ಹಂದಲಗೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಂದಲಗೆರೆ: ಕುಣಿಗಲ್ ತಾಲ್ಲೂಕಿನಲ್ಲಿ ಎರಡು ಹಂದಲಗೆರೆ ಇವೆ. ಇಲ್ಲಿ ಮಾಹಿತಿ ನೀಡುತ್ತಿರುವುದು ಹುಲಿಯೂರು ದುರ್ಗ ಹೋ. ಹಂದಲಗೆರೆ ಕುರಿತಾಗಿದೆ.
ಸ್ಥಳ ನಾಮ ಮತ್ತು ಇತಿಹಾಸ: ಈ ಊರಿಗೆ ಈ ಹೆಸರು ಬರಲು ಮೂಲದಲ್ಲಿ ಇಲ್ಲಿ ಒಡ್ಡರು ಇದ್ದರಂತೆ. ಅವರು ಇಲ್ಲಿ ಮಾರಮ್ಮ ದೇವರನ್ನು ಪ್ರತಿ‍ಷ್ಟಾಪಿಸಿ, ಕೆರೆಯೊಂದನ್ನು ಕಟ್ಟಿದರು. ಇಂದಿಗೂ ದೇವಾಲಯ ಮತ್ತು ಕೆರೆ ಇದೆ. ಕೆರೆಯನ್ನು ಒಡ್ಡನ ಕಟ್ಟೆ ಎಂದು ಕರೆಯುತ್ತಾರೆ. ದೇವಾಲಯದ ಸಮೀಪವೇ ಇರುವ ಮಳ್ಳಪ್ಪನವರ ಕೆಂಪಯ್ಯನ ಜಮೀನಿನಲ್ಲಿರುವ ಶಾಸನ ೧೬೬೩ರ ಸುಮಾರಿಗೆ ಸೇರಿದೆ. ಇದರಲ್ಲಿ 'ಅಂದಲಕೆರೆ' ಎಂಬ ಉಲ್ಲೇಖವಿದೆ. ಅಂದಲ ಎಂದರೆ ಬೋಯಿ ಎಂಬ ಅರ್ಥವಿದೆ. ಬೋಯಿ ಹೊತ್ತೋಗುವವರನ್ನು ಬೋವಿ ಎನ್ನುವರು (ರಾಜಬೋವಿಗಳು ರಾಜನ ಬೋಯಿ ಹೊರುತ್ತಿದ್ದಿರಬಹುದು). ಅವರು ಕಟ್ಟಿದ ಕಟ್ಟೆಯೇ ಇವತ್ತಿನ ಒಡ್ಡನ ಕಟ್ಟೆ. ಒಡ್ಡನ ಕಟ್ಟೆಯ ಸಂಸ್ಕೃತಕರಣವೇ ಅಂದಲಗೆರೆ. ಕಾಲಾಂತರದಲ್ಲಿ ಬರೆಯುವವರು ಹಂದಲಗೆರೆ ಎಂದು ತಪ್ಪಾಗಿ ಬರೆದಿದ್ದು, ಅದೇ ರೂಢಿಗತವಾಗಿರುತ್ತದೆ ಎಂದು ಇತಿಹಾಸ ಸಂಶೋಧಕ ಹಂ.ಗು.ರಾಜೇಶ್ ತೋರಿಸಿ ಕೊಟ್ಟಿದ್ದಾರೆ. ದೇವಾಲಯದ ಪಶ್ಚಿಮದಲ್ಲಿ ಕೋಟೆಯ ಬುನಾದಿಯ ಅವಶೇಷವಿದೆ. ಇಂದು ಈ ಊರಿನಲ್ಲಿ ಸುಮಾರು ೧೪೦ ಮನೆಗಳಿವೆ. ಸುಮಾರು ೬೦೦ ಜನಸಂಖ್ಯೆ ಇದೆ. ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೆರೆಯ ಕೋಡಿ ಸಮೀಪ ಪ್ರೌಢಶಾಲೆ ಇದೆ. ಹಿಂದೆ ಸಂಯುಕ್ತ ಪದವಿಪೂರ್ವ ಕಾಲೇಜ್ ಸಹ ಇತ್ತು. ನಂತರ ಮುಚ್ಚಲ್ಪಟ್ಟಿದೆ. ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು, ಸುಜಲ ಜಲನಯನ ಸಂಘಗಳು ಇವೆ. ಬಹುಪಾಲು ಮಳೆ ಆಶ್ರಿತ ಬೆಳೆಗಳನ್ನೆ ಬೆಳೆಯುತ್ತಾರೆ. ಊರಿನ ಆಗ್ನೆಯದಲ್ಲಿ ಒಡ್ಡನ ಕಟ್ಟೆ ಇದ್ದರೆ, ವಾಯವ್ಯದಲ್ಲಿ ಅಜ್ಜಿಕಟ್ಟೆ ಇದೆ. ಬಿಟ್ಟರೆ ಉಳಿದಂತೆ ಕೊಳವೆ ಭಾವಿಯಿಂದ ನೀರಾವರಿ ಬೆಳೆ ಬೆಳೆಯುತ್ತಾರೆ. ಇತ್ತೀಚೆಗೆ ಕುಡಿಯುವ ನೀರಿಗಾಗಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದಾರೆ. ಊರಿನ ಪ್ರತಿಮನೆಯ ಒಬ್ಬ ಸದಸ್ಯರಾದರೂ ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಊರಿಗೆ ನಿತ್ಯ ಕುಣಿಗಲ್ ನಿಂದ ಸರ್ಕಾರಿ ಬಸ್ ಗಳು ಬಂದು ಹೋಗುತ್ತವೆ. ಬೆಂಗಳೂರಿನಿಂದ ನ್ಯಾ‍ಷನಲ್ ಎಂಬ ಖಾಸಗಿ ಬಸ್ ಬೆಳಗ್ಗೆ ೧೧ಕ್ಕೆ ಬಂದು ಹೋಗುತ್ತದೆ.