ಸದಸ್ಯ:Meghna10694/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಐಲ ದುರ್ಗಾ ಪರಮೇಶ್ವರಿ ದೇವಸ್ಥಾನ ವೇಲಾಪುರ: ಮಂಗಳೂರು-ಕಾಸರಗೋಡು ಹೆದ್ದಾರಿ ಹದಿನೇಳರಲ್ಲಿ, ಉಪ್ಪಳದಿಂದ ಮುಂದೆ, ಬಲಭಾಗಕ್ಕೆ ತಿರುಗುವ ರಸ್ತೆಯಲ್ಲೇ “ಐಲ ದುರ್ಗಾಪರಮೇಶ್ವರೀ ದೇವಿ’ ಯ ಹೆಸರನ್ನು ಹೊತ್ತ ಕಮಾನು ಎದುರಾಗುತ್ತದೆ. ಇದೇ ರಸ್ತೆಯಲ್ಲಿ ಪಶ್ಚಿಮಕ್ಕೆ ಸುಮಾರು ಅರ್ಧಮೈಲು ಮುಂದುವರಿದರೆ, ಈ ದೇವಾಲಯವಿದೆ. ಕಾಸರಗೋಡು ತಾಲೂಕು ಉಪ್ಪಳ ಗ್ರಾಮದಲ್ಲಿರುವ ಈ ಪ್ರಾಚೀನ ದೇವಾಲಯಕ್ಕೆ ಸಂಭಂದಿಸಿದ ಸ್ಥಳ ಪುರಾಣ ಕುತೂಹಲ ಹುಟ್ಟಿಸುತ್ತದೆ. ಜನರ ಆಡು ಮಾತಿನಲ್ಲಿ (ತುಳು) ಐಲವೆಂದೇ ಪ್ರಸಿದ್ಧವಾದ ಈ ಸ್ಥಳಕ್ಕೇ ‘ವೇಲಾಪುರ’ವೆಂದು ಹೆಸರು. ‘ವೇಲಾಪುರ’ವೆಂದರೆ, ಇಲ್ಲಿ ಹೇಳುವುದು ಕುಂಬಳೆ-ಬದಿಯಡ್ಕ ರಸ್ತೆಯ, ಕುಮಾರಮಂಗಲಕ್ಷೇತ್ರಕ್ಕೆ ಹತ್ತಿವಾದ ‘ಬೇಳ’ ವನ್ನಲ್ಲ. ಇದು ಈ ಸ್ಥಳಪುರಾಣದಲ್ಲಿ ಹೇಳಿದಂತೆ ಸಮುದ್ರದ ದಡದಲ್ಲಿಲ್ಲ. ಇಲ್ಲಿ ದುರ್ಗೆಯ ದೇವಾಲಯವೂ ಇಲ್ಲ. ‘ವೇಲಾ’ ಶಬ್ದದ ತದ್ಭವ ‘ಬೇಳ’ ಆಗಿರಬಹುದೆಂದೂ ತಪ್ಪಾಗಿ ಊಹಿಸಲು ಅವಕಾಶವಿರಬಹುದೇನೋ. ‘ವೇಲಾ’ ಎಂದರೆ ಸಂಸ್ಕೃತದಲ್ಲಿ ಸಮುದ್ರದ ದಡ. ಈ ಕ್ಷೇತ್ರ ಸಮುದ್ರದ ದಡದಲ್ಲಿರುವುದರಿಂದ ಆ ಹೆಅರು ಸಾರ್ಥಕ. ಪ್ರಾಚೀನ ಕಾಲದಲ್ಲಿ ದೇವಸ್ಥಾನದ ಪಾಡು ಅಂಗಣದವರೆಗೆ ಸಮುದ್ರವಿದ್ದು ಆ ಮೇಲೆ ಅದು ಹಿಂದೆ ಸರಿದುದಾಗಿಯೂ ಅಲ್ಲಿ ಅಗೆದಾಗ ಸಮುದ್ರದ ಚಿಪ್ಪು, ಹೊಯಿಗೆ ಇತ್ಯಾದಿ ಸಿಗುವುದಾಗಿಯೂ ಗ್ರಾಮದ ವೃದ್ದರು ಹೇಳುತ್ತಾರೆ.! ‘ಐಲ’ವೆಂಬ ಮೀನು ಈ ಸಮುದ್ರ ಭಾಗದಲ್ಲಿ ಧಾರಾಳ ಸಿಗುವುದರಿಂದ ಆ ಹೆಸರು ಬಂದಿರಬಹುದೆಂಬುದು ಒಂದು ಅಭಿಪ್ರಾಯ. ಪಕ್ಕದ ನದಿ ಸೇರುವ ಅಳಿವೆಯಲ್ಲಿ ಉದಿಸಿದ್ದರಿಂದ ‘ಐಲೋದಿ’ (ಐಲ ಗ್ರಾಮದಲ್ಲಿ ಉದಿಸಿದ್ದು) ‘ಐಲ’ ಎಂಬ ಹೆಸರೆಂದು ಇನ್ನೊಂದು ಹೇಳಿಕೆ. ಈ ವಿಗ್ರಹ ಬೋವಿಯೋಬ್ಬನಿಗೆ ಸಮುದ್ರದಲ್ಲಿ ಸಿಕ್ಕಿದ್ದು, ಅಪರೂಪವಾಗಿದ್ದ ಆ ವಿಗ್ರಹವನ್ನು ಕಲ್ಲುಕುಟ್ಟಿಯು ನಾಜೂಕುಗೊಳಿಸಲು ತೊಡಗಿದಾಗ ಅವನಿಗೆ ಅದು ಸಾಧ್ಯವಾಗದೆ (ವಿಗ್ರಹದ ಕಾರಣಿಕದಿಂದ) ‘ಆಯಿಲ್ಲಮ್ಮ’ (ಆಗುವುದಿಲ್ಲ ಅಮ್ಮ) ಎಂದು ಉದ್ಗರಿಸಿದ್ದರಿಂದ ‘ಆಯಿಲ್ಲ’ ‘ಐಲ’ ಆಯಿತೆಂಬ ಮತ್ತೊಂದು ಹೇಳಿಕೆ ಇದೇ. ದೇವಿಯ ಪ್ರತಿಷ್ಠಾಪನೆಯ ಅನಂತರ ‘ವೇಲಾಪುರ’ (ದಡದಲ್ಲಿರುವ ಪುರ) ಎಂಬ ಹೆಸರು ಬಂದು, ‘ವೇಲ’ ವೇ ಆದಿ ವ್ಯಂಜನಲೋಪದಿಂದ ಏಲ-ಆಯಿಲ, ಐಲ ಯಾಗಿರುವ ಸಾಧ್ಯತೆ ಇದೇ. ಪ್ರಾಚೀನ ಕಾಲದಲ್ಲಿ ಈ ಪ್ರದೇಶವೆಲ್ಲಾ ಕಾಡಾಗಿದ್ದುದರಿಂದ ಇಲ್ಲಿಗೆ ಅಂಬಾವನಎಂಬ ಹೆಸರಿತ್ತಂತೆ. ಪ್ರಸ್ತುತ, ದೇವಾಲಯದ ಎದುರಿನ ಹೊರ ಗೋಪುರವು ಹೊಸತಾಗಿ ನಿರ್ಮಾಣಗೊಂಡಿದೆ. ಅದನ್ನು ದಾಟಿ ಒಳ ಹೊಕ್ಕರೆ ವಿಶಾಲವಾದ ಸುತ್ತಲಿನ ಹೊರ ಪ್ರಾಂಗಣ, ಇದರ ಸುತ್ತ ಭದ್ರವಾದ ಎತ್ತರವಾದ ಹಳೆಯ ಕೋಟೆಯಿದೆ. ಗೋಪುರದಿಂದ ಒಳ ಹೊಕ್ಕಾಗ ಎಡಭಾಗದಲ್ಲಿ, ಪ್ರಾಂಗಣದಲ್ಲಿ ಎರಡು ಬಂಡೆಕಲ್ಲುಗಳು ಅಕ್ಕಪಕ್ಕದಲ್ಲಿವೆ. ಅವು ಹುಲಿದನ ಒಟ್ಟಿಗಿದ್ದ ದೈವ ಸಾನ್ನಿಧ್ಯದ ಸಂಕೇತವೆಂದು ನಂಬಲಾಗಿದೆ. ದೇವಾಲಯದ ಮುಖ್ಯದ್ವಾರದ ಎದುರಿನಲ್ಲಿರುವ ಕೊಡಿಕಂಬ (ಧ್ವಜ ಸ್ತಂಭ) ಪ್ರಾಚೀನ ಕಾಲದಲ್ಲಿ, ಕೇವಲ ಮರದ್ದಾಗಿದ್ದು 1970 ರಲ್ಲಿ ದಿ|ಮಂಗಲ್ಪಾಡಿ ಸೀತಾರಾಮ ಶೆಟ್ಟರು ಆಡಳಿತ ಮೊಕ್ತೇಸರರಾಗಿದ್ದ ಕಾಲದಲ್ಲಿ ಕಂಚಿನಿಂದ ರಚಿತವಾಯಿತು. ಅದೇ ದಿನ ಬ್ರಹ್ಮಕಲಶವೂ ನೆರವೇರಿತು. ಚತುರಸ್ರಗೋಪುರ 1922 ರಲ್ಲಿ ನಿರ್ಮಿತವಾಯಿತು. ಕೋಟೆಯ ಹೊರಭಾಗದಲ್ಲಿ, ಬಡಗು ದಿಕ್ಕಿನಲ್ಲಿ ಸದಾ ನೀರಿನ ಆಶ್ರಯವಿರುವ ವಿಶಾಲ ಕೆರೆಯಿದೆ. ಸುತ್ತಮುತ್ತ ಅರ್ಚಕ ಕುಟುಂಬಗಳ ಮನೆಗಳು. ಭಗ್ನ ವಿಗ್ರಹದ ನವೀಕರಣ, ನೂತನ ಗಣಪತಿ ವಿಗ್ರಹಗಳನ್ನು ಅರ್ಚಕ ವರ್ಗದಲ್ಲೊಬ್ಬರಾದ ಶ್ರೀ ಎ.ಆರ್. ಮಯ್ಯರು ಮಾಡಿಕೊಟ್ಟರು. ಗರ್ಭ ಗುಡಿಯ ಪುನಾರಚನೆ ಆಗಿ ಬ್ರಹ್ಮಕಲಶವು 1984 ರಲ್ಲಿ ಜರಗಿತು. ಅರೂಪ ಸ್ಥಿತಿಯಲ್ಲಿದ್ದ ದೇವಾಲಯದೊಳಕ್ಕೆ ಕಳ್ಳರು ನುಗ್ಗಿ ನಿಧಿಗಾಗಿ ತಡಕಾಡಿದಾಗ ವಿಗ್ರಹದ ಕೈ ಮುರಿದು ಭಗ್ನವಾಗಿ, ಪುನರ್ನಿರ್ಮಾಣ ಅನಿವಾರ್ಯವಾಯಿತು. ಮಹಿಷಾಸುರ ಮರ್ದಿನಿ ವಿಗ್ರಹದ ರೂಪ-ಮಹಿಷನ ಬಾಲವನ್ನು ಎಡಗೈಯಿಂದ ಎತ್ತಿ ಹಿಡಿದು ಬಲಗಾಲಿನಿಂದ ತಲೆಯನ್ನು ಮೆಟ್ಟಿ ತ್ರಿಶೂಲವನ್ನು ಊರಿ ಹಿಡಿದಂತಿದೆ. ಉತ್ಸವ ಮೂರ್ತಿ ಪಂಚಲೋಹದ ವಿಗ್ರಹ, ಧ್ವಜಚಿಹ್ನೆ ಸಿಂಹ. ಒಳ ಪ್ರಕಾರದಲ್ಲಿ ಈಶಾನ್ಯದಲ್ಲೊಂದು ಬಾವಿ, ಆಗ್ನೇಯದಲ್ಲೊಂದು ಶಾಸನ ಇದೆ. 1984 ರಲ್ಲಿ ಮೈಸೂರಿನ ಶಾಸನ ಶಾಸ್ತ್ರ ಇಲಾಖೆಯವರೊಂದಿಗೆ ಇಲ್ಲಿಗೆ ಭೇಟಿ ನೀಡಿದಾಗ ಭಗ್ನ ಮೂರ್ತಿಯನ್ನು ಹೊರಗೊಪುರದ ಕೋಣೆಯಲ್ಲಿರಿಸಲಾಗಿತ್ತು. ಜೀರ್ಣೋದ್ಧಾರಕಾರ್ಯ ನಡೆಯುತ್ತಿತ್ತು. ಮಾನ್ಯ ತ್ಯಾಂಪಣ್ಣ ಶೆಟ್ಟರ ಮಗ ಬಾಲಕೃಷ್ಣ ಶೆಟ್ಟರು ಮೊಕ್ತೇಸರರಾಗಿದ್ದರು. ಎಂಡೋಮೆಂಟಿನ ಸೂಚನೆ ಮೇರೆಗೆ ಇನ್ನು ನಾಲ್ಕು ಮಂದಿ ಸದಸ್ಯರು ಆಡಳಿತ ಮಂಡಳಿಯಲ್ಲಿದ್ದರು. ಶ್ರೀ ಬಾಲಕೃಷ್ಣ ಶೆಟ್ಟರ ಹಿರಿಯರಾಗಿದ್ದ ಕಿಞ್ಞಣ್ಣ ನಾಯ್ಕರ ಕಾಲದಲ್ಲಿ (1922) ಧರ್ಮನೇಮ (ನಡಾವಳಿ) ವಿಜ್ರಂಭಣೆಯಿಂದ ನಡೆಯಿತು. ಆ ಕಾಲದಲ್ಲಿ ಎರಡು ಲಕ್ಷ ರೂಪಾಯಿ ಈ ಮಹಾ ಕಾರ್ಯಕ್ಕೆ ವ್ಯಯವಾಗಿದೆಯಂತೆ. ಒಂದು ಕಾಲದಲ್ಲಿ ಈ ದೇವಸ್ಥಾನಕ್ಕೆ ನಾನ್ನೂರು ಮುಡಿ ಅಕ್ಕಿ ಗೇಣಿಯ ಒಡೆತನವಿದ್ದು ಈಗ ಭೂಸ್ವಾಮ್ಯವಿಲ್ಲ. - See more at: http://ailashree.com/about-us/#sthash.MeMTbGRN.dpuf ಮಾಗಣೆ ಕೂಟ ಮತ್ತು ಆಡಳಿತ : ಹಿಂದೆ ಈ ಪ್ರದೇಶವನ್ನಾಳಿದ ಅರಸನೊಬ್ಬನು ಈ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲು ಮಂಜೇಶ್ವರ ಮಾಗಣೆಯ ವ್ಯಾಪ್ತಿಯ 16 ಜನ ಆಡಳಿತದವರನ್ನು ನೇಮಿಸಿದರು. ಆ 16 ಮನೆತನದವರ ಹೆಸರು ಇಂತಿದೆ: 1. ಕುಬಣೂರಾಯ, 2. ಪದಕಣ್ಣಾಯ, 3. ಹೊಳ್ಳರು (ಗುರಿಕ್ಕಾರ), 4. ಮಯ್ಯರು, 5. ಕಲ್ಯಾಣಿತ್ತಾಯ, 6. ಮೂಡಿತ್ತಾಯರು, 7. ಅಡ್ಕ , 8. ಮಂಗಲ್ಪಾಡಿ , 9. ಕುಳೂರು, 10. ಹೇರೂರು , 11. ಪಟ್ಟತ್ತ ಮೊಗರು, 12. ಬೊಳಂಪಾಡಿ , 13. ಕಳ್ಳಿಗೆ, 14. ಮಂಜಳ್ತೋಡಿ, 15. ಬೇಜ್ಜ , 16. ಬೋವಿ ಸಮಾಜ. ಈ ಮೇಲಿನ ಮನೆತನಗಳ 16 ಜನರು ಒಟ್ಟು ಸೇರಿ ಅವರಲ್ಲಿ ಒಬ್ಬನನ್ನು ದೇವಸ್ಥಾನದ ಆಡಳಿತ ನಡೆಸಲು ನೇಮಿಸುತ್ತಿದ್ದರು. ಹೆಚ್ಚಿನ ಸಂದರ್ಭದಲ್ಲಿ ಕೂಡ ಅವರು ಆ ಜವಾಬ್ದಾರಿಯನ್ನು ಮಂಗಲ್ಪಾಡಿ ಮನೆತನದವರಿಗೇ ವಹಿಸಿ ಕೊಡುತ್ತಿದ್ದರು. ಸುಮಾರು ಇನ್ನೂರು ವರ್ಷಗಳ ಹಿಂದೆ ಮಂಗಲ್ಪಾಡಿ ಯಜಮಾನ ಸಾಂತ ಭಂಡಾರಿಯವರ ಆಡಳಿತ, ಅವರ ಅನಂತರ ಅವರ ಮಗಳ ಗಂಡ ಮಂಗಲ್ಪಾಡಿ ಯಜಮಾನ ಕಿಞ್ಞಣ್ಣ ನಾಯ್ಕ ಅವರ ಅನಂತರ ಅವರ ಮಗಳ ಗಂಡ ಬಂಬ್ರಾಣ ಯಜಮಾನ ಮಂಗಲ್ಪಾಡಿ ಪಟೇಲ ತ್ಯಾಂಪಣ್ಣ ಶೆಟ್ರು ಅವರ ಅನಂತರ 1970 ನೇ ಇಸವಿಯಿಂದ ಸುಮಾರು 30 ವರ್ಷಗಳ ಕಾಲ ಮಂಗಲ್ಪಾಡಿ ಬಾಲಕೃಷ್ಣ ಶೆಟ್ರು ಆಡಳಿತ ಮೊಕ್ತೇಸರರಾಗಿ ದೇವಸ್ಥಾನದ ಅಭಿವೃದ್ದಿಗೆ ಶ್ರಮಿಸಿದರು. ಈಗ ಮಂಗಲ್ಪಾಡಿ ಭುಜಂಗ ಶೆಟ್ರು ಆಡಳಿತ ಮೊಕ್ತೇಸರರಾಗಿದ್ದರು. ಇವರು ಜೊತೆ ಸರಕಾರದಿಂದ ನೇಮಿಸಲ್ಪಟ್ಟ ಇತರ ನಾಲ್ಕು ಮಂದಿ- ಶ್ರೀ ಎಂ. ಸೀತಾರಾಮ ಶೆಟ್ಟಿ, ಡಾ| ಕೆ. ಮಹಾಬಲ ಭಟ್, ಶ್ರೀ ಎ. ಸದಾನಂದ ವೈದ್ಯರ್ ಮತ್ತು ಕೊಡಿಬೈಲು ಶ್ರೀ ನಾರಾಯಣ ಹೆಗ್ಡೆ ಎಂಬವರು ಮೊಕ್ತೇಸರರು ಮಂಡಳಿಯಲ್ಲಿರುತ್ತಾರೆ. ಈಗಲೂ ಕೂಡ ‘ಮಾಗಣೆ ಕೂಟ’ವು ಮಹತ್ವ ಪಡೆದಿದ್ದು ದೇವಸ್ಥಾನದ ನಡು ದೀಪೋತ್ಸವದ ದಿನ ‘ಮಾಗಣೆಕೂಟ’ ಸೇರಿದ ಅನಂತರವೇ ದೇವರ ಬಳಿ ಆರಂಭವಾಗುವುದು. ಅರ್ಚಕರಾಗಿ ಮೊದಲು ಮೂಡಿತ್ತಾಯ ವಂಶದವರಿದ್ದು ಮತ್ತೆ ಕೋಟ ಬ್ರಾಹ್ಮಣ ಮಯ್ಯ ವಂಶಜರು ಅರ್ಚಕರಾಗಿದ್ದಾರೆ. ಇವರೊಳಗೆ ಹಿಷೆಯಾಗಿದ್ದು ಅರ್ಚನೆಯ ಕಾರ್ಯವನ್ನು ಪರ್ಯಾಯದಿಂದ ನಡೆಸಿಕೊಂಡು ಬರುತ್ತಾರೆ. ದೇವಸ್ಥಾನಕ್ಕೆ ಬ್ರಿಟಿಷರ ಕಾಲದಿಂದ ಈ ವರೆಗೆ ವರ್ಷಕ್ಕೆ ಕೇವಲ 230 ರೂ ಮಾತ್ರ ತಸದೀಕು ಸರಕಾರದಿಂದ ಸಿಗುತ್ತದೆ. ಪ್ರತಿವರ್ಷ ಮೇಷ(ವಿಷು) ಸಂಕ್ರಮಣದ ದಿನ ಕೊಡಿಯೇರಿ ಐದು ದಿನಗಳ ಜಾತ್ರೆ ನಡೆಯುತ್ತದೆ. ಮೂರನೆಯ ದಿನ (ನಡುದೀಪ) ವಿಶೇಷ. ಶಾಸ್ತಾರ ದೇವಸ್ಥಾನವಿರುವ ತಿಂಬರ ಎಂಬಲ್ಲಿ, ಸುವರ್ಣಾನದಿಯಲ್ಲಿ , ಐದನೇ ದಿನ ಅವಭ್ರಥ ಸ್ನಾನ(ಆರಾಟು)ದೊಂದಿಗೆ ಜಾತ್ರೆ ಮುಗಿತಾಯ. ಆರನೆಯ ದಿನ ಪಿಲಿಚಾಮುಂಡಿ ನೇಮ. ವಾರದ ಮಂಗಳವಾರ ಶುಕ್ರವಾರಗಳು ವಿಶೇಷ ದಿನಗಳು. ಅರುವತ್ತು ವರ್ಷಕೊಮ್ಮೆ ಇಲ್ಲಿ ವಿಜ್ರಂಭಣೆಯಿಂದ ಧರ್ಮನೇಮ ನಡೆಯುತ್ತಿತ್ತು. ಸಿರಿಯಾ ಹೊಳೆ ತಲಪಾಡಿ ಹೊಳೆಗಳ ಮಧ್ಯದ ಹದಿನೆಂಟು ಗ್ರಾಮಗಳ ಮಾಗಣೆ ದೇವಸ್ಥಾನ ಇದಾದುರಿಂದ ಈ ಪ್ರದೇಶದೊಳಗಿರುವ ಎಲ್ಲಾ ದೇವ ದೈವಸ್ಥಾನಗಳೂ ಇಲ್ಲಿಗೆ ಗೌರವದಿಂದ ನಡೆದುಕೊಳ್ಳಬೇಕು. ಎಲ್ಲಾ ದೈವಗಳೂ ಈ ದೇವರ ಹೆಸರು ಹೇಳುತ್ತವೆ. ಹೊಸತಾಗಿ ಮದುವೆಯಾದ ಈ ಪ್ರದೇಶದ ವಧೂವರರು, ಹುಟ್ಟಿದ ಮಕ್ಕಳು ನಲವತ್ತು ದಿವಸದಲ್ಲಿ, ಈ ದೇವರ ದರ್ಶನ ಮಾಡಬೇಕು. ಈ ದೇವಸ್ಥಾನದಲ್ಲಿ ಜಾತ್ರೆ ಇತ್ಯಾದಿ ಜಂಬರಗಳಿರುವಾಗ ಯಾರು ಊರು ಬಿಟ್ಟು ಹೋಗಬಾರದು, ತಮ್ಮ ಮನೆಗಳಲ್ಲಿ ವಿಶೇಷ ಸಮಾರಂಭಗಳನ್ನಿರಿಸಿಕೊಳ್ಳಬಾರದು . ಇಲ್ಲಿ ನಡೆಯುವ ಹಲವಾರು ಸೇವೆಗಳಲ್ಲಿ ಹೂವಿನ ಪೂಜೆ ವಿಶೇಷವಾದುದು. ಇದರಲ್ಲಿ ದೇವಿಗೆ ಸೀರೆ ಸಮರ್ಪಣೆ, ಭಕ್ತರಿಗೆ ಅನ್ನಸಂತರ್ಪಣೆ ಇದೆ. ಈ ಸೇವೆಯನ್ನು ನಂಬಿಕೊಂಡರೆ ಭಕ್ತರಿಗೆ ಇಷ್ಟ ಸಿದ್ದಿಯಾಗುತ್ತದೆಂದು ಯಜಮಾನ ಬಾಲಕೃಷ್ಣ ಶೆಟ್ಟರು ಹಲವಾರು ಉದಾಹರಣೆ ಕೊಡುತ್ತಾರೆ. ಇದರಿಂದ, ಮದುವೆಯಾಗದವಳಿಗೆ ವರಪ್ರಾಪ್ತಿ, ಸಂತಾನವಿಲ್ಲದವರಿಗೆ ಸಂತಾನಪ್ರಾಪ್ತಿ, ರೋಗ ಪರಿಹಾರ ಇತ್ಯಾದಿ ಹಲವಾರು ಇಷ್ಟಸಿದ್ದಗಳಾಗುತ್ತವೆ. ಆರಂಭದಲ್ಲಿ ಯಜಮಾನರಿಗೆ ದೇವಿಯೇ ಕನಸಿನಲ್ಲಿ ಕಂಡು, ಈ ಸೇವೆಯು ಅವರ ಮನಸಿನಲ್ಲಿ ಹೊಳೆದದ್ದಾಗಿ ಅವರು ಹೇಳುತ್ತಾರೆ. ಪೈವಳಿಕೆ, ಚಿತ್ತಾರಿ ಚಾವಡಿಯ ಉಳ್ಳಾಳ್ತಿ, ಅಣ್ಣತಮ್ಮ ದೈವಗಳಿಗೆ ಇಲ್ಲಿಯ ಸಂಬಧ ನಿಕಟ. ಜಾತ್ರೆಯ ನಡುದೀಪದ ದಿನ ಉಳ್ಳಾಳ್ತಿಯ ಪಾತ್ರಿ ಇಲ್ಲಿಗೆ ಬಂದು ಆ ದಿನ ಜಾತ್ರೆ ಮುಗಿಯುವ ವರೆಗೆ ದರ್ಶನದಲ್ಲಿರಬೇಕು. ವಿಶೇಷ ಧರ್ಮನೇಮದಂದು ಈ ಮಾಗಣೆಯ ಎಲ್ಲ ದೈವಸ್ಥಾನಗಳ ಭಂಡಾರ ಇಲ್ಲಿಗೆ ಬರವುದು ಕ್ರಮ. ಹೊರ ಗೋಪುರದ ಬಲಭಾಗ ಎಡಭಾಗಗಳಲ್ಲಿ ಭಕ್ತರು ನೆರೆಯುತ್ತಾರೆ. ಎದುರಿನ ವಿಶಾಲ ಗದ್ದೆಯಲ್ಲಿ ಕೋಲಾದಿಗಳಿಗೆ ಬೇಕಾದಷ್ಟು ಸ್ಥಳಾವಕಾಶವಿದೆ . - See more at: http://ailashree.com/about-us/#sthash.MeMTbGRN.dpuf ಸ್ಥಳಪುರಾಣ- ಸ್ಥಳೀಯರ ಮಾತಿನಲ್ಲಿ – ಇಲ್ಲಿಯ ಮೂಲ ಮಹಿಷಮರ್ದಿನೀ ವಿಗ್ರಹ ಸಮುದ್ರದಲ್ಲಿ ಒಬ್ಬ ಬೆಸ್ತರವನಿಗೆ (ಬೋವಿ) ಸಿಕ್ಕಿ ಇಲ್ಲಿ ಪ್ರತಿಷ್ಟಾಪಿತವಾಯಿತೆಂದು ಒಂದು ಹೇಳಿಕೆ. ಈಗಲೂ ಸಮುದ್ರದಲ್ಲಿರುವ ಒಂದು ಪಾರೆಗೆ ‘ದೇವತಾಪಾರೆ’ ಎಂಬ ಹೆಸರಿದಿಯಂತೆ . ಆದರೆ ಹಸ್ತ ಪ್ರತಿರೂಪದ ‘ವೇಲಾಪುರ ಮಹಾತ್ಮ ‘ ದಲ್ಲಿ , ಶಂಕರನೆಂಬ ಬ್ರಾಹ್ಮಣನು ಸಮುದ್ರದಲ್ಲಿ ಮುಳುಗಿ ಹೋದ ರಾಮಪ್ರತಿಷ್ಥಾಪಿತವಾಗಿದ್ದ ದೇವಿಯನ್ನು ತಂದನು.ಕವಿ ಸಿಂಹರಾಜನು ಆ ವಿಗ್ರಹವನ್ನು ಸಮುದ್ರ ದಡದಲ್ಲಿ ಸ್ಥಾಪಿಸಿ ‘ವೇಲಾಪುರ’ ಕ್ಷೇತ್ರವನ್ನು ನಿರ್ಮಿಸಿದನೆಂದು ಹೇಳಿದೆ. (ಅಧ್ಯಾಯ 9 ,ಶ್ಲೋಕ 4 ,5) ಈ ಪ್ರದೇಶದಲ್ಲಿ (ಐಲ) ಬೋವಿ ಸಮಾಜದ ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ . ದೇವಸ್ಥಾನಕ್ಕೆ ಈಗಲೂ ಅವರು ಭಕ್ತಿಯಿಂದ ಸೇವೆ ಸಲ್ಲಿಸುತ್ತಾರೆ. ಸಮುದ್ರದಲ್ಲಿ ಮೀನುಹಿಡಿಯುವ ವ್ರತ್ತಿಯ ಈ ಜನರು ಬಹಳ ಮಂದಿ ಈಗ ವಿದ್ಯಾವಂತರಾಗಿ ಇತರ ವಿವಿಧ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾರೆ. ಅವರು ಸಂಘಟಿತರಾಗಿ ಶ್ರೀ ಶಾರದಾದೇವಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿ (1927) ಚೆನ್ನಾಗಿ ಅಭಿವ್ರದ್ಧಿಪಡಿಸಿದ್ದಾರೆ. ಪರಂಪರಾಗತವಾಗಿ , ಬಾಯಿಂದ ಬಾಯಿಗೆ ಬಂದ ಕಥೆಯ ಪ್ರಕಾರ ಕದಂಬರಾಜ ಮಯೂರವರ್ಮನು ದಕ್ಷಿಣದ ಕನ್ಯಾಕುಮಾರಿ ವರೆಗೆ ತೀರ್ಥಯಾತ್ರೆ ಮಾಡಿ ಹಿಂತಿರುಗಿ ಕಣಿಪುರ ಗೋಪಾಲಕೃಷ್ಣ ದೇವಸ್ಥಾನಕ್ಕೆ ತಲುಪಿದಾಗ, ಅವನ ಮಗಳಿಗೆ ಗಂಧರ್ವಪೀಡೆಯುಂಟಾಗಿ ಕೊನೆಗೆ ಹೇಗೋ ಒಬ್ಬ ಬ್ರಾಹ್ಮಣನಿಂದ,ಭಾಧೆ ತೊಲಗಿದ್ದರಿಂದ ಅವನಿಗೇ ಅವಳನ್ನು ಮದುವೆಮಾಡಿ ಕೊಟ್ಟು ಮೂವತ್ತೆರಡು ಗ್ರಾಮಗಳ ಒದೆತನವನ್ನೂ ಬಿಟ್ಟುಕೊಟ್ಟು ಅವನು ಹಿಂತಿರುಗಿದನು. ಅವಳ ಮಗನೇ ಜಯಸಿಂಹರಾಜ, ಕುಂಬಳೆಯ ಒಡೆಯ.(ಟಿಪ್ಪಣಿ 8 ರಲ್ಲಿ ಹೇಳಿದ ಲೇಖನ ಮತ್ತು ಸಂದರ್ಶನ) ಅವನು ಪಯಸ್ವಿನಿಯ ತೀರದಲ್ಲಿ ಪಾಂಡ್ಯ ರಾಜನನ್ನು ಸೋಲಿಸಿದನು.ಬೇಟೆಯಾಡುವ ಸಂಧರ್ಭದಲ್ಲಿ ಅಕಸ್ಮಾತ್ತಾಗಿ ಪ್ರಾಣಿಗೆ ಬಿಟ್ಟ ಬಾಣ ಬ್ರಾಹ್ಮಣನಿಗೆ ತಾಗಿ ಅವನು ಮರಣಿಸಿದನು. ರಾಜನು ಚಿಂತೆಯಿಂದ ರಾಜ್ಯವನ್ನು ಬಿಟ್ಟು ಹೋದನು. ಮುಗರ(ಚಂಡಾಲ) ಮುಖಂಡನೊಬ್ಬ ಪ್ರಬಲನಾಗಿ ತನ್ನವರೊಂದಿಗೆ ರಾಜ್ಯವಾಳುತ್ತಿದ್ದನು. ಅವನು ದೇವಾಲಯಗಳನ್ನು ಕೆಡಿಸಿ ಬ್ರಾಹ್ಮಣರನ್ನು ಪೀಡಿಸಿದನು. ಪ್ರಜೆಗಳ ದೂರನ್ನು ಜಯಸಿಂಹನು ಅವರ ರಕ್ಷಣೆಗಾಗಿ ಬಂದನು. ಗೋಕರ್ಣಕ್ಕೆ ಹೋಗುತಿದ್ದ ನಾಲ್ವರು ಬ್ರಾಹ್ಮಣರಲ್ಲಿ ಶಂಕರನೆಂಬವನೊಬ್ಬನಿದ್ದನು. ಇವರು ರಾಜನಿಗೆ ಸಹಾಯ ಮಾಡಲು ದೇವಿಯನ್ನರ್ಚಿಸಿ ಅವಳು ಒಲಿಯದಾಗ ದರ್ಭೆಯ ಪಾಶದಿಂದ ದೇವಿಯ ವಿಗ್ರಹವನ್ನು ಮಥಿಸಿದಾಗ ವಜ್ರದುಂಬಿಗಳು ತಂಡೋಪ ತಂಡವಾಗಿ ಹುಟ್ಟಿ ಮುಗರ ಪಡೆಯನ್ನು ಭಾಧಿಸಿದುವು. ಮಾತ್ರವಲ್ಲದೆ ಅವರು ಪಕ್ಕದ ಕಾಡಿನಲ್ಲಿ (ಕೋರಿಕ್ಕಾರು ಕಾಡು) ಮಾರಣಹೋಮ ಮಾಡಿದರು. ಜಯ ಸಿಂಹನ ಸೈನ್ಯವು ಸೇರಿ ಮುಗರನನ್ನು ಸಂಹರಿಸಲಾಯಿತು. ದೇವಿಯನ್ನು ಶಾಂತ ಗೊಳಿಸಲು ಅಗ್ಗಿತಳ ಎಂಬಲ್ಲಿ ಶಾಂತಿ ಹೋಮವನ್ನು ಮಾಡಲಾಯಿತು. ಬ್ರಾಹ್ಮಣರಿಗೆ ರಾಜನು ಉಂಬಳಿ ಬಿಟ್ಟನು, ಶಂಕರನಿಗೆ ದೇವಸ್ಥಾನಗಳ ತಂತ್ರಧಿಕಾರವನ್ನು ಕೊಟ್ಟನು.ಇದಿಷ್ಟುಸಾಗಿಬಂದ ದಂತಕಥೆಯ ಸಾರಾಂಶ. ಇದಕ್ಕೆ ಆಧಾರವಾಗಿ ಇಂದಿನ ಕೆಲವಾರು ಸ್ಥಳಗಳನ್ನು ಗ್ರಾಮವ್ರದ್ಧರು ಗುರುತಿಸುತ್ತಾರೆ “ಪಟ್ಟದ ಮೊಗರು” ಎಂಬಲ್ಲಿ ಮುಗರನ ಅರಮನೆಯ ಅವಶೇಷಗಳಿವೆ. ಇಲ್ಲಿಗೆ ಸಮೀಪದ ‘ಪಚ್ಲಂಪಾರೆ’ಯಲ್ಲಿ ಮುಗರರ ಹಲವಾರು ಮನೆಗಳಿವೆ. ಮುಳಿಂಜ, ಬಡಾಜೆ ,ಕುಂಜತ್ತೂರುಗಳಲ್ಲಿ ಸಮಾನ ದೂರಗಳಲ್ಲಿರುವ ಮೂರು ಗುಡ್ಡಗಳ ಮೇಲೆ ಶಿವದೇವಾಲಯಗಳಿವೆ.ಮುಗರನಿಗೆ ಪಟ್ಟವಾಗಿ ಆಳಿದ ಪ್ರದೇಶವಾದುದರಿಂದ ಅಲ್ಲಿಗೆ ‘ಪಟ್ಟದ ಮೊಗರು ‘ ಎಂಬ ಹೆಸರು. ಬಡಾಜೆ ಎಂಬಲ್ಲಿ ಮುಗರನ ಸಂಬಂಧಿ ಬಡಜನೆಂಬವನೊಬ್ಬನಿದ್ದಂತೆ ” ಇತ್ಯಾದಿ. - See more at: http://ailashree.com/about-us/#sthash.MeMTbGRN.dpuf