ಸದಸ್ಯ:Ganapathi Diwan/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುನಾದ್‍ ಗೌತಮ್[ಬದಲಾಯಿಸಿ]

ಸುನಾದ್‍ ಗೌತಮ್ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಮತ್ತು ಸಿನಿಮಾ ಛಾಯಾಗ್ರಾಹಕ. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೆಲೆಸಿರುವ ಸುನಾದ್, ಅಲ್ಲೇ ತಮ್ಮ"ಸುನಿನಾದ ಡಿಜಿಟಲ್‍ ಆಡಿಯೋ ಸ್ಟುಡಿಯೋ" ಎಂಬ ಸಂಸ್ಥೆ ತೆರೆದು ಕೆಲಸಮಾಡುತ್ತಿದ್ದಾರೆ. ಹಿರಿತೆರೆ, ಕಿರಿತೆರೆ, ಜಾಹೀರಾತು ಹೀಗೆ ಮುಂತಾದ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ[ಬದಲಾಯಿಸಿ]

ಸುನಾದ್‍ ಗೌತಮ್‍ ಅವರು ನವಂಬರ್ 1, 1993 ರಲ್ಲಿ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ಜನಿಸಿದರು. ತಂದೆ ಉಮೇಶ್‍ ಗೌತಮ್ ನಾಯಕ್ ಮತ್ತು ತಾಯಿ ಸುಮಾ ನಾಯಕ್. ಸುನಾದ್‍ ಗೌತಮ್‍ತಂದೆ ಉಮೇಶ್‍ ಗೌತಮ್ ನಾಯಕ್‍ ಇವರು ಅಷ್ಟಾವಧಾನಿ, ಸಂಗೀತಗಾರ ಮತ್ತು ಸಂಗೀತ ಶಿಕ್ಷಕರಾಗಿದ್ದವರು. ಹಾಗಾಗಿ ಸಂಗೀತದ ಅಭ್ಯಾಸ ಬಾಲ್ಯದಲ್ಲಿ ಮನೆಯಲ್ಲೇ ಆರಂಭವಾಯಿತು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಂದೆಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಉಮೇಶ್‍ ಗೌತಮ್ ನಾಯಕ್‍ ಅವರು ಭಕ್ತಿ ಮತ್ತು ಭಾವಗೀತೆಗಳಿಗೆ ಸಂಗೀತ ಸಂಯೋಜಿಸುತ್ತಿದ್ದರು, ಹಲವಾರು ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ಇದು ಸುನಾದ್‍ ಅವರು ಸಂಗೀತ ಸಂಯೋಜನೆಯ ಮೇಲೆ ಹೆಚ್ಚು ಗಮನಹರಿಸುವಂತೆ ಮಾಡಿತು. ಅದರ ಪರಿಣಾಮ ತಮ್ಮ 13 ವರ್ಷ ವಯಸ್ಸಿನಲ್ಲೇ ತಂದೆಯ ಮಾರ್ಗದರ್ಶನದಲ್ಲಿ ಭಕ್ತಿಗೀತೆಯೊಂದನ್ನು ರಚಿಸುವ ಅವಕಾಶ ಪಡೆದುಕೊಂಡರು. ಜೊತೆಗೆ ಬಾಲ್ಯದಲ್ಲಿ ಅವರು ಗಾಯಕನಾಗಿ ಮೆಚ್ಚುಗೆ ಪಡೆದಿದ್ದರು. ಅವರು ಪ್ರೌಢ ಶಾಲೆಗೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಸಂಗೀತದ ಆಸಕ್ತಿ ಮತ್ತಷ್ಟು ಹೆಚ್ಚಿತು. ಕೀಬೋರ್ಡ್ ಕಲಿಕೆ ಪ್ರಾರಂಭಿಸಿದರು. ಪಾಶ್ಚಾತ್ಯ ಸಂಗೀತದತ್ತಲೂ ಗಮನಹರಿಸಿದರು. ತಮ್ಮ 15 ವರ್ಷ ವಯಸ್ಸಿನಲ್ಲಿ ಕನ್ನಡಕಿರುಚಿತ್ರ "ಧನ್ಯಾ"ಗೆ ಸಂಗೀತ ನೀಡುವ ಮೂಲಕ ಅವರ ಸಂಗೀತ ನಿರ್ದೇಶನದ ಬದುಕು ಆರಂಭವಾಗಿ ಬೆಳೆಯತೊಡಗಿತು. ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಇದು ಮೊದಲ ಹೆಜ್ಜೆಯಾಯಿತು. ತಮ್ಮ ಕಾಲೇಜು ಶಿಕ್ಷಣದೊಂದಿಗೆ ಆಸಕ್ತಿಯ ಕ್ಷೇತ್ರವಾದ ಸಂಗೀತದಲ್ಲಿ ಮುಂದುವರಿಯಲು ಅನುಕೂಲವಾಯಿತು.

ವೃತ್ತಿಜೀವನ ಮತ್ತು ಕೆಲಸಗಳು[ಬದಲಾಯಿಸಿ]

ಪದವಿಪೂರ್ವ ಶಿಕ್ಷಣದ ಜೊತೆಗೆ, ಅವರು ಹೆಚ್ಚು ಹೆಚ್ಚು ಸಂಗೀತದತ್ತ ಗಮನಹರಿಸಿದರು. ಸಂಗೀತ ಸಂಯೋಜನೆಗಳು, ಧ್ವನಿಮುದ್ರಣಗಳು ಮತ್ತು ಸಂಗೀತ ನಿರ್ದೇಶನದಲ್ಲಿ ಕೆಲಸ ಮಾಡಲುತೊಡಗಿದರು. ಆ ಮೂಲಕ ಅವರ ಮನೆಯಲ್ಲೇ ಇದ್ದ ಸಣ್ಣ ರೆಕಾರ್ಡಿಂಗ್ ಘಟಕವನ್ನು ವಿಸ್ತರಿಸಿದರು. ಅವರ ಸಾಧನೆಯ ಹಾದಿಗೆ ಪ್ರತಿಫಲ ಎಂಬಂತೆ ಪಿಯುಸಿ ಕಲಿಕೆಯ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ತಮ್ಮದೇ ಆದ ಆಡಿಯೋ ರೆಕಾರ್ಡಿಂಗ್ ಸ್ಟುಡಿಯೋವನ್ನು ಸ್ಥಾಪಿಸಿದರು. "ಸುನಿನಾದ ಡಿಜಿಟಲ್‍ ಆಡಿಯೋ ಸ್ಟುಡಿಯೋ" ಎಂಬ ಸ್ಟುಡಿಯೋ ಸ್ಥಾಪಿಸಿ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡರು. ತಮ್ಮ 18ನೇ ವಯಸ್ಸಿನಲ್ಲೇ ಈ ಸಾಧನೆಯ ಹಾದಿ ತಲುಪಿದ್ದು ವೃತ್ತಿಜೀವನದ ದೊಡ್ಡ ಮೈಲುಗಲ್ಲಾಗಿ ಪರಿಣಮಿಸಿತು. ಪದವಿ ಕಲಿಕೆಯ ದಿನಗಳಲ್ಲಿ ಅವರು ನಾಟಕಗಳಿಗೆ ಸಂಗೀತ ನಿರ್ದೇಶನಗಳನ್ನು ಮಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಅವರು ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಕೋಟಿಚೆನ್ನಯ್ಯ" ಎಂಬ ಧಾರಾವಾಹಿಯ ಸಂಗೀತ ಸಂಯೋಜನೆಗೆ ಅವಕಾಶವನ್ನು ಪಡೆದರು. ಜೊತೆಜೊತೆಗೆ ಅವರ ಸ್ಟುಡಿಯೋದಿಂದ 150 ಕ್ಕೂ ಹೆಚ್ಚು ಮ್ಯೂಸಿಕ್ ಆಡಿಯೊ ಸಿಡಿಗಳನ್ನು ಬಿಡುಗಡೆ ಮಾಡಿದ್ದರು. ಸಂಗೀತದ ಜೊತೆಗೆ, ಅವರು ಛಾಯಾಗ್ರಹಣದ ಹವ್ಯಾಸವನ್ನು ಹೊಂದಿದ್ದರು. ವಿಶೇಷ ಕಾಳಜಿ ವಹಿಸಿ ಸಿನಿಮಾ ಛಾಯಾಗ್ರಹಣ ಕಲೆಯನ್ನೂ ಕರಗತಮಾಡಿಕೊಂಡರು. ಇವೆಲ್ಲವೂ ಅವರ ಮೊದಲ ಸಿನಿಮಾ ಕೆಲಸ "ಸೋಜಿಗ" ಎಂಬ ಕನ್ನಡ ಚಲನಚಿತ್ರಕ್ಕೆ ಸಹಕಾರಿಯಾಯಿತು. ಸೋಜಿಗ ಚಿತ್ರದಲ್ಲಿ ಅವರು ಸಂಗೀತ ನಿರ್ದೇಶಕನಾಗಿ ಮತ್ತು ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದರು. ಈ ನಡುವೆ ಅವರು ವಿವಿಧ ಜಾಹೀರಾತುಗಳು, ರೇಡಿಯೋ ಮಿರ್ಚಿ ಜಿಂಗಲ್ಸ್, ಭಕ್ತಿ - ಭಾವಗೀತೆಗಳು ಮತ್ತುಇತರ ಹಾಡುಗಳ ಆಲ್ಬಮ್‍ಗಳಿಗಾಗಿ ಕೆಲಸ ಮಾಡಿದರು. ವೃತ್ತಿಜೀವನ ಬೆಳೆಯತೊಡಗಿತು.

ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು[ಬದಲಾಯಿಸಿ]

ಸೋಜಿಗ
ಪ್ರಾಣಕೊಡುವೆ ಗೆಳತಿ
ಚದುರಿದ ಕಾರ್ಮೋಡ
400
ರಂಭಾರೂಟಿ
ಗಲ್ಲಿಬೇಕರಿ ಮತ್ತು
ವಿನಯ್‍ ರಾಜ್‍ಕುಮಾರ್‍ ಅಭಿನಯದ “ಅನಂತು ವರ್ಸಸ್ ನುಸ್ರತ್” ಅವರ ಯಶಸ್ವೀ ಚಿತ್ರಗಳಲ್ಲೊಂದು.
ಜೊತೆಗೆ “ಗೋಲ್ ಮಾಲ್” ಎಂಬ ತುಳು ಸಿನಿಮಾಕ್ಕೆ ಮತ್ತು “ಬಾಯೊ” ಎಂಬ ಕೊಂಕಣಿ ಚಲನಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಸಿನಿಮಾ ಛಾಯಾಗ್ರಾಹಕನಾಗಿ ಕೆಲಸ ನಿರ್ವಹಿಸಿದ ಚಿತ್ರಗಳು[ಬದಲಾಯಿಸಿ]

ಕನ್ನಡದ ಸೋಜಿಗ, ತುಳುವಿನಲ್ಲಿ ಗೋಲ್ ಮಾಲ್ ಮತ್ತು ಕೊಂಕಣಿ ಭಾಷೆಯ ಬಾಯೊ ಎಂಬ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದುಡಿದ ಅನುಭವ ಸುನಾದ್‍ ಗೌತಮ್‍ ಅವರದ್ದು.

ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳು[ಬದಲಾಯಿಸಿ]

ಚಂದನ ವಾಹಿನಿಯ “ಕೋಟಿಚೆನ್ನಯ್ಯ”
ಉದಯ ವಾಹಿನಿಯ “ಆನಂದ ಭೈರವಿ”, “ಸರಯೂ”, “ರಾಗಾನುರಾಗ”, “ಜೋಜೋ ಲಾಲಿ”, “ದೇವಯಾನಿ” ಧಾರಾವಾಹಿಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ.
ಜೀ ಕನ್ನಡ ವಾಹಿನಿಯ ಯಶಸ್ವಿ ಧಾರಾವಾಹಿ “ಜೊತೆಜೊತೆಯಲಿ”ಗೆ ಸುನಾದ್ ಸಂಗೀತ ನಿರ್ದೇಶಿಸಿದ್ದಾರೆ.
ಜೀ ಕನ್ನಡ ವಾಹಿನಿಯ “ಜೀ ಕುಟುಂಬ ಅವಾಡ್ರ್ಸ್-2019” ಕ್ಕೂ ಅವರೇ ಸಂಗೀತ ಸಂಯೋಜಿಸಿದ್ದಾರೆ.
ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ ಕಿಕ್‍ಡ್ಯಾನ್ಸ್ ಶೋ, ಆದರ್ಶ ದಂಪತಿಗಳು ಮತ್ತು ಸುವರ್ಣ ವಾಹಿನಿಯ ಭರ್ಜರಿ ಕಾಮಿಡಿ ಶೋಗಳಿಗೂ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಿದ್ದಾರೆ.