ಜಾರಂದಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ತುಳುನಾಡಿನಲ್ಲಿ ಉಡುಪಿಯಿಂದ ಹಿಡಿದು ತೆಂಕಣ ಪೂರ್ವಕ್ಕೆ ತನ್ನ ಪ್ರಸರಣವನ್ನು ವಿಸ್ತಾರಗೊಳಿಸಿ ಮೆರೆದ ದೈವ ‘ಜಾರಂದಾಯ’. ರಾಜ್ಯದ ಗಡಿಕಾಯುವ ಮೂಲಕ ತನ್ನ ಅಧೀನಕ್ಕೊಳಗಾದ ಸಮಸ್ತ ಭಕ್ತರನ್ನು ರಕ್ಷಿಸುವ ಹೊಣೆಗಾರಿಕೆ ರಾಜನ್ ದೈವದ್ದು. ಜುಮಾದಿ, ಪಂಜುರ್ಲಿ, ಪಿಲ್ಚಂಡಿ, ಬಬ್ಬರ್ಯ, ಕೊಡಮಂದಾಯ, ಕುಕ್ಕಿನಂದಾಯ ಮೊದಲಾಗಿ ಕೆಲವೇ ದೈವಗಳಿಗೆ ಈ ಪಟ್ಟ ಸೀಮಿತ. ಆ ಗುಂಪಿನಲ್ಲಿ ಜಾರಂದಾಯ ದೈವವೂ ಸೇರಿಕೊಂಡಿರುವುದು. ಅದರ ಜೊತೆಗೆ ತುಳುನಾಡಿನ ಪೂರ್ವ ಸಂಪ್ರದಾಯದಲ್ಲಿ ನಡೆದು ಬಂದಂತೆ ಮನೆತನದ ‘ಅಧಿದೈವ’ವಾಗಿ ನಂಬಿದ ಸಂಸ್ಕಾರವನ್ನು ಕಾಯ್ದುಕೊಳ್ಳುವ ಘನತರದ ಜವಾಬ್ದಾರಿಯು ಜಾರಂದಾಯನಿಗಿದೆ. ತುಳುವರ ನಂಬಿಕೆಯ ಮಣೆ ಮಂಚದ ದೈವಗಳ ಕಥೆಯಲ್ಲಿರುವ ರೋಚಕತೆ ಜಾರಂದಾಯನಿಗೂ ಇದೆ. ಇವುಗಳಲ್ಲಿ ಕೆಲವು ದೈವಗಳು ಈಶ್ವರ ದೇವರ ಅಪ್ಪಣೆಯಂತೆ ತುಳುನಾಡು ಪ್ರವೇಶಿಸಿದರೆ, ಇನ್ನಿತರ ಅನೇಕ ದೈವಶಕ್ತಿಗಳು ತುಳುವರ ಪೂರ್ವ ಸಂತತಿಯಲ್ಲಿ ಹುಟ್ಟಿದವುಗಳು. ಬದುಕಿನಲ್ಲಿ ದಬ್ಬಾಳಿಕೆಗೆ ಸಿಲುಕಿ ಸಾಧಿಸಲಾಗದ ಕಾರ್ಯಗಳನ್ನು ದೈವತ್ವಕ್ಕೇರಿದ ಬಳಿಕ ಸಾಧಿಸಿದವರು. ಒಟ್ಟಿನಲ್ಲಿ ದೈವಾರಾಧನೆ ತಳುವರ ಬದುಕಿನ ಅವಿಭಾಜ್ಯ ಅಂಗವೆಂದರೆ ಅದು ತಪ್ಪಲ್ಲ.

ಕಥಾಸಾರ[ಬದಲಾಯಿಸಿ]

ಪೂರ್ವದಲ್ಲಿ ಕೈಲಾಸ ಪರ್ವತದಲ್ಲಿ ಈಶ್ವರ ದೇವರು ಗಂಭೀರವಾಗಿ ತಪಸ್ಸು ಮಾಡುತ್ತಿದ್ದರು. ಆ ಹೊತ್ತಿನಲ್ಲಿ ದುಷ್ಟ ದಾನವರಿಂದ ದೇವರ ತಪಸ್ಸಿಗೆ ಭಂಗವಾಯಿತು. ಆಗ ಉಗ್ರ ಕೋಪ ತಳೆದ ಪರಮೇಶ್ವರನ ತನ್ನ ಉದ್ದವಾದ ಜಡೆಯನ್ನು ಒಮ್ಮೆಲೆ ಅಪ್ಪಳಿಸಿದರು. ಅದೇ ವಿಷ ಗಳಿಗೆಯಲ್ಲಿ ವೀರಭದ್ರನ ಉದ್ಭವವಾಯಿತು. ವೀರಭದ್ರನ ಭಯಾನಕ ರೂಪವನ್ನು ಕಂಡಾಕ್ಷಣದಲ್ಲಿ ದೈತ್ಯ ದಾನವರು ಪ್ರಾಣದಾಸೆಯಿಂದ ಕಂಡ ಕಂಡಲ್ಲಿ ಓಡಿದರು. ಆ ಬಳಿಕ ವೀರಭದ್ರನು ಈಶ್ವರ ದೇವರಲ್ಲಿ ತನ್ನಿಂದ ಯಾವ ‘ಕಜ್ಜ ಕಾರ್ಯ’ವಾಗಬೇಕೆಂದು ಕೇಳಿಕೊಂಡನು. ಆಗ ಪರಮೇಶ್ವರ ದೇವರು “ನೀನು ಸತ್ಯ ಧರ್ಮವನ್ನು ಪಾಲಿಸಿಕೊಂಡು ಬರತಕ್ಕದ್ದು. ನಿನ್ನ ಉಘ್ರ ಕೋಪವನ್ನು ಬಿಟ್ಟು ಶಾಂತನಾಗು. ದೇವಲೋಕವನ್ನು ಬಿಡು, ಭೂಮಿ ಲೋಕವನ್ನು ಸೇರು. ಭೂಲೋಕದಲ್ಲಿ ಧರ್ಮದಿಂದ ಬದುಕುತ್ತಿರುವ ಭಕ್ತರನ್ನು ನೀನು ಸಂರಕ್ಷಿಸಬೇಕು. ನೀನು ಭೂಲೋಕದಲ್ಲಿ ‘ಧರ್ಮ ಜಾರಂದಾಯ’ ಎಂಬ ಹೆಸರನ್ನು ಪಡೆದು ನಿನ್ನ ಕಲೆ-ಕಾರ್ಣಿಕವನ್ನು ತೋರುತ್ತಿರು” ಎಂದು ಆಗ್ರಹಿಸಿದರು. ಈಶ್ವರ ದೇವರ ಅಪ್ಪಣೆ ಪ್ರಕಾರ ವೀರಭದ್ರನು ‘ಧರ್ಮಜಾರಂದಾಯ’ ಎಂಬ ಹೆಸರಿನ ದೈವವಾಗಿ ಭೂಮಿಗಿಳಿಯಲು ‘ಗೆಂದಗಿಡಿ’ಯ ರೂಪದಲ್ಲಿ ಹೊರಟನು. ಆಕಾಶ ಮಾರ್ಗದಲ್ಲಿ ಹಾರಾಡುತ್ತಾ ಪಡುಗಡಲ ತೀರದತ್ತ ತೀಕ್ಷ್ಣದೃಷ್ಟಿಯನ್ನು ಹರಿಸಿದನು. ಪಂಚವರ್ಣದ ನಾಗನಡೆಯ ತುಳುವ ನಾಡಿನ ಸತ್ಯದ ಮಣ್ಣಿನತ್ತ ತಾನು ಸೇರಬೇಕಾದ ಜಾಗವನ್ನು ಶೋಧನೆ ಮಾಡಲು ಪ್ರಾರಂಭ ಮಾಡಿದನು.

ತುಳುನಾಡಿನಲ್ಲಿ ಜಾರಂದಾಯ[ಬದಲಾಯಿಸಿ]

ತುಳುನಾಡಿನಲ್ಲಿ ಒಂದೆಡೆ ಬ್ರಹ್ಮ ವಂಶದ ದೇರೆಬೈಲು ಬಟ್ರು, ಬಾರೆಬೈಲು ಬಟ್ರು, ನಡುಗುಂದಿ ಬಾರೆಬೈಲು ಬಟ್ರು ಮತ್ತು ಇಡಗುಂಜಿ ಬಟ್ರು ಎಂಬ ನಾಲ್ವರು ಭಟ್ಟರು ಇದ್ದರು. ಇವರಿಗೆ ಗೇಯಲು ಭೂಮಿಯಿಲ್ಲ, ಉಳಲು ಕೋಣಗಳಿಲ್ಲ, ಬಿತ್ತಲು ಬೀಜಗಳಿಲ್ಲ ಅವರೆಲ್ಲ ಒಂದಾಗಿ ದೇವರನ್ನು ಪ್ರಾರ್ಥಿಸಿಕೊಂಡರು. ಅವರಿಗೆ ದೇವರು ಒಲಿದರು. ದೈವ ಕೃಪೆಯಿಂದ ಗೇಯಲು ಭೂಮಿ, ಉಳಲು ಕೋಣಗಳು, ಬಿತ್ತಲು ಬೀಜ ದೊರೆಯಿತು. ಆಗ ನಾಲ್ವರು ಒಂದಾಗಿ ‘ನೋಟನಿಮಿತ್ತ' ನೋಡಿದರು. ಆಗ ಮೇಲು ಲೋಕದಿಂದ ಈಶ್ವರ ದೇವರು ಇಳಿಸಿಕೊಟ್ಟ ‘ಧರ್ಮಜಾರಂದಾಯ’ ಎಂದು ತಿಳಿಯಿತು. ನಾಲ್ವರು ಬ್ರಾಹ್ಮಣರೊಂದಾಗಿ ದೈವವನ್ನು ಮೊದಲಾಗಿ ನಂಬಿಕೊಂಡು ಬಂದರು. ಆ ಬಳಿಕ ದೈವವು ‘ಕುಡಲ’ದ ಕೌಡೂರು ಕೋಟೆಯಿಂದ ನರಂಗ ಎಂಬವನ ಬೆನ್ನತ್ತಿ ‘ ಸೆಡ್ಯಕ್ಕೆ' ಬರುತ್ತದೆ. ಸೆಡ್ಯದಲ್ಲಿ ಕಲ್ಲಿನಲ್ಲಿ ‘ಒಂದುವರೆ ಸರ ಬುಡದಲ್ಲಿ ತನ್ನನ್ನು ನಂಬಿಕೊಂಡು ಬರಬೇಕೆಂದು ಅಪ್ಪಣೆಯಾಯಿತು. ದೈವದ ಅಪ್ಪಣೆ ಪ್ರಕಾರ ಚದರದ ನರಂಗನ್ನು ನಂಬಿಕೊಂಡು ಬರುವನು. ಆ ರಾತ್ರಿಯಲ್ಲಿ ಆ ಊರಿನ ‘ಅರ್ಬಿ’ ಮನೆತನದ ಹಿರಿಯರಿಗೆ ಜಾರಂದಾಯನು ಕನಸಿನಲ್ಲಿ ತೋರುವನು. ನಿಮ್ಮ ಊರಿನಲ್ಲಿ ಒಂದುವರೆ ತಾಳೆ ಮರದ ಬುಡದಲ್ಲಿ ‘ಚದರದ’ ಕಲ್ಲಿದೆ. ಅದೇನೆಂದು ಶೋಧಿಸಿ ಬರಬೇಕೆಂದು ಸ್ವಪ್ನವಾಯಿತು. ಅದೇ ಪ್ರಕಾರ ಮರು ಮುಂಜಾನೆ ಅರ್ಬಿ ಮನೆತನದವರು ಆ ಪ್ರದೇಶಕ್ಕೆ ಬಂದು ನೋಡಿದರು. ಅಲ್ಲಿ ‘ಚದರದ’ ಕಲ್ಲನ್ನು ಕಂಡರು. ಅದನ್ನು ಕಂಡು ಅರ್ಬಿಯ ಅರಸರು ತನ್ನ ಚಾಕರಿಯವರಿಗೆ ಆ ಕಲ್ಲನ್ನೆತ್ತಿ ಅರ್ಬಿಯ ನದಿಯಲ್ಲಿ ಎಸೆಯಲು ಹೇಳಿದರು. ಆಳು ಕಲ್ಲನ್ನು ‘ಅರ್ಬಿಯ ಕರಿಯ’ದಲ್ಲಿ ಎಸೆದನು.ಉಂದು

ಜಾರಂದಾಯನ ಆರಾಧನೆ[ಬದಲಾಯಿಸಿ]

ಜಾರಂದಾಯ ದೈವದ ಹುಟ್ಟು ಮತ್ತು ಪ್ರಸರಣೆಯನ್ನು ಅವಲೋಕಿಸುವಾಗ ಈ ದೈವವು ತುಳುನಾಡಿನ ಮಂಗಳೂರು ತಾಲೂಕಿನಿಂದ ಹಿಡಿದು ಉತ್ತರಕ್ಕೆ ಮುಲ್ಕಿ, ಕಾಪು, ಕಟ್ಟಪಾಡಿ ಪರಿಸರ ಮತ್ತು ಪೂರ್ವಾಭಿಮುಖವಾಗಿ ಶಿರ್ವ ಮಂಚಕಲ್ ಪರಿಸರವನ್ನು ತನ್ನ ಕಾರ್ಯ ಕ್ಷೇತ್ರವನ್ನಾಗಿರಿಸಿ ಕಂಡಂತೆ ತೋರುವುದು. ಅದೇ ರೀತಿ ಕಥಾಸಾರವನ್ನು ತಿಳಿದು ಬಂದಂತೆ. ಈ ದೈವವು ತನ್ನ ನೆಲೆಗಾಗಿ ದೈವಸ್ಥಾನ, ನಾಗಸ್ಥಾನ ಬೀಡುಗಳ ಆಶ್ರಯ ಪಡೆಯಲು ಮುಂದಾಗಿದ್ದರು. ಆರಾಧನೆಯ ದೃಷ್ಟಿಯಿಂದ ಹೆಚ್ಚಿನೆಡೆ ಬೈದ ಕುಲದವರನ್ನೇ ಒಲವು ತೋರಿ ಅವಲಂಭಿಸಿರುವುದು ತಿಳಿಯುವುದು. ಜಾರಂದಾಯ ದೈವದ ಜೊತೆಗೆ ಬಾಯಿ ಬಾರದ ಬಂಟ ಎಂಬ ದೈವ ಶಕ್ತಿಗೂ ಆರಾಧನೆ ನಡೆಯುವುದು. ರಾಜ್ಯದ ಗಡಿ ಕಾಯುವ ಅಧಿಕಾರ ಹೊಂದಿದ ರಾಜನ್ ದೈವ ಎಂಬ ಪಟ್ಟವು ಜಾರಂದಾಯನಿಗಿದೆ. ಜೊತೆಗೆ ನಂಬಿದ ಸಂಸಾರಗಳನ್ನು ರಕ್ಷಿಸುವುದರಿಂದ ಮನೆದೈವವು ಆಗಿದೆ.

ಮಣೆ-ಮಂಚ[ಬದಲಾಯಿಸಿ]

ಅನುಕೂಲವನ್ನು ಹೊಂದಿಕೊಂಡು ಮಣೆ-ಮಂಚವನ್ನು ತಯಾರಿಸುವರು. ಮಣೆ-ಮಂಚವೂ ಧೂಮಾವತಿ ಪಂಜುರ್ಲಿಗಳ ಮಣೆ ಮಂಚಕ್ಕೆ ಹೋಲಿಕೆ ಇರುವುದು. ನೆಲದ ಆಧಾರವಿರುವ ಕತ್ತರಿ ಮಂಚ, ಸರಪಳಿಗಳ ಆಧಾರದಿಂದ ಮರದ ಜಂತಿಗೆ ಆಧರಿಸಿರುವ ಉಜ್ವಲ್ ಮಂಚವು ಪ್ರಚಲಿಯದಲ್ಲಿ ಇರುವುದು.

ಸೇವೆ[ಬದಲಾಯಿಸಿ]

ಜಾರಂದಾಯನಿಗೆ ಪಸರ್ನೆ, ತಂಬಿಲ, ವರ್ಷಾವಧಿ ಕೋಲ ಮೊದಲಾದ ಸೇವೆಗಳು ನಡೆಯುವುದು. ಇದು ರಕ್ತಹಾರ ಸ್ವಿಕಾರ ಮಾಡುವ ದೈವಶಕ್ತಿಯಾಗಿರುವುದು. ಬದುವರ‍್ನೆಯ ಸಂದರ್ಭಗಳಲ್ಲಿ ಪಂಚಕಜ್ಜಾಯ ಮತ್ತು ಅಕ್ಕಿಯ ತಿಂಡಿಗಳಾದ ದೋಸೆ, ಕಡಬು, ಒತ್ತುಶೇವಿಗೆ ಮೊದಲಾದವುಗಳನ್ನು ನೀಡುವರು. ಧೂಮಾವತಿ ಪಂಜುರ್ಲಿಗಳಂತೆಯೆ ಒಂದೇ ರೀತಿಯ ಹೋಲಿಕೆಯುಳ್ಳ ಕೋಲದ ಕಾರ್ಯಕ್ರಮವು ಜರಗುವುದು. ತುಳುನಾಡಿನಲ್ಲಿ ಬಿಲ್ಲವರು, ಬಂಟರು, ಜೈನರು ವಿಶೇಷವಾಗಿ ಜಾರಾಂದಾಯನ ಆರಾಧಕರು. ಇತರ ತುಳುವರ ಜೊತೆಗೆ ಬ್ರಾಹ್ಮಣರು ಅಲ್ಲಿ ದೈವವನ್ನು ಪೂಜಿಸುವರು. ಕೋಲದಲ್ಲಿ ಆಯತಾಕಾರದ ಗಾತ್ರದಲ್ಲಿ ಸ್ವಲ್ಪ ಸಣ್ಣದಾದ ಅಣಿಯನ್ನು ಉಪಯೋಗಿಸುವರು ಈ ಅಣಿಯಿಂದಲೆ ದೈವವನ್ನು ಗುರುತಿಸಬಹುದು.

ವಾಹನ[ಬದಲಾಯಿಸಿ]

ಜಾರಂದಾಯನ ವಾಹನ ಕುದುರೆ. ಕೆಲೆವೆಡೆ ರಥವನ್ನು ಉಪಯೋಗಿಸುವುದಿದೆ. ಆದರೆ ಅದು ಅಲಂಕಾರಿಕ ಉದ್ದೇಶದಿಂದ ಮಾತ್ರ. ಜಾರಂದಾಯನಿಗೆ ಪ್ರಧಾನ ದೈವದ ಸ್ಥಾನ ಮಾನವಿದೆ. ಸಾಮಾನ್ಯವಾಗಿ ಜಾರಂದಾಯ ಸ್ವತಂತ್ರ ದೈವ. ಅಂದರೆ ಒಂದು ಸ್ಥಾನ ಚಾವಡಿಯಲ್ಲಿ ಇತರ ದೈವಗಳು ಈ ಪ್ರದಾನ ದೈವಕ್ಕೆ ಆಶ್ರಿತರು. ಒಂದು ವೇಳೆ ಕಾರಣಾಂತರಗಳಿಂದ ಜಾರಂದಾಯ-ಧೂಮಾವತಿ ಮೊದಲಾಗಿ ಇತರ ದೈವಗಳ ಜೊತೆ ಇರುವುದಿದ್ದರು ಅಲ್ಲಿ ಕೂಡ ಒಂದನೆಯ ಸ್ಥಾನ-ಮಾನ ಜಾರಂದಾಯನಿಗಿದೆ. ಪಸರ್ನೆ, ತಂಬಿಲ, ಕೋಲ ಮೊದಲಾದ ಸಂದರ್ಭಗಳಲ್ಲಿ ಮಣೆ-ಮಂಚಗಳಲ್ಲಿ ಸುತ್ತೆ ಇಡುವುದೇ ಮೊದಲಾಗಿ ಎಲ್ಲ ಆಚರಣೆಗಳು ಇತರ ದೈವಗಳಂತೆ ಇರುವುದು.

ಉಲ್ಲೇಖಗಳು[ಬದಲಾಯಿಸಿ]

೧. ಬನ್ನಂಜೆ ಬಾಬು ಅಮೀನ್, ತುಳುನಾಡ ದೈವಗಳು, ಕೆಮ್ಮಲಜೆ ಜಾನಪದ ಪ್ರಕಾಶನ ಉಡುಪಿ, 2010.

"https://kn.wikipedia.org/w/index.php?title=ಜಾರಂದಾಯ&oldid=1165997" ಇಂದ ಪಡೆಯಲ್ಪಟ್ಟಿದೆ