ಎ.ಕೆ.ರಾಮಾನುಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎ. ಕೆ. ರಾಮಾನುಜನ್
ಚಿತ್ರ:Book6.jpg
ಡಾ. ಎ.ಕೆ.ರಾಮಾನುಜನ್
ಜನನMarch 16 1929
Mysore
ಮರಣJuly 1993
ವೃತ್ತಿಪ್ರಾಧ್ಯಾಪಕರು ಮತ್ತು ಬರಹಗಾರರು

ಎ. ಕೆ. ರಾಮಾನುಜನ್ (ಮಾರ್ಚ್ ೧೬, ೧೯೨೯ - ಜುಲೈ ೧೩, ೧೯೯೩)' ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಶ್ರೇಷ್ಠ ಬರಹಗಾರರೆನಿಸಿದ್ದಾರೆ.

ವಿಶ್ವದೆಲ್ಲೆಡೆ ಪಸರಿಸಿದ ಕನ್ನಡ ಕಸ್ತೂರಿ[ಬದಲಾಯಿಸಿ]

ವಿಶ್ವಮಾನ್ಯ ಕವಿ, ಚಿಂತಕ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್ ಅವರು ಮಾರ್ಚ್ ೧೬, ೧೯೨೯ರಲ್ಲಿ ಮೈಸೂರಿನಲ್ಲಿ ಜನಿಸಿದರು. ರಾಮಾನುಜನ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆಗಳನ್ನು ಕೊಡುವುದರ ಜೊತೆಗೆ ಜೊತೆಗೆ ಕನ್ನಡದ ಕಸ್ತೂರಿಯನ್ನು ವಿಶ್ವದೆಲ್ಲೆಡೆ ಇಂಗ್ಲಿಷ್ ಭಾಷೆಯ ಮೂಲಕ ಪಸರಿಸುವ ಮನೋಜ್ಞ ಕಾರ್ಯ ಮಾಡಿದರು. ಈ ನಿಟ್ಟಿನಲ್ಲಿ ಅವರು ಇಂಗ್ಲಿಷಿನಲ್ಲಿ ಮೂಡಿಸಿದ ಬಸವಣ್ಣನವರ ‘ಉಳ್ಳವರು ಶಿವಾಲಯವ ಮಾಡುವರು’ ವಚನದ ಕನ್ನಡದ ಭಾಷಾಂತರ ಇಲ್ಲಿ ನೆನಪಾಗುತ್ತದೆ. ಈ ಭಾಷಾಂತರ ಅಸಾಧಾರಣವಾಗಿದೆ, ಶ್ರೇಷ್ಠವಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯ: “The rich will make temples for siva. what shall I, a poor man do? My legs are pillars, the body the shrine, the head a cupola of gold, Listen, O Lord of the meeting reivers, things standing shall fall, but the moving ever shall stay.”

ವಿದ್ಯಾ ಸಾಧನೆ[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ.ಮತ್ತು ಎಂ.ಎ.ಪದವಿಯನ್ನು ಗಳಿಸಿದ ರಾಮಾನುಜನ್ ಅವರು ದಕ್ಷಿಣ ಭಾರತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿ, 1958ರ ವರ್ಷದಲ್ಲಿ ಪುಣೆಯ ಡೆಕ್ಕನ್ ವಿಶ್ವವಿದ್ಯಾಲಯದಿಂದ ‘ಥಿಯೇಟ್ರಿಕಲ್ ಲಿಂಗ್ವಿಸ್ಟಿಕ್ಸ್’ ವಿಷಯದಲ್ಲಿ ಉನ್ನತ ಡಿಪ್ಲೋಮಾ ಪದವಿ ಪಡೆದರು. ಮುಂದಿನ ವರ್ಷದಲ್ಲಿ ಅಮೆರಿಕಕ್ಕೆ ತೆರಳಿದ ರಾಮಾನುಜನ್ 1963ರ ವರ್ಷದಲ್ಲಿ ಅಮೆರಿಕ ಇಂಡಿಯಾನ ವಿಶ್ವವಿದ್ಯಾನಿಲಯದಿಂದ ಭಾಷಾವಿಜ್ಞಾನದ ಪಿ.ಎಚ್.ಡಿ ಗೌರವವನ್ನು ಗಳಿಸಿದರು.

ವಿಶ್ವದ ಶ್ರೇಷ್ಠ ವಿದ್ಯಾಲಯಗಳಲ್ಲಿ[ಬದಲಾಯಿಸಿ]

೧೯೬೨ರಲ್ಲಿ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಹಾಗೂ ದ್ರಾವಿಡ ಅಧ್ಯಯನದ ಅಧ್ಯಾಪಕರಾಗಿ ಸೇರಿದ ರಾಮಾನುಜನ್ ೧೯೯೩ರಲ್ಲಿ ನಿಧನರಾಗುವತನಕದ ತಮ್ಮ ಬಹುತೇಕ ವೃತ್ತಿ ಜೀವನವನ್ನು ಅಲ್ಲಿಯೇ ನಡೆಸಿದರು. ಜೊತೆಗೆ ವಿಸ್ಕಾಸಿನ್, ಬರ್ಕಲಿ, ಮಿಚಿಗನ್ ಮುಂತಾದ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾದ್ಯಾಪಕರಾಗಿದ್ದರು. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಏಷ್ಯಾ ಭಾಷೆಗಳ ಅಧ್ಯಯನ ಪೀಠ ಸ್ಥಾಪನೆ ಮಾಡಿದ ಕೀರ್ತಿ ಎ. ಕೆ. ರಾಮಾನುಜನ್ ಅವರಿಗೆ ಸಲ್ಲುತ್ತದೆ..

ಸಾಹಿತ್ಯ ಸೃಷ್ಟಿ[ಬದಲಾಯಿಸಿ]

ಪ್ರಸಿದ್ದ ನವ್ಯ ಕವಿ ಗೋಪಾಲಕೃಷ್ಣ ಅಡಿಗರ ಪ್ರಭಾವದಿಂದ ಹೊರಬಂದು ಹೊಸ ಸಂವೇದನೆಗಳೊಂದಿಗೆ ತಮ್ಮದೇ ಆದ ರೀತಿಯಲ್ಲಿ ಕಾವ್ಯ ರಚಸಿದ ರಾಮಾನುಜನ್ ಅವರು ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಹೊಕ್ಕುಳಲ್ಲಿ ಹೂವಿಲ್ಲ’ (೧೯೬೯) ಇವರ ಪ್ರಥಮ ಸಂಕಲನ. ಪದ್ಯ ರಚನೆ, ಭಾಷಾ ಬಳಕೆ, ಪ್ರತಿಮೆಗಳ ಬಳಕೆ- ಈ ದೃಷ್ಟಿಯಿಂದ ಇವರ ನವ್ಯ ಕವನಗಳಿಗೆ ನವ್ಯ ಸಾಹಿತ್ಯದಲ್ಲಿ ಪ್ರತ್ಯೇಕಸ್ಥಾನ ಸಲ್ಲುತ್ತದೆ. . ‘ಹೊಕ್ಕುಳಲ್ಲಿ ಹೂವಿಲ್ಲ ಮತ್ತು ಇತರ ಕವಿತೆಗಳು’ ಅಲ್ಲದೆ ‘ಕುಂಟೋ ಬಿಲ್ಲೆ’, ‘ಮತ್ತೊಬ್ಬನ ಆತ್ಮಚರಿತ್ರೆ’ ಎ. ಕೆ. ರಾಮಾನುಜನ್ ಅವರ ಪ್ರಸಿದ್ಧ ಕೃತಿಗಳು. ರಾಮಾನುಜನ್ ಅವರ ಕೃತಿಗಳ ಸಮಗ್ರ ಸಂಪುಟವನ್ನು ಮನೋಹರ ಗ್ರಂಥಮಾಲೆ ಹೊರತಂದಿದ್ದುಮನೋ ಹರ ಗ್ರಂಥಮಾಲೆ ಹೊರತಂದಿದ್ದು ಅವರ ಮೂರು ಕವನ ಸಂಕಲನಗಳು, ಒಂದು ಕಾದಂಬರಿ, ನಾಲ್ಕು ಸಣ್ಣ ಕತೆಗಳು, ಎರಡು ರೇಡಿಯೋ ನಾಟಕಗಳು, ಗಾದೆಗಳನ್ನು ಕುರಿತ ಕಿರು ಹೊತ್ತಿಗೆಗಳು ಇಲ್ಲಿ ಕೂಡಿವೆ. ‘ನಡೆದು ಬಂದ ದಾರಿ’ ಗ್ರಂಥದಲ್ಲೂ, ‘ಸಾಕ್ಷಿ’ ಪತ್ರಿಕೆಯಲ್ಲೂ ಪ್ರಕಟವಾಗಿರುವ ಕವನಗಳೂ, ಐವತ್ತರ ದಶಕದಲ್ಲಿ ರಾಶಿ ಅವರ ‘ಕೊರವಂಜಿ’ಯಲ್ಲಿ ಪ್ರಕಟವಾದ ಹಲವು ನಗೆ ಬರಹಗಳೂ ಇಲ್ಲಿ ಸೇರಿವೆ.

ಶ್ರೇಷ್ಠ ಭಾಷಾಂತರಗಳು[ಬದಲಾಯಿಸಿ]

ರಾಮಾನುಜನ್ ಕೇವಲ ಕವಿಗಳಾಗಿರದೆ ಉತ್ತಮ ಭಾಷಾಂತರಕಾರರೂ ಹೌದು. ಕನ್ನಡ ವಚನ ಸಾಹಿತ್ಯವನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿ ಕೊಡುವ ಒಂದು ವಿಶಿಷ್ಟ ಪ್ರಯತ್ನ ‘ಸ್ಪೀಕಿಂಗ್ ಆಫ್ ಶಿವ, (೧೯೭೩). ‘ದಿ ಇಂಟೀರಿಯರ್ ಲ್ಯಾಂಡ್ ಸ್ಕೇಪ್’ (೧೯೭೦) ಎಂಬ ಪುಸ್ತಕದಲ್ಲಿ ಪ್ರಾಚೀನ ತಮಿಳು ಸಾಹಿತ್ಯದಿಂದ ಆರಿಸಿದ ಭಾಗಗಳನ್ನು ಅನುವಾದಿಸಲಾಗಿದೆ. ಎಂ.ಜಿ.ಕೃಷ್ಣಮೂರ್ತಿ ಯವರೊಡನೆ ಗೋಪಾಲಕೃಷ್ಣ ಅಡಿಗರ ಕೆಲವು ಕವನಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಇದರ ಹೆಸರು ‘ಸಾಂಗ್ ಆಫ್ ಅರ್ಥ್ ಅಂಡ್ ಅದರ್ ಪೊಯಂ’ (೧೯೬೮). ಯು.ಆರ್. ಅನಂತಮೂರ್ತಿಯವರ ಸುಪ್ರಸಿದ್ದ ಕಾದಂಬರಿ ‘ಸಂಸ್ಕಾರ’ವನ್ನು ಅವರು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ರಾಮಾನುಜನ್ ಅವರು ಇಂಗ್ಲಿಷಿನಿಂದಲೂ ಕನ್ನಡಕ್ಕೆ ಕೆಲವು ಕೃತಿಗಳನ್ನು ಭಾಷಾಂತರಿಸಿದ್ದಾರೆ. ‘ಹಳದಿಮೀನು’ (ಮೂಲ:ಶೌರಿ) ಎಂಬ ಕಾದಂಬರಿ ಅವುಗಳಲ್ಲಿ ಒಂದು. ಕನ್ನಡ ಜನಪದ ಸಾಹಿತ್ಯದ ಒಂದು ಮುಖ್ಯ ಪ್ರಕಾರವಾದ ಗಾದೆಗಳನ್ನು ಕುರಿತಂತೆ ೧೯೫೫ರಷ್ಟು ಹಿಂದೆಯೇ ‘ಗಾದೆಗಳು’ ಎಂಬ ಕಿರು ಗ್ರಂಥವನ್ನು ಇವರು ಪ್ರಕಟಿಸಿದರು. ಇಲ್ಲಿ ಗಾದೆಯ ರೂಪರಚನೆಗಳ ಜೊತೆಗೆ ಕೆಲವು ಕನ್ನಡ ಗಾದೆಗಳ ವಿಶ್ಲೇಷಣೆಯೂ ಸೇರಿದೆ. ಕರ್ನಾಟಕದಲ್ಲಿ ಜಾನಪದದ ಬಗ್ಗೆ ಇನ್ನೂ ಅಷ್ಟಾಗಿ ವೈಜ್ಞಾನಿಕ ಪ್ರಜ್ಞೆ ಮೂಡದೆ ಇದ್ದಂಥ ಸಂದರ್ಭದಲ್ಲಿ ಈ ಕೃತಿ ಪ್ರಕಟವಾದದ್ದು ಮಹತ್ವದ ಸಂಗತಿ. ಕನ್ನಡ ಸಾಹಿತ್ಯದ ಬಗ್ಗೆ ಅದರಲ್ಲಿಯೂ ಸಮಕಾಲೀನ ಸಾಹಿತ್ಯದ ಬಗ್ಗೆ ಅಪಾರ ಕಾಳಜಿ, ಶ್ರದ್ದೆ ಹೊಂದಿರುವ ರಾಮಾನುಜನ್ ಅವರು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಳನ್ನು ಪಾಶ್ಚಾತ್ಯರಿಗೆ ಪರಿಚಯ ಮಾಡಿಕೊಡುವ ಕಾರ್ಯದಲ್ಲಿ ತೊಡಗಿದ್ದರು. ಈ ಕುರಿತು ಅವರು ಅಮೆರಿಕ ಮೊದಲಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ. ಅನೇಕ ಲೇಖನಗಳನ್ನು ಬರೆದಿದ್ದಾರೆ. ‘ಡಿಕ್ಷನರಿ ಆಫ್ ಓರಿಯಂಟಲ್ ಲಿಟರೇಚರ್ - ಸೌತ್ ಅಂಡ್ ಸೌತ್ ಈಸ್ಟ್ ಏಷ್ಯಾ’ (೧೯೭೫) ಎಂಬ ಗ್ರಂಥದಲ್ಲಿ ಕನ್ನಡದ ಪ್ರಸಿದ್ದ ಲೇಖಕರನ್ನು ಕುರಿತಂತೆ ಇವರು ಬರೆದ ಲೇಖನಗಳಿವೆ.

ಇಂಗ್ಲಿಷ್ ಭಾಷೆಯಲ್ಲಿ[ಬದಲಾಯಿಸಿ]

ಇಂಗ್ಲಿಷ್ ಭಾಷೆಯಲ್ಲಿ ಬರೆಯುತ್ತಿದ್ದ ಪ್ರಮುಖ ಭಾರತೀಯ ಲೇಖಕರಲ್ಲಿ ರಾಮಾನುಜನ್ ಅವರೂ ಒಬ್ಬರು. ೧೯೬೬ರಲ್ಲಿ ರಾಮಾನುಜನ್ ಅವರ ‘ದಿ ಸ್ಟ್ರೈಡರ್ಸ್’ ಮತ್ತು , ೧೯೭೧ರಲ್ಲಿ ‘ರಿಲೇಶನ್ಸ್’ ಎಂಬ ಕವನ ಸಂಕಲನಗಳು ಪ್ರಕಟವಾದವು. ಕನ್ನಡ, ಇಂಗ್ಲಿಷ್, ತಮಿಳು, ಮಲಯಾಳಂ, ಭಾಷೆಗಳನ್ನು ಆಳವಾಗಿ ಅಧ್ಯಯನ ಮಾಡಿರುವ ರಾಮಾನುಜನ್ ಅವರು ಭಾಷಾವಿಜ್ಞಾನ, ಜಾನಪದ, ಭಾರತೀಯ ಸಾಹಿತ್ಯ ಈ ಮೊದಲಾದ ವಿಷಯಗಳನ್ನು ಕುರಿತು ಬರೆದ ಲೇಖನಗಳು ಭಾರತ, ಅಮೆರಿಕ, ಗ್ರೇಟ್‌ಬ್ರಿಟನ್, ಮೊದಲಾದ ದೇಶಗಳ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಎ. ಕೆ. ರಾಮಾನುಜನ್ ಅವರು ಇಂಗ್ಲಿಷಿನಲ್ಲಿ ಪ್ರಕಟಿಸಿರುವ ಪ್ರಮುಖ ಕೃತಿಗಳಲ್ಲಿ ಕೆಲವೊಂದನ್ನು ಹೆಸರಿಸುವುದಾದರೆ :- A Generative Grammar of Kannada (೧೯೬೨) , ‘Is There an Indian Way of Thinking?’ (೧೯೯೦), ‘Where Mirrors Are Windows: Toward an Anthology of Reflections’ (೧೯೮೯), ‘The Interior Landscape: Love Poems from a Classical Tamil Anthology’ (೧೯೬೭), "'Folktales from India'", ‘Oral Tales from Twenty Indian Languages (೧೯೯೧)’ , ‘Sociolinguistic Variation and Language Change’, ‘When God Is a Customer: Telugu Courtesan Songs by Ksetrayya and Others (with Velcheru Narayana Rao and David Shulman)’ 1994, ‘A Flowering Tree and Other Oral Tales from India, ೧೯೯೭ ಮತ್ತು ಅವರ ನಿಧನಾನಂತರದಲ್ಲಿ ಪ್ರಕಟವಾದ ‘Poems of A. K. Ramanujan’ ಮುಂತಾದ ಮಹತ್ವಪೂರ್ಣ ಕೃತಿಗಳು ಎ.ಕೆ. ರಾಮಾನುಜನ್ ಅವರ ಸಾಮರ್ಥ್ಯ, ಪ್ರತಿಭೆ ಪಾಂಡಿತ್ಯಗಳನ್ನು ಅಜರಾಮರಗೊಳಿಸಿವೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ರಾಮಾನುಜನ್‌ರ ಇಂತಹ ಬಹುಮುಖ ಸೇವೆಯನ್ನು ಗಮನಿಸಿದ ಭಾರತಸರ್ಕಾರ 1976ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. 1983ರಲ್ಲಿ ಅವರಿಗೆ ಪ್ರಸಿದ್ಧ ಮ್ಯಾಕ್ ಆರ್ಥರ್ ಫೆಲ್ಲೋಷಿಪ್ ಗೌರವ ಅರ್ಪಿತವಾಯಿತು.

ವಿದಾಯ[ಬದಲಾಯಿಸಿ]

ಡಾ. ರಾಮಾನುಜನ್ ಅವರು ಜುಲೈ 13, 1993ರಂದು ನಿಧನರಾದರು. ನಮ್ಮ ಕನ್ನಡದ ಮಹಾನ್ ಕವಿ, ವಿಶ್ವವಿದ್ವಾಂಸ ಎ. ಕೆ. ರಾಮಾನುಜನ್ ಅವರ ಬಗ್ಗೆ ನಮ್ಮ ಶ್ರದ್ಧಾಪೂರ್ಣ ಗೌರವಗಳು.

ಕೃತಿಗಳು[ಬದಲಾಯಿಸಿ]

AK Ramanujan navaru sangith priya

ಕವನ ಸಂಕಲನಗಳು[ಬದಲಾಯಿಸಿ]

...ಮತ್ತು ಇತರ ಕವಿತೆಗಳು

ಕಾದಂಬರಿಗಳು[ಬದಲಾಯಿಸಿ]

ಇಂಗ್ಲಿಷ್[ಬದಲಾಯಿಸಿ]

  • ಸ್ಪಿಕೀಂಗ್ ಆಫ್ ಶಿವ- ವಚನಗಳ ಇಂಗ್ಲೀಷ್ ಅನುವಾದ
  • ಸಂಸ್ಕಾರ-ಸಂಸ್ಕಾರ ಕಾದಂಬರಿಯ ಇಂಗ್ಲಿಷ್ ಅನುವಾದ
  • ‘Is There an Indian Way of Thinking?’ (೧೯೯೦)
  • ‘Where Mirrors Are Windows: Toward an Anthology of Reflections’ (೧೯೮೯)
  • ‘The Interior Landscape: Love Poems from a Classical Tamil Anthology’ (೧೯೬೭)
  • ‘Folktales from India’, ‘Oral Tales from Twenty Indian Languages (೧೯೯೧)’
  • ‘Sociolinguistic Variation and Language Change’
  • ‘When God Is a Customer: Telugu Courtesan Songs by Ksetrayya and Others (with Velcheru Narayana Rao and David Shulman)’ 1994,
  • ‘A Flowering Tree and Other Oral Tales from India, ೧೯೯೭ ಮತ್ತು
  • ಅವರ ನಿಧನಾನಂತರದಲ್ಲಿ ಪ್ರಕಟವಾದ ‘Poems of A. K. Ramanujan’

ಉಲ್ಲೇಖಗಳು[ಬದಲಾಯಿಸಿ]

ಆಧಾರ: -httpp://english.emory.edu/Bahri/Ramanujan.html, ವಿಕಿಪೀಡಿಯಾ ಮತ್ತು ಕಣಜ ಫೋಟೋ ಕೃಪೆ: www.kamat.com) ಎ.ಕೆ. ರಾಮಾನುಜನ್ ಕನ್ನಡದ ಪ್ರಮುಖ ಕವಿ, 'ಕತೆಗಾರ', 'ಭಾಷಾ ವಿಜ್ಞಾನಿ'ಹಾಗೂ 'ಜಾನಪದ ಸಂಪತ್ತಿನ-ತಜ್ಞ', 'ದ್ರಾವಿಡ ಭಾಷೆಗಳ ಪಾಂಡಿತ್ಯ ಹೊಂದಿ, ದ್ರಾವಿಡ ಸಂಸ್ಕೃತಿಯನ್ನು ಪಾಶ್ಚಾತ್ಯ-ಪ್ರಪಂಚಕ್ಕೆ ಪರಿಚಯಿಸಿದವರು'.