ಸದಸ್ಯ:Thunga 123456/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೃಂಗೇರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ಪಟ್ಟಣ - ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದನ್ನು ಹೊಂದಿರುವ ಕ್ಷೇತ್ರ ಶೃಂಗೇರಿ. ಶಂಕರಾಚಾರ್ಯರು ಸ್ಥಾಪಿಸಿದ ಇತರ ಮಠಗಳು ಬದರಿನಾಥ, ಪುರಿ ಮತ್ತು ದ್ವಾರಕೆಗಳಲ್ಲಿವೆ. ಇದು ತುಂಗಾ ನದಿ ತಟದಲ್ಲಿರುವ ಚಿಕ್ಕ ಪಟ್ಟಣ. ಇದು ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳಲ್ಲಿ ಒಂದಾಗಿದೆ.

ಶೃಂಗೇರಿ ಎಂಬ ಹೆಸರು ಋಷ್ಯಶೃಂಗಗಿರಿ ಎಂಬ ಹೆಸರಿನಿಂದ ಬಂದಿದೆ - ಇದು ಸಮೀಪದಲ್ಲೇ ಇರುವ ಒಂದು ಬೆಟ್ಟದ ಹೆಸರು. ಪ್ರತೀತಿಗನುಸಾರವಾಗಿ ಈ ಬೆಟ್ಟದಲ್ಲೇ ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗ ಇದ್ದದ್ದು. ಋಷ್ಯಶೃಂಗನ ಪ್ರಸ್ತಾಪ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ. ವಸಿಷ್ಠ ತಿಳಿಸುವ ಉಪಕಥೆಗಳಲ್ಲಿ ಒಂದರಲ್ಲಿ ಋಷ್ಯಶೃಂಗ ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆ ಇದೆ. ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು ವಿದ್ಯಾಶಂಕರ ದೇವಸ್ಥಾನ. ಇದನ್ನು ೧೪ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. ವಿಜಯನಗರ ಕಾಲದಲ್ಲಿ ಕಟ್ಟಿಸಿದ್ದಾದರೂ ಈ ದೇವಾಲಯ ಇನ್ನೂ ಹಿಂದಿನ ಹೊಯ್ಸಳ ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ನಂಬಲಾಗಿದೆ. ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ - ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ.ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ.

ಶ್ರೀಶಂಕರಾಚಾರ್ಯ ವಿದ್ಯಾಮಾತೆ ಆದಿ ಶಂಕರಾಚಾರ್ಯರು ಆಜನ್ಮ ಬ್ರಹ್ಮಚಾರಿಗಳು. ಇವರು ವಿಶ್ವರೂಪರ ಮಡದಿ ಉಭಯಭಾರತಿಯವರ ಶಾಸ್ತ್ರಸಂಪನ್ನತೆ, ಅಪ್ರತಿಮ ಪಾಂಡಿತ್ಯವನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಆಕೆಯ ಪ್ರತಿಭೆಗೆ ಮೆಚ್ಚಿ ಶ್ರೀಶಂಕರಾಚಾರ್ಯರು ಉಭಯಭಾರತಿ ಅವರಿಗೆ ನ್ಯಾಯಾಧೀಶರ ಪಟ್ಟವನ್ನು ಕೊಡುತ್ತಾರೆ. ಮುಂದೆ ಉಭಯಭಾರತಿ ಅವರು ವಿರಾಗಿಣಿಯಾಗಬೇಕೆಂದಾಗ, ಶ್ರೀಶಂಕರಾಚಾರ್ಯರು "ಅಮ್ಮಾ ತಾವು ಬ್ರಹ್ಮವಿದ್ಯಾಸ್ವರೂಪಿಣಿಯೇ ಆಗಿದ್ದೀರಿ, ತಾವು ಇರುವ ಸ್ಥಳವೇ ಶಾರದಾಮಂಡಲಪ್ರಭಾವಲಯವಾಗುತ್ತದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಶೃಂಗೇರಿಯಲ್ಲಿ ನೀವು ನೆಲೆಸಿ, ವಿದ್ವಾಂಸರನ್ನು ಅನುಗ್ರಹಿಸಬೇಕು. ನನ್ನ ಮಾನಸ ಮತ್ತು ಧೀಃಶಕ್ತಿಯ ಅಧಿದೇವತೆಯಾಗಿ, ಸರಸ್ವತಿಯಾಗಿ, ಮಾತೃಸ್ಥಾನದಲ್ಲಿ ನೆಲೆಸಿ" ಎಂದು ನಮ್ರವಾಗಿ ಕೋರುತ್ತಾರೆ. ಅವರ ಮಾತಿನಂತೆ ಉಭಯಭಾರತಿ ಅವರು ಶೃಂಗೇರಿಯಲ್ಲಿ ನೆಲೆಸುತ್ತಾರೆ.

ಪ್ರೇಕ್ಷಣೀಯ ಸ್ಥಳಗಳು ಶೃಂಗೇರಿ ಪಟ್ಟಣದಲ್ಲಿ ಅನೇಕ ದೇವಾಲಯಗಳಿದ್ದು ಅವುಗಳದ್ದೇ ಆದ ಮಹತ್ವ ಹೊಂದಿರುತ್ತದೆ. ಆವುಗಳಲ್ಲಿ ಕಾಳಿಕಾಂಬ ದೇವಸ್ತಾನ, ದುರ್ಗಾ ದೇವಸ್ತಾನ, ಕೆರೆ ಆಂಜನೇಯ ದೇವಸ್ತಾನ, ಕಾಲ ಭೈರವ ದೇವಸ್ತಾನ (ಇವು ೪ ದಿಕ್ ಪಾಲಕ ದೇವರುಗಳಾಗಿದ್ದು, ಇವನ್ನು ಆದಿ ಶಂಕರರು ಸ್ತಾಪಿಸಿರುತ್ತಾರೆ). ಇವಲ್ಲದೆ, ಬೆಟ್ಟದ ಮಲಹನಿಕೇಶ್ವರ ದೇವಾಲಯ(ಋಷ್ಯಶೃಂಗ ಮುನಿಗಳ ತಂದೆ), ಛಪ್ಪರದಾಂಜನೇಯ ದೇವಾಲಯ, ವೆಂಕಟರಮಣ ದೇವಾಲಯಗಳನ್ನೂಸಹ ನೋಡಬಹುದಾಗಿದೆ. ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲೇ ಪುರಾತನವಾದ ಪಾರ್ಶ್ವನಾಥ ತೀರ್ಥಂಕರರ ಜೈನ ಬಸದಿಯೊಂದಿದೆ. ಶೃಂಗೇರಿಯು ತುಂಗಾ ನದೀ ತೀರದಲ್ಲಿ ಇದೆ.

ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ. ಈ ಜಲಪಾತವು ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನದಿಂದ ಕೇವಲ ಐದು ಕಿಲೋ ಮೀಟರುಗಳ ದೂರದಲ್ಲಿದೆ. ಮಘೇಬೈಲು ಜಲಪಾತ - ಇದು ಸಿರಿಮನೆಗೆ ಹತ್ತಿರವಿರುವ ಇನ್ನೊಂದು ಜಲಪಾತ. ನರಸಿಂಹ ವನ - ತುಂಗಾ ನದಿಯ ಇನ್ನೊಂದು ಪಕ್ಕದಲ್ಲಿ ನರಸಿಂಹ ವನವಿದೆ. ಇಲ್ಲಿ ಜಗದ್ಗುರುಗಳ ನಿವಾಸವಿದ್ದು ಪ್ರತಿ ದಿನ ಭಕ್ತರಿಗೆ ದರ್ಶನ ಕೊಡುತ್ತಾರೆ. ಇದಲ್ಲದೆ ವೇದ ಪಾಠಶಾಲೆ, ಸಂಸ್ಕ್ರುತ ಗ್ರಂಥಾಲಯವಿದೆ. ಇಲ್ಲಿಯೇ ಗೋಶಾಲೆ, ಗಜ ಶಾಲೆ ಕೂಡ ಇದೆ. ಕುದುರೆಮುಖ - ಕುದುರೆಮುಖ ಸುಂದರ ಗಿರಿಧಾಮವಾಗಿದ್ದು , ಕರ್ನಾಟಕದ ಅತ್ಯಂತ ಸುಂದರ ಪರಿಸರ ತಾಣಗಳಲ್ಲಿ ಒಂದಾಗಿದೆ. ಚಾರಣಿಗರ ಸ್ವರ್ಗವೆನಿಸಿದೆ. ಇದು ಶೃಂಗೇರಿಯಿಂದ ೫೦ ಕಿ.ಮೀ. ದೂರದಲ್ಲಿದೆ. ಗಂಗಾಮೂಲ - ತುಂಗಾ ಭದ್ರಾಹಾಗೂ ನೇತ್ರಾ ನದಿಗಳ ಉಗಮ ಸ್ಥಾನ. ನರಸಿಂಹ ಪರ್ವತ - ಚಾರಣಪ್ರಿಯರಿಗೆ ಇದೊಂದು ಸುಂದರ ಸ್ಥಳ. ಇದು ಕಿಗ್ಗಾ ಊರಿನ ಸಮೀಪವಿದೆ. ಹನುಮಾನ್ ಗುಂಡಿ (ಸೂತನಬ್ಬಿ) ಜಲಪಾತ- ಇದು ಗಂಗಾಮೂಲದ ಸಮೀಪವಿದೆ. ಕೆರೆಕಟ್ಟೆಯಿಂದ ಕುದುರೆಮುಖಕ್ಕೆ ಹೋಗುವ ಮಾರ್ಗದಲ್ಲಿದೆ.