿಯುತ ಹುದ್ದೆಯಲ್ಲಿರಲಿ, ನಮ್ಮ ಬೀ. ಡಿ. ಜತ್ತಿ, ವಸಂತರಾವ್ ನಾಯಿಕ್, ವೈ. ಬಿ. ಚವ್ಹಾನ್ ರಂತಹ ಹೆಸರಾಂತ ರಾಜಕಾರಣಿಗಳನ್ನು ನೆನೆಪಿಗೆ ತರುತ್ತಾರೆ.

ಕೌಟುಂಬಿಕ ಹಿನ್ನೆಲೆ[ಬದಲಾಯಿಸಿ]

ಪ್ರತಿಭಾ ಕುಮಾರಿ ಪಟೀಲ್ ಜನಿಸಿದ್ದು ೧೯ ಡಿಸೆಂಬರ್ ೧೯೩೪ರಂದು, ಮಹಾರಾಷ್ಟ್ರದ ಜಲಗಾಂ ಹತ್ತಿರದ ನಾಡ್ ಗಾಂ ಎಂಬ ಹಳ್ಳಿಯ ಒಂದು ಸಾಹುಕಾರ ಪರಿವಾರದಲ್ಲಿ. ಅವರ ತಂದೆಯವರ ಹೆಸರು, ನಾರಾಯಣ ಪಗ್ಲು ರಾವ್. ಮೂಲತಃ ಅವರ ಮನೆತನದವರು ರಾಜಸ್ತಾನದಿಂದ ಬಂದು ಮಹಾರಾಷ್ಟ್ರದ ಜಲಗಾವ್ ನಲ್ಲಿ ವಾಸ್ತವ್ಯ ಹೂಡಿ, ಹತ್ತಿರ ಹತ್ತಿರ ಒಂದು ಶತಮಾನವೇ ಆಗಿರಬಹುದು. ಪ್ರಾಥಮಿಕ ಮಾಧ್ಯಮಿಕ ಶಾಲಾಶಿಕ್ಷಣಗಳನ್ನು ಜಲಗಾಂ ನ ಆರ್. ಆರ್. ಸ್ಕೂಲಿನಲ್ಲಿ ಮಾಡಿದರು. ನಂತರ ಎಮ್. ಎ. ಡಿಗ್ರಿಯನ್ನು ಮೂಲ್ಜಿ ಜೈತ ಕಾಲೇಜ್ (ಎಮ್. ಜೆ) ನಲ್ಲಿ ಓದಿಮುಗಿಸಿದರು. ಇಂಟರ್ ಕಾಲೇಜಿಯೇಟ್ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅನೇಕ ಪಾರಿತೋಷಕಗಳನ್ನು ಮೆಡಲ್ ಗಳನ್ನೂ ಗೆದ್ದಿದ್ದಾರೆ. ಇವರೊಬ್ಬ ಪ್ರಮುಖ ಟೇಬಲ್ ಟೆನ್ನಿಸ್ ಆಟಗಾರರಾಗಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದ್ದರಂತೆ. ೧೯೬೨ ರಲ್ಲಿ ಅವರ ಕಾಲೇಜಿನಿಂದ, " ಎಮ್. ಜೆ. ಕಾಲೇಜ್ ಕ್ವೀನ್" ಎಂಬುದಾಗಿ ಚುನಾಯಿಸಲ್ಪಟ್ಟಿದರು. ಅದೇ ವರ್ಷದಲ್ಲಿ ಅದಿಲಾಬಾದ್ ನಲ್ಲಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಟಿಕೆಟ್ ಪಡೆದು ಅಸೆಂಬ್ಲಿ ಎಲೆಕ್ಷನಿನಲ್ಲಿ ನಿಂತು, ಜಯಶೀಲರಾದರು. ಪ್ರತಿಭಾಪಾಟೀಲ್ ಮದುವೆಯಾದದ್ದು ಶ್ರೀ.ದೇವಿಸಿಂಗ್ ರಾಣ್ ಸಿಂಗ್ ಶೆಖಾವತ್ರವರ ಜೊತೆಗೆಜುಲೈ ೭, ೧೯೬೫ ರಂದು. ಶೆಖಾವತ್ ಒಬ್ಬ ಸಂಘಟಕ ಹಾಗೂ ಶಿಕ್ಷಣ ಪ್ರಸಾರಕ. ಕೆಲವು ವೈಯಕ್ತಿಕ ಕಾರಣಗಳಿಂದ ತಮ್ಮ ಪರಿವಾರದ ಪಾಟೀಲ್ ಉಪನಾಮವನ್ನೆ ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದಾರೆ. ಈ ದಂಪತಿಗಳಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ.

ಶ್ರೀಮತಿ. ಪ್ರತಿಭಾ ಪಾಟೀಲ್ ರ ವೃತ್ತಿಜೀವನ[ಬದಲಾಯಿಸಿ]

ಪ್ರತಿಭಕ್ಕನವರು ಮೊದಲು ಸೋಶಿಯಲ್ ವರ್ಕರ್, ಆಗಿ ತಮ್ಮ ವೃತ್ತಿಯನ್ನು ಶುರುಮಾಡಿದರು. ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ , ಎಮ್. ಎ ; ಎಲ್. ಎಲ್. ಬಿ ; ಎಮ್. ಜೆ. ಕಾಲೇಜ್, ಜಲಗಾಂನಲ್ಲಿ [ಮಹಾರಾಷ್ಟ್ರ] ಮತ್ತು ಗವರ್ನಮೆಂಟ್ ಲಾ ಕಾಲೇಜ್, ಮುಂಬಯಿ. ಲಾ ಪದವೀಧರೆಯಾದಮೇಲೆ ಜಲಗಾವ್ ನಲ್ಲಿ ಅಡ್ವೊಕೇಟಾಗಿ ಕೆಲಸಮಯ ದುಡಿದರು.

ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ ಶ್ರೀಮತಿ. ಪ್ರತಿಭಾ ಪಾಟೀಲ್

ನವೆಂಬರ್, ೮, ೨೦೦೪ ರಿಂದ ರಾಜಾಸ್ಥಾನರಾಜ್ಯದ ೧೬ ನೆಯ ಗವರ್ನರ್ ಆಗಿ, ಇದುವರೆವಿಗೂ ಅಂದರೆ, ರಾಷ್ಟ್ರಪತಿಸ್ಥಾನಕ್ಕೆ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವವರೆಗೆ, ಸೇವೆಸಲ್ಲಿಸುತ್ತಿದ್ದರು. ಅವರು ರಾಜಾಸ್ಥಾನದ ಪ್ರಥಮ ಮಹಿಳಾಗವರ್ನರ್ ಕೂಡ. ೨೦೦೭ ರ ಆಗಸ್ಟ್ ತಿಂಗಳಲ್ಲಿ ಈಗಾಗಲೇ ರಾಷ್ಟ್ರವನ್ನುದ್ದೇಶಿಸಿ ಒಂದು ಅತ್ಯಂತ ಪ್ರಭಾವಿ ಭಾಷಣವನ್ನು ಮಾಡಿದರು. ಅದರಲ್ಲಿ ಮಹಿಳೆಯರು, ಮಕ್ಕಳು, ಮತ್ತು ಎಲ್ಲಾ ವರ್ಗದ ಜನರ ಹಿತಗಳ ಬಗ್ಗೆ ಒತ್ತು ಕೊಟ್ಟು ಮಾತಾಡಿದರು. ಇತ್ತೀಚೆಗೆ ಕಿತ್ತೂರು ರಾಣಿ ಚೆನ್ನಮ್ಮನವರ ವಿಗ್ರಹವನ್ನು, ಪಾರ್ಲಿಮೆಂಟ್ ಭವನದ ಮುಂದೆ ಉದ್ಘಾಟಿಸುವ ಮೂಲಕ, ಮಹಿಳೆಯರ ಮಹತ್ವವನ್ನು ದೇಶದ ಜನತೆಗೆ ಪರಿಚಯಿಸಿದರು.

ಶ್ರೀಮತಿ. ಪ್ರತಿಭಾ ಪಾಟೀಲ್, ’ಯುದ್ಧ ವಿಮಾನ ಸುಖೋಯ್’ ನಲ್ಲಿ ಪ್ರಯಾಣಿಸಿದ (೭೪ ವರ್ಷಪ್ರಾಯದ) ’ಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆ[ಬದಲಾಯಿಸಿ]

ಬುಧವಾರ, (೨೦೦೯ ರ, ನವೆಂಬರ್ ೨೫ ರಂದು) ಪುಣೆಯ ’ಲೋಹೆಗಾನ್ ವಾಯುನೆಲೆ’ ಯಲ್ಲಿ, 'ಎಂ. ಕೆ. ಐ, ಯುದ್ಧವಿಮಾನ, ಸುಖೋಯ್' ನಲ್ಲಿ ಅರ್ಧಗಂಟೆ ಹಾರುವುದರ ಮೂಲಕ, ಇಂತಹ ಸಾಹಸಕಾರ್ಯ ಮಾಡಿದ ’ಜಗತ್ತಿನ ಪ್ರಥಮ ಮಹಿಳಾರಾಷ್ಟ್ರಾಧ್ಯಕ್ಷೆ,’ ಎಂಬ ದಾಖಲೆಯನ್ನು ನಿರ್ಮಿಸಿದರು. ೧,೨೩೬ ಕಿ. ಮೀ. ವೇಗದಲ್ಲಿ ಹಾರಿದ ಯುದ್ಧ ವಿಮಾನ, ಆಗಸದಲ್ಲಿ ಯಾವ ಕಸರತ್ತನ್ನೂ ಮಾಡದೆ, ಬಂದಿಳಿದಾಗ, ನಮ್ಮ ರಾಷ್ಟ್ರದ ’ಮೂರು ಸೇನಾ-ಪಡೆಗಳ ಮಹಾ-ದಂಡನಾಯಕಿಯಾಗಿರುವ ಪ್ರತಿಭಾ ಪಾಟೀಲ್’ ವಿಜಯದ ನಗೆಯೊಂದಿಗೆ, ’ಪೈಲೆಟ್ ವಿಂಗ್ ಕಮ್ಯಾಂಡರ್, ಶ್ರೀ. ಎಸ್. ಸಜ್ಜನ್’ ರವರ ಕೈಕುಲಿಕಿ, ಹಾರಾಟ ಸಾಂಗವಾಗಿ ನೆರೆವೇರಿದ್ದಕ್ಕೆ ಶ್ಲಾಘಿಸಿದರು. ಯುದ್ಧನೌಕಾಯಾನದಲ್ಲಿ ಭಾಗವಹಿಸಿದ ೭೪ ವರ್ಷದ ಅತ್ಯಂತ ಹಿರಿಯಮಹಿಳೆಯೆಂಬ ಕೀರ್ತಿಯೂ ಅವರದಾಯಿತು. 'ಜಿ. ಸೂಟ್' ಧರಿಸಿ, ಸಹ-ಚಾಲಕನ ಸೀಟ್ ನಲ್ಲಿ ವಿರಮಿಸಿದ್ದ ಪಾಟೀಲ್ ಗೆ, ಸಂಕಟ ಬಂದಾಗ ತುರ್ತು ನಿರ್ಗಮನ, ಮುಂತಾದ ಹಲವು ಎಚ್ಚರಿಕೆಯ ಸೂಚನೆಗಳನ್ನು ನೀಡಲಾಗಿತ್ತು.

ಡಾ. ಎ. ಪಿ. ಜೆ. ಅಬ್ದುಲ್ ಕಲಾಂ’ಕೂಡಾ ತಮ್ಮ ರಾಷ್ಟ್ರಪತಿ-ಸಮಯಾವಧಿಯಲ್ಲಿ 'ಸುಖೋಯ್,'ನಲ್ಲಿ ಹಾರಿದ್ದರು[ಬದಲಾಯಿಸಿ]

ಹಿಂದಿನ ರಾಷ್ಟ್ರಪತಿ, ’ಡಾ. ಎ. ಪಿ. ಜೆ. ಅಬ್ದುಲ್ ಕಲಾಂ’ ಕೂಡ ಸುಖೋಯ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ್ದರು. ಹೀಗಾಗಿ ಪ್ರತಿಭಾ ಪಾಟೀಲ್ ರು ಎರಡನೆಯ ರಾಷ್ಟ್ರಪತಿಯಾಗಿದ್ದಾರೆ. ಹಾರಾಟಕ್ಕೆ ಪೂರ್ವಭಾವಿಯಾಗಿ ಪಾಟೀಲ್ ರಿಗೆ, ವಿಶ್ರಾಂತಿ-ಗೃಹದಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿ, ಅವರ ಆರೋಗ್ಯ ಹಾರಲು ಅನಾನುಕೂಲವಿಲ್ಲವೆಂಬುದನ್ನು ಖಾತ್ರಿಮಾಡಲಾಗಿತ್ತು. ಇಂದಿನ ಪ್ರಸಕ್ತ ಸಂದರ್ಭದಲ್ಲಿ ದೊರೆಯುತ್ತಿರುವ ರಕ್ಷಣಾ-ಸಂಪನ್ಮೂಲಗಳು ಮತ್ತು ನಮ್ಮ ದೇಶದ ವಾಯುಪಡೆಯ ಪೈಲೆಟ್ ಗಳ ವಾಯುಯಾನದ ಸಾಮರ್ಥ್ಯವನ್ನು ಅವರು ಮೆಚ್ಚಿ ಕೊಂಡಾಡಿದರು. ಅದೊಂದು ಅಧ್ಬುತ ಅನುಭವಾಗಿತ್ತೆಂದು ಅವರು ಪತ್ರಿಕಾಕರ್ತರಿಗೆ ತಿಳಿಸಿದರು.

ರಾಷ್ಟ್ರಪತಿ ಪ್ರತಿಭಾಸಿಂಗ್ ಪಾಟೀಲ್, ’ಹೆಲಿಕಾಪ್ಟರ್ ಅಪಘಾತ’ದಿಂದ ಪಾರು[ಬದಲಾಯಿಸಿ]

ಪುರಿಯಲ್ಲಿ ರಾಷ್ಟ್ರಪತಿಯವರು, ’ಅರ್ಬನ್ ಹಾಟ್,’ ಒಂದನ್ನು ೨೦೦೯ ರ, ದಿಸೆಂಬರ್ ೯, ರಂದು, ಉದ್ಘಾಟಿಸಿ, ಹೆಲಿಕಾಪ್ಟರ್ ನಲ್ಲಿ ಭುವನೇಶ್ವರಕ್ಕೆ ಹಿಂದಿರುಗಿದ ವೇಳೆ ಹೆಲಿಕಾಪ್ಟರ್ ನ ೩ ಬ್ಲೇಡ್ ಗಳೂ " ಬಿಜುಪಟ್ನಾಯಕ್ ವಿಮಾನ ನಿಲ್ದಾಣ" ದ ಶೆಡ್ ವೊಂದರ ಛಾವಣಿಗೆ ಬಡಿದಾಗ್ಯೂ, ಒಳಗಿದ್ದವರೆಲ್ಲಾ ಕೂದಲೆಳೆಯ ಅಂತರದಿಂದ ವಿಪತ್ತಿನಿಂದ, ಯಾವ ಸಾವುನೋವಿನ ಅಪಾಯವಿಲ್ಲದೆ ಪಾರಾದರು. ೧೬ ಸೀಟರ್ ಹೆಲಿಕಾಪ್ಟರ್ ನಲ್ಲಿ ರಾಷ್ಟ್ರಪತಿ ಪ್ರತಿಭಾಸಿಂಗ್, ಹಾಗೂ ಅವರ ಪತಿ, 'ದೇವಿಸಿಂಗ್ ಶಿಖಾವತ್', ಮತ್ತು ಒಡಿಶಾ ರಾಜ್ಯಪಾಲ, 'ಎಂ. ಸಿ. ಭಂಡಾರಿ'ಯವರೂ ಉಪಸ್ಥಿತರಿದ್ದರು.

೧೨ ನೇ ಶತಮಾನದಲ್ಲಿ ಕಟ್ಟಲಾಗಿರುವ ’ಜಗನ್ನಾಥ್ ದೇವಾಲಯ’ದಲ್ಲಿನ ದೇವಾಲಯದ ’ಲೆಕ್ಕ ಪತ್ರಗಳು,’ ಮತ್ತು ’ದಸ್ತಾವೇಜ್’ ಗಳು ಅತ್ಯುತ್ತಮವಾಗಿ ಇಂದಿಗೂ ಉಪಯೋಗದಲ್ಲಿಡಲಾಗಿದೆ. ಪ್ರತಿಭಾಪಾಟೀಲರ ತಂದೆ, ’ನಾರಾಯಣ್ ಸಿಂಗ್ ಮಾಡೆ’, ಸನ್, ೧೯೩೧ ರಲ್ಲಿ ದೇವಸ್ಥಾನಕ್ಕೆ ಯಾತ್ರಾರ್ಥಿಯಾಗಿ ಆಗಮಿಸಿದ್ದ ಸಮಯದಲ್ಲಿ ಮಾಡಿದ ಸಹಿಯನ್ನು ’ಪ್ರತಿಭಾ ಪಾಟೀಲ್’ ನೋಡಿ ಆನಂದಿಸಿದರು.

ರಾಜಕೀಯಕ್ಷೇತ್ರದಲ್ಲಿ ಶ್ರೀಮತಿ ಪ್ರತಿಭಾಪಾಟೀಲರು, ನಿರ್ಮಿಸಿದ ಹೆಜ್ಜೆಗುರುತುಗಳು[ಬದಲಾಯಿಸಿ]

  • ೧೯೬೨ರಲ್ಲಿ ಎಸ್.ಬಿ. ಚವಾಣ್‌ರಂಥ ಮರಾಠ ನೇತಾರರ ಪ್ರಭಾವದ ಅಡಿ ತಮ್ಮ ರಾಜಕೀಯ ಜೀವನ ಆರಂಭಿ
  • ಮಹಾರಾಷ್ಟ್ರ ವಿಧಾನಸಭೆಗೆ ಸತತವಾಗಿ ಆಯ್ಕೆ - ೧೯೬೨ ರಿಂದ ೧೯೮೫
  • ಮಹಾರಾಷ್ಟ್ರ ಸರ್ಕಾರದ ಸಚಿವರಾಗಿ ಪ್ರವಾಸೋದ್ಯಮ, ಸಂಸದೀಯ ವ್ಯವಹಾರಗಳು ಖಾತೆಯನ್ನು ನಿರ್ವಹಣೆ
  • ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ ಸಚಿವರಾಗಿ ಸಮಾಜ ಕಲ್ಯಾಣ ಖಾತೆಯ ನಿರ್ವಹಣೆ - ೧೯೭೨ ರಿಂದ ೧೯೭೪
  • ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ ಸಚಿವರಾಗಿ ಸಾರ್ವಜನಿಕ ಆರೋಗ್ಯ ಮತ್ತು ಸಮಾಜ ಕಲ್ಯಾಣ ಖಾತೆಯ ನಿರ್ವಹಣೆ - ೧೯೭೪ ರಿಂದ ೧೯೭೫
  • ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ ಸಚಿವರಾಗಿ ಸಮಾಜ ಕಲ್ಯಾಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳು ಖಾತೆಯ ನಿರ್ವಹಣೆ - ೧೯೭೫ ರಿಂದ ೧೯೭೬
  • ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ ಸಚಿವರಾಗಿ ಶಿಕ್ಷಣ ಖಾತೆಯ ನಿರ್ವಹಣೆ - ೧೯೭೭ ರಿಂದ ೧೯೭೮
  • ಮಹಾರಾಷ್ಟ್ರ ಸರ್ಕಾರದ ವಿರೋಧ ಪಕ್ಷದ ನಾಯಕಿಯಾಗಿ CLP(I) ಕಾರ್ಯ ನಿರ್ವಹಣೆ - ೧೯೭೮ ರಿಂದ ೧೯೮೦
  • ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ ಸಚಿವರಾಗಿ ನಗರಾಭಿವೃದ್ಧಿ ಖಾತೆಯ ನಿರ್ವಹಣೆ - ೧೯೮೨ ರಿಂದ ೧೯೮೫
  • ಮಹಾರಾಷ್ಟ್ರ ಸರ್ಕಾರದ ಕ್ಯಾಬಿನೆಟ ಸಚಿವರಾಗಿ ಗೃಹನಿರ್ಮಾಣ ಮತ್ತು ಸಮಾಜ ಕಲ್ಯಾಣ ಖಾತೆಯ ನಿರ್ವಹಣೆ - ೧೯೮೩ ರಿಂದ ೧೯೮೫
  • ರಾಜ್ಯಸಭೆಗೆ ಆಯ್ಕೆ : ಜೂನ್ ೧೯೮೫ ರಿಂದ ೧೯೯೦
  • ರಾಜ್ಯಸಭಾ ಉಪಾಧ್ಯಕ್ಷ ಹುದ್ದೆ - ನವೆಂಬರ್ ೧ ೧೯೮೬ ರಿಂದ ೧೯೮೮ (Chairman, Committee on Privileges,

Rajya Sabha Member, Business Advisory Committee, Rajya Sabha: 1986-88)

  • ೧೦ ನೇ ಲೋಕಸಭಾ ಅಮರಾವತಿ ಕ್ಷೇತ್ರದ ಸಂಸದೆ - ೧೯೮೫ ರಿಂದ ೧೯೯೬
  • ೧೦ ನೇ ಲೋಕಸಭಾ (Chairperson, House Committee,) - ೧೯೯೧
  • ಲೋಕಸಭಾ ಸದಸ್ಯಾವಧಿ ಅಂತ್ಯ - ೧೯೯೬
  • ರಾಜಸ್ಥಾನ ರಾಜ್ಯಪಾಲರಾಗಿ ನೇಮಕ (ಪ್ರಥಮ ಮಹಿಳಾ ರಾಜ್ಯಪಾಲರಾಗಿ)- ೮ನೇ ನವ್ಹಂಬರ್ ೨೦೦೪
  • ರಾಜ್ಯಸಭೆಯ ಉಪಸಭಾಪತಿ ಕಾರ್ಯ ನಿರ್ವಹಣೆ
  • ೧೩ ನೆಯ,ಮಹಿಳಾ-ರಾಷ್ಟ್ರಪತಿಯಾಗಿ ರಾಷ್ಟ್ರಾಧ್ಯಕ್ಷೆಯಾಗಿ, ಚುನಾಯಿಸಲ್ಪಟ್ಟರು.
  • ಪ್ರಪ್ರಥಮ ಮಹಿಳಾ ರಾಷ್ಟ್ರಾಧ್ಯಕ್ಷೆಯಾಗಿ ಹೊಸಪದವಿಯನ್ನು ಸ್ವೀಕರಿಸಿದರು - ಜುಲೈ ೨೫, ೨೦೦೭

ವಿದೇಶ ಪ್ರವಾಸದ[ಬದಲಾಯಿಸಿ]

ಶ್ರೀಮತಿ. ಪ್ರತಿಭಾ ಪಾಟೀಲ್ - ವಿದೇಶ ಪ್ರವಾಸ - ಬ್ರಾಜಿಲ್
  • ಯುರೋಪ್ : ಬ್ರಿಟನ್ , ಸೈಪ್ರಸ್ಗೆ, ಸ್ಪೇನ್ ಮತ್ತು ಪೋಲೆಂಡ್‌
  • ಎಷ್ಯಾ  : ರಷ್ಯಾ, ತಜಕಿಸ್ತಾನ್
  • ಅಮೆರಿಕ : ಲ್ಯಾಟಿನ್ ಅಮೆರಿಕ, ಬ್ರಾಜಿಲ್

ವಿಕಿಮೀಡಿಯಾ[ಬದಲಾಯಿಸಿ]

ಚಿತ್ರ ಗ್ಯಾಲರಿ- ಪ್ರತಿಭಾ ಪಾಟೀಲ್

ಉಲ್ಲೇಖಗಳು[ಬದಲಾಯಿಸಿ]

ಸವಾಲನ್ನಾಳಿದ ಸಮರ್ಥ ರಾಷ್ಟ್ರಪತಿ ( ಪ್ರತಿಭಾ ಪಾಟೀಲ್  ಅವರ ಜೀವನ ಚರಿತ್ರೆ ಕುರಿತ ಏಕೈಕ ಕನ್ನಡ ಪುಸ್ತಕ ) -- ಲೇಖಕರು ಡಾ ಅಭಿನಂದನ ಬಳ್ಳಾರಿ