ಸದಸ್ಯ:Naveen1940454/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮ ಬೆಂಗಳೂರು[ಬದಲಾಯಿಸಿ]

ಬೆಂಗಳೂರು ಇತಿಹಾಸ:[ಬದಲಾಯಿಸಿ]

ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಒಂದು ಸುಂದರ ನಗರಿ. ಇದಕ್ಕೆ ನಿವೃತ್ತರ ಸ್ವರ್ಗ. ಉದ್ಯಾನ ನಗರಿ,ಸಿಲಿಕಾನ್ ಸಿಟಿ ಎಂಬ ಹೆಸರುಗಳೂ ಇವೆ. ಆದರೆ,ಬೆಂಗಳೂರಿಗೆ ಈ ಹೆಸರು ಹೇಗೆ ಬಂತು ಎಂಬ ಬಗ್ಗೆ ಹಲವಾರು ಕಥೆಗಳಿವೆ.

ಒಂದು ಉಲ್ಲೇಖದ ರೀತ್ಯ : 12ನೇ ಶತಮಾನದಲ್ಲಿ ಬೇಟೆಗೆಂದು ಬಂದ ಹೊಯ್ಸಳ ವಂಶದ ಅರಸು ಇಮ್ಮಡಿ ವೀರ ಬಲ್ಲಾಳನು ದಾರಿ ತಪ್ಪಿ, ದಾರಿ ಹುಡುಕುತ್ತಾ ಇಲ್ಲಿಗೆ ಬಂದನಂತೆ. ಹಸಿವಿನಿಂದ ಬಳಲುತ್ತಿದ್ದ ಆ ದೊರೆ, ಕಾಡಿನಂಚಿನಲ್ಲಿದ್ದ ಮುದುಕಿಯ ಒಂಟಿ ಗುಡಿಸಿಲ ಬಳಿ ಬಂದು ‘ಅಮ್ಮ ಹಸಿವಿನಿಂದ ಬಳಲುತ್ತಿದ್ದೇನೆ. ತಿನ್ನಲು ಏನಾದರೂ ಕೊಡಿ’ ಎಂದು ಕೇಳಿದನಂತೆ.ಆ ಬಡ ಮುದುಕಿ , ಮನೆಯಲ್ಲಿದ್ದ ಬೆಂದಕಾಳುಗಳನ್ನೇ ರಾಜನಿಗೆ ನೀಡುತ್ತಾಳೆ. ಬೆಂದಕಾಳು ತಿಂದು ನೀರು ಕುಡಿದ ವೀರ ಬಲ್ಲಾಳ ಮುದುಕಿಯ ಆತಿಥ್ಯದಿಂದ ಪ್ರೀತನಾಗಿ ಬೆಂದ ಕಾಳು ನೀಡಿ ತನ್ನ ಹಸಿವು ನೀಗಿಸಿದ ಊರಿಗೆ ಬೆಂದಕಾಳೂರು (ಬೇಕ್ಡ್ ಬೀನ್ಸ್) ಎಂದೇ ನಾಮಕರಣ ಮಾಡಿದ. ಉತ್ತರೋತ್ತರದಲ್ಲಿ ಬೆಂದಕಾಳೂರು ಬೆಂಗಳೂರಾಯ್ತಂತೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ.

ಶಾಸನ

ಮತ್ತೊಂದು ಕಥೆಯ ರೀತ್ಯ: ಬೆಂಗಳೂರಿನ ನಿರ್ಮಾತೃ ಹಿರಿಯ ಕೆಂಪೇಗೌಡರು ದಟ್ಟವಾಗಿದ್ದ ಕಾಡು ಕಡಿಸಿ, ಸುಡಿಸಿ ಒಂದು ನಗರ ಕಟ್ಟಿದರಂತೆ. ಕಾಡು ಸುಡಿಸಿ ಗೌಡರು ನಾಡು ಕಟ್ಟಿದೂರಿನಲ್ಲಿ ವಾಸಿಸಲು ಬಂದ ಜನರು ಆ ಊರನ್ನು ಬೆಂದಕಾಡೂರು’ ಎಂದೇ ಕರೆಯುತ್ತಿದ್ದರು. ಮುಂದೆ ಅದು ಬೆಂಗಾಡೂರಾಗಿ, ಬೆಂಗಾಳೂರಾಗಿ ಕೊನೆಗೆ ಬೆಂಗಳೂರಾಯಿತು.

ಮಗದೊಂದು ಕಥೆಯ ರೀತ್ಯ:ವಿಷ್ಣುಭಕ್ತರಾಗಿದ್ದ ವಿಜಯನಗರದರಸರನ್ನು ಮೆಚ್ಚಿಸುವ ಸಲುವಾಗಿ ಕೆಂಪೇಗೌಡರು, ಬೆಂಗಳೂರಿನ ಹಲವು ಕಡೆ ವೆಂಕಟರಮಣನ ದೇವಾಲಯಗಳನ್ನು ಕಟ್ಟಿಸಿದರು. ವೆಂಕಟರಮಣನ ದೇಗುಲಗಳ ನಗರಿಗೆ ವೆಂಕಟೂರು ಎಂದೂ ಕರೆದರು. ವಕಾರದ ಬದಲಿಗೆ ಬಕಾರ ಹಾಗೂ ಕಕಾರದ ಜಾಗದಲ್ಲಿ ಗಕಾರ ಬಂದು ವೆಂಕಟೂರು ಬೆಂಗಳೂರಾಯಿತು.

ಶಾಸನ ಸಾರುವುದೇ ಬೇರೆ : ಇವೆಲ್ಲ ದಂತ ಕತೆಗಳಾದರೆ ಶಾಸನಗಳು ಸಾರುವ ಸತ್ಯ ಕಥೆಯೇ ಬೇರೆ. ಬೆಂಗಳೂರು ಬಳಿಯಿರುವ ಬೇಗೂರಿನ ನಾಗೇಶ್ವರ ದೇವಸ್ಥಾನದ ಬಳಿ ದೊರೆತಿರುವ ೯ನೇ ಶತಮಾನದ (ಕ್ರಿ.ಶ. ೮೯೦) ಶಾಸನವೊಂದರಲ್ಲಿ ಆ ಪ್ರದೇಶದ ಮಾಂಡಲೀಕ ನಾಗತ್ತರನ ಮಗ ಪೆರುಮಾಳ ಸೆಟ್ಟಿ ಎಂಬುವನು ‘ಬೆಂಗುಳುರು’ ಕಾಳಗದಲ್ಲಿ ಮೃತನಾದ ಎಂದಿದೆ. ಅಂದರೆ ಆ ಬೆಂಗುಳುರು ಇಂದು ಬೆಂಗಳೂರಾಗಿದೆ ಎನ್ನುತ್ತಾರೆ ಇತಿಹಾಸಜ್ಞರು.

ಯಲಹಂಕ ಪ್ರಭುಗಳು, ಮೈಸೂರು ಒಡೆಯರು, ಮೊಗಲರು,ಹೊಯ್ಸಳರು, ಗಂಗರೆ ಮೊದಲಾದ ಅರಸು ಮನೆತನಗಳು ಆಳಿದ ಬೆಂಗಳೂರು ಇಂದು ತನ್ನ ಹಲವಾರು ವಿಶೇಷಗಳಿಂದ ವಿಶ್ವದ ಗಮನವನ್ನು ಸೆಳೆದಿದೆ.

ಸೊಗಸಾದ ಹವಾಗುಣ ಹೊಂದಿರುವ ಬೆಂಗಳೂರು ಏರ್‌ಕಂಡೀಷನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕ್ರೀಡೆ, ಸಂಸ್ಕೃತಿಯ ತವರಾದ ಬೆಂಗಳೂರು, ವಿಜ್ಞಾನ – ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯಿಂದ ವಿಶ್ವದ ಗಮನವನ್ನೇ ಸೆಳೆದಿದೆ. ಈಗ ಭಾರತಕ್ಕೆ ಯಾರೇ ವಿದೇಶೀ ಗಣ್ಯರು ಬಂದರೂ ಬೆಂಗಳೂರಿಗೆ ಅದರಲ್ಲೂ ವಿಪ್ರೋ, ಇನ್‌ಫೋಸಿಸ್‌ಗೆ ಭೇಟಿ ನೀಡದೆ ಹೋಗುವುದೇ ಇಲ್ಲ.

ಪಶ್ಚಿಮ ಗಂಗಾ ರಾಜವಂಶದ ಮುಖ್ಯ ಪಂಚಲದೇವನ ಮುಲ್ಗುಂಡ್‌ನಿಂದ ಹಳೆಯ ಕನ್ನಡ ಶಾಸನ (ಕ್ರಿ.ಶ. 925)

ಬೆಂಗಳೂರು, ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ವಾಣಿಜ್ಯ ನಗರಿಯಾಗಿದೆ. ಈಗ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಸಿಲಿಕಾನ್ ನಗರಿ ಎಂಬ ಹೆಸರನ್ನೂ ಪಡೆದಿದೆ. ಬೃಹತ್ ಕೈಗಾರಿಕೆಗಳ ತವರಾಗಿ, ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿದ ಪ್ರಮುಖ ಪಟ್ಟಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ಸೌಕರ್ಯವಿರುವ ಬೃಹತ್ ಬೆಂಗಳೂರಾಗಿದೆ.

ಸ್ವಾಭಾವಿಕ ಕೆರೆಗಳು, ಐತಿಹಾಸಿಕ ಸ್ಮಾರಕಗಳು, ಕೋಟೆ ಕೊತ್ತಲ, ಅರಮನೆ, ಭವ್ಯ ಸೌಧಗಳು,ಕಬ್ಬನ್‌ಪಾರ್ಕ್, ಲಾಲ್‌ಬಾಗ್, ಗುಡಿ ಗೋಪುರಗಳನ್ನು ಹೊಂದಿರುವ ಬೆಂಗಳೂರು ದೇಶ ವಿದೇಶಗಳ ಪ್ರವಾಸಿಗರನ್ನೂ ಕೈಬೀಸಿ ಕರೆಯುತ್ತಿದೆ.

ಗಂಗ, ಕದಂಬ, ಚಾಲುಕ್ಯ, ಒಡೆಯರಾಳಿದ ಬೆಂಗಳೂರು ನಗರವನ್ನು ಮೈಸೂರಿನ ಚಿಕ್ಕದೇವರಾಜ ಒಡೆಯರು1690ರಲ್ಲಿ ಶಿರಾದಲ್ಲಿ ಮೊಗಲರ ಸುಬಾದಾರನಾಗಿದ್ದ ಖಾಸಿಂಖಾನನಿಂದ 3 ಲಕ್ಷ ರೂಪಾಯಿಗಳಿಗೆ ಕೊಂಡು ಬೆಂಗಳೂರಿನ ಸುತ್ತ ಹೊಸದಾಗಿ ಮಣ್ಣಿನ ಕೋಟೆ ಕಟ್ಟಿಸಿ ಅಲ್ಲಿ ತನ್ನ ಸೈನ್ಯವನ್ನು ನೆಲೆಗೊಳಿಸಿದರು. ಅದೇ ಸಮಯದಲ್ಲಿ ಕೋಟೆಯಲ್ಲಿ ವೆಂಕಟರಮಣಸ್ವಾಮಿ ದೇವಾಲಯವನ್ನು ಕಟ್ಟಿಸಿದರು.  ರಾಜರಾಳ್ವಿಕೆಗೆ ಒಳಪಟ್ಟಿದ್ದರಿಂದ ಬೆಂಗಳೂರಿನಲ್ಲಿ ಹಲವು ಕೋಟೆ ಮತ್ತು ಸುಂದರ ಅರಮನೆಗಳೂ ಇವೆ. ಈ ಪೈಕಿ, ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಬೆಂಗಳೂರು ಅರಮನೆ ಹಾಗೂ ಟಿಪ್ಪೂ ಸುಲ್ತಾನರ ಬೇಸಿಗೆ ಅರಮನೆ ಪ್ರಮುಖವಾದವು. ಇದಲ್ಲದೆ ಬೆಂಗಳೂರಿನಲ್ಲಿ ನೋಡಲೇಬಾಕಾದ ಸ್ಥಳಗಳು ಹಲವಾರು.

ವಿಧಾನಸೌಧ

ಪ್ರಾಮುಖ್ಯತೆಯ ಸ್ಥಳಗಳು:[ಬದಲಾಯಿಸಿ]

ವಿಧಾನಸೌಧ:[ಬದಲಾಯಿಸಿ]

ಬೆಂಗಳೂರಿನ ಹೆಮ್ಮೆಗೆ ಕಳಶಪ್ರಾಯವಾಗಿರುವ ವಿಧಾನಸೌಧ ಈ ಪೈಕಿ ಮೊದಲನೆಯದು.

ಕೆಂಗಲ್ ಹನುಮಂತಯ್ಯ ತಮ್ಮ ಕನಸನ್ನು ನನಸಾಗಿಸಲು ಕಟ್ಟಿಸಿದ ಬೃಹತ್ ಭವ್ಯ ಸೌಧವೇ ವಿಧಾನಸೌಧ. ರಾಜ್ಯದ ಆಡಳಿತ ಸೌಧ.

ನಿಯೋ ಡ್ರಾವಿಡಿಯನ್ ಮಾದರಿಯ ಈ ಗ್ರಾನೈಟ್ ಕಟ್ಟಡ ಭವ್ಯತೆಗೆ ಮತ್ತೊಂದು ಹೆಸರಾಗಿದೆ. ಭಾನುವಾರ ಹಾಗೂ ಸರಕಾರಿ ರಜೆ ದಿನಗಳಲ್ಲಿ ವಿದ್ಯುತ್ ದೀಪಾಲಂಕಾರದಲ್ಲಿ ವಿಧಾನಸೌಧದ ಸೌಂದರ್ಯ ಇಮ್ಮುಡಿಯಾಗುತ್ತದೆ.

ಬೃಹತ್ ಗಡಿಯಾರ :[ಬದಲಾಯಿಸಿ]

ಲಂಡನ್ನಿನ ಬಿಗ್‌ಬೆನ್‌ನ ವಿಶ್ವದ ಅತಿದೊಡ್ಡ ಗೋಪುರ ಗಡಿಯಾರದ ನಂತರ ಜಗತ್ತಿನ ಎರಡನೇ ಅತಿ ದೊಡ್ಡ ಗೋಪುರ ಗಡಿಯಾರ ಎಂಬ ಖ್ಯಾತಿಗೆ ಪಾತ್ರವಾಗಿರುವ ಸುಂದರ ಗೋಪುರ ಗಡಿಯಾರ ಬೆಂಗಳೂರಿನ ರಾಜರಾಜೇಶ್ವರಿನಗರದ ಸಮೀಪದ ಶ್ರೀನಿವಾಸಪುರ ಬಳಿಯ ಓಂಕಾರಾಶ್ರಮದಲ್ಲಿದೆ. ಈ ಗಡಿಯಾರ 120 ಅಡಿ ಎತ್ತರವಿದೆ. ಅತ್ತಿತ್ತ ಮುಖ ಮಾಡಿದ ಎರಡು ಸುಂದರ ಪಕ್ಷಿಗಳು,ಗಡಿಯಾರವನ್ನು ಎರಡೂ ಬದಿ ತಬ್ಬಿ ಹಿಡಿದ ರೆಕ್ಕೆಯುಳ್ಳ ಕಾಲ್ಪನಿಕ ಯಕ್ಷರು, ಕನಿಷ್ಠ ಎರಡು ಅಡಿ ಎತ್ತರದ ಒಂದೊಂದು ಅಂಕಿ, ತಲಾ 200 ಕಿಲೋಗ್ರಾಂ. ತೂಗುವ ಎರಡು ಮುಳ್ಳುಗಳು ನೋಡುಗರನ್ನು ನಿಬ್ಬೆರಗುಗೊಳಿಸುತ್ತದೆ. ಗಂಟೆಗೊಮ್ಮೆ ಇದು ಶಂಖನಾದ, ಓಂಕಾರ ನಾದ ಹೊರಹೊಮ್ಮಿಸುತ್ತದೆ.

ಲಾಲ್‌ಬಾಗ್‌ನ ಗಾಜಿನಮನೆ

ಲಾಲ್‌ಬಾಗ್:[ಬದಲಾಯಿಸಿ]

ಉದ್ಯಾನಗಳ ರಾಜಾ ಎಂದೇ ಹೆಸರಾದ ಲಾಲಾಬಾಗ್ 240 ಎಕರೆ ಪ್ರದೇಶದಲ್ಲಿ , ಸಾವಿರಾರು ಬಗೆಯ ಹೂಗಿಡ, ಮರ, ಬಳ್ಳಿಗಳಿಂದ ಕೂಡಿ ಸಮೃದ್ಧವಾದ ಸುಂದರ ಉದ್ಯಾನ. ತಂಡಿ ಸಡಕ್, ಪುಷ್ಪ ಗಡಿಯಾರ, ಗಾಜಿನ ಮನೆ,ಪಟ್ಟದೊಂದು ಮೃಗಾಲಯ, ಕೆರೆ, ಕೆಂಪೇಗೌಡರ ಗೋಪುರಗಳನ್ನುಳ್ಳ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ಜರುಗುತ್ತದೆ.

ಕಬ್ಬನ್‌ಪಾರ್ಕ್:[ಬದಲಾಯಿಸಿ]

1864ರಷ್ಟು ಹಳೆಯದಾದ ಕಬ್ಬನ್‌ಪಾರ್ಕ್ ಬೆಂಗಳೂರು ನಗರದ ಕೇಂದ್ರ ಹಾಗೂ ಹೃದಯಭಾಗದಲ್ಲಿರುವ ಸುಂದರ ಉದ್ಯಾನ. ವಿಧಾನ ಸೌಧದ ಎದುರು ಹಾಗೂ ಉಚ್ಚ ನ್ಯಾಯಾಲಯಕ್ಕೆ ಹೊಂದಿಕೊಂಡಂತೆ ಇರುವ ಈ ಉದ್ಯಾನದಲ್ಲಿ ಬಾಲಭವನ,ಪುಟಾಣಿ ರೈಲು, ಕಾರಂಜಿ, ಮ್ಯೂಜಿಯಂ, ಮತ್ಸ್ಯಾಲಯ, ವಿವಿಧ ಬಗೆಯ ಆಧುನಿಕ ಯಂತ್ರಚಾಲಿತ ಆಟಿಕೆಗಳು, ವಿಶ್ವೇಶ್ವರಾಯ ತಾಂತ್ರಿಕ ವಸ್ತು ಸಂಗ್ರಹಾಲಯ, ಸರ್ಕಾರಿ ವಸ್ತುಸಂಗ್ರಹಾಲಯಗಳಿವೆ.

ಹಜರತ್ ತವಾಕಲ್ ಮಸ್ತಾನ್ ದರ್ಗಾ:[ಬದಲಾಯಿಸಿ]

ಕಾಟನ್‌ಪೇಟೆಯಲ್ಲಿರುವ ಮಸ್ತಾನ್ ದರ್ಗಕ್ಕೂ ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೂ ಅವಿನಾಭಾವ ಸಂಬಂಧ ಇದೆ. ಸೂಫಿ ಪಂಥದ ತವಾಕಲ್ ಮಸ್ತಾನರ ಈ ದರ್ಗಕ್ಕೆ ಪ್ರತಿ ವರ್ಷ ಕರಗ ಉತ್ಸವ ಭೇಟಿ ನೀಡುತ್ತದೆ. ಕೋಮು ಸೌಹಾರ್ದದ ಸಂಕೇತವಾಗಿರುವ ಈ ದರ್ಗಕ್ಕೆ ಮುಸ್ಲಿಮ್ ಮತ್ತು ಮುಸ್ಲಿಮೇತರರೂ ಭೇಟಿ ನೀಡುತ್ತಾರೆ.

ಬಸವನ ಗುಡಿ (ಬುಲ್ ಟೆಂಪಲ್)

ಬಸವನ ಗುಡಿ (ಬುಲ್ ಟೆಂಪಲ್) :[ಬದಲಾಯಿಸಿ]

ಬೆಂಗಳೂರಿನ ಗಾಂಧಿಬಜಾರ್ ಮತ್ತು ಹನುಮಂತನಗರಗಳ ಮಧ್ಯೆ ಇರುವ ಪುಟ್ಟ ಬೆಟ್ಟದ ಮೇಲೆ ಬಸವನ ಗುಡಿಯನ್ನು ಕಟ್ಟಿಸಿದ್ದು ಮಾಗಡಿ ಕೆಂಪೇಗೌಡರಂತೆ.

ಈ ದೇವಾಲಯದಲ್ಲಿ 15 ಅಡಿ ಎತ್ತರ 20 ಅಡಿ ಉದ್ದದ ದೊಡ್ಡ ಬಸವಣ್ಣನ ವಿಗ್ರಹವಿದೆ.

ಬಂಡೆಯ ಕೆಳಗೆ ರಸ್ತೆಯಂಚಿನಲ್ಲಿ ಏಕಶಿಲೆಯ ದೊಡ್ಡ ಗಣಪನ ಗುಡಿಯೂ ಇದೆ.

ಹಿಂಬದಿಯಲ್ಲಿ ಬ್ಯೂಗಲ್ ರಾಕ್ ಅಥವಾ ಕಹಳೆ ಬಂಡೆ ಎಂಬ ಹೆಸರಿನ ಉದ್ಯಾನವೂ ಇದೆ. ಪ್ರತಿವರ್ಷ ಕಾರ್ತೀಕ ಮಾಸದಲ್ಲಿ ಇಲ್ಲಿ ಕಡಲೆಕಾಯಿ ಪರಿಷೆ (ಕಡಲೆಕಾಯಿ ಜಾತ್ರೆ) ನಡೆಯುತ್ತದೆ.

ಇಸ್ಕಾನ್ ದೇವಾಲಯ:[ಬದಲಾಯಿಸಿ]

ಮಹಾಲಕ್ಷ್ಮೀ ಲೇಔಟಿನ ಆಂಜನೇಯನ ದೇಗುಲದ ಅನತಿ ದೂರದಲ್ಲೇ ಇರುವ ಈ ದೇವಾಲಯವನ್ನು ರಾಜಾಜಿನಗರದ ಪುಟ್ಟಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಇಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಬ್ರಹ್ಮ ರಥೋತ್ಸವವೂ ಈ ದೇವಾಲಯ ಟ್ರಸ್ಟ್ ವತಿಯಿಂದ ಅಕ್ಷಯ ಪಾತ್ರೆ ಯೋಜನೆಯಡಿ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಜುಮ್ಮಾ ಮಸೀದಿ:[ಬದಲಾಯಿಸಿ]

ಸಿಟಿ ಮಾರ್ಕೆಟ್ ಅಥವಾ ಕೃಷ್ಣರಾಜೇಂದ್ರ ಮಾರುಕಟ್ಟೆ ಪ್ರದೇಶದಲ್ಲಿರುವ ಈ ಮಸೀದಿ ನಗರದ ಅತಿ ಪುರಾತನ ಮಸೀದಿಗಳಲ್ಲಿ ಒಂದು.

ತಾರಾಲಯ:[ಬದಲಾಯಿಸಿ]

ಜವಾಹರಲಾಲ್ ತಾರಾಲಯ ಅರ್ಥಾತ್ ಪ್ಲಾನಿಟೋರಿಯಂ ರಾಜಭವನದ ಹಿಂಭಾಗದಲ್ಲಿದೆ. ಖಗೋಳ ವಿಜ್ಞಾನದ ಎಲ್ಲ ಆಗು ಹೋಗುಗಳ ಬಗ್ಗೆ ಆಸಕ್ತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸುವ ಈ ಸಂಸ್ಥೆಯಲ್ಲಿ ಹಗಲಲ್ಲೇ ಸೂರ್ಯಚಂದ್ರ, ಗ್ರಹತಾರೆಗಳೂ ಗೋಚರಿಸುತ್ತವೆ.

ರವೀಂದ್ರ ಕಲಾಕ್ಷೇತ್ರ:[ಬದಲಾಯಿಸಿ]

ರಂಗ ಕಲೆಯನ್ನು ಬೆಂಗಳೂರಿನಲ್ಲಿ ಜೀವಂತವಾಗಿ ಉಳಿಸಿರುವ ಕಲಾ ದೇಗುಲವೇ ರವೀಂದ್ರ ಕಲಾಕ್ಷೇತ್ರ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ರಾಷ್ಟ್ರಕವಿ ರವೀಂದ್ರನಾಥ ಠಾಕೂರ್ ಅವರ ಜನ್ಮಶತಮಾನೋತ್ಸವ ಸ್ಮರಣಾರ್ಥ ಕಟ್ಟಿದ ರಂಗಮಂದಿರಕ್ಕೆ ರವೀಂದ್ರ ಕಲಾಕ್ಷೇತ್ರ ಎಂದೇ ಹೆಸರಿಡಲಾಗಿದೆ. ಈಗ ನವೀನಕರಣಗೊಂಡು ಕಲಾಕ್ಷೇತ್ರ ಹೊಸರಂಗು ಪಡೆದಿದೆ. ಇದರ ಅಕ್ಕಪಕ್ಕದಲ್ಲಿ ಪುರಭವನ ಮತ್ತು ಕನ್ನಡ ಭವನಗಳಿವೆ. ಹಿಂಬದಿಯಲ್ಲಿ ಸಂಸ ಬಯಲು ರಂಗಮಂದಿರವೂ ಇದೆ.

ಸೇಂಟ್ ಮೇರೀಸ್ ಚರ್ಚ್

ಸೇಂಟ್ ಮೇರೀಸ್ ಚರ್ಚ್:[ಬದಲಾಯಿಸಿ]

ಪ್ರೆಂಚ್ ಮೆಷನರಿ 1811ರಲ್ಲಿ ಸ್ಥಾಪಿಸಿದ ಈ ಚರ್ಚ್ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಇದೆ. ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಇಲ್ಲಿ ಸಂತ ಮೇರಿ ಅಮ್ಮ ಜಾತ್ರೆ ನಡೆಯುತ್ತದೆ.

ಹಲಸೂರು ಕೆರೆ:[ಬದಲಾಯಿಸಿ]

ಬೋಟಿಂಗ್‌ನಿಂದ ಖ್ಯಾತವಾಗಿರುವ ಹಲಸೂರು ಕೆರೆ ಬೆಂಗಳೂರಿನ ಪಿಕ್‌ನಿಕ್ ತಾಣಗಳಲ್ಲೊಂದು. ಜನಾಕರ್ಷಣೆಯ ಕೇಂದ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಇರುವ ಈ ಕೆರೆ, ಪುಟ್ಟದೊಂದು ದ್ವೀಪದಂತಿದೆ.

ಚೌಡಯ್ಯ ಸ್ಮಾರಕ ಭವನ:[ಬದಲಾಯಿಸಿ]

ನಾಲ್ಕು ತಂತಿಗಳ ಪಿಟೀಲಿಗೆ 7 ತಂತಿಗಳನ್ನು ಅಳವಡಿಸಿದ ಖ್ಯಾತ ಪಿಟೀಲು ವಿದ್ವಾಂಸ ಟಿ. ಚೌಡಯ್ಯನವರ ಸ್ಮರಣಾರ್ಥ ಪಿಟೀಲಿನ ಮಾದರಿಯಲ್ಲೇ ಕಟ್ಟಿಸಿದ ಕಟ್ಟಡವೇ ಚೌಡಯ್ಯ ಸ್ಮಾರಕ ಭವನ. ಇಲ್ಲಿ ಹಲವು ವಿಧದ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತವೆ.

ಟಿಪ್ಪೂ ಬೇಸಿಗೆ ಅರಮನೆ:[ಬದಲಾಯಿಸಿ]

ಟಿಪ್ಪೂ ಬೇಸಿಗೆ ಅರಮನೆ

ಬೆಂಗಳೂರಿನ ಕೋಟೆ ಪ್ರದೇಶದಲ್ಲಿ ವೆಂಕಟರಮಣ ದೇವಾಲಯದ ಹಿಂಭಾಗದಲ್ಲೇ ಇರುವ ಟಿಪ್ಪೂ ಬೇಸಿಗೆ ಅರಮನೆ ನಿರ್ಮಾಣವಾದದ್ದು 1791ರಲ್ಲಿ. ಎರಡು ಅಂತಸ್ತಿನ ಈ ಅರಮನೆಯನ್ನು  ಮರದಿಂದ ನಿರ್ಮಿಸಲಾಗಿದೆ. ಹೈದರಾಲಿ ಹಾಗೂ ಟಿಪ್ಪೂ ಆಡಳಿತ ಕಾಲದ ವಸ್ತು ಸಂಗ್ರಹಾಲಯವೂ ಇಲ್ಲಿದೆ.ನೋಡಲು ಒಂದು ಅಂತಸ್ತಿನ ಸ್ತಂಭಗಳ ಮಂಟಪದಂತೆ ಕಂಡಊ, ನೈಜಸ್ಥಿತಿಯಲ್ಲಿ ಎರಡಂತಸ್ತಿನ ಈ ಕಟ್ಟಡವನ್ನು ಸಮಕಾಲೀನ ಇಂಡೋ ಇಸ್ಮಾಮಿಕ್ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಆಯತಾಕಾರದ ಕಲ್ಲಿನ ಅಧಿಷ್ಠಾನದ ಮೇಲೆ ನಿರ್ಮಿಸಲ್ಪಟ್ಟ ಈ ಕಟ್ಟಡದ ಮುಂಭಾಗದಲ್ಲಿ ಉನ್ನತವಾದ ಮರದ ಸ್ತಂಭಗಳನ್ನು ಕಲ್ಲಿನ ಪೀಠದ ಮೇಲೆ ಅಳವಡಿಸಲಾಗಿದ್ದು, ಬಹುಭಾರವಾದ ತೊಲೆಗಳನ್ನು ಆಧರಿಸಿ ನಿಲ್ಲಿಸಲಾಗಿದೆ. ಸ್ತಂಭಗಳ ನಡುವೆ ಇಂಡೋ-ಇಸ್ಮಾಮಿಕ್ ಶೈಲಿಯ ಅರ್ಧವರ್ತುಲಗಳ ಕಮಾನುಗಳನ್ನು ಹಾಗೂ ಬೋದಿಗೆಗಳನ್ನು ಅಳವಡಿಸಲಾಗಿದ್ದು ಇಡೀ ಸ್ತಂಭಗಳ ಈ ಮೊಗಸಾಲೆಯನ್ನು ಕಂದು ಹಾಗೂ ಹಳದಿ ಬಣ್ಣದ ಲೇಪನದಿಂದ ಸುಂದರಗೊಳಿಸಲಾಗಿದೆ

ರಾಗಿಗುಡ್ಡ:

ಬೆಂಗಳೂರಿನ ಜಯನಗರ 9ನೇ ಬ್ಲಾಕ್‌ನಲ್ಲಿರುವ 58 ಅಡಿಗಳ ಹೆಬ್ಬಂಡೆಯೇ ರಾಗಿಗುಡ್ಡ. ಈ ಗುಡ್ಡದ ಮೇಲೆ ಆಂಜನೇಯನ ದೇವಾಲಯವಿದೆ. ಐದೂವರೆ ಎಕರೆ ವಿಶಾಲ ಭೂಭಾಗದಲ್ಲಿರುವ ಈ ದೇಗುಲ ಬೆಂಗಳೂರಿನ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿ ಪಾವನಗಂಗಾ ಎಂಬ ಜಲಧಾರೆಯೂ ಇದೆ. ತ್ರಿಮೂರ್ತಿಗಳ ಮೂರ್ತಿಯೂ ಇದೆ.