ಸದಸ್ಯ:Sowmya Arambody/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ವರ್ತಮಾನದ ತಲ್ಲಣಗಳು

ಉದ್ಘಾಟನಾ ಭಾಷಣ :


ನುಡಿಸಿರಿಯ ಸರ್ವಾಧ್ಯಕ್ಷರು, ಕವಿಗಳೂ ಆದ ಡಾ. ಸಿದ್ಧಲಿಂಗಯ್ಯನವರೇ ನುಡಿಸಿರಿಯ ಹಿಂದಿನ ಶಕ್ತಿಯಾಗಿರುವ ಶ್ರೀ ಮೋಹನ ಆಳ್ವಾ ಅವರೇ, ವೇದಿಕೆಯ ಮೇಲಿರುವ ಎಲ್ಲ ಗೌರವಾನ್ವಿತರೇ, ಈ ಭವ್ಯ ಕಾಯ‍ಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ವಿದ್ಯಾಸಂಸ್ಥೆಯ ಪದಾಧಿಕಾರಿಗಳೇ, ಪ್ರತಿನಿಧಿಗಳೇ, ಕನ್ನಡದ ಎಲ್ಲ ಅಭಿಮಾನಿಗಳೇ, ಮಾಧ್ಯಮ ಮಿತ್ರರೇ. ಮೂಡಬಿದರೆ ಈ ನೆಲದಲ್ಲಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಈ ಹನ್ನೊಂದನೇ ನುಡಿಸಿರಿಯನ್ನು ನಾನು ಸಂತಸ ಸಂಭ್ರಮದಿಂದ ಉದ್ಘಾಟನೆ ಮಾಡಿದ್ದೇನೆ. ಹಲವು ವರ್ಷಗಳಿಂದ ನಾನು ನುಡಿಸಿರಿಯ ಖಾಯಂ ವೀಕ್ಷಕನಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತೇನೆ. ಕನ್ನಡದ ಕೆಲಸ ತುಂಬಾ ಅರ್ಥಪೂರ್ಣವಾಗಿ ನಡೆಯುತ್ತಿರುವಲ್ಲಿ ಓರ್ವ ಕನ್ನಡಾಭಿಮಾನಿಯಾಗಿ ಭಾಗವಹಿಸುವು ನನಗೆ ಸಂತಸದ ವಿಷಯವೇ. ನುಡಿಸಿರಿ ಮಾತ್ರವಲ್ಲದೇ ದೇಶದ ಪ್ರಖ್ಯಾತ ಕಲಾವಿದರಿಂದ ಮೂಡುಬಿದಿರೆಯಲ್ಲಿ ಪ್ರಸ್ತುತಪಡಿಸಲಾಗುವ ಆಳ್ವಾಸ್ ವಿರಾಸತ್ ಮೋಹನ ಆಳ್ವಾ ಅವರ ಸಂಗ್ರಹಿಸಲಾಗುವ ಅದ್ಭುತ ವಸ್ತು ಪ್ರದರ್ಶ‍ನ, ಆಳ್ವಾಸ್ ವಿದ್ಯಾಸಂಸ್ಥೆಗಳು ನಡೆಸುವ ವಿದ್ಯಾರ್ಥೀ ಕ್ರೀಡಾ ಉತ್ಸವ, ವಿದ್ಯಾರ್ಥಿ‍ ಸಾಹಿತ್ಯ ಉತ್ಸವ, ಮೋಹನ ಆಳ್ವಾ ಅವರು ನಿರ್ಮಿಸಿರುವ ಸುಂದರ ಶೋಭಾವನದ ಪ್ರಾಕೃತಿಕ ಸೌಂದರ್ಯ ಮೊದಲಾದ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಾ ಬಂದವನು ನಾನು. ಜೊತೆಗೆ ಈ ನುಡಿಸಿರಿ ಕುರಿತಂತೆ ಕೇಳಿ ಬರುತ್ತಿರುವ ಟೀಕೆಗಳನ್ನು ಕೂಡ ಆಲಿಸುತ್ತ, ಈ ಟೀಕೆಗಳ ಹಿಂದೆ ಇರುವ ಸತ್ಯವನ್ನು ಪರಿಶೀಲಿಸುತ್ತ ಬಂದಿದ್ದೇನೆ. ಜೊತೆಗೆ ಈ ಟೀಕೆಗಳನ್ನು ಪ್ರಧಾನವಾಗಿ ಪರಿಗಣಿಸಿ, ನಡೆಯುತ್ತಿರುವ ಒಂದು ಕನ್ನಡದ ಕೆಲಸಕ್ಕೆ ತಣ್ಣೀರನ್ನು ಎರಚಬಾರದು ಅನ್ನುವುದು ಕೂಡ ನನ್ನ ಅಭಿಪ್ರಾಯ. ಜೊತೆಗೆ ಇಲ್ಲಿನಡೆಯುವ ಪ್ರತಿಯೊಂದನ್ನೂ ಜರಡಿ ಹಿಡಿದು ನೋಡುವ ಯತ್ನ ಮಾಡಿದರೆ ನಾಳೆ ಇಲ್ಲಿ ಏನೂ ನಡೆಯಲಾರದೇನೋ ಅನ್ನುವ ಭೀತಿ ಕೂಡ ನನಗಿದೆ. ಇದೇ ಸಂದರ್ಭದಲ್ಲಿ ಈ ಕಾರ್ಯದಲ್ಲಿ ಭಾಗವಹಿಸುವ ಸಹಸ್ರ ಸಹಸ್ರ ಕನ್ನಡಿಗರ ಅಭಿಪ್ರಾಯವನ್ನು ಕೂಡ ಗೌರವಿಸಬೇಕು. ಅನ್ನುವುದು ನನ್ನ ಇರಾದೆ. ಈ ಎಲ್ಲ ಆಶಯಗಳನ್ನು ಇರಿಸಿಕೊಂಡು ನಾನು ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇನೆ. ಕನ್ನಡಸ ಜ್ಞಾನಪೀಠಗಳ ಬಗ್ಗ್ಎ ನಾವು ಬಹಳ ಮಾತನಾಡುತ್ತೇವೆ. ಈ ಜ್ಞಾನಪೀಠಗಳು ನಮ್ಮ ನಾಡಿಗೆ ಹೊರಗಿನಿಂದ ಬಂದವುಗಳು. ಅಲ್ಲದೆ ಇವು ನಮ್ಮ ನಾಡಿನ ಕೆಲವೇ ಕೆಲವರನ್ನು ಕೀರ್ತಿಯ ಶಿಖರಕ್ಕೆ ಏರಿಸಿದವುಗಳು. ಆದರೆ ನಾಡಿನ ಒಳಗೇನೇ ಇರುವ ಕೆಲ ಕನ್ನಡ ಭಾಷಾ ಪೀಠಗಳು ಜ್ಞಾನಪೀಠಗಳಾಗಿ ಕೆಲಸ ಮಾಡುತ್ತಿರುವುದರ ಅರಿವು ನಮಗೆ ಇರಬೇಕಾದ್ದು ಮುಖ್ಯ. ಕನ್ನಡ ನಾಡಿನಲ್ಲಿ ಇರುವ ಕೆಲವು ವಿಶ್ವವಿದ್ಯಾಉಯಗಳಲ್ಲಿ ಕನ್ನಡ ಭಾಷಾ ಪೀಠಗಳಿವೆ. ನಾಡಿನ ವಿವಿಧೆಡೆಗಳಲ್ಲಿ ಕನ್ನಡದ ಕೆಲಸ ಮಾಡುವ ಕರ್ನಾಟಕ ಸಂಘಗಳು, ಕನ್ನಡ ಸಂಘಗಳು ಇವೆ. ಧಾರವಾಡದ ವಿದ್ಯಾವರ್ಧಕ ಸಂಘ, ಶಿವಮೊಗ್ಗದ ಕರ್ನಾಟಕ ಸಂಘ, ಇನ್ನೂ ಕೆಲವೆಡೆಗಳಲ್ಲಿ ಇರುವ ಸಂಘಗಳು, ಕನ್ನಡದ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಒಂದು ಪೀಠವಾಗಿ ಈ ಕನ್ನಡಟ ಕೆಲಸವನ್ನು ಮಾಡುತ್ತಿದೆ. ಇತ್ತೀಚೆಗೆ ಜನ್ಮ ತಾಳಿದ ಧಾರವಾಡದ ಸಾಹಿತ್ಯ ಸಂಭ್ರಮವನ್ನು ನಾವು ಮರೆಯುವಂತಿಲ್ಲ. ಇನ್ನು ದಲಿತ ಬಂಡಾಯ ಸಂಸ್ಥೆಗಳ ಕನ್ನಡ ಸೇವೆ ಕೂಡ ಗಮನಾರ್ಹವಾದದ್ದು. ಇಲ್ಲಿ ಹೇಳಲೇಬೇಕಾದ ಇನ್ನೊಂದು ಕನ್ನಡದ ಪೀಠ ಎಂದರೆ ಆಳ್ವಾಸ್ ನುಡಿಸಿರಿ. ಇದು ನಡೆಸುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ' ಕನ್ನಡದ ಕೆಲಸವನ್ನು ಸಮರರ್ಥವಾಗಿ ಮಾಡಿಕೊಂಡು ಬಂದಿದೆ. ಸಮಗ್ರ ನಾಡಿನ ಗಮನ ಸೆಳೆಯುವಲ್ಲಿ ನುಡಿಸಿರಿ ಎಲ್ಲ ದಾಖಲೆಗಳನ್ನೂ ಮುರಿದಿದೆ. ಒಂದು ಸಮ್ಮೇಳನ ಹೇಗೆ ನಡೆಯಬೇಕು ಅನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಈ ನುಡಿಸಿರಿ. ಈ ಎಲ್ಲ ನುಡಿಪೀಠಗಳು ಕನ್ನಡದ ಕೆಲಸವನ್ನು ಮಾಡಿಕೊಂಡು ಬರುತ್ತಿವೆ. ಜನ ಕೂಡ ಈ ಕೆಲಸವನ್ನು ಸೆಳೆದುಕೊಂಡಿದೆ ಈ ನುಡಿಸರಿ. ಇದು ಸ‍ಣ್ಣಅ ಕೆಲಸವಲ್ಲ. ಕಾವ್ಯ, ಕತೆ, ಹಿರಿಯರ ಸನ್ಮಾನ, ವೈಚಾರಿಕ ಗೋಷ್ಠಿಗಳು, ಕಲಾ ಪ್ರದರ್ಶನ ಇತ್ಯಾದಿಗಳನ್ನು ಇರಿಸಿಕೊಂಡು ಇಡೀ ಸಮ್ಮೇಳನದಲ್ಲಿ ಆವಿಷಯದ ಚೆರ್ಚೆ, ವಿಶ್ಲೇಷಣೆಗೆ ಅವಕಾಶ ಮಾಡಿಕೊಡುವುದು ಒಂದು ವಿಶೇಷ. ಈವರೆಗೆ ನುಡಿಸಿರಿ ಕನ್ನಡ ಮನಸ್ಸು ಎನ್ನುವ ಶಿರ್ಷಿಕೆಯ ಅಡಿಯಲ್ಲಿ ಸಾಂಸ್ಕೃತಿಕ ಸಾಹಿತ್ಯಕ ಸವಾಲುಗಳು, ಬೌದ್ದಿಕ ಸವಾಲು, ಪ್ರಚಲಿತ ಪ್ರಶ್ನೆಗಳು, ಸಾಹಿತಿಕ ಜವಬ್ದಾರಿ ಶಕ್ತಿ ಮತ್ತು ವ್ಯಾಪ್ತಿ, ಸಮನ್ವಯದೆಡೆಗೆ, ಜೀವನ ಮೌಲ್ಯಗಳು, ಸಂಘರ್ಷ ಮತ್ತು ಸಾಮರಸ್ಯ, ಜನಪರ ಚಳುವಳಿಗಳು ಇತ್ಯಾದಿ ವಿಷಯಗಳನ್ನು ನಿಕಷಕ್ಕೆ ಒಡ್ಡಿದೆಯಾದರೆ ಈ ಬಾರಿ ಕರ್ನಾಟಕ -ವರ್ತಮಾನದ ತಲ್ಲಣ' ಅನ್ನುವ ಪರಿಕಲ್ಪನೆಯನ್ನು ಜನತೆಯ ಮುಂದೆ ಇರಿಸಿದೆ. ಇದಕ್ಕೆ ಸಂಬಂಧ ಪಟ್ಟಂತೆಯೇ ಗೋಷ್ಠಿಗಳನ್ನು ಕೂಡ ಹಮ್ಮಿಕೊಂಡಿದೆ. ಕೃಷಿ, ಪರಿಸರ, ಉದ್ಯಮ, ಭಾಷೆ, ಶಿಕ್ಷಣ ಕಲೆ, ಸಾಹಿತ್ಯ, ಇತ್ಯಾದಿಗಳಲ್ಲಿ ಕಾಣಿಸಿಕೊಂಡಿರುವಂತಹ ತಲ್ಲಣಗಳ ಕುರಿತಂತೆ ಇಲ್ಲಿ ಮಾತುಗಳು ಅದಕ್ಕೆ ಪ್ರತಿಕ್ರಿಯೆಗಳೂ ಕೇಳಿ ಬರಲಿವೆ. ಆದುದರಿಂದ ನಾನು ವಿವಿರಗಳಿಗೆ ಹೋಗುವುದಿಲ್ಲ. ಗೋಷ್ಠಿಗಳಲ್ಲಿ ವಿಸ್ತೃತವಾದ ಚರ್ಚೆಗಳು ನಡೆಯಲಿಎಂದು ಹಾರೈಸುತ್ತೇನೆ. ಹೀಗೆ ಕೆಲ ನಿಶ್ಚಿತ ವಿಷಯಗಳನ್ನು ವಿಮೆರ್ಶೆಗೆ, ವಿಶ್ಲೇಷಣೆಗೆ ಒಡ್ಡುವ ಈ ಪ್ರಯತ್ನ ಕೂಡ ಗಮನಿಸಬೇಕಾದ್ದು. ಬೇರೆ ಸಮ್ಮೇಳನಗಳಲ್ಲಿ ಈ ಕೆಲಸ ಆಗುವುದಿಲ್ಲ. ಅನ್ನುವುದು ಮುಖ್ಯ. ಈ ಕೆಲಸದ ಮೂಲಕ ಇಡೀ ಕನ್ನಡ ನಾಡು ಎತ್ತ ಸಾಗಿದೆ ಅನ್ನುವುದರ ವಿಮರ್ಶೆ ಇಲ್ಲಿ ನಡೆಯುವುದರಿಂದ ನಾಡಿನ ಆರೋಗ್ರ ಸುಧಾರಿಸುವ ಕೆಲಸ ಇಲ್ಲಿ ಆದೀತು ಅನ್ನುವ ಆಶಯ ನನಗಿದೆ. ವರ್ತಮಾನ ಕಾಲ ಅನ್ನುವುದೇ ಒಂದು ತಲ್ಲಣದ ವಿಷಯ. ಯಾವ ವರ್ತಮಾನಕ್ಕೆ ಪೂರ್ವದ ಸಾಂಸ್ಕೃತಿಕ ಹಿನ್ನೆಲೆ ಇರುವುದಿಲ್ಲವೋ, ಯಾವ ವರ್ತಮಾನಕ್ಕೆ ಪ್ರಗತಿಪರವಾದ ಭವಿಷ್ಯದ ಚಿಂತನೆ ಇರುವುದಿಲ್ಲವೋ ಅದು ಅಪಾಯಕಾರಿಯಾದ ವರ್ತಮಾನ ಆಗುತ್ತದೆ. ಹಿಂದಿನದರ ಅರಿವಿಲ್ಲದ, ಮುಂದಿನದರ ಚಿಂತನೆ ಇಲ್ಲದ ವರ್ತಮಾನದ ಮೂಲಕ ಏನನ್ನೂ ಸಾಧನೆ ಮಾಡಲು ಆಗುವುದಿಲ್ಲ. ಅಲ್ಲದೆ ಹಿಂದಿನದನ್ನು ಅದರ ಪಾಡಿಗೆ ಬಿಟ್ಟು, ಮುಂದಿನದನ್ನು ನಿರ್ಲಕ್ಷಿಸಿ ನಾವು ಸಾಗಿದರೆ ಎಲ್ಲಿಗೆ ಹೋಗಿ ತಲುಪುತ್ತೇವೆ ಅನ್ನುವುದು ಸ್ಪಷ್ಟವಾಗುವುದಿಲ್ಲ. ಇಂತಹ ದಿನಮಾನಗಳನ್ನು ನಾವು ಇಂದು ಕಾಣುತ್ತಿದ್ದೇವೆ. ವರ್ತಮಾನ ಅನ್ನುವುದು ಆವೇಶದ, ಆಧುನಿಕತೆಯನ್ನು ಅಪಾರ್ಥ ಮಾಡಿಕೊಂಡ, ಮನುಷ್ಯನ ದೌರ್ಬಲ್ಯಗಳ ಮೂಟೆಯಾಗಿ, ಬೇಜಬ್ದಾರಿಯ ಬಗೆ ಬಗೆಯ ಗೊಂದಲಗಳಲ್ಲಿ ಸಿಲುಕಿಕೊಂಡಿರುವುದರಿಂದ ಇಡೀ ವರ್ತಮಾನದಲ್ಲಿಯೇ ಸಾವಿನ ತಲ್ಲಣಗಳು ನಮಗೆ ಗೋಚರಿಸುತ್ತಿವೆ. ಡಿವಿಜಿಯವರು ಹೇಳಿದ ಹಾಗೆ "ಹಳೆ ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆ ಎಂದೋ" ಎಂಬ ಪ್ರಶ್ನೆಗೆ ಇದೀಗ ಉತ್ತರ ಹುಡುಕಬೇಕಿದೆ. ವರ್ತಮಾನ ಅನ್ನುವುದು ಒಂದು ಬದಲಾವಣೆಯ ಕಾಲಘಟ್ಟಅ. ಕೌಟುಂಬಿಕ ಮೌಲ್ಯಗಳು,ಸಾಮಾಜಿಕ ಸ್ಥಿತ್ಯಂತರಗಳು, ರಾಜಕೀಯದ ಬದಲಾವಣೆಗಳು, ಧಾರ್ಮಿಕ ನಂಬಿಕೆಗಳು, ವೈಜ್ಞಾನಿಕ ಸಂಶೋಧನೆಗಳು ಎಲ್ಲವನ್ನೂ ಮೈಗೂಡಿಸಿಕೊಂಡ ಮನುಷ್ಯ ತನ್ನ ಮುನ್ನಡೆಯನ್ನು ಸಾಧಿಸುವಾಗ ಈ ವರ್ತಮಾನ ಅನ್ನುವುದು ಮೈತಾಳುತ್ತದೆ. ಈ ವರ್ತಮಾನವನ್ನು ರೂಪಿಸುವ ಇನ್ನೂ ಕೆಲ ಅಂಶಗಳು ಇವೆ ಅನ್ನುವುದನ್ನು ನಾವು ಗಮನಿಸಬೇಕು.