ಸದಸ್ಯ:Pallavi Kombraje/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೈರಾದೇವಿಯ ಜಿನೇಂದ್ರ ಬಸದಿ, ಹಿರಿಯಂಗಡಿ

ಸ್ಥಳ[ಬದಲಾಯಿಸಿ]

ಕಾರ್ಕಳ ತಾಲೂಕಿನ ಹಿರಿಯಂಗಡಿ ಹೋಗುವ ರಸ್ತೆಯ ಬದಿಯ ಶ್ರೀ ಮಹಾವೀರ ಭವನ ಎಂಬ ಬ್ರಹತ್ ಸಭಾಭವನದ ಬಳಿ ಈ ಬಸದಿಯು ಕಂಡು ಬರುತ್ತದೆ.

ದೈವ[ಬದಲಾಯಿಸಿ]

ಇಲ್ಲಿ ಮೂಲನಾಯಕರಾಗಿ ಭಗವಾನ್ ಶ್ರೀ ಮಹಾವೀರ ಸ್ವಾಮಿಯನ್ನು ಪೂಜಿಸಲಾಗುತ್ತದೆ.

ಆವರಣ[ಬದಲಾಯಿಸಿ]

ಹತ್ತಿರದಲ್ಲಿ ಅಬ್ಬಗ ದೇವಿ ಬಸದಿ ಮತ್ತು ಅರಮನೆ ಬಸದಿಯಿದೆ. ಇವುಗಳು ಸುಮಾರು ಇನ್ನೂರು ಮೀಟರ್ ದೂರದಲ್ಲಿವೆ. ಸುತ್ತಲೂ ನೂತನವಾಗಿ ನಿರ್ಮಿಸಿದ ಮುರಕಲ್ಲಿನ ಪ್ರಾಕಾರ ಗೋಡೆ ಇದೆ. ಬಸದಿಯ ಮುಂಭಾಗವು ಟೆರೇಸನ್ನು ಮತ್ತು ಉಳಿದ ಭಾಗ ಹಂಚಿನ ಮಾಡನ್ನು ಹೊಂದಿದೆ. ಬಸದಿಯ ಅಧಿಷ್ಟಾನಕ್ಕೆ ಮೂರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗುತ್ತದೆ. ಈ ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ಕಮಲದ ಮೊಗ್ಗಿನ ಆಕೃತಿಯನ್ನು ಹೊಂದಿದ ಆನೆಕಲ್ಲುಗಳಿವೆ. ಅಧಿಷ್ಟಾನದ ಮುಂಭಾಗದಲ್ಲಿ ವಿಶಾಲವಾದ ಜಗಲಿಯಿದ್ದು, ಅಲ್ಲಿಯೇ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ದ್ವಾರ ಪಾಲಕರ ಅಂದವಾದ ವರ್ಣಚಿತ್ರಗಳಿವೆ. ಪ್ರವೇಶ ದ್ವಾರದ ಮರದ ಬಾಗಿಲಿಗೆ ವಿಶೇಷ ಭಧ್ರತೆಯನ್ನು ಒದಗಿಸಲಾಗಿದೆ. ಬಸದಿಯ ಅಂಗಳಕ್ಕೆ ಕರ್ಗಲ್ಲಿನ ಚಪ್ಪಡಿ ಕಲ್ಲುಗಳನ್ನು ಹಾಸಲಾಗಿದ್ದು, ಶುಚಿತ್ವ ಮತ್ತು ಶುದ್ಧತೆಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದ್ದು ಅಲ್ಲಿ ಕ್ಷೇತ್ರಪಾಲ, ನಾಗಕಲ್ಲು ಹಾಗೂ ತ್ರಿಶೂಲಗಳನ್ನು ಒಂದೇ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಪ್ರಾಂಗಣದ ಎಡಮೂಲೆಯಲ್ಲಿ ಪಾದುಕಾ ಮಂಟಪವೊAದನ್ನು ನಿರ್ಮಿಸಿ ಅದರಲ್ಲಿ ಮುನಿಪಾದದ ಚಿಹ್ನೆಗಳಿರುವ ಶಿಲಾಫಲಕವನ್ನು ಸ್ಥಾಪಿಸಲಾಗಿದೆ.[೧]

ವಿನ್ಯಾಸ[ಬದಲಾಯಿಸಿ]

ಬಸದಿಯು ಬಲಿಕಲ್ಲು ಪ್ರಾಕಾರ ಗೋಡೆಯಿಂದ ನಿರ್ಮಿತವಾಗಿ ಹೊರ ಭಾಗದಲ್ಲಿದೆ. ಈ ಬಸದಿಗೆ ಮೇಗಿನ ನೆಲೆ ಇಲ್ಲದಿದ್ದರೂ ಅಲ್ಲಿ ದೇವಕೂಟದಂತಹ ರಚನೆ ಇದ್ದು, ಅಲ್ಲಿ ಒಂದು ಜಿನೇಶ್ವರರ ವರ್ಣಚಿತ್ರವನ್ನು ಬಿಡಿಸಲಾಗಿದೆ.ಮುಂದೆ ಇರುವ ತೀರ್ಥಂಕರ ಮಂಟಪದಲ್ಲಿ ಗಂಧಕುಟಿ ಇದ್ದು ಕೆಲವು ಜಿನ ಬಿಂಬಗಳನ್ನು ಮತ್ತು ಬ್ರಹದೇವರ ಮೂರ್ತಿಯನ್ನೂ ಹೊಂದಿದೆ. ಗಂಧಕುಟಿಯಲ್ಲಿರುವಂತೆ ತೀರ್ಥಂಕರ ಬಿಂಬದ ಎದುರಲ್ಲಿಯೂ ಶ್ರೀ ಪದ್ಮಾವತಿ ದೇವಿಯ ಮೂರ್ತಿಯೊಂದಿದೆ. ಇದಕ್ಕೆ ಸೀರೆಯುಡಿಸಿ, ಬಳೆಗಳನ್ನು ತೊಡಿಸಿ ಶೃಂಗರಿಸಿ ಪೂಜಿಸಲಾಗುತ್ತದೆ. ಗರ್ಭಗೃಹದಲ್ಲಿರುವ ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಬಿಂಬವು ರ‍್ಯಂಕಾಸನ ಭಂಗಿಯಲ್ಲಿದ್ದು, ಅಮೃತ ಶಿಲೆಯಿಂದ ಮಾಡಲ್ಪಟ್ಟಿದೆ. ಈ ಬಿಂಬದ ಹಿಂದೆ ಇರುವ ಪ್ರಭಾವಳಿಯು ಸದಾ ಚಿನ್ನದ ಬಣ್ಣದಿಂದ ಕಂಗೊಳಿಸುತ್ತದೆ. ಮೇಲ್ಗಡೆ ಮಧ್ಯದಲ್ಲಿ ವಿಶೇಷವಾಗಿ ಎದ್ದು ಕಾಣುವ ಕೀರ್ತಿ ಮುಖವಿದೆ.

ವಿಧಿವಿಧಾನ[ಬದಲಾಯಿಸಿ]

ಭೈರವರಸರ ಕಾಲದ ರಾಣಿ ಭೈರವಾದೇವಿಯು ಕಟ್ಟಿಸಿದ ಬಸದಿಯೆಂದು ಹೇಳಲಾಗುವ ಇದನ್ನು ಈಗ ಕಾರ್ಕಳ ಪುರೋಹಿತ ಸಂಘದವರು ಜೀರ್ಣೋದ್ಧಾರಗೊಳಿಸಿ ಸರ್ವಾಂಗ ಸುಂದರಗೊಳಿಸಿದ್ದಾರೆ. ಕಾರ್ಕಳದ ಪುರೋಹಿತ ಸಂಘದವರು ಇದನ್ನು ನಡೆಸುತ್ತಿರುವುದರಿಂದ ಎಲ್ಲಾ ಅಭಿಷೇಕ, ಪೂಜಾದಿಗಳು ಕ್ರಮವಾಗಿ ನಡೆಯುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೫೦.